ಉತ್ತರ ಕರ್ನಾಟಕದ ಪ್ರಸಿದ್ದ ಅಲೈ ಕುಣಿತವನ್ನಾಧರಿಸಿದ “ಅಲೈದೇವ್ರು” ಎಂಬ ನಾಟಕವನ್ನು ಬೆಂಗಳೂರಿನ ವಿಶ್ವರಂಗ ಥಿಯೇಟರ್ ತಂಡವು ರವಿವಾರ ಸಂಜೆ 4.30ಕ್ಕೆ ಮತ್ತು 7.30ಕ್ಕೆ ಬಸವೇಶ್ವರ ಇಂಜಿನಿಯರ್ಸ್ ಅಕಾಡೆಮಿಯ ಕೆಇಎ ಪ್ರಭಾತ ರಂಗಮಂದಿರದಲ್ಲಿ ಪ್ರದರ್ಶಿಸಲು ಮುಂದಾಗಿದೆ.
ಹನುಮಂತ ಹಾಲಿಗೇರಿಯವರ ರಚನೆಯ ಈ ನಾಟಕವನ್ನು ಸಿದ್ದರಾಮ ಕೊಪ್ಪರ ನಿರ್ದೇಶಿಸುತ್ತಿದ್ದಾರೆ. ಈ ನಾಟಕದಲ್ಲಿ 35ಕ್ಕೂ ಹೆಚ್ಚು ಕಲಾವಿದರು ನಟಿಸುತ್ತಿರುವುದು ವಿಶೇಷ. ಉತ್ತರ ಕರ್ನಾಟಕ ಪ್ರತಿಯೊಂದು ಹಳ್ಳಿಯಲ್ಲೂ ನಡೆಯುವ ಜನಪದರ ಹಬ್ಬ ಅಲೈಹಬ್ಬದ ಕುರಿತಾದ ಕಥಾ ಹಂದರವನ್ನು ಈ ನಾಟಕ ಹೊಂದಿದೆ. ಈ ಹಬ್ಬದಲ್ಲಿ ನಡೆಯುವ ಜನಪದ ಅಲೈ ಕುಣ್ತ ಮತ್ತು ಅಲೈಪದಗಳನ್ನು ಕಲಾವಿದರು ಎರಡು ತಿಂಗಳು ಅಭ್ಯಾಸ ಮಾಡಿದ್ದಾರೆ.
ಅಲೈಹಬ್ಬ ಹಿಂದೂ ಮುಸ್ಲಿಂಮರು ಸೇರಿ ಆಚರಿಸುವ ತಲೆಮಾರುಗಳ ಸೌಹಾರ್ದದ ಹಬ್ಬ. ಜನಪದ ಲಯದ ಕುಣಿತ, ಅಹೋರಾತ್ರಿ ಹಾಡಲ್ಪಡುವ ರಿವಾಯತ್ ಪದಗಳ ಸಾಹಿತ್ಯ, ಹಲಗೆಯ ನಾದದ ಸಂಗೀತ, ಹೀಗೆ ಹಲವಾರು ಕಲೆಗಳ ಸಂಗಮವಾದ ಗ್ರಾಮೀಣ ಭಾಗದ ಶ್ರಮಿಕ ವರ್ಗದವರಿಂದ ಈ ಹಬ್ಬ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಕೆಲವು ಉತ್ತರ ಕರ್ನಾಟಕದಲ್ಲಿ ಕೆಲವು ಹಳ್ಳಿಗಳಲ್ಲಿ ಮುಸ್ಲಿಂ ಕುಟುಂಬಗಳು ಇರದಿದ್ದರೂ ಕೂಡ ಹಿಂದೂಗಳೇ ಈ ಹಬ್ಬವನ್ನು ತಿಂಗಳಾನುಗಟ್ಟಲೇ ಆಚರಿಸುತ್ತಾರೆ.

ಆದರೆ ಇತ್ತೀಚಿಗೆ ಕೆಲವು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಶಾಖೆಗಳು ಹಳ್ಳಿಗಳಲ್ಲೂ ತೆರೆಯಲ್ಪಡುತ್ತಿದ್ದು, ಈ ಶಾಖೆಗಳ ನಂಜಿನ ಕರಿನೆರಳೂ ಶ್ರಾವಣ, ಸಂಕ್ರಾಂತಿ, ಅಲೈಹಬ್ಬದಂತ ಗ್ರಾಮೀಣ ಹಬ್ಬಗಳ ಮೇಲೂ ಆವರಿಸಿ ಹಬ್ಬದ ವಾತಾವರಣ ಮುರುಟುತ್ತಿದೆ. ಮೊದಲೆಲ್ಲ ಹಗಲ್ಲೆಲ್ಲ ದುಡಿದು ರಾತ್ರಿಯಾಗುತ್ತಿದ್ದಂತೆ, ಶ್ರಾವಣದ ಭಜನಾ ಮ್ಯಾಳಕ್ಕೆ, ಅಲೈಹಬ್ಬದ ಹೆಜ್ಜಿ ಕುಣ್ತದ ಅಂಗಳಕ್ಕೆ ಹೋಗುತ್ತಿದ್ದ ಹಳ್ಳಿ ಯುವಕರು ಈಗ ರಾತ್ರಿಯಾಗುತ್ತಿದ್ದಂತೆ ದಿಲ್ಲಿಯಿಂದ ಹೇರಲ್ಪಡುತ್ತಿರುವ ಏಕ ಸಂಸ್ಕೃತಿಯ ಭೈಟಕ್ ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂಥ ಪಲ್ಲಟಗೊಂಡ ವರ್ತಮಾನಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವನ್ನು ಅಲೈದೇವ್ರು ನಾಟಕ ಮಾಡುತ್ತದೆ.
ಬಹುತ್ವದ ಬೇರುಗಳಿರುವ ಹಳ್ಳಿಯೊಂದರಲ್ಲಿ ರೈತರು, ದನಗಾಹಿಗಳು, ಕುರಿಗಾಹಿಗಳನ್ನು ಒಳಗೊಂಡ ಶ್ರಮಿಕವರ್ಗದ ಗುಂಪು ಈ ಅಲೈಹಬ್ಬಕ್ಕಾಗಿ ಹೆಜ್ಜಿ ಕಲಿಯತೊಡಗುತ್ತದೆ. ಓದು ಬರಹ ಗೊತ್ತಿಲ್ಲದ, ಯಾವ ಧರ್ಮದ ನಂಜನ್ನೂ ಮೈಗಂಟಿಸಿಕೊಳ್ಳದ ಜನಪದ ಸಂಸ್ಕೃತಿಯೇ ತಮ್ಮ ಧರ್ಮವೆಂದು ನಂಬಿದವರು ಇವರು. ಇನ್ನೊಂದು ಯುವಕರ ಗುಂಪು ಈ ಹಬ್ಬ ನಮ್ಮ ಧರ್ಮದವರದ್ದಲ್ಲ, ಊರಲ್ಲಿ ಸಾಬಿಗಳ ಹಬ್ಬ ಮಾಡಕ್ಕೆ ನಾವು ಅವಕಾಶ ಕೊಡಲ್ಲ ಎಂದು ಪಣ ತೊಡುತ್ತದೆ. ಅದೇ ಸಮಯದಲ್ಲಿ ಪೇಟೆಯಿಂದ ಬರುವ ಮುಸ್ಲಿಮರ ಗುಂಪು ಕೂಡ ಹನುಮಪ್ಪನ ಜಾತ್ರೆ, ದುರ್ಗವ್ವನ ಜಾತ್ರೆಯಂತೆ ಕುಣಿದು ಕುಪ್ಪಳಿಸುತ್ತಾ ಮಾಡುವ ಈ ಅಲೈಹಬ್ಬ ನಮ್ಮ ಧರ್ಮದಲ್ಲ. ನಮ್ಮ ದೇವರು ನಿರಾಕಾರ. ದಯವಿಟ್ಟು ಈ ಹಬ್ಬ ಮಾಡಬೇಡಿ ಅಂತ ಅವರೂ ವಿರೋಧಿಸುತ್ತಾರೆ. ಹೀಗೆ ಎರಡೂ ಧರ್ಮಗಳ ಮೂಲಭೂತವಾದಿಗಳಿಂದ ವಿರೋಧ ವ್ಯಕ್ತವಾಗುತ್ತಿರುವ ದಿನಗಳಲ್ಲೇ ಹಿಂದೂ ಮುಸ್ಲಿಂ ಪ್ರೇಮ ಪ್ರಕರಣ, ಗೋಸಾಗಾಟ ಪ್ರಕರಣಗಳು ನಡೆದು ಉರಿಯೋ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗುತ್ತದೆ. ಹೀಗೆ ಜನರ ಜನಪದ ಹಬ್ಬ ಮತ್ತು ಪ್ರಭುತ್ವದ ಅಸೂಕ್ಷ್ಮಗಳು ಕಲಬೆರಕೆಗೊಂಡು ಊರೆಂಬೋ ಊರು ದಿಕ್ಕುಗಾಣದೇ ಪರದಾಡುವ ವರ್ತಮಾನವನ್ನು ಈ ನಾಟಕ ಪ್ರತಿಬಿಂಬಿಸುತ್ತದೆ.
ಇಂದಿನ ಹಳ್ಳಿಗಳ ವಾಸ್ತವ ಬದುಕನ್ನು ತೆರೆದಿಡುವ ಅಲೈದೇವ್ರು ನಾಟಕ ಈ ಭಾನುವಾರ ಎರಡು ಪ್ರದರ್ಶನಗಳನ್ನು ಕಾಣುತ್ತಿದೆ. ಬುಕ್ ಮೈ ಶೋನಲ್ಲಿ ಬುಕ್ ಮಾಡಬಹುದು ಅಥವಾ ಟಿಕೆಟ್ಗಾಗಿ 9916863637 ಸಂಪರ್ಕಿಸಬಹುದು.
ಇದನ್ನೂ ಓದಿ: ‘ಹಿಂಡೆಕುಳ್ಳು’ ಕಥಾಸಂಕಲನ ವಿಮರ್ಶೆ: ಆಯ್ದ ಚಿತ್ರ ಕಟ್ಟಿಕೊಡುವ ಜಾಣ್ಮೆಯ ಕಥನ ಶೈಲಿ


