Homeಮುಖಪುಟಪೇಜಾವರರ ಗಂಟಲಲ್ಲಿ ಹಿಂದೂತ್ವದ ಪುಂಡ!!

ಪೇಜಾವರರ ಗಂಟಲಲ್ಲಿ ಹಿಂದೂತ್ವದ ಪುಂಡ!!

- Advertisement -
- Advertisement -

ವರದಿಗಾರ |

ಸಂಘಪರಿವಾರದ ಆಸ್ಥಾನ ಪುರೋಹಿತ ಪೇಜಾವರ ವಿಶ್ವೇಶತೀರ್ಥ ಸ್ವಾಮಿಯ ಅಸಲಿ ಅವತಾರ ಅನಾವರಣವಾಗಿದೆ. ಕಳೆದ ವಾರ ಮಂಗಳೂರಲ್ಲಿ ವಿಶ್ವಹಿಂದೂ ಪರಿಷತ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬೇಗ ಆಗಬೇಕೆಂದು ಜನದ್ರೋಹ ಸಭೆಯೊಂದನ್ನು ನಡೆಸಿತ್ತಲ್ಲ, ಅಲ್ಲಿ ಪೇಜಾವರರ ದಿವ್ಯ ಸಾನಿಧ್ಯವಿತ್ತು. ರಾಮಮಂದಿರಕ್ಕಾಗಿ ಪೇಜಾವರ ಸ್ವಾಮಿ ಕ್ಯಾತೆ ತೆಗೆದು ಕೂಗಾಡಿದ ಪರಿ ಭಯೋತ್ಪಾದನೆಯ ಸ್ಯಾಂಪಲ್ಲಿನಂತಿತ್ತು. ನಳಿನ್‌ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ, ಪ್ರತಾಪ್‌ಸಿಂಹ, ಪ್ರಮೋದ್ ಮುತಾಲಿಕ್ ಮುಂತಾದ ಮೂರನೇ ದರ್ಜೆ ಹಿಂದೂತ್ವದ ಹಿಕಮತ್ತುದಾರರ ಗಂಟಲಲ್ಲಿ ಪೇಜಾವರ ಮಾತನಾಡಿದ್ದು ಕೇಳಿದ ಜನ ಬೆಚ್ಚಿಬಿದ್ದಿದ್ದಾರೆ. ಅಲ್ಲಿಗೆ ಈ ಅದ್ವೈತ ಸನ್ಯಾಸಿಯ ದೋಖಾ ದ್ವಂದ್ವ ಸಿದ್ಧಾಂತ ಮತ್ತೊಮ್ಮೆ ಜಗಜ್ಜಾಹೀರಾಗಿ ಹೋಗಿದೆ!

ಪರಧರ್ಮ ಸಹಿಷ್ಣು ಸಂತನ ಗೆಟಪ್ಪಿನಲ್ಲಿ ಓಡಾಡುವ ಈ ಪೊಲಿಟಿಕಲ್ ಸ್ವಾಮಿಯ ನಡೆ-ನುಡಿಯಲ್ಲಿ ಯಾವಾಗಲೂ ವಿರೋಧಾಭಾಸ-ವಿಪರ‍್ಯಾಸಗಳೇ, ಬ್ರಾಹ್ಮಣ್ಯದಡಿಯ ಅಸಮಾನತೆ-ಅಸ್ಪೃಶ್ಯತೆಗಳ ಅರ್ಥ ಮಾಡಿಸುತ್ತವೆ. ಹರಿಜನರ ಕೇರಿಗಳಿಗೆ ಹೋಗಿ ಪಾದ ತೊಳೆಸಿಕೊಳ್ಳುವ ಪೇಜಾವರರು ಮರಳಿ ಉಡುಪಿ ಮಠಕ್ಕೆ ಬರುವಾಗಲೇ ಜನಿವಾರ ಬದಲಿಸಿ ಶುದ್ಧೀಕರಣಗೊಳ್ಳುತ್ತಾರೆ. ಧರ್ಮೋನ್ಮಾದಿ ಕರಸೇವಕರು ಬಾಬರಿ ಮಸೀದಿ ಗುಮ್ಮಟ ಉರುಳಿಸುವಾಗ ಕಣ್ಣಾರೆ ಕಂಡು ಧನ್ಯತಾಭಾವದಿಂದ ಮಂದಹಾಸ ಬೀರುವ ಈ ಸ್ವಾಮಿ ತನ್ನ ಮಠದ ಆವರಣದಲ್ಲೇ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸುವ ನಾಟಕವಾಡಬಲ್ಲರು.

ಉಡುಪಿ ಮಾಧ್ವಮಠದಲ್ಲಿ ಪಂಕ್ತಿಭೇದವೇ ಇಲ್ಲವೆಂದು ಹಸಿ-ಹಸಿ ಸುಳ್ಳು ಹೇಳುವ ಪೇಜಾವರ ಸ್ವಾಮಿ ಕುಕ್ಕೆ ಸುಬ್ರಹ್ಮಣ್ಯದ ಮಡೆಸ್ನಾನಕ್ಕೆ ಪರ‍್ಯಾಯವಾಗಿ ಉಡೆಸ್ನಾನದ ಆವಿಷ್ಕಾರ ಮಾಡಿ ಅಮಾಯಕ ಅಬ್ರಾಹ್ಮಣರ ದಿಕ್ಕು ತಪ್ಪಿಸುತ್ತಾರೆ. ಇವತ್ತಿಗೂ ಪೇಜಾವರರು ಗೋ-ಗೂಂಡಾಗಳಿಗೆ, ಬಾಬರಿ ಮಸೀದಿ ಧ್ವಂಸಕರಿಗೆ ಸ್ಫೂರ್ತಿಯ ಚಿಲುಮೆ. ತನ್ನ ಧಾರ್ಮಿಕ ಕಾರ್ಯಾಚರಣೆಗೆ ಅನುಕೂಲ ಆಗುತ್ತದೆಂದಾಗ ಸಾಬರನ್ನು ಮಠಕ್ಕೆ ಕರೆದು ಇಫ್ತಾರ್ ಕೂಟ ಮಾಡುವ ಪೇಜಾವರರು ಶಾಸಕ ರಘುಪತಿ ಭಟ್ಟನಂಥವರು ಕಣ್ಣುಬಿಟ್ಟರೆ ಹೆದರಿ ಮರು ವರ್ಷ ಆ ಇಫ್ತಾರ್ ಪ್ರಹಸನ ಮಾಡುವುದೇ ಇಲ್ಲಾ! ಹಿಂದೂತ್ವದ ಸೈತಾನರು ಪಾಪದ ಸಾಬರ ಬೆತ್ತಲೆ ಮಾಡಿ ಬಡಿದು ಕೇಕೆ ಹಾಕಿದರೂ, ಕೊಂದು ಎಸೆದರೂ ಕಂಡೂ ಕಾಣದಂತಿರುತ್ತಾರೆ ಪೇಜಾವರ ಸ್ವಾಮಿ. ಹಾಗಂತ ಶಾಂತಿ, ಸಹಬಾಳ್ವೆ, ಸಹಿಷ್ಣುತೆ, ಸಂವಿಧಾನದ ಬಗ್ಗೆ ಉದ್ದುದ್ದ ವ್ಯಾಖ್ಯಾನ ಕೊಡಲು ಮಾತ್ರ ಮರೆಯುವುದಿಲ್ಲ……..

ಇಂಥ ಗುಣಧರ್ಮದ ಪೇಜಾವರ ಸ್ವಾಮೀಜಿ ಮೊನ್ನೆ ಮಂಗಳೂರಲ್ಲಿ ಕೇಸರಿ ಕೂಟದಲ್ಲಿ ಉದುರಿಸಿದ ಭೀಭತ್ಸ ಅಣಿ ಮುತ್ತುಗಳು ಅವರ ಜಾಯಮಾನಕ್ಕೆ ತಕ್ಕಂತೆಯೇ ಇದೆ. ಮಾತಿನುದ್ದಕ್ಕೂ ಪೇಜಾವರರ ಮೇಲೆ ಹಿಂದೂತ್ವದ ಭಯೋತ್ಪಾದಕನ ಆವಾಹನೆ ಆದಂತಿತ್ತು. ಹಿಂದೂತ್ವದ ಕಾಳಗದ ಕಾಲಾಳುಗಳಾದ ಅವಿಭಜಿತ ದಕ್ಷಿಣ ಕನ್ನಡದ ಅಬ್ರಾಹ್ಮಣರನ್ನು ಅನಾಹುತಕ್ಕೆ ಪ್ರಚೋದಿಸುವ ಓಘ ಪೇಜಾವರರ ಭಾಷಣಕ್ಕಿತ್ತು. ಎತ್ತಿಂದೆತ್ತ ಲೆಕ್ಕಹಾಕಿ ತಾಳೆ ನೋಡಿದರೂ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ಮಾಮನ ಗೆಲ್ಲಿಸುವ ಮಸಲತ್ತಿನ ಮಾತುಗಾರಿಕೆ ಇದಾಗಿತ್ತೆಂಬುದು ಎಂಥ ಗಾಂಪನಿಗೂ ಅರ್ಥವಾಗುತ್ತದೆ!! ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೃವೀಕರಣಗೊಂಡಿರುವ ಹಿಂದೂತ್ವದ ಓಟ್‌ಬ್ಯಾಂಕ್ ಇನ್ನಾರು ತಿಂಗಳಲ್ಲಿ ಬರಲಿರುವ ಪಾರ್ಲಿಮೆಂಟ್ ಇಲೆಕ್ಷನ್ ತನಕ ಕಾಪಿಟ್ಟುಕೊಳ್ಳುವ ತಂತ್ರಗಾರಿಕೆ ಪೇಜಾವರ ಟೇಮಿನದಾಗಿತ್ತು.

ನಾಲ್ಕುವರೆ ವರ್ಷದಿಂದ ಸಂಘಪರಿವಾರದ ಬ್ರಾಹ್ಮಣ ರಿಂಗ್‌ಮಾಸ್ಟರ್‌ಗಳ ಪಾದುಕಾ ಪೂಜಾರಿ ಮೋದಿ ಪ್ರಧಾನಿಯಾಗಿದ್ದರೂ ಆತನಿಂದ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲಿಕ್ಕೆ ಯಾಕಾಗಲಿಲ್ಲ ಎಂಬ ಮೂಲಭೂತ ಪ್ರಶ್ನೆ ಮರೆಮಾಚಿದ ಪೇಜಾವರರು ಏಕಾಏಕಿ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಆ ಮೂಲಕ ಇಲೆಕ್ಷನ್ ಪ್ರಚಾರ ಶುರುಮಾಡಿದ್ದಾರೆ. ಹಿಂದೂತ್ವಕ್ಕಾಗಿ ತನ್ನನ್ನು ಸಂಸದನಾಗಿಸಿದ ಜಿಲ್ಲೆಗೇ ಬೆಂಕಿ ಹಾಕ್ತೇನೆಂದು ಯಾವ ಮುಲಾಜೂ, ಮನುಷ್ಯತ್ವವೂ ಇಲ್ಲದೆ ಆರ್ಭಟಿಸುವ ನಳಿನ್‌ಕುಮಾರ್ ಕಟೀಲ್‌ನಂಥವರನ್ನು ಬಗಲಲ್ಲಿಟ್ಟುಕೊಂಡು ಪೇಜಾವರರು ಮಾಡಿದ ಭಾಷಣದ ನೀತಿ-ರೀತಿಗೆ ಕೂಗುಮಾರಿ ಖ್ಯಾತಿಯ ಚೈತ್ರಾ ಕುಂದಾಪುರ, ಸೂಲಿಬೆಲೆ ಚಕ್ರವರ್ತಿಯಂಥವರೇ ನಾಚಿ ತಲೆ ತಗ್ಗಿಸುವಂತಿತ್ತು!

ಪ್ರತಿದಿನ ಸಾವಿರ ಸುಳ್ಳು ಸಬೂಬು ಹೇಳುವ ಮೋದಿ 2019ರ ಚುನಾವಣೆಯಲ್ಲಿ ಬಚಾವಾಗದ ಪ್ರಪಾತಕ್ಕೆ ಹೋಗಿಬಿದ್ದಿದ್ದಾರೆಂಬುದು ಪೇಜಾವರರಂಥ ಹಿಂದೂ ಸಂತ ಸಂತಾನಕ್ಕೆ ಪಕ್ಕಾ ಆಗಿಹೋಗಿದೆ. ಮೋದಿಯಂಥ ಹುಂಬ ಶೋ ಮ್ಯಾನ್ ದೇಶದ ಚುಕ್ಕಾಣಿ ಹಿಡಿಯುವುದು ಸಂಘಪರಿವಾರಕ್ಕೆ ಅನಿವಾರ್ಯ ಅಗತ್ಯ. ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಬರುತ್ತಿದೆ ಎಂದು ಬಿಂಬಿಸಿದರೆ ಜನರ ಭಾವನೆ ಕೆರಳಿಸಬಹುದೆಂಬ ದೂ(ದು)ರಾಲೋಚನೆ ಕಾವಿ ಕೂಟದ್ದು. ಹಾಗಾಗಿಯೇ ಮಂಗಳೂರಲ್ಲಿ ಪೇಜಾವರರು ಮಾತುಮಾತಿಗೆ ಕಾಂಗ್ರೆಸ್ ರಾಮಮಂದಿರ ವಿರೋಧಿ ಎಂಬಂತೆ ಪ್ರವಚನ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ವಿಶೇಷ ಕಾನೂನು ಮಾಡಬೇಕೆಂದು ಹೇಳುವ ಪೇಜಾವರ ಮಾತಿನ ಅರ್ಥ ಸುಗ್ರೀವಾಜ್ಞೆ ಮೂಲಕ ಅಯೋಧ್ಯೆಯಲ್ಲಿ ರಾಮನಿಗೆ ಗುಡಿಕಟ್ಟಬೇಕೆನ್ನುವುದೇ ಆಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಗೆ ಕಾಂಗ್ರೆಸ್ ಸಹಕರಿಸಬೇಕೆಂದು ಎಚ್ಚರಿಕೆಯೂ ಪೇಜಾವರ ಸ್ವಾಮಿ ಕೊಟ್ಟಿದ್ದಾರೆ. ಕಾಂಗ್ರೆಸೇನಾದರೂ ರಾಮಮಂದಿರಕ್ಕೆ ಅಡ್ಡಗಾಲು ಹಾಕಿದರೆ ಮುಂಬರುವ ಚುನಾವಣೆಯಲ್ಲಿ ಆ ಪಾರ್ಟಿ ಮಣ್ಣು ಮುಕ್ಕುತ್ತದೆಯೆಂದು ಮೋದಿಯನ್ನು ಮೀರಿಸುವ ಸ್ಟೈಲಲ್ಲಿ ಪೇಜಾವರರು ಭಾಷಣ ಬಿಗಿದಿದ್ದಾರೆ. ಅಷ್ಟೇ ಅಲ್ಲ, ಮುಸ್ಲಿಮರು ರಾಮ ಮಂದಿರಕ್ಕೆ ಬೆಂಬಲಿಸಿ ಹಿಂದೂಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಳ್ಳಬೇಕು ಎಂದಿದ್ದಾರೆ. ಏನಿದರ ಅರ್ಥ? ಸಾಬರು ಅಯೋಧ್ಯೆಯಲ್ಲಿ ರಾಮ ಮಂದಿರ ಆಗದಿದ್ದರೆ ಗಂಡಾಂತರಕ್ಕೆ ಸಿಲುಕಲಿದ್ದಾರೆಂದಾ? ಹಿಂದೂತ್ವದ ದಾದಾಗಿರಿಗೆ ಶರಣಾಗದಿದ್ದರೆ ಉಳಿಗಾಲವಿಲ್ಲವೆಂದಾ? ಸಾತ್ವಿಕ ಸಂತ ತಾನೆಂದೂ ತೋರಿಸಿಕೊಳ್ಳಲು ತಿಣಕಾಡುವ ಪೇಜಾವರರ ಮಾತುಗಾರಿಕೆ ಯಾವ ಹಿಂದೂ ಭಯೋತ್ಪಾಕ ಕಾವಿ ಅಥವಾ ಖಾದಿ ಪುಂಡರ ಭಾಷಣಕ್ಕೆ ಕಮ್ಮಿಯಿದೆ?!

ಜನಾಗ್ರಹ ಸಭೆ ಚುನಾವಣಾ ರಾಜಕೀಯ ಅಲ್ಲ ಅನ್ನುತ್ತಲೇ ಬಿಜೆಪಿ ಪರ ಪರೋಕ್ಷವಾಗಿ ಬಹಿರಂಗ ಪ್ರಚಾರ ಪೇಜಾವರ ಸ್ವಾಮಿ ಮಾಡಿದ್ದಾರೆ. ಬಿಜೆಪಿ ರಾಮ ಮಂದಿರಕ್ಕೆ ಸಂಪೂರ್ಣ ಬೆಂಬಲ ಕೊಡಬೇಕೆಂದು ಹೇಳಿರುವುದೇ ವಿಕಟ ವ್ಯಂಗ್ಯ! ಲೋಕಸಭೆ ಸ್ಥಾನ ತ್ಯಜಿಸಲು ರಾಮ ಮಂದಿರಕ್ಕಾಗಿ ಬಿಜೆಪಿ ಸಂಸದರು ರೆಡಿಯಾಗಬೇಕೆಂದು ಹೇಳಿದ್ದಾರೆ. ಬರೀ ಆರು ತಿಂಗಳು ಬಾಕಿಯಿರುವಾಗ ಚೆಡ್ಡಿ ಎಂಪಿಗಳಿಗೆ ರಾಜೀನಾಮೆ ಕೊಡಿಯೆಂದು ಪೇಜಾವರರು ಹೇಳೋದು ಬಿಜೆಪಿಯನ್ನು ತಾರೀಫು ಮಾಡುವ ತಂತ್ರಗಾರಿಕೆಯಿಂದಷ್ಟೇ. ರಾಮನ ಹೆಸರಲ್ಲಿ ಪ್ರಧಾನಿಯಾದ ಮೋದಿ ನಾಲ್ಕುವರೆ ವರ್ಷದಿಂದ ಏಕೆ ರಾಮನಿಗೊಂದು ನೆಲೆಕೊಡುವ ಕೃತಜ್ಞತಾ ಭಾವದಿಂದ ಪ್ರಾಮಾಣಿಕ ಕೆಲಸ ಮಾಡಲಿಲ್ಲ ಎಂದು ಕೇಳುವ ಗಟ್ಸ್ ಪೇಜಾವರರೇಕೆ ತೋರಿಸುತ್ತಿಲ್ಲ?

ಹಿಂದೂತ್ವದ ದಿವಾಳಿಕೋರತನಕ್ಕೆ ಪೇಜಾವರರು ಸಂಕೇತವಾಗುತ್ತಿರುವುದು ದುರಂತ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

"ಒಳಮೀಸಲಾತಿ ಇಲ್ಲದೆ ಒಂದೇಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ" ಎಂದು ಆಹಾರ...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...