“ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೂ (ಆರ್ಡಿಪಿಆರ್) ವೇದಗಣಿತದ ಕಲಿಕೆಗೂ ಸಂಬಂಧವೇನು?” ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ರಾಜ್ಯದ ಹಲವಾರು ಶಾಲೆಗಳಲ್ಲಿನ 5ರಿಂದ 8ನೇ ತರಗತಿವರೆಗಿನ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ವೇದಗಣಿತ ಕಲಿಸುವ ಯೋಜನೆಗಾಗಿ ಸರ್ಕಾರೇತರ ಸಂಸ್ಥೆಗಳಿಗೆ ಪ್ರತಿ ಗ್ರಾಮ ಪಂಚಾಯಿತಿಗಳಿಂದ ತಲಾ ಒಂದು ಲಕ್ಷ ಹಣ ನೀಡಲಾಗುತ್ತಿದೆ. ಅದಕ್ಕಾಗಿ ಗ್ರಾಮ ಪಂಚಾಯಿತಿಗಳಲ್ಲಿ ದಲಿತರಿಗಾಗಿ ಮೀಸಲಾದ ಶೇ.25ರ SCSP TSP ಅನುದಾನವನ್ನು ಬಳಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ. ಅಲ್ಲದೇ ಸಮಾಜ ಕಲ್ಯಾಣ ಇಲಾಖೆ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಗಳಲ್ಲಿನ SCSP, TSP ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ‘ನಾನುಗೌರಿ.ಕಾಂ’ಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಆರ್ಡಿಪಿಆರ್ ಏಕೆ ವೇದಗಣಿತವನ್ನು ಕಲಿಸಲು ಹೊರಟಿದೆ? ಗ್ರಾಮೀಣ ಪ್ರದೇಶದಲ್ಲಿ ಶಾಲಾ ಕಟ್ಟಡಗಳು, ಅಂಗನವಾಡಿಗಳೆಲ್ಲ ಚೆನ್ನಾಗಿ ಅಭಿವೃದ್ಧಿಯಾಗಿವೆಯೇ? ಇವುಗಳನ್ನು ಆರ್ಡಿಪಿಆರ್ ದುರಸ್ತಿ ಮಾಡಬೇಕಾಲ್ಲವೇ? ಅಂಗನವಾಡಿ, ಶಾಲೆಗಳು ಸೋರುತ್ತಿವೆ ಎಂಬ ವಿಷಯ ಸದನದಲ್ಲಿ ಚರ್ಚೆಯಾಗುತ್ತಲೇ ಇದೆ. ಇದರ ಬಗ್ಗೆ ಆರ್ಡಿಪಿಆರ್ ಗಮನ ಹರಿಸುವುದನ್ನು ಬಿಟ್ಟು ವೇದಗಣಿತದ ಬಗ್ಗೆ ಆಸಕ್ತಿ ತೋರಿಸುತ್ತಿರುವುದು ಏತಕ್ಕೆ?” ಎಂದು ಕೇಳಿದರು.
ಇದನ್ನೂ ಓದಿರಿ: ವೇದಗಣಿತ ತರಬೇತಿಗೆ ತಲಾ ಒಂದು ಲಕ್ಷ ನೀಡುತ್ತಿರುವ ಗ್ರಾಮ ಪಂಚಾಯ್ತಿಗಳು: ದಲಿತರಿಗಾಗಿ ಮೀಸಲಾದ SCSP TSP ಹಣ ದುರ್ಬಳಕೆ
ಆರ್ಡಿಪಿಆರ್ ಹಣವನ್ನು ಯಾವ ಕಾನೂನಿನ ಅಡಿಯಲ್ಲಿ ವೇದಗಣಿತ ಕಲಿಸಲು ಬಳಸಲು ಮುಂದಾಗಿದ್ದಾರೆ? ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆ ಏನನ್ನು ಹೇಳುತ್ತದೆ? ಆರ್ಡಿಪಿಆರ್ನವರು ಶಿಕ್ಷಣವನ್ನು ನೀಡಬಹುದಾ? ಹಾಗಾದರೆ ನಾಳೆ ಶಿಕ್ಷಣ ಇಲಾಖೆಯವರು ರಸ್ತೆ ನಿರ್ಮಾಣ ಕೆಲಸ ಮಾಡುತ್ತಾರೆಯೇ? ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆಯಡಿ 29,000 ಕೋಟಿ ರೂ. ಮೀಸಲಾಗಿದೆ. ಇಷ್ಟು ದೊಡ್ಡ ಬಜೆಟ್ನಲ್ಲಿ ದಲಿತ ಮಕ್ಕಳ ಭವಿಷ್ಯವನ್ನು ಬದಲಿಸುವುದನ್ನು ಬಿಟ್ಟು ಇಂಥವನ್ನೆಲ್ಲ ಮಾಡುವುದರಿಂದ ಏನು ಪ್ರಯೋಜನ? ಒಂದು ವೇಳೆ ಶಿಕ್ಷಣ ಇಲಾಖೆಯೇ ವೇದಗಣಿತ ಕಲಿಸುತ್ತೇನೆಂದರೂ ಇದರ ಹಿಂದಿನ ಉದ್ದೇಶವೇನು?” ಎಂದು ಪ್ರಶ್ನಿಸಿದರು.
“ವೈಜ್ಞಾನಿಕ ಮನೋಭಾವನೆ ಇಲ್ಲದೆ ಐದು ಟ್ರಿಲಿಯನ್ ಆರ್ಥಿಕತೆ ಸೃಷ್ಟಿಸಲು ಸಾಧ್ಯವೇ? ಶ್ರೇಷ್ಠ ಭಾರತ ಕಟ್ಟಲು ಸಾಧ್ಯವೇ? ಪುರಾಣ ಗ್ರಂಥಗಳನ್ನು ಅಧ್ಯಯನ ಮಾಡಿ. ಆದರೆ ಪುರಾಣಗಳನ್ನೇ ಇತಿಹಾಸ ಎನ್ನುವುದು ಸರಿಯೇ? ರಾಮಾಯಣದಲ್ಲಿ ಹನುಮಾನ್ ಸಂಜೀವಿನಿ ಬೆಟ್ಟವನ್ನು ಹೊತ್ತು ತಂದ ಎಂದು ಹೇಳಲಾಗುತ್ತದೆ. ವೈಜ್ಞಾನಿಕವಾಗಿ ಇದು ಸಾಧ್ಯವಿಲ್ಲ. ಆದರೆ ವಿಜ್ಞಾನಕ್ಕೂ ಪುರಾಣಕ್ಕೂ ಹೋಲಿಕೆ ಮಾಡುವುದು ಸರಿಯೇ?” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿರಿ: ವೇದಗಣಿತ ತರಬೇತಿಯ ಉಪಯೋಗಕ್ಕಿಂತ ಅಪಾಯವೇ ಹೆಚ್ಚು: ದಲಿತರ ಮೀಸಲು ಹಣ ದುರ್ಬಳಕೆಗೆ ಆಕ್ರೋಶ
“ವೈಜ್ಞಾನಿಕ ಮನೋಭಾವನೆಯನ್ನು ಇಟ್ಟುಕೊಂಡು ವೇದಗಣಿತವನ್ನು ಕಲಿಸುವುದಾದರೆ ಪಠ್ಯಕ್ರಮದಲ್ಲೇ ಅಳವಡಿಸಬಹುದಿತ್ತಲ್ಲ? ಹೀಗಾಗಲೇ ಮಕ್ಕಳು ಒಂದು ವಿಧಾನದಲ್ಲಿ ಗಣಿತ ಕಲಿಯುತ್ತಿದ್ದಾರೆ. ಹಿಂದುಳಿದ ವರ್ಗ ಹಾಗೂ ಸಮುದಾಯದ ವಿದ್ಯಾರ್ಥಿಗಳು ವಿಜ್ಞಾನ, ಗಣಿತದಂತಹ ವಿಷಯಗಳಲ್ಲಿ ವೀಕ್ ಇರುತ್ತಾರೆ. ಶಿಕ್ಷಣ ಇಲಾಖೆಯು ನಿಗದಿಪಡಿಸಿದ ಪಠ್ಯಕ್ರಮವನ್ನು ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ. ಹೀಗಿರುವಾಗ ಪರ್ಯಾಯವಾಗಿ ಬೇರೊಂದು ಗಣಿತವನ್ನು ಕಲಿಸುವುದರಿಂದ ಏನು ಪ್ರಯೋಜನ?” ಎಂದು ಟೀಕಿಸಿದರು.
“ಬಡ ವಿದ್ಯಾರ್ಥಿಗಳಿಗೆ ನೀಡಬೇಕಾದ ವಿದ್ಯಾರ್ಥಿವೇತನವನ್ನೇ ಸರ್ಕಾರ ಸರಿಯಾಗಿ ನೀಡುತ್ತಿಲ್ಲ. ಶಾಲಾ ಮಕ್ಕಳಿಗೆ ಸರಿಯಾಗಿ ಶೂ ಸಾಕ್ಸ್ ಕೊಡಲೂ ಆಗದವರು ವೇದಗಣಿತ ಹೇಳಿಕೊಡುತ್ತಾರಂತೆ” ಎಂದು ವ್ಯಂಗ್ಯವಾಡಿದರು.



ನಮ್ಮ ಮಕ್ಕಳಿಗೆ ಬೇಕಾಗಿರುವುದು ಗಣಿತವೇ ಹೊರತು ವೇದಗಣಿತ ಅಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಮೀಸಲಿಟ್ಟ ಹಣವನ್ನು ವೇದಗಣಿತ ಕಲಿಸಲು ಬಳಸುವುದು ಅಕ್ಷಮ್ಯ.