Homeಕರ್ನಾಟಕಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡರ ರಾಜಕೀಯ ಮುಗಿದಂತೆ

ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡರ ರಾಜಕೀಯ ಮುಗಿದಂತೆ

- Advertisement -
- Advertisement -

| ಎನ್.ಗೌಡ |

ದೇವೇಗೌಡರ ರಾಜಕೀಯ ಗ್ರಾಫ್ ಅತ್ಯಂತ ಪಾತಾಳಕ್ಕಿಳಿದ ಹಲವು ಸಂದರ್ಭಗಳು ಕಳೆದ ನಾಲ್ಕು ದಶಕಗಳಲ್ಲಿ ಬಂದು ಹೋಗಿವೆ. ಆದರೆ, ಅವರು ಮತ್ತೆ ಮತ್ತೆ ಫೀನಿಕ್ಸ್ (ಧೂಳಿನಿಂದ ಮೇಲೆದ್ದು ಬರುತ್ತೇನೆ ಎಂದು ವಿದಾಯ ಭಾಷಣದಲ್ಲಿ ಪ್ರಧಾನಿ ದೇವೇಗೌಡರು ಸಂಸತ್ತಿನಲ್ಲಿ ಅಬ್ಬರಿಸಿದ್ದರು)ನಂತೆ ಮೇಲೇಳುತ್ತಾ ಬರುತ್ತಾರೆ. ಹಾಗೆ ಮೇಲೆದ್ದು ಬರುವಾಗ ಅವರಿಗೆ ಸಾಥ್ ಕೊಟ್ಟ ಕೆಲವು ನಿರ್ದಿಷ್ಟ ಭಾಗಗಳಿವೆ. ನಿಧಾನಕ್ಕೆ ಅಂತಹ ಕ್ಷೇತ್ರಗಳ ಮೇಲೆ ಅವರ ಹಿಡಿತವೂ ಹೆಚ್ಚಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಸಹಾ ಅವುಗಳಲ್ಲಿ ಒಂದು. ಭೌಗೋಳಿಕವಾಗಿ ಒಂದು ಕಡೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರ ತಾಲೂಕುಗಳಿಗೆ ಅದು ಹೊಂದಿಕೊಂಡಿರುವುದೂ ಅದಕ್ಕೆ ಕಾರಣವಿರಬಹುದು. ಇದೇ ಕ್ಷೇತ್ರದ ಎಂಎಲ್‍ಎ ಕೆ.ಸಿ.ನಾರಾಯಣಗೌಡ ಈಗ ರಾಜೀನಾಮೆ ಕೊಟ್ಟು ಮುಂಬೈನ ಸೋಫಿಟೆಲ್ ಸೇರಿಕೊಂಡಿರುವವರಲ್ಲಿ ಒಬ್ಬರು.

ಕೆ.ಆರ್.ಪೇಟೆ ಕೃಷ್ಣ ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ಕಾಲ ದೇವೇಗೌಡರ ಪಕ್ಷವನ್ನು ಪ್ರತಿನಿಧಿಸಿದ್ದ ಹಿರಿಯ ರಾಜಕಾರಣಿ. ಒಮ್ಮೆ ಸಂಸತ್ ಸದಸ್ಯರೂ (ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ) ಆಗಿದ್ದ ಅವರು 2004ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಧಿಕಾರಕ್ಕೆ ಬಂದಾಗ ಸ್ಪೀಕರ್ ಆಗಿದ್ದರು. ನಂತರದ ಜೆಡಿಎಸ್-ಬಿಜೆಪಿ ಮೈತ್ರಿಯನ್ನೂ (ದೇವೇಗೌಡರ ಸೂಚನೆಗಳಿಗನುಗುಣವಾಗಿ) ಸ್ಪೀಕರ್ ಆಗಿ ನಿಭಾಯಿಸಿದ್ದರು. 2008ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಕೆ.ಬಿ.ಚಂದ್ರಶೇಖರ್ ಎದುರು ಸೋತಿದ್ದರು. ಕೇವಲ 3,500 ಮತಗಳಿಂದ ಸೋತಿದ್ದರಿಂದ ನಂತರದ ಸಾಲಿನಲ್ಲಿ, ಅಂದರೆ 2013ರಲ್ಲೂ ತಮಗೇ ಟಿಕೆಟ್ ಎಂದು ಕೃಷ್ಣ ಭಾವಿಸಿದ್ದು ಸಹಜವಾಗಿತ್ತು. ಆದರೆ ಮುಂಬೈನಲ್ಲಿ ಹೋಟೆಲ್ ಮತ್ತಿತರ ಬಿಸಿನೆಸ್ ಮಾಡಿಕೊಂಡಿದ್ದ ಕೆ.ಸಿ.ನಾರಾಯಣಗೌಡರು ಅಷ್ಟು ಹೊತ್ತಿಗೆ ಕೆ.ಆರ್.ಪೇಟೆಯಲ್ಲಿ ‘ಸಮಾಜ ಸೇವೆ’ ಶುರು ಹಚ್ಚಿಕೊಂಡಿದ್ದರು.

ಹಣದ ಕುಳಗಳಿಗೆ ಮೊದಲ ಆದ್ಯತೆ ಕೊಡುವ ದೇವೇಗೌಡರ ಮನದಿಂಗಿತ ಅರಿವಾಗತೊಡಗಿ ಕೃಷ್ಣರಿಗೆ ಆತಂಕ ಶುರುವಾಯಿತು. ‘ಏನು ಮಾಡೋಣ ಗುರುಗಳೇ, ನಮಗೂ ಚುನಾವಣೆ ನಡೆಸಲು ಹಣದ ಅಗತ್ಯ ಇರುತ್ತೆ. ಬಹಳ ಕಷ್ಟದಲ್ಲಿದ್ದೇವೆ’ ಎಂದರು ದೊಡ್ಡಗೌಡರು. ಪ್ರಾಮಾಣಿಕತೆ ಮತ್ತಿತರ ಸಾರ್ವಜನಿಕ ಮೌಲ್ಯಗಳನ್ನು ಇನ್ನೂ ಉಳಿಸಿಕೊಂಡಿದ್ದ ಕೃಷ್ಣರಿಗೆ ಬೇರೆ ದಾರಿಯಿರಲಿಲ್ಲ. ದೇವೇಗೌಡರ ಬಳಿ ಹೋಗಿ ‘ನಾನು ಅನ್ಯಾಯದ ಹಣ ಸಂಪಾದನೆ ಮಾಡಿಲ್ಲ; ನನ್ನದೊಂದು ಸೈಟ್ ಇದೆ. ಅದನ್ನು ಮಾರಿ ಎಷ್ಟು ಹಣ ಬರುತ್ತೋ ಅಷ್ಟನ್ನು ಕೊಡುತ್ತೇನೆ’ ಎಂದರು. ‘ಸರಿ ನೋಡೋಣ’ ಎಂದ ದೊಡ್ಡಗೌಡರು, ಟಿಕೆಟ್ ಕೊಟ್ಟಿದ್ದು ಕೆ.ಸಿ.ನಾರಾಯಣಗೌಡರಿಗೆ!

ಬೇಸತ್ತ ಕೃಷ್ಣ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್‍ನ ಪಾರಂಪರಿಕ ಓಟ್‍ಬ್ಯಾಂಕ್ ಮತ್ತು ತಮ್ಮ ಕುಟುಂಬದ ಹಿಡಿತ ಎರಡನ್ನೂ ಹೊಂದಿದ್ದ ಕೆಬಿಸಿ ಎರಡನೇ ಸ್ಥಾನಕ್ಕೆ ಬಂದರು. 30,000 ಮತಗಳನ್ನು ಪಡೆದ ಕೃಷ್ಣ ಅವರು ಮೂರನೇ ಸ್ಥಾನದಲ್ಲಿದ್ದರು. ಹೀಗಿದ್ದೂ ಜೆಡಿಎಸ್ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಗೆದ್ದರು. ಇದು ದೇವೇಗೌಡರು ಮತ್ತು ಅವರ ಪಕ್ಷಕ್ಕೆ ಕೆ.ಆರ್.ಪೇಟೆ ಮತದಾರರು ತೋರಿದ ನಿಷ್ಠೆಯ ಪ್ರತೀಕವಾಗಿತ್ತು. ಅದು 2018ರ ಚುನಾವಣೆಯಲ್ಲೂ ಎದ್ದು ಕಂಡಿತು.

ಈ ಸಾರಿ ಕೆ.ಸಿ.ಎನ್.ಗೆ ಟಿಕೆಟ್ ಇಲ್ಲ ಎಂಬ ಸಂದೇಶ ಹರಿದಾಡಲು ಆರಂಭವಾಯಿತು. ಅದಕ್ಕೆ ತಕ್ಕಂತೆ ಟಿಕೆಟ್ ಹಂಚಿಕೆಯ ಮೊದಲ ಪಟ್ಟಿಗಳಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಅಭ್ಯರ್ಥಿಯ ಘೋಷಣೆಯೂ ಆಗಲಿಲ್ಲ. ಅನಿವಾರ್ಯವಾಗಿ ಮತ್ತೊಮ್ಮೆ ಕಪ್ಪ ಸಲ್ಲಿಸಿ ನಾರಾಯಣಗೌಡರು ಟಿಕೆಟ್ ಪಡೆದುಕೊಂಡರು. ತಾನು ಭ್ರಷ್ಟಾಚಾರ ಮಾಡಲಿಲ್ಲ, ಪಕ್ಷಕ್ಕೆ ನಿಷ್ಠನಾಗಿದ್ದೆ, ಇದ್ದುದರಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೇನೆ, ನನ್ನಂಥವನಿಗೆ ಹೀಗೆ ಮಾಡಿದರಲ್ಲಾ ಎಂಬ ಸಿಟ್ಟು ನಾರಾಯಣಗೌಡರಲ್ಲಿ ಹುಟ್ಟಿಕೊಂಡು ಬೆಳೆದು ಇದೀಗ ಅದು ಬಂಡಾಯವೇಳುವವರೆಗೆ ಕೊಂಡೊಯ್ದಿದೆ. ಏಕೆಂದರೆ, ಸ್ವತಃ ದುಡ್ಡಿನ ಕುಳವಾದ ಗೌಡರಿಗೆ ಬಿಜೆಪಿಯ 30 ಕೋಟಿ ಆಸೆ ಹುಟ್ಟಿಸಿರಲಾರದು. ಆದರೆ ನಾರಾಯಣಗೌಡರು ಮರೆಯುತ್ತಿರುವ ಒಂದು ವಿಷಯವಿದೆ. ಈ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕೃಷ್ಣ ಅವರೂ ಕೆ.ಬಿ.ಸಿಗೇ ಬೆಂಬಲಿಸಿದ್ದರೂ, ನಾರಾಯಣಗೌಡರು 17,000ಕ್ಕೂ ಹೆಚ್ಚು ಅಂತರದಿಂದ ಗೆಲ್ಲಲು ಜೆಡಿಎಸ್ ಟಿಕೆಟ್ಟೇ ಕಾರಣ. ದೇವೇಗೌಡರು ಕೆ.ಆರ್.ಪೇಟೆಯವರಿಗೆ ಅದೇನು ಮಾಯ ಮಾಡಿದ್ದಾರೋ ಗೊತ್ತಿಲ್ಲ ಎಂದು ಜನ ಆಡಿಕೊಳ್ಳುವ ಹಾಗೆ ಫಲಿತಾಂಶ ಬಂದಿತು.

ಬಹುಶಃ ಇದೇ ಪರಿಸ್ಥಿತಿ ಎಚ್.ವಿಶ್ವನಾಥ್‍ರಿಗೂ ಉಂಟಾಗಬಹುದು. ಏಕೆಂದರೆ ಕೆ.ಆರ್.ನಗರದಲ್ಲಿ ಮತ್ತೆ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಇದ್ದ ವಿಶ್ವನಾಥ್‍ರಿಗೆ ಜಿಟಿಡಿ ಪ್ರತಿನಿಧಿಸುತ್ತಿದ್ದ ಹುಣಸೂರನ್ನು ದೇವೇಗೌಡರು ಕೊಡಿಸಿದ್ದರು. ಇನ್ನೊಬ್ಬ ಜೆಡಿಎಸ್ ಶಾಸಕ ಮಹಾಲಕ್ಷ್ಮಿ ಲೇಔಟ್‍ನ ಗೋಪಾಲಯ್ಯರ ಪರಿಸ್ಥಿತಿ ಮಾತ್ರ ಭಿನ್ನ ಇರಬಹುದು. ನಗರ ಪ್ರದೇಶದಲ್ಲಿ ಬಿಜೆಪಿಗೆ ಸೇರಿದರೆ ಅನುಕೂಲವೂ ಉಂಟಾಗಬಹುದು. ಆದರೆ ಜೆಡಿಎಸ್‍ನ ಬೆಂಬಲ ಇಲ್ಲದೇ ಎಚ್.ವಿಶ್ವನಾಥ್ ಮತ್ತೆ ಹುಣಸೂರಿನಲ್ಲಿ ಗೆಲ್ಲುವುದು ಅನುಮಾನ.

ಕೆ.ಆರ್.ಪೇಟೆಯ ವಿಚಾರದಲ್ಲಿ ಅಂತಹ ಯಾವ ಅನುಮಾನವೂ ಇಲ್ಲ ಎಂಬುದು ಮಂಡ್ಯ ಜಿಲ್ಲೆಯ ರಾಜಕಾರಣ ಗೊತ್ತಿದ್ದವರ ಅನಿಸಿಕೆ. ಮೊನ್ನಿನ ಲೋಕಸಭಾ ಚುನಾವಣೆಯ ಅಲೆಯ ಸ್ವರೂಪ ಬೇರೆ ಇತ್ತು. ಅದನ್ನು ಇಟ್ಟುಕೊಂಡು ‘ದೇವೇಗೌಡರ ಕುಟುಂಬಕ್ಕೆ ಅವಮಾನ ಮಾಡಿದ’ ನಾರಾಯಣಗೌಡರನ್ನು ಕೆ.ಆರ್.ಪೇಟೆಯ ಜನರು ಬಿಜೆಪಿ ಅಭ್ಯರ್ಥಿಯನ್ನಾಗಿ ಗೆಲ್ಲಿಸುವುದು ಸಾಧ್ಯವೇ ಇಲ್ಲ ಎಂಬುದು ಸ್ಥಳೀಯರ ಅನಿಸಿಕೆ. ಅಲ್ಲಿಗೆ ನಾರಾಯಣಗೌಡರ ರಾಜಕಾರಣ ಮುಗಿಯಿತೇ ಎಂಬ ಪ್ರಶ್ನೆಗೆ ಮುಂದಿನ ತಿಂಗಳುಗಳು ಉತ್ತರ ನೀಡುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...