Homeಮುಖಪುಟಉತ್ತರ ಕನ್ನಡಕ್ಕೆ ಏಮ್ಸ್ ಆದರೂ ಕೊಡಿ; ಸಾಮಾಜಿಕ ಜಾಲತಾಣದಲ್ಲಿ ಹಕ್ಕೊತ್ತಾಯ

ಉತ್ತರ ಕನ್ನಡಕ್ಕೆ ಏಮ್ಸ್ ಆದರೂ ಕೊಡಿ; ಸಾಮಾಜಿಕ ಜಾಲತಾಣದಲ್ಲಿ ಹಕ್ಕೊತ್ತಾಯ

- Advertisement -
- Advertisement -

ಉತ್ತರ ಕನ್ನಡವೆಂದರೆ ಒಂಥರಾ ನತದೃಷ್ಟ, ಅವಜ್ಞೆಗೊಳಪಟ್ಟ ಜಿಲ್ಲೆ! ಅಕ್ಕ-ಪಕ್ಕದ ಜಿಲ್ಲೆಗಳು ಅದೆಷ್ಟೋ ಅಭಿವೃದ್ಧಿಯಾಗುತ್ತಿದ್ದರೂ ಉತ್ತರ ಕನ್ನಡ ಮಾತ್ರ ಹಾಗೆ ಶಾಪಗ್ರಸ್ಥ ಭೂ ಪ್ರದೇಶದಂತೆ ಉಳಿದುಬಿಟ್ಟಿದೆ. ಇದಕ್ಕೆ ಜಿಲ್ಲೆಯ ಬೇಕು-ಬೇಡಗಳ ಅರಿವಿಲ್ಲದ, ಇಚ್ಛಾ ಶಕ್ತಿಯಿಲ್ಲದ ಜನ ಪ್ರತಿನಿಧಿಗಳ ಉದಾಸೀನವೇ ಕಾರಣವೆಂಬ ಆಕ್ರೋಶವೀಗ ಮಡುಗಟ್ಟುತ್ತಿದೆ!

ರೈತ, ಕೂಲಿಕಾರ ಪರ ಹೋರಾಟಗಾರ, ಹಲವು ಶಾಲೆ-ಕಾಲೇಜುಗಳ ಸ್ಥಾಪಕ ಕವಿ ದಿನಕರ ದೇಸಾಯಿ ಒಬ್ಬರ ಬಿಟ್ಟರೆ ಉತ್ತರ ಕನ್ನಡಕ್ಕೆ ಸಮರ್ಥ ನಾಯಕತ್ವವೆ ಸ್ವಾತಂತ್ರ್ಯಾ ನಂತರದ ಈ ಮುಕ್ಕಾಲು ಶತಮಾನದಲ್ಲಿ ಸಿಕ್ಕಿಲ್ಲ. ರಸ್ತೆ, ಚರಂಡಿ ಬಿಟ್ಟರೆ ಇನ್ಯಾವ ಪ್ರಗತಿಯೂ ಜಿಲ್ಲೆ ಕಂಡಿಲ್ಲ. ಅರಣ್ಯ ಉತ್ಪನ್ನ, ವಿದ್ಯುತ್ ಯೋಜನೆಗಳು, ಮೀನುಗಾರಿಕೆಯೇ ಮುಂತಾದ ಬಾಬತ್ತಿನಲ್ಲಿ ಸರಕಾರದ ಬೊಕ್ಕಸಕ್ಕೆ ಕೋಟಿ-ಕೋಟಿ ತುಂಬುತ್ತಿರುವ ಉತ್ತರ ಕನ್ನಡದಲ್ಲಿ ದುಡಿವ ಕೈಗಳಿಗೆ ಕೆಲಸ ಕೊಡುವಂಥ ಕೈಗಾರಿಕೆಗಳಿಲ್ಲ; ನದಿಗಳು ತುಂಬಿ ಹರಿಯುತ್ತಿದ್ದರು ನೀರಾವರಿ ಯೋಜನೆಗಳಿಲ್ಲ. ಪ್ರಕೃತಿ ಸೋಬಗಿನ ಈ ಜಿಲ್ಲೆಯಲ್ಲಿ ವ್ಯವಸ್ಥಿತ ಪ್ರವಾಸೋದ್ಯಮ ಜನಪ್ರತಿನಿಧಿಗಳಿಂದ ಸ್ಥಾಪಿಸಲಾಗಿಲ್ಲ. ಹಾಗಂತ ಲಾಗಾಯ್ತಿನಿಂದ ಪ್ರಳಯಾಂತಕ ಸರ್ಕಾರಿ ಯೋಜನೆಗಳಿಗೆ ಜನರನ್ನು ಬಲಿ ಪಡೆಯುವುದೇನೂ ನಿಂತಿಲ್ಲ. ರಾಜ್ಯ, ರಾಷ್ಟ್ರ ಮಹತ್ವದ ಹಲವು ಯೋಜನೆಗಳಿಗೆ ಜಿಲ್ಲೆಯ ದೊಡ್ಡ ಜನ ಸಮೂಹ ತಮ್ಮದೆಲ್ಲವನ್ನು ತ್ಯಾಗ ಮಾಡಿ ಬೀದಿ ಪಾಲಾಗಿದ್ದಾರೆ. ಬೆಂಗಾಡಂತಾಗಿರುವ ಉತ್ತರ ಕನ್ನಡದಲ್ಲಿ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಹ ಇಲ್ಲ.

ಅಪಘಾತ, ಗಂಭೀರ ಆರೋಗ್ಯ ಸಮಸ್ಯೆ ಎದುರಾದರೆ ಆಚೀಚೆ ಜಿಲ್ಲೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ರೋಗಿಯನ್ನು ಕೊಂಡೊಯ್ಯಬೇಕು. ದೂರದ ಆಸ್ಪತ್ರೆ ಸೇರುವಷ್ಟರಲ್ಲಿ ದಾರಿಯಲ್ಲಿ ಸಾವು ಸಂಭವಿಸುವುದೇ ಹೆಚ್ಚು. ಹೃದಯಾಘಾತದ ತುರ್ತು ಸಂದರ್ಭದಲ್ಲಿ ಎಂಜಿಯೋಗ್ರಾಮ್ ಮಾಡಿ ಸ್ಟಂಟ್ ಅಳವಡಿಸಿ ಜೀವ ಕಾಪಾಡಲು ಜಿಲ್ಲೆಯಲ್ಲಿ ತಜ್ಞ ವೈದ್ಯರಿಲ್ಲ; ಕ್ಯಾಥ್ ಲ್ಯಾಬ್‌ಗಳೂ ಇಲ್ಲ. ಹೀಗಾಗಿ ಜಿಲ್ಲೆಯಲ್ಲೀಗ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಾಗಿ ದೊಡ್ಡ ಕೂಗೆದ್ದಿದೆ. ಕೆಲವು ಶಾಸಕರು ಅನಿವಾಸಿ ಭಾರತೀಯ ಆರೋಗ್ಯ ಉದ್ಯಮಿ ಅಬುದಾಬಿಯ ಬಿ.ಆರ್.ಶೆಟ್ಟಿಯಿಂದ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಸುವುದಾಗಿ ಹೇಳಿದ್ದರು. ಆದರೆ ಶೆಟ್ಟಿ ಕುಮಟಕ್ಕೆ ಬಂದು ಹೋಗಿದ್ದೆ ಆತನ ದುಬೈನ ಆರೋಗ್ಯ ಉದ್ಯಮ ಸಾಮ್ರಾಜ್ಯ ಪತನವಾಗಿ ಹೋಯ್ತು.

ಆ ನಂತರ ಕಾರ್ಯ ಸಾಧ್ಯವಲ್ಲದ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆ ನಾಟಕ ಭರಪೂರ ನಡೆಯಿತೆ ವಿನಃ ಗಂಭೀರ ಪ್ರಯತ್ನಗಳಾಗಲಿಲ್ಲ. ಜನರನ್ನು ದಿಕ್ಕು ತಪ್ಪಿಸುವ ಕೆಲಸಗಳಾದವು. ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ಮತ್ತು ಕುಮಟಾ ಶಾಸಕ ದಿನಕರ ಶೆಟ್ಟಿ ಜಿದ್ಧಿಗೆ ಬಿದ್ದವರಂತೆ ತಂತಮ್ಮ ಕ್ಷೇತ್ರದಲೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡೇಬಿಟ್ಟೆವೆಂಬಂತೆ ಮಾತುಗಾರಿಕೆ ನಡೆಸಿದ್ದು ಬಿಟ್ಟರೆ ಬೇರೇನು ಆಗಲಿಲ್ಲವೆಂದು ಜನರಾಡಿಕೊಳ್ಳುತ್ತಿದ್ದಾರೆ. ತಕ್ಕ ಮಟ್ಟಿನ ಸೌಲಭ್ಯ ಹೊಂದಿಸಿಕೊಳ್ಳುತ್ತಿರುವ ಕಾರವರ ಮೆಡಿಕಲ್ ಕಾಲೇಜಿನಲ್ಲಿ ಕನಿಷ್ಟ ಟ್ರಾಮಾ ಸೆಂಟರ್ ಸಹ ಸ್ಥಾಪಿಸಲಾಗಲಿಲ್ಲ. ಈ ಶಾಸಕರೆದುರು ಮ.ಸ್ಪೆ.ಆಸ್ಪತ್ರೆಗಾಗಿ ಕಾಳಜಿಯಿಂದ ಹೋರಾಟಕ್ಕಿಳಿದಿದ್ದ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ ಎಂಬ ಅಭಿಪ್ರಾಯವೂ ಇದೆ. ಎಲ್ಲ ಸೌಲಭ್ಯ ಒದಗಿಸಿ ಕೊಡಲು ಸರ್ಕಾರದಿಂದಲೂ ಸಾಧ್ಯವಿಲ್ಲ.. ತಜ್ಞ್ಲ ವೈದ್ಯರು ಉತ್ತರ ಕನ್ನಡದಂತ ಹಿಂದುಳಿದ ಪ್ರದೇಶಕ್ಕೆ ಬಂದು ಕೆಲಸಮಾಡಲು ಸಿದ್ದರಾಗಲಿಕ್ಕಿಲ್ಲ; ದೊಡ್ಡ ನಗರಗಳಲ್ಲಿ ಸಿಗುವ ಆಕರ್ಷಕ ಸಂಬಳದ ಸೆಳೆತ ಹಾಗಿರುತ್ತದೆ. ಯಡಿಯೂರಪ್ಪನಂಥ ದಿಗ್ಗಜನಿದ್ದರೂ ಶಿವಮೊಗ್ಗ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇನ್ನು ಪರಿಪೂರ್ಣವಾಗಿಲ್ಲ.

ಖಾಸಗಿಯವರು ಮಲ್ಟಿ ಸ್ಪಷಾಲಿಟಿ ಆಸ್ಪತ್ರೆಗೆ ಹಣ ಹೂಡಿದರೆ ನಿರೀಕ್ಷಿತ ಲಾಭ ಬರದ ಭಯದಲ್ಲಿ ಹಿಂದೆಸರಿಯುತ್ತಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಲ್ಲಿ ಇಂಥದೊಂದು ಬೇಡಿಕೆ ಇಟ್ಟಾಗ-ನನ್ನಿಂದ ಸಾಧ್ಯವಿಲ್ಲ; ಮಣಿಪಾಲ ಉತ್ತರ ಕನ್ನಡಕ್ಕೆ ಹತ್ತಿರದಲ್ಲಿದೆ; ಟ್ರಾಮಾ ಸೆಂಟರ್ ಮಾಡಿದರೆ ಮಣಿಪಾಲ ಕೆಎಮ್‌ಸಿಯವರು ಮಾಡಬಹುದು. ಬೇಕಿದ್ದರೆ ನಾನೊಂದು ಮಾತು ಹೇಳ್ತೇನೆ ಅಂದಿದ್ದರು. ಆದ್ದರಿಂದ ಭಾರತ ಸರ್ಕಾರವೇ ಉತ್ತರ ಕನ್ನಡದ ಪರಸ್ಥಿತಿ ಅರ್ಥ ಮಾಡಿಕೊಂಡು ಜಿಲ್ಲೆಗೆ ಏಮ್ಸ್ ಅಖಿಲ ಭಾರತೀಯ ವೈದೈಕೀಯ ವಿಜ್ಞಾನ ಸಂಸ್ಥೆ ಮಂಜೂರಿ ಮಾಡಿದರೆ ಅತ್ಯಗತ್ಯ ಬೇಡಿಕೆ ಈಡೇರಿದಂತಾಗುತ್ತದೆ. ಅಂತದೊಂದು ಆಸೆ ಈಗ ಉತ್ತರ ಕನ್ನಡದಲ್ಲಿ ಮೂಡಿದೆ. ಭಾರತ ಸರ್ಕಾರದ ನೀತಿ ಆಯೋಗದ ನಿರ್ದೇಶನದಂತೆ ಕರ್ನಾಟಕಕ್ಕೆ ಒಂದು ಏಮ್ಸ್ ಮಂಜೂರಿಯಾಗುವ ಸಂದರ್ಭ ಬಂದಿರುವುದೇ ಈ ನಿರೀಕ್ಷೆಗೆ ಕಾರಣ.

ಕೆಲ ದಿನಗಳ ಹಿಂದೆ ಸಿಎಂ ಬೊಮ್ಮಾಯಿ ಪ್ರಧಾನಿ ಭೇಟಿ ಮಾಡಿದಾಗ ತನ್ನ ತವರು ಕ್ಷೇತ್ರ (ಶಿಗ್ಗಾವಿ)ದ ಪಕ್ಕದ ಹುಬ್ಬಳ್ಳಿಗೆ ಏಮ್ಸ್ ಕೇಳಿದ್ದರು. ಅದು ದಿ ಹಿಂದು ಪತ್ರಿಕೆಯ ವೆಬ್ ಸೈಟ್‌ನಲ್ಲಿ ಸುದ್ದಿಯಾಗಿತ್ತು. ಆ ಲಿಂಕ್ ಶೇರ್ ಮಾಡುವ ಮೂಲಕ ಮಂಗಳೂರಿನ ಕೆಎಮ್‌ಸಿಯ ಹೃದಯ ತಜ್ಞ ಡಾ.ಪದ್ಮನಾಭ ಕಾಮತ್ ಪ್ರಧಾನಿಗೆ ಏಮ್ಸ್ ಉತ್ತರ ಕನ್ನಡಕ್ಕೆ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದರು. ಆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕನ್ನಡಕ್ಕೆ ಏಮ್ಸ್ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗತೊಡಗಿತು. ಜತೆಗೆ ಜಿಲ್ಲೆಯ ಮಂತ್ರಿ, ಶಾಸಕರು ವಿಶೇಷವಾಗಿ ಸಂಸದ ಆನಂತಕುಮಾರ್ ಹೆಗಡೆ ವಿರುದ್ದ ಆಕ್ರೋಶ ಭುಗಿಲೆದ್ದಿತು!

ದುರಂತವೆಂದರೆ ಇತ್ತ ಉತ್ತರ ಕನ್ನಡಿಗರು ಅಗತ್ಯ-ಅನಿವಾರ್ಯವಾದ ಎಮ್ಸ್‌ನ ಕನಸು ಕಾಣುತ್ತಿದ್ದರೆ, ಅತ್ತ ಸಿಎಂ ಸಾಹೇಬರು ಅಗತ್ಯ ಇಲ್ಲದಿದ್ದರು ಹುಬ್ಬಳ್ಳಿಗೆ ಏಮ್ಸ್ ಹೊತ್ತೊಯ್ಯಲು ಹವಣಿಸುತ್ತಿದ್ದಾರೆಂದು ಜಿಲ್ಲೆಯ ಜನರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಮೂರ್ನಾಲ್ಕು ಮೆಡಿಕಲ್ ಕಾಲೇಜು ಹಾಗೂ ಹಲವು ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಆದರೂ ಏಮ್ಸ್ ಬೇಕೆನ್ನುವುದು ಯಾವ ನ್ಯಾಯವೆಂದು ಮಾತಾಡಿಕೊಳ್ಳಲಾಗುತ್ತಿದೆ. ಅವಿಭಜಿತ ಧಾರವಾಡ ಜಿಲ್ಲೆ ಈಗ ರಾಜಕೀಯವಾಗಿ ತುಂಬ ಪ್ರಭಾವಶಾಲಿ. ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಲಿ ಮುಖ್ಯ ಮಂತ್ರಿ ಬೊಮ್ಮಾಯಿ ಕರ್ಮ ಭೂಮಿಯಿದು. ಈ ರಾಜಕೀಯ ಒತ್ತಡದಿಂದಲೇ ಏಮ್ಸ್ ಹುಬ್ಬಳ್ಳಿಯತ್ತ ಮುಖ ಮಾಡಿದೆ ಎನ್ನಲಾಗುತ್ತಿದೆ; ಉತ್ತರ ಕನ್ನಡದ ಮಂತ್ರಿ-ಶಾಸಕರು-ಸಂಸದರು ಬಾರೀ ಬಾಯಿ ಪಟಾಕಿಯರು. ಹಾಗಾಗಿ ಇವರಿಂದ ಏಮ್ಸ್ ಜಿಲ್ಲೆಗೆ ತರುವ ಬದ್ಧತೆ-ನಿಯತ್ತಿನ ಪ್ರಯತ್ನ ಮಾಡಲಾಗುತ್ತಿಲ್ಲವೆಂದು ಜನರು ಮೂಗು ಮುರಿಯತ್ತಿದ್ದಾರೆ.


ಇದನ್ನೂ ಓದಿ: ಉತ್ತರ ಕನ್ನಡ: ಹೆಬ್ಬಾರ್‌ರ ಯಲ್ಲಾಪುರದಿಂದ ಸ್ಪರ್ಧೆಗೆ ದೇಶಪಾಂಡೆ ಮಗ ಸಜ್ಜು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...