Homeಕರ್ನಾಟಕಪಕ್ಷಾಂತರ ನಿಷೇಧ ಕಾಯ್ದೆ: ಸ್ಪೀಕರ್ v/s ಸುಪ್ರೀಂ ಕೋರ್ಟ್

ಪಕ್ಷಾಂತರ ನಿಷೇಧ ಕಾಯ್ದೆ: ಸ್ಪೀಕರ್ v/s ಸುಪ್ರೀಂ ಕೋರ್ಟ್

- Advertisement -
- Advertisement -

| ರಾಜಲಕ್ಷ್ಮಿ ಅಂಕಲಗಿ |
ವಕೀಲರು, ಕರ್ನಾಟಕ ಹೈಕೋರ್ಟ್

ಬಹುಶಃ ಈ ಲೇಖನ ಪ್ರಕಟವಾಗುವಷ್ಟರಲ್ಲಿ ಕರ್ನಾಟಕದ ರಾಜಕೀಯದ ರಮ್ಮಿ ಆಟ ಒಂದು ಹಂತಕ್ಕೆ ಬಂದಿರುತ್ತದೆ. ಅದ್ಯಾಕೋ ‘ರಾಜಕೀಯ ದೊಂಬರಾಟ’ ಎಂದು ಕರೆದು, ಪ್ರಾಣ ಒತ್ತೆಯಿಟ್ಟು ಹೊಟ್ಟೆಪಾಡಿಗಾಗಿ ದೊಂಬರಾಟ ಮಾಡುವವರನ್ನು ಅವಮಾನಿಸಲು ಮನಸ್ಸು ಬರುತ್ತಿಲ್ಲ. ಕೆಲವೊಂದು ಟಿ.ವಿ ಚಾನೆಲ್‍ಗಳು ಹಾಗೂ ಪತ್ರಿಕೆಗಳು ಇವರನ್ನು ರೆಬೆಲ್ ನಾಯಕರು ಎಂದು ಕರೆದಾಗ ಆ ರೆಬೆಲ್ ಎಂಬ ಶಬ್ದಕ್ಕೇನಾದರೂ ಮಾತು ಬರುತ್ತಿದ್ದರೆ ಮಾನಹಾನಿ ಕೇಸು ಹಾಕುತ್ತಿತ್ತು. ಈ ಕೋಟ್ಯಾಧಿಪತಿ ಎಂಎಲ್‍ಎಗಳನ್ನು ಕುರಿಗಳಂತೆ ಕೂಡಿಹಾಕಿ ಕಾಯುತ್ತಿರುವುದನ್ನು ನೋಡಿದ ಜನ ಅಸಹ್ಯಪಡುವುದರ ಜೊತೆಗೆ ನೂರಾರು ಪ್ರಶ್ನೆ ಕೇಳುತ್ತಿದ್ದಾರೆ. ಅದ್ಯಾವ ಪ್ರಲೋಭನೆ ಅಥವಾ ಭಯ ಇವರನ್ನು ಹೀಗೆ ಮಾಡಲು ಪ್ರೇರೇಪಿಸಿರಬಹುದು ಎಂಬುದು ಗೂಢವಾಗಿದೆ. ಒಟ್ಟಿನಲ್ಲಿ ಒಂದು ದೇಶ ಒಂದು ಪಕ್ಷ ಎಂಬ ಸಿದ್ಧಾಂತ ತಂದು ವ್ಯವಸ್ಥಿತವಾಗಿ ವಿರೋಧ ಪಕ್ಷಗಳನ್ನು ನಿರ್ನಾಮಗೊಳಸಿ ಪ್ರಜಾತಂತ್ರವನ್ನು ಅಣುಕು ಯಂತ್ರವನ್ನಾಗಿ ಮಾಡುವ ಹುನ್ನಾರ ನಿಚ್ಚಳವಾಗಿದೆ.

ಸ್ವಾತಂತ್ರ್ಯನಂತರ ಈ ಪಕ್ಷಾಂತರ ಮಾಡುವ ಅವಕಾಶವಾದಿ ರಾಜಕಾರಣಿಗಳು ಹಾಗೂ ನಿರಂತರ ಅಸ್ಥಿರ ಸರ್ಕಾರಗಳು ಇವನ್ನು ಒಂದು ನಿಯಂತ್ರಣದಲ್ಲಿಡುವ ಉದ್ದೇಶದಿಂದ 1985ರಲ್ಲಿ ರಾಜೀವ್‍ಗಾಂಧಿ ಸರ್ಕಾರ ಸಂವಿಧಾನಿಕ ತಿದ್ದುಪಡಿ ಮಾಡುವ ಮೂಲಕ ಹತ್ತನೇ ಶೆಡ್ಯೂಲನ್ನು ಸೇರಿಸಿ ‘ಪಕ್ಷಾಂತರ ನಿಷೇಧ ಕಾಯ್ದೆ’ಯನ್ನು ಜಾರಿಗೆ ತಂದಿತು. ಅದರ ಉದ್ದೇಶ ನಿಚ್ಚಳವಾಗಿತ್ತು.
* ಸಂಸದರ ರಾಜಕೀಯ ಪಕ್ಷಾಂತರ ತಡೆಯುವುದು ಹಾಗೂ ಎರಡು ಕಾರಣಗಳಿಗಾಗಿ ಅವರ ಸದಸ್ಯತ್ವವನ್ನು ರದ್ದುಗೊಳಿಸುವುದು.
* ಅಕಸ್ಮಾತ್ ಸದಸ್ಯರು ತಮ್ಮ ಇಚ್ಛೆಯಿಂದ ತಮ್ಮ ಪಕ್ಷದ ಸದಸ್ಯತ್ವವನ್ನು ಬಿಟ್ಟುಕೊಟ್ಟರೆ
* ಸಂಸದ ತನ್ನ ಪಕ್ಷದ ನಿರ್ದೇಶನಗಳನ್ನು ಉಲ್ಲಂಘಿಸಿ ಮತದಾನ ಮಾಡಿದರೆ

ಇಲ್ಲಿ ಪಕ್ಷದ ಸದಸ್ಯತ್ವವನ್ನು ತೊರೆಯುವುದನ್ನು ರಾಜೀನಾಮೆ ಯೊಂದಿಗೆ ಹೋಲಿಸಲು ಬರುವುದಿಲ್ಲ. ಅವೆರಡೂ ಬೇರೆಯದು. ಆದರೆ ಇದನ್ನು ಹೊರತುಪಡಿಸಿಯೂ ಸಂಸದರ ನಡತೆಯನ್ನು ನೋಡಿ ಸ್ಪೀಕರ್ ತನ್ನ ವಿವೇಚನೆಯನ್ನು ಬಳಸಿ ಅಂತಹ ನಡೆಯನ್ನು ಪಕ್ಷ ವಿರೋಧಿ ಎಂದು ಪರಿಗಣಿಸಿದರೆ ಅವರ ಸದಸ್ಯತ್ವವನ್ನು ರದ್ದುಗೊಳಿಸಬಹುದು. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಕೇವಲ ಶಿಸ್ತಿನ ಹೆಸರಿನಲ್ಲಿ ಯಾರ ಅಭಿಪ್ರಾಯಗಳನ್ನೂ ಕಟ್ಟಿಹಾಕಲು ಆಗದು. ಆದ್ದರಿಂದಲೇ ಕಾಯ್ದೆಯಲ್ಲಿ ಭಿನ್ನಾಭಿಪ್ರಾಯಗಳನ್ನೂ ಪರಿಗಣಿಸಿ ಅದಕ್ಕೆ ದಾರಿಯನ್ನು ಒದಗಿಸಲಾಗಿದೆ. ಅಕಸ್ಮಾತ್ ಒಂದು ರಾಜಕೀಯ ಪಕ್ಷದ 2/3ರಷ್ಟು ಸದಸ್ಯರು ಒಟ್ಟಾರೆಯಾಗಿ ಪಕ್ಷತೊರೆದು ಮತ್ತೊಂದು ಪಕ್ಷದೊಂದಿಗೆ ವಿಲೀನ ಹೊಂದಲು ಅವಕಾಶ ಮಾಡಿಕೊಡಲಾಗಿದೆ. ‘ಸ್ಪೀಕರ್ ತನ್ನ ವಿವೇಚನೆ ಬಳಸಿ’ ಎಂದ ಕೂಡಲೇ ಅವರ ತೀರ್ಮಾನದ ಬಗ್ಗೆ ಪರ ವಿರೋಧ ನಿಲುವುಗಳು ಬರುವುದಕ್ಕೆ ಪ್ರಾರಂಭಿಸುತ್ತವೆ. ಒಂದು ಸಾಂವಿಧಾನಿಕ ಹುದ್ದೆ ಅಲಂಕರಿಸಿದ ಮೇಲೆ ತಮ್ಮ ಮಾತೃ ಪಕ್ಷವನ್ನು ಮರೆತು ನಿಷ್ಪಕ್ಷವಾಗಿ ನಡೆದುಕೊಂಡ ಉದಾಹರಣೆಗಳು ವಿರಳವಾಗಿರುವಾಗ ಈ ಸಂಶಯಗಳು ಸಹಜ. ಹಾಗಾದರೆ ಸ್ಪೀಕರ್ ವಿವೇಚನೆ ಸರಿಯೋ ತಪ್ಪೋ ಎಂದು ತೀರ್ಮಾನಿಸುವ ಅಧಿಕಾರ ಯಾರಿಗೆ ಇದೆ ಎಂಬ ಪ್ರಶ್ನೆ ಸಹಜ. ಈ ವಿಷಯಕ್ಕೆ ಕುರಿತಂತೆ ಸುಪ್ರೀಂಕೋರ್ಟ್ ಆಗಾಗ ನೀಡಿದ ತೀರ್ಮಾನಗಳ ಮುಖಾಂತರ ಇದು ಸ್ಪೀಕರ್ ಅವರಿಗೆ ಮಾತ್ರ ಸೇರಿದ ವಿಚಾರ ಎಂದು ಸಾರಿ ಹೇಳಿದೆ. ಆದರೆ ಸ್ಪೀಕರ್ ತಮ್ಮ ಕಾರಣಗಳನ್ನು ಸರಿಯಾಗಿ ವಿವರಿಸಬೇಕು.

ಈ ಕಾಯ್ದೆ ಬಂದ ನಂತರ ಸಣ್ಣಪ್ರಮಾಣದ ಪಕ್ಷಾಂತರ ಹಾಗೂ ರಾಜಕೀಯ ಅಸ್ಥಿರತೆಗಳು ಕಡಿಮೆ ಆಗಿವೆಯಾದರೂ ಸಾಮೂಹಿಕ ಗುಳೆ ನಿಂತಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಕಾಯ್ದೆಯು ಸಫಲತೆ ಕಂಡಿದೆ ಎನ್ನಬಹುದು.

ಸುಪ್ರೀಂ ಕೋರ್ಟ್ ಸದಸ್ಯರ ಸದಸ್ಯತ್ವ ಅಮಾನ್ಯಗೊಳಿಸುವ ವಿಷಯಗಳಲ್ಲಿ ಬಹುತೇಕ ನಿರ್ಲಿಪ್ತ ಧೋರಣೆ ಹೊಂದಿದೆ. ಇನ್ನು ಕೆಲವು ಸಲ ಕೆಲವೊಂದು ನಿರ್ದೇಶನಗಳನ್ನು ಮಾತ್ರ ನೀಡಿ ತೀರ್ಪು ನೀಡುವುದರಿಂದ ಹೊರಗುಳಿದಿದೆ. ಇದು ಸಂವಿಧಾನ ಬದ್ಧವಾದ ನಡೆಯೂ ಹೌದು. ಏಕೆಂದರೆ ಸಂವಿಧಾನದಲ್ಲಿ ಸ್ಪೀಕರ್ ಅವರ ಅಧಿಕಾರ ಹಾಗೂ ಕಾರ್ಯವ್ಯಾಪ್ತಿಯನ್ನು ನಿರ್ದಿಷ್ಟವಾಗಿ ವಿವರಿಸಿದಾಗ ಆ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂಬ ಕೋರ್ಟಿನ ನಿಲುವು ಸರಿ. ಆದರೆ ಸುಪ್ರೀಕೋರ್ಟ್‍ನ ಮುಂದೆ ಆಗಾಗ್ಗೆ ಅನೇಕ ದ್ವಂದ್ವಗಳು ಎದುರಾಗುತ್ತಿರುತ್ತವೆ.

ತಮಿಳುನಾಡಿನ ಎಐಡಿಎಂಕೆಯ ಇ.ಪಳನಿಸ್ವಾಮಿ ಸರ್ಕಾರಕ್ಕೆ ಬೆಂಬಲಿಸಲು ನಿರಾಕರಿಸಿದ 18 ಸದಸ್ಯರನ್ನು ರಾಜ್ಯಪಾಲರು ಅಮಾನ್ಯ ಮಾಡಿದಾಗ ಆ ವಿಷಯ ಹೈಕೋರ್ಟಿನ ಮುಂದೆ ಬಂತು. ಆಗ ಕೋರ್ಟು, ಒಂದು ಪಕ್ಷದ ನಾಯಕನೆಂದರೆ ಅವನೊಬ್ಬ ವ್ಯಕ್ತಿ ಮಾತ್ರವೇ ಅಥವಾ ಅವನೇ ಪಕ್ಷವೇ? ಎಂಬ ಪ್ರಶ್ನೆ ಎತ್ತಿತ್ತು. ಇನ್ನು ಕೇವಲ ತಮ್ಮ ಪಕ್ಷದ ಕಾರ್ಯವೈಖರಿಯನ್ನು ಪ್ರಶ್ನಿಸಿದ ಮಾತ್ರಕ್ಕೆ ಅವನನ್ನು ಶಿಸ್ತಿನ ಹೆಸರಿನಲ್ಲಿ ಅಮಾನ್ಯ ಮಾಡುವುದು ಎಷ್ಟು ಸರಿ? ಈ ಪ್ರಶ್ನೆಗಳು ನೈಜವಾದರೂ ನಾವು ದಿನನಿತ್ಯ ನೋಡುವ ಈ ಪಕ್ಷಾಂತರಿಗಳಿಗೆ ಇವು ಅನ್ವಯಿಸುತ್ತವಾ ಎಂಬುದು ಬಹುದೊಡ್ಡ ಪ್ರಶ್ನೆ.

ಬಹುಶಃ ಸೈದ್ಧಾಂತಿಕ ಕಾರಣಗಳಿಗಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ಹೊರನಡೆದ, ಇಲ್ಲವೇ ರಾಜೀನಾಮೆ ನೀಡಿದ ರಾಜಕಾರಣಿಗಳನ್ನು ಈಗ ಸಿನಿಮಾಗಳಲ್ಲಿ ಮಾತ್ರ ನೋಡಬಹುದು.

ನಮಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲ ಬಿಡುತ್ತಿಲ್ಲ ಎಂದು ಎಂಎಲ್‍ಎಗಳು ನೆಪ ಹೇಳುವಾಗ ‘ಯಾರ ಅಭಿವೃದ್ಧಿ’ ಎಂದು ಜನ ಮಾತಾಡುವುದು ಸರಿಯಾಗೇ ಇದೆ. ಮುಲಾಯಂ ಸಿಂಗ್ ಪಕ್ಷದ ಸದಸ್ಯನೊಂದಿಗೆ ಸೇರಿ 2007ರಲ್ಲಿ ಮಾಯಾವತಿ ಸರ್ಕಾರದ ವಿರುದ್ಧ ಕೆಲ ಸದಸ್ಯರು ರಾಜ್ಯಪಾಲರನ್ನು ಭೇಟಿ ಮಾಡಿ ಬಿಎಸ್‍ಪಿ ಸರ್ಕಾರವನ್ನು ವಜಾಗೊಳಿಸುವಂತೆ ಕೇಳಿದಾಗ ಅಂಥ ಸದಸ್ಯರನ್ನು ಪಕ್ಷದಿಂದ ಹೊರಹಾಕಲಾಯಿತು. ಆ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‍ಗೆ ಸದಸ್ಯರು ಹೋದಾಗ ‘ಅವರ ನಡೆ ಐಚ್ಛಿಕವಾಗಿ ಪಕ್ಷದ ಸದಸ್ಯತ್ವವನ್ನು ತೊರೆದಿದ್ದಕ್ಕೆ ಸಮ’ ಎಂದು ಹೇಳಿ ಕೋರ್ಟು ರಾಜ್ಯಪಾಲರ ತೀರ್ಪನ್ನು ಎತ್ತಿ ಹಿಡಿದಿತ್ತು. ಆದರೆ 2011ರಲ್ಲಿ ಬಿ.ಎಸ್.ಯಡಿಯೂರಪ್ಪ ಕೇಸಿನಲ್ಲಿ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕರ ಸದಸ್ಯತ್ವ ಅಮಾನ್ಯ ಮಾಡಿದ ರಾಜ್ಯಪಾಲರ ತೀರ್ಪನ್ನು ತಳ್ಳಿಹಾಕಿತ್ತು. ಹಾಗೆ ಮಾಡುವಾಗ ಪಕ್ಷದಲ್ಲಿನ ಸ್ವಜನಪಕ್ಷಪಾತ, ದುರಾಡಳಿತ ಯಾವುದನ್ನು ಅವರು ನಿರಾಕರಿಸದೆ ಇದ್ದುದರಿಂದ ಪ್ರತಿಕೂಲ ಅನುಮಾನ (adverse inference) ವ್ಯಕ್ತಪಡಿಸಿ ತೀರ್ಮಾನ ಕೈಗೊಂಡಿತ್ತು. ಇನ್ನು ಮುಖ್ಯವಾಗಿ 2/3 ಸದಸ್ಯರು ಒಂದು ಪಕ್ಷ ತೊರೆದು ಮತ್ತೊಂದು ಪಕ್ಷದೊಂದಿಗೆ ವಿಲೀನ ಹೊಂದಿದಾಗ ಅದು ಪಕ್ಷದ ತೀರ್ಮಾನವಾಗಿರದೆ ಕೇವಲ ಹೊರನಡೆದ ಸದಸ್ಯರ ತೀರ್ಮಾನ ಮಾತ್ರ ಆದಾಗ ಅದನ್ನು ಪಕ್ಷದ ವಿಲೀನ ಎನ್ನಲು ಬರುವುದಿಲ್ಲ. ಅದು ಕೇವಲ ಆ ಸದಸ್ಯರ ವಿಲೀನ ಮಾತ್ರ. ಹಾಗಿದ್ದಾಗ ಇಂತಹ ಸನ್ನಿವೇಶವನ್ನು ಹೇಗೆ ಅರ್ಥೈಸುತ್ತಾರೆ ಎಂಬುದು ಕೂಡ ಒಂದು ದ್ವಂದ್ವವೇ.

ಒಂದು ಸ್ಥಿರತೆ ಹಾಗೂ ಶಿಸ್ತು ತರಲು ಜಾರಿಗೆ ಬಂದ ಈ ಕಾಯ್ದೆ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಜನರ ಎದುರಿಗೆ ಇದೆ. ಒಟ್ಟಿನಲ್ಲಿ ಈ ರಾಜಕೀಯ ರಮ್ಮಿ ಆಟದಲ್ಲಿ ಆಗಬಹುದಾದ ಸಂಯೋಜನೆಗಳಿಗೆ ಅಂತ್ಯವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...