Homeಮುಖಪುಟರಾಷ್ಟ್ರಪತಿ ಆಡಳಿತದ ಕಡೆಗೆ ಕರ್ನಾಟಕ?

ರಾಷ್ಟ್ರಪತಿ ಆಡಳಿತದ ಕಡೆಗೆ ಕರ್ನಾಟಕ?

ರಾಜ್ಯಪಾಲರು, ಸುಪ್ರೀಂಕೋರ್ಟಿನ ಮಧ್ಯಪ್ರವೇಶದಿಂದ ಬಿಕ್ಕಟ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.

- Advertisement -
- Advertisement -

ರಾಜ್ಯ ಸರ್ಕಾರದ ಸುತ್ತ ನಡೆಯುತ್ತಿರುವ ಘಟನಾವಳಿಗಳು ರಾಷ್ಟ್ರಪತಿ ಆಡಳಿತದ ಕಡೆಗೆ ನಡೆಯುತ್ತಿರುವ ಹಾಗೆ ಕಾಣುತ್ತಿದೆ. ಕುಮಾರಸ್ವಾಮಿಯವರು ವಿಶ್ವಾಸಮತ ಯಾಚನೆಗೆ ಎಷ್ಟು ಸಮಯ ತೆಗೆದುಕೊಂಡರೂ ಪರವಾಗಿಲ್ಲ, ಆ ನಂತರ ಬಿದ್ದು ಹೋಗುವ ಸಾಧ್ಯತೆಯೇ ಹೆಚ್ಚಿದೆ. ಆದರೆ, ಬಿಜೆಪಿಯವರು ಅಷ್ಟು ಹೊತ್ತು ಕಾಯಲು ಸಿದ್ಧವಿಲ್ಲ. ಹಾಗೆ ಆದರೆ, ಮುಂಬೈನಲ್ಲಿ ಇರುವ ಶಾಸಕರು ಮರಳಿ ತಮ್ಮ ಪಕ್ಷಗಳಿಗೆ ಹೋಗಿಬಿಡಬಹುದೆಂಬ ಆತಂಕ ಬಿಜೆಪಿಯದ್ದು. ಹಾಗಾಗಿ ರಾಜ್ಯಪಾಲರಿಗೆ ಪದೇ ಪದೇ ಮನವಿ ಕೊಟ್ಟು ಅವರಿಂದ ಸ್ಪೀಕರ್‍ಗೆ ಸಂದೇಶ ಬರುವಂತೆ ನೋಡಿಕೊಂಡರು. ಆದರೆ, ಸ್ಪೀಕರ್‍ಗೆ ಸದನವನ್ನು ಯಾವ ರೀತಿ ನಡೆಸಬೇಕೆಂಬ ನಿರ್ದೇಶನ ಕೊಡುವ ಅಧಿಕಾರ ರಾಜ್ಯಪಾಲರಿಗಿಲ್ಲವಾದ್ದರಿಂದ ಅದಕ್ಕೆ ಸ್ಪೀಕರ್ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ.

ಆ ನಂತರ ಸಭಾನಾಯಕ ಕುಮಾರಸ್ವಾಮಿಯವರಿಗೇ ರಾಜ್ಯಪಾಲರಿಂದ ಸಮಯ ನಿಗದಿ ಮಾಡಿಸಿದರು. ತಾಂತ್ರಿಕವಾಗಿ ಇದು ಸರಿಯಿತ್ತು. ಹಾಗಾಗಿ ಅದನ್ನು ಕುಮಾರಸ್ವಾಮಿಯವರು ಒಪ್ಪಲೇಬೇಕಾಗುತ್ತದೆ ಎಂಬ ನಿರೀಕ್ಷೆ ಎಲ್ಲರದ್ದಾಗಿತ್ತು. ಅದರ ಕುರಿತು ಮತ್ತೆ ರಾಜ್ಯಪಾಲರಿಗೆ ಪತ್ರ ಬರೆದರು. ಮಧ್ಯಾಹ್ನ 1.30ರ ಡೆಡ್‍ಲೈನ್‍ಗೆ ಡೋಂಟ್‍ಕೇರ್ ಎಂಬಂತೆ ಸದನದ ಕಲಾಪ ನಡೆಯಿತು. ಅಷ್ಟೇ ಅಲ್ಲದೇ ರಾಜ್ಯಪಾಲರು ಇಂತಹ ಡೆಡ್‍ಲೈನ್ ತಾಂತ್ರಿಕವಾಗಿಯೂ ತಪ್ಪಿರಬಹುದೇ ಎಂಬ ಅನುಮಾನ ಮೂಡುವ ರೀತಿಯಲ್ಲಿ ಹಲವು ಕೋರ್ಟ್ ಆದೇಶಗಳನ್ನು ಉಲ್ಲೇಖಿಸಲಾಯಿತು.

ಇಷ್ಟು ಹೊತ್ತಿಗೆ ರಾಜ್ಯಪಾಲರಿಂದ ಇನ್ನೊಂದು ಗಡುವು, ಸಂಜೆ 6 ಗಂಟೆ ನಿಗದಿಯಾಯಿತು. ಅದನ್ನು ಉಲ್ಲೇಖಿಸಿದ ಕುಮಾರಸ್ವಾಮಿಯವರು ರಾಜ್ಯಪಾಲರು ಈ ಅವಧಿಯಲ್ಲಿ ನಡೆದುಕೊಂಡ ಪಕ್ಷಪಾತದ ರೀತಿಯನ್ನು ಸದನದಲ್ಲಿ ಪ್ರಸ್ತಾಪಿಸಿದರು. ಅಂದರೆ, ರಾಜ್ಯಪಾಲರ ಈ ನಡೆಗೆ ನಮ್ಮ ಮಾನ್ಯತೆ ಇಲ್ಲ ಎನ್ನುವುದನ್ನು ಸೂಚಿಸಿದರು. ತನ್ನ ಪತ್ರದಲ್ಲಿ ಕುದುರೆ ವ್ಯಾಪಾರ ಎಂಬ ಪದವನ್ನು ಬಳಸಿರುವ ರಾಜ್ಯಪಾಲರು, ಕುದುರೆ ವ್ಯಾಪಾರ ಯಾರು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಲ್ಲವಾ ಎಂದು ಹರಿಹಾಯ್ದರು.

ಮುಂದುವರೆದು, ಯಡಿಯೂರಪ್ಪನವರನ್ನುದ್ದೇಶಿಸಿ ‘ಬಹಳ ಆತುರದಲ್ಲಿದ್ದೀರಿ. ಅದು ಅಷ್ಟು ಒಳ್ಳೆಯದಲ್ಲ. ನೋಡೋಣ, ಏನಾಗುತ್ತೆ ಅಂತ. ರಾಷ್ಟ್ರಪತಿ ಆಡಳಿತ ಬರುತ್ತದೋ ಅಥವಾ ನೀವು ಮುಖ್ಯಮಂತ್ರಿಯಾಗ್ತೀರೋ ಎನ್ನೋದನ್ನು ನೋಡೋಣ’ ಎಂದೂ ಹೇಳಿದರು.

ಇದರ ಅರ್ಥ ಇಷ್ಟೇ. ರಾಜ್ಯಪಾಲರ (ಸರ್ಕಾರದ ಪ್ರಕಾರ) ಅನೈತಿಕ ನಡೆಗೆ ಸರ್ಕಾರವು ಬದ್ಧವಾಗುವುದಿಲ್ಲ. ಅದರ ಬದಲಿಗೆ ಸುಪ್ರೀಂಕೋರ್ಟಿಗೆ ಹೋಗುತ್ತದೆ. ಸುಪ್ರೀಂಕೋರ್ಟು ತೀರ್ಮಾನ ಘೋಷಿಸುವುದೇ ತಡವಾಗುವ ಸಾಧ್ಯತೆಯೂ ಇದೆ. ಏಕೆಂದರೆ, ಇದರಲ್ಲಿ ಹಲವು ಸಾಂವಿಧಾನಿಕ ಅಂಶಗಳಿವೆ. ಅಸಾಂವಿಧಾನಿಕವಾದ ತೀರ್ಪು ಬಂದರೆ, ಶಾಸಕಾಂಗದ ಸ್ವಾಯತ್ತತೆಗೆ ಧಕ್ಕೆ ತಂದರೆ ಒಪ್ಪಲ್ಲ ಎನ್ನುವ ಸರ್ಕಾರ ಇದೆ. ಹಾಗಾಗಿ ಕೋರ್ಟೂ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡಬೇಕಾಗುತ್ತದೆ. ಆ ಮಧ್ಯೆ ಸದನದಲ್ಲಿ ವಿಶ್ವಾಸಮತ ಯಾಚನೆ ಮುಗಿಯದೇ ಹೋದರೆ ರಾಜ್ಯಪಾಲರು ಏನು ಮಾಡುತ್ತಾರೆ?

ಇದನ್ನೂ ಓದಿ: ಪಕ್ಷಾಂತರ ನಿಷೇಧ ಕಾಯ್ದೆ: ಸ್ಪೀಕರ್ v/s ಸುಪ್ರೀಂ ಕೋರ್ಟ್

ಸರ್ಕಾರವನ್ನು ಮತ್ತು ಸದನವನ್ನು ಅಮಾನತ್ತಿನಲ್ಲಿಡುವ ಸಂಭವವಿದೆ. ಆಗ ಅನಿವಾರ್ಯವಾಗಿ ರಾಷ್ಟ್ರಪತಿ ಆಡಳಿತ ಬರುತ್ತದೆ. ಅದೇ ಹೊತ್ತಿನಲ್ಲಿ ಸುಪ್ರೀಂಕೋರ್ಟಿನಲ್ಲಿ ಉಳಿದ ವಿಚಾರಗಳು ಬಗೆಹರಿದಿರುವುದಿಲ್ಲ. ಹಾಗಿರುವಾಗ ಬಿಜೆಪಿಯನ್ನು ಆಡಳಿತದಲ್ಲಿ ಕೂರಿಸುವ ಕೆಲಸವನ್ನು ರಾಜ್ಯಪಾಲರು ಮಾಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇವೆಲ್ಲದರ ಕಾರಣದಿಂದ ರಾಷ್ಟ್ರಪತಿ ಆಡಳಿತದ ಪ್ರಶ್ನೆ ಉದ್ಭವಿಸಿದೆ. ಆ ನಂತರ ಈ ಬಿಕ್ಕಟ್ಟು ಹೇಗೆ ಮತ್ತು ಯಾವಾಗ ಬಗೆಹರಿಯುತ್ತದೆಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಇರುತ್ತವೆ. ಶಾಸಕರು ಅನರ್ಹಗೊಂಡರೂ ಬಿಜೆಪಿಗೆ ಹೆಚ್ಚಿನ ಸೀಟುಗಳು ಇರುವುದರಿಂದ ಅವರದ್ದೇ ಸರ್ಕಾರ ಬರುವ ಸಾಧ್ಯತೆಗಳು ಹೆಚ್ಚು. ಅನರ್ಹಗೊಂಡ ನಂತರ ಮತ್ತೆ ಆ ಶಾಸಕರು ಬಿಜೆಪಿ ಟಿಕೆಟ್‍ನಿಂದ ಸ್ಪರ್ಧಿಸಿ ಗೆಲ್ಲಬೇಕು. ಕೆಲವರು ಸೋಲಲೂಬಹುದು. ಒಟ್ಟಿನಲ್ಲಿ ಅತಂತ್ರ ಸ್ಥಿತಿ ಸಾಕಷ್ಟು ಕಾಲ ಮುಂದುವರೆಯುವುದಂತೂ ಖಂಡಿತ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...