Homeಪ್ರಪಂಚಡಿಜಿಟಲ್ ವಸಾಹತೀಕರಣದ ಬಾಹುಗಳಲ್ಲಿ ಬಡಪಾಯಿ ಬಡವ

ಡಿಜಿಟಲ್ ವಸಾಹತೀಕರಣದ ಬಾಹುಗಳಲ್ಲಿ ಬಡಪಾಯಿ ಬಡವ

- Advertisement -
- Advertisement -

ಜಾಗತೀಕರಣವನ್ನು ಅರ್ಥ ಮಾಡಿಸುವಲ್ಲಿ ಖ್ಯಾತ ಲೇಖಕಿ ಅರುಂಧತಿ ರಾಯ್ ನೀಡಿದ್ದ ಉದಾಹರಣೆಯೊಂದು ನನಗೆ ಮತ್ತೆಮತ್ತೆ ನೆನಪಾಗುತ್ತಿದೆ. ರಂಪೆಲ್ ಸ್ಟಿಲ್ಟ್‍ಸ್ಕಿನ್ ಎಂಬಾತ ಕುಳ್ಳನ ವೇಷದಲ್ಲಿ ಬಂದು ರೊಟ್ಟಿ ಕೂಡ ಸರಿಯಾಗಿ ಸುಡಲು ಬಾರದ ಹುಡುಗಿಯೊಬ್ಬಳಿಗೆ ಆಪತ್ಕಾಲದಲ್ಲಿ ಸಹಾಯ ಮಾಡುವ ನೆವದಲ್ಲಿ ಅವಳದ್ದೆಲ್ಲವನ್ನೂ ಒಂದೊಂದಾಗಿ ಕಿತ್ತೊಯ್ಯುವ ಕಥೆಯ ನಿದರ್ಶನ ಅದು. ಈ ಜಾಗತೀಕರಣ ನಮ್ಮ ದೇಶವನ್ನು ಆವರಿಸಿ ಕಾಲು ಶತಮಾನವೇ ಕಳೆದುಹೋಗಿದೆ. ಜಾಗತೀಕರಣವು, ಅಂದು ಚಿಂತಕರು ಊಹಿಸಿದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಅನಾಹುತ ಮಾಡುತ್ತಿರುವುದಕ್ಕೆ ನಾವಿಂದು ಸಾಕ್ಷಿಯಾಗಿದ್ದೇವೆ. ಡಿಜಿಟಲ್ ವಸಾಹತೀಕರಣ ಅನ್ನುವುದು ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣವೆಂಬ ಮೂರು ತಾಯಂದಿರು ಕೂಡಿ ಹೆತ್ತ ರಕ್ಕಸ ಸಂತಾನ. ಡಿಜಿಟಲ್ ವಸಾಹತೀಕರಣವನ್ನು 19ನೆಯ ಶತಮಾನದ ವಸಾಹತೀಕರಣವನ್ನು ಗ್ರಹಿಸಿದ ಪರಿಭಾಷೆಯಲ್ಲಿ ಗ್ರಹಿಸಲಾಗದು. ಏಕೆಂದರೆ ಅಂದಿನ ವಸಾಹತೀಕರಣಕ್ಕಿದ್ದ ಪ್ರಭುತ್ವದ ದಾಹ ಇದಕ್ಕಿಲ್ಲ. ಇದರ ದಾಹ ತೃತೀಯ ಜಗತ್ತಿನ ದೇಶಗಳ ಬಡ, ಕೆಳಮಧ್ಯಮ ಮತ್ತು ಮಧ್ಯಮವರ್ಗದ ನೆತ್ತರು ಹೀರುವುದಷ್ಟೇ! ಸಮುದ್ರ ಮಾರ್ಗದ ಮೂಲಕ ಪಸರಿಸಲು ಶತಮಾನಗಳನ್ನೇ ನುಂಗಿಹಾಕಿದ್ದ ಆ ವಸಾಹತುಶಾಹಿಯಂತೆ ಡಿಜಿಟಲ್ ವಸಾಹತೀಕರಣ ಮಂದಗತಿಯದ್ದಲ್ಲ. ಮಿಂಚಿಗಿಂತಲೂ ಕ್ಷಿಪ್ರ. ಜಾಗತೀಕರಣದ ಕಾಲುಗಳಿಗೆ ಆ ಮಿಂಚಿನ ಓಟ ಕೊಟ್ಟದ್ದು ಇಂಟರ್ನೆಟ್ಟಿನ ಮಹಿಮೆ.
ಡಿಜಿಟಲ್ ವಸಾಹತೀಕರಣದ ಹಿನ್ನೆಲೆಯಲ್ಲಿ ಯೋಚಿಸಿದರೆ ಪ್ರಧಾನಿ ಮೋದಿಯವರ ಪ್ರಪಂಚ ಪರ್ಯಟನೆ, ಅವರು ಜಪಿಸಿದ ಡಿಜಿಟಲ್ ಇಂಡಿಯಾದ ಮಂತ್ರÀ, ನೋಟ್‍ಬ್ಯಾನ್, ಕ್ಯಾಶ್‍ಲೆಸ್ ಇಂಡಿಯಾದ ಬಡಬಡಿಕೆ, ಆಧಾರ್ ಲಿಂಕ್ ಕಡ್ಡಾಯ ಇವುಗಳಿಗೆ ಹೊಸ ಅರ್ಥ ಗೋಚರಿಸತೊಡಗುತ್ತದೆ. ರಾಮಾಯಣ ಕಾಲದಲ್ಲೇ ಇಂಟರ್ನೆಟ್ ಇತ್ತು ಎಂಬ ಬಿಜೆಪಿ ಮಂತ್ರಿವರ್ಯರುಗಳ ಮೂರ್ಖ ನಂಬಿಕೆಗಳಿಂದ ಪ್ರೇರಿತವಾಗಿ ಡಿಜಿಟಲ್ ಇಂಡಿಯಾ ಮಾಡಲು ಹೊರಟದ್ದಲ್ಲ. ಅದು ಡಿಜಿಟಲ್ ವಸಾಹತೀಕರಣ ನೆಲೆಗೊಳಿಸುವ ಭಾಗವಾಗಿ ಎನ್ನುವ ಸತ್ಯ ಅರಿವಾಗತೊಡಗುತ್ತದೆ.
ಮೋದಿ ನೋಟ್‍ಬ್ಯಾನ್ ಘೋಷಿಸಿದಾಗ ಅದು, ಮುಂಬರುವ ಚುನಾವಣೆಗಳನ್ನು ಗೆಲ್ಲುವ ಹುನ್ನಾರ, ಬೃಹತ್ ಬಂಡವಾಳಿಗರ ಬ್ಯಾಡ್‍ಡೆಟ್ ಎಂಬ ಸಾಲಮನ್ನಾದಿಂದ ಬರಿದಾದ ಬ್ಯಾಂಕ್ ತುಂಬುವುದಕ್ಕೆ ಕಂಡುಕೊಂಡ ಯೋಜನೆ ಎಂಬ ಮಾತುಗಳು ಒಂದೆಡೆ ಕೇಳಿಬಂದರೆ, ಮತ್ತೊಂದೆಡೆ ಅವರ ಬೆಂಬಲಿಗರು ಅದು ಕಪ್ಪುಹಣ ನಿಯಂತ್ರಿಸುವ ಬ್ರಹ್ಮಾಸ್ತ್ರ ಎಂದು ಕೊಂಡಾಡಿದರು. ಅಸಲಿಗೆ ಇದೂ ಡಿಜಿಟಲ್ ವಸಾಹತೀಕರಣದ ಯೋಜನೆಯಾಗಿದ್ದು, ದೇಶದ ಕಟ್ಟಕಡೆಯ ಪ್ರಜೆಯ ಪುಟ್ಟಗಂಟಿನ ರೂಪಾಯಿಯನ್ನೂ ತಂದು ಬ್ಯಾಂಕಿನಲ್ಲಿ ಸುರಿಯುವಂತೆ ಮಾಡಿ ಪ್ರತಿಯೊಬ್ಬನನ್ನೂ ಡಿಜಿಟಲ್ ವಸಾಹತೀಕರಣದ ವ್ಯಾಪ್ತಿಗೆ ಒಳಪಡಿಸುವುದೇ ಆಗಿತ್ತು.
ಜಾಗತೀಕರಣ ಮತ್ತು ಡಿಜಿಟಲ್ ವಸಾಹತೀಕರಣಗಳ ಸಾಂಸ್ಥಿಕ ರಚನೆಗಳು ಬಂಡವಾಳಿಗರ ಪರವಾಗಿದ್ದು ಅಮೇರಿಕಾದಂತಹ ದೇಶಗಳ ಹಿತಾಸಕ್ತಿಗಳನ್ನು ರಕ್ಷಿಸುವುದೇ ಅವುಗಳ ಧ್ಯೇಯವಾಗಿರುತ್ತದೆ. ಬಡತನ, ದಾರಿದ್ರ್ಯ, ಅಸಮಾನತೆ, ಪರಿಸರ ನಾಶಗಳನ್ನು ಪ್ರೇರೇಪಿಸುವ ಇವುಗಳು ಆಂತರ್ಯದಲ್ಲಿ ಜನವಿರೋಧಿ, ಜೀವವಿರೋಧಿ, ಶ್ರಮವಿರೋಧಿ ಲಕ್ಷಣಗಳನ್ನು ಒಳಗೊಂಡಿರುತ್ತವೆ.
ತೃತೀಯ ಜಗತ್ತಿನ ದೇಶಗಳ ಯಾವುದೋ ಮೂಲೆಯ ಗಂಡಸೊಬ್ಬನನ್ನು ರೋಮಾಂಚನಗೊಳಿಸಲು ಯಾವ ದನಿಯ, ಯಾವ ಪದಗಳ, ಯಾವ ಅಂಗಗಳ ವೀಡಿಯೋ ಪೂರೈಸಬೇಕಿದೆ ಎನ್ನುವುದರಿಂದ ಹಿಡಿದು ಬೃಹತ್ ಯೋಜನೆಗಳಿಗೆ ಬಂಡವಾಳ ಹೂಡುವವರೆಗಿನ ಕಾರ್ಯಯೋಜನೆಗಳು ಇವುಗಳ ತೆಕ್ಕೆಯಲ್ಲಿರುತ್ತವೆ. ಇದಕ್ಕಾಗಿ ಆ ನಿಶಕ್ತ ದೇಶಕ್ಕೆ ಸಾಲದ ರೂಪದ ಗ್ಲೂಕೋಸ್, ವಿಟಮಿನ್ನುಗಳ ಆಮಿಷವೊಡ್ಡಿ ಡಿಜಿಟಲ್ ವಸಾಹತೀಕರಣಕ್ಕೆ ಅವುಗಳನ್ನು ಎದ್ದುಕೂರಿಸಲಾಗುತ್ತಿದೆ. ಮೊಣಕೈ ಗಂಟಿಗೆ ಬೆಲ್ಲ ಸವರಿ ತಮಾಷೆ ನೋಡುವ ಈ ವಿಚಿತ್ರಕ್ಕೆ ಜಿಯೋ ಸಿಮ್ ಮಾರಾಟವೇ ಒಂದು ಸ್ಪಷ್ಟ ನಿದರ್ಶನ.
ಸಾಲಕ್ಕಾಗಿ ವಿಶ್ವಬ್ಯಾಂಕನ್ನೇ ನೆಚ್ಚಿ ಕೂರಬೇಕಾಗಿಲ್ಲ. ಹಾಗೆ ನೋಡಿದರೆ, ಬಂಡವಾಳಿಗರ ಪರವಾಗಿದ್ದರೂ ಕ್ಷಿಪ್ರ ವಿತರಣಾ ವ್ಯವಸ್ಥೆಯಿಲ್ಲದ ಮಂದಗತಿಯ ವಿಶ್ವಬ್ಯಾಂಕ್ ಎಂದರೆ ಬಂಡವಾಳಿಗರಿಗೆ ಅಷ್ಟೇನೂ ಮೋಹವಿಲ್ಲ. ಹಾಗಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್), ರಪ್ತು ಸಾಲ ನೀಡಿಕೆಯ ಸಂಸ್ಥೆ (ಸಿಇಎ), ವಿಶ್ವವ್ಯಾಪಾರ ಸಂಸ್ಥೆ (ಡಬ್ಲ್ಯೂ.ಟಿ.ಒ) ಮುಂತಾದ ಬೇರೆಬೇರೆ ಹೆಸರಿನ ಆದರೆ ಹೆಚ್ಚೂಕಮ್ಮಿ ಒಂದೇ ಕಾರ್ಯೋದ್ದೇಶದ ಹಲವಾರು ಸಂಸ್ಥೆಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಎಲ್ಲವೂ ಬಂಡವಾಳಿಗರ ಕೈಗೊಂಬೆಯಂತಾಗಿರುವುದರಿಂದ ಮುಂದೊಂದು ದಿನ ಇವು ಸಾಲ ಪಡೆದ ಸರಕಾರಗಳ ಕೊರಳ ಪಟ್ಟಿ ಹಿಡಿದು ಬಡ್ಡಿ ಸಹಿತ ಸಾಲ ಮರುಪಾವತಿಗೆ ಪಟ್ಟು ಹಿಡಿಯುತ್ತವೆ. ಆಗ ಸರಕಾರಗಳು ಯಾರ ಕತ್ತು ಹಿಸುಕುವ ಅನಿವಾರ್ಯತೆಗೆ ಸಿಲುಕುತ್ತವೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಾಗ ಮಾತ್ರ ಈ ಡಿಜಿಟಲ್ ವಸಾಹತೀಕರಣದ ಕರಾಳತೆ ಗೋಚರವಾಗುತ್ತೆ.
ಹಳೆಯ ನೋಟುಗಳು ಬ್ಯಾನ್ ಆದದ್ದರಿಂದ ಕೈಯಲ್ಲಿ ದಮ್ಮಡಿಯೂ ಇಟ್ಟುಕೊಳ್ಳದಂತೆ ಎಲ್ಲವನ್ನೂ ಬ್ಯಾಂಕ್ ಖಾತೆಗೆ ಜಮೆ ಮಾಡಿದ ಜನ ನೆಟ್ ಬ್ಯಾಂಕಿಂಗು, ಪೇಟಿಎಮ್ಮು, ಆನ್‍ಲೈನ್ ಟ್ರಾನ್ಸ್‍ಫರು, ಕಾರ್ಡ್ ಬಿಲ್ಲಿಂಗ್ ಮೂಲಕ ಜೀವನ ಬಲು ಸುಲಭವಾಗಿದೆ ಎಂಬ ನಿಟ್ಟುಸಿರು ಬಿಡುವ ವೇಳೆಯಲ್ಲೆ, ಜಿಎಸ್‍ಟಿ ತೆರಿಗೆಯು ನಮಗರಿವಿಲ್ಲದೇ ನಮ್ಮ ಬ್ಯಾಂಕ್ ಇಡಗಂಟನ್ನು ಕತ್ತರಿಸುತ್ತಿತ್ತು. ಈ ನಡುವೆ ಕರನಿರಾಕರಣೆ ಎಂಬ ಕೀರಲು ದನಿಯೊಂದು ಹೊರಟಿತ್ತು. ತೆರಿಗೆ ಕಟ್ಟುವ ವಿಧಾನ ನಮ್ಮ ಕೈಲಿಲ್ಲದೆ ತಾನೇತಾನಾಗಿ ಕತ್ತರಿಸಲ್ಪಡುತ್ತಿವಾಗ, ಇದೊಂದು ಮೋಹಕ ಹುಸಿಯಲ್ಲದೆ ಬೇರೇನಾಗಿರಲಿಲ್ಲ.
ಮೇಲ್ನೋಟಕ್ಕೆ ಇದು ದೇಶದೊಳಗೆ ನಡೆಯುತ್ತಿರುವ ಪ್ರಕ್ರಿಯೆಯಂತೆ ಕಂಡರೂ ಇದರ ಚುಕ್ಕಾಣಿ ಇರೋದು ಡಿಜಿಟಲ್ ವಸಾಹತೀಕರಣದ ವಿದೇಶೀ ಹೂಡಿಕೆದಾರರು ಮತ್ತು ಆ ಹೂಡಿಕೆಗೆ ಸಾಲ ಕೊಡುವ ಸಂಸ್ಥೆಗಳ ಕೈಯಲ್ಲಿ! ಅವು ದೇಶವನ್ನು ಯಾವ ಪರಿ ತನ್ನ ಕಬ್ಜಾದಲ್ಲಿಟ್ಟುಕೊಂಡಿವೆ ಎಂದರೆ, ನಮ್ಮ ದೇಶದ ರೈತರ ಉತ್ಪನ್ನಗಳು ಗೋದಾಮುಗಳಲ್ಲಿ ಕೊಳೆಬೀಳುತ್ತಿದ್ದರೂ, ಆಹಾರ ಧಾನ್ಯಗಳನ್ನೂ ಹೊರಗಿನಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸರ್ಕಾರಗಳು ಸಿಲುಕಿವೆ. ಈ ನೆಲದ ಸ್ವಾವಲಂಬನೆಯ ಕಶೇರು ಮೂಳೆಗೇ ಕೊಟ್ಟ ಪ್ರಹಾರ ಇದು.
ದೇಶವಿದೇಶ ಸುತ್ತುತ್ತಾ ಮನಬಂದಂತೆ ಒಪ್ಪಂದಗಳಿಗೆ ಸಹಿ ಹಾಕುತ್ತಿರುವ ನಮ್ಮ ಪ್ರಧಾನಿಗಳು ಡಿಜಿಟಲ್ ವಸಾಹತೀಕರಣವೆಂಬ ಅಗೋಚರ ಆಕ್ಟೋಪಸ್ಸಿನ ಬಾಹುಗಳಿಗೆ ತಳ್ಳುತ್ತಿರೋದನ್ನು ಜನ ಅರ್ಥ ಮಾಡಿಕೊಳ್ಳಲೇಬೇಕಿದೆ. ಹಿಂದುತ್ವವನ್ನು ಮುಂದೆ ಮಾಡಿಕೊಂಡು ಕುರ್ಚಿ ಹಿಡಿದ ಬಿಜೆಪಿಗೆ ಇದು ತಿಳಿಯದ್ದೇನಲ್ಲ. ಆದ್ದರಿಂದಲೇ ಅದು ಹಿಂದೂ-ಮುಸ್ಲಿಂ ಹಗೆ, ದಲಿತವಿರೋಧಿ ವಿಚಾರಗಳನ್ನು ಜೀವಂತವಿರಿಸುತ್ತಾ, ಫಿಟ್ನೆಸ್ ಮಂತ್ರದಂತಹ ಅಸಂಬದ್ಧ, ಅವೈಜ್ಞಾನಿಕ ಹೇಳಿಕೆಗಳ ಮೂಲಕ ಜನರ ಗಮನವನ್ನು ಬೇರೆಡೆ ತಿರುಗಿಸಲು ಯತ್ನಿಸುತ್ತಿದೆ. ತಾನೇ ಸಾಕಿಕೊಂಡಿರುವ ಟ್ರೋಲ್ ಹೈಕಳು ಆ ಕೆಲಸವನ್ನು ಬಲು ನಿಯತ್ತಿನಿಂದ ಮಾಡುತ್ತಿದ್ದಾರೆ. ಮೋದಿ ಸಂಪುಟದ ಸಚಿವರ ಹೊಣೆಯೂ ಇಂತದ್ದಕ್ಕಷ್ಟೇ ಸೀಮಿತವಾಗಿರೋದು ದುರಂತ. ಕೇವಲ ಜನರಿಗಷ್ಟೇ ಅಲ್ಲ ಒಂದು ಧರ್ಮ, ಒಂದು ಬಣ್ಣ, ಒಂದು ಸಂಸ್ಕೃತಿ ಸ್ಥಾಪಿಸುವ ಭ್ರಮೆ ತುಂಬಿಕೊಂಡಿರುವ ಹಿಂದುತ್ವ ಸಂಘಟನೆಗಳನ್ನೂ ಬಿಜೆಪಿ ಯಾಮಾರಿಸುತ್ತಿದೆ.
ಅಂಗಡಿಯೊಂದರ ಮುಂದೆ ನಿಂತು ಪತ್ರಿಕೆ ಓದುವ ಸಾಮಾನ್ಯನೊಬ್ಬ ನೀರವ್ ಮೋದಿ, ಮಲ್ಯಗಳಂತೆ `ಮೋಷಾ’ ಕೂಡಾ ಓಡಿಹೋಗುವುದಿಲ್ಲವೆನ್ನುವುದು ಯಾವ ಖಾತರಿ? ಎಂದು ಪ್ರಶ್ನಿಸುವ ಹಂತಕ್ಕೆ ಬಂದಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ನಾಳೆ ಬಿಜೆಪಿಯ ಉದ್ದೇಶಿತ ಸರ್ವಾಧಿಕಾರವೇ ಪ್ರತಿಷ್ಠಾಪಿತವಾದರು ಡಿಜಿಟಲ್ ವಸಾಹತೀಕರಣದ ದಾಹ ತಣಿಸಲು `ಡಿಜಿಟಲ್ ಇಂಡಿಯಾ’ವನ್ನು `ಕ್ಯಾಶ್‍ಲೆಸ್ ಇಂಡಿಯಾ’ಗೆ ತಿರುಗಿಸಿ ಜನರನ್ನು ಸುಲಿಯುತ್ತಲೇ ಇದ್ದು ಬಿಡಬಹುದೆನ್ನುವುದೂ ಅಷ್ಟು ಸುಲಭವಿಲ್ಲ. ಕೇವಲ ಬಿಜೆಪಿ ಅಂತಲ್ಲ, ಅದನ್ನು ಬಿಟ್ಟು ಬೇರೆ ಯಾವ ಪಕ್ಷ ಅಧಿಕಾರ ಹಿಡಿದರೂ, ಬ್ಯಾಂಕುಗಳು ದಿವಾಳಿಯೆದ್ದು ‘ಬ್ಯಾಂಕ್ ಲೆಸ್ ಇಂಡಿಯಾ’ ಆಗುವವರೆಗಷ್ಟೇ ಈ ಆಟ. ಯಾಕೆಂದರೆ ಗದ್ದುಗೆ ಮೇಲೆ ಸರ್ವಾಧಿಕಾರಿಯೇ ಕೂತಿದ್ದರು, ಅವನ ಜುಟ್ಟು ಹಿಡಿದು ನಿಯಂತ್ರಿಸುವುದು ಈ ನವ ವಸಾಹತೀಕರಣವೇ!
ಆದರೆ ಕ್ಯಾಶ್‍ಲೆಸ್ ಇಂಡಿಯಾದಿಂದ ಬ್ಯಾಂಕ್‍ಲೆಸ್ ಹಂತಕ್ಕೆ ತಲುಪುವ ನಡುವಿನ ಜನರ ಜೀವನವಿದೆಯೆಲ್ಲ ಅದು ಘನಘೋರವಾಗಿರಲಿದೆ. ಪ್ರಜ್ಞಾವಂತರ ಆತಂಕವಿರೋದು ಈ ವಿಚಾರಕ್ಕೆ. 1971ರಿಂದ 1990ರ ಅವಧಿಯಲ್ಲಿ ರಾಷ್ಟ್ರೀಯ ಹಣಕಾಸು ವ್ಯವಹಾರಗಳ ಸಂರಚನೆಯೇ ನೈಜ ಆರ್ಥಿಕತೆಯಿಂದ ಸಟ್ಟಾ ಮಾರುಕಟ್ಟೆಗೆ ವರ್ಗಾಯಿಸಲ್ಪಟ್ಟ ಹಿನ್ನೆಲೆಯಲ್ಲಿ ಭಾರತದ ನೈಜ ಆರ್ಥಿಕತೆಯ ವ್ಯವಹಾರಗಳ ಪ್ರಮಾಣವು ಶೇ.90 ರಿಂದ ಶೇ.10 ಹಾಗೂ ಶೇ.5ಕ್ಕೆ ಇಳಿದಿತ್ತು. ಕಾರಣವೇನೆಂದರೆ, ಎರಡನೇ ಮಹಾಯುದ್ಧದ ನಂತರ ಜಾಗತಿಕ ಬ್ಯಾಂಕರ್ ಆಗಿ ಮೆರೆದಾಡಲು ಶುರು ಮಾಡಿದ ವಿಶ್ವದ ದೊಡ್ಡಣ್ಣ ಅಮೇರಿಕಾದಿಂದ ಸಾಲ ಪಡೆದ ದೇಶಗಳಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಉಲ್ಬಣಿಸಿತ್ತು. ಆಗ ಅಮೇರಿಕಾದ ಅಧ್ಯಕ್ಷ ನಿಕ್ಸನ್ ಆಡಳಿತವು ಈ ವ್ಯವಸ್ಥೆಯನ್ನು ಅನೂರ್ಜಿತಗೊಳಿಸಿ ದೊಡ್ಡ ಅನಿಯಂತ್ರಿತ ಬಂಡವಾಳ ಹರಿವಿಗೆ ದಾರಿಮಾಡಿಕೊಟ್ಟಿತ್ತು.
ಇದರಿಂದಾಗಿ, ಶೋಚನೀಯ ಸ್ಥಿತಿಯಲ್ಲಿದ್ದ ತೃತೀಯ ಜಗತ್ತಿನ ಕೂಸುಗಳಾದ ಭಾರತದಂತಹ ಬಡ ರಾಷ್ಟ್ರಗಳು ಅನಿವಾರ್ಯವಾಗಿ ಜಾಗತೀಕರಣವನ್ನು ಬರಮಾಡಿಕೊಂಡವು. ಪರಿಣಾಮವಾಗಿ ದೇಶದ ಸಿರಿವಂತರು ಇನ್ನಷ್ಟು ಕೊಬ್ಬುತ್ತಾ ಹೋದರೆ, ಕೆಳ ಮಧ್ಯಮವರ್ಗವು ಮಧ್ಯಮವರ್ಗಕ್ಕೆ ಭಡ್ತಿ ಪಡೆಯಿತು. ಇನ್ನು ಬಡತನ ರೇಖೆಗಿಂತ ಕೆಳಗಿದ್ದ ಜನರು ಹೊಟ್ಟೆ, ಬಟ್ಟೆ, ತಲೆ ಮೇಲಿನ ಸೂರು ಪಡೆದು ನಿಟ್ಟುಸಿರು ಬಿಟ್ಟರು. ದಲಿತ ದಮನಿತರೂ ಶಿಕ್ಷಣ ಪಡೆದು ತಮ್ಮ ಅವಮಾನಕರ ಬದುಕಿನಿಂದ ಆಚೆಗೆ ಇಣುಕುವ ಪ್ರಯತ್ನ ಮಾಡಲು ಸಾಧ್ಯವಾಯಿತು. ಆದರೆ ಈಗ ಡಿಜಿಟಲ್ ವಸಾಹತೀಕರಣವು ಕೊಡುವ ಸಣ್ಣಕೈಯನ್ನು ಸ್ತಬ್ಧಗೊಳಿಸಿ ಕಿತ್ತುಕೊಳ್ಳುವ ದೊಡ್ಡ ಕೈನ ಕರಾಮತ್ತು ಶುರು ಮಾಡಿಕೊಂಡಿದೆ. ಇನ್ನೂ ಸಿಂಪಲ್ಲಾಗಿ ಹೇಳಬೇಕೆಂದರೆ, ಡಿಜಿಟಲ್ ವಸಾಹತಿಕರಣವು ಜನರ ಕೈಗೆ ಸುಲಭವಾಗಿ ಸ್ಮಾರ್ಟ್‍ಫೋನ್, ಇಂಟರ್ನೆಟ್ ಸಿಗುವಂತೆ ಮಾಡಿತು. ಜನ ಖುಷಿಪಟ್ಟರು. ಈಗ ಆ ಸ್ಮಾರ್ಟ್‍ಫೋನ್ ಮೂಲಕವೇ ಜನರ ಸುಲಿಗೆ ಮಾಡಲು ಮುಂದಾಗಿದೆ.
ನವ ಉದಾರವಾದದ ಜನಕನೆಂದು ಖ್ಯಾತಿಪಡೆದ ಆಡಂಸ್ಮಿತ್‍ನ ಚಿಂತನೆಗಳು ಅವನೇ ಗುರುತಿಸಿದ ವ್ಯತಿರಿಕ್ತ ಪರಿಣಾಮಗಳಿಗಿಂತಲೂ ಎಷ್ಟೋಪಟ್ಟು ಭೀಕರವಾದವುಗಳೆಂದು ಸಾಬೀತಾಗತೊಡಗಿದೆ. ರಷ್ಯಾದ ನಿಕೋಲೋಯ್ ಗೊಗೋಲ್ ‘ದ ಓವರ್ ಕೋಟ್’ ಕಾದಂಬರಿ ಬರೆಯುವ ಕಾಲಕ್ಕೆ ರಷ್ಯಾದ ಬಡ ಜನತೆಯ ಪಾಡು ಹೇಗಿತ್ತೆಂದರೆ, ಒಂದು ಬೆಚ್ಚನೆಯ ಕೋಟ್ ಹೊಲಿಸಲೂ ಹಣವಿಲ್ಲದೆ ಹೆಪ್ಪುಗಟ್ಟಿಸುವ ಚಳಿ ತಡೆಯಲು ಮೈಲುಗಟ್ಟಲೆ ಓಡುತ್ತಿದ್ದರಂತೆ. ಓಡಲು ತಾಕತ್ತಿಲ್ಲದವರು ಸಾವನ್ನು ಆಲಂಗಿಸಬೇಕಿತ್ತು! ಇಂದು ನಮ್ಮ ಸ್ಥಿತಿಯೂ ಭಿನ್ನವಾಗಿಲ್ಲ. ಅರುಂಧತಿ ರಾಯ್ ಹೇಳುವ ರಂಪೆಲ್ ಸ್ಟಿಲ್ ಸ್ಕಿನ್ ಎಂಬ ಕುಳ್ಳನ ನಿಜರೂಪವನ್ನು ಅರಿತು, ತೀವ್ರ ಪ್ರತಿರೋಧ ತೋರುವುದರಲ್ಲೇ ಜನರ ಅಳಿವು-ಉಳಿವು ಅಡಗಿದೆ.

– ಕಾದಂಬಿನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...