Homeಮುಖಪುಟಹಳತು-ವಿವೇಕ: ’ನನ್ನ ಜನರ ಶತ್ರುಗಳು ಇಲ್ಲೆ ಇದ್ದಾರೆ, ವಿಯೆಟ್ನಾಂ ಮೇಲೆ ಬಾಂಬ್ ಹಾಕಲು ತೆರಳುವುದಿಲ್ಲ'

ಹಳತು-ವಿವೇಕ: ’ನನ್ನ ಜನರ ಶತ್ರುಗಳು ಇಲ್ಲೆ ಇದ್ದಾರೆ, ವಿಯೆಟ್ನಾಂ ಮೇಲೆ ಬಾಂಬ್ ಹಾಕಲು ತೆರಳುವುದಿಲ್ಲ’

- Advertisement -
- Advertisement -

1967ರ ಜನವರಿಯ ಮೊದಲ ವಾರದ ವಿರಳ ರಜಾದಿನವೊಂದರಲ್ಲಿ, ಮಾರ್ಟಿನ್ ಲೂಥರ್ ಕಿಂಗ್ ಅವರು ರ್‍ಯಾಡಿಕಲ್ ಜರ್ನಲ್ ರಾಂಪಾರ್ಟ್ಸ್‌ನ ಹೊಸ ಸಂಚಿಕೆಯೊಂದರಲ್ಲಿ ಪ್ರಕಟವಾಗಿದ್ದ, ಪೆಟ್ರೋಕೆಮಿಕಲ್ ಬಾಂಬ್ ನೇಪಾಮ್‌ನಿಂದ ಸುಟ್ಟ-ಬೆಂದ ವಿಯೆಟ್ನಾಮೀಸ್ ಮಕ್ಕಳ ಫೋಟೋಗಳನ್ನು ಗಮನವಿಟ್ಟು ನೋಡಿದರು.

ಆ ಹಿಂದಿನ ವರ್ಷದಲ್ಲಿ, ವಿಯೆಟ್ನಾಂನಲ್ಲಿನ ಅಮೆರಿಕನ್ ಹಿಂಸಾಚಾರದಿಂದ ಅವರು ಹೆಚ್ಚು ಕ್ಷೋಭೆಗೆ ಒಳಗಾಗಿದ್ದರು, ಆದರೆ ನಾಗರಿಕ ಹಕ್ಕುಗಳ ಆಂದೋಲನ ಕುರಿತ ಅವರ ಜವಾಬ್ದಾರಿಯ ಪ್ರಜ್ಞೆಯು ಅವರನ್ನು ಆ ಯುದ್ಧದ ಸಂಪೂರ್ಣ ವಿರೋಧದಿಂದ ದೂರವಿಡಲು ಕಾರಣವಾಗಿತ್ತು. ಈಗ ಅವರು ತಮ್ಮ ಮೌನವನ್ನು ಮುರಿಯಲು ನಿರ್ಧರಿಸಿದರು. ಆ ಮೌನವನ್ನು “ನನ್ನ ಸ್ವಂತ ಮೌನಗಳ ದ್ರೋಹ” ಎಂದು ಮುಂದೊಂದು ದಿನ ಕರೆದುಕೊಂಡರು.

ತಮ್ಮ ರಜಾ ಅವಧಿ ಮುಗಿಸಿ ಬಂದ ಅವರು, ಎಸ್‌ಸಿಎಲ್‌ಸಿ (The Southern Christian Leadership Conference) ಸಹೋದ್ಯೋಗಿಗಳಿಗೆ ಯುದ್ಧ ವಿರೋಧಿ ಚಟುವಟಿಕೆಯನ್ನು ತಮ್ಮ ಆದ್ಯತೆಯನ್ನಾಗಿ ಮಾಡುವ ಸಂಕಲ್ಪವನ್ನು ತಿಳಿಸಿದರು. ಕೆಲವರು ತಮ್ಮ ನಾಯಕನ ಈ ಹೊಸ ನಡೆಯ ಬಗ್ಗೆ ಕಸಿವಿಸಿಗೊಂಡರು ಮತ್ತು ಇದು ಸರ್ಕಾರ ಮತ್ತು ಬಿಳಿ ಉದಾರವಾದಿ ಬೆಂಬಲಿಗರನ್ನು ವಿಮುಖಗೊಳಿಸುತ್ತದೆ ಎಂಬ ಆತಂಕ ಅವರಲ್ಲಿತ್ತು. ಫೆಬ್ರವರಿ 25ರಂದು, ಬೆವರ್ಲಿ ಹಿಲ್‌ನಲ್ಲಿ ಮಾಡಿದ ಭಾಷಣದಲ್ಲಿ, ಕಿಂಗ್ “ವಿಯೆಟ್ನಾಂನ ಯುದ್ಧಭೂಮಿಯಲ್ಲಿ ಗ್ರೇಟ್ ಸೊಸೈಟಿಯ (ಅಮೆರಿಕದ ಡೆಮಾಕ್ರಟಿಕ್ ಅಧ್ಯಕ್ಷ ಲಿಂಡನ್ ಬಿ ಜಾನ್ಸನ್ ಅವರು ಮುಂದುಮಾಡಿದ್ದ ಬದಲಾವಣೆಯ ಪ್ರಾದೇಶಿಕ ಕಾರ್ಯಕ್ರಮಗಳು) ಭರವಸೆಗಳನ್ನು ಹೊಡೆದುರುಳಿಸಲಾಗಿದೆ” ಎಂದು ವಾದಿಸಿದರು. ಇನ್ನೂ ಹೆಚ್ಚು ವಿವಾದಾತ್ಮಕವಾಗಿ, ವಿಯೆಟ್ನಾಂನಲ್ಲಿನ ಅಮೆರಿಕದ ನೀತಿಯು “ಇತಿಹಾಸದ ಗಡಿಯಾರವನ್ನು ಹಿಂದಕ್ಕೆ ತಿರುಗಿಸಲು ಮತ್ತು ಬಿಳಿ ವಸಾಹತುಶಾಹಿಯನ್ನು ಶಾಶ್ವತಗೊಳಿಸಲು ಪ್ರಯತ್ನಿಸುತ್ತದೆ” ಎಂದು ಪ್ರತಿಪಾದಿಸಿದರು.

ಮಾರ್ಚ್ 6, 1967ರಂದು, ರಾಷ್ಟ್ರೀಯ ಆಯ್ದ ಸೇವಾ ಮೇಲ್ಮನವಿ ಮಂಡಳಿಯು ಮಹಮ್ಮದ್ ಅಲಿಯ 1-ಎ ವರ್ಗೀಕರಣವನ್ನು (ಮಿಲಿಟರಿಯಲ್ಲಿ ಸೇವೆ ಸಲ್ಲಿಸಲು ತರಬೇತಿಗಾಗಿ ಯುದ್ಧ ಶಸ್ತ್ರಾಸ್ತ್ರಗಳನ್ನು ಹಿಡಿಯಲು ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂಬ ವಿರೋಧ) ಸರ್ವಾನುಮತದಿಂದ ಎತ್ತಿಹಿಡಿಯಿತು. ಅದೇ ದಿನ, ಅಧ್ಯಕ್ಷ ಜಾನ್ಸನ್ ಕಾಂಗ್ರೆಸ್‌ಗೆ, “ಮಿಲಿಟರಿ ಸೇವೆಯನ್ನು ಕೆಲವೊಮ್ಮೆ ಸ್ವತಂತ್ರ ಜನರು ನಿರ್ವಹಿಸಲು – ಮತ್ತು ಅವರ ಮೇಲೆ ಹೇರಲು- ಸಾಧ್ಯವಿರಬೇಕು, ಇದರಿಂದ ಅವರ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಜ್ಞಾನವು ಅಮೆರಿಕದ ಅನುಭವದಲ್ಲಿ ಗಾಢವಾಗಿ ಒಪ್ಪಿತವಾಗಿದೆ” ಎಂದು ಹೇಳಿದರು. ಮಾರ್ಚ್ 14ರಂದು, ಅಲಿ ಸೇನೆಗೆ ಸೇರಿಕೊಳ್ಳಬೇಕೆಂಬ ನೋಟಿಸ್ ಸ್ವೀಕರಿಸಿದರು. ಸದ್ಯ, ಅವರ ವಕೀಲರುಗಳ ಕ್ಷಿಪ್ರ ಹಸ್ತಕ್ಷೇಪದಿಂದ, ಏಪ್ರಿಲ್ 28ರವರೆಗೆ ಈ ಪ್ರಕರಣವನ್ನು ಮುಂದೂಡಲಾಯಿತು.

ಇದರಿಂದ ಮಾರ್ಚ್ 22ರಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಜೋರಾ ಫೋಲ್ಲಿಯೊಂದಿಗೆ ಬಾಕ್ಸಿಂಗ್ ಮಾಡಲು ಇದು ಅವಕಾಶ ಮಾಡಿಕೊಟ್ಟಿತು. ಮೂರೂವರೆ ವರ್ಷಗಳಿಗಿಂತ ಹೆಚ್ಚು ಕಾಲದ ನಂತರ ರಿಂಗ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಾಗ, ಅಲಿ ಅತ್ಯಂತ ಬೆರಗುಗೊಳಿಸುವ ಮತ್ತು ಪ್ರಾಬಲ್ಯ ಹೊಂದಿದ ಆಟವನ್ನು ಆಡಿದರು ಮತ್ತು ಏಳನೇ ಸುತ್ತಿನಲ್ಲಿ ನಾಕೌಟ್‌ನೊಂದಿಗೆ ಚಾಲೆಂಜರ್ ಅನ್ನು ಮುಗಿಸಿದರು. ’ರಿಂಗ್ ನಿಯತಕಾಲಿಕೆಯ ಆ ತಿಂಗಳ ಸಂಚಿಕೆ, ಮೊದಲ ಬಾರಿಗೆ ವರ್ಷದ ಹೋರಾಟಗಾರನನ್ನು ಹೆಸರಿಸಲು ನಿರಾಕರಿಸಿತು, ಏಕೆಂದರೆ ಪ್ರಶಸ್ತಿಯ ನಿಶ್ಚಿತ ಅಭ್ಯರ್ಥಿಯಾಗಿದ್ದ “ಕೇಶಿಯಸ್ ಕ್ಲೇ” (ಮೊಹಮದ್ ಅಲಿಯ ಪೂರ್ವಾಶ್ರಮದ ಹೆಸರು) “ಅಮೆರಿಕದ ಯುವಕರಿಗೆ ಆದರ್ಶವಾಗಬಾರದು ಎಂಬ ನಿಸ್ಸಂದೇಹಕತೆ”. ಆ ವಾರ ಯುದ್ಧದಲ್ಲಿ 274 ಅಮೆರಿಕನ್ ಸಾವುಗಳು ಸಂಭವಿಸಿದವು.

ಯುದ್ಧ ಪ್ರಾರಂಭವಾದ ನಂತರದ ಅತ್ಯಧಿಕ ಸಾವಿನ ಪ್ರಮಾಣವಿದು. ಮಾರ್ಚ್ 29ರಂದು, ಫೆಡರಲ್ ನ್ಯಾಯಾಧೀಶರು ಅಲಿಯ ಮೂರು ಕರಡು ಮೇಲ್ಮನವಿಗಳನ್ನು ತಿರಸ್ಕರಿಸಿದರು, ಲೂಯಿಸ್ವಿಲ್ಲೆಯ ಆಲ್-ವೈಟ್ ಡ್ರಾಫ್ಟ್ ಬೋರ್ಡ್‌ಗೆ ಅವರ ಆಕ್ಷೇಪಣೆಯೂ ಸೇರಿದಂತೆ. ಸೇನೆಗೆ ಸೇರುವುದು ಅನಿವಾರ್ಯವಾಯಿತು. ಆಗಲೇ ಎಲಿಜಾ ಮುಹಮ್ಮದ್, ಮುಹಮ್ಮದ ಸ್ಪೀಕ್ಸ್‌ನ ಪುಟಗಳಲ್ಲಿ ತನ್ನ ಶಿಷ್ಯನ ಬೆಂಬಲಕ್ಕೆ ನಿಂತರು.

ಅಲಿ ಬಯಸಿದ್ದು ಏನೆಂದರೆ, “ತನ್ನದೇ ಆದ ದಾರಿಯಲ್ಲಿ ಹೋಗಬೇಕು… ಆದರೆ, ಈ ದೇಶಕ್ಕೆ ಸೇರದವನಾಗಿದ್ದರೂ, ಅವನನ್ನು ಅಮೆರಿಕದ ಅತಿ ದೊಡ್ಡ ಅಪರಾಧಿಗಳಲ್ಲಿ ಒಬ್ಬನೆಂದು ಹೇಳಲಾಗುತ್ತಿದೆ” ಎಂದು ಮುಹಮ್ಮದ್ ಹೇಳಿದರು. ಇನ್ನೂ ಹೆಚ್ಚು ಗಮನಾರ್ಹವಾದದ್ದು ಅದೇ ದಿನ, ಮಾರ್ಟಿನ್ ಲೂಥರ್ ಕಿಂಗ್ ಎಸ್‌ಸಿಎಲ್‌ಸಿ ಮಂಡಳಿಯ ಸಭೆಗಾಗಿ ಲೂಯಿಸ್ವಿಲ್ಲೆಗೆ ಬಂದರು. ಸಭೆಯ ನಂತರ, ಮಂಡಳಿಯು “ನೈತಿಕವಾಗಿ ಮತ್ತು ರಾಜಕೀಯವಾಗಿ ಅನ್ಯಾಯದಿಂದ” ಕೂಡಿದ ಯುದ್ಧವನ್ನು ಖಂಡಿಸಿತು. “ಬಡವರ ವಿರುದ್ಧ ತಾರತಮ್ಯ ಎಸಗುವ ಮತ್ತು ಸರಾಸರಿಯ ಅಸಮಾನತೆಯಲ್ಲಿ ನೀಗ್ರೋಗಳನ್ನು ಯುದ್ಧದಲ್ಲಿ ಮುಂಚೂಣಿ ಸಾಲಿನಲ್ಲಿ ನಿಲ್ಲಿಸುವುದರಿಂದ ಹಿಡಿದು ಮತ್ತು ಅಲ್ಲಿಂದ ದಕ್ಷಿಣದಲ್ಲಿ ಸ್ಮಶಾನ ಪ್ಲಾಟ್‌ಗಳನ್ನು ಜನಾಂಗೀಯವಾಗಿ ಬೇರ್ಪಡಿಸುವ” ಡ್ರಾಫ್ಟ್ ಅನ್ನು ಮಂಡಳಿ ಖಂಡಿಸಿತು.

ಲೂಯಿಸ್ವಿಲ್ಲೆಯಲ್ಲಿದ್ದಾಗ, ಹುಟ್ಟಿದೂರಿಗೆ ಭೇಟಿ ನೀಡಿದ್ದ ಅಲಿ ಅವರನ್ನು ಖಾಸಗಿಯಾಗಿ ಭೇಟಿ ಮಾಡಲು ಕಿಂಗ್ ಬಿಡುವು ಮಾಡಿಕೊಂಡರು. ನಂತರ, ಇಬ್ಬರೂ ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳನ್ನು ಭೇಟಿಯಾದರು, ಮತ್ತು ಡ್ರಾಫ್ಟ್ ವಿರುದ್ಧ ಬಾಕ್ಸರ್ ನಿಲುವನ್ನು ಕಿಂಗ್ ಶ್ಲಾಘಿಸಿದರು. “ಮುಹಮ್ಮದ್ ಅಲಿ ಹೇಳಿರುವಂತೆ, ನಾವೆಲ್ಲರೂ ಒಂದೇ ರೀತಿಯ ದೌರ್ಜನ್ಯದ ಬಲಿಪಶುಗಳಾಗಿದ್ದೇವೆ” ಎಂದು ಕಿಂಗ್ ಸುದ್ದಿಗಾರರಿಗೆ ತಿಳಿಸಿದರು. ಅಲಿ ತಲೆಯಾಡಿಸಿ ಒಪ್ಪಿಗೆ ಸೂಚಿಸಿ, ತನಗಿಂತಲೂ ವಯಸ್ಸಾದ ಹಾಗೂ ಕುಳ್ಳಗಿದ್ದ ವ್ಯಕ್ತಿಯ ಭುಜವನ್ನು ಪ್ರೀತಿಯಿಂದ ತಟ್ಟಿ, ಕಿಂಗ್ ಅವರನ್ನು “ಸಹೋದರ” ಎಂದು ಕರೆದರು. ಖಾಸಗಿ ಸಮಯದಲ್ಲಿ, ಕಿಂಗ್ ಅವರ ಹಾಸ್ಯಪ್ರಜ್ಞೆ, ಅಲಿಯವರಷ್ಟೇ ಧಾರಾಳವಾಗಿತ್ತು ಮತ್ತು ಇಬ್ಬರೂ ಬೇಗನೇ ಆತ್ಮೀಯರಾಗಿದ್ದಂತೆ ತೋರುತ್ತದೆ. ಅದಕ್ಕಿಂತ ಮುಖ್ಯವಾಗಿ, ಡ್ರಾಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಯುವಕರಿಗೆ ಮನವಿ ಮಾಡುವ ಸಲುವಾಗಿ, ಕಿಂಗ್ ಗಮನವನ್ನು ಕೇಂದ್ರೀಕರಿಸಲು ಅಲಿಯ ನಿಲುವು ಸಹಕರಿಸಿತು ಮತ್ತು ಕಿಂಗ್‌ರ ಯುದ್ಧದ ಬಗೆಗಿನ ತೀವ್ರ ಟೀಕೆ ಮತ್ತು ಅಲಿಯವರಿಗೆ ನೀಡಿದ ನೇರ ಬೆಂಬಲ, ಚಾಂಪಿಯನ್‌ನ ಪ್ರತ್ಯೇಕತೆಯನ್ನು ತಗ್ಗಿಸಿತು.

PC : BBC

ಎಸ್‌ಸಿಎಲ್‌ಸಿ, ಕಿಂಗ್‌ರವರ ಸಹೋದರ ಎ. ಡಿ. ಕಿಂಗ್ ಪ್ರಮುಖ ಪಾದ್ರಿಯಾಗಿದ್ದ ಲೂಯಿಸ್ವಿಲ್ಲೆಯಲ್ಲಿ ಭೇಟಿಯಾಗಲು ಆಯ್ಕೆ ಮಾಡಿಕೊಂಡಿದ್ದು, ಸ್ಥಳೀಯ ಕಪ್ಪು ಜನಾಂಗ ನಡೆಸಿದ್ದ ಕಹಿ ಮತ್ತು ಸುದೀರ್ಘವಾದ ಮುಕ್ತ-ವಸತಿ ಅಭಿಯಾನವನ್ನು ಬೆಂಬಲಿಸುವುದು ಒಂದು ಕಾರಣವಾಗಿತ್ತು. ಪ್ರತ್ಯೇಕವಾಗಿದ್ದ ಬಿಳಿ ವಸತಿ ಪ್ರದೇಶಗಳಲ್ಲಿ ಮೆರವಣಿಗೆ ಮಾಡಿದ ಈ ಆಂದೋಲನಕಾರರ ಮೇಲೆ ಬಿಳಿಯ ಜನಸಮೂಹವು ಕಲ್ಲುಗಳು ಮತ್ತು ಬಾಟಲಿಗಳನ್ನು ಎಸೆಯುವ ಮೂಲಕ ಸ್ವಾಗತಿಸಿತು. ಪೊಲೀಸರು ನಿಷ್ಕ್ರಿಯವಾಗಿ ಒಂದು ಕಡೆ ನಿಂತರು. ಕಿಂಗ್ ಅವರನ್ನು ಭೇಟಿಯಾದ ನಂತರ, ಅಲಿ ನಗರದ ಕಪ್ಪು ಸಮುದಾಯದ ನೆರೆಹೊರೆಗಳಲ್ಲಿ ಪ್ರವಾಸ ಮಾಡಿದರು. “ಸ್ವಾತಂತ್ರ್ಯ, ನ್ಯಾಯ ಮತ್ತು ಸಮಾನತೆಗಾಗಿ ನಡೆಸುವ ಈ ಹೋರಾಟದಲ್ಲಿ, ನಾನು ನಿಮ್ಮೊಂದಿಗಿದ್ದೇನೆ” ಎಂದು ಅವರು ಪ್ರತಿಭಟನಾಕಾರರಿಗೆ ತಿಳಿಸಿದರು.

“ನಾನು ಲೂಯಿಸ್ವಿಲ್ಲೆಗೆ ಬಂದಿದ್ದೇನೆ, ಏಕೆಂದರೆ, ಹೂಸ್ಟನ್‌ನಲಿ ಸ್ವಾತಂತ್ರ್ಯ, ನ್ಯಾಯ ಮತ್ತು ಸಮಾನತೆ ಬೇಕೆಂದಿದ್ದಕ್ಕೆ ನನ್ನ ಸ್ವಂತ ಜನರನ್ನ – ಅವರಲ್ಲಿ ಹಲವರ ಜೊತೆಗೆ ಆಡಿಕೊಂಡು ಬೆಳೆದಿದ್ದೇನೆ, ನನ್ನ ಜೊತೆಗೆ ಶಾಲೆಯಲ್ಲಿ ಕಲಿತವರಿದ್ದಾರೆ ಮತ್ತು ಅವರಲ್ಲಿ ಕೆಲವರು ನನ್ನ ರಕ್ತ ಸಂಬಂಧಿಗಳು – ಬೀದಿಗಳಲ್ಲಿ ಹೊಡೆಯಲ್ಪಡುವಾಗ ನನಗೆ ಮೌನದಲ್ಲಿರಲು ಸಾಧ್ಯವಾಗಲಿಲ್ಲ. “ಸಾಂಕೇತಿಕವಾಗಿ ಪ್ರತಿಭಟಿಸುವುದಕ್ಕೆ” ತಮಗೆ ಇಷ್ಟವಿಲ್ಲ ಅಥವಾ ಬಿಳಿಯರ ನೆರೆಹೊರೆಯಲ್ಲಿ ಜೀವಿಸಲು ಸಿದ್ಧವಿಲ್ಲ ಎಂದು ಜಗತ್ತಿಗೆ ತಿಳಿಸಿದ್ದ ಮತ್ತು ಕೇವಲ ಮೂರು ವರ್ಷಗಳ ಹಿಂದೆ ಏಕೀಕರಣ ಕಾರ್ಯಕ್ರಮವನ್ನು ಹಾಗೂ ನಾಗರಿಕ ಹಕ್ಕುಗಳ ಚಳವಳಿಯ ರಾಜಕೀಯ ವಿಧಾನಗಳನ್ನು ಸಾರ್ವಜನಿಕವಾಗಿ ತ್ಯಜಿಸಿದ್ದ ವ್ಯಕ್ತಿಯಿಂದ ಬಂದ ಈ ಹೇಳಿಕೆ ಅಸಾಮಾನ್ಯವಾದದ್ದಾಗಿತ್ತು.

ಕುತೂಹಲಕಾರಿಯಾಗಿ, ಯಾರೊಬ್ಬರೂ ಈ ಬದಲಾವಣೆಯನ್ನು ಗಮನಿಸಲಿಲ್ಲ; ಯುದ್ಧದ ಬಗೆಗಿನ ಅವರ ಧೋರಣೆಯ ರಾಜಕೀಯ ವಿವರಣೆಯನ್ನು ಆ ಮನುಷ್ಯನ ವ್ಯಕ್ತಿತ್ವದ ತಾರ್ಕಿಕ ವಿಸ್ತರಣೆಯೆಂದು ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಮನೋಭಾವಕ್ಕೆ ಅನುಗುಣವಾಗಿರುವಂತೆಯೂ ಬೆಂಬಲಿಗರು ಮತ್ತು ವಿರೋಧಿಗಳು ಅದನ್ನು ಸಮಾನವಾಗಿ ಕಂಡರು. ಅಲಿಯವರು ’ನೇಶನ್ನತ್ತ ತಿರುಗಿದ್ದು ಮತ್ತು ಲೂಯಿಸ್ವಿಲ್ಲೆಯಲ್ಲಿನ ಏಕೀಕರಣ ಹೋರಾಟಕ್ಕೆ ಅವರ ಬೆಂಬಲ, ಇವೆರಡಕ್ಕೂ ಬೇರುಗಳಿದ್ದುದು ವಿಶಾಲವಾದ ಕ್ಷೇತ್ರದೊಂದಿಗೆ ತಮ್ಮನ್ನು ವೈಯಕ್ತಿಕವಾಗಿ ಗುರುತಿಸಿಕೊಳ್ಳುವುದರಲ್ಲಿ. ಆ ಕ್ಷೇತ್ರದ ಬಗೆಗಿನ ಜವಾಬ್ದಾರಿಯ ಪ್ರಜ್ಞೆಯಿಂದ, ರೋಲ್ ಮಾಡೆಲ್ ಗುಣಲಕ್ಷಣಗಳನ್ನು ಮತ್ತೆ ಮತ್ತೆ ತಿದ್ದಿಕೊಳ್ಳಲು ಅವರಿಗೆ ಪ್ರೇರೇಪಿಸಿತು ಮತ್ತು ಅವರದ್ದೇ ಮಾಧ್ಯಮಗಳನ್ನು ಅವರು ಬಳಸಿಕೊಳ್ಳುತ್ತಿದ್ದರೂ, ಅಧಿಕಾರ ಕೇಂದ್ರಗಳಿಂದ ಸ್ವತಂತ್ರವಾದದ್ದನ್ನು ತಾನು ಪ್ರತಿನಿಧಿಸುತಿದ್ದೇನೆ ಎಂದು ಕಂಡುಕೊಳ್ಳಲು ಮತ್ತು ಮರುರೂಪಿಸಿಕೊಳ್ಳಲು ಸಾಧ್ಯವಾಯಿತು. ಲೂಯಿಸ್ವಿಲ್ಲೆಯಲ್ಲಿ, ಅಲಿ ಚರ್ಚುಗಳು ಮತ್ತು ಶಾಲೆಗಳಿಗೆ ಭೇಟಿ ನೀಡಿದರು ಮತ್ತು ವರದಿಗಾರರು ಅವರ ಬೆನ್ನು ಬಿದ್ದರು. ಅದೇ ದಿನದ ಕೊನೆಗೆ, ಅವರು ಯುದ್ಧದ ಬಗ್ಗೆ ಮತ್ತು ಅದರಲ್ಲಿ ಭಾಗವಹಿಸಲು ನಿರಾಕರಿಸಿದ ಬಗ್ಗೆ ತಮ್ಮ ಅತ್ಯಂತ ಸ್ಪಷ್ಟವಾದ ರಾಜಕೀಯ ಹೇಳಿಕೆಯನ್ನು ನೀಡಿದರು:

“ಲೂಯಿಸ್ವಿಲ್ಲೆಯಲ್ಲಿ ನೀಗ್ರೋ ಜನರನ್ನು ನಾಯಿಗಳಂತೆ ಕಾಣಲಾಗುತ್ತಿರುವಾಗ ಮತ್ತು ಅವರಿಗೆ ಸರಳ ಮಾನವ ಹಕ್ಕುಗಳನ್ನು ನಿರಾಕರಿಸಲಾಗುತ್ತಿರುವಾಗ, ಅವರು ನನಗೆ ಸಮವಸ್ತ್ರ ಧರಿಸಿ ಮನೆಯಿಂದ ಹತ್ತು ಸಾವಿರ ಮೈಲಿ ದೂರ ಹೋಗಿ ವಿಯೆಟ್ನಾಂನಲ್ಲಿ ಕಂದು ಬಣ್ಣದ ಜನರ ಮೇಲೆ ಬಾಂಬ್ ಮತ್ತು ಗುಂಡುಗಳನ್ನು ಹಾಕಲು ಏಕೆ ಕೇಳಬೇಕು? ಇಲ್ಲ, ಪ್ರಪಂಚದಾದ್ಯಂತದ ಬಿಳಿ ಗುಲಾಮ ಮಾಸ್ಟರ್‌ಗಳು, ಕಪ್ಪು ಬಣ್ಣದವರ ಮೇಲೆ ಪ್ರಾಬಲ್ಯವನ್ನು ಮುಂದುವರೆಸುವುದಕ್ಕೋಸ್ಕರ, ಮತ್ತೊಂದು ಬಡ ರಾಷ್ಟ್ರವನ್ನು ಸುಟ್ಟುಹಾಕಲು ಹಾಗೂ ಕೊಲೆ ಮಾಡಲು, ನಾನು ಮನೆಯಿಂದ ಹತ್ತು ಸಾವಿರ ಮೈಲುಗಳಷ್ಟು ದೂರ ಹೋಗುತ್ತಿಲ್ಲ. ಅಂತಹ ಕೆಡುಕುಗಳು ಕೊನೆಗೊಳ್ಳಬೇಕಾದ ದಿನ ಇದು. ಅಂತಹ ನಿಲುವನ್ನು ತೆಗೆದುಕೊಳ್ಳುವುದರಿಂದ ಅದು ನನ್ನ ಪ್ರತಿಷ್ಠೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಮತ್ತು ನಾನು ಚಾಂಪಿಯನ್ ಆಗಿ ಮಿಲಿಯನ್ ಡಾಲರ್‌ಗಳು ನನ್ನ ಬಳಿ ಸೇರುವುದನ್ನು ಕಳೆದುಕೊಳ್ಳಬಹುದು.

ಆದರೆ ನಾನು ಅದನ್ನು ಒಮ್ಮೆ ಹೇಳಿದ್ದೇನೆ ಮತ್ತು ಮತ್ತೆ ಹೇಳುತ್ತೇನೆ. ನನ್ನ ಜನರ ನಿಜವಾದ ಶತ್ರು ಇಲ್ಲಿಯೇ ಇದ್ದಾನೆ. ತಮ್ಮ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಡುತ್ತಿರುವವರನ್ನು ಗುಲಾಮರನ್ನಾಗಿ ಮಾಡುವ ಸಾಧನಕ್ಕೆ ಬಲಿಯಾಗಿ ನನ್ನ ಧರ್ಮಕ್ಕೆ, ನನ್ನ ಜನರಿಗೆ ಅಥವಾ ನನಗೆ ಕೆಟ್ಟ ಹೆಸರನ್ನು ತರುವುದಿಲ್ಲ. … ಯುದ್ಧವು ನನ್ನ ಇಪ್ಪತ್ತೆರಡು ಮಿಲಿಯನ್ ಜನರಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ತರುತ್ತದೆ ಎಂದು ನಾನು ಭಾವಿಸಿದರೆ, ಅವರು ನನ್ನನ್ನು ಯುದ್ಧಕ್ಕೆ ಸೇರಿಸಿಕೊಳ್ಳಲು ಕರಡು ರೂಪಿಸಬೇಕಿಲ್ಲ, ನಾನೆ ನಾಳೆ ಸೇರುತ್ತೇನೆ. ಆದರೆ ನಾನು ನೆಲದ ನಿಯಮಗಳನ್ನು ಅಥವಾ ಅಲ್ಲಾಹನ ನಿಯಮಗಳನ್ನು ಪಾಲಿಸಬೇಕು. ನನ್ನ ನಂಬಿಕೆಗಳ ಪರ ನಿಲ್ಲುವ ಮೂಲಕ ನಾನು ಕಳೆದುಕೊಳ್ಳುವುದು ಏನೂ ಇಲ್ಲ. ಹಾಗಾಗಿ ಜೈಲಿಗೆ ಹೋಗುತ್ತೇನೆ. ನಾವು ನಾಲ್ಕು ನೂರು ವರ್ಷಗಳಿಂದ ಜೈಲಿನಲ್ಲಿದ್ದೇವೆ…”

ಮಿಲಿಟರಿ ಸೇವೆಯ ಅಹಿತಕರತೆಯನ್ನು ತಪ್ಪಿಸಲು ಬಯಸಿದ್ದ, ಗೊಂದಲಕ್ಕೊಳಗಾದ ಯುವ ಬಾಕ್ಸರ್ ಜಾಗತಿಕ ಐಕ್ಯತೆಯ ಪ್ರಬುದ್ಧ ನಾಯಕನಾಗಿ ಹೊರಹೊಮ್ಮಿದ್ದರು. ಲೂಯಿಸ್ವಿಲ್ಲೆಯಲ್ಲಿ, ಅರವತ್ತರ ದಶಕದ ಪ್ರಮುಖ ಟಿಪ್ಪಣಿಗಳಲ್ಲಿ ಒಂದಾದ ಹೋರಾಟದ ಅನುಭವದ ಪರಿವರ್ತಕ ಶಕ್ತಿಗೆ ಅಲಿ ಸಾಕ್ಷ್ಯ ನೀಡಿದರು. ವೈಯಕ್ತಿಕ ಮತ್ತು ಐತಿಹಾಸಿಕ ಸಂದರ್ಭಗಳು ಅವರನ್ನು ಅಧಿಕಾರಕ್ಕೆ ವಿರುದ್ಧವಾಗಿ ಬಂಧಿಸಿದ್ದವು; ಆ ಸಂಘರ್ಷದ ಬೆಂಕಿಯಲ್ಲಿ, ಆಂತರಿಕ ಸ್ವ ಮತ್ತು ವಿಶಾಲವಾದ ಸಮುದಾಯದ ನಡುವೆ ಹೊಸ ಮತ್ತು ಶಕ್ತಿಯುತವಾದ ಸಂಪರ್ಕಗಳು ಬೆಸೆಯಲ್ಪಟ್ಟವು. ನೇಷನ್ ಆಫ್ ಇಸ್ಲಾಂ ಧರ್ಮಕ್ಕಿಂತಲೂ, ಚಾನ್ಸರಿ ಎಸ್ಕ್ರಿಜ್ ಅಂತಹವರಿಂದ ಲೂಯಿಸ್ವಿಲ್ಲೆಯಲ್ಲಿ ನೀಡಿದಂತಹ ಹೇಳಿಕೆಗಳನ್ನು ರೂಪಿಸಲು ಅಲಿಯವರಿಗೆ ಸಾಧ್ಯವಾಯಿತು. ಆದಾಗ್ಯೂ, ಭೌಗೋಳಿಕತೆಯ ಬಗ್ಗೆ ಅವರ ತೆಳು ಗ್ರಹಿಕೆಯ ಹೊರತಾಗಿಯೂ, ಆಯ್ಕೆಯ ನೈತಿಕ ಆಯಾಮದ ಬಗ್ಗೆ ಅವರಿಗಿದ್ದ ಆಳವಾದ ತಿಳಿವು ಹೆಚ್ಚು ಪ್ರಬುದ್ಧತೆಯನ್ನು ಪಡೆದಿತ್ತು. ಗಮನಾರ್ಹವಾಗಿ, ಮಾಲ್ಕಮ್ ಎಕ್ಸ್‌ನಿಂದ ಪಡೆದ ಹೆಚ್ಚಿನ ವಾಕ್ಚಾತುರ್ಯ ಮತ್ತು ಅನೇಕ ವಾದಗಳು, ಅವರ ನೆರಳು, ಆ ಸವಾಲಿನ ಮತ್ತು ಬದಲಾವಣೆಯ ವರ್ಷಗಳಲ್ಲಿ ಅಲಿಯವರ ಮೇಲೆ ಪ್ರಭಾವ ಬೀರಿದ್ದವು.

ಮೈಕ್ ಮಾರ್ಕ್ಯುಸೀ
(ಮೈಕ್ ಮಾರ್ಕ್ಯುಸೀ ಅವರು ಬರೆದಿದ್ದ ಅಲಿಯವರ ಬಗೆಗಿನ ಲೇಖನ ’ಬಿಯಾಂಡ್ ದ ಕನ್ಫೈನ್ಸ್ ಆಫ್ ಅಮೆರಿಕ’ದ ಆಯ್ದ ಭಾಗವನ್ನು ’ದ ಮೆಮೂತ್ ಬುಕ್ ಆಫ್ ಮುಹಮದ್ ಅಲಿ’ ಇಂದ ತೆಗೆದುಕೊಳ್ಳಲಾಗಿದೆ)

ಕನ್ನಡಕ್ಕೆ: ಮಲ್ಲನಗೌಡರ್


ಇದನ್ನೂ ಓದಿ: ಭಾರತದ ಸಾರ್ವಭೌಮತೆ ಜನರೇ ಜನರಿಗಾಗಿ ಕಟ್ಟಿಕೊಂಡಿರುವಂಥದ್ದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...