Homeಅಂಕಣಗಳುನೀರ ನಡೆ | ಡಾ : ವಿನಯಾ ಒಕ್ಕುಂದಹಿಂಸೆಯೆಂಬುದು ಹಾದಿ ಹಾಡು

ಹಿಂಸೆಯೆಂಬುದು ಹಾದಿ ಹಾಡು

- Advertisement -
- Advertisement -

ಇತ್ತೀಚಿನ ದಿನಮಾನಗಳು ಮನುಷ್ಯ ಸಮಾಜದಲ್ಲಿ ಹಬ್ಬುತ್ತಿರುವ ಹಿಂಸಾರತಿಗೆ ಪುರಾವೆಗಳಾಗುತ್ತಿವೆ ಆವತ್ತು, ದಾಂಡೇಲಿಯ ನಟ್ಟನಡುರಸ್ತೆ ಮನುಷ್ಯ ರಕ್ತವನ್ನು ಹೊಯ್ದುಕೊಂಡು ಜಿಗುಟಾದ, ಕಮಟು ವಾಸನೆಯ ಬೆಳಗು- ಕಾಲೇಜಿಗೆ ಬಂದ ಮಕ್ಕಳ ಮುಖವನ್ನು ತಡಕಾಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ನಿರ್ಣಯಾತ್ಮಕ ಅಧಿಕಾರವನ್ನು ಪಡೆದ ‘ದೊಡ್ಡ ಮಕ್ಕಳಿವರು’. ಇವರು ಸಮಾಜದ ನಡೆ-ನೀತಿಗಳನ್ನು ಸ್ಪಷ್ಟವಾಗಿ ಪ್ರತಿಫಲಿಸುವ ಕನ್ನಡಿಗಳು. ಹಾಗಾಗಿ ಇವರನ್ನು ‘ನನ್ನ ವಿಶ್ವವಿದ್ಯಾಲಯ’ಗಳು ಎಂದು ತಿಳಿಯುವುದು. ಈ ಮಕ್ಕಳಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳಲ್ಲಿ ಒಂದಿಷ್ಟು ಭಯ, ಅಚ್ಚರಿಗಳಿದ್ದ ಹಾಗಿತ್ತು. ಆದರೆ ಬಹುಪಾಲು ಹುಡುಗರು ಅದೆಂಥದೋ ಅವ್ಯಕ್ತ ಥ್ರಿಲ್‍ನಲ್ಲಿದ್ದರು. ಅದು ಖಂಡಿತ, ಮಜ ಉಡಾಯಿಸುವ ಸಂತಸವನ್ನು ವ್ಯಕ್ತಿಸುವ ಭಾವವಾಗಿರಲಿಲ್ಲ. ಆದರದು ಜೀವಕಲಕಿದ ವಿಷಾದವೂ ಆಗಿರಲಿಲ್ಲ. ಕಾಗೆಯೊಂದು ಸತ್ತುಬಿದ್ದರೆ, ಜೊತೆ ಕಾಗೆಗಳು ಕಾ ಕಾ ಎಂದು ವಾತಾವರಣವನ್ನು ಕಲಕಿಬಿಡುತ್ತವಲ್ಲ… ಅಂತಹ ಯಾವ ಗದ್ದಲವೂ ಅವರ ಮನಸ್ಸಿನಾಳದಲ್ಲಿರಲಿಲ್ಲ. ಆ ನಂತರದ ಪಿಸುಗುಡುವ ಮಾತುಗಳಲ್ಲಿ, ಕೊಲೆಯ ಕಾರಣವನ್ನು ತಿಳಿಯುವ, ಹೇಳುವ ಅವಸರವಿತ್ತು. ಅದು ಕೊಲೆಯ ಸಮರ್ಥನೆಯಾಗಿ ಅನುವಾದಗೊಳ್ಳುತ್ತಿತ್ತು. ವ್ಯಕ್ತಿಯೊಬ್ಬನ ಆರ್ಥಿಕ-ಸಾಮಾಜಿಕ-ಕಾನೂನಾತ್ಮಕ ದುಂದಾವರ್ತನೆಗಳಿದ್ದರೆ ಅದಕ್ಕೆ ಕೊಲೆಯನ್ನು ಪರಿಹಾರೋಪಾಯ ಎಂದು ರೂಪಿಸಬಹುದೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲು ಸಿದ್ಧರಿರಲಿಲ್ಲ. ಅನ್ಯಾಯವೊಂದು ನಡೆದಿದೆ ಎಂದಾದರೆ, ಅದನ್ನು ಎದುರಿಸುವ ಸರಿದಾರಿಗಳಿಲ್ಲವೆ? ಪ್ರಜಾಪ್ರಭುತ್ವ ವ್ಯವಸ್ಥೆಯು ಕೊಡಮಾಡಿದ ಸೌಲಭ್ಯ ಹಾಗೂ ಹಕ್ಕುಬಾಧ್ಯತೆಗಳ ಫಲಾನುಭವಿಗಳಾದ ವಿದ್ಯಾರ್ಥಿಗಳಿಗೆ, ಕಾನೂನನ್ನು ಕೈಗೆತ್ತಿಕೊಳ್ಳುವುದು ಸಾಮಾಜಿಕ ಅನ್ಯಾಯ ಅಲ್ಲವೇ, ಎಂಬ ಪ್ರಶ್ನೆ ಕಾಡುತ್ತಿರಲಿಲ್ಲ. ಇನ್ನೂ ಅವರ ಮನಸ್ಸನ್ನು ಎಬ್ಬಿದರೆ ಅಲ್ಲಿ, ಕೊಲೆಗಾರನ ಬಗ್ಗೆ ಅನುಕಂಪ ಮತ್ತು ಮೆಚ್ಚುಗೆಯ ಬೀಜಗಳಿದ್ದಂತಿತ್ತು. ಹೌದು, ಅನ್ಯಾಯವನ್ನು ಎದುರಿಸಲು ಸ್ವತಃ ಕಾನೂನನ್ನು ತರಾಟೆಗೆ ತೆಗೆದುಕೊಳ್ಳುವ ‘ಹಿರೋಯಿಸಂ’ನ ಕಲ್ಪಿತವನ್ನು ಸಿನಿಮಾಗಳಂತಹ ಮನರಂಜನಾ ಉದ್ಯಮಗಳು ಧಾರಾಳವಾಗಿ ಉಣಬಡಿಸುತ್ತವೆ. ಅದನ್ನು ಉಂಡುಟ್ಟು ಬೆಳೆದವರು ಪ್ರತಿಯೊಂದು ಹಿಂಸೆಯೂ ಸ್ವಸಮರ್ಥನೆಯ ಪೋಷಾಕು ತೊಟ್ಟಿರುತ್ತದೆನ್ನುವುದನ್ನು ಗ್ರಹಿಸುವುದು ಕಷ್ಟ. ತೀರಾ ಇತ್ತೀಚೆಗೆ ಬಯಲುಸೀಮೆಯ ಸಣ್ಣ ಪಟ್ಟಣವೊಂದರಲ್ಲಿ ವ್ಯಕ್ತಿಯೊಬ್ಬ ಹೆಂಡತಿಯನ್ನು ಶಂಕಿಸಿ ಕೊಲೆಗೈದು ನೆತ್ತರು ಬಸಿಯುತ್ತಿರುವ ರುಂಡವನ್ನು ಕೈಯಲ್ಲಿ ಹಿಡಿದು ಪೊಲೀಸ್ ಸ್ಟೇಷನ್ನಿಗೆ ಶರಣಾದ ಸುದ್ದಿ ಪ್ರಕಟವಾಗಿತ್ತು. ಕೊಲೆಯಾದ ಮತ್ತು ಕೊಲೆಗೈದವರ ನ್ಯಾಯ-ಅನ್ಯಾಯ, ಶೀಲ-ಅಶ್ಲೀಲಗಳ ನಿರೂಪಗಳು ಬೇರೆಬೇರೆಯೇ ಇದ್ದೀತು. ಆದರೆ ಆತನ ಧೈರ್ಯಕ್ಕೆ ಯುವಜನಾಂಗ ಬೇಸ್ತುಬಿದ್ದ ಹಾಗಿತ್ತು. ನ್ಯಾಯಕ್ಕಿರುವ ಬಹುಸಾಧ್ಯತೆಗಳ ಬೇರನ್ನು ಹೀಗೆ ಕತ್ತರಿಸುತ್ತಿದ್ದೇವೆ.
ದೇಶವೀಗ ಹಿಂಸಾರತಿಯಲ್ಲಿ ನಿರತವಾಗಿದೆ. ಜಾತಿಉಲ್ಲಂಘನೆಯನ್ನು ಒಪ್ಪಿಕೊಳ್ಳದ ಮೂಲಭೂತವಾದ, ಮರ್ಯಾದಾ ಹತ್ಯೆಯ ರೂಪ ಪಡೆದಿದೆ. ಕೋಮುವಾದ ಎಂಬ ಜನಾಂಗೀಯ ಭೇದವು ಆಹಾರವನ್ನು, ಆಚರಣೆಯನ್ನು, ಸೌಹಾರ್ದತೆಯನ್ನು ನೆಪ ಮಾಡಿಕೊಂಡು ನಿರ್ಲಜ್ಜವಾದ ಹತ್ಯಾಕಾಂಡಗಳನ್ನು ನಡೆಸಿದೆ. ಈಗ ಅದರ ಮುಂದುವರಿಕೆಯು ಶಂಕಿತರ ಮೇಲಿನ ಗುಂಪುದಾಳಿಯ ವಿರೂಪವನ್ನು ಪಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಸುಶಿಕ್ಷಿತ ನಾಗರಿಕರೆನ್ನಿಸಿಕೊಂಡವರು ಉದ್ದೇಶಪೂರ್ವಕವಾಗಿಯೇ ಸುಳ್ಳು ಸುದ್ದಿಗಳನ್ನು ಹರಡುತ್ತಾರೆ.ಇಂತಹ ಸುದ್ದಿಗಳಿಗೆ, ಅವುಗಳ ಕ್ರಿಯಾತ್ಮಕ ಚಟುವಟಿಕೆಗಳಿಗೆ ಜನರು ಕ್ಷಣಾರ್ಧದಲ್ಲಿ ಸೇರಿಬಿಡುತ್ತಾರೆ. ಶಂಕೆಯೊಂದೇ ಕಾರಣವಾಗಿ, ಬಡಪಾಯಿ ಜೀವಗಳು ಮನುಷ್ಯಕ್ರೌರ್ಯದ ದಾಖಲೆಗಳಾಗಿ ನರಳಿ ಸಾಯುತ್ತವೆ. ದೇಶದಾದ್ಯಂತ ಮರಮರಳಿ ಇಂತಹ ಘಟನೆಗಳು ನಡೆದವು. ಮೇಲ್ನೋಟಕ್ಕೆ ಇವು ಜನರ ಸಹಜ ಆಕ್ರೋಶದ ಆಕಸ್ಮಿಕಗಳು ಎಂಬಂತೆ ಕಾಣುತ್ತವೆ. ಆದರೆ ವಸ್ತುಸ್ಥಿತಿ ಇಷ್ಟು ಸರಳವಾಗಿಲ್ಲ. ಅಕಾರಣವಾಗಿ ಮರಣ ಹೊಂದಿದ ಜೀವಗಳ ಹಿನ್ನೆಲೆಯಲ್ಲಿ ನೋಡಿದಾಗ-ಹಲ್ಲೆಗೀಡಾದ ಬಹುತೇಕರು ದಲಿತರು, ಮುಸ್ಲಿಮರು, ಮಹಿಳೆಯರು ಮತ್ತು ಬಡವರು ಎಂಬುದು ಸಾಮಾಜಿಕ ಆಕ್ರೋಶವು ಯಾರತ್ತ ಮತ್ತು ಯಾಕೆ ಹೊರಳಿದೆಯೆಂದು ಖಚಿತಪಡಿಸುತ್ತಿದೆ. ಇವರಲ್ಲದೆ, ಸಮಾಜದ ಹರಕು ಹೊಲಿಯಲು ತಮ್ಮ ಜೀವವನ್ನು ದಾರವಾಗಿ ಪೋಣಿಸುತ್ತಿರುವವರ ಮೇಲಿನ ಹಲ್ಲೆ-ಹತ್ಯೆಗಳು ಈ ಹಿಂಸೋನ್ಮಾದದ ಮತ್ತೊಂದು ಮಾದರಿಗಳು. ಸ್ವಾಮಿ ಅಗ್ನಿವೇಶ್ ಮೇಲೆ ನಡೆದ ಹಲ್ಲೆ ಇಂತಹ ಇತ್ತೀಚಿನ ನಿದರ್ಶನ. ಇಂತಹ ದಾಳಿಗಳನ್ನು ತಡೆಯಬಹುದಾದ, ತಪ್ಪಿತಸ್ಥರನ್ನು ಶಿಕ್ಷಿಸಬೇಕಾದ ಕಾನೂನು ಪಾಲಕರು ತೋರುತ್ತಿರುವ ಅಸಡ್ಡೆ ಕೂಡ ಗಾಬರಿ ಬೀಳಿಸುವಂತಿದೆ. ತಮ್ಮ ಮೇಲೆ ಹಲ್ಲೆ ನಡೆದ 18 ದಿನಗಳ ನಂತರವೂ ಹಲ್ಲೆಗಾರರು ಯಾರು ಎಂಬ ಸರಿಯಾದ ಅಂದಾಜು ಇದ್ದರೂ ಅವರನ್ನು ಬಂಧಿಸಲಾಗಿಲ್ಲ ಎಂದು ಪ್ರತಿಭಟಿಸಿ ಸ್ವಾಮಿ ಅಗ್ನಿವೇಶ ಸುಪ್ರಿಂಕೋರ್ಟಿನ ಮೊರೆ ಹೋಗಲಿದ್ದಾರೆ. ಕಾನೂನು ಪಾಲಕರ ಕರ್ತವ್ಯಲೋಪವು ಬರಿಯ ಅಸಡ್ಡೆಯಿಂದ ನಡೆಯುವುದಿಲ್ಲ. ಅದರ ಬೆನ್ನಿಗೆ ಕಾನೂನು ರೂಪಿಸಿದ ಶಾಸಕಾಂಗದ ರಾಜಕಾರಣದ ದಾಳಗಳಿರುತ್ತವೆ. ನಾಗರಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಒಪ್ಪಲಾಗದು ಎಂದು ಸುಪ್ರೀಂಕೋರ್ಟು ಜುಲೈ 17 ರಂದು ಎಚ್ಚರಿಸಿದೆ. ಆದರೆ…
ಅಧಿಕಾರ ರಾಜಕಾರಣವೇ, ಹಿಂಸೋನ್ಮಾದದ ನೇರ ಹೊಣೆಯಾಗಿದೆ. ಸಾಮಾಜಿಕ ಸಹಜೀವನವನ್ನು ಛಿದ್ರಗೊಳಿಸುವುದು ರಾಜಕಾರಣಿಗಳಿಂದ ಮುಲಾಜಿಲ್ಲದಂತೆ ನಡೆಯುತ್ತಿದೆ. ನಮ್ಮದೇ ರಾಜ್ಯದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು- ತಾನೇನಾದರೂ ಗೃಹಮಂತ್ರಿಯಾದರೆ, ಬುದ್ಧಿಜೀವಿಗಳನ್ನು ನಿಲ್ಲಿಸಿ ಗುಂಡು ಹಾಕಿಸುತ್ತಿದ್ದೆ- ಎಂದು ಭವಿಷ್ಯತ್ತಿನ ಹಿಟ್ಲರ್‍ತನವನ್ನು ಹೇಳಿಕೊಂಡರು. ತಮ್ಮ ಕ್ಷೇತ್ರದ ಕಾರ್ಪೊರೇಟರುಗಳಿಗೆ, ನೀವು ಟೊಪ್ಪಿಗೆಯವರು, ಬುರ್ಖಾದವರ ಪರವಾಗಿ ಕೆಲಸ ಮಾಡಬೇಡಿ, ಹಿಂದೂಗಳ ಪರವಾಗಿ ಕೆಲಸ ಮಾಡಿರಿ- ಎಂದು ಫರ್ಮಾನು ಹೊರಡಿಸಿದರು. ಶಾಸಕರು, ಸಂಸದರು ಹೀಗೆ ತಮ್ಮನ್ನು ಒಂದುಜಾತಿ-ಧರ್ಮದ ಹುರಿಯಾಳುಗಳು ಎನ್ನುವಂತೆ ಬಿಂಬಿಸಿಕೊಳ್ಳಲು ಅವರಿಗೆ ಯಾವುದೇ ಮುಜುಗರವಿಲ್ಲದ ವಾತಾವರಣ, ತಡೆಯುವವರಿಲ್ಲದ ಪರಿಸ್ಥಿತಿ ಖಂಡಿತವಾಗಿಯೂ ಮತೀಯ ಅರಾಜಕತೆಯೇ ಆಗಿದೆ. ಸಮಾಜವು ಜಾತಿ, ಧರ್ಮ, ವರ್ಗಗಳಲ್ಲಿ ಛಿದ್ರವಾಗುವುದರಿಂದಲೇ ಹಿಂಸಾಪ್ರವೃತ್ತಿ ತೀವ್ರಗೊಳ್ಳುತ್ತದೆ. ನಮ್ಮವರು, ನಮ್ಮವರಲ್ಲದವರು- ಎಂಬ ಒಡಕಿನ ಭಾಷೆ ಬಲುಬೇಗ ಮನದಟ್ಟಾಗುತ್ತದೆ. ಈ ನಂಬಿಕೆಯ ಆಧಾರದಲ್ಲಿ ಒಡೆಯುವುದನ್ನು ಕಾನೂನುಬದ್ಧಗೊಳಿಸಲಾಗುತ್ತದೆ. ಬಡ ದಮನಿತ ಸಮುದಾಯಗಳು ಅಕಾರಣ ಆರೋಪಿಗಳಾಗುತ್ತಾರೆ. ರೊಹಿಂಗ್ಯಾ ಮುಸ್ಲಿಮರ ಕಥನದಂತೆಯೇ, ಭಾರತದಲ್ಲೀಗ ಬಾಂಗ್ಲಾ ನುಸುಳುಕೋರರ ಅಧ್ಯಾಯ ಪ್ರಾರಂಭವಾಗಿದೆ. ಇಲ್ಲಿಯೇ ಜನಿಸಿ, ಇಲ್ಲಿಯೇ ಬದುಕಿ, ಬದುಕಿಗೆ ನೆಲೆಯರಸುತ್ತಿರುವ ಬಡವರನ್ನು ದೇಶದ್ರೋಹಿಗಳೆಂದು, ಉಗ್ರಗಾಮಿಗಳೆಂದು, ದಂಗೆಕೋರರೆಂದು ಬಿಂಬಿಸಲಾಗುತ್ತಿದೆ. ಸಾಮಾಜಿಕ ಆತಂಕದ ಎಲ್ಲ ಬೆಳವಣಿಗೆಗಳೂ ಇವರಿಂದಲೇ ಸಂಭವಿಸಿದ್ದೆಂದು ನಂಬಿಸಲಾಗುತ್ತದೆ. ಮಾಧ್ಯಮಗಳು ಈ ಊಹಾಪೋಹಗಳನ್ನೇ ಕಲ್ಪಿತವಾಗಿಸಿ, ಕೂಗುಮಾರಿಯಂತೆ ಕೂಗುತ್ತವೆ. ದ್ರೋಹಿಗಳೆಂಬ ನಂಬಿಕೆಯನ್ನು ಉತ್ಪಾದಿಸುತ್ತವೆ. ಜನರ ವಿಚಾರ ಸಾಧ್ಯತೆಯನ್ನು ಬೇರೊಂದು ನೆಲೆಯಲ್ಲಿ ಮುನ್ನಡೆಸುವುದರಿಂದ; ವಲಸೆ-ವಲಸಿಗರ ಪ್ರಶ್ನೆಯ ಚರಿತ್ರೆಯನ್ನಾಗಲೀ ಭಾರತೀಯರು ಅಮೆರಿಕಾದಂತಹ ದೇಶದ ರಾಜಕೀಯ ತೀರ್ಮಾನಕ್ಕೆ ಬೆಲೆ ತೆತ್ತಬೇಕಾದ ಕಾಲ ಹತ್ತಿರದಲ್ಲಿಯೇ ಇದೆಯೆಂಬ ವಿಸ್ತರಣೆಯನ್ನಾಗಲೀ ಗಮನಿಸುವ ಪುರುಸೊತ್ತು ಒದಗುವುದಿಲ್ಲ. ಜಾತಿ-ಧರ್ಮಗಳಿಗೆ ಅಂಟಿಕೊಂಡ ಮನಸ್ಸಿಗೆ ನ್ಯಾಯ-ಅನ್ಯಾಯಗಳ ವೈರುಧ್ಯಗಳು ಗೋಚರಿಸುವುದಿಲ್ಲ. ಅಪರಾಧಕೃತ್ಯದಲ್ಲಿ ಅರೆಸ್ಟಾದ ಆರೋಪಿಯನ್ನು ಸೃಷ್ಟಿಸಿದ ಸಮಕಾಲೀನ ದುರಂತಗಳನ್ನು ಪ್ರಶ್ನಿಸಬೇಕಾದ, ಅದರ ವಿರುದ್ಧ ಸಂಘಟಿತರಾಗಬೇಕಿದ್ದ ಜನರು, ಯೋಚನಾ ಸಾಮಥ್ರ್ಯವನ್ನು ಕಳೆದುಕೊಂಡವರ ಹಾಗೆ ‘ಆರೋಪಿ ನಮ್ಮಜಾತಿಯವನು, ಆದ್ದರಿಂದ ಆರೋಪಿಯಲ್ಲ’ ಎಂದು ವಾದಿಸುತ್ತಿದ್ದಾರೆ, ಬೀದಿಗಿಳಿಯುತ್ತಿದ್ದಾರೆ. ತಮ್ಮ ಮಕ್ಕಳು ನಿರಪರಾಧಿಗಳು ಅವರ ಪರವಾಗಿ ಹಿಂದೂ ಸಂಘಟನೆಗಳು ವಕೀಲರನ್ನಿಟ್ಟು ವಾದಿಸುತ್ತವೆ- ಎಂದು ಒಪ್ಪಿಕೊಳ್ಳುವ ಹಿರಿಯರು; ಗುಣ-ಸ್ವಭಾವಗಳು ಜಾತಿವಾಚಕಗಳು ಎಂದು ನಂಬುವವರು- ತಮ್ಮ ಕಣ್ಣೆದುರೇ ನಡೆಯುತ್ತಿರುವ ಅಪಾಯವನ್ನು ಕಾಣಲಾರರು. ಯಾರು ತಮ್ಮ ಕೌಟುಂಬಿಕ ಸ್ವಾಸ್ಥ್ಯವನ್ನು ಲೂಟಿಗೈದವರು- ಎಂಬುದನ್ನು ತಿಳಿಯಲಾರದಷ್ಟು ಮುಗ್ಧತೆಯನ್ನು ತೋರುತ್ತಾರೆ. ಹಿಂಸೆಯೀಗ ದಶಾವತಾರವನ್ನೆತ್ತಿದೆ. ಅದರ ಮೈತುಂಬ ಕಣ್ಣು, ಬಾಯಿಗಳೆದ್ದಿವೆ. ಬಿಹಾರದ ಹಾಸ್ಟೆಲ್ಲಿನ ಬಡ-ಎಳೆಯ ಹೆಣ್ಣುಮಕ್ಕಳ ದೇಹವನ್ನು ಹುರಿದು ಮುಕ್ಕಿದ ಕರಾಳ ಹಿಂಸೆಯು, ಹೆಣ್ಣುಮಕ್ಕಳಿಗೆ ಹಾಸ್ಟೆಲ್ ಸುರಕ್ಷಿತವಲ್ಲ; ಮದುವೆಯೊಂದೇ ಸುರಕ್ಷಿತ- ಎಂಬ ಭಾವನೆಯನ್ನು ಬಲಿಸುತ್ತದೆ ಎಂದಾದರೆ ಸಂವಹನದ ಯಾವ ಸಾಧ್ಯತೆಯನ್ನು ಆಯ್ದುಕೊಂಡೇವು?
ಚೋಮನದುಡಿಯಲ್ಲಿ, ಚೋಮನ ಗುಡಿಸಲಲ್ಲಿ ದನದ ಮಾಂಸದೂಟದ ಪ್ರಸಂಗ ಬಂದೊಡನೆ ‘ಶ್ಶೀ’ ಎಂದು ತನ್ನ ಜಾತಿನಿಷ್ಠೆಯನ್ನು ಪ್ರಕಟಪಡಿಸುವ ಹುಡುಗಿಯರು ಬೇರೆಲ್ಲ ವಿಷಯದಲ್ಲಿ ಬೆಳ್ಳಿಯಂಥವರೇ. ಭಿತ್ತಿ ಪತ್ರಿಕೆಗೆ ಬರಹ ಕೇಳಿದರೆ, ಗೋಮಾತೆಯ ಮಹತ್ವವನ್ನು ಬರೆದು ತರುವವರಿಗೆ, ಇಂದಿನ ಪತ್ರಿಕೆಯಲ್ಲಿ ನಿಮ್ಮನ್ನು ಸತಾಯಿಸಿದ ಸುದ್ದಿ ಯಾವುದು? ಎಂದು ಕೇಳಿದರೆ ಮೌನವಾಗುವ; ಏನು ಓದಿದಿರಿ? ಎಂದರೆ ಸಿನಿಮಾದ,ಕ್ರೀಡೆಯ ಸುದ್ದಿಯನ್ನು ಹೇಳುವ ‘ದೊಡ್ಡ ಮಕ್ಕಳನ್ನು’ ವರ್ತಮಾನದ ಕುದಿ ಕುಲುಮೆಯ ಸ್ಪರ್ಶಕ್ಕೆ ತರುವ ಹಾದಿ ಕಾಣದೆ ಕಂಗಾಲಾಗುತ್ತೇನೆ. ಅವರ ಕಣ್ಣೊಳಗೆ ಆಗಾಗ ಹಿಂಸಾರತಿಯ ಉನ್ಮತ್ತ ಎಳೆಯೊಂದು ಹಾರಾಡಿದಂತಾಗಿ ದಿಕ್ಕೆಡುತ್ತಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...