Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತಥೂತ್ತೇರಿ: ರಾಜ್ಯೋತ್ಸವ ಪ್ರಶಸ್ತೀನ ರಸ್ತೆ ಮಾಡೋರಿಗೆ, ಮನೆಕಟ್ಟೋರಿಗೂ ಕೊಡ್ಬೇಕು ಕಣ್ರೀ...

ಥೂತ್ತೇರಿ: ರಾಜ್ಯೋತ್ಸವ ಪ್ರಶಸ್ತೀನ ರಸ್ತೆ ಮಾಡೋರಿಗೆ, ಮನೆಕಟ್ಟೋರಿಗೂ ಕೊಡ್ಬೇಕು ಕಣ್ರೀ…

- Advertisement -
- Advertisement -

ಯಾಹೂ |

ಮೋಹನ್‌ರಾಂ ಎಂಬ ತಿಕ್ಕಲು ಬ್ರಾಹ್ಮಣ ಲಂಕೇಶರಿಂದ ಉಗಿಸಿಕೊಂಡು ಹೋದ 36 ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡಿದ್ದಾನಂತಲ್ಲಾ. ಅಂದರೆ ಲಂಕೇಶ್ ಎಷ್ಟರ ಮಟ್ಟಿಗೆ ಉಗಿದಿರಬಹುದೆಂದು ವೇದ್ಯವಾಗುತ್ತದೆ. ಇಂತವನನ್ನು ನೋಡಿಯೇ ಏನೋ ದೇವನೂರು ಒಂದು ಕತೆ ಬರೆದಿದ್ದರು. ಮೋಹನ ಶಾಸ್ತ್ರಿ ಎಂಬ ಗುಮಾಸ್ತನಿದ್ದ. ಅವನ ಬಾಸು ಲಂಕೇಗೌಡ. ಈ ಲಂಕೇಗೌಡ ಗುಮಾಸ್ತನಿಗೆ ಕೆಟ್ಟದಾಗಿ ಬೈಯ್ಯುತ್ತಿದ್ದ. ಇದರಿಂದ ಸೇಡಿಗೆ ತುತ್ತಾದ ಮೋಹನಶಾಸ್ತ್ರಿ ಲಂಕೇಗೌಡನ ಸರ‍್ವಿಸ್ ರಿಜಿಸ್ಟರಿನಲ್ಲಿ ಗೌಡನ ಆಕಾರ ಬರೆದು ಮುಂದಿನ ಎರಡು ಹಲ್ಲಿಲ್ಲ ಎಂದು ಬರೆದು ನಿವೃತ್ತನಾಗಿದ್ದನಂತೆ. ಲಂಕೇಗೌಡ ನಿವೃತ್ತನಾಗುವಾಗ ಅನಿವಾರ್ಯವಾಗಿ ಎರಡಲ್ಲು ಕೀಳಿಸಿಕೊಂಡು ಪಿಂಚನಿ ಪಡೆದನಂತೆ. ನಮ್ಮ ನಡುವಿನ ಪುರೋಹಿತಶಾಹಿಗಳ ಪಿಂಡಗಳು ಆಂತರ್ಯದಲ್ಲಿ ಹೊಂದಿರುವ ಹಗೆ ಎಂತದ್ದು ಎಂಬುದನ್ನು ಹೇಳಲು ದೇವನೂರು ಈ ಕತೆಯನ್ನು ಪಂಚಮದಲ್ಲಿ ಬರೆದಿದ್ದರು. ಮೂವತ್ತಾರು ವರ್ಷಗಳ ನಂತರ ಲಂಕೇಶರ ಹಲ್ಲು ಎಣಿಸಿರುವ ಸದರಿ ಮೋಹನ್ ರಾಂ ಎಂಬುವನ ಬಗ್ಗೆ ಲಂಕೇಶ್ ಹೇಳಿದ್ದೇನೆಂದರೆ, ‘ಆತ ಸುಳ್ಳು ಬರೆಯುತ್ತಾನೆ, ಈಗತಾನೆ ಬಾಂಬೆಯಿಂದ ಬಂದೆ. ಅಮಿತಾ ಬಚ್ಚನ್ ಇಂಟ್ರೂ ಮಾಡಿದೆ ಎಂದು ಮನೆಯಲ್ಲಿ ಕುಳಿತು ಬರೆದು ತಂದಿದ್ದ ಅದಕ್ಕೆ ಓಡಿಸಿದೆ’ ಎಂದು ಹೇಳಿದ್ದರಲ್ಲಾ, ಥೂತ್ತೇರಿ.

* * * *

ಎಂದಿನಂತೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಪ್ರಕಟಣೆಗೊಂಡಿವೆ. ಸಮ್ಮಿಶ್ರ ಸರಕಾರವೊಂದು ನೇಮಿಸಿದ್ದ ಆಯ್ಕೆ ಸಮಿತಿಯ ಸದರಿ ವಿದ್ವಾಂಸರು ಆಯ್ಕೆ ಮಾಡಿದ ಪ್ರತಿಭಾವಂತರ ಬಗ್ಗೆ ಚಕಾರವೆತ್ತದ ಜಯಮಾಲ ಹಾಗು ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನೇನು ಅನುಮೋದನೆಯ ಸೀಲು ಒತ್ತಿ ಪತ್ರಿಕೆಗಳಿಗೆ ಬಿಡುಗಡೆ ಮಡಬೇಕೆನ್ನುವಷ್ಟರಲ್ಲಿ ಸದರಿ ಪಟ್ಟಿಯನ್ನು ಕಿತ್ತುಕೊಂಡ ಡಿ.ಕೆ.ಶಿವಕುಮಾರ್ ಎಂಬ ಕರ್ನಾಟಕ ರಾಜಕಾರಣದ ಸಮಸ್ಯೆ, ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅಂದ್ರೆ ಬರೀ ಸಾಹಿತಿಗಳು, ಜನಪದ ಕಲಾವಿದರಿಗಷ್ಟೇ ಕೊಡಬಾರ್ದು ಕಂಡ್ರೀ. ರಾಜಕಾರಣಿಗಳು, ನಮಗೆ ಪಾಠ ಹೇಳಿದ ಮೇಷ್ಟ್ರು, ನಮ್ಮ ಪರ ವಾದ ಮಾಡೋ ಲಾಯರ್‌ಗಳು, ರಸ್ತೆ ಮಾಡೋರು, ಮನೆಕಟ್ಟೋರನ್ನೂ ಪರಿಗಣಿಸಬೇಕು’ ಎಂದು ರಾಜ್ಯೋತ್ಸವ ಪಟ್ಟಿಯೊಳಕ್ಕೆ ತನ್ನ ಅಭಿರುಚಿಯನ್ನ ಸೇರಿಸಿದರಂತಲ್ಲಾ. ಆಗ ಮುಖ್ಯಮಂತ್ರಿಯಾಗಿ ಯಾರನ್ನು ಸೇರಿಸಲಾಗದ ಕುಮಾರಸ್ವಾಮಿ ಅನಿವಾರ್ಯವಾಗಿ ಡಿ.ಕೆ.ಸಿ. ಅಭಿರುಚಿಯನ್ನು ಮನ್ನಿಸಿದರಂತಲ್ಲಾ, ಥೂತ್ತೇರಿ.

* * * *

ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ತಮ್ಮ ಮಹತ್ವ ಕಳೆದುಕೊಂಡಿದ್ದು ಬಂಗಾರಪ್ಪನ ಕಾಲದಲ್ಲಂತಲ್ಲಾ. ಹಿಂದುಳಿದ ವರ್ಗದ ನಾಯಕರಾದ ಬಂ ಸಾಮಾಜಿಕ ನ್ಯಾಯವನ್ನು ರಾಜ್ಯೋತ್ಸವ ಪ್ರಶಸ್ತಿ ಮುಖಾಂತರ ಸರಿಮಾಡಲು ಹೋಗಿ ಪ್ರಶಸ್ತಿ ಹಂಚಿದ ಪರಿಗೆ ಬೆದರಿದ ಪತ್ರಕರ್ತರು ಇದೇನು ಸಾರ್ ಅನರ್ಹರಿಗೆಲ್ಲಾ ಪ್ರಶಸ್ತಿ ಕೊಟ್ಟರಲ್ಲ ಎಂದಾಗ ಅರ್ಹರಿಗೆ ಮುಂದಿನ ಬಾರಿ ಕೊಡೋಣ ಬಿಡಿ ಎಂದರು. ಅರ್ಹರ‍್ಯಾರು, ಅವರು ಪಡೆದ ಸವಲತ್ತುಗಳೇನು ಎಂಬುದು ’ಬಂ’ಗೆ ಗೊತ್ತಿತ್ತು. ಆ ನಂತರ ಬಂದ ಬಿ.ಜೆ.ಪಿ ಸರಕಾರದಲ್ಲಿ ಬಿಸಿಬೇಳೆ ಬಾತು ಮಾಡುವವರಿಗೆಲ್ಲಾ ಪ್ರಶಸ್ತಿಗಳು ಸಿಕ್ಕವು. ಒಂದೆರಡು ಕನ್ನಡ ರಾಜ್ಯೋತ್ಸವ ಮಾಡಿದವನಿಗೂ ಈಶ್ವರಪ್ಪ ಪ್ರಶಸ್ತಿ ಕೊಡಿಸಿದರೆ, ನಾನು ಈಶ್ವರಪ್ಪನಿಗೇನು ಕಡಿಮೆ ಎಂದು ಭಾವಿಸಿದ ಯಡೂರಪ್ಪನ ಮಗಳು ಮಾತುಮಾತಿಗು ತನ್ನನ್ನು ನಗಿಸುತ್ತಿದ್ದ ಹುಡುಗನಿಗೂ ಒಂದು ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿದಳು. ಅದೇ ತರಹ ಈಗೊಂದು ಪ್ರಶಸ್ತಿ ವ್ಯರ್ಥವಾಗಿ ಹೋಯ್ತು. ಪ್ರತಿಭಾವಂತರೊಬ್ಬರ ಕೈಯಿಂದ ಪ್ರಶಸ್ತಿ ಕಿತ್ತುಕೊಂಡ ಡಿ.ಕೆ.ಶಿ ಅದನ್ನ ಮಾರ್ಗರೇಟ್ ಆಳ್ವರಿಗೆ ಕೊಟ್ಟಿದ್ದಾರೆ. ಈ ಮಾಜಿ ರಾಜ್ಯಪಾಲೆ ನಿರಾಕರಿಸಬಹುದಿತ್ತು. ಎಲ್ಲರ ಬಳಿ ಘನತೆವೆತ್ತ ಗುಣ ಸುಳಿಯುವುದು ಕಡಿಮೆಯಂತಲ್ಲಾ, ಥೂತ್ತೇರಿ.

* * * *

ರಾಜ್ಯೋತ್ಸವ ಪ್ರಶಸ್ತಿ ವಿಷಯ ಬಿತ್ತರಿಸುವಲ್ಲಿ ಕೆಲವು ಪತ್ರಿಕೆಗಳು ಹರಾಜಾಗಿ ಹೋದವಂತಲ್ಲಾ ಉದಾಹರಣೆ ಕೊಡುವುದಾದರೆ, ಪ್ರಶಸ್ತಿಯ ಆಯ್ಕೆ ಸಮಿತಿಯೇ ರಚನೆಯಾಗಿಲ್ಲ ಎಂದು ಅವು ಕರೆಯುತ್ತಿದ್ದಾಗ ಆಯ್ಕೆ ಸಮಿತಿ ಕಲಾಗ್ರಾಮದಲ್ಲಿ ಆಯ್ಕೆಯಲ್ಲಿ ನಿರತವಾಗಿತ್ತು. ಎರಡೂ ಪಕ್ಷದ ಒತ್ತಡದಲ್ಲಿ ಕುಮಾರಸ್ವಾಮಿ ನಲುಗಿ ಹೋಗಿದ್ದಾರೆ ಎಂದು ಬರೆಯುತ್ತಿದ್ದಾಗ ಕುಮಾರಸ್ವಾಮಿ ಚುನಾವಣಾ ಪ್ರಚಾರದಲ್ಲಿದ್ದರು.

ಪ್ರಶಸ್ತಿ ಕೊಡುವ ಹಿಂದಿನ ದಿನ ಆಯ್ಕೆ ನಡೆಸಿ ಮರುದಿನ ವಿತರಿಸಲಾಗುವುದೆಂದು ಪತ್ರಿಕೆಗಳು ಬರೆಯುವಾಗ ಎರಡು ವಾರಗಳ ಆಯ್ಕೆ ಪರಿಶ್ರಮದಿಂದ ಮುಕ್ತವಾದ ಆಯ್ಕೆ ಸಮಿತಿ ಕುಮಾರಸ್ವಾಮಿಗೆ ತಮ್ಮ ವರದಿಕೊಟ್ಟಿತ್ತು. ಹೀಗೆ ಮನಸ್ಸಿಗೆ ಬಂದ ವರದಿ ಬರೆಯುತ್ತಿದ್ದ ಪತ್ರಿಕೆಗಳನ್ನು ಕಂಡು ನಗುವುದರ ಬದಲು ನಗಿಸಲಾಗುತ್ತಿತ್ತು. ಏಕೆಂದರೆ ಏನೊಂದೂ ಪರಿಶೀಲಿಸದೆ ಕುಳಿತಲ್ಲೇ ಒಂದು ಊಹಾತ್ಮಕ ವರದಿ ಬರೆದು ಕೊಡುವುದರಿಂದ ಅನಾಹುತಗಳು ಜರುಗುವ ಸಂಭವವಿರುತ್ತದೆ. ಪಬ್ಲಿಕ್ ಟಿವಿಯ ಕಡ್ಡಿ ರಂಗ ಚಿಕ್ಕಮಗಳೂರು ಡಿ.ವೈ.ಎಸ್.ಪಿ ವಿಷಯದಲ್ಲಿಯೂ ಹೀಗೆಯೇ ಸುಳ್ಳು ಸುದ್ದಿ ಬಿತ್ತರಿಸಿದ್ದ. ಅವರ ಆತ್ಮಹತ್ಯೆಗೆ ಕಾರಣನಾದವರು ನಮ್ಮ ಕಣ್ಣು ಮುಂದಿರುವುದರಿಂದ ಪತ್ರಕರ್ತರು ಆದಷ್ಟೂ ಕಣ್ಣು ಕಿವಿ ತೊಳೆಯುವುದೊಳ್ಳೆಯದಂತಲ್ಲಾ, ಥೂತ್ತೇರಿ.

* * * *

ಪ್ರಶಸ್ತಿಗಳ ಬಗ್ಗೆ ಮನಸ್ಸಿಗೆ ಬಂದ ಸುಳ್ಳು ಸುದ್ದಿ ಬರೆದ ಪತ್ರಿಕೆಗಳು ಆ ನಂತರ ತಮ್ಮ ಜವಾಬ್ದಾರಿಯ ಕಡೆ ಗಮನಹರಿಸಲಿಲ್ಲವಂತಲ್ಲಾ. ಆಯ್ಕೆಯಾದ ೬೩ ಜನರಲ್ಲಿನ ವೈವಿಧ್ಯಮಯ ಪ್ರತಿಭೆ ಬೆರಗು ಹುಟ್ಟಿಸುವಂತಿತ್ತು. ತಮ್ಮ ಕ್ಷೌರದ ಅಂಗಡಿಯಲ್ಲೇ ಸಮಾಜವಾದದ ಚಳುವಳಿ ರೂಪಿಸಿದ ರಾಚಪ್ಪ ಹಡಪದ. ಇವರನ್ನು ನೋಡಿ ಮಾತನಾಡಿಸಲು ತೇಜಸ್ವಿ ಸ್ಕೂಟರಿನಲ್ಲೇ ಹೋಗಿದ್ದರಂತೆ. ಇನ್ನು ಕೈಗೆ ಕಾಸು ಸಿಕ್ಕ ಕೂಡಲೇ ಕೆರೆ, ಚೆಕ್ ಡ್ಯಾಂ ಕಟ್ಟುವ ಕಲ್ಮನೆ ಕಾಮೇಗೌಡ, ಆ ಕಾಲಕ್ಕೆ ಕ್ರಾಂತಿ ಮಾಡಿದ ಅಮ್ಮೆಂಬಳ ಆನಂದ, ಜನಪದ ನಿಧಿ ಗುಲ್ಬರ್ಗದ ಶಂಕ್ರಮ್ಮ ಇಂತಹ ಇತಿಹಾಸಗಳನ್ನ ಕೆದಕಿದರೆ ಸಾಕು, ಸಾರ್ಥಕ ಬದುಕೊಂದು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಹೊಸ ತಲೆಮಾರಿಗೆ ಇವರ ಬದುಕು ಸ್ಪೂರ್ತಿ ನೀಡಬಲ್ಲದು. ಇವರ ಪ್ರತಿಭೆ ಪ್ರಭಾವ ಬೀರಬಹುದು. ಇದಾವುದನ್ನು ಗ್ರಹಿಸದೆ ಕೇವಲ ಅವರ ಹೆಸರುಗಳನ್ನಷ್ಟೇ ಪ್ರಕಟಿಸಿ ಕೈತೊಳೆದುಕೊಂಡ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಸತ್ತು ಎಷ್ಟೋ ವರ್ಷಗಳಾಗಿವೆಯಂತಲ್ಲಾ. ವಿಶೇಷವೆಂದರೆ, ಸಾಂಸ್ಕೃತಿಕವಾಗಿ ಸತ್ತಂತಿರುವ ಈ ಮಾಧ್ಯಮಗಳ ವಿಷಯದಲ್ಲಿ ಜನರೂ ಕೂಡ ನಿರ್ಲಕ್ಷ್ಯದಿಂದಿದ್ದಾರಂತಲ್ಲಾ, ಥೂತ್ತೇರಿ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...