Homeಸಾಮಾಜಿಕಅಲೆಮಾರಿ ಹಕ್ಕಿಪಿಕ್ಕಿಗಳ ಮೇಲೆ ಸರ್ಕಾರದ ಪರಾಕ್ರಮ!

ಅಲೆಮಾರಿ ಹಕ್ಕಿಪಿಕ್ಕಿಗಳ ಮೇಲೆ ಸರ್ಕಾರದ ಪರಾಕ್ರಮ!

- Advertisement -
- Advertisement -

ಶಿವಮೊಗ್ಗದ ಆಯನೂರು ಹೋಬಳಿಗೆ ಸೇರುವ ವೀರಣ್ಣನ ಬೆನವಳ್ಳಿ ಗ್ರಾಮದ ಸುಮಾರು 50ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬಗಳಿಗೆ ಮೊನ್ನೆ ಗತಿಸಿಹೋದ ಶನಿವಾರ ಎಂದಿನಂತಿರಲಿಲ್ಲ. ಆಸರೆ ಕೊಡಬೇಕಿದ್ದ ಸರ್ಕಾರವೇ ತಮ್ಮ ಬದುಕನ್ನು ಬೀದಿಗೆ ತಂದು ಎಸೆಯುತ್ತದೆ ಎಂಬ ಯಾವ ಅನುಮಾನವೂ ಇರದೆ ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಪೊಲೀಸ್ ಸರ್ಪಗಾವಲು, ಜೆಸಿಬಿ ಯಂತ್ರಗಳ ಸಮೇತ ಅವರ ಮೇಲೆ ದಾಳಿ ಮಾಡಿದ ಜಿಲ್ಲಾಡಳಿತ ಅವರ ಟೆಂಟುಗಳಂತಹ ಮನೆಗಳನ್ನು ಕಿತ್ತುಹಾಕಿ, ಹೆಂಗಸರು ಮಕ್ಕಳನ್ನು ಎಳೆದಾಡಿ, ಕಸ ತುಂಬಿದಂತೆ ಅವರು ಮತ್ತು ಅವರ ಸರಂಜಾಮುಗಳನ್ನೆಲ್ಲ ತುಂಬಿಕೊಂಡು ಬೇರೊಂದು ಜಾಗದಲ್ಲಿ ಸುರಿದುಹೋಗಿದೆ! ತನ್ನದೇ ನಾಗರಿಕರ ಜೊತೆ ನಮ್ಮ ಸರ್ಕಾರಗಳು ವರ್ತಿಸುವ ಪರಿ ಇದು. ಅದೂ, ಒಂದು ಅಲೆಮಾರಿ ಸಮುದಾಯದ ಮೇಲೆ!!
ಕಳೆದ ಹತ್ತು ವರ್ಷಗಳಿಂದ ಬೆನವಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್78ರಲ್ಲಿ ಹಕ್ಕಿಪಿಕ್ಕಿ ಜನಾಂಗದವರು ಟೆಂಟು ನಿರ್ಮಿಸಿಕೊಂಡು ನೆಲೆಸಿದ್ದರು. ಅದು ಸರ್ಕಾರಿ ಸ್ವಾಮ್ಯದ ಜಾಗ. ಈ ನಿವೇಶನರಹಿತರಿಗೆ ಆಸರೆಯಾಗಲು ಹಿಂದಿನ ಸಿಎಂ ಸಿದ್ದರಾಮಯ್ಯನವರ ಸರ್ಕಾರ 2016ರಲ್ಲಿ ಆ 4 ಎಕರೆ ಭೂಮಿಯನ್ನು ಮಂಜೂರು ಮಾಡಿ ಕಾಯ್ದಿರಿಸಿತ್ತು. ಆದರೆ ನಿವೇಶನ ಹಂಚಿಕೆಗೆ ಜಿಲ್ಲಾಡಳಿತ ಇದುವರೆಗೆ ಮುಂದಾಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಅದ್ಯಾವ ಪ್ರಭಾವಿ ಕೈಗಳು ಕೆಲಸ ಮಾಡಿದವೋ ಗೊತ್ತಿಲ್ಲ, ಜುಲೈ 28ರ ಶನಿವಾರ ಸಂಜೆ ಹೊತ್ತಿಗೆ ಆವೇಶ ಮೈದಳೆದ ಜಿಲ್ಲಾಡಳಿತ ಭದ್ರಾವತಿ ಎಂಪಿಎಂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಹಸೀಲ್ದಾರ್ ನೇತೃತ್ವದಲ್ಲಿ ಅವರ ಬದುಕನ್ನೇ ಧ್ವಂಸ ಮಾಡಿದೆ.
ಈ ಸರ್ಕಾರಿ ಜನರ ದೌರ್ಜನ್ಯಕ್ಕೆ ಪ್ರತಿರೋಧ ತೋರಲು ಮುಂದಾದಾಗ ಪೊಲೀಸರು ಮಕ್ಕಳು, ವೃದ್ಧರು, ಗರ್ಭಿಣಿಯರು, ಹೆಂಗಸು-ಗಂಡಸರನ್ನೆದೆ ಪ್ರಾಣಿಗಳಿಗಿಂತ ಕಡೆಯಾಗಿ ಎಳೆದಾಡಿದ್ದಾರೆ. ಕೆಲ ಮಹಿಳೆಯರ ಸೀರೆ ಎಳೆದು ಅರೆಬೆತ್ತಲೆ ಮಾಡಲು ಮುಂದಾಗಿದ್ದರು. ಇದನ್ನೆಲ್ಲಾ ವೀಡಿಯೋ ಮಾಡಿಕೊಳ್ಳುತ್ತಿದ್ದ ಹಕ್ಕಿಪಿಕ್ಕಿಯವರ ಮೊಬೈಲ್‍ಗಳನ್ನು ಕಿತ್ತು ಜಜ್ಜಿಹಾಕಿದ್ದಾರೆ. ತಮ್ಮ ದೌರ್ಜನ್ಯದ ಯಾವ ಸಾಕ್ಷ್ಯವೂ ಉಳಿಯದಂತೆ ಜಿಲ್ಲಾಡಳಿತ ದಬ್ಬಾಳಿಕೆ ನಡೆಸುತ್ತಿದ್ದರೆ, ಅತ್ತ ಜೆಸಿಬಿ ಯಂತ್ರಗಳು ಕ್ಷಣಾರ್ಧದಲ್ಲಿ ಅವರ ತಲೆಮೇಲಿನ ಸೂರುಗಳನ್ನು ನೆಲಸಮ ಮಾಡಿ ಮುಗಿಸಿದ್ದವು.
ನಂತರ ಟ್ರ್ಯಾಕ್ಟರ್‍ಗಳಲ್ಲಿ ಅವರನ್ನು ತುಂಬಿತಂದು, ಶ್ರೀರಾಂಪುರದ ಬಳಿ ಇರುವ ಖಾಲಿ ಜಾಗಕ್ಕೆ ಬಿಸಾಕಿದ್ದಾರೆ. ಟೆಂಟ್ ಬಿಟ್ಟು ಕೆಲಸಕ್ಕೆ ಹೋಗಿದ್ದವರು ಪುನಃ ಬಂದು ನೋಡಿದರೆ ಟೆಂಟ್‍ಗಳೇ ಮಾಯವಾಗಿದ್ದವು. ಅಧಿಕಾರಿಗಳನ್ನು ವಿಚಾರಿಸಿದರೆ ಅಲ್ಲೆಲ್ಲೋ ಹಾಕಿದ್ದೇವೆ ಹೋಗಿ ಎಂಬ ಉಡಾಫೆಯ ಉತ್ತರ ಕೊಟ್ಟಿದ್ದರು.
ಎಸೆದುಹೋದ ಸ್ಥಳದಲ್ಲಿ ಕನಿಷ್ಠ ಪುನರ್ವಸತಿ ಸೌಲಭ್ಯವನ್ನೂ ಜಿಲ್ಲಾಡಳಿತ ಕಲ್ಪಿಸಿಲ್ಲ. ಟೆಂಟ್ ನಿರ್ಮಿಸಿಕೊಳ್ಳಲು ಇಟ್ಟುಕೊಂಡಿದ್ದ ಟಾರ್ಪಲ್‍ಗಳು ಪೊಲೀಸರ ದಾಳಿಗೆ ಹರಿದು ಚಿಂದಿಯಾಗಿವೆ. ಪಾತ್ರೆಪಗಡಗಳು ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾಗಿದ್ದವು. ಹಾಲು ಕುಡಿವ ಕಂದಮ್ಮಗಳು, ಮಕ್ಕಳು ಹಸಿವು ತಾಳದೆ ಗೋಳಿಡುತ್ತಿರುವ ದೃಶ್ಯ ಸರ್ಕಾರಿ ಮನಸ್ಸುಗಳನ್ನು ಕಿಂಚಿತ್ತೂ ಕದಡಿದಂತೆ ಕಾಣಲಿಲ್ಲ.
ಈ ಹಕ್ಕಿಪಿಕ್ಕಿಗಳಿಗೆ ತಕ್ಷಣದಲ್ಲಿ ಯಾವುದೇ ಕಾನೂನಾತ್ಮಕವಾದ ನೆರವು ಸಿಗದಂತೆ ನೋಡಿಕೊಳ್ಳಲು ರಜಾದಿನದಂದೇ ಒಕ್ಕಲೆಬ್ಬಿಸುವಂತಹ ವ್ಯವಸ್ಥಿತ ಷಡ್ಯಂತ್ರವನ್ನು ಅಧಿಕಾರಿಗಳು ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಇನ್ನು ಅಂತವರಿಂದ ಮನುಷ್ಯತ್ವವನ್ನು ನಿರೀಕ್ಷಿಸುವುದೇ ಅಪರಾಧ!
ಸರ್ಕಾರವೇ ಮಂಜೂರು ಮಾಡಿದ್ದ ಭೂಮಿಯಲ್ಲಿ ವಾಸವಿದ್ದ ಹಕ್ಕಿಪಿಕ್ಕಿಯವರನ್ನು ಒಕ್ಕಲೆಬ್ಬಿಸುವಂತೆ ಸ್ಥಳೀಯರೊಬ್ಬರು ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅರ್ಜಿಯನ್ನು ಪರಿಶೀಲಿಸಿ ಸರ್ವೆ ನಂಬರ್ 78ರಲ್ಲಿ ವಾಸವಿದ್ದ ಹಕ್ಕಿಪಿಕ್ಕಿ ಸಮುದಾಯವರನ್ನು ಸ್ಥಳಾಂತರಿಸುವಂತೆ ಆದೇಶ ನೀಡಿದೆ. ಆದ್ದರಿಂದಾಗಿ ಒಕ್ಕಲೆಬ್ಬಿಸುತ್ತಿದ್ದೇವೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ.
ಆದರೆ ಅದೇ ಕಾನೂನಿನ ಪ್ರಕಾರ ಹೀಗೆ ಒಕ್ಕಲೆಬ್ಬಿಸುವ ಮುನ್ನ ವಾಸವಿದ್ದವರಿಗೆ ತಿಳಿವಳಿಕೆ ಪತ್ರ ನೀಡಬೇಕು, ತಾತ್ಕಾಲಿಕವಾಗಿಯಾದರೂ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಆದರೆ ಜಿಲ್ಲಾಡಳಿತಕ್ಕೆ ಕಾನೂನಿನ ಆ ಅಧ್ಯಾಯಗಳು ಬೇಡವಾಗಿದ್ದವು. ಅಲೆಮಾರಿ ಬದುಕುಗಳನ್ನು ಒಕ್ಕಲೆಬ್ಬಿಸುವ ಒಕ್ಕಣೆಯಷ್ಟೇ ಅವರಿಗೆ ಸಾಕಾಗಿತ್ತು!
ಹಕ್ಕಿಪಿಕ್ಕಿ ಜನರ ವಸತಿಗಾಗಿ ಮೀಸಲಿಟ್ಟಿದ್ದ 4 ಎಕರೆ ಭೂಮಿಯಲ್ಲಿ ಎಂಪಿಎಂ ಕಾರ್ಖಾನೆಯ ನೆಡುತೋಪು ಇರುವ ಕಾರಣ ಈವರೆಗೂ ನಿವೇಶನ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಈ ಹಿಂದೆಯೂ ಇಲ್ಲಿರುವ ಮರಗಳು ಕಟಾವು ಆದ ನಂತರ ಆಯನೂರು ಪಂಚಾಯಿತಿ ನಿವೇಶನಗಳನ್ನು ನಿರ್ಮಿಸಿ, ಅರ್ಹ ಹಕ್ಕಿಪಿಕ್ಕಿ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡುತ್ತೆ, ಆಗ ನೀವು ಬಂದು ನೆಲೆಸಬಹುದು ಎಂದು ಇದೇ ಅಧಿಕಾರಿಗಳು ಆಶ್ವಾಸನೆಯನ್ನು ಕೊಟ್ಟಿದ್ದರು. ಇದಕ್ಕೆ ಒಪ್ಪಿದ ಹಕ್ಕಿಪಿಕ್ಕಿಗಳು ಬೇರೆಡೆಗೆ ಸ್ಥಳಾಂತರವಾಗಲು ಒಪ್ಪಿದ್ದರು. ಆದರೆ ಜಿಲ್ಲಾಡಳಿತ ಕೊಟ್ಟ ಮಾತು ಉಳಿಸಿಕೊಳ್ಳುವ ಯಾವ ಲಕ್ಷಣವನ್ನೂ ತೋರದಿದ್ದಾಗ, ಹಾಗೆ ಹೋಗಿದ್ದವರೆಲ್ಲ ವಾಪಾಸು ಬಂದು ಆ ಜಾಗದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದರು. ಅವರಿಗೆ ಕನಿಷ್ಟ ಮಟ್ಟದ ಮೂಲಸೌಕರ್ಯಗಳೂ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಾಸವಿದ್ದವರನ್ನು ಒಕ್ಕಲೆಬ್ಬಿಸಿದ್ದು ಸರ್ಕಾರದ ಕ್ರೌರ್ಯವೆನ್ನದೇ ಇರಲಾಗದು.
ಇದನ್ನು ಖಂಡಿಸಿ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಸದಸ್ಯರು ಈ ಸಮುದಾಯದವರೊಂದಿಗೆ ಜುಲೈ 30ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಅವರ ಕಚೇರಿಗೆ ಬಂದು ಸುಮಾರು ಎರಡು ಗಂಟೆ ಧರಣಿ ಕೂತರು ಯಾವೊಬ್ಬ ಅಧಿಕಾರಿಯೂ ಇವರನ್ನು ಕ್ಯಾರೇ ಅನ್ನಲಿಲ್ಲ. ಕೊನೆಗೆ ಡಿಸಿ ಸಾಹೇಬರ ಸಹಾಯಕ ಅಧಿಕಾರಿಯೊಬ್ಬ ಬಂದು ಕಾಟಾಚಾರಕ್ಕೆ ಮನವಿ ಸ್ವೀಕರಿಸಲು ಮುಂದಾಗಿದ್ದ. ಜಿಲ್ಲಾಧಿಕಾರಿಗಳೇ ಬರಲಿ ಅಂತ ಅವರೆಲ್ಲ ಪಟ್ಟು ಹಿಡಿದಾಗ `ಜಿಲ್ಲಾಧಿಕಾರಿಗಳು ಊರಲ್ಲಿಲ್ಲ, ಎರಡು ದಿವಸ ಅವರು ಬರುವುದಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿಗಳೂ ಕಚೇರಿಯಲ್ಲಿ ಇಲ್ಲ’ ಎಂಬ ಉತ್ತರ ಕೊಟ್ಟಿದ್ದ. ಅದನ್ನು ನಂಬಿದ ಆ ಅಲೆಮಾರಿಗಳು ಮನವಿ ಕೊಟ್ಟು ವಾಪಾಸು ಬರುತ್ತಿದ್ದಂತೆಯೇ ಜಿಲ್ಲಾಧಿಕಾರಿಗಳು ಕಚೇರಿ ಆವರಣದಲ್ಲೇ ಕಾಣಿಸಿಕೊಂಡಿದ್ದರು! ಅರೆ, ಭೇಟಿಯಾಗಿ ಮನವಿ ಕೊಡಲು ಬಂದ ತಮ್ಮನ್ನು ಹೀಗೆ ಸುಳ್ಳಿನ ಮೂಲಕ ಸಾಗಹಾಕಲು ನಾವೇನು ತಾಲಿಬಾನಿ ಉಗ್ರರಾ ಅಂತ ಆ ಅಲೆಮಾರಿಗಳು ಕೇಳುವ ಪ್ರಶ್ನೆ ಇಡೀ ಸರ್ಕಾರವನ್ನು ಅಣಕಿಸುವಂತಿತ್ತು.
ಸಾಮಾನ್ಯವಾಗಿ ಆಯಾ ಜಿಲ್ಲಾಧಿಕಾರಿಗಳೇ ‘ಜಿಲ್ಲಾ ಪರಿಶಿಷ್ಟ ಜಾತಿ, ಅಲೆಮಾರಿ, ಅರೆಅಲೆಮಾರಿ ಮತ್ತು ಅತೀ ಸೂಕ್ಷ್ಮ ಸಮುದಾಯದ ಅಭಿವೃದ್ಧಿ ಕೋಶ’ದ ಅಧ್ಯಕ್ಷರೂ ಆಗಿರುತ್ತಾರೆ. ಅವರೇ ಇಂಥಾ ಸಮುದಾಯಗಳ ಮೇಲೆ ದಾಳಿ ಮಾಡಿದರೆ ಏನಾಗಬೇಕು? ಈ ರೀತಿಯ ಸಮುದಾಯಗಳಿಗೆ ಪುನರ್ವಸತಿ ಕಲ್ಪಿಸಲು ಸಿದ್ದರಾಮಯ್ಯ ಸರ್ಕಾರ 320 ಕೋಟಿ ಬಿಡುಗಡೆ ಮಾಡಿತ್ತು. ಅಶಕ್ತ ಸಮುದಾಯದವರಿಗೆ ಮನೆ ಕಟ್ಟಿಕೊಳ್ಳಲು ನೆರವು ನೀಡುವುದು ಆ ಅನುದಾನದ ಇರಾದೆ. ಆದರೆ ಅದು ಖಜಾನೆಯಲ್ಲಿ ಖರ್ಚಾಗದೆ ಹಾಗೇ ಉಳಿದಿದೆ. ಪುನರ್ವಸತಿ ಸಮಿತಿಯ ಸದಸ್ಯರಾದ ಜಾವಡೆ ಲೋಕೇಶ್ ಮೊದಲಾದವರು ಜುಲೈ 16ರಂದು ನಡೆದ ಸಭೆಯೊಂದರಲ್ಲಿ ಈ ಜಾಗದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಿವೇಶನವನ್ನು ಗುರುತಿಸಿಕೊಡಬೇಕೆಂದು ಕೇಳಿಕೊಂಡ ನಂತರವೂ ಜಿಲ್ಲಾಡಳಿತ ಹೀಗೆ ವರ್ತಿಸುತ್ತಿದೆಯೆಂದರೆ ಇದರ ಹಿಂದೆ ಬಲಾಢ್ಯ ಜನಪ್ರತಿನಿಧಿಗಳು ರಿಯಲ್ ಎಸ್ಟೇಟ್ ಹುನ್ನಾರ ಇರಬಹುದೆನ್ನುವ ಗುಮಾನಿ ಮೂಡುತ್ತಿದೆ.

– ರವಿ ಸಿದ್ಲಿಪುರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...