Homeಕರ್ನಾಟಕಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡರ ರಾಜಕೀಯ ಮುಗಿದಂತೆ

ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡರ ರಾಜಕೀಯ ಮುಗಿದಂತೆ

- Advertisement -
- Advertisement -

| ಎನ್.ಗೌಡ |

ದೇವೇಗೌಡರ ರಾಜಕೀಯ ಗ್ರಾಫ್ ಅತ್ಯಂತ ಪಾತಾಳಕ್ಕಿಳಿದ ಹಲವು ಸಂದರ್ಭಗಳು ಕಳೆದ ನಾಲ್ಕು ದಶಕಗಳಲ್ಲಿ ಬಂದು ಹೋಗಿವೆ. ಆದರೆ, ಅವರು ಮತ್ತೆ ಮತ್ತೆ ಫೀನಿಕ್ಸ್ (ಧೂಳಿನಿಂದ ಮೇಲೆದ್ದು ಬರುತ್ತೇನೆ ಎಂದು ವಿದಾಯ ಭಾಷಣದಲ್ಲಿ ಪ್ರಧಾನಿ ದೇವೇಗೌಡರು ಸಂಸತ್ತಿನಲ್ಲಿ ಅಬ್ಬರಿಸಿದ್ದರು)ನಂತೆ ಮೇಲೇಳುತ್ತಾ ಬರುತ್ತಾರೆ. ಹಾಗೆ ಮೇಲೆದ್ದು ಬರುವಾಗ ಅವರಿಗೆ ಸಾಥ್ ಕೊಟ್ಟ ಕೆಲವು ನಿರ್ದಿಷ್ಟ ಭಾಗಗಳಿವೆ. ನಿಧಾನಕ್ಕೆ ಅಂತಹ ಕ್ಷೇತ್ರಗಳ ಮೇಲೆ ಅವರ ಹಿಡಿತವೂ ಹೆಚ್ಚಾಗಿದೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಸಹಾ ಅವುಗಳಲ್ಲಿ ಒಂದು. ಭೌಗೋಳಿಕವಾಗಿ ಒಂದು ಕಡೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮತ್ತು ಹೊಳೆನರಸೀಪುರ ತಾಲೂಕುಗಳಿಗೆ ಅದು ಹೊಂದಿಕೊಂಡಿರುವುದೂ ಅದಕ್ಕೆ ಕಾರಣವಿರಬಹುದು. ಇದೇ ಕ್ಷೇತ್ರದ ಎಂಎಲ್‍ಎ ಕೆ.ಸಿ.ನಾರಾಯಣಗೌಡ ಈಗ ರಾಜೀನಾಮೆ ಕೊಟ್ಟು ಮುಂಬೈನ ಸೋಫಿಟೆಲ್ ಸೇರಿಕೊಂಡಿರುವವರಲ್ಲಿ ಒಬ್ಬರು.

ಕೆ.ಆರ್.ಪೇಟೆ ಕೃಷ್ಣ ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ಕಾಲ ದೇವೇಗೌಡರ ಪಕ್ಷವನ್ನು ಪ್ರತಿನಿಧಿಸಿದ್ದ ಹಿರಿಯ ರಾಜಕಾರಣಿ. ಒಮ್ಮೆ ಸಂಸತ್ ಸದಸ್ಯರೂ (ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ) ಆಗಿದ್ದ ಅವರು 2004ರಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಧಿಕಾರಕ್ಕೆ ಬಂದಾಗ ಸ್ಪೀಕರ್ ಆಗಿದ್ದರು. ನಂತರದ ಜೆಡಿಎಸ್-ಬಿಜೆಪಿ ಮೈತ್ರಿಯನ್ನೂ (ದೇವೇಗೌಡರ ಸೂಚನೆಗಳಿಗನುಗುಣವಾಗಿ) ಸ್ಪೀಕರ್ ಆಗಿ ನಿಭಾಯಿಸಿದ್ದರು. 2008ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಕೆ.ಬಿ.ಚಂದ್ರಶೇಖರ್ ಎದುರು ಸೋತಿದ್ದರು. ಕೇವಲ 3,500 ಮತಗಳಿಂದ ಸೋತಿದ್ದರಿಂದ ನಂತರದ ಸಾಲಿನಲ್ಲಿ, ಅಂದರೆ 2013ರಲ್ಲೂ ತಮಗೇ ಟಿಕೆಟ್ ಎಂದು ಕೃಷ್ಣ ಭಾವಿಸಿದ್ದು ಸಹಜವಾಗಿತ್ತು. ಆದರೆ ಮುಂಬೈನಲ್ಲಿ ಹೋಟೆಲ್ ಮತ್ತಿತರ ಬಿಸಿನೆಸ್ ಮಾಡಿಕೊಂಡಿದ್ದ ಕೆ.ಸಿ.ನಾರಾಯಣಗೌಡರು ಅಷ್ಟು ಹೊತ್ತಿಗೆ ಕೆ.ಆರ್.ಪೇಟೆಯಲ್ಲಿ ‘ಸಮಾಜ ಸೇವೆ’ ಶುರು ಹಚ್ಚಿಕೊಂಡಿದ್ದರು.

ಹಣದ ಕುಳಗಳಿಗೆ ಮೊದಲ ಆದ್ಯತೆ ಕೊಡುವ ದೇವೇಗೌಡರ ಮನದಿಂಗಿತ ಅರಿವಾಗತೊಡಗಿ ಕೃಷ್ಣರಿಗೆ ಆತಂಕ ಶುರುವಾಯಿತು. ‘ಏನು ಮಾಡೋಣ ಗುರುಗಳೇ, ನಮಗೂ ಚುನಾವಣೆ ನಡೆಸಲು ಹಣದ ಅಗತ್ಯ ಇರುತ್ತೆ. ಬಹಳ ಕಷ್ಟದಲ್ಲಿದ್ದೇವೆ’ ಎಂದರು ದೊಡ್ಡಗೌಡರು. ಪ್ರಾಮಾಣಿಕತೆ ಮತ್ತಿತರ ಸಾರ್ವಜನಿಕ ಮೌಲ್ಯಗಳನ್ನು ಇನ್ನೂ ಉಳಿಸಿಕೊಂಡಿದ್ದ ಕೃಷ್ಣರಿಗೆ ಬೇರೆ ದಾರಿಯಿರಲಿಲ್ಲ. ದೇವೇಗೌಡರ ಬಳಿ ಹೋಗಿ ‘ನಾನು ಅನ್ಯಾಯದ ಹಣ ಸಂಪಾದನೆ ಮಾಡಿಲ್ಲ; ನನ್ನದೊಂದು ಸೈಟ್ ಇದೆ. ಅದನ್ನು ಮಾರಿ ಎಷ್ಟು ಹಣ ಬರುತ್ತೋ ಅಷ್ಟನ್ನು ಕೊಡುತ್ತೇನೆ’ ಎಂದರು. ‘ಸರಿ ನೋಡೋಣ’ ಎಂದ ದೊಡ್ಡಗೌಡರು, ಟಿಕೆಟ್ ಕೊಟ್ಟಿದ್ದು ಕೆ.ಸಿ.ನಾರಾಯಣಗೌಡರಿಗೆ!

ಬೇಸತ್ತ ಕೃಷ್ಣ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್‍ನ ಪಾರಂಪರಿಕ ಓಟ್‍ಬ್ಯಾಂಕ್ ಮತ್ತು ತಮ್ಮ ಕುಟುಂಬದ ಹಿಡಿತ ಎರಡನ್ನೂ ಹೊಂದಿದ್ದ ಕೆಬಿಸಿ ಎರಡನೇ ಸ್ಥಾನಕ್ಕೆ ಬಂದರು. 30,000 ಮತಗಳನ್ನು ಪಡೆದ ಕೃಷ್ಣ ಅವರು ಮೂರನೇ ಸ್ಥಾನದಲ್ಲಿದ್ದರು. ಹೀಗಿದ್ದೂ ಜೆಡಿಎಸ್ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಗೆದ್ದರು. ಇದು ದೇವೇಗೌಡರು ಮತ್ತು ಅವರ ಪಕ್ಷಕ್ಕೆ ಕೆ.ಆರ್.ಪೇಟೆ ಮತದಾರರು ತೋರಿದ ನಿಷ್ಠೆಯ ಪ್ರತೀಕವಾಗಿತ್ತು. ಅದು 2018ರ ಚುನಾವಣೆಯಲ್ಲೂ ಎದ್ದು ಕಂಡಿತು.

ಈ ಸಾರಿ ಕೆ.ಸಿ.ಎನ್.ಗೆ ಟಿಕೆಟ್ ಇಲ್ಲ ಎಂಬ ಸಂದೇಶ ಹರಿದಾಡಲು ಆರಂಭವಾಯಿತು. ಅದಕ್ಕೆ ತಕ್ಕಂತೆ ಟಿಕೆಟ್ ಹಂಚಿಕೆಯ ಮೊದಲ ಪಟ್ಟಿಗಳಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಅಭ್ಯರ್ಥಿಯ ಘೋಷಣೆಯೂ ಆಗಲಿಲ್ಲ. ಅನಿವಾರ್ಯವಾಗಿ ಮತ್ತೊಮ್ಮೆ ಕಪ್ಪ ಸಲ್ಲಿಸಿ ನಾರಾಯಣಗೌಡರು ಟಿಕೆಟ್ ಪಡೆದುಕೊಂಡರು. ತಾನು ಭ್ರಷ್ಟಾಚಾರ ಮಾಡಲಿಲ್ಲ, ಪಕ್ಷಕ್ಕೆ ನಿಷ್ಠನಾಗಿದ್ದೆ, ಇದ್ದುದರಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೇನೆ, ನನ್ನಂಥವನಿಗೆ ಹೀಗೆ ಮಾಡಿದರಲ್ಲಾ ಎಂಬ ಸಿಟ್ಟು ನಾರಾಯಣಗೌಡರಲ್ಲಿ ಹುಟ್ಟಿಕೊಂಡು ಬೆಳೆದು ಇದೀಗ ಅದು ಬಂಡಾಯವೇಳುವವರೆಗೆ ಕೊಂಡೊಯ್ದಿದೆ. ಏಕೆಂದರೆ, ಸ್ವತಃ ದುಡ್ಡಿನ ಕುಳವಾದ ಗೌಡರಿಗೆ ಬಿಜೆಪಿಯ 30 ಕೋಟಿ ಆಸೆ ಹುಟ್ಟಿಸಿರಲಾರದು. ಆದರೆ ನಾರಾಯಣಗೌಡರು ಮರೆಯುತ್ತಿರುವ ಒಂದು ವಿಷಯವಿದೆ. ಈ ಚುನಾವಣೆಯಲ್ಲಿ ಕೆ.ಆರ್.ಪೇಟೆ ಕೃಷ್ಣ ಅವರೂ ಕೆ.ಬಿ.ಸಿಗೇ ಬೆಂಬಲಿಸಿದ್ದರೂ, ನಾರಾಯಣಗೌಡರು 17,000ಕ್ಕೂ ಹೆಚ್ಚು ಅಂತರದಿಂದ ಗೆಲ್ಲಲು ಜೆಡಿಎಸ್ ಟಿಕೆಟ್ಟೇ ಕಾರಣ. ದೇವೇಗೌಡರು ಕೆ.ಆರ್.ಪೇಟೆಯವರಿಗೆ ಅದೇನು ಮಾಯ ಮಾಡಿದ್ದಾರೋ ಗೊತ್ತಿಲ್ಲ ಎಂದು ಜನ ಆಡಿಕೊಳ್ಳುವ ಹಾಗೆ ಫಲಿತಾಂಶ ಬಂದಿತು.

ಬಹುಶಃ ಇದೇ ಪರಿಸ್ಥಿತಿ ಎಚ್.ವಿಶ್ವನಾಥ್‍ರಿಗೂ ಉಂಟಾಗಬಹುದು. ಏಕೆಂದರೆ ಕೆ.ಆರ್.ನಗರದಲ್ಲಿ ಮತ್ತೆ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಸ್ಥಿತಿ ಇದ್ದ ವಿಶ್ವನಾಥ್‍ರಿಗೆ ಜಿಟಿಡಿ ಪ್ರತಿನಿಧಿಸುತ್ತಿದ್ದ ಹುಣಸೂರನ್ನು ದೇವೇಗೌಡರು ಕೊಡಿಸಿದ್ದರು. ಇನ್ನೊಬ್ಬ ಜೆಡಿಎಸ್ ಶಾಸಕ ಮಹಾಲಕ್ಷ್ಮಿ ಲೇಔಟ್‍ನ ಗೋಪಾಲಯ್ಯರ ಪರಿಸ್ಥಿತಿ ಮಾತ್ರ ಭಿನ್ನ ಇರಬಹುದು. ನಗರ ಪ್ರದೇಶದಲ್ಲಿ ಬಿಜೆಪಿಗೆ ಸೇರಿದರೆ ಅನುಕೂಲವೂ ಉಂಟಾಗಬಹುದು. ಆದರೆ ಜೆಡಿಎಸ್‍ನ ಬೆಂಬಲ ಇಲ್ಲದೇ ಎಚ್.ವಿಶ್ವನಾಥ್ ಮತ್ತೆ ಹುಣಸೂರಿನಲ್ಲಿ ಗೆಲ್ಲುವುದು ಅನುಮಾನ.

ಕೆ.ಆರ್.ಪೇಟೆಯ ವಿಚಾರದಲ್ಲಿ ಅಂತಹ ಯಾವ ಅನುಮಾನವೂ ಇಲ್ಲ ಎಂಬುದು ಮಂಡ್ಯ ಜಿಲ್ಲೆಯ ರಾಜಕಾರಣ ಗೊತ್ತಿದ್ದವರ ಅನಿಸಿಕೆ. ಮೊನ್ನಿನ ಲೋಕಸಭಾ ಚುನಾವಣೆಯ ಅಲೆಯ ಸ್ವರೂಪ ಬೇರೆ ಇತ್ತು. ಅದನ್ನು ಇಟ್ಟುಕೊಂಡು ‘ದೇವೇಗೌಡರ ಕುಟುಂಬಕ್ಕೆ ಅವಮಾನ ಮಾಡಿದ’ ನಾರಾಯಣಗೌಡರನ್ನು ಕೆ.ಆರ್.ಪೇಟೆಯ ಜನರು ಬಿಜೆಪಿ ಅಭ್ಯರ್ಥಿಯನ್ನಾಗಿ ಗೆಲ್ಲಿಸುವುದು ಸಾಧ್ಯವೇ ಇಲ್ಲ ಎಂಬುದು ಸ್ಥಳೀಯರ ಅನಿಸಿಕೆ. ಅಲ್ಲಿಗೆ ನಾರಾಯಣಗೌಡರ ರಾಜಕಾರಣ ಮುಗಿಯಿತೇ ಎಂಬ ಪ್ರಶ್ನೆಗೆ ಮುಂದಿನ ತಿಂಗಳುಗಳು ಉತ್ತರ ನೀಡುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...