ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಆಕ್ಟ್ನ ಪರಿಣಾಮಕಾರಿ ಬಳಕೆ, ಆರೋಪಿಗಳಿಗೆ ಶಿಕ್ಷೆ ವಿಧಿಸುವ ಕುರಿತು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಮ್ಯಾನುಯಲ್ ಸ್ಕ್ಯಾವೆಂಜಿಂಗ್ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ರಾಜ್ಯದಲ್ಲಿ ಒಂದೇ ಒಂದು ಶಿಕ್ಷೆ ಕೂಡ ವಿಧಿಸಲು ಏಕೆ ವಿಫಲವಾಗಿದೆ ಎಂದು ಪ್ರಶ್ನಿಸಿದ್ದಾರೆ.
ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಆಕ್ಟ್ನ ಉಲ್ಲಂಘನೆ ಪ್ರಕರಣದಲ್ಲಿ ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ 1989ರಡಿ ಪ್ರಕರಣವನ್ನು ದಾಖಲಿಸುವುದಿಲ್ಲ ಅಥವಾ ನಿಬಂಧನಗಳಡಿಯಲ್ಲಿ ಪ್ರಕರಣ ದಾಖಲಿಸಿದರೂ ಅದರಡಿಯಲ್ಲಿ ಶಿಕ್ಷೆಯಾಗುತ್ತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಗಮನಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯನ್ನು ಸಾಮಾನ್ಯವಾಗಿ ಮ್ಯಾನುಯಲ್ ಸ್ಕ್ಯಾವೆಂಜರ್ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ದಾಖಲು ಮಾಡಲಾಗುತ್ತಿಲ್ಲ ಎಂದು ಹೈಕೋರ್ಟ್ ಕಂಡುಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ಪೀಠವು ಕರ್ನಾಟಕದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರ್ಜಿಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸೂಚಿಸಿ ಹೈಕೋರ್ಟ್ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದೆ.
ವಿಚಾರಣೆಯ ಸಂದರ್ಭದಲ್ಲಿ ವಕೀಲರಾದ ಶ್ರೀಧರ್ ಪ್ರಭು, ಅಂತಹ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯನ್ನು ಕಡ್ಡಾಯವಾಗಿ ಅನ್ವಯಿಸಬೇಕು ಎಂದು ಹೇಳಿದ್ದಾರೆ. ಮ್ಯಾನುಯಲ್ ಸ್ಕ್ಯಾವೆಂಜರ್ಗಳಾಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ-2013ರಡಿ ಪ್ರಕರಣ ದಾಖಲಿಸಿದರೂ, ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನ್ಯಾಯಾಲಯವು ಗಮನಿಸಿದೆ. ಪ್ರಾಸಿಕ್ಯೂಷನ್ ಮತ್ತು ಸರ್ಕಾರಿ ವಕೀಲರು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದ ಕಾರಣ ಇದು ಸಾಧ್ಯವಾಗುತ್ತದೆ ಎಂದು ಕೋರ್ಟ್ ಗಮನಿಸಿದೆ.
ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಆಕ್ಟ್ನ ಉಲ್ಲಂಘನೆ ಪ್ರಕರಣದಲ್ಲಿ ಒಬ್ಬರಿಗೆ ಕೂಡ ಶಿಕ್ಷೆಯಾಗಿಲ್ಲ. ಸರಕಾರದ ಪರ ವಕೀಲರು, ನಿಮ್ಮ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಅತ್ಯಲ್ಪ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಆದರೆ ಈ ವಿಷಯಕ್ಕೆ ಬಂದಾಗ ಕ್ರಮ ಎಲ್ಲಿದೆ? ಸಂಬಂಧಪಟ್ಟ ಕೆಳದರ್ಜೆಯ ಪಬ್ಲಿಕ್ ಪ್ರಾಸಿಕ್ಯೂಟರ್ಗಳ ವಿರುದ್ಧ ನೀವು ಏನು ಕ್ರಮ ಕೈಗೊಂಡಿದ್ದೀರಿ? ಶೂನ್ಯ ಶಿಕ್ಷೆ? ಎಂತಹ ನ್ಯಾಯದ ಅಪಹಾಸ್ಯ, ಒಂದೇ ಒಂದು ಶಿಕ್ಷೆಯೂ ಏಕೆ ಆಗಿಲ್ಲ? ನಿಮ್ಮ ಚೌಕಟ್ಟು ಏನು? ಎಂದು ಕೋರ್ಟ್ ಸರ್ಕಾರವನ್ನು ಕೇಳಿದೆ.
ನಾವು ಮಾಡುತ್ತಿರುವ ಕೆಲಸಗಳಿಂದ ಸಂವಿಧಾನದ ನಿಮಾತೃಗಳು ತಮ್ಮ ಸಮಾಧಿಯಲ್ಲಿ ನಡುಗುತ್ತಾರೆ. ಇಂತಹ ಪ್ರಕರಣಗಳಲ್ಲಿ ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ್, ಕೆಲವು ಕಾರ್ಯದರ್ಶಿಗಳನ್ನು ಜೈಲಿಗೆ ಹಾಕದ ಹೊರತು ನಮ್ಮ ರಾಜ್ಯದಲ್ಲಿ ಏನೂ ಸುಧಾರಿಸುವುದಿಲ್ಲ ಎಂದು ಹೇಳಿದೆ.
ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ನಲ್ಲಿ ತೊಡಗಿರುವವರಿಗೆ ಪುನರ್ವಸತಿ ಜೊತೆಗೆ ಮ್ಯಾನುಯಲ್ ಸ್ಕ್ಯಾವೆಂಜಿಂಗ್ನ್ನು ಬದಲಾಯಿಸುವ ತಂತ್ರಜ್ಞಾನವನ್ನು ಪರಿಚಯಿಸಬೇಕು ಎಂದು ವಕೀಲ ಶ್ರೀಧರ್ ಪ್ರಭು ಈ ವೇಳೆ ಕೋರ್ಟ್ನಲ್ಲಿ ಹೇಳಿದ್ದಾರೆ. ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಆಕ್ಟ್ನ ಉಲ್ಲಂಘನೆ ಪ್ರಕರಣದ ಜೊತೆಗೆ ಶಾಲಾ ಮಕ್ಕಳನ್ನು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಬಳಸುವುದನ್ನು ಪ್ರಶ್ನಿಸಿ ಮತ್ತೊಂದು ಸಾರ್ವಜನಿಕ ಹಿತಾಸಕ್ತಿಯು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಎರಡೂ ಪ್ರಕರಣವನ್ನು ಕೋರ್ಟ್ ಜೊತೆಯಾಗಿ ವಿಚಾರಣೆ ನಡೆಸುತ್ತಿದೆ.
ಮ್ಯಾನುವಲ್ ಸ್ಕ್ಯಾವೆಂಜಿಂಗ್ನ್ನು ಕಾನೂನುಗಳ ಮೂಲಕ ನಿಷೇಧಿಸಲಾಗಿದೆ. ಏಕೆಂದರೆ ಈ ಕೆಲಸ ಮಾಡುವಾಗ ಉಸಿರುಗಟ್ಟಿ, ಆಮ್ಲಜನಕದ ಕೊರತೆಯಿಂದ ಸಾವಿರಾರು ಪೌರಕಾರ್ಮಿಕರು ಪ್ರಾಣ ತೆತ್ತಿದ್ದಾರೆ. ಇದರಿಂದಾಗಿ ಯಾರೇ ಅಧಿಕಾರಗಳು, ಸೂಪರ್ವೈಸರ್ಗಳು, ಪೌರಕಾರ್ಮಿಕರಿಂದ, ಕೂಲಿ ಕಾರ್ಮಿಕರಿಂದ ಈ ಕೆಲಸ ಮಾಡಿಸಬಾರದೆಂದು ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಯಾವುದೇ ವ್ಯಕ್ತಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ನ ಶುಚಿಗೊಳಿಸುವಿಕೆಗಾಗಿ ಬಳಸಿಕೊಳ್ಳಬಾರದು ಎಂದು 2013ರ ಮ್ಯಾನುವಲ್ ಸ್ಕ್ಯಾವೆಂಜಿಂಗ್ ಆಕ್ಟ್ ಸ್ಪಷ್ಟಪಡಿಸಿದೆ. ಇದಕ್ಕಾಗಿ ಯಂತ್ರಗಳನ್ನು ಮಾತ್ರವೇ ಬಳಸಬೇಕೆಂದು ಸೂಚಿಸಿದೆ. ಆದರೆ ಇದೀಗ ಈ ಕುರಿತ ಪ್ರಕರಣ ದಾಖಲಾದರೂ ಆರೋಪಿಗಳಿಗೆ ಶಿಕ್ಷೆಯಾಗದಿರುವುದು ಕಾನೂನಿನ ನಿಷ್ಕ್ರಿಯತೆಯನ್ನು ಸೂಚಿಸುತ್ತದೆ.
ಇದನ್ನು ಓದಿ: ಸುಪ್ರೀಂ ತೀರ್ಪು ಸಮಾಧಾನ ಕೊಟ್ಟರೂ, ವಿಜಯದ ಸಂತಸದಲ್ಲಿಲ್ಲ ಬಿಲ್ಕಿಸ್ ಬಾನು


