Homeಚಳವಳಿ'ರೈತ ರಾಜಕೀಯಕ್ಕೆ ಮಣ್ಣಿನ ಮಗನ ಬೆಂಬಲವಿರಲಿ' - ದೇವನೂರು ಮಹಾದೇವ

‘ರೈತ ರಾಜಕೀಯಕ್ಕೆ ಮಣ್ಣಿನ ಮಗನ ಬೆಂಬಲವಿರಲಿ’ – ದೇವನೂರು ಮಹಾದೇವ

- Advertisement -
(ಚುನಾವಣಾ ಪ್ರಚಾರ ಭಾಷಣ ಅಂದರೇನೆ ರೇಜಿಗೆ ಹುಟ್ಟಿಸುತ್ತೆ. ಆರೋಪ – ಪ್ರತ್ಯಾರೋಪ, ಹಾರಾಟ- ಚೀರಾಟ ಮಾಮೂಲು. ಚುನಾವಣಾ ಪ್ರಚಾರದಲ್ಲಿ ಪ್ರಬುದ್ಧ – ಸಮತೋಲಿತ ಭಾಷೆ, ಭಾವ ಹೇಗೆ ಸಾಧ್ಯ ಎಂದು ವಕಾಲತ್ತು ವಹಿಸುವವರೇ ಹೆಚ್ಚು. ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯರಾಗಿರುವ ದೇವನೂರು ಮಹಾದೇವ ಅವರು ತಮ್ಮ ಪಕ್ಷದ ಮೇಲುಕೋಟೆ ಕ್ಷೇತ್ರದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಪರವಾಗಿ ಮಾಡಿದ ಚುಟುಕಾದ ಚುನಾವಣಾ ಭಾಷಣ ಇಲ್ಲಿದೆ. ಎದುರಾಳಿ ಪಕ್ಷದವರಿಗೂ ವಿನಂತಿ ಮಾಡಬಲ್ಲಂತಹ ನೈತಿಕತೆ ಬಹುಶಃ ದೇವನೂರು ಅಂಥವರಿಗೆ ಮಾತ್ರ ಸಾಧ್ಯ.)
ಈಗ ಒಂದು ಸುದ್ದಿ ಹರಿದಾಡುತ್ತಿದೆ- ದರ್ಶನ್ ಅಮೆರಿಕಕ್ಕೆ ಹೋಗಿ ಬಿಡುತ್ತಾರೆ ಎಂಬುದೇ ಆ ಸುದ್ದಿ. ಇಂಥ ಸುದ್ದಿ ಕಳೆದ ಚುನಾವಣೆಯಲ್ಲಿ ಪುಟ್ಟಣ್ಣಯ್ಯನವರ ಬಗೆಗೂ ಇತ್ತು. ಪುಟ್ಟಣ್ಣಯ್ಯನವರ ಜೀವದ ತುಡಿತ ಗೊತ್ತಿರುವವರು ಇಂಥ ಮಾತಾಡಲಾರರು. ಪುಟ್ಟಣ್ಣಯ್ಯ ಜತೆ ಪ್ರವಾಸ ಮಾಡಿದ್ದೇನೆ. ಪುಟ್ಟಣ್ಣಯ್ಯ ಎಲ್ಲಿಗೆ ಹೋಗಲಿ, ಅವರು ನೆನಪಿಸಿಕೊಳ್ಳುತ್ತಿದ್ದುದು ಏನು ಗೊತ್ತೆ? ಪಾಂಡವಪುರದ ಬೋಂಡ, ಪಕೋಡ ಹಾಗೂ ಮದ್ದೂರು ಜೋಪಡಿ ಹೋಟೆಲ್ ದೋಸೆ. ಪಾಂಡವಪುರದ ಥರದ ಬೋಂಡವನ್ನು ಎಲ್ಲೂ ಮಾಡಲ್ಲ ಬಿಡಿ ಅಂತಿದ್ದರು. ಆಮೇಲೆ ನಮ್ಮ ರಾಣಿ ಮಾಡೋ ಇಡ್ಲಿ ಕೈಮ ಅಮೆರಿಕದಲ್ಲೂ ಮಾಡಲ್ಲ ಅಂತಿದ್ದರು. ಇಡ್ಲೀನ ಅಮೆರಿಕದಲ್ಲಿ ಮಾಡ್ತಾರ? ಅಷ್ಟೊಂದು ಮುಗ್ಧ ಕೂಡ ಅವರು. ಅವರು ಅಮೆರಿಕದಲ್ಲಿ ಮೂರು ತಿಂಗಳು ಇರಬೇಕಾಗಿ ಬಂದಾಗ ಅವರ ಮನಸ್ಸಲ್ಲಿ ಇದ್ದುದು ಒಂದೇ- ಕುಡಿಯುವ ನೀರಿನ ಸಮಸ್ಯೆ. ಅಮೆರಿಕದಲ್ಲಿ ಸಾವಿರಾರು ಕಿಲೋಮೀಟರ್ ನಾಲೆ ಮಾಡಿ ಕುಡಿಯುವ ನೀರು ತಂದು ಕೊಡುವುದಾದರೆ ನಮ್ಮಲ್ಲಿ ಏನಾಗಿದೆ? ಇದು ಅವರ ಚಿಂತೆಯಾಗಿತ್ತು. ದುದ್ದ ಹೋಬಳಿಗೆ ನೀರು ತರುವುದು ಹೇಗೆ? ಅದಕ್ಕಾಗಿ ಪುಟ್ಟಣ್ಣಯ್ಯ ತಪಸ್ಸು ಮಾಡುತ್ತಿದ್ದರು. ನನ್ನಿಂದಲೂ ಕೆಲವರಿಗೆ ಹೇಳಿಸಿದ್ದರು. ಇಂಥ ಮನಸ್ಥಿತಿಯ ಪುಟ್ಟಣ್ಣಯ್ಯನವರ ಮಗ ದರ್ಶನ್ ಅಮೆರಿಕ ಬಿಟ್ಟುಬಂದು, ಅಪ್ಪನ ಹೆಸರನ್ನು ಉಳಿಸಲು, ಅಪ್ಪನ ಕೆಲಸ ಕಾರ್ಯಗಳನ್ನು ಮುಂದುವರಿಸಲು ಪಣ ತೊಟ್ಟಿದ್ದಾರೆ. ದರ್ಶನ್ ನಿರ್ಧಾರದ ಗಟ್ಟಿತನ ನೋಡಿಯೆ ಸ್ವರಾಜ್ ಇಂಡಿಯಾ ಪಕ್ಷವು ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ. ದರ್ಶನ್‍ಗೆ ತಮ್ಮ ಆಶೀರ್ವಾದ ಬೇಕು.
ಈಗ ಕಾಂಗ್ರೆಸ್ ದರ್ಶನ್‍ಗೆ ಬೆಂಬಲಿಸಿದೆ, ಜೆಡಿಎಸ್ ನೇರ ಪ್ರತಿಸ್ಪರ್ಧಿಯಾಗಿದೆ. ಆದರೂ ನಮಗೆ ಸನ್ಮಾನ್ಯ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರ ನೈತಿಕ ಬೆಂಬಲವೂ ಬೇಕು. ಯಾಕೆಂದರೆ ದೇವೇಗೌಡರು ರಾಜಕಾರಣದಲ್ಲಿ ಭೀಷ್ಮ ಇದ್ದಂತೆ. ಅವರು ಎದುರು ಪಾರ್ಟಿಯಲ್ಲಿ ಇರಬಹುದು. ರಾಜಕಾರಣದಲ್ಲಿ ಭಿನ್ನಾಭಿಪ್ರಾಯಗಳೂ ಇರಬಹುದು. ಪ್ರಧಾನಿಯಾಗಿದ್ದ ಆ ಕಾಲಾವಧಿಯಲ್ಲಿ ನಾನು ಅವರ ಬಹಿರಂಗ ಬೆಂಬಲಿಗನಾಗಿದ್ದೆ. ಅದು ಅವರಿಗೂ ಗೊತ್ತು. ಹಾಗೇ ಕಾವೇರಿ ನದಿ ನೀರಿನ ವಿವಾದದಲ್ಲಿ ಅವರ ಪಕ್ಷಾತೀತ ನಡೆಯನ್ನು ಮೆಚ್ಚಿ ಬರೆದಿದ್ದೆ. ಭಿನ್ನಾಭಿಪ್ರಾಯಗಳ ನಡುವೆ ಇಂಥವೂ ಇರುತ್ತದೆ. ರಾಜಕಾರಣದ ಭೀಷ್ಮರಾದ ಹೆಚ್.ಡಿ.ದೇವೇಗೌಡರ ಆಶೀರ್ವಾದ ಈ ಬಾಲಕ ದರ್ಶನ್ ಮೇಲೂ ಇರಲಿ ಎಂದು ವಿನಂತಿಸುವೆ.
ಇಂದು ದೇಶದ ರಾಜಕಾರಣ ಕೆಟ್ಟಿದೆ. ಎಷ್ಟು ಕೆಟ್ಟಿದೆ ಅಂದರೆ ಕೆ.ಆರ್.ಎಸ್ ಡ್ಯಾಂಗೆ ಡೈನಮೆಟ್ ಇಟ್ಟರೂ ಸರಿಯೇ- ಎಲ್ಲರೂ ಕೊಚ್ಚಿಕೊಂಡು ಹೋದರೂ ಸರಿಯೇ- ನಾನು ನನ್ನ ಬಂಧುಬಳಗ ಬದುಕಬೇಕು, ಈ ರೀತಿ ಇದೆ ಇಂದಿನ ರಾಜಕಾರಣ. ಸಾರ್ವಜನಿಕ ಸಂಪತ್ತು ಸಮುದಾಯಕ್ಕೆ ಸೇರಬೇಕು. ಆದರೆ ಅದರ ಲೂಟಿ ಮಾಡಲು ದರೋಡೆಕೋರರು ರಾಜಕಾರಣದಲ್ಲಿ ಹೆಚ್ಚಾಗಿ ಪ್ರವೇಶಿಸುತ್ತಿದ್ದಾರೆ. ಇದು ಎಲ್ಲೆಲ್ಲು ಇದೆ. ಈ ದರೋಡೆ ರಾಜಕಾರಣವನ್ನು ಮತದಾರ ತಡೆಗಟ್ಟಬೇಕು. ತಡೆಗಟ್ಟದಿದ್ದರೆ ಉಳಿಗಾಲವಿಲ್ಲ.
ಈಗ ಜನಬಲ ಮತ್ತು ಹಣಬಲದ ನಡುವೆ ಸ್ಪರ್ಧೆ ನಡೆಯುತ್ತಿದೆ. ಹಣವು ಮದದಿಂದ ಜನರನ್ನು ಜಾನುವಾರುಗಳು ಎಂಬಂತೆ ಭಾವಿಸಿ ಕೊಂಡುಕೊಳ್ಳಬಹುದು ಅಂದುಕೊಂಡಿದೆ. ಹಣದ ಮದ ಮುರಿಯಬೇಕು. ಹಣದ ಗರ್ವಭಂಗವಾಗಬೇಕು. ಇದಾದಾಗಲೇ ಜನಸಾಮಾನ್ಯರು ಉಸಿರಾಡಲು ಸಾಧ್ಯ. ಅದಕ್ಕಾಗಿ ಮತದಾರರು ದರ್ಶನ್‍ರನ್ನು ಗೆಲ್ಲಿಸಬೇಕು, ಕೈ ಹಿಡಿದು ನಡೆಸಬೇಕು. ಇದು ನನ್ನ ಪ್ರಾರ್ಥನೆ.
ಕೊನೆಯದಾಗಿ ಇನ್ನೊಂದು ಮನವಿ: ದರ್ಶನ್‍ಗೆ ಪ್ರಚಾರವನ್ನು ಹೇಗೆ, ಎಲ್ಲಿಂದ ಮಾಡಬೇಕು? ನೆನಪಿಡಿ- ಸುಳ್ಳು ಹಬ್ಬಿಸುತ್ತಾರೆ. ನೆನಪಿಡಿ- ಒಡಕು ಉಂಟುಮಾಡುತ್ತಾರೆ. ಇಂಥಲ್ಲಿ ಹೇಗೆ ಪ್ರಚಾರ? ಎಲ್ಲಿದ್ದೀರೊ ಅಲ್ಲೆ ಪ್ರಚಾರ ಮಾಡಬೇಕು. ನಂನಮ್ಮ ಮನೆಯಿಂದಲೇ ಆರಂಭಿಸಬೇಕು. ನಂನಮ್ಮ ಬೀದಿಯಲ್ಲೇ ಪ್ರಚಾರ ಆಗಬೇಕು. ಎಲ್ಲಿದ್ದೀವೋ ಅಲ್ಲೇ ಪ್ರಚಾರ. ಈ ರೀತಿ ಪ್ರಚಾರವನ್ನು ಮೇಲುಕೋಟೆ ಕ್ಷೇತ್ರದ ಯುವಕರು ಕೈಗೊಂಡರೆ ಇದೇ ರಾಜ್ಯದ ಚುನಾವಣಾ ರೀತಿರಿವಾಜಿಗೆ ಒಂದು ಮಾದರಿಯಾಗಿ ನಾಡಿಗೆ ಕೊಡುಗೆ ಕೊಟ್ಟಂತಾಗುತ್ತದೆ. ದರ್ಶನ್ ಗೆಲುವಿನ ಜೊತೆಗೆ ಈ ಮಾದರಿಯನ್ನೂ ಹುಟ್ಟುಹಾಕಿ ಎಂದು ಮೇಲುಕೋಟೆ ಕ್ಷೇತ್ರದ ನಮ್ಮ ಯುವಕರಲ್ಲಿ ವಿನಂತಿಸುವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...