ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಲು ಹೊರಟಿರುವ ‘ಶಿವರಾಮ ಕಾರಂತ ಬಡಾವಣೆ ಯೋಜನೆ’ಯ ವಿರುದ್ದ, ರಾಮಗೊಂಡನ ಹಳ್ಳಿಯ ಸುತ್ತಲಿನ 17 ಹಳ್ಳಿಗಳ ರೈತರು ಯಲಹಂಕದ ಮಿನಿ ವಿಧಾನಸೌಧ ಕಡೆಗೆ ಗಾಂಧಿ ಉಡುಗೆಯೊಂದಿಗೆ ‘ಗಾಂಧಿ ನಡಿಗೆ’ ನಡೆಸಿ ಶನಿವಾರ ವಿನೂತನಾಗಿ ಪ್ರತಿಭಟನೆ ನಡೆಸಿದ್ದಾರೆ.
ರೈತರು ತಮ್ಮ ‘ಗಾಂಧಿ ನಡಿಗೆ’ಯನ್ನು ಸಂತೆ ಸರ್ಕಲ್ ಬಳಿಯ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಾರಂಭಿಸಿದರು. ನಡಿಗೆಯಲ್ಲಿ ಭಾಗವಹಿಸಿದ್ದ ರೈತರು ಖಾದಿ ಬಟ್ಟೆಯನ್ನು ಹೊದ್ದು, ಗಾಂಧಿ ಟೋಪಿ ಧರಿಸಿ, ಗಾಂಧಿ ದೊಣ್ಣೆಯೊಂದಿಗೆ ಭಾಗವಹಿಸಿದ್ದು ವಿಶೇಷವಾಗಿತ್ತು. ಆದರೆ ಪೊಲೀಸರು ರೈತರನ್ನು ಹೆದ್ದಾರಿಯಲ್ಲೇ ತಡೆದು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರಾಮಗೊಂಡನಹಳ್ಳಿ: ತಮ್ಮ ನೆಲವನ್ನು ಕಸಿಯುತ್ತಿರುವ ಸರ್ಕಾರದ ವಿರುದ್ಧ ಪ್ರತಿಭಟಿಸಿದ ದನಗಳು!
ತಮ್ಮನ್ನು ಒಕ್ಕಲೆಬ್ಬಿಸುವುದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ರೈತರು, ಉದ್ದೇಶಿತ ಶಿವರಾಮಕಾರಂತ ಬಡಾವಣೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದು ಗೊಳಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಬೇಕೆಂದು ಒತ್ತಾಯಿಸಿದರು.
ತಮ್ಮ ಕೃಷಿ ಭೂಮಿ ಮತ್ತು ಮನೆಗಳ ಉಳಿವಿಗಾಗಿ ರೈತರು ಸರಣಿ ಪ್ರತಿಭಟನೆಗಳನ್ನು ಈಗಾಗಲೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 17 ರಂದು ಕೂಡಾ ಯಲಹಂಕ ಸರ್ಕಾರಿ ಶಾಲೆಯ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಂತ್ರಸ್ತ 17 ಹಳ್ಳಿಗಳ ನಿವಾಸಿಗಳು ಮತ್ತು ರೈತರು ಭಾಗವಹಿಸಿದ್ದರು.
ಬೆಂಗಳೂರು ಅಭಿವೃದ್ದಿಯ ಹೆಸರಿನಲ್ಲಿ, ರಾಮಗೊಂಡನ ಹಳ್ಳಿಯ ಸುತ್ತಲಿನ 17 ಹಳ್ಳಿಗಳಲ್ಲಿ ಬಿಡಿಎ ‘ಶಿವರಾಮ ಕಾರಂತ ಬಡಾವಣೆ’ ಎಂಬ ವಸತಿ ಸೌಕರ್ಯವನ್ನು ನಿರ್ಮಿಸಲು ಹೊರಟಿದೆ. ಯೋಜನೆಯ ವಿರುದ್ದ, ಅಲ್ಲಿನ ರೈತರು ಮತ್ತು ನಿವಾಸಿಗಳು ಸುಮಾರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೆ೦ಗಳೂರು ಅಬಿವೃದ್ಧಿ ಪ್ರಾಧಿಕಾರವು, ‘ಡಾ| ಕೆ. ಶಿವರಾಮ ಕಾರಂತ ಬಡಾವಣೆ’ಗಾಗಿ ಬೆ೦ಗಳೂರು ಉತ್ತರ ತಾಲೂಕು ರಾಮಗೊಂಡನಹಳ್ಳಿಯ ಸುತ್ತಮುತ್ತಲಿನ 17 ಹಳ್ಳಿಗಳ 3546 ಎಕರೆ 12 ಗುಂಟೆ ಭೂಮಿಯನ್ನು ಸ್ವಾಧೀನಪಡಿಸುವುದಾಗಿ ಈಗಾಗಲೆ ಹೇಳಿದೆ.
ಇದನ್ನೂ ಓದಿ: ಶಿವರಾಮ ಕಾರಂತ್ ಬಡಾವಣೆ ಎಂಬ ‘ಅಭಿವೃದ್ಧಿ’ ಯೋಜನೆ; ದಲಿತರು-ಬಡಬಗ್ಗರ ಮೇಲೆ ಪ್ರಹಾರ