Homeರಾಜಕೀಯಚಿಕ್ಕಮಗಳೂರು: ಸೀಟಿ ರವಿಯ ಹಿಂದೂತ್ವ ಬೇಸು ಕಳಚುತ್ತಿದೆಯೇ?

ಚಿಕ್ಕಮಗಳೂರು: ಸೀಟಿ ರವಿಯ ಹಿಂದೂತ್ವ ಬೇಸು ಕಳಚುತ್ತಿದೆಯೇ?

- Advertisement -
ಚಿಕ್ಕಮಗಳೂರಿನಲ್ಲಿ ಇದೀಗ ಸೀಟಿ ರವಿಗೆ ಸೋಲಿನ ಚಳಿಜ್ವರ ಶುರುವಾದಂತೆ ಕಾಣುತ್ತೆ, ಸತತ ಮೂರು ಬಾರಿ ಸೀಟಿ ರವಿ ಗೆಲ್ಲಲು ಕಾರಣವಾದದ್ದು ದತ್ತ ಪೀಠದ ಸೆನ್ಸೇಷನಲ್ ವಿವಾದ. ಕಾಫಿ ತೋಟಗಳ ಹಸಿರು ಆವರಣದಲ್ಲಿ ತಣ್ಣಗಿದ್ದ ಚಿಕ್ಕಮಗಳೂರಿಗೆ ಹಿಂದೂತ್ವದ ನಶೆ ಏರಿಸಿ, ಅಮಾಯಕ ಶೂದ್ರ ಯುವಕರನ್ನು ಬಳಸಿಕೊಳ್ಳುತ್ತಾ ಬಂದಿದ್ದಷ್ಟೇ ಸೀಟಿ ರವಿಯ ಸಾಧನೆ ಅಂತ ಜನರೇ ಮಾತಾಡಿಕೊಳ್ಳುತ್ತಿರೋದನ್ನು ನೋಡಿದರೆ ಈ ಸಲ ರವಿಯ ಗೆಲುವಿನ ಕೊಂಡಿ ಕಳಚಿ ಬೀಳಬಹುದೆಂಬ ಸೂಚನೆ ಸಿಗುತ್ತಿದೆ. ಕ್ಷೇತ್ರವನ್ನು ಹಾಗೇ ಒಮ್ಮೆ ಸುತ್ತಾಡಿ ಬಂದರೆ ಅದಕ್ಕೆ ಸಾಕಷ್ಟು ನಿದರ್ಶನಗಳೂ ಸಿಗುತ್ತಿವೆ.
ಇತ್ತೀಚೆಗಷ್ಟೆ ಸನ್ಮಾನ್ಯ ರವಿ ಸಾಹೇಬರು ಮತ್ತದೇ ಕೇಸರಿ ದಂಡನ್ನು ಕಟ್ಟಿಕೊಂಡು ಮತ ಯಾಚನೆಗೆ ಅಂತ ಊರೂರು ಅಲೆಯುತ್ತಾ ಅಲ್ಲಂಪುರ ಗ್ರಾಮಕ್ಕೂ ಕಾಲಿಟ್ಟಿದ್ದ. ಐದು ವರ್ಷದ ಹಿಂದೆ ಹಿಂದೂತ್ವದ ಬಾವುಟ ತೋರಿಸಿ ಓಟು ಕಿತ್ತು ಕಣ್ಮರೆಯಾಗಿದ್ದ ರವಿಯನ್ನು ನೋಡಿದ್ದೇ ತಡ ಅಲ್ಲಿನ ಯುವಕರ ತಾರಾಮಾರಿ ತರಾಟೆಗೆ ತೆಗೆದುಕೊಂಡಿದ್ದರು. ಚರಂಡಿಗಳು ಗಬ್ಬೆದ್ದು ನಾರುತ್ತಿವೆ, ಬೇಕಾದವರಿಗೆ ಮನೆ ಲೋನ್‍ಗಳು ಬಿಕರಿಯಾಗುತ್ತಿವೆ, ಬಡವರಿಗೆ ಏನೂ ಸವಲತ್ತು ಸಿಗುತ್ತಿಲ್ಲ ಹೀಗೆ ಪಾಪ, ರವಿ ತಡಬಡಾಯಿಸುವಂತೆ ಪ್ರಶ್ನೆಗಳ ಮಳೆಯನ್ನೇ ಸುರಿಸಿದ್ದರು. `ಆದದ್ದೆಲ್ಲ ಆಗಿ ಹೋಯಿತ್ರಪ್ಪಾ, ಹೀಗೊಂದು ಕೆಲ್ಸ ಮಾಡಿ. ಊರಲ್ಲಿ ಯಾರ್ಯಾರು ಕಡುಬಡವರಿದ್ದಾರೊ ಅವರದ್ದು ಒಂದು ಲಿಸ್ಟ್ ಮಾಡಿ ಕೊಡಿ, ಡೈರೆಕ್ಟಾಗಿ ನನ್ನ ಶಾಸಕ ಅನುದಾನದಿಂದಲೇ ಅವರಿಗೆಲ್ಲ ಮನೆ ಮಂಜೂರು ಮಾಡಿಕೊಡ್ತೀನಿ’ ಅಂತ ರವಿ ಪುಂಗುತ್ತಿದ್ದುದನ್ನು ನೋಡಿದರೆ ಎಂಥವರಿಗಾದರೂ ಆತ ಅದೆಷ್ಟು ಗಾಬರಿ ಬಿದ್ದು ಮಾತಾಡುತ್ತಿದ್ದಾನೆ ಅನ್ನೋದು ಅರ್ಥವಾಗುತ್ತೆ. ಯಾಕೆಂದರೆ ಈಗ ರವಿಯ ಬಳಿ ಇರೋದು ನೆಪ ಮಾತ್ರದ ಶಾಸಕಗಿರಿ, ನೀತಿಸಂಹಿತೆಯ ಈ ಹಂತದಲ್ಲಿ ಮನೆ ಮಂಜೂರು ಮಾಡಿಸೋದು ಸಾಧ್ಯವಾ? ಇದಿಷ್ಟೂ ವೃತ್ತಾಂತ ಮೊಬೈಲ್‍ಗಳಲ್ಲಿ ಸೆರೆಯಾಗಿ, ವ್ಯಾಟ್ಸಪ್‍ಗಳಲ್ಲಿ ಹರಿದಾಡುತ್ತಾ ರವಿಯ `ಜನಪ್ರಿಯ’ತೆಯನ್ನು ಬಿಚ್ಚಿಡುತ್ತಿವೆ.
ಹಿರೇಗೌಜ ಗ್ರಾಮದಲ್ಲೂ ರವಿಗೆ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು. ಮತಯಾಚನೆಗೆ ಬಂದ ರವಿಗೆ ಅಲ್ಲಿದ್ದ ವೃದ್ದರೊಬ್ಬರು ನೇರವಾಗಿ, `ಯಾಕೆ ಚುನಾವಣೆಗೆ ನಿಲ್ಲುತ್ತೀಯ?’ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಗಲಿಬಿಲಿಗೊಂಡು ರವಿ ಅವರು ವಯಸ್ಸಿಗೂ ಗೌರವ ಕೊಡದೆ `ಕಳೆದ ಚುನಾವಣೆಯಲ್ಲಿ ನಿಮ್ಮೂರಿನಲ್ಲಿ ನನಗೆ ಬಂದದ್ದು ಬರೀ ಇನ್ನೂರು ಓಟು ಅಷ್ಟೆ. ಈಗ ಮಾತಾಡಲ್ಲ. ಗೆದ್ದುಬಂದು ಮಾತಾಡ್ತೀನಿ’ ಎಂದು ದರ್ಪ ತೋರಿದ್ದ. ಅದಕ್ಕೆ ಸರಿಯಾಗೇ ಉತ್ತರಕೊಟ್ಟ ಆ ವೃದ್ದರು, `ಅಯ್ಯೋ ಹೋಗಯ್ಯ, ಅದು ಕಳೆದ ಚುನಾವಣೆಯ ಮಾತಾಯ್ತು. ಈ ಸಲ ಇಪ್ಪತ್ತು ಓಟೂ ಬೀಳುವುದಿಲ್ಲ. ಹೋಗಿ ಎಣಿಸಿಕೊಳ್ಳೋಗು’ ಎಂದು ಗ್ರಹಚಾರ ಬಿಡಿಸಿ ಕಳುಹಿಸಿದರಂತೆ.
ಯುವಕರನ್ನು ತನ್ನತ್ತ ಸೆಳೆಯಲು ಗ್ರಾಮ ವಾಸ್ತವ್ಯದ ಹೆಸರಿನಲ್ಲಿ ಡ್ಯಾನ್ಸ್ ಮಾಡಿಕೊಂಡು, ಕಬಡ್ಡಿ ಆಡಿಕೊಂಡು ಜನರಿಗೆ ಹತ್ತಿರವಾಗಲು ರವಿ ಆರಂಭದಲ್ಲಿ ಮಾಡಿದ ಪ್ಲ್ಯಾನು ಕೈಗೂಡಲಿಲ್ಲ. ಕ್ಷೇತ್ರದ ಸಮಸ್ಯೆಗಳನ್ನು ನಗಣ್ಯವಾಗಿಸಿ, ತಮ್ಮ ಮಕ್ಕಳಿಗೆ ಧರ್ಮದ ಅಫೀಮು ತಿನ್ನಿಸಿ ತನ್ನನ್ನು ಮಾತ್ರ ಉದ್ಧಾರ ಮಾಡಿಕೊಂಡ ರವಿಯ ಗ್ರಾಮ ವಾಸ್ತವ್ಯದ ಆಟವನ್ನು ಜನ ತಾನೇ ಹೇಗೆ ನಂಬಿಯಾರು? ಆ ಆಟ ರವಿಗೆ ಎಂಥಾ ಅವಮಾನ ಮಾಡಿತೆಂದರೆ ಕಳಸಾಪುರ ಭಾಗದಲ್ಲಿ ಗ್ರಾಮ ವಾಸ್ತವ್ಯಕ್ಕೆ ತೆರಳಿದ್ದಾಗ ರೊಚ್ಚಿಗೆದ್ದ ರೈತರು ರವಿಗೆ ಬಳೆ, ಸೀರೆಗಳನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದರು. ಕೊನೆಗೆ ಪೊಲೀಸರು ಹರಸಾಹಸ ಪಟ್ಟು ರೈತರ ಮನವೊಲಿಸಬೇಕಾಯ್ತು.
ಯಾವಾಗ ಗ್ರಾಮ ವಾಸ್ತವ್ಯ ಪ್ರಯೋಜನಕ್ಕೆ ಬರಲಿಲ್ಲ ಎಂಬುದು ಅರಿವಾಯ್ತೊ ಆಗ ಶಾಸಕ ಹೊಸ ನಾಟಕ ಆರಂಭಿಸಿದ್ದಾನೆ. ಪ್ರತಿ ಗ್ರಾಮಗಳಲ್ಲಿ ಭೇಟಿ ನೀಡಿ `ನೀವು ಒಪ್ಪಿದರೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನೀವು ಬೇಡ ಎಂದರೆ ಸ್ಪರ್ಧಿಸುವುದೇ ಇಲ್ಲ’ ಎಂಬ ಸೋಗಲಾಡಿ ಮಾತಾಡುತ್ತಿದ್ದಾನೆ. ಆತನ ಫೆರಿಫೆರಲ್ ಪಟಾಲಮ್ಮನ್ನು ಬಿಟ್ಟಂತೆ ಬಹುತೇಕ ಕಡೆ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂಬ ಅಭಿಪ್ರಾಯಗಳೇ ಕೇಳಿಬರುತ್ತಿವೆಯಂತೆ.
.
ಕ್ಷೇತ್ರಕ್ಕೆ ಕಿವಿಯಾಗದ ರವಿ
ಕೋಮು ರಾಜಕಾರಣ ಮತ್ತು ದ್ವೇಷ ರಾಜಕಾರಣಗಳಲ್ಲಿ ಬೊಬ್ಬೆ ಹಾಕುತ್ತಾ ಮೀಡಿಯಾಗಳಲ್ಲಿ ಪಬ್ಲಿಸಿಟಿ ಪಡೆಯುವ ರವಿ ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರದ ಜನರಿಗೆ ಕಿಂಚಿತ್ತೂ ನೆರವಾಗದೆ ಕಾಲಹರಣ ಮಾಡಿದ್ದಾನೆ. ಕೊಟ್ಟ ಭರವಸೆಗಳನ್ನು ಪರಿಣಾಮಕಾರಿಯಾಗಿ  ಪೂರ್ಣಗೊಳಿಸಿಲ್ಲ.
ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದೇನೆ ಆದರೆ ಇದಕ್ಕೆ ವಿರೋಧ ಪಕ್ಷಗಳು ಅಡ್ಡಿಯಾಗಿವೆ ಎಂದು ಜನರ ಎದುರು ರವಿಯೇನೊ ಕಣ್ಣೀರಿನ ನಾಟಕ ಮಾಡುತ್ತಿದ್ದಾನೆ. ಆದರೆ, ಮೆಡಿಕಲ್ ಕಾಲೇಜು ಮಂಜೂರಾತಿ ದೊರೆಯಲು ಕನಿಷ್ಠ ಇನ್ನೂರು ಬೆಡ್ ಹೊಂದಿರುವ ಆಸ್ಪತ್ರೆ ಇರಬೇಕು, ಅಂಥಾ ಸವಲತ್ತು ಈ ಪುಣ್ಯಾತ್ಮ ಅದೆಲ್ಲಿ ಸೃಷ್ಟಿಸಿದ್ದಾನೆ ಅಂತ ಜನ ಹುಡುಕಾಡುತ್ತಿದ್ದಾರೆ. ನಗರದ ಕೋಟೆಕೆರೆ ಹಾಗೂ ಬಸವನಹಳ್ಳಿ ಕೆರೆಯಲ್ಲಿ ಹೂಳು ತೆಗೆಯುತ್ತೇವೆ ಎಂದು ಕೋಟಿಗಟ್ಟಲೆ ಹಣ ಬಾಚಲಾಗಿದೆ. ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ನೀಡಿದ್ದ ಅನುದಾನವನ್ನು ತಾನೇ ತಂದಿದ್ದು ಎಂಬುದಾಗಿ ಪೋಸ್ ಕೊಟ್ಟಿದ್ದ ಇದೀಗ ಮತ್ತೆ ಕೋಟೆಕೆರೆ ಸ್ವಚ್ಛ ಮಾಡುತ್ತೇನೆ ಅಂತ ಪಟಾಲಮ್ಮಿಗೆ ಗುತ್ತಿಗೆ ನೀಡಿದ್ದಾನೆ. ಚೆನ್ನಾಗಿದ್ದ ಎಂಜಿ ರಸ್ತೆ, ಅಂಬೇಡ್ಕರ್ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ಮಾಡುತ್ತೇನೆ ಎಂದು ರವಿ ನಡೆಸಿದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆಗಾಲದಲ್ಲಿ ಅವು ರಸ್ತೆಗಳೊ ಅಥವಾ ಹಳ್ಳಗಳೊ ಎಂದು ಭ್ರಮೆ ಹುಟ್ಟಿಸುವಷ್ಟು ಬದಲಾಗಿಹೋಗಿವೆ. ಇನ್ನು ನಗರದ ಯುಜಿಡಿ ಸಂಪೂರ್ಣ ಕಳಪೆಯಾಗಿದ್ದು ವರ್ಷಗಳೇ ಕಳೆದರು ಕಾಮಗಾರಿ ಪೂರ್ಣವಾಗಿಲ್ಲ. 
ಚಿಕ್ಕಮಗಳೂರು ತಾಲ್ಲೂಕಿನ ಬಯಲು ಪ್ರದೇಶಗಳಾದ ಸಖರಾಯಪಟ್ಟಣ ಹಾಗೂ ಲಕ್ಯಾ ಹೋಬಳಿಗೆ ನೀರು ನೀಡುವ ಕರಗಡ ಹಾಗೂ ದಾಸರಹಳ್ಳಿ ಕೆರೆಗೆ ನೀರು ತುಂಬಿಸುತ್ತೇನೆ ಎಂದು ರಾಜಕೀಯ ಮಾಡುತ್ತಿರುವ ಸೀಟಿ ರವಿಗೆ ಇಲ್ಲಿನ ಜನ ಮಂಗಳಾರತಿ ಎತ್ತಿ ಕಳುಹಿಸುತ್ತಿದ್ದಾರೆ. ಕಳೆದ ಹದಿನೈದು ವರ್ಷದಿಂದ ಸುಖಾಸುಮ್ಮನೆ ಬೊಬ್ಬೆ ರಾಜಕಾರಣ ಮಾಡುತ್ತಾ ಕಾಲಹರಣ ಮಾಡಿದ ರವಿ ಇದೀಗ `ಇನ್ನೊಮ್ಮೆ ಗೆಲ್ಲಿಸಿದರೆ ಹೆಬ್ಬೆ ಜಲಪಾತದಿಂದ ಸಖರಾಯಪಟ್ಟಣದ ಅಯ್ಯನಕೆರೆಗೆ ಹಾಗೂ ಹೊನ್ನಮ್ಮನಹಳ್ಳದಿಂದ ದಾಸರಹಳ್ಳಿ ಕೆರೆಗೆ ನೀರು ತರುತ್ತೇನೆ’ ಎಂದು ಪುಂಗಿ ಊದುತ್ತಿದ್ದಾನೆ. ಆದರೆ ಜನರು ನಂಬುವ ಸ್ಥಿತಿಯಲ್ಲಿಲ್ಲ.
ಇಕ್ಕಟ್ಟು ಸೃಷ್ಟಿಸಿದ ಕೆಮಿಸ್ಟ್ರಿ
ರವಿಯ ಜನವಿರೋಧಿ ನಡಾವಳಿಯ ಜೊತೆಗೆ ಈ ಸಲದ ಪೊಲಿಟಿಕಲ್ ಕೆಮಿಸ್ಟ್ರಿಯೂ ಕೈಕೊಡುತ್ತಿದೆ. ಇಲ್ಲಿ ಸುಮಾರು ಅರವತ್ತು ಸಾವಿರದಷ್ಟಿರುವ ಎಸ್ಸಿ, ಎಸ್ಟಿ ಮತಗಳೇ ನಿರ್ಣಾಯಕ. ಇನ್ನುಳಿದಂತೆ ಮೂವತ್ತು ಸಾವಿರ ಮತಗಳನ್ನು ಹೊಂದಿರುವ ಲಿಂಗಾಯತರೂ ಡಿಸಿಸಿವ್ ರೋಲ್ ನಿಭಾಯಿಸುತ್ತಾರೆ. ಕುರುಬರು 25 ಸಾವಿರ, ಮುಸ್ಲಿಮರು 16 ಸಾವಿರ, ಒಕ್ಕಲಿಗರು 10ರಿಂದ 15 ಸಾವಿರ, ದೇವಾಂಗ 10 ಸಾವಿರ ಹೀಗೆ ಅಲ್ಲಿ ಕ್ಯಾಸ್ಟ್ ಕೆಮಿಸ್ಟ್ರಿಯಿದೆ.
ಇಷ್ಟುದಿನ ರವಿಯನ್ನು ಗೆಲ್ಲಿಸುತ್ತಿದ್ದುದೇ ಒಕ್ಕಲಿಗ ಮತ್ತು ಲಿಂಗಾಯತ ಮತಗಳು. ತಕ್ಕಮಟ್ಟಿಗೆ ಕುರುಬರ ಓಟುಗಳೂ ರವಿಯ ಬುಟ್ಟಿಗೆ ಬೀಳುತ್ತಿದ್ದವು. ಮೂರೂ ಪಾರ್ಟಿಗಳು ಇಲ್ಲಿ ಒಕ್ಕಲಿಗ ಕ್ಯಾಂಡಿಡೇಟುಗಳನ್ನೇ ನಿಲ್ಲಿಸುತ್ತಿದ್ದುದು ರವಿಗೆ ಪ್ಲಸ್ ಪಾಯಿಂಟ್ ಆಗುತ್ತಿತ್ತು. ಇಲ್ಲಿ ಒಕ್ಕಲಿಗರು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಪ್ರಭಾವದಲ್ಲಿ ಪ್ರಧಾನವಾಗುತ್ತಾರೆ. ಯಾಕೆಂದರೆ ಬಹುತೇಕ ಶ್ರೀಮಂತ ಪ್ಲಾಂಟರ್‍ಗಳೆಲ್ಲ ಒಕ್ಕಲಿಗರೇ ಆಗಿದ್ದಾರೆ. ಹಾಗಾಗಿ ಅವು ಸ್ಟಾಂಡರ್ಡ್ ಓಟುಗಳೆಂದೇ ಪರಿಗಣಿಸಲ್ಪಟ್ಟಿವೆ. ಅವೆಲ್ಲ ರವಿಯ ಪಾಲಾಗುತ್ತಿದ್ದವು. ಆದರೆ ಈ ಸಲ ಕಾಂಗ್ರೆಸ್‍ನಿಂದ ಒಕ್ಕಲಿಗ ಸಮುದಾಯದ ಬಿ.ಎಲ್.ಶಂಕರ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ರವಿಗೆ ಹೋಲಿಸಿದರೆ ಅವರು ಈ ಸ್ಟಾಂಡರ್ಡ್ ಓಟುಗಳಿಗೆ ಇನ್ನೂ ಸೂಕ್ತ ವ್ಯಕ್ತಿ. ಹಾಗಾಗಿ ಅವು ಕಾಂಗ್ರೆಸ್‍ನತ್ತ ಹರಿದುಬರಲಿವೆ.
ಇನ್ನು ನಿರ್ಣಾಯಕ ಲಿಂಗಾಯತ ಮತಗಳು ಯಡಿಯೂರಪ್ಪನವರ ಕಾರಣಕ್ಕೆ ರವಿಯ ಪಾಲಾಗುತ್ತಿದ್ದವು. ಆದರೆ ಯಾವಾಗ ಸೀಟಿ ರವಿ ಯಡಿಯೂರಪ್ಪನವರ ವಿರುದ್ಧವೇ ರಣಕಹಳೆ ಮೊಳಗಿಸಿದರೊ ಆಗಿನಿಂದ ಆ ಮತಗಳೂ ಆತನಿಂದ ದೂರವಾಗುತ್ತಿವೆ. ಅಲ್ಲದೆ, ಇಷ್ಟು ದಿನ ಒಕ್ಕಲಿಗ ಅಭ್ಯರ್ಥಿಯನ್ನೇ ಫೀಲ್ಡಿಗೆ ಇಳಿಸುತ್ತಿದ್ದ ಜೆಡಿಎಸ್ ಕೂಡಾ ಈ ಸಲ ಬಿ.ಎಚ್.ಹರೀಶ್ ಎಂಬ ಲಿಂಗಾಯತ ಹುರಿಯಾಳನ್ನು ಕಣಕ್ಕಿಳಿಸಿದೆ. ಹಾಗಾಗಿ ಲಿಂಗಾಯತ ಓಟುಗಳು ಅತ್ತ ಹೋಗುವುದರಲ್ಲಿ ಸಂಶಯವಿಲ್ಲ.
ಈ ಸಲ ಎಸ್ಸಿ, ಎಸ್ಟಿ ಮತಗಳು ಯಾವ ಟ್ರೆಂಡ್ ಅನುಸರಿಸಲಿವೆ ಅನ್ನೋದು ಮಾತ್ರ ಇಲ್ಲಿ ನಿರ್ಣಾಯಕ. ಇತ್ತೀಚೆಗಷ್ಟೆ ಚಿಕ್ಕಮಗಳೂರಿನಲ್ಲಿ ಸಭೆ ಸೇರಿದ್ದ ದಲಿತ ಸಂಘಟನೆಗಳು ಒಕ್ಕೊರಲಿನಿಂದ ಎಸ್ಸಿ, ಎಸ್ಟಿ ಕಾಲೋನಿಯಲ್ಲಿ ಬಿಜೆಪಿಯ ಸಂವಿಧಾನ ವಿರೋಧಿ, ದಲಿತ ವಿರೋಧಿ ನಡವಳಿಕೆಯ ವಿರುದ್ಧ ಜಾಗೃತಿ ಮೂಡಿಸುತ್ತೇವೆ ಎಂಬ ನಿರ್ಣಯ ತೆಗೆದುಕೊಂಡಿದ್ದಾರೆ. ಇವೆಲ್ಲ ಸಮೀಕರಣಗಳನ್ನು ತಾಳೆಹಾಕಿ ನೋಡಿದಾಗ ರವಿ ಮಾಜಿಯಾಗುವ ಲಕ್ಷಣಗಳು ಚಿಕ್ಕಮಗಳೂರಿನ ಕಾಫಿ ಅಂಗಳದಲ್ಲಿ ದಿನದಿಂದ ದಿನಕ್ಕೆ ದಟ್ಟವಾಗುತ್ತಿವೆ.
 
—————–  
ರವಿಯ ಗ್ರಾಫೂ, ಮುತಾಲಿಕ್ ಕೊಟ್ಟ ಬಿರುದುಗಳೂ
`ನಮ್ಮ ನಿಮ್ಮ ಪೀಠ ದತ್ತ ಪೀಠ’ ಎಂಬ ಸ್ಲೋಗನ್ನಿನೊಂದಿಗೆ ಅಜಮಾಸು ಹದಿನೈದು ವರ್ಷ ಚಿಕ್ಕಮಗಳೂರಿನಲ್ಲಿ ಶಾಸಕನಾಗಿ ಠಳಾಯಿಸುತ್ತಾ ಬಂದ ರವಿಯಿಂದ ಕ್ಷೇತ್ರಕ್ಕೆ ಹೇಳಿಕೊಳ್ಳುವಂತಹ ಪ್ರಯೋಜನಗಳೇ ಆಗಿಲ್ಲ. ದತ್ತ ಪೀಠವನ್ನು ಹಿಂದೂಗಳ ಪೀಠವನ್ನಾಗಿಸುತ್ತೇನೆ ಎಂದು  ಹಿಂದೂ ಯುವಕರ ಮನೆ ಮಠ ಹಾಳು ಮಾಡಿ ಅವರನ್ನು ಬೀದಿಗೆ ಬೀಳುವಂತೆ ಮಾಡಿದ್ದಾನೆ. ಆದರೆ ತಾನು ಮತ್ತು ತನ್ನ ಸಂಬಂಧಿ ಸುದರ್ಶನ್, ರಾಮನಹಳ್ಳಿ, ಹಿರೇಮಗಳೂರುಗಳಲ್ಲಿ ಭವ್ಯ ಬಂಗಲೆಗಳನ್ನು ನಿರ್ಮಿಸಿಕೊಂಡು ಮರೆಯುತ್ತಿದ್ದಾರೆ.
ಜನರ ಮಾತು ಒತ್ತಟ್ಟಿಗಿರಲಿ, ಒಂದು ಕಾಲಕ್ಕೆ ಸೀಟಿ ರವಿಯ ಕಮ್ಯುನಲ್ ಪಾಟ್ರ್ನರ್‍ನಂತಿದ್ದ ಪ್ರಮೋದ್ ಮುತಾಲಿಕ್ ರವಿಗೆ ಕೊಟ್ಟಿರುವ ಬಿರುದುಗಳನ್ನು ಗಮನಿಸಿದರೆ ಸಾಕು ಸೀಟಿ ರವಿಯ ಮೈಲೇಜು ಅರ್ಥವಾಗಿಬಿಡುತ್ತೆ. `ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸಿದಾಗ ಸಿಟಿ ರವಿ ಎಂಬ ಹೆಸರು ಮಾತ್ರ ಹೊಂದಿದ್ದ ಶಾಸಕ ಎರಡನೇ ಚುನಾವಣೆ ವೇಳೆಗೆ `ಕೋಟಿ’ ರವಿಯಾಗಿ ಬದಲಾಗಿದ್ದ. ಇನ್ನು ಮೂರನೇ ಚುನಾವಣೆ ಗೆಲ್ಲುವಷ್ಟರ ಹೊತ್ತಿಗೆ `ಲೂಟಿ’ ರವಿ ಎಂಬ ಹೆಸರನ್ನು ಪಡೆದಿದ್ದಾನೆ’ ಅಂತ ಮುತಾಲಿಕ್ ಮುಖಸ್ತುತಿ ಮಾಡಿದ ಮೇಲೆ ಆತನನ್ನು ವರ್ಣಿಸಲು ನಮಗೆ ಉಳಿದಿರುವುದಾದರೂ ಏನು? ಗಡ್ಡಧಾರಿ ಅವತಾರದಲ್ಲಿ ಹಿಂದುತ್ವದ ಫೈರ್ ಬ್ರಾಂಡ್ ಅಂಬಾಸಿಡರ್‍ನಂತೆ ಅವತರಿಸಿದ ಅವಕಾಶವಾದಿ ರಾಜಕಾರಣಿ ರವಿ, ಒಂದು ಕಾಲದಲ್ಲಿ ಬೈಕ್‍ಗೆ ಪೆಟ್ರೋಲ್ ತುಂಬಿಸೋಕು ಕಾಸು ಇಲ್ಲದೆ ಓಡಾಡುತ್ತಿದ್ದ. ಆದರೆ ಇವತ್ತು ಕಾಫಿ ನಾಡಿನ ದೊಡ್ಡದೊಡ್ಡ ಪ್ಲಾಂಟರ್‍ಗಳೂ ಕೊಳ್ಳಲಾಗದ ಕಾರುಗಳಲ್ಲಿ ಓಡಾಡಿಕೊಂಡು ಕೋಟಿಕೋಟಿಗೆ ತೂಗುತ್ತಿದ್ದಾನೆ.
 – ಶಿವಕುಮಾರ್ ಹಿರೇಗೌಜ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...