Homeಕರ್ನಾಟಕಪ್ರಬಂಧ; ಎದೆಬಿರಿತು ಹಾಡುವ ನೆಲ: ಪ್ರೊ. ರಹಮತ್ ತರೀಕೆರೆ

ಪ್ರಬಂಧ; ಎದೆಬಿರಿತು ಹಾಡುವ ನೆಲ: ಪ್ರೊ. ರಹಮತ್ ತರೀಕೆರೆ

- Advertisement -
- Advertisement -

ಕಾವ್ಯದ ಪ್ರೇರಣೆಯನ್ನು ಕವಿಗಳ ಪ್ರತಿಭೆಯಲ್ಲಿ, ಅವರಿಗೆ ಇಂಬಾಗಿ ನಿಂತ ಪರಂಪರೆಯ ಕಸುವಿನಲ್ಲಿ, ಕವಿಯ ವಿಶಿಷ್ಟಾನುಭವದಲ್ಲಿ, ಅವರ ಕೈವಶವಾಗಿರುವ ಕಸುಬುದಾರಿಕೆಯಲ್ಲಿ ಹುಡುಕುವ ಪದ್ಧತಿಯಿದೆ. ಆದರೆ ಕವಿತೆ ಹುಟ್ಟುವ ಈ ಪ್ರೇರಣ ಮೂಲಗಳಲ್ಲಿ ಚಾರಿತ್ರಿಕ ಒತ್ತಡವೂ ಒಂದು. ಸಾಮಾನ್ಯವಾಗಿ ಉಸಿರುಗಟ್ಟುವ ಚಾರಿತ್ರಿಕ ಒತ್ತಡದಲ್ಲಿ ಹುಟ್ಟುವ ಎಲ್ಲ ಬರೆಹಗಳು, ತಮ್ಮ ಸಂವೇದನೆಯ ಪ್ರಾಮಾಣಿಕತೆಯಿಂದ ಸಹಜತೆಯಿಂದ ನಮ್ಮ ಎದೆಗೆ ತಾಕಿ ಸಂವಾದ ಮಾಡುವ ಗುಣವನ್ನು ಪಡೆಯುತ್ತವೆ. ಸಾಧಾರಣ ಕವಿಯು ಮೃತ್ಯುವಿನ ಅಂಚಿನಲ್ಲಿ ಕುರಿತು ಭಾವದಿಂದ ಧಗಧಗಿಸುವ ಕವಿತೆ ಬರೆದಿರುವ ನಿದರ್ಶನಗಳಿವೆ. ಕಾಫ್ಕಾನ ‘ರೂಪಾಂತರ’ ಕಾಮುನ ‘ಪ್ಲೇಗ್’ ಸಿದ್ಧಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ ಟಿಪ್ಪುವನ್ನು ಕುರಿತ ಲಾವಣಿಗಳು ಹುಟ್ಟಿದ್ದು ಹೀಗೆ ಚಾರಿತ್ರಿಕ ಒತ್ತಡದಲ್ಲಿ. ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗ ಬೇಂದ್ರೆಯವರ ‘ನರಬಲಿ’ ಕವಿತೆ ಹುಟ್ಟಿದ್ದು ಹೀಗೇ.

‘ಬಡವರು ಸತ್ತರೆ ಸುಡಲಿಕ್ಕೆ ಸೌದಿಲ್ಲೊ’ ಎಂಬ ಚೀತ್ಕಾರ ಕೇಳಿಸುವಂತಿರುವ ಜನಪದ ತ್ರಿಪದಿಯೂ ಸನ್ನಿವೇಶದ ಕೂಸು. ಪ್ಯಾಲಸ್ತೀನೀ ಕವಿತೆಗಳಲ್ಲಿ ತಮ್ಮ ನೆಲವನ್ನು ಉಳಿಸಿಕೊಳ್ಳುವುದು ಜೀವನ್ಮರಣದ ಪ್ರಶ್ನೆಯನ್ನಾಗಿ ಮಾಡಿಕೊಂಡು ನಡೆಸುತ್ತಿರುವ ಸೆಣಸಾಟವಿರುತ್ತದೆ. ಇದಕ್ಕಾಗಿ ತುಂಬಿದ ಅಣೆಕಟ್ಟಿಯಿಂದ ರಭಸವಾಗಿ ಧುಮ್ಮಿಕ್ಕುವ ಜಲದಂತೆ ಅಲ್ಲಿ ಭಾವದ ಆವೇಗವಿರುತ್ತದೆ. ಕುಮಾರವ್ಯಾಸನಲ್ಲಿ ಬರುವ ‘ಅರಸುರಾಕ್ಷಸ ಮಂತ್ರಿ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು’ ಎಂಬ ಸಾಲುಗಳು, ರಾಜಧರ್ಮದ ನಿರ್ಲಿಪ್ತ ಬೋಧೆಯ ಭಾಗವಾಗಿ ಅಳವಡಿಕೆಯಾಗಿವೆ. ಆದರೆ ಕವಿ ಅವನ್ನು ರಚಿಸುವಾಗ ತಾನು ಪಟ್ಟಿರುವ ಯಾವುದೊ ಆಳವಾದ ಸಂವೇದನೆಯನ್ನು ತುಂಬಿರಬಹುದು ಎಂಬಂತೆ ಅಲ್ಲಿ ವಿಷಾದವು ಮಡುಗಟ್ಟಿದೆ. ಎಂತಲೇ ಈ ಸಾಲುಗಳು ಬಿಕ್ಕಟ್ಟಿನಲ್ಲಿ ನಾಡು ಹಾಯುವಾಗೆಲ್ಲ ಬಳಕೆಗೊಳ್ಳುತ್ತ, ನಮಗಾಗೇ ಈಗ ರಚಿತವಾದವು ಎಂಬಂತೆ ಆವರ್ತನೆಗೊಳ್ಳುತ್ತಿವೆ. ತುರ್ತುಪರಿಸ್ಥಿತಿ ವಿರುದ್ಧ ಬಂದ ಕವಿತೆಗಳ ಸಂಕಲನದ (‘ಆಪತ್ಕಾಲೀನ ಕವಿತೆಗಳು’ ಸಂ. ಕಿ.ರಂ.ನಾಗರಾಜ), ಈ ಸಾಲುಗಳನ್ನು ಮೊದಲಿಗೇ ಉದ್ಧರಿಸಲಾಗಿದೆ.

ಇದೇ ಹೊತ್ತಲ್ಲಿ ಚಂಪಾ ಅವರು ಎಮರ್ಜನ್ಸಿಯ ಕಾಲದಲ್ಲಿ ಬರೆದ ಪದ್ಯವೊಂದು ನೆನಪಾಗುತ್ತಿದೆ. ಅದರ ಹೆಸರು ‘ಒಂದಾನೊಂದು ಕಾಲಕ್ಕೆ’. ಇದು ಕನ್ನಡದ ಶ್ರೇಷ್ಠ ಕವಿತೆಗಳ ಪಟ್ಟಿಯಲ್ಲಿ ಸಾಮಾನ್ಯವಾಗಿ ಗಣಿತವಾಗಿಲ್ಲ. ಆದರೆ ಸರಳವಾದ ಸಾದಾಸೀದಾ ಪದ್ಯವಾಗಿರುವ ಇದರೊಳಗೆ ತುಂಬಿಕೊಂಡಿರುವ ದುಗುಡ ಮತ್ತು ಉತ್ಕಟತೆಗಳು, ಸ್ವಾತಂತ್ರ್ಯದ ಬೇಡಿಕೆಯ ಭಾವವನ್ನು ನಮ್ಮ ಹೃದಯದೊಳಗೆ ಹುಗಿಸಿ ಕಂಪನ ಹುಟ್ಟಿಸುವಷ್ಟು ತೀವ್ರವಾಗಿವೆ. ‘ಓ ಎನ್ನ ದೇಶಬಾಂಧವರೇ’ (1977) ಸಂಕಲನದಲ್ಲಿರುವ ಆ ಕವಿತೆ ಹೀಗಿದೆ:

ಒಂದಾನೊಂದು ಕಾಲಕ್ಕೆ, ಗೆಳೆಯರೆ
ಈ ಬಾನಿಗೆ ಅಂಚೆಂಬುದು ಇರಲಿಲ್ಲ.
ಈ ನೆಲಕ್ಕೆ ಗಡಿಯೆಂಬುದು ಇರಲಿಲ್ಲ.
ನೀವು ಕೂಗಿದ್ದೇ ಆಗ ಕಾವ್ಯವಾಗಿತ್ತು.
ಕೇಳುವವರಿರಲಿಲ್ಲ
ನೀವು ಹಿಡಿದದ್ದೇ ಆಗ ಹಾದಿಯಾಗಿತ್ತು
ತುಳಿಯುವವರಿರಲಿಲ್ಲ
ನಿಮ್ಮ ಬಾಯಿಗೆ ಈಗ ಬಟ್ಟೆ ತುರುಕಿದ್ದಾರೆ.
ನಿಮ್ಮ ಕಾಲಿಗೆ ಈಗ ಬೇಡಿ ಬಿಗಿದಿದ್ದಾರೆ
ನೀವೀಗ ಸ್ವಲ್ಪ ಝಾಡಿಸಿದರೆ ಕಾಲು,
ಬೇಡಿ ಹರಿಯಲಿಕ್ಕಿಲ್ಲ; ಆದರೆ
ಬಾನಲ್ಲಿ ಹಾಲುಹಾದಿ ಮೂಡುತ್ತದೆ.
ಮೌನ ಮುರಿಯಲು ಸ್ವಲ್ಪ ಹೆಣಗಿದರೆ ನೀವು
ಶಬ್ದ ಹೊರಡಲಿಕ್ಕಿಲ್ಲ; ಆದರೆ
ನೆಲವೇ ಎದೆ ಬಿರಿತು ಹಾಡುತ್ತದೆ.

ಕವನವು ‘ಒಂದಾನೊಂದು ಕಾಲಕ್ಕೆ’ ಎಂಬ ಪದದ ಮೂಲಕ ಚರಿತ್ರೆಯಲ್ಲಿದ್ದ ಸ್ವತಂತ್ರ ಅವಸ್ಥೆಯನ್ನು ಸೂಚಿಸುವ ಮೂಲಕ ಆರಂಭವಾಗುತ್ತದೆ. ಆಗ ಇದ್ದ ಸ್ವಾತಂತ್ರ್ಯವನ್ನು ಗಡಿಯಿಲ್ಲದ ನೆಲ, ಅಂಚಿಲ್ಲದ ಬಾನು, ಕೂಗಿದರೂ ಕಾವ್ಯವಾಗುವ ಮತ್ತು ಹಿಡಿದಿದ್ದೇ ಹಾದಿಯಾಗುವ ಮುಕ್ತತೆಯ ಚಿತ್ರಗಳ ಮೂಲಕ ಮುಂದಿಡಲಾಗುತ್ತದೆ. ಚರಿತ್ರೆ ಬಲ್ಲವರಿಗೆ ತಿಳಿದಿದೆ, ಎಲ್ಲ ಕಾಲಕ್ಕೂ ಸ್ವಾತಂತ್ರ್ಯ ಕಸಿದುಕೊಳ್ಳುವ ಶಕ್ತಿಗಳು ಇದ್ದವು. ಅವುಗಳ ವಿರುದ್ಧ ದನಿಯೆತ್ತಿ ಸತ್ತವರೂ ಗೆದ್ದವರೂ ಕೂಡ ಇದ್ದರು. ಸ್ವಾತಂತ್ರ್ಯ ಹರಣ ಮತ್ತು ಪಡೆಯುವುದಕ್ಕೆ ಮಾಡುವ ಸಂಘರ್ಷ, ಅದಕ್ಕಾಗಿ ಪಡೆಯುವ ಮರಣ, ಗೆಲುವುಗಳು ನಿರಂತರವಾಗಿರುತ್ತವೆ. ಆದರೆ ಗತದಲ್ಲಿ ಸ್ವಾತಂತ್ರ್ಯವಿತ್ತು ಎಂದು ಕವಿತೆ ಪ್ರಕೃತಿಯ ಚಿತ್ರಗಳ ಮೂಲಕ ತುಸು ಉತ್ಪ್ರೇಕ್ಷೆಯಲ್ಲಿ ಹೇಳುತ್ತಿರುವುದು ವರ್ತಮಾನದಲ್ಲಿ ಅದಿಲ್ಲ ಎಂದು ವಾಸ್ತವವನ್ನು ಸೂಚಿಸಲು; ಚರಿತ್ರೆಯ ನೆನಪು ವರ್ತಮಾನದಲ್ಲಿ ಕ್ರಿಯಾಶೀಲತೆ ಹುಟ್ಟಿಸಲಿ ಎಂದು ಪ್ರೇರಿಸಲು. ಇಲ್ಲಿ ಕವಿಯು ಜನತೆಯ ನಾಯಕನಾಗಿದ್ದಾನೆ. ಜನರ ಸ್ವಾತಂತ್ರ್ಯ ಮತ್ತು ಅವನ ಸ್ವಾತಂತ್ರ್ಯಗಳೆರಡೂ ಇಲ್ಲಿ ಏಕೀಭವಿಸಿವೆ.

ಎರಡನೇ ಖಂಡವು ವರ್ತಮಾನದಲ್ಲಿ ಈ ಸ್ವಾತಂತ್ರ್ಯಗಳು ಕಸಿಯಲ್ಪಟ್ಟ ದಾರುಣ ಸನ್ನಿವೇಶದ ಚಿತ್ರವನ್ನು ಮುಂದಿಡುತ್ತದೆ. ಆದರೆ ಈ ಬಂಧನದ ದಾರುಣತೆ ಖಾಯಮ್ಮಲ್ಲ. ಅದನ್ನು ನಿವಾರಿಸಬಹುದು. ಇದಕ್ಕಾಗಿ ದಂಗೆ ಚಳವಳಿ ಹೋರಾಟ ಮುಂತಾದ ಮಹತ್ವಾಕಾಂಕ್ಷಿ ಪ್ರಯತ್ನಗಳನ್ನು ಕವಿತೆ ಮುಂದಿಡುತ್ತಿಲ್ಲ. ಬದಲಾಗಿ ‘ಸ್ವಲ್ಪ ಕಾಲು ಝಾಡಿಸಲು’ ‘ಮೌನ ಮುರಿಯಲು’ ‘ಸ್ವಲ್ಪ ಹೆಣಗಲು’ ಸೂಚಿಸುತ್ತದೆ. ವ್ಯಕ್ತಿಗಳು ತಮ್ಮ ಪರಿಮಿತಿಯಲ್ಲೇ ಮಾಡುವ ಇಂತಹ ಸಣ್ಣಪುಟ್ಟ ಮಿಸುಕಾಟದಿಂದ ಇಡೀ ವ್ಯವಸ್ಥೆಯನ್ನು ಪಲ್ಲಟಿಸುವ ಮಹಾಕ್ರಾಂತಿ ಸಂಭವಿಸಿದೆ ಹೋಗಬಹುದು. ಆದರೆ ಅಂತಹ ಅದಕ್ಕೆ ಬೇಕಾದ ನಡಿಗೆ ಶುರುವಾಗುತ್ತದೆ. ನಾಡಿನ ಸಮುದಾಯವು ಪ್ರಜ್ಞೆ ಮತ್ತು ಪ್ರತಿರೋಧ ಗುಣವನ್ನು ಪಡೆದುಕೊಂಡು ಕೆಟ್ಟ ವ್ಯವಸ್ಥೆಯ ವಿರುದ್ಧ ಸಂಘಟಿತ ದನಿಯೆತ್ತಿದಾಗ ಮಾತ್ರ ಸಂಪೂರ್ಣ ಸ್ವಾತಂತ್ರ್ಯವು ಸಾಧ್ಯ. ಅದು ತಕ್ಷಣ ಸಾಧ್ಯವಾಗುವ ಸನ್ನಿವೇಶವಿಲ್ಲ. ಅದು ನಿಷ್ಕ್ರಿಯತೆಗೆ ಕಾರಣವಾಗಬೇಕಿಲ್ಲ. ಬದಲಾವಣೆ ಎಂಬ ದೀರ್ಘಯಾನವು ಸಣ್ಣಹೆಜ್ಜೆಗಳ ಮೂಲಕವೇ ಆರಂಭವಾಗುತ್ತದೆ. ಅಂತಹ ಮಿಸುಕಾಟ ಮಾಡಿದರೆ ಪರಿಣಾಮ ಹಾಲ ಹಾದಿ ಮೂಡುತ್ತದೆ; ನೆಲವೇ ಎದೆಬಿರಿತು ಹಾಡುತ್ತದೆ.

ನಿರ್ದಿಷ್ಟ ಹಾಡಿನ ಭಾವವು ಮನುಕುಲವು ಮತ್ತೆಮತ್ತೆ ಎದುರಿಸುವ ಸಮಸ್ಯೆಯನ್ನು ಕುರಿತು ಇದ್ದಾಗ, ಅದು ನಾನಾ ವಿನ್ಯಾಸದಲ್ಲಿ ಬೇರೆಬೇರೆ ಭಾಷೆಯಲ್ಲಿ ಎಲ್ಲ ಕಾಲಘಟ್ಟದಲ್ಲೂ ಪುನರಾವರ್ತನೆ ಆಗುತ್ತಲೇ ಇರುತ್ತದೆ. ದುಷ್ಟ ಸರ್ವಾಧಿಕಾರಗಳ ಅಡಿಯಲ್ಲಿ ಉಸಿರುಗಟ್ಟುವ ಸನ್ನಿವೇಶದಲ್ಲಿ ಬದುಕುವ ಎಲ್ಲ ಸಮಾಜಗಳು ತಮ್ಮ ಎದೆಯ ದನಿಯೆಂದೇ ಹಾಡಿಕೊಳ್ಳುವಷ್ಟು ಇದು ಸಾಧಾರಣೀಕರಣ ಪಡೆದಿದೆ. ಹೀಗಾಗಿಯೇ ಇದರ ಭಾವವು ಗಂಡಾಳಿಕೆ ಸಮಾಜದಲ್ಲಿರುವ ವಿವಾಹ ಮತ್ತು ಕುಟುಂಬ ಮುಂತಾದ ವ್ಯವಸ್ಥೆಗಳಲ್ಲಿ ನಲುಗುತ್ತಿರುವ ಸ್ತ್ರೀಯರ ದನಿಯಾಗುವಂತಿದೆ. ಕನ್ನಡದ ಮಹಿಳಾ ಸಂವೇದನೆಯ ಕಾವ್ಯದಲ್ಲಿ ಇದರ ಪ್ರತಿಬಿಂಬಗಳನ್ನು ಕಾಣಬಹುದು.
ಜೆಎನ್‌ಯು ವಿದ್ಯಾರ್ಥಿಗಳು ಕನ್ಹಯ್ಯಕುಮಾರ್ ಅವರ ನೇತೃತ್ವದಲ್ಲಿ ಕೂಗಿದ ಆಜಾದಿ ಘೋಷಣೆಯಲ್ಲಿ ಇದು ಅನುರಣನಗೊಂಡಿತು. ಈಗಲೂ ಟರ್ಕಿಯ ಕುರ್ದಿಶರ, ಇಸ್ರೇಲಿ ಹುಕೂಮತ್ತಿನಲ್ಲಿರುವ ಪ್ಯಾಲಸ್ತೇನಿಯರ, ಚೀನಾದ ಪಾದದಡಿ ಅಪ್ಪಚ್ಚಿಯಾಗಿರುವ ವುಗೈರ್ ಮುಸ್ಲಿಮರ ಹಾಗೂ ಟಿಬೆಟಿಯನ್ ಬೌದ್ಧರ, ಬರ್ಮಾದ ರೋಹಿಂಗ್ಯಾಗಳ ಎದೆಯೊಳಗೆ ಈ ಕವನ ಹಲವಾರು ವಿನ್ಯಾಸಗಳಲ್ಲಿ ರೂಪುಗೊಳ್ಳುತ್ತಿರಬಹುದು.

ಬಾಬಾ ಸಾಹೇಬರು ಬೌದ್ಧಧರ್ಮವನ್ನು ಸ್ವೀಕಾರ ಮಾಡುವ ಮುನ್ನ ಇದೇ ಭಾವವುಳ್ಳ ಮಾತುಗಳನ್ನು ಆಡಿರುವರು ಮತ್ತು ಲೇಖನ ಬರೆದಿರುವರು. ಸಾರಾ ಅಬೂಬಕರ್ ಅವರ ಕಥನದ ನಾಯಕಿಯರಲ್ಲಿ ಈ ಪದ್ಯವು ಬೇರೆ ಧಾಟಿಲಯದಲ್ಲಿ ಕಟ್ಟಲ್ಪಟ್ಟಿದೆ. ಸಿದ್ಧಲಿಂಗಯ್ಯನವರ ‘ಎಲ್ಲಿಗೆ ಬಂತು ಯಾರಿಗೆ ಬಂತು ಸ್ವಾತಂತ್ರ್ಯ’ ಕವನದಲ್ಲಿ ಈ ಹಾಡಿನ ಭಾವವು ಹೋರಾಟದ ಮೊದಲು ಹುಟ್ಟುವ ಸವಾಲಿನಂತೆ ಕೇಳಲ್ಪಟ್ಟಿದೆ. ಶತಮಾನದ ಹಿಂದೆ ರವೀಂದ್ರನಾಥ ಟಾಗೂರರು ಗೀತಾಂಜಲಿ ಸಂಕಲನದಲ್ಲಿ ಸೇರಿಸಿದ ‘ವೇರ್ ದಿ ಮೈಂಡ್ ಈಸ್’ ಎಂಬ ಗೀತೆಯಲ್ಲಿ ಈ ಪದ್ಯದ ಭಾವವು ದೇಶಕಟ್ಟುವ ತತ್ವವಾಗಿ ಈಗಾಗಲೇ ಹೇಳಲ್ಪಟ್ಟಿದೆ. ‘ಆನು ಒಲಿದಂತೆ ಹಾಡುವ’ ಎಂಬ ಬಸವಣ್ಣನವರ ವಚನ, ಕುವೆಂಪು ಅವರ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಲೇಖನ ಈ ಪದ್ಯದ ಮೂಲಮಾತೃಕೆಗಳಾಗಿದ್ದರೆ ಆಶ್ಚರ್ಯವಿಲ್ಲ. ಎಲ್ಲ ದಮನಿತ ಸಮಾಜ, ಕುಟುಂಬ, ಧರ್ಮ, ದೇಶಗಳಲ್ಲಿ ಇರುವ ಪ್ರಜ್ಞಾವಂತರಿಗೆ, ಸಂವೇದನಾಶೀಲರಿಗೆ ಸ್ವಾತಂತ್ರ್ಯ ಬಯಸುವವರಿಗೆ ಇದು ತಮ್ಮದೇ ಸ್ವಾತಂತ್ರ್ಯದ ಹಾಡೆನಿಸುತ್ತದೆ. ಈಗ ತಾಲಿಬಾನಿಗಳ ಕೋವಿಗೈಯಲ್ಲಿ ಸಿಲುಕಿರುವ ಆಫ್ಘಾನಿಸ್ತಾನದ ಮಹಿಳೆಯರು, ಕಲಾವಿದರು ಈ ಹಾಡನ್ನು ಹಾಡುತ್ತಿರಬಹುದು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಅನಾರ್ಕಲಿಯ ಸೇಫ್ಟಿಪಿನ್: ಲಲಿತ ಪ್ರಬಂಧದ ಲಹರಿಗೆ ಬಿದ್ದ ಕತೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...