Homeಅಂಕಣಗಳುತಲ್ಲಣದ ಜೀವನಾನುಭವಗಳ ಅನಾವರಣ

ತಲ್ಲಣದ ಜೀವನಾನುಭವಗಳ ಅನಾವರಣ

- Advertisement -
ಇತ್ತೀಚಿನ ದಿನಗಳಲ್ಲಿ ವರ್ತಮಾನದ ಸಾಮಾಜಿಕ ಆಗುಹೋಗುಗಳ ಬಗ್ಗೆ ನಿರಂತರವಾಗಿ ಬರೆಯುತ್ತಿರುವ ವಿಕಾಸ್ ಮೌರ್ಯ, ಹೊಸತಲೆಮಾರಿನ ಪ್ರಖರ ಚಿಂತಕರಲ್ಲೊಬ್ಬರು. ಇದಕ್ಕೆ ಪುರಾವೆಯೆಂದರೆ ಕಳೆದ ಐದಾರು ವರ್ಷಗಳಿಂದ ಅವರು ಬರೆದ ಇಲ್ಲಿನ ಲೇಖನಗಳು. ಎಲ್ಲವೂ ಪುಟ್ಟ ಪುಟ್ಟ ಲೇಖನಗಳು; ಸರಳವೂ ನೇರವೂ ಸಂವಹನಶೀಲವೂ ಆದ ಭಾಷೆ; ಸಮಾಜ ಬದಲಾವಣೆಯ ದಿಕ್ಕಿನಲ್ಲಿ ಚಿಂತಿಸಲು ಮತ್ತು ಕ್ರಿಯಾಶೀಲರಾಗಲು ಕರೆಗೊಡುವ ಸಂಕಲ್ಪ ತುಂಬಿದ ವಾಕ್ಯಗಳು; ಪ್ರಾಮಾಣಿಕವಾದ ವೇದನೆಯನ್ನೂ ಆಕ್ರೋಶವನ್ನು ಚಿಂತನೆಯಾಗಿ ಮಾರ್ಪಡಿಸುವ ಸಂಯಮದ ಶೈಲಿ; ಎಚ್ಚರ ಮತ್ತು ಕನಸುಗಾರಿಕೆಯಿಂದ ಕೂಡಿದ ತರುಣ ಮನಸ್ಸು; ವರ್ತಮಾನದ ಇಂಡಿಯಾ ದಲಿತರನ್ನು ನಡೆಸಿಕೊಳ್ಳುತ್ತಿರುವ ಭೀಷಣ ವಾಸ್ತವವನ್ನು ಕಾಣಿಸುವಿಕೆ-ಇವು ಲೇಖನಗಳ ಹಿಂದಿರುವ ಮುಖ್ಯ ಚಹರೆಗಳು. ಈ ಲೇಖನಗಳಲ್ಲಿ ಕನ್ನಡ ಪ್ರಗತಿಪರ ಚಿಂತನೆ ಈಗಾಗಲೇ ಚರ್ಚಿಸಿರುವ ಎಳೆಗಳೇ ಇವೆ. ಆದರೆ ಇವುಗಳ ಹಿಂದಿನ ಬದ್ಧತೆ ಕಳಕಳಿ ತಲ್ಲಣ ಪ್ರಾಮಾಣಿಕತೆಗಳು ಲೇಖನಗಳಿಗೆ ಹೊಸ ಜೀವಂತಿಕೆಯನ್ನು ಹಾಯಿಸಿವೆ. ದಮನಿತ ಸಮುದಾಯದ ಪ್ರಾತಿನಿಧ್ಯ ಅವಾಹಿಸಿಕೊಂಡು ಹುಟ್ಟುವ ಆಕ್ಟಿವಿಸ್ಟ್ ಬರಹಗಳಲ್ಲಿ ಎದುರಾಳಿಯನ್ನು ಕಟಕಟೆಯಲ್ಲಿ ನಿಲ್ಲಿಸುವ ನಿಲುಮೆ ಸಾಮಾನ್ಯ. ವಿಶೇಷವೆಂದರೆ ಇಲ್ಲಿನ ಬರಹಗಳಲ್ಲಿ ಸ್ವವಿಮರ್ಶೆಯ ದನಿಯೂ ಸೇರಿರುವುದು. ಮೊದಲ ಲೇಖನವೇ ದಲಿತ ಮಧ್ಯಮವರ್ಗ ಮತ್ತು ದಲಿತ ಚಳವಳಿಗಳನ್ನು ಕುರಿತ ನಿಷ್ಠೂರವಾದ ಆತ್ಮವಿಮರ್ಶೆಯಿಂದ ಕೂಡಿದೆ. ಅಂಬೇಡ್ಕರರನ್ನು ದೈವವಾಗಿಸಿ ಅವರ ಚಿಂತನೆ ಮತ್ತು ಕ್ರಿಯಾಶೀಲತೆಗಳನ್ನು ಮರೆತಿರುವ ದಲಿತರ ಬಗ್ಗೆ ಇಲ್ಲಿ ಕೋಪವಿದೆ. ತಲ್ಲಣ ಮತ್ತು ಭಾವನಾತ್ಮಕತೆ ಪ್ರಧಾನವಾಗಿರುವ ಇಲ್ಲಿನ ಚಿಂತನೆ, ಅಧ್ಯಯನಶೀಲತೆ ಮತ್ತು ಅಂಕಿಅಂಶಗಳ ಬಲವನ್ನೂ ಪಡೆದುಕೊಂಡಿದೆ. ಕೆಲವು ದಲಿತ ಚಿಂತಕರನ್ನು ಆವರಿಸಿಕೊಂಡಿರುವ ಸೈದ್ಧಾಂತಿಕ ಜಡತೆ, ಪಾಂಥಿಕ ಸಂಕುಚಿತತೆ ಮತ್ತು ನಿರಾಳತೆಗಳು ಇಲ್ಲಿಲ್ಲ. ಬದಲಿಗೆ ಸಿದ್ಧಾಂತಗಳಿಗೆ ಕಟ್ಟುಗೊಳ್ಳದೆ ಅವುಗಳ ಮೂಲಕ ಹೊಸಕಾಲಕ್ಕೆ ಬೇಕಾದ ಚೌಕಟ್ಟು ರೂಪಿಸಿಕೊಳ್ಳುವ ಚಲನಶೀಲತೆ ಮತ್ತು ತೆರೆದಮನಸ್ಸಿದೆ; ಸಂಗಾತಿ ಚಿಂತನೆಗಳ ಅಥವಾ ಚಳುವಳಿಗಳ ಮುಂದೆ ತಾತ್ವಿಕ ಭಿನ್ನಮತವನ್ನು ಪ್ರಶ್ನೆರೂಪದಲ್ಲಿ ಮುಂದಿಟ್ಟು ಸಂವಾದ ಮಾಡಬಯಸುವ ಧಾಟಿಯಿದೆ. ಇದು ಸದ್ಯ ಜರೂರಾಗಿರುವ ಪ್ರಜಾತಂತ್ರವಾದಿ ಕ್ರಮ ಕೂಡ. ಕರ್ನಾಟಕದಲ್ಲಿ ಪ್ರಜಾತಂತ್ರವಾದಿ ಮತ್ತು ಪ್ರಗತಿಪರ ಶಕ್ತಿಗಳು ಸಾಕಷ್ಟಿವೆ. ಆದರೆ ಅವು ಸೈದ್ಧಾಂತಿಕ ಭಿನ್ನತೆ ಮತ್ತು ಪಾಂಥಿಕವಾದ ಬಣರಾಜಕಾರಣದಲ್ಲಿ ಮುಳುಗಿ ಕೂಡಿಕಟ್ಟುವ ಬಂಧುತ್ವದ ಪರಿಭಾಷೆಯನ್ನೇ ಮರೆತುಬಿಟ್ಟಿವೆ. ಭಾರತದಲ್ಲಿ ಮಾರುಕಟ್ಟೆ ಸಂಸ್ಕøತಿಯ ಭಾಗವಾಗಿ ನವಫ್ಯಾಸಿಸಂ ಮೈದಳೆಯುತ್ತಿರುವ ಈ ಕಾಲದಲ್ಲಿ, ಜನಪರ ಸಿದ್ಧಾಂತ ಮತ್ತು ಚಳವಳಿಗಳು ಒಗ್ಗೂಡುವ ವಿಶಾಲ ರಾಜಕಾರಣ ರೂಪುಗೊಳ್ಳಬೇಕಿದೆ. ಇಂತಹ ಚಾರಿತ್ರಿಕ ಮತ್ತು ಸಂಕ್ರಮಣದ ಕಾಲಘಟ್ಟದಲ್ಲಿ ಈ ಕೃತಿ ಪ್ರಕಟವಾಗುತ್ತಿದ್ದು, ಇದು ಒಡಕಲು ಬಿಂ¨ಗಳಾಗಿರುವ ಚಳವಳಿ ಮತ್ತು ನಾಯಕತ್ವಗಳನ್ನು ಸಮಾನ ಆಶಯಕ್ಕಾಗಿ ಒಂದು ಹಾದಿಯ ಮೇಲೆ ತರುವ ಇರಾದೆಯನ್ನೂ ಹೊಂದಿದೆ.
ಅಂಬೇಡ್ಕರ್‍ವಾದದ ಹಿನ್ನೆಲೆಯಿಂದ ಹುಟ್ಟಿರುವ ಇಲ್ಲಿನ ಲೇಖನಗಳಲ್ಲಿ, ಭಾರತದ ದಲಿತರ ಕಷ್ಟಗಳು ಪ್ರಧಾನವಾಗಿ ಚರ್ಚಿತವಾಗಿರುವುದು ಸಹಜವೇ. ವಿಶೇಷವೆಂದರೆ, ಈ ಚರ್ಚೆಯು ಸಮಾಜದ ಎಲ್ಲಾ ದಮನಿತರ ನೋವಿಗೆ ಮಿಡಿಯುವಂತೆ ತನ್ನನ್ನು ವಿಸ್ತರಿಸಿಕೊಳ್ಳುವುದು. ಕೋಮುವಾದವು ದಲಿತರ ಸಮಸ್ಯೆಯಲ್ಲ, ಮಾರುಕಟ್ಟೆ ಪ್ರಣೀತ ಅಭಿವೃದ್ಧಿ ಪರಿಕಲ್ಪನೆಯ ಬಲಿಪಶುಗಳಾಗಿರುವ ಆದಿವಾಸಿಗಳ ಕಷ್ಟ ನಮ್ಮದಲ್ಲ, ಪುರುಷವಾದವು ಮಹಿಳೆಯರ ಸಮಸ್ಯೆ- ಎಂದೆಲ್ಲ ಭಾವಿಸುವ ಬಿಡಿತನದ ಆಲೋಚನೆ ನಮ್ಮ ನಡುವಿದೆ. ನಮಗೆ ರಾಜಕೀಯ ಅಧಿಕಾರ ಸಿಗುವುದಾದರೆ ರಾಜಕೀಯ ಪಕ್ಷಗಳಲ್ಲಿ ಅಸ್ಪøಶ್ಯತೆ ಆಚರಿಸಬೇಕಿಲ್ಲ ಎಂಬ ಅವಕಾಶವಾದವೂ ಇದೆ. ಈ ಹಿನ್ನೆಲೆಯಲ್ಲಿ ದಲಿತರು ಬಡವರು ಮಹಿಳೆಯರು ಕಾರ್ಮಿಕರು ಹಾಗೂ ಮುಸ್ಲಿಮರನ್ನು ಒಳಗೊಂಡಂತೆ ಸಮಸ್ತ ದಮನಿತರನ್ನು ತನ್ನವರೆಂದು ಭಾವಿಸುವ ಇಡಿತನದ  ವಿಶಾಲವಾದ ಗ್ರಹಿಕೆ ಈ ಕೃತಿಯಲ್ಲಿದೆ. ಇದನ್ನು ಅಂಬೇಡ್ಕರ್‍ವಾದ ಮತ್ತು ದಲಿತ ಚಿಂತನೆಯ ಹೊಸ ರೂಪಾಂತರ ಮತ್ತು ಸಮಕಾಲೀನ ವಿಸ್ತರಣೆ ಎನ್ನಬಹುದು. ಇಂತಹ ವಿಸ್ತರಣೆ ಮತ್ತು ರೂಪಾಂತರ ಮೊದಲಿಂದಲೂ ದೇವನೂರರ ಬರಹಗಳಲ್ಲಿದೆ. ಚಳುವಳಿಯ ಹೊಸ ಪ್ರತಿಭೆಗಳಾದ ಜಿಗ್ನೇಶ್, ಕನ್ಹಯ್ಯ ಕುಮಾರ್ ಹಾಗೂ ರೋಹಿತ್ ವೇಮುಲಾ ಅವರಲ್ಲೂ ಇದೆ. ಸ್ವವಿಮರ್ಷೆ ಮತ್ತು ಸಮಕಾಲೀನ ಆಶೋತ್ತರಗಳಿಗಾಗಿ ಪಡೆಯುವ ಈ ಮರುಹುಟ್ಟು ಮತ್ತು ವಿಸ್ತರಣೆಯ ರೂಪಾರಂತವು, ಕರ್ನಾಟಕದ ಚಳವಳಿಗಳಿಗೂ ದಮನಿತ ಸಮುದಾಯಗಳಿಗೂ ಅಗತ್ಯವಾಗಿದೆ. ನಿರ್ದಿಷ್ಟ ಸಿದ್ಧಾಂತದ ಹಿನ್ನೆಲೆಯುಳ್ಳ ಯಾವುದೇ ಒಂದು ಚಳುವಳಿ ಈಗ ಸಾಲುತ್ತಿಲ್ಲ. ಬದಲಿಗೆ ಸ್ವವಿಮರ್ಶೆ ಮತ್ತು ಸಮಾನ ಆಶಯದಲ್ಲಿ ಒಗ್ಗೂಡುವ ಸಹಮತದ ಚಳುವಳಿ ರಾಜಕಾರಣ, ನಮ್ಮ ಕಾಲದ ಪರ್ಯಾಯ ಹಾದಿಯಾಗುವಂತೆ ತೋರುತ್ತಿದೆ. ನೀಲಿ ಮತ್ತು ಕೆಂಪುಗಳು ತಮ್ಮ ಹಳೇ ವ್ಯಾಜ್ಯಗಳನ್ನು ಬದಿಗಿಟ್ಟು, ಒಗ್ಗೂಡಿ ಹೊಸ ಭಾರತ ಕಟ್ಟಬಲ್ಲವು ಎಂದು ಆಸೆ ಹುಟ್ಟಿಸುತ್ತಿವೆ. ಇವುಗಳೊಟ್ಟಿಗೆ ಭಾರತದ ಸಮಸ್ತ ಜಾತಿ-ಮತ-ಧರ್ಮಗಳಲ್ಲಿರುವ ಮಹಿಳೆಯರ ನಸುಗೆಂಪು ಸೇರಿಕೊಳ್ಳಬೇಕಾದ ಮೂರನೇ ಬಣ್ಣವಾಗಿದೆ. ಇದಕ್ಕೆ ಪೂರಕವೆಂಬಂತೆ ಈ ಕೃತಿಯಲ್ಲಿ ಸ್ತ್ರೀವಿಮೋಚನೆಯ ಪ್ರಸ್ತಾಪಗಳಿವೆ. ಚರಿತ್ರೆಯಿಂದ ಪಾಠ ಕಲಿಯುವ ಮಾತು ಸಾಕಷ್ಟು ಸವೆದುಹೋಗಿದೆ; ಚಳುವಳಿಗಳಿಗೆ ಅನೇಕ ಸಲ ಚಲನಶೀಲ ದೃಷ್ಟಿಕೋನದಲ್ಲಿ ಮರುವ್ಯಾಖ್ಯಾನ ಪಡೆಯದ ಚರಿತ್ರೆಯೇ ಕಾಲ್ತೊಡಕಾಗುವಷ್ಟು ಭಾರವಾಗಿದೆ. ಈ ದೃಷ್ಟಿಯಿಂದ ಚರಿತ್ರೆಯ ಹ್ಯಾಂಗೋವರುಗಳಿಂದ ಬಿಡಿಸಿಕೊಂಡು ಮುನ್ನಡೆಯುವ ಚಲನಶೀಲತೆಯನ್ನು ಈ ಕೃತಿ ತೋರುತ್ತಿದೆ.
– ರಹಮತ್ ತರೀಕೆರೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...