ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಜೆ.ಪಿ ನಡ್ಡಾ ಯಾರು? ಅವರಿಗೆ ನಾನು ಯಾಕೆ ಉತ್ತರಿಸಬೇಕು?” ಎಂದು ಪ್ರಶ್ನಿಸಿದ್ದಾರೆ. ಚೀನಾ ಸರ್ಕಾರವು ಅರುಣಾಚಲ ಪ್ರದೇಶದಲ್ಲಿ ಹಳ್ಳಿಯನ್ನು ನಿರ್ಮಿಸುತ್ತಿದೆ ಎಂಬ ವರದಿಯ ಬಗ್ಗೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ನಡೆಸಿದ ವಾಗ್ದಾಳಿಯ ಹಿನ್ನಲೆಯಲ್ಲಿ, ನಡ್ಡಾ ಅವರು ರಾಹುಲ್ ಗಾಂಧಿಯನ್ನು ಗುರಿಯಾಗಿಸಿ ಟೀಕಿಸಿದ್ದರು.
ನಡ್ಡಾ ಅವರು, “ಈಗ ರಾಹುಲ್ ಗಾಂಧಿ ತಮ್ಮ ಮಾಸಿಕ ರಜೆಯಿಂದ ಹಿಂದಿರುಗಿದ್ದಾರೆ. ನಾನು ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ. ಅವರ ಇಂದಿನ ಪತ್ರಿಕಾಗೋಷ್ಠಿಯಲ್ಲಿ ಅವರು ಉತ್ತರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಪ್ರಶ್ನೆಗಳನ್ನು ಕೇಳಿದ್ದರು.
ಇದರ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಅವರ್ಯಾರು? ಅವರ ಪ್ರಶ್ನೆಗಳಿಗೆ ನಾನ್ಯಾಕೆ ಉತ್ತರಿಸಬೇಕು? ಅವರು ನನ್ನ ಪ್ರಾಧ್ಯಾಪಕನೇ? ನಾನು ದೇಶಕ್ಕೆ ಉತ್ತರಿಸುತ್ತೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇವು ರೈತರನ್ನು ಮುಗಿಸಿಬಿಡುವ ಕಾಯ್ದೆಗಳಾಗಿವೆ: ರಾಹುಲ್ ಗಾಂಧಿ
“ರೈತರಿಗೆ ವಾಸ್ತವ ತಿಳಿದಿದೆ. ರಾಹುಲ್ ಗಾಂಧಿ ಏನು ಮಾಡುತ್ತಾರೆಂದು ಎಲ್ಲಾ ರೈತರಿಗೆ ತಿಳಿದಿದೆ. ನಡ್ಡಾ ಜಿ ಭಟ್ಟ ಪಾರ್ಸೌಲ್ನಲ್ಲಿ ಇರಲಿಲ್ಲ. ನಾನು ನರೇಂದ್ರ ಮೋದಿ ಅಥವಾ ಯಾರಿಗೂ ಹೆದರುವುದಿಲ್ಲ. ಅವರಿಗೆ ನನ್ನನ್ನು ಮುಟ್ಟಲು ಸಾಧ್ಯವಿಲ್ಲ ಆದರೆ ಅವರು ನನ್ನನ್ನು ಶೂಟ್ ಮಾಡಬಹುದು. ನಾನು ದೇಶಭಕ್ತ ಮತ್ತು ನನ್ನ ದೇಶವನ್ನು ರಕ್ಷಿಸುತ್ತೇನೆ. ಇದು ನನ್ನ ಧರ್ಮ. ನಾನು ಅವರಿಗಿಂತ ಹೆಚ್ಚು ಧರ್ಮಿಷ್ಠ” ಎಂದು ರಾಹುಲ್ ಗಾಂಧಿ ಹೇಳಿದರು. ಭಟ್ಟ ಪಾರ್ಸೌಲ್ ಉತ್ತರ ಪ್ರದೇಶದ ಸ್ಥಳವಾಗಿದ್ದು, 2011 ರಲ್ಲಿ ಅಲ್ಲಿ ರಾಹುಲ್ ಗಾಂಧಿ ಅವರು ಭೂಸ್ವಾಧೀನ ವಿರುದ್ಧದ ಆಂದೋಲನದಲ್ಲಿ ರೈತರನ್ನು ಬೆಂಬಲಿಸಿ ಹೋರಾಟಕ್ಕೆ ಸೇರಿಕೊಂಡಿದ್ದರು.
ಚೀನಾ, ಕೊರೊನಾ ವೈರಸ್ ಬಿಕ್ಕಟ್ಟು ಮತ್ತು ರೈತ ಪ್ರತಿಭಟನೆಗಳು ಸೇರಿದಂತೆ ಹಲವಾರು ವಿಷಯಗಳನ್ನು ಉಲ್ಲೇಖಿಸಿ ಬಗ್ಗೆ ನಡ್ಡಾ ಅವರು ರಾಹುಲ್ ಗಾಂಧಿಗೆ ವಿರುದ್ದ ವಾಗ್ದಾಳಿ ಮಾಡಿದ್ದರು.
Now that Mr. @RahulGandhi has returned from his monthly vacation, I would like to ask him some questions. I hope he will answer them in his today’s Press Conference.
— Jagat Prakash Nadda (@JPNadda) January 19, 2021
“ರಾಹುಲ್ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಚೀನಾ ಪರವಾಗಿರುವುದನ್ನು ಯಾವಾಗ ನಿಲ್ಲಿಸುತ್ತದೆ? ಅವರು ಉಲ್ಲೇಖಿಸುತ್ತಿರುವ ಅರುಣಾಚಲ ಪ್ರದೇಶ ಸೇರಿದಂತೆ ಸಾವಿರಾರು ಕಿ.ಮೀ.ಗಳನ್ನು ಚೀನಿಯರಿಗೆ ಉಡುಗೊರೆಯಾಗಿ ಪಂಡಿತ್ ನೆಹರೂ ನೀಡಿದ್ದಾರೆಯೆ ಹೊರತು ಬೇರೆ ಯಾರೂ ಅಲ್ಲ. ಇದನ್ನು ಅವರು ನಿರಾಕರಿಸುತ್ತಾರೆಯೆ? ಪ್ರತಿ ಸಮಯ ಕಾಂಗ್ರೆಸ್ ಯಾಕೆ ಚೀನಾಕ್ಕೆ ಶರಣಾಗುತ್ತದೆ?” ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ರೈತರನ್ನು ಪ್ರಚೋದಿಸುವ ಮತ್ತು ದಾರಿತಪ್ಪಿಸುವ ಆರೋಪಗಳು ಡಬಲ್ ಸ್ಟ್ಯಾಂಡರ್ಡ್ ಎಂದು ಅವರು ಆರೋಪಿಸಿದ ಅವರು, “ಕಾಂಗ್ರೆಸ್ ಸರ್ಕಾರಗಳ ಅಡಿಯಲ್ಲಿ ದಶಕಗಳಿಂದ ರೈತರು ಯಾಕೆ ಬಡವರಾಗಿದ್ದರು? ಪ್ರತಿಪಕ್ಷಗಳಲ್ಲಿ ಇದ್ದಾಗ ಮಾತ್ರ ಅವರು ರೈತರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ?” ಎಂದು ಅವರು ಕೇಳಿದ್ದಾರೆ.
ಇದನ್ನೂ ಓದಿ: ಅಹಂಕಾರಿ ಮೋದಿ ಸರ್ಕಾರದ ವಿರುದ್ಧ ರೈತರು ನಡೆಸುವ ಸತ್ಯಾಗ್ರಹದಲ್ಲಿ ಭಾಗಿಯಾಗಿ: ರಾಹುಲ್ ಗಾಂಧಿ