- Advertisement -
ಭಾರತೀಯ ವಾಯುಸೇನೆ ಬಾಲಕೋಟ್ ಮೇಲೆ ನಡೆಸಿದ ದಾಳಿಯಿಂದಾಗಿ ಬಿಜೆಪಿ ಕರ್ನಾಟಕದಲ್ಲಿ 22 ಸ್ಥಾನ ಗೆಲ್ಲೋದು ಗ್ಯಾರಂಟಿ ಅನ್ನೋ ಸ್ಟೇಟ್ಮೆಂಟ್ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಇಡೀ ದೇಶದ ಮಾನವನ್ನೇ ಹರಾಜು ಹಾಕಿದ್ದಾರೆ. ಸೇನೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಬಿಜೆಪಿ ಯೋಜಿಸಿದೆಯಾ? ಅನ್ನೋ ಪ್ರಶ್ನೆ ಇದೀಗ ಲೋಕಸಭಾ ಚುನಾವಣಾ ಹೊಸ್ತಿಲಲ್ಲಿರುವ ದೇಶದ ನಾಗರೀಕರನ್ನು ಕಾಡಲು ಶುರು ಮಾಡಿರುವ ಹೊತ್ತಿನಲ್ಲೇ, ಅತ್ತ ಪಾಕಿಸ್ತಾನವು ಕೂಡಾ ಯಡಿಯೂರಪ್ಪನವರ ಈ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ಜಾಗತಿಕ ವೇದಿಕೆಗಳಲ್ಲಿ ಭಾರತವನ್ನು ಏಕಾಂಗಿಯಾಗಿಸುವ ಯತ್ನದಲ್ಲಿದೆ!
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್-ಇ-ಇನ್ಸಾಪ್ (ಪಿಟಿಐ) ಪಕ್ಷದ ನಾಯಕರುಗಳು ಯಡಿಯೂರಪ್ಪನವರ ಹೇಳಿಕೆ ಇರುವ ವೀಡಿಯೋವನ್ನು ಟ್ಯಾಗ್ ಮಾಡಿ “ಎಲೆಕ್ಷನ್ನಲ್ಲಿ ಗೆಲ್ಲಲು ಹತಾಶೆಗೊಂಡಿರುವ ಜನರ ಹುನ್ನಾರದಿಂದಾಗಿ ಭಾರತೀಯರು ಯುದ್ಧೋನ್ಮಾದಕ್ಕೆ ಬಲಿಯಾಗಿದ್ದಾರೆ” ಎಂದು ಹೀಗಳೆದಿದ್ದಾರೆ. ಪತ್ರಕರ್ತೆ ಬರ್ಖಾ ದತ್ ಅವರು ಯಡಿಯೂರಪ್ಪನವರ ಹೇಳಿಕೆಯನ್ನು ಖಂಡಿಸಿದ್ದ ಟ್ವೀಟ್ ಅನ್ನು ಉಲ್ಲೇಖಿಸುತ್ತಾ ಪಾರ್ಟಿಯ ಅಧಿಕೃತ ಅಕೌಂಟ್ನಲ್ಲಿ ಇವತ್ತು (ಫೆಬ್ರವರಿ 28, ಗುರುವಾರ) ಹೀಗೆ ಟ್ವೀಟ್ ಮಾಡಲಾಗಿದೆ.
ಇದು ಹೊರಬಿದ್ದ ಅರ್ಧಗಂಟೆಯಲ್ಲೇ, ಪಿಟಿಐ ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಯುದ್ಧವನ್ನು ಎಲೆಕ್ಷನ್ ತಂತ್ರವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಪಿಟಿಐನ ಟ್ವೀಟ್ಗಳಿಗೆ ಎರಡು ಉದ್ದೇಶಗಳಿರುವಂತಿದೆ:
- ಎಲೆಕ್ಷನ್ ಗೆಲ್ಲಲು ಹತಾಶೆಗೊಂಡಿರುವ ಒಬ್ಬ ವ್ಯಕ್ತಿಯ (ಪ್ರಧಾನಿ ನರೇಂದ್ರ ಮೋದಿ ಎಂದು ಪರೋಕ್ಷವಾಗಿ ಸೂಚಿಸುತ್ತದೆ) ಅನರ್ಥ ಯತ್ನದಿಂದಾಗಿ ‘ಪಾಕಿಸ್ತಾನದ ವಿರುದ್ಧ ಸಿಡಿದು ನಿಲ್ಲುವಿಕೆಯು’ ಭಾರತ ಸರ್ಕಾರವನ್ನು ಜನರೊಂದಿಗೆ ಬೆಸೆಯುವ ಯತ್ನವೆಂದು ತೋರಿಸುವುದು.
- ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹ್ಮದ್ನಿಂದ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಬಾಲಕೋಟ್ ವಾಯುದಾಳಿ ನಡೆದಿದೆ ಎಂಬ ವಾಸ್ತವವನ್ನು ಮರೆಮಾಚುವುದು.
ಪುಲ್ವಾಮಾ ಮತ್ತು ಬಾಲಕೋಟ್ ಎರಡೂ ದಾಳಿಗಳ ಕುರಿತಂತೆ ಉಭಯ ರಾಷ್ಟ್ರಗಳ ವಿರೋಧ ಪಕ್ಷಗಳು ಯಾವ ವಿವಾದಕ್ಕೂ ಆಸ್ಪದಕೊಡದಂತೆ ಆಯಾ ಸರ್ಕಾರಗಳ ಪರವಾಗಿ ನಿಂತಿವೆ. ಆದರೆ ನಿಜಕ್ಕೂ ಇರುವ ಸಮಸ್ಯೆ ಏನೆಂದರೆ, ಯಡಿಯೂರಪ್ಪನವರ ಈ ಹೇಳಿಕೆಯಿಂದಾಗಿ ’ಬಿಜೆಪಿಯ ಚುನಾವಣೆಯ ಹುನ್ನಾರದ ಭಾಗವಾಗಿ ಇಂಡಿಯಾ-ಪಾಕಿಸ್ತಾನಗಳು ಯುದ್ಧ ಸನ್ನದ್ಧವಾಗಬೇಕಾಗಿ ಬಂದಿದೆಯೇ ವಿನಾಃ ಪುಲ್ವಾಮಾ ದಾಳಿಯಿಂದಾಗಿ ಅಲ್ಲ’ ಎಂದು ಜಗತ್ತಿನ ಇತರೆ ರಾಷ್ಟ್ರಗಳ ಮುಂದೆ ವಾದ ಮಂಡಿಸಲು ಪಾಕಿಸ್ತಾನಕ್ಕೆ ಒಂದು ಅವಕಾಶ ಸಿಕ್ಕಂತಾಗಿದೆ.
ಯಡಿಯೂರಪ್ಪ ಇದೀಗ ಎಚ್ಚೆತ್ತುಕೊಂಡು ತನ್ನ ಹೇಳಿಕೆಯನ್ನು ತಪ್ಪಾಗಿ ತಿರುಚಲಾಗಿದೆ ಅಂತ ಹೇಳುತ್ತಿರಬಹುದು. ಆದರೆ ಇದರಿಂದ ದೇಶಕ್ಕೆ ಆಗಬೇಕಾದ ಲುಕ್ಸಾನು ಆಗಿಹೋಗಿದೆ. ಅವರದೇ ಪಕ್ಷದ ಕೇಂದ್ರ ವಿದೇಶಾಂಗ ರಾಜ್ಯ ಖಾತೆ ಸಚಿವ ಹಾಗೂ ಸೇನೆಯ ಮಾಜಿ ಜನರಲ್ ಕೂಡಾ ಆದ ವಿ.ಕೆ.ಸಿಂಗ್ ಅವರು “ಬಿಎಸ್ವೈಜೀ, ನಾನು ನಿಮ್ಮ ಮಾತನ್ನು ಒಪ್ಪುವುದಿಲ್ಲ. ನಾವು ಒಂದು ರಾಷ್ಟ್ರವಾಗಿ ನಿಲ್ಲುತ್ತೇವೆ. ನಮ್ಮ ದೇಶದ ರಕ್ಷಣೆ ಮತ್ತು ನಾಗರೀಕರ ಸುರಕ್ಷತೆಗಾಗಿ ಸರ್ಕಾರ ಈ ಕಾರ್ಯಾಚರಣೆ ನಡೆಸಿದೆಯೇ ವಿನಾಃ ಕೆಲ ಹೆಚ್ಚುವರಿ ಸೀಟುಗಳನ್ನು ಗೆಲ್ಲುವುದಕ್ಕಲ್ಲ” ಎಂದು ಟ್ವೀಟಿಸಿದ್ದಾರೆ.
ಪಾಕಿಸ್ತಾನದಲ್ಲಿ ಯಡಿಯೂರಪ್ಪನವರ ಹೇಳಿಕೆ ವೈರಲ್ ಆಗುವ ಒಂದು ದಿನದ ಹಿಂದಷ್ಟೇ, ಅಂದರೆ ಫೆಬ್ರವರಿ 27ರಂದು ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರು “ವಿರೋಧ ಪಕ್ಷಗಳು ಪಾಕಿಸ್ತಾನದ ಕೈಗೊಂಬೆಯಂತೆ ವರ್ತಿಸಿ ಸೇನಾ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ” ಎಂದು ಹರಿಹಾಯ್ದಿದ್ದರು. ಆದರೆ ಈಗ ವಿರೋಧ ಪಕ್ಷಗಳ ಅವರದೇ ಪಾರ್ಟಿಯ ಯಡಿಯೂರಪ್ಪನವರ ಹೇಳಿಕೆಯೇ ಪಾಕಿಸ್ತಾನಕ್ಕೆ ಆಯುಧವಾಗಿ ಬಳಕೆಗೊಳ್ಳುತ್ತಿದೆ.
ದುರಂತವೆಂದರೆ, ಗೋ.ಮಧುಸೂದನ್ ಥರದ ಸ್ಥಳೀಯ ಬಿಜೆಪಿ ನಾಯಕರು ದೇಶಕ್ಕೆ ಮುಜುಗರ ಉಂಟು ಮಾಡುತ್ತಿರುವ ಈ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸುವುದರ ಬದಲು ತಮ್ಮ ಪಕ್ಷದ ನಾಯಕನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಭರಾಟೆಯಲ್ಲಿ ‘ದೇಶಭಕ್ತಿ’ಯಲ್ಲೂ ರಾಜಕಾರಣ ಬೆರೆಸುತ್ತಿದ್ದಾರೆ. ಟೀವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೌದು, ಯಡಿಯೂರಪ್ಪನವರು ಹೇಳಿದ್ದು ಸರಿ, ನಾವು ಇಪ್ಪತ್ತೆರಡಲ್ಲ, ಈಗ ಇಪ್ಪತ್ತೆಂಟು ಸೀಟು ಗೆಲ್ತೀವಿ ನೋಡ್ಕಳಿ. ದೇಶದ್ರೋಹಿ ’ಕಾಂಗ್ರೆಸ್’ ಜನ ತಕ್ಕ ಪಾಠ ಕಲಿಸ್ತಾರೆ ನೋಡ್ತಾ ಇರಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಪುಲ್ವಾಮಾದಲ್ಲಿ ಸೈನಿಕರು ಸತ್ತಾಗ ದೇಶದೆಲ್ಲೆಡೆ ಜನರು ಮರುಗಿದರೆ, ಅದರಿಂದ ರಾಜಕೀಯ ಲಾಭ ಪಡೆದುಕೊಳ್ಳುವವರು ಹಿಗ್ಗುತ್ತಾರೆನ್ನುವುದು ವಿಪರ್ಯಾಸ. ದೇಶಕ್ಕಿಂತ, ಸೈನಿಕರ ಜೀವಕ್ಕಿಂತ ತಮ್ಮ ಸೀಟು ಗಳಿಕೆಯೇ ಹೆಚ್ಚಾಯಿತೇ ಎಂಬ ಪ್ರಶ್ನೆ ಉದ್ಭವಿಸಿದೆ. ಕವಿಯೊಬ್ಬರು ಹೇಳಿದಂತೆ ’ಬೀದಿಯಲ್ಲಿಂದು ಶವಗಳ ಮಳೆ, ಮುಂದಿನ ಚುನಾವಣೆಯಲ್ಲಿ ಅವರಿಗೆ ಹುಲುಸಾದ ಬೆಳೆ’ ಎಂಬಂತೆ ಆದರೆ, ದೇಶದ ನೈತಿಕ ಪ್ರಜ್ಞೆಯು ನಾಶದ ಹಾದಿ ಹಿಡಿದಂತೆ. ಇದನ್ನು ಈ ರಾಜಕಾರಣಿಗಳಿಗೆ ತಿಳಿಸಿ ಹೇಳುವ ಕೆಲಸ ತುರ್ತಾಗಿ ಆಗಬೇಕಿದೆ.
ಆಧಾರ: ದಿ ಕ್ವಿಂಟ್