HomeUncategorizedಒಳಮೀಸಲಾತಿಯು ಒಳಗೇ ಕುಯ್ಯದಂತಿರಲು.......

ಒಳಮೀಸಲಾತಿಯು ಒಳಗೇ ಕುಯ್ಯದಂತಿರಲು…….

- Advertisement -
- Advertisement -

* ಮೀಸಲಾತಿ ಒಪ್ಪುವವರೆಲ್ಲರೂ ಒಳ ಮೀಸಲಾತಿಯನ್ನೂ ಒಪ್ಪಬೇಕು
* ಮೀಸಲಾತಿಯನ್ನೇ ಒಪ್ಪದವರಿಗೆ ಒಳಮೀಸಲಾತಿಯ ಹೋರಾಟ ಸಹಾಯ ಮಾಡಬಾರದು
* ಒಳಮೀಸಲಾತಿಯ ವಿಚಾರದಲ್ಲಿ ವಿಳಂಬನೀತಿ ಅನುಸರಿಸುತ್ತಿರುವುದನ್ನು ಖಚಿತವಾಗಿ ವಿರೋಧಿಸಬೇಕು; ಇನ್ನಷ್ಟು ವಿಳಂಬ ಮಾಡಲು ನೆಪಗಳನ್ನು ಒದಗಿಸಬಾರದು
* ಮೀಸಲಾತಿಯು ಹಕ್ಕೇ ಹೊರತು, ಇನ್ನಾರಿಗೋ ಆಗುತ್ತಿರುವ ಅನ್ಯಾಯವಲ್ಲವೆಂಬುದನ್ನು ಸಮರ್ಥವಾಗಿ ಪ್ರತಿಪಾದಿಸಬೇಕು
* ಹಂಚಿಕೆಯ ಪ್ರಶ್ನೆ ಬಂದಾಗ ವಿಸ್ತರಣೆಯ ವಿಚಾರವನ್ನು ಮುಂದೆ ನಿಲ್ಲಿಸಬಾರದು; ಆದರೆ, ವಿಸ್ತರಣೆಯ ವಿಷಯವನ್ನು ಮರೆಯಬಾರದು
* ಮೀಸಲಾತಿಯು ವಂಚಿತ ಸಮುದಾಯಗಳಿಗೆ ಕೊಟ್ಟಿದ್ದು ಅತ್ಯಲ್ಪವಾದ್ದರಿಂದ, ನಿಜವಾದ ಸಮಾನತೆಯ ಕಡೆಗೆ ಸಾಗಲು ಸ್ಥಿತಿ ಮತ್ತು ಅವಕಾಶಗಳೆರಡರಲ್ಲೂ ಸಮಾನತೆಯನ್ನು ಖಾತರಿಪಡಿಸಿಕೊಳ್ಳಬೇಕು

ದೇಶವು ಪ್ರಜಾಪ್ರಭುತ್ವವೇ ಆಗಿದ್ದರೆ ಮೀಸಲಾತಿಯನ್ನು ಒಪ್ಪಿಕೊಳ್ಳಬೇಕು. ಜಾತಿ ಶೋಷಣೆಯು ದೇಶದ ವಾಸ್ತವವಾದ್ದರಿಂದ, ಜಾತಿ ಆಧಾರಿತ ಮೀಸಲಾತಿಯನ್ನೂ ಜಾತಿಗ್ರಸ್ತ ದೇಶದ ಎಲ್ಲಾ ಬಾಂಧವರೂ ಒಪ್ಪಿಕೊಳ್ಳಬೇಕು. ಇದು ಎಷ್ಟು ಸಹಜವೋ, ಒಳಮೀಸಲಾತಿ ಸಹಾ ಅಷ್ಟೇ ಸಹಜವಾದದ್ದು. ಏಕೆಂದರೆ, ಮೀಸಲಾತಿಯನ್ನು ವಿಂಗಡಿಸುವಾಗ ಬಿಡಿ ಜಾತಿಗಳಿಗಲ್ಲದೇ ಜಾತಿಗಳ ಗುಂಪುಗಳಿಗೆ ನೀಡಲಾಗಿದೆ ಮತ್ತು ಆ ಗುಂಪುಗಳು ಏಕರೂಪವಾಗಿಲ್ಲ. ಇದರಿಂದ, ಮತ್ತೆ ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ ಒಳಮೀಸಲಾತಿಯು ಅನಿವಾರ್ಯವಾದುದು. ಮೀಸಲಾತಿ ಒಪ್ಪುವವರ್ಯಾರೂ ಇದನ್ನು ತಾತ್ವಿಕವಾಗಿ ವಿರೋಧಿಸಲು ಸಾಧ್ಯವೇ ಇಲ್ಲ. ಮೀಸಲಾತಿಯನ್ನು ಒಪ್ಪಿಕೊಂಡು ಅದರ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವವರಲ್ಲಿ ಯಾರಾದರೂ ತತ್ವಶಃ ಒಳಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆಂದರೆ, ಅವರು ಆಷಾಢಭೂತಿಗಳೂ, ತತ್ವಹೀನರೂ, ಅವಕಾಶವಾದಿಗಳು ಅಷ್ಟೇ ಆಗಿರಲು ಸಾಧ್ಯ.
ಹಾಗಾದಲ್ಲಿ ಇಂದು ಒಳಮೀಸಲಾತಿಯು ಇಷ್ಟೆಲ್ಲಾ ಗೊಂದಲಗಳಿಗೆ, ವಿವಾದಕ್ಕೆ ಏಕೆ ಕಾರಣವಾಗುತ್ತಿದೆ? ಇದಕ್ಕೆ ಮೂರು ಕಾರಣಗಳಿವೆ. ನಿಜಕ್ಕೂ ಗುಂಪಾಗಿ ಮೀಸಲಾತಿ ಪಡೆದುಕೊಂಡಾಗ ಅದರಿಂದ ಸಾಪೇಕ್ಷವಾಗಿ ಹೆಚ್ಚು ಲಾಭ ಪಡೆದ ಕೆಲವು ಜಾತಿಗಳ ಸ್ಥಾಪಿತ ಹಿತಾಸಕ್ತಿಗಳಿಂದ ವಿರೋಧ ಬರುತ್ತಿದೆ. ಸಾಮಾನ್ಯವಾಗಿ ಅಸ್ಪøಶ್ಯ ಸಮುದಾಯಗಳು ಮಾತ್ರ ಇರುವ ಎಸ್‍ಸಿ ಪಟ್ಟಿಯೊಳಗೆ ಕರ್ನಾಟಕದಲ್ಲಿ ಕೆಲವು ಸ್ಪøಶ್ಯ ಸಮುದಾಯಗಳೂ ಸೇರಿರುವುದರಿಂದ ಇದು ಮತ್ತಷ್ಟು ಸಮಸ್ಯೆಯಾಗಿದೆ. ಆ ಸ್ಪøಶ್ಯ ಜಾತಿಗಳೂ ಸಹ ಶೋಷಿತ ಜಾತಿಗಳೇ ಆಗಿರುವುದರಿಂದ ಅವೆಲ್ಲದರ ನಡುವೆ ಅತ್ಯುತ್ತಮವಾದ ಸೋದರೀ ಸಂವಾದ ನಡೆದು ‘ಹಂಚಿಕೊಳ್ಳುವ ಮಾತುಕತೆ’ ಸಾಧ್ಯವಾಗಬೇಕಿತ್ತು. ಅದು ಅಸಾಧ್ಯವಲ್ಲ; ಕಷ್ಟಸಾಧ್ಯ.
ಎರಡನೆಯದಾಗಿ, ಮೀಸಲಾತಿಯನ್ನೇ ವಿರೋಧಿಸುವ ಶಕ್ತಿಗಳು ಒಳಮೀಸಲಾತಿಯ ವಿಚಾರವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿವೆ. ಪ್ರಜಾತಂತ್ರ, ಸಮಾನತೆ, ಜಾತಿವಿನಾಶ, ಸೋದರತೆ ಎಲ್ಲಕ್ಕೂ ವಿರುದ್ಧವಾಗಿರುವ ಶಕ್ತಿಗಳು ದೇಶದ ಬೀದಿಗಳನ್ನು ಮತ್ತು ಸಂಸತ್ತನ್ನು ಆಳಲು ತೊಡಗಿರುವ ಸಂದರ್ಭದಲ್ಲಿ ಇದು ಅತ್ಯಂತ ಘಾತುಕವಾದದ್ದು. ಯಾರು ಮೀಸಲಾತಿಯನ್ನೇ ವಿರೋಧಿಸುತ್ತಿದ್ದಾರೆ, ಅವರೊಂದಿಗೆ ಹೋದರೂ ಪರವಾಗಿಲ್ಲ; ಅತ್ಯಂತ ಶೋಷಿತ ಸಮುದಾಯದ ಕೆಲವು ಮುಖಂಡರು ‘ಒಳಮೀಸಲಾತಿಯ ಕಥನ’ವನ್ನು ಕಟ್ಟುವಾಗ ನಮ್ಮ ಶತ್ರುಗಳು ನಮ್ಮ ಸೋದರರೇ ಎಂದು ಬಹಿರಂಗವಾಗಿ ಹೇಳಲೂ ಹಿಂಜರಿಯಲಿಲ್ಲ. ಜೊತೆಗೆ ಯಾರೆಲ್ಲಾ ಈ ಸಂದರ್ಭದಲ್ಲಿ ನಮ್ಮೊಂದಿಗೆ ನೇರವಾಗಿ ಕೈ ಜೋಡಿಸುತ್ತಿಲ್ಲ ಅವರೆಲ್ಲರೂ ನಮ್ಮ ವಿರೋಧಿಗಳು ಎಂಬ ಸಾರಾಸಗಟು ತೀರ್ಮಾನವನ್ನೂ ಕೆಲವರು ಮಾಡಿದರು. ಇಲ್ಲಿ ಮೀಸಲಾತಿಯ ವಿರೋಧಿಗಳೆಂದರೆ ಬಿಜೆಪಿ ಮತ್ತು ಆರೆಸ್ಸೆಸ್ ಮಾತ್ರವಾಗಿರದೇ, ಅಸಹನೆಯಿಂದ ಇರುವ ದೊಡ್ಡ ಮೇಲ್ಜಾತಿ ಸಮೂಹಗಳೂ ಇವೆ.
ಅಂತಹ ಸಮೂಹಗಳೂ ಇಂದು ಬಿಕ್ಕಟ್ಟಿಗೆ ಬಿದ್ದಿವೆ. ಯಾವ ಸಮುದಾಯಗಳನ್ನು ಭೂಒಡೆತನ, ಗ್ರಾಮೀಣ ಭಾಗದ ಅಧಿಕಾರ ಚಲಾವಣೆ ಮತ್ತು ಆರ್ಥಿಕ ಮೇಲ್ಚಲನೆಯ ಕಾರಣದಿಂದ ಬಲಾಢ್ಯವೆಂದು ಗುರುತಿಸಲಾಗುತ್ತಿತ್ತೋ, ಅವರಲ್ಲಿ ಭೂವಿಘಟನೆ, ಕೃಷಿ ಬಿಕ್ಕಟ್ಟು ಇತ್ಯಾದಿಗಳ ಕಾರಣದಿಂದ ಆರ್ಥಿಕ ಸಮಸ್ಯೆಗೆ ಗುರಿಯಾಗಿವೆ. ಅದೇ ಸಾಮಾಜಿಕ ಅಸಹನೆಯಾಗಿಯೂ ಬೆಳೆಯುತ್ತಿದೆ; ತಮಗೂ ಮೀಸಲಾತಿ ಬೇಕೆಂದು ‘ಭಾರೀ’ ಹೋರಾಟಗಳನ್ನೂ ನಡೆಸುತ್ತಿವೆ. ಎಲ್ಲರಿಗೂ ಜನಸಂಖ್ಯೆಯಾಧಾರಿತ ಮೀಸಲಾತಿ ಕೊಡಲಿ ಎಂದು ಶೋಷಿತ ಸಮುದಾಯಗಳೂ ಹೇಳುತ್ತಿವೆ. ಒಟ್ಟಿನಲ್ಲಿ ಮೀಸಲಾತಿಯು ಹಲವು ರೀತಿಯ ಕ್ಷೋಭೆಗಳಿಗೆ ಕಾರಣವಾಗಿದೆ.
ಎಲ್ಲಾ ಸಮುದಾಯಗಳೊಳಗೂ ಒಂದು ಸಣ್ಣ ವಿಭಾಗವು ಮೇಲ್ಚಲನೆ ಪಡೆದುಕೊಂಡಿರುವುದು ವಾಸ್ತವವಾದರೂ, ಈ ದೇಶದ ಶೋಷಿತ ಜಾತಿಗಳು ಇಡಿಯಾಗಿ ಪ್ರಜಾತಂತ್ರದ ಫಲವನ್ನು ಇನ್ನೂ ಉಂಡೇ ಇಲ್ಲ. ಅಸಮಾನತೆಯಾಗಲೀ, ಜಾತಿ ಕ್ರೌರ್ಯದ ದಬ್ಬಾಳಿಕೆಯಾಗಲೀ ನಿಂತಿಲ್ಲ. ಕೆಲವು ವಿಧಗಳಲ್ಲಿ ಹೆಚ್ಚೂ ಆಗುತ್ತಿದೆ. ಹೀಗಿರುವ ಸಂದರ್ಭದಲ್ಲಿ ಮೀಸಲಾತಿ ಮಾತ್ರವಲ್ಲದೇ ಇನ್ನೂ ಹಲವು ಆಯಾಮಗಳ ವಿಸ್ತರಣೆಯನ್ನು ಪ್ರಜಾಪ್ರಭುತ್ವ ಸಮಾಜ ಹಾಗೂ ಸರ್ಕಾರಗಳು ಯೋಜಿಸಿ ಜಾರಿ ಮಾಡಬೇಕಿತ್ತು. ಆದರೆ, ಶೋಷಿತ ಜಾತಿಗಳೂ ಸೇರಿದಂತೆ ಎಲ್ಲರೂ ಪರಸ್ಪರ ಕಿತ್ತಾಡುವಂತಹ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವಾತಾವರಣ ಎಂದು ಬೆಳೆದು ನಿಂತಿದೆ.
ಇದರಿಂದ ಆರ್ಥಿಕ ನೀತಿ ಮತ್ತು ಸಾಮಾಜಿಕ ರಾಜಕೀಯ ರಚನೆಯಲ್ಲಿನ ಸಮಸ್ಯೆಯೆಂದು ಬಗೆದು ನಿಜವಾದ ‘ಶತ್ರು’ಗಳ ವಿರುದ್ಧ ಹೋರಾಟ ನಡೆಸಬೇಕಿದ್ದ ಸಂದರ್ಭದಲ್ಲಿ ದಾರಿ ತಪ್ಪುವಂತಾಗಿದೆ. ಮೀಸಲಾತಿಯ ವಿಸ್ತರಣೆ ಹೋಗಲಿ, ಸರ್ಕಾರೀ ವಲಯದಲ್ಲಿ ಜನಸಂಖ್ಯೆಯ ಬೆಳವಣಿಗೆಗೆ ತಕ್ಕಂತೆ ಅವಕಾಶಗಳು ಹೆಚ್ಚಾಗುವ ಬದಲು ಕಡಿಮೆಯಾಗುತ್ತಿವೆ. ಗುತ್ತಿಗೆ ಪದ್ಧತಿಯ ಹೆಸರಿನಲ್ಲಿ ಇದುವರೆಗೆ ಇದ್ದ ಅವಕಾಶಗಳೂ ಕಿತ್ತುಕೊಂಡು ಹೋಗುತ್ತಿವೆ. ಹಾಗಾಗಿ ಮೀಸಲಾತಿಯಿಂದ ಅನುಕೂಲ ಪಡೆದುಕೊಂಡಿರುವ ಮತ್ತು ಪಡೆದುಕೊಳ್ಳುವ ಸಾಧ್ಯತೆಯಿರುವ ಎಲ್ಲಾ ಸಮುದಾಯಗಳೂ ಸೇರಿ ಆ ನಿಟ್ಟಿನಲ್ಲಿ ಆಂದೋಲನ ರೂಪಿಸಬೇಕಿದೆ. ದುರಂತವೆಂದರೆ, ‘ಶಾಂತಿಕಾಲದಲ್ಲಿ’ ಅಂತಹ ಯಾವ ಪ್ರಯತ್ನಗಳನ್ನೂ ಮಾಡದೇ, ‘ಈಗೆಷ್ಟು ಸಿಗುತ್ತಿದೆಯೋ ಅದರಲ್ಲಿ ಹಂಚಿಕೊಳ್ಳೋಣ’ ಎಂದು ಒಳಮೀಸಲಾತಿ ಹೋರಾಟಗಾರರು ಕೇಳಿದಾಗ ಇಂಥವೆಲ್ಲಾ ಮುಂದೆ ಬರುತ್ತವೆ. ಇದು ಮೀಸಲಾತಿ ವಂಚಿತ ದಮನಿತ ಜಾತಿಗಳಲ್ಲಿ ಸಿನಿಕತೆಯನ್ನು ಹುಟ್ಟಿಸುತ್ತದೆ.
ಮುಂದಿನದ್ದು, ಒಳಮೀಸಲಾತಿಯು ಸಾಂವಿಧಾನಿಕವಾಗಿ ಸಾಧುವೇ ಎಂಬ ಪ್ರಶ್ನೆ. ಮೀಸಲಾತಿಯನ್ನು ಸಂವಿಧಾನ ಜಾರಿ ಮಾಡಬೇಕೆಂದು ಹೇಳುವಾಗ, ಒಳಮೀಸಲಾತಿಯು ಅಸಾಂವಿಧಾನಿಕವಾಗಲು ಸಾಧ್ಯವಿಲ್ಲ. ಹೆಚ್ಚೆಂದರೆ, ತಾಂತ್ರಿಕ ಕಾರಣಗಳಿಗಾಗಿ ಸಂವಿಧಾನ ತಿದ್ದುಪಡಿಯೊಂದರ ಅಗತ್ಯ ಬೀಳಬಹುದು ಅಷ್ಟೇ. ಅದಕ್ಕಾಗಿ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ (ಅಖಿಲ ಭಾರತ ಮಟ್ಟದ ಚಳವಳಿಯೊಂದನ್ನು ರೂಪಿಸುವುದು ಅಷ್ಟು ಸುಲಭವಲ್ಲದ್ದರಿಂದಲೂ ರಾಜ್ಯ ಸರ್ಕಾರಗಳೇ ಗುರಿಯಾಗಿವೆ), ಕೇಂದ್ರಕ್ಕೆ ಶಿಫಾರಸ್ಸನ್ನು ಕಳಿಸಲು ವಿವಿಧ ರಾಜ್ಯಗಳಲ್ಲಿ ಆಂದೋಲನಗಳು ನಡೆಯುತ್ತಿವೆ. ಅಂತಹ ಆಂದೋಲನವು ಕರ್ನಾಟಕದಲ್ಲಿ ನಡೆದು ಜಸ್ಟೀಸ್ ಸದಾಶಿವ ಆಯೋಗ ರಚನೆಯಾಗಿ, ವರದಿಯು ಸರ್ಕಾರಕ್ಕೂ ಸಲ್ಲಿಕೆಯಾಗಿದೆ ಮತ್ತು ವರದಿಯ ‘ಸೋರಿಕೆ’ಯೂ ಆಗಿದೆ.
ವಿವಿಧ ಜಾತಿಗಳನ್ನು ಧ್ರುವೀಕರಣ ಮಾಡುವ ಮತ್ತು ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುವ ರಾಜಕಾರಣವು, ಬಿಜೆಪಿಯ ಬೆಳವಣಿಗೆಯ ಜೊತೆಗೆ ಮತ್ತಷ್ಟು ಬೆಳೆದಿದೆ. ಹಾಗಾಗಿ ಸಲ್ಲಿಕೆಯಾದ ವರದಿಯ ಸೋರಿಕೆಯು ಅಂತಹ ಎತ್ತಿಕಟ್ಟುವ ರಾಜಕಾರಣಕ್ಕೆ ಅನುಕೂಲ ಮಾಡಿಕೊಟ್ಟಿದೆ. ಇದರಲ್ಲೇನಿದೆ ಎಂಬ ಸುಳಿವೇ ಸಾಕಷ್ಟು ವಿರೋಧಕ್ಕೆ ಕಾರಣವಾಗಿರುವಾಗ, ಅದೆಷ್ಟೇ ವೈಜ್ಞಾನಿಕ ಮತ್ತು ಪ್ರಜಾತಾಂತ್ರಿಕವಾಗಿದ್ದರೂ, ಸಂಪೂರ್ಣ ಹೊರಬಿದ್ದಾಗಲೂ ಮತ್ತಷ್ಟು ವಿರೋಧಕ್ಕೇ ಎಡೆ ಮಾಡಿಕೊಡುತ್ತದೆ. ಹಾಗೆಂದು ಸಾರ್ವಜನಿಕ ಚರ್ಚೆ ಮಾಡದೇ ಅಂಗೀಕರಿಸಿ ಎಂದು ಹೇಳುವುದು, ಯಾರಿಗೆ ಅದು ತಮ್ಮ ಪರವಾಗಿದೆ ಎಂದು ಖಚಿತವಾಗಿದೆಯೋ ಅವರಿಗೆ ಮಾತ್ರ ಸರಿಯೆನಿಸುತ್ತದೆ. ಸಾರ್ವಜನಿಕ ಚರ್ಚೆ ಆಗಲಿ ಎಂದು ಹೇಳುತ್ತಿರುವವರು ವಿಳಂಬಕ್ಕೆ ಮತ್ತು ಮತ್ತಷ್ಟು ಗೋಜಲಿಗೆ ಕಾರಣವಾಗಲಿ ಎಂಬ ಕಾರಣಕ್ಕೇ ಹೇಳುತ್ತಿದ್ದಾರೆಂದು ಅನಿಸಲೂ ಕಾರಣವಿದೆ.
ಒಳಮೀಸಲಾತಿಯು ನ್ಯಾಯಬದ್ಧವೆಂದು ಒಪ್ಪಿದ್ದರೆ, ಅದಕ್ಕಾಗಿಯೇ ಸದಾಶಿವ ಆಯೋಗ ರಚನೆಯಾಗಿದ್ದರೆ, ಆ ವರದಿಯಲ್ಲೇನಿದೆಯೆಂದು ಪರಿಶೀಲಿಸಿ, ಪ್ರಜಾತಾಂತ್ರಿಕ ಪ್ರಕ್ರಿಯೆಯ ಮೂಲಕ ಮುಂದುವರೆದು ಒಳಮೀಸಲಾತಿಯ ಜಾರಿಯ ಮುಂದಿನ ಹೆಜ್ಜೆಯ ಕಡೆಗೆ ಹೋಗಬೇಕು. ಅವ್ಯಾವನ್ನೂ ಮಾಡದೇ ಸುಮ್ಮನೇ ಕೂರುವ ಕೆಲಸವನ್ನೂ ಯಾವ ಪಕ್ಷವೂ ಮಾಡಬಾರದು. ಇದರ ಹೆಚ್ಚಿನ ಲಾಭವನ್ನು ಬಿಜೆಪಿಯು ಪಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ. ಉಳಿದವರಿಗೆ ಇದು ಉಗುಳಲೂ ಆಗದ, ನುಂಗಲೂ ಆಗದ ತುತ್ತು. ವಿಳಂಬವನ್ನು ಅಥವಾ ಧ್ರುವೀಕರಣವನ್ನು ಯಾರು ಬಯಸುತ್ತಿದ್ದಾರೋ ಅವರನ್ನು ಎಲ್ಲರೂ ಸೇರಿ ವಿರೋಧಿಸಬೇಕು.
ಈ ಬರಹದ ಆರಂಭದಲ್ಲೇ ಹೇಳಿರುವ ಮಾತುಗಳನ್ನು ಎಲ್ಲರೂ ಒಪ್ಪುತ್ತಾರೆ. ಆದರೆ, ಒಂದನ್ನು ಇನ್ನೊಂದಕ್ಕೆ ಪೂರ್ವಶರತ್ತು ಮಾಡುತ್ತಾ, ಒಬ್ಬೊಬ್ಬರು ಒಂದೊಂದಕ್ಕೆ ಹೆಚ್ಚಿನ ಒತ್ತು ಕೊಡುತ್ತಾ ಸಾಗುವುದರಿಂದ ಸಮಸ್ಯೆ ಹೆಚ್ಚಾಗಿದೆ. ‘ಮೀಸಲಾತಿಯ ಹಂಚಿಕೆಯ ವಿಚಾರದ ಚರ್ಚೆ ಇದ್ದಾಗ, ಮಿಕ್ಕೆಲ್ಲವನ್ನೂ ತಂದು ನಿಲ್ಲಿಸುವುದು ಸರಿಯೇ?
ಮಿಕ್ಕ ವಿಚಾರಗಳಿಗೆ ಒಟ್ಟಿಗೆ ಫೈಟ್ ಮಾಡೋಣ, ಈ ಸದ್ಯ ಇದರ ಬಗ್ಗೆ ಹೇಳಿ. ಇಲ್ಲವಾದರೆ ನಮಗೆಂದಿಗೂ ಸಿಗದ ಮೀಸಲಾತಿಗಾಗಿ ನಾವ್ಯಾಕೆ ನಿಮ್ಮ ಜೊತೆ ಫೈಟಿಗೆ ಬರಬೇಕು?’ ಎಂಬ ಮಾತಿನಲ್ಲಿ ತಪ್ಪೇನಿಲ್ಲ. ಹಾಗಾದರೆ ಮೀಸಲಾತಿಯ ವಿಸ್ತರಣೆಯ, ಮೀಸಲಾತಿಯಾಚೆಗೂ ಮಾಡಬೇಕಿರುವ ಸಮಾನತೆಯ ಹೋರಾಟದ ಮುಂಚೂಣಿ ಪಾತ್ರ ವಹಿಸಬೇಕಾದವರು ಯಾರು? ಇನ್ಯಾರೋ ಮುಂಚೂಣಿ ಪಾತ್ರ ವಹಿಸಲಿಲ್ಲವೆಂದು ದೂರಿಕೊಂಡು ನಮ್ಮ ನಮ್ಮ ಆದ್ಯತೆಗಳಿಗೆ ಸೀಮಿತವಾಗುವುದೂ ಸಹಾ ಒಳಗೊಳಗೇ ಕುಯ್ಯಲು ಕಾರಣವಾಗಿದೆ.
ಸರ್ಕಾರೀ ವಲಯದ ಮೀಸಲಾತಿಯಿಂದ ಹೆಚ್ಚೇನೂ ಪ್ರಯೋಜನವಿಲ್ಲ; ಖಾಸಗೀಕರಣ ಹೆಚ್ಚಾಗುತ್ತಿದೆ; ಹಾಗಾಗಿ ಖಾಸಗಿ ರಂಗದಲ್ಲಿ ಮೀಸಲಾತಿಯೇ ನಮ್ಮ ಆದ್ಯತೆಯಾಗಬೇಕು ಎನ್ನುವವರೂ ಇದ್ದಾರೆ. ಖಾಸಗಿ ರಂಗದಲ್ಲಿ ಮೀಸಲಾತಿ ಸಿಕ್ಕರೂ, ಇಂದಿಗೂ ಅತೀ ದೊಡ್ಡ ಸಂಘಟಿತ ವಲಯದ ಉದ್ಯೋಗದಾತ ಸರ್ಕಾರವೇ ಆಗಿದೆ. ಖಾಸಗಿ ರಂಗದಲ್ಲೂ ಸಂಘಟಿತ ವಲಯವನ್ನು ಬೆಳೆಸುವ ಕಡೆಗೆ ನಾವು ಹೋರಾಡಬೇಕು. ವಾಸ್ತವ ಹೇಗಿದೆಯೆಂದರೆ, ಸರ್ಕಾರೀ ಗುತ್ತಿಗೆ ನೌಕರಿಯಲ್ಲಿ ಇರುವ ಹೆಚ್ಚಿನವರು ಶೋಷಿತ ಸಮುದಾಯಗಳಿಗೆ ಸೇರಿದವರೇ ಆಗಿದ್ದಾರೆ. ಅವರನ್ನು ಕಿತ್ತುಹಾಕಿ, ನೇರ ನೇಮಕಾತಿ ಮಾಡಿಕೊಳ್ಳಿ ಎಂದು ವಾದಿಸುವವರು, ಗುತ್ತಿಗೆಯ ಸಮಸ್ಯೆಯಲ್ಲಿ ಬಳಲಿ ಬೆಂಡಾದವರ ಹಕ್ಕನ್ನು ಮರೆಯುತ್ತಾರೆ. ಈ ರೀತಿಯ ಪಾಕ್ಷಿಕ ಒತ್ತಿನ, ಸೀಮಿತ ಆದ್ಯತೆಗಳ ಆಂದೋಲನಗಳು ಒಳಗಿನವರನ್ನೇ ಕುಯ್ಯತೊಡಗುತ್ತವೆ.
ಸಮಗ್ರವಾದ ಹೋರಾಟದ ಕಡೆಗೆ ಎಲ್ಲರೂ ಜೊತೆಗೂಡಿ ಸಾಗಬೇಕು; ಆದರೆ ಯಾರೂ ಯಾವುದನ್ನೂ ಪೂರ್ವಷರತ್ತು ಮಾಡದೇ, ವಿಳಂಬಕ್ಕೆ ಎಡೆಮಾಡಿಕೊಡದೇ, ಶೋಷಿತ ಸಮುದಾಯಗಳ ಹಕ್ಕಿನ ಪ್ರತಿಪಾದನೆಯನ್ನೂ ಸಮರ್ಥವಾಗಿ ಮಾಡುತ್ತಾ ಮುಂದಕ್ಕೆ ಹೋಗುವುದಷ್ಟೇ ದಾರಿ. ಮೀಸಲಾತಿಗೇ ವಿರುದ್ಧ ಇರುವವರಿಗೆ ಒಳಮೀಸಲಾತಿಯ ಹೋರಾಟವು ನೆರವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತ್ರ ಎಲ್ಲರೂ ಹೊರಬೇಕೆಂಬ ಒಂದು ಪೂರ್ವಷರತ್ತನ್ನು ಮಾತ್ರ ಹಾಕಿಕೊಳ್ಳಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಈ ವರೆಗೂ ಎಲ್ಲಾ ರಾಜಕಾರಣಿಗಳು ಒಳಮೀಸಲಾತಿಯ ವರದಿಗೆ ಜಾಣ ಕುರುಡುತನ ತೋರಿರುವುದು ಎಡಗಯ್ ಗುಂಪಿನ ಬಗೆಗೆ ಇರುವ ಅಸಡ್ಡೆತನವನ್ನು ಬಯಲು ಮಾಡಿದೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...