Homeಕರ್ನಾಟಕನಿಗಮಗಳಿಗೆ ನೂರಾರು ಕೋಟಿಯಿದೆ; ಕೊರೊನಾ ಪರಿಹಾರಕ್ಕೆ ಹಣವಿಲ್ಲವೆ: ಕುಮಾರಸ್ವಾಮಿ ಪ್ರಶ್ನೆ

ನಿಗಮಗಳಿಗೆ ನೂರಾರು ಕೋಟಿಯಿದೆ; ಕೊರೊನಾ ಪರಿಹಾರಕ್ಕೆ ಹಣವಿಲ್ಲವೆ: ಕುಮಾರಸ್ವಾಮಿ ಪ್ರಶ್ನೆ

ಕೇರಳದಲ್ಲಿ 20,000 ಕೋಟಿ ಪ್ಯಾಕೇಜ್‌‌ ಘೋಷಿಸಲಾಗಿದೆ, ಅವರಿಗಿಂತ ದೊಡ್ಡ ರಾಜ್ಯವಾದ ಕರ್ನಾಟಕಕ್ಕೆ 1200 ಕೋಟಿ ಪರಿಹಾರ ಸಾಕೆ ಎಂದು ಅವರು ಕೇಳಿದ್ದಾರೆ.

- Advertisement -
- Advertisement -

ಜನಹಿತದ ಲಾಕ್‌ಡೌನ್‌ ಘೋಷಿಸಬೇಕು, ಅದರಲ್ಲಿ ಜನರಿಗೆ ಉಪಯೋಗವಾಗುವ ಪ್ಯಾಕೇಜ್‌ ಇರಬೇಕು ಎಂಬ ಜೆಡಿಎಸ್‌ನ ಆಗ್ರಹದ ನಂತರ ರಾಜ್ಯ ಸರ್ಕಾರ ಪ್ಯಾಕೇಜ್‌ ಘೋಷಿಸಿದೆ. ಆದರೆ, 6.5 ಕೋಟಿ ಜನಸಂಖ್ಯೆ ಇರುವ, ದೇಶಕ್ಕಾಗಿ ಅಪಾರ ಅರ್ಥಿಕ ಕೊಡುಗೆ ನೀಡುವ ಕರ್ನಾಟಕದಂತ ದೊಡ್ಡ ರಾಜ್ಯಕ್ಕೆ ಈ ಪ್ಯಾಕೇಜ್‌ ಅತ್ಯಂತ ಕಡಿಮೆ. ಇದು ಅವೈಜ್ಞಾನಿ, ಅಸಮರ್ಪಕ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌. ಡಿ. ಕುಮಾರಸ್ವಾಮಿ ಬುಧವಾರ ಹೇಳಿದ್ದಾರೆ.

ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಅವರು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಟ್ವೀಟ್‌ನಲ್ಲಿ “ಲಾಕ್‌ಡೌನ್‌ ಮಾಡಿ ಎಂದು ನಾನು ಮಾರ್ಚ್‌ನಲ್ಲೇ ಹೇಳಿದ್ದೆ. ಆದರೆ, ಘೋಷಿಸಲಿಲ್ಲ. ನೆರೆಯ ಕೇರಳದಲ್ಲಿ ಮಾರ್ಚ್‌ನಲ್ಲೇ ಲಾಕ್‌ಡೌನ್‌ ಜಾರಿಯಾಯಿತು. 20,000 ಕೋಟಿ ಪ್ಯಾಕೇಜ್‌ ಅನ್ನೂ ಘೋಷಿಸಲಾಯಿತು. ಕರ್ನಾಕಟದ ಎದುರು ಕೇರಳ ಎಲ್ಲ ದೃಷ್ಟಿಯಿಂದಲೂ ಸಣ್ಣ ರಾಜ್ಯ. ಆದರೆ, ಅವರಿಗಿಂತ ದೊಡ್ಡ ರಾಜ್ಯವಾದ ಕರ್ನಾಟಕಕ್ಕೆ ಈ 1200 ಕೋಟಿ ಪರಿಹಾರ ಸಾಕೆ?” ಎಂದು ಪ್ರಶ್ನಿಸಿದ್ದಾರೆ.

“ಆರ್ಥಿಕ ಸಂಕಷ್ಟದ ಮಧ್ಯೆ ಪ್ಯಾಕೇಜ್‌ ನೀಡುತ್ತಿರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ನನ್ನಿಂದ ಅಧಿಕಾರ ಕಸಿದಾಗ ಇದೇ ಬಿಎಸ್‌ವೈ ಅವರು ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದಿದ್ದರು. 2 ವರ್ಷದಲ್ಲಿ ಆರ್ಥಿಕ ದುಸ್ಥಿತಿ ಬಂದಿದ್ದು ಹೇಗೆ? ರಾಜಕೀಯಕ್ಕಾಗಿ ಮಾಡಿಕೊಂಡ ನಿಗಮಗಳಿಗೆ ನೂರಾರು ಕೋಟಿ ಹಣವಿರುವಾಗ ಜನರ ಪರಿಹಾರಕ್ಕಿಲ್ಲವೇ?” ಎಂದು ಅವರು ಕೇಳಿದ್ದಾರೆ.

ಇದನ್ನೂ ಓದಿ: ಸೋಂಕಿನಿಂದ ಸಾವು ಹೆಚ್ಚುತ್ತಿದೆ; ಕೇಂದ್ರ ಜನರ ಗಮನ ಬೇರೆಡೆ ಸೆಳೆಯುತ್ತಿದೆ: ರಾಹುಲ್ ಗಾಂಧಿ ಆಕ್ರೋಶ

“ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಯಡಿಯೂರಪ್ಪ ಮಾತು ಒಪ್ಪೋಣ. ಆದರೆ, ನಿಗಮ-ಮಂಡಳಿಗಳಿಗೆ ಅನಗತ್ಯವಾಗಿ ತುಂಬಲಾಗಿರುವ ಬಿಜೆಪಿ ಕಾರ್ಯಕರ್ತರಿಗೆ ಹಣ ನೀಡಲು ಆರ್ಥಿಕ ಸಂಕಷ್ಟ ಇಲ್ಲವೇ? ಜನರೇ ನೀಡಿದ ಹಣವನ್ನು ಜನರಿಗೆ ನೀಡಲು ಮಾತ್ರ ಸಂಕಷ್ಟ ಎದುರಾಗಿದೆಯೇ? ನಿಮ್ಮ ಕಾರ್ಯಕರ್ತರಿಗೆ ನಿಗಮ-ಮಂಡಳಿ ನೆಪದಲ್ಲಿ ನೀಡುತ್ತಿರುವುದು ಜನರ ಹಣವಲ್ಲವೇ?” ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಪ್ಯಾಕೇಜ್‌ನಲ್ಲಿ ಕೃಷಿ ರಂಗವನ್ನು ಹೂ ಬೆಳೆಗಾರರು, ಹಣ್ಣ-ತರಕಾರಿ ಬೆಳೆಗಾರರೆಂದು ಪ್ರತ್ಯೇಕಿಸಲಾಗಿದೆ. ಅತ್ಯಂತ ಅವೈಜ್ಞಾನಿಕ ಕ್ರಮವಿದು. ಒಟ್ಟು ಕೃಷಿ ಕ್ಷೇತ್ರ, ಒಟ್ಟು ರೈತ ಸಮುದಾಯ ಎಂಬ ಪರಿಕಲ್ಪನೆಯೇ ಇಲ್ಲಿಲ್ಲ. ಕೃಷಿ ಕ್ಷೇತ್ರದ ಇತರೆ ಕಸುಬುದಾರರನ್ನು ಪ್ಯಾಕೇಜ್‌ನಿಂದ ಹೊರಗಿಟ್ಟಿದ್ದು ಯಾಕೆ? ಪ್ಯಾಕೇಜ್‌ ಹಿಗ್ಗುತ್ತದೆ ಎಂಬ ಭಯವೇ?” ಅವರು ರಾಜ್ಯ ಸರ್ಕಾರಕ್ಕೆ ಪಶ್ನಿಸಿದ್ದಾರೆ.

“2.10 ಲಕ್ಷ ಚಾಲಕ ವರ್ಗಕ್ಕೆ ₹3000 ಪರಿಹಾರ ನೀಡುವುದಾಗಿ ಹೇಳಲಾಗಿದೆ. ಕಳೆದ ಬಾರಿಯ ಲಾಕ್‌ಡೌನ್‌ನಲ್ಲಿ 7.50 ಲಕ್ಷ ಇದ್ದ ಚಾಲಕರ ಸಂಖ್ಯೆ ಈ ಬಾರಿ 2.10 ಲಕ್ಷಕ್ಕೆ ಇಳಿದಿದೆ. ಚಾಲಕರಿಗೆ ಈಗ ಪರಿಹಾರಕ್ಕಿಂತಲೂ ಮುಖ್ಯವಾಗಿ, ಆರ್‌ಟಿಒ ಶುಲ್ಕಗಳು, ತೆರಿಗೆಯಿಂದ ವಿನಾಯಿತಿ ಸಿಗಬೇಕಿತ್ತು. ಈಗಿನ ಪರಿಹಾರದಿಂದ ಅವರ ಕುಟುಂಬ ನಡೆಯಲು ಸಾಧ್ಯವೇ?” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಳೆದ ಬಾರಿಗಿಂತ ಕೊರೊನಾ ಆರ್ಥಿಕ ಪ್ಯಾಕೇಜ್ ಪರಿಹಾರ ಮೊತ್ತ ಕಡಿತಗೊಳಿಸಿದ ರಾಜ್ಯ ಸರ್ಕಾರ

“ಕೂಲಿ ಕಾರ್ಮಿಕರು ಸದ್ಯ ನಗರ ತೊರೆದು ಹಳ್ಳಿ ಸೇರಿದ್ದಾರೆ. ಅವರ ಅದಾಯ ವೃದ್ಧಿಗಾಗಿ ನರೇಗಾವನ್ನು ಬಳಸಿಕೊಳ್ಳಲು ಸರ್ಕಾರಕ್ಕೆ ಅವಕಾಶವಿತ್ತು. ನರೇಗಾಕ್ಕೆ ಹೆಚ್ಚಿನ ಅನುದಾನ ಒದಗಿಸಿ, ಗ್ರಾಮೀಣ ಮೂಲಸೌಕರ್ಯ ಹೆಚ್ಚಿಸಿ, ಕೂಲಿ ಕಾರ್ಮಿಕರ ಆದಾಯ ವೃದ್ಧಿಸಲು ಇದ್ದ ಅವಕಾಶವನ್ನು ಸರ್ಕಾರ ಕಳೆದುಕೊಂಡಿದೆ. ಈ ಸರ್ಕಾರಕ್ಕೆ ದೂರಾಲೋಚನೆಗಳೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸರ್ಕಾರ ಈಗ ನಿಗದಿ ಮಾಡಿರುವ 3 ತಿಂಗಳ ಅವಧಿಯ ಸಾಲ ಮರುಪಾವತಿಯ ಹೊಣೆಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕಾಗಿತ್ತು. ಮೂರು ತಿಂಗಳಿಗೆ ಸರ್ಕಾರವೇ ಸಾಲ ಮರು ಪಾವತಿ ಮಾಡಬೇಕಾಗಿತ್ತು ಅಥವಾ ಮರುಪಾವತಿಯನ್ನು ಮನ್ನಾ ಮಾಡಬೇಕಾಗಿತ್ತು. ನಾನು ರೈತರ ಸಾಲ ಮನ್ನಾ ಮಾಡಿ ಸರ್ಕಾರದಿಂದ ಹೊರ ಬಂದಿದ್ದೆ. ಹೀಗಾಗಿ ರೈತರ ಸಾಲದ ಹೊರೆ ದೊಡ್ಡದೇನೂ ಇರಲಿಲ್ಲ” ಎಂದು ಅವರು ಹೇಳಿದ್ದಾರೆ.

“ನಿತ್ಯ 6 ಲಕ್ಷ ಮಂದಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ಪಡೆಯುತ್ತಿರುವುದಾಗಿ ಹೇಳಲಾಗಿದೆ. ಇಂದಿರಾ ಕ್ಯಾಂಟೀನ್‌ಗಳ ಎದುರು ಜನರೇ ಇಲ್ಲ. ಆದರೆ, ಪ್ರತಿ ದಿನ 6 ಲಕ್ಷ ಜನರ ಲೆಕ್ಕ ಕೊಟ್ಟು ಸರ್ಕಾರ ಯಾವ ಕಂಟ್ರಾಕ್ಟರ್‌ ಅನ್ನು ಉದ್ದಾರ ಮಾಡುತ್ತಿದೆ. ಕ್ಯಾಂಟೀನ್‌ಗಳ ಎದುರು ಇರುವ ಜನಸಂದಣಿಯನ್ನು ಸರ್ಕಾರ ವಿಡಿಯೊ ಮಾಡಿ ಬಿಡುಗಡೆ ಮಾಡಬಲ್ಲದೇ?” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ ಉಪ ಚುನಾವಣೆಯಲ್ಲಿ ಕೋವಿಡ್‌ಗೆ ಏಳು ನಾಯಕರು ಬಲಿ: ಸರ್ಕಾರದ ವಿರುದ್ಧ ಮೃತರ ಕುಟುಂಬಗಳ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿಗೆ ಹಲ್ಲೆ ನಡೆಸಿದ ಸ್ವಪಕ್ಷದ ಮುಖಂಡ

0
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಕೃಷ್ಣಕುಮಾರ್ ಅವರ ಕಣ್ಣಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪಕ್ಷದ ಸ್ಥಳೀಯ ನಾಯಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕೃಷ್ಣಕುಮಾರ್ ಇತ್ತೀಚೆಗೆ...