Homeರಾಜಕೀಯಚಿಕ್ಕಮಗಳೂರು: ಸೀಟಿ ರವಿಯ ಹಿಂದೂತ್ವ ಬೇಸು ಕಳಚುತ್ತಿದೆಯೇ?

ಚಿಕ್ಕಮಗಳೂರು: ಸೀಟಿ ರವಿಯ ಹಿಂದೂತ್ವ ಬೇಸು ಕಳಚುತ್ತಿದೆಯೇ?

- Advertisement -
ಚಿಕ್ಕಮಗಳೂರಿನಲ್ಲಿ ಇದೀಗ ಸೀಟಿ ರವಿಗೆ ಸೋಲಿನ ಚಳಿಜ್ವರ ಶುರುವಾದಂತೆ ಕಾಣುತ್ತೆ, ಸತತ ಮೂರು ಬಾರಿ ಸೀಟಿ ರವಿ ಗೆಲ್ಲಲು ಕಾರಣವಾದದ್ದು ದತ್ತ ಪೀಠದ ಸೆನ್ಸೇಷನಲ್ ವಿವಾದ. ಕಾಫಿ ತೋಟಗಳ ಹಸಿರು ಆವರಣದಲ್ಲಿ ತಣ್ಣಗಿದ್ದ ಚಿಕ್ಕಮಗಳೂರಿಗೆ ಹಿಂದೂತ್ವದ ನಶೆ ಏರಿಸಿ, ಅಮಾಯಕ ಶೂದ್ರ ಯುವಕರನ್ನು ಬಳಸಿಕೊಳ್ಳುತ್ತಾ ಬಂದಿದ್ದಷ್ಟೇ ಸೀಟಿ ರವಿಯ ಸಾಧನೆ ಅಂತ ಜನರೇ ಮಾತಾಡಿಕೊಳ್ಳುತ್ತಿರೋದನ್ನು ನೋಡಿದರೆ ಈ ಸಲ ರವಿಯ ಗೆಲುವಿನ ಕೊಂಡಿ ಕಳಚಿ ಬೀಳಬಹುದೆಂಬ ಸೂಚನೆ ಸಿಗುತ್ತಿದೆ. ಕ್ಷೇತ್ರವನ್ನು ಹಾಗೇ ಒಮ್ಮೆ ಸುತ್ತಾಡಿ ಬಂದರೆ ಅದಕ್ಕೆ ಸಾಕಷ್ಟು ನಿದರ್ಶನಗಳೂ ಸಿಗುತ್ತಿವೆ.
ಇತ್ತೀಚೆಗಷ್ಟೆ ಸನ್ಮಾನ್ಯ ರವಿ ಸಾಹೇಬರು ಮತ್ತದೇ ಕೇಸರಿ ದಂಡನ್ನು ಕಟ್ಟಿಕೊಂಡು ಮತ ಯಾಚನೆಗೆ ಅಂತ ಊರೂರು ಅಲೆಯುತ್ತಾ ಅಲ್ಲಂಪುರ ಗ್ರಾಮಕ್ಕೂ ಕಾಲಿಟ್ಟಿದ್ದ. ಐದು ವರ್ಷದ ಹಿಂದೆ ಹಿಂದೂತ್ವದ ಬಾವುಟ ತೋರಿಸಿ ಓಟು ಕಿತ್ತು ಕಣ್ಮರೆಯಾಗಿದ್ದ ರವಿಯನ್ನು ನೋಡಿದ್ದೇ ತಡ ಅಲ್ಲಿನ ಯುವಕರ ತಾರಾಮಾರಿ ತರಾಟೆಗೆ ತೆಗೆದುಕೊಂಡಿದ್ದರು. ಚರಂಡಿಗಳು ಗಬ್ಬೆದ್ದು ನಾರುತ್ತಿವೆ, ಬೇಕಾದವರಿಗೆ ಮನೆ ಲೋನ್‍ಗಳು ಬಿಕರಿಯಾಗುತ್ತಿವೆ, ಬಡವರಿಗೆ ಏನೂ ಸವಲತ್ತು ಸಿಗುತ್ತಿಲ್ಲ ಹೀಗೆ ಪಾಪ, ರವಿ ತಡಬಡಾಯಿಸುವಂತೆ ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದರು. `ಆದದ್ದೆಲ್ಲ ಆಗಿ ಹೋಯಿತ್ರಪ್ಪಾ, ಹೀಗೊಂದು ಕೆಲ್ಸ ಮಾಡಿ. ಊರಲ್ಲಿ ಯಾರ್ಯಾರು ಕಡುಬಡವರಿದ್ದಾರೊ ಅವರದ್ದು ಒಂದು ಲಿಸ್ಟ್ ಮಾಡಿ ಕೊಡಿ, ಡೈರೆಕ್ಟಾಗಿ ನನ್ನ ಶಾಸಕ ಅನುದಾನದಿಂದಲೇ ಅವರಿಗೆಲ್ಲ ಮನೆ ಮಂಜೂರು ಮಾಡಿಕೊಡ್ತೀನಿ’ ಅಂತ ರವಿ ಪುಂಗುತ್ತಿದ್ದುದನ್ನು ನೋಡಿದರೆ ಎಂಥವರಿಗಾದರೂ ಆತ ಅದೆಷ್ಟು ಗಾಬರಿ ಬಿದ್ದು ಮಾತಾಡುತ್ತಿದ್ದಾನೆ ಅನ್ನೋದು ಅರ್ಥವಾಗುತ್ತೆ. ಯಾಕೆಂದರೆ ಈಗ ರವಿಯ ಬಳಿ ಇರೋದು ನೆಪ ಮಾತ್ರದ ಶಾಸಕಗಿರಿ, ನೀತಿಸಂಹಿತೆಯ ಈ ಹಂತದಲ್ಲಿ ಮನೆ ಮಂಜೂರು ಮಾಡಿಸೋದು ಸಾಧ್ಯವಾ? ಇದಿಷ್ಟೂ ವೃತ್ತಾಂತ ಮೊಬೈಲ್‍ಗಳಲ್ಲಿ ಸೆರೆಯಾಗಿ, ವ್ಯಾಟ್ಸಪ್‍ಗಳಲ್ಲಿ ಹರಿದಾಡುತ್ತಾ ರವಿಯ `ಜನಪ್ರಿಯ’ತೆಯನ್ನು ಬಿಚ್ಚಿಡುತ್ತಿವೆ.
ಹಿರೇಗೌಜ ಗ್ರಾಮದಲ್ಲೂ ರವಿಗೆ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು. ಮತಯಾಚನೆಗೆ ಬಂದ ರವಿಗೆ ಅಲ್ಲಿದ್ದ ವೃದ್ದರೊಬ್ಬರು ನೇರವಾಗಿ, `ಯಾಕೆ ಚುನಾವಣೆಗೆ ನಿಲ್ಲುತ್ತೀಯ?’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಗಲಿಬಿಲಿಗೊಂಡು ರವಿ ಅವರು ವಯಸ್ಸಿಗೂ ಗೌರವ ಕೊಡದೆ `ಕಳೆದ ಚುನಾವಣೆಯಲ್ಲಿ ನಿಮ್ಮೂರಿನಲ್ಲಿ ನನಗೆ ಬಂದದ್ದು ಬರೀ ಇನ್ನೂರು ಓಟು ಅಷ್ಟೆ. ಈಗ ಮಾತಾಡಲ್ಲ. ಗೆದ್ದುಬಂದು ಮಾತಾಡ್ತೀನಿ’ ಎಂದು ದರ್ಪ ತೋರಿದ್ದ. ಅದಕ್ಕೆ ಸರಿಯಾಗೇ ಉತ್ತರಕೊಟ್ಟ ಆ ವೃದ್ದರು, `ಅಯ್ಯೋ ಹೋಗಯ್ಯ, ಅದು ಕಳೆದ ಚುನಾವಣೆಯ ಮಾತಾಯ್ತು. ಈ ಸಲ ಇಪ್ಪತ್ತು ಓಟೂ ಬೀಳುವುದಿಲ್ಲ. ಹೋಗಿ ಎಣಿಸಿಕೊಳ್ಳೋಗು’ ಎಂದು ಗ್ರಹಚಾರ ಬಿಡಿಸಿ ಕಳುಹಿಸಿದರಂತೆ.
ಯುವಕರನ್ನು ತನ್ನತ್ತ ಸೆಳೆಯಲು ಗ್ರಾಮ ವಾಸ್ತವ್ಯದ ಹೆಸರಿನಲ್ಲಿ ಡ್ಯಾನ್ಸ್ ಮಾಡಿಕೊಂಡು, ಕಬಡ್ಡಿ ಆಡಿಕೊಂಡು ಜನರಿಗೆ ಹತ್ತಿರವಾಗಲು ರವಿ ಆರಂಭದಲ್ಲಿ ಮಾಡಿದ ಪ್ಲ್ಯಾನು ಕೈಗೂಡಲಿಲ್ಲ. ಕ್ಷೇತ್ರದ ಸಮಸ್ಯೆಗಳನ್ನು ನಗಣ್ಯವಾಗಿಸಿ, ತಮ್ಮ ಮಕ್ಕಳಿಗೆ ಧರ್ಮದ ಅಫೀಮು ತಿನ್ನಿಸಿ ತನ್ನನ್ನು ಮಾತ್ರ ಉದ್ಧಾರ ಮಾಡಿಕೊಂಡ ರವಿಯ ಗ್ರಾಮ ವಾಸ್ತವ್ಯದ ಆಟವನ್ನು ಜನ ತಾನೇ ಹೇಗೆ ನಂಬಿಯಾರು? ಆ ಆಟ ರವಿಗೆ ಎಂಥಾ ಅವಮಾನ ಮಾಡಿತೆಂದರೆ ಕಳಸಾಪುರ ಭಾಗದಲ್ಲಿ ಗ್ರಾಮ ವಾಸ್ತವ್ಯಕ್ಕೆ ತೆರಳಿದ್ದಾಗ ರೊಚ್ಚಿಗೆದ್ದ ರೈತರು ರವಿಗೆ ಬಳೆ, ಸೀರೆಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದರು. ಕೊನೆಗೆ ಪೊಲೀಸರು ಹರಸಾಹಸ ಪಟ್ಟು ರೈತರ ಮನವೊಲಿಸಬೇಕಾಯ್ತು.
ಯಾವಾಗ ಗ್ರಾಮ ವಾಸ್ತವ್ಯ ಪ್ರಯೋಜನಕ್ಕೆ ಬರಲಿಲ್ಲ ಎಂಬುದು ಅರಿವಾಯ್ತೊ ಆಗ ಶಾಸಕ ಹೊಸ ನಾಟಕ ಆರಂಭಿಸಿದ್ದಾನೆ. ಪ್ರತಿ ಗ್ರಾಮಗಳಲ್ಲಿ ಭೇಟಿ ನೀಡಿ `ನೀವು ಒಪ್ಪಿದರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನೀವು ಬೇಡ ಎಂದರೆ ಸ್ಪರ್ಧಿಸುವುದೇ ಇಲ್ಲ’ ಎಂಬ ಸೋಗಲಾಡಿ ಮಾತಾಡುತ್ತಿದ್ದಾನೆ. ಆತನ ಫೆರಿಫೆರಲ್ ಪಟಾಲಮ್ಮನ್ನು ಬಿಟ್ಟಂತೆ ಬಹುತೇಕ ಕಡೆ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂಬ ಅಭಿಪ್ರಾಯಗಳೇ ಕೇಳಿಬರುತ್ತಿವೆಯಂತೆ.
.
ಕ್ಷೇತ್ರಕ್ಕೆ ಕಿವಿಯಾಗದ ರವಿ
ಕೋಮು ರಾಜಕಾರಣ ಮತ್ತು ದ್ವೇಷ ರಾಜಕಾರಣಗಳಲ್ಲಿ ಬೊಬ್ಬೆ ಹಾಕುತ್ತಾ ಮೀಡಿಯಾಗಳಲ್ಲಿ ಪಬ್ಲಿಸಿಟಿ ಪಡೆಯುವ ರವಿ ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದ ಜನರಿಗೆ ಕಿಂಚಿತ್ತೂ ನೆರವಾಗದೆ ಕಾಲಹರಣ ಮಾಡಿದ್ದಾನೆ. ಕೊಟ್ಟ ಭರವಸೆಗಳನ್ನು ಪರಿಣಾಮಕಾರಿಯಾಗಿ  ಪೂರ್ಣಗೊಳಿಸಿಲ್ಲ.
ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದೇನೆ ಆದರೆ ಇದಕ್ಕೆ ವಿರೋಧ ಪಕ್ಷಗಳು ಅಡ್ಡಿಯಾಗಿವೆ ಎಂದು ಜನರ ಎದುರು ರವಿಯೇನೊ ಕಣ್ಣೀರಿನ ನಾಟಕ ಮಾಡುತ್ತಿದ್ದಾನೆ. ಆದರೆ, ಮೆಡಿಕಲ್ ಕಾಲೇಜು ಮಂಜೂರಾತಿ ದೊರೆಯಲು ಕನಿಷ್ಠ ಇನ್ನೂರು ಬೆಡ್ ಹೊಂದಿರುವ ಆಸ್ಪತ್ರೆ ಇರಬೇಕು, ಅಂಥಾ ಸವಲತ್ತು ಈ ಪುಣ್ಯಾತ್ಮ ಅದೆಲ್ಲಿ ಸೃಷ್ಟಿಸಿದ್ದಾನೆ ಅಂತ ಜನ ಹುಡುಕಾಡುತ್ತಿದ್ದಾರೆ. ನಗರದ ಕೋಟೆಕೆರೆ ಹಾಗೂ ಬಸವನಹಳ್ಳಿ ಕೆರೆಯಲ್ಲಿ ಹೂಳು ತೆಗೆಯುತ್ತೇವೆ ಎಂದು ಕೋಟಿಗಟ್ಟಲೆ ಹಣ ಬಾಚಲಾಗಿದೆ. ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ನೀಡಿದ್ದ ಅನುದಾನವನ್ನು ತಾನೇ ತಂದಿದ್ದು ಎಂಬುದಾಗಿ ಪೋಸ್ ಕೊಟ್ಟಿದ್ದ ಇದೀಗ ಮತ್ತೆ ಕೋಟೆಕೆರೆ ಸ್ವಚ್ಛ ಮಾಡುತ್ತೇನೆ ಅಂತ ಪಟಾಲಮ್ಮಿಗೆ ಗುತ್ತಿಗೆ ನೀಡಿದ್ದಾನೆ. ಚೆನ್ನಾಗಿದ್ದ ಎಂಜಿ ರಸ್ತೆ, ಅಂಬೇಡ್ಕರ್ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ಮಾಡುತ್ತೇನೆ ಎಂದು ರವಿ ನಡೆಸಿದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಅವು ರಸ್ತೆಗಳೊ ಅಥವಾ ಹಳ್ಳಗಳೊ ಎಂದು ಭ್ರಮೆ ಹುಟ್ಟಿಸುವಷ್ಟು ಬದಲಾಗಿಹೋಗಿವೆ. ಇನ್ನು ನಗರದ ಯುಜಿಡಿ ಸಂಪೂರ್ಣ ಕಳಪೆಯಾಗಿದ್ದು ವರ್ಷಗಳೇ ಕಳೆದರು ಕಾಮಗಾರಿ ಪೂರ್ಣವಾಗಿಲ್ಲ. 
ಚಿಕ್ಕಮಗಳೂರು ತಾಲ್ಲೂಕಿನ ಬಯಲು ಪ್ರದೇಶಗಳಾದ ಸಖರಾಯಪಟ್ಟಣ ಹಾಗೂ ಲಕ್ಯಾ ಹೋಬಳಿಗೆ ನೀರು ನೀಡುವ ಕರಗಡ ಹಾಗೂ ದಾಸರಹಳ್ಳಿ ಕೆರೆಗೆ ನೀರು ತುಂಬಿಸುತ್ತೇನೆ ಎಂದು ರಾಜಕೀಯ ಮಾಡುತ್ತಿರುವ ಸೀಟಿ ರವಿಗೆ ಇಲ್ಲಿನ ಜನ ಮಂಗಳಾರತಿ ಎತ್ತಿ ಕಳುಹಿಸುತ್ತಿದ್ದಾರೆ. ಕಳೆದ ಹದಿನೈದು ವರ್ಷದಿಂದ ಸುಖಾಸುಮ್ಮನೆ ಬೊಬ್ಬೆ ರಾಜಕಾರಣ ಮಾಡುತ್ತಾ ಕಾಲಹರಣ ಮಾಡಿದ ರವಿ ಇದೀಗ `ಇನ್ನೊಮ್ಮೆ ಗೆಲ್ಲಿಸಿದರೆ ಹೆಬ್ಬೆ ಜಲಪಾತದಿಂದ ಸಖರಾಯಪಟ್ಟಣದ ಅಯ್ಯನಕೆರೆಗೆ ಹಾಗೂ ಹೊನ್ನಮ್ಮನಹಳ್ಳದಿಂದ ದಾಸರಹಳ್ಳಿ ಕೆರೆಗೆ ನೀರು ತರುತ್ತೇನೆ’ ಎಂದು ಪುಂಗಿ ಊದುತ್ತಿದ್ದಾನೆ. ಆದರೆ ಜನರು ನಂಬುವ ಸ್ಥಿತಿಯಲ್ಲಿಲ್ಲ.
ಇಕ್ಕಟ್ಟು ಸೃಷ್ಟಿಸಿದ ಕೆಮಿಸ್ಟ್ರಿ
ರವಿಯ ಜನವಿರೋಧಿ ನಡಾವಳಿಯ ಜೊತೆಗೆ ಈ ಸಲದ ಪೊಲಿಟಿಕಲ್ ಕೆಮಿಸ್ಟ್ರಿಯೂ ಕೈಕೊಡುತ್ತಿದೆ. ಇಲ್ಲಿ ಸುಮಾರು ಅರವತ್ತು ಸಾವಿರದಷ್ಟಿರುವ ಎಸ್ಸಿ, ಎಸ್ಟಿ ಮತಗಳೇ ನಿರ್ಣಾಯಕ. ಇನ್ನುಳಿದಂತೆ ಮೂವತ್ತು ಸಾವಿರ ಮತಗಳನ್ನು ಹೊಂದಿರುವ ಲಿಂಗಾಯತರೂ ಡಿಸಿಸಿವ್ ರೋಲ್ ನಿಭಾಯಿಸುತ್ತಾರೆ. ಕುರುಬರು 25 ಸಾವಿರ, ಮುಸ್ಲಿಮರು 16 ಸಾವಿರ, ಒಕ್ಕಲಿಗರು 10ರಿಂದ 15 ಸಾವಿರ, ದೇವಾಂಗ 10 ಸಾವಿರ ಹೀಗೆ ಅಲ್ಲಿ ಕ್ಯಾಸ್ಟ್ ಕೆಮಿಸ್ಟ್ರಿಯಿದೆ.
ಇಷ್ಟುದಿನ ರವಿಯನ್ನು ಗೆಲ್ಲಿಸುತ್ತಿದ್ದುದೇ ಒಕ್ಕಲಿಗ ಮತ್ತು ಲಿಂಗಾಯತ ಮತಗಳು. ತಕ್ಕಮಟ್ಟಿಗೆ ಕುರುಬರ ಓಟುಗಳೂ ರವಿಯ ಬುಟ್ಟಿಗೆ ಬೀಳುತ್ತಿದ್ದವು. ಮೂರೂ ಪಾರ್ಟಿಗಳು ಇಲ್ಲಿ ಒಕ್ಕಲಿಗ ಕ್ಯಾಂಡಿಡೇಟುಗಳನ್ನೇ ನಿಲ್ಲಿಸುತ್ತಿದ್ದುದು ರವಿಗೆ ಪ್ಲಸ್ ಪಾಯಿಂಟ್ ಆಗುತ್ತಿತ್ತು. ಇಲ್ಲಿ ಒಕ್ಕಲಿಗರು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಪ್ರಭಾವದಲ್ಲಿ ಪ್ರಧಾನವಾಗುತ್ತಾರೆ. ಯಾಕೆಂದರೆ ಬಹುತೇಕ ಶ್ರೀಮಂತ ಪ್ಲಾಂಟರ್‍ಗಳೆಲ್ಲ ಒಕ್ಕಲಿಗರೇ ಆಗಿದ್ದಾರೆ. ಹಾಗಾಗಿ ಅವು ಸ್ಟಾಂಡರ್ಡ್ ಓಟುಗಳೆಂದೇ ಪರಿಗಣಿಸಲ್ಪಟ್ಟಿವೆ. ಅವೆಲ್ಲ ರವಿಯ ಪಾಲಾಗುತ್ತಿದ್ದವು. ಆದರೆ ಈ ಸಲ ಕಾಂಗ್ರೆಸ್‍ನಿಂದ ಒಕ್ಕಲಿಗ ಸಮುದಾಯದ ಬಿ.ಎಲ್.ಶಂಕರ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ರವಿಗೆ ಹೋಲಿಸಿದರೆ ಅವರು ಈ ಸ್ಟಾಂಡರ್ಡ್ ಓಟುಗಳಿಗೆ ಇನ್ನೂ ಸೂಕ್ತ ವ್ಯಕ್ತಿ. ಹಾಗಾಗಿ ಅವು ಕಾಂಗ್ರೆಸ್‍ನತ್ತ ಹರಿದುಬರಲಿವೆ.
ಇನ್ನು ನಿರ್ಣಾಯಕ ಲಿಂಗಾಯತ ಮತಗಳು ಯಡಿಯೂರಪ್ಪನವರ ಕಾರಣಕ್ಕೆ ರವಿಯ ಪಾಲಾಗುತ್ತಿದ್ದವು. ಆದರೆ ಯಾವಾಗ ಸೀಟಿ ರವಿ ಯಡಿಯೂರಪ್ಪನವರ ವಿರುದ್ಧವೇ ರಣಕಹಳೆ ಮೊಳಗಿಸಿದರೊ ಆಗಿನಿಂದ ಆ ಮತಗಳೂ ಆತನಿಂದ ದೂರವಾಗುತ್ತಿವೆ. ಅಲ್ಲದೆ, ಇಷ್ಟು ದಿನ ಒಕ್ಕಲಿಗ ಅಭ್ಯರ್ಥಿಯನ್ನೇ ಫೀಲ್ಡಿಗೆ ಇಳಿಸುತ್ತಿದ್ದ ಜೆಡಿಎಸ್ ಕೂಡಾ ಈ ಸಲ ಬಿ.ಎಚ್.ಹರೀಶ್ ಎಂಬ ಲಿಂಗಾಯತ ಹುರಿಯಾಳನ್ನು ಕಣಕ್ಕಿಳಿಸಿದೆ. ಹಾಗಾಗಿ ಲಿಂಗಾಯತ ಓಟುಗಳು ಅತ್ತ ಹೋಗುವುದರಲ್ಲಿ ಸಂಶಯವಿಲ್ಲ.
ಈ ಸಲ ಎಸ್ಸಿ, ಎಸ್ಟಿ ಮತಗಳು ಯಾವ ಟ್ರೆಂಡ್ ಅನುಸರಿಸಲಿವೆ ಅನ್ನೋದು ಮಾತ್ರ ಇಲ್ಲಿ ನಿರ್ಣಾಯಕ. ಇತ್ತೀಚೆಗಷ್ಟೆ ಚಿಕ್ಕಮಗಳೂರಿನಲ್ಲಿ ಸಭೆ ಸೇರಿದ್ದ ದಲಿತ ಸಂಘಟನೆಗಳು ಒಕ್ಕೊರಲಿನಿಂದ ಎಸ್ಸಿ, ಎಸ್ಟಿ ಕಾಲೋನಿಯಲ್ಲಿ ಬಿಜೆಪಿಯ ಸಂವಿಧಾನ ವಿರೋಧಿ, ದಲಿತ ವಿರೋಧಿ ನಡವಳಿಕೆಯ ವಿರುದ್ಧ ಜಾಗೃತಿ ಮೂಡಿಸುತ್ತೇವೆ ಎಂಬ ನಿರ್ಣಯ ತೆಗೆದುಕೊಂಡಿದ್ದಾರೆ. ಇವೆಲ್ಲ ಸಮೀಕರಣಗಳನ್ನು ತಾಳೆಹಾಕಿ ನೋಡಿದಾಗ ರವಿ ಮಾಜಿಯಾಗುವ ಲಕ್ಷಣಗಳು ಚಿಕ್ಕಮಗಳೂರಿನ ಕಾಫಿ ಅಂಗಳದಲ್ಲಿ ದಿನದಿಂದ ದಿನಕ್ಕೆ ದಟ್ಟವಾಗುತ್ತಿವೆ.
 
—————–  
ರವಿಯ ಗ್ರಾಫೂ, ಮುತಾಲಿಕ್ ಕೊಟ್ಟ ಬಿರುದುಗಳೂ
`ನಮ್ಮ ನಿಮ್ಮ ಪೀಠ ದತ್ತ ಪೀಠ’ ಎಂಬ ಸ್ಲೋಗನ್ನಿನೊಂದಿಗೆ ಅಜಮಾಸು ಹದಿನೈದು ವರ್ಷ ಚಿಕ್ಕಮಗಳೂರಿನಲ್ಲಿ ಶಾಸಕನಾಗಿ ಠಳಾಯಿಸುತ್ತಾ ಬಂದ ರವಿಯಿಂದ ಕ್ಷೇತ್ರಕ್ಕೆ ಹೇಳಿಕೊಳ್ಳುವಂತಹ ಪ್ರಯೋಜನಗಳೇ ಆಗಿಲ್ಲ. ದತ್ತ ಪೀಠವನ್ನು ಹಿಂದೂಗಳ ಪೀಠವನ್ನಾಗಿಸುತ್ತೇನೆ ಎಂದು  ಹಿಂದೂ ಯುವಕರ ಮನೆ ಮಠ ಹಾಳು ಮಾಡಿ ಅವರನ್ನು ಬೀದಿಗೆ ಬೀಳುವಂತೆ ಮಾಡಿದ್ದಾನೆ. ಆದರೆ ತಾನು ಮತ್ತು ತನ್ನ ಸಂಬಂಧಿ ಸುದರ್ಶನ್, ರಾಮನಹಳ್ಳಿ, ಹಿರೇಮಗಳೂರುಗಳಲ್ಲಿ ಭವ್ಯ ಬಂಗಲೆಗಳನ್ನು ನಿರ್ಮಿಸಿಕೊಂಡು ಮರೆಯುತ್ತಿದ್ದಾರೆ.
ಜನರ ಮಾತು ಒತ್ತಟ್ಟಿಗಿರಲಿ, ಒಂದು ಕಾಲಕ್ಕೆ ಸೀಟಿ ರವಿಯ ಕಮ್ಯುನಲ್ ಪಾಟ್ರ್ನರ್‍ನಂತಿದ್ದ ಪ್ರಮೋದ್ ಮುತಾಲಿಕ್ ರವಿಗೆ ಕೊಟ್ಟಿರುವ ಬಿರುದುಗಳನ್ನು ಗಮನಿಸಿದರೆ ಸಾಕು ಸೀಟಿ ರವಿಯ ಮೈಲೇಜು ಅರ್ಥವಾಗಿಬಿಡುತ್ತೆ. `ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸಿದಾಗ ಸಿಟಿ ರವಿ ಎಂಬ ಹೆಸರು ಮಾತ್ರ ಹೊಂದಿದ್ದ ಶಾಸಕ ಎರಡನೇ ಚುನಾವಣೆ ವೇಳೆಗೆ `ಕೋಟಿ’ ರವಿಯಾಗಿ ಬದಲಾಗಿದ್ದ. ಇನ್ನು ಮೂರನೇ ಚುನಾವಣೆ ಗೆಲ್ಲುವಷ್ಟರ ಹೊತ್ತಿಗೆ `ಲೂಟಿ’ ರವಿ ಎಂಬ ಹೆಸರನ್ನು ಪಡೆದಿದ್ದಾನೆ’ ಅಂತ ಮುತಾಲಿಕ್ ಮುಖಸ್ತುತಿ ಮಾಡಿದ ಮೇಲೆ ಆತನನ್ನು ವರ್ಣಿಸಲು ನಮಗೆ ಉಳಿದಿರುವುದಾದರೂ ಏನು? ಗಡ್ಡಧಾರಿ ಅವತಾರದಲ್ಲಿ ಹಿಂದುತ್ವದ ಫೈರ್ ಬ್ರಾಂಡ್ ಅಂಬಾಸಿಡರ್‍ನಂತೆ ಅವತರಿಸಿದ ಅವಕಾಶವಾದಿ ರಾಜಕಾರಣಿ ರವಿ, ಒಂದು ಕಾಲದಲ್ಲಿ ಬೈಕ್‍ಗೆ ಪೆಟ್ರೋಲ್ ತುಂಬಿಸೋಕು ಕಾಸು ಇಲ್ಲದೆ ಓಡಾಡುತ್ತಿದ್ದ. ಆದರೆ ಇವತ್ತು ಕಾಫಿ ನಾಡಿನ ದೊಡ್ಡದೊಡ್ಡ ಪ್ಲಾಂಟರ್‍ಗಳೂ ಕೊಳ್ಳಲಾಗದ ಕಾರುಗಳಲ್ಲಿ ಓಡಾಡಿಕೊಂಡು ಕೋಟಿಕೋಟಿಗೆ ತೂಗುತ್ತಿದ್ದಾನೆ.
 – ಶಿವಕುಮಾರ್ ಹಿರೇಗೌಜ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...