ಕರ್ನಾಟಕ ಭಾರತದಲ್ಲಿಯೇ ಮುಂದುವರಿದ, ಅಭಿವೃದ್ಧಿ ಹೊಂದಿದ್ದ ರಾಜ್ಯಗಳಲ್ಲೊಂದು. ಕೇಂದ್ರ ಹೆಚ್ಚಿನ ತೆರಿಗೆ ಕಟ್ಟುವ, ಹತ್ತಾರು ನದಿಗಳಿರುವ, ಸಂಪಧ್ಭರಿತ ರಾಜ್ಯ. ಆದರೆ ಇಂತಹ ರಾಜ್ಯದಲ್ಲಿಯೂ ಸಹ ಗಾಳಿ, ಮಳೆ, ಬಿಸಿಲಿನಿಂದ ಪಾರಾಗಲು ನೆಲೆ ಇಲ್ಲದೇ ಲಕ್ಷಾಂತರ ಜನರು ಬೀದಿಯಲ್ಲಿದ್ದಾರೆ ಎಂಬುದೂ ಸಹ ವಾಸ್ತವ.
ಉಳುವವನೆ ಭೂ ಓಡೆಯ ನಂತಹ ಕಾಯ್ದೆಗಳ ಹೊರತಾಗಿಯೂ ಕೂಡ ಎಲ್ಲಾ ಕುಟುಂಬಗಳಿಗೂ ಭೂಮಿಯಿರಲಿ, ಕನಿಷ್ಟ ಸೂರು ಕೂಡ ಇಲ್ಲದೇ ಸಾವಿರಾರು ಕುಟುಂಬಗಳು ಬದುಕು ಸವೆಸುತ್ತಿರುವುದು ನಮ್ಮ ಅಭಿವೃದ್ದಿ ಮಾದರಿ ಯಾರ ಪರ ಎಂಬುದನ್ನು ತೋರಿಸುತ್ತದೆ.
ಇಂತಹ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಂದು ಕುಟುಂಬಕ್ಕೂ ತುಂಡು ಭೂಮಿ, ಒಂದು ಮನೆ ಇರಬೇಕೆಂದು ಒತ್ತಾಯಿಸಿ ಹಲವು ಭೂ-ವಸತಿ ಹೋರಾಟಗಳು ನಡೆದಿವೆ. ದೊಡ್ಡ ದೊಡ್ಡ ಸಂಘರ್ಷಗಳು ಏರ್ಪಟ್ಟಿವೆ. ಆದರೆ ಯಾವ ಸರ್ಕಾರಗಳೂ ಸಹ ಬಡಜನರ ಕೂಗಿಗೆ ಸ್ಪಂದಿಸಿಲ್ಲ. ಹಾಗಂತ ಹೋರಾಟ ಮಾತ್ರ ನಿಂತಿಲ್ಲ. ಈ ಚಳವಳಿಗಳ ಕಾರಣದಿಂದಾಗಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಜನರಿಗೆ ಭೂಮಿ, ವಸತಿ, ಹಕ್ಕು ಪತ್ರಗಳು ಸಿಕ್ಕಿವೆ.
ಈಗ ರಾಜ್ಯದ ಎಲ್ಲಾ ನಾಗರಿಕರ ವಸತಿ ಹಕ್ಕಿಗಾಗಿ ಒತ್ತಾಯಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷದ(CPI) ನೇತೃತ್ವದಲ್ಲಿ “ಸೂರಿಗಾಗಿ ಕೋಟಿ ಹೆಜ್ಜೆ” ಎಂಬ ಬೃಹತ್ ಕಾಲ್ನಡಿಗೆ ಜಾಥಾದ ಹೋರಾಟ ಆರಂಭವಾಗಿದೆ. ಬಳ್ಳಾರಿಯಿಂದ ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಮಾರ್ಗವಾಗಿ ಬೆಂಗಳೂರಿನವರೆಗೂ ಕನಿಷ್ಠ ಒಂದು ಸಾವಿರ ಕಿ.ಮೀ ನಡೆದು ಬರುವ ವಿಶಿಷ್ಠ ಹೋರಾಟ ನಡೆಯುತ್ತಿದೆ. ಫೆ.02ರಂದು ಬಳ್ಳಾರಿಯಲ್ಲಿ ಆರಂಭಗೊಂಡ ಜಾಥವು ಯಶಸ್ವಿಯಾಗಿ ದಾವಣಗೆರೆ ಜಿಲ್ಲೆ ದಾಟಿ ಚಿತ್ರದುರ್ಗವನ್ನು ತಲುಪಿದೆ.
ಜಾಥಾದ ವಿಡಿಯೋ ನೋಡಿ
ಸೂರಿಗಾಗಿ ಕೋಟಿ ಹೆಜ್ಜೆ – ಸಾವಿರ ಕಿ.ಮೀ ಪಾದಯಾತ್ರೆ
ವಸತಿ-ನಿವೇಶನ ರಹಿತರಿಗೆ ವಸತಿ ಹಕ್ಕಿಗಾಗಿ ಆಗ್ರಹಿಸಿ "ಸೂರಿಗಾಗಿ ಕೋಟಿ ಹೆಜ್ಜೆ – ಸಾವಿರ ಕಿ.ಮೀ ಪಾದಯಾತ್ರೆ" ಬಳ್ಳಾರಿಯಿಂದ ಆರಂಭಗೊಂಡಿದ್ದು ಚಿತ್ರದುರ್ಗ ತಲುಪಿದೆ…
Posted by Naanu Gauri on Thursday, March 12, 2020
ಪಕ್ಷದ ಮುಖಂಡರು, ಕಾರ್ಯಕರ್ತರು, ಜನರು ಸೇರಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾದಯಾತ್ರೆಯ ಪ್ರತಿ ಊರಿನಲ್ಲಿಯೂ ಸಹ ಜಾಗೃತಿ, ಬಹಿರಂಗ ಕಾರ್ಯಕ್ರಮಗಳು ನಡೆಯುತ್ತಿವೆ. ವಸತಿ ಮತ್ತು ನಿವೇಶನ ರಹಿತರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಎಂ.ಸಿ ಚಂದ್ರಶೇಖರ್ ಡೋಂಗ್ರೆ, ಕಾರ್ಯದರ್ಶಿ ಸಿ. ಧರ್ಮರಾಜ, ಡಾ.ಕೆ.ಎಸ್ ಜನಾರ್ದನ್, ಎ.ಎಸ್ ಮೋನಪ್ಪ, ಪ್ರಸನ್ನಕುಮಾರ್, ಎಎಸ್ಎಫ್ಐ ಜ್ಯೋತಿ ಕೆ, ವಿಠಲ ಗಜಾಪುರ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಕಾಲಜಾಥದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
“ಸೂರಿಗಾಗಿ ಸಮರ ಹೋರಾಟ ಆರಂಭಿಸಿದ್ದೇವೆ. ಐದು ಜಿಲ್ಲೆಗಳಲ್ಲಿ ಒಂದು ಸಾವಿರ ಕಿ.ಮೀ ನಡೆಯುವ ಈ ಕಾಲ್ನಡಿಗೆ ಜಾಥ 60 ದಿನಗಳ ಕಾಲ ನಡೆಯಲಿದೆ. ಇದರಲ್ಲಿ ಪ್ರತಿಯೊಬ್ಬ ಸಂಗಾತಿಯು ಕನಿಷ್ಠ ಒಂಟು ಕೋಟಿ, ನಲವತ್ತು ಲಕ್ಷ ಹೆಜ್ಜೆಗಳನ್ನು ಹಾಕಲಿದ್ದಾರೆ. ಈಗಾಗಲೇ 500 ಕಿ.ಮೀ ಕ್ರಮಿಸಿ ಹಲವು ತಾಲ್ಲೂಕುಗಳನ್ನು ದಾಟಿ ಬಂದಿದ್ದೇವೆ. ಒಂದು ಮನೆಯಲ್ಲಿ ಹಲವಾರು ಕುಟುಂಬಗಳು, ಅರ್ಜಿ ಸಲ್ಲಿಸಲೂ ಗೊತ್ತಿಲ್ಲದ ಕುಟುಂಬಗಳು ವಾಸಿಸುತ್ತಿವೆ. ಪರಿಶಿಷ್ಠ ಜಾತಿ, ವರ್ಗದ ನಿರಾಶ್ರಿತರೇ ಹೆಚ್ಚಿರುವುದು ಕಂಡುಬಂದಿದೆ ಇವೆರೆಲ್ಲರ ಪರವಾಗಿ ದನಿಯೆತ್ತುವುದು ನಮ್ಮ ಕರ್ತವ್ಯವಾಗಿದೆ ಎನ್ನುತ್ತಾರೆ ಹೋರಾಟದ ನೇತೃತ್ವ ವಹಿಸಿರುವ ಸಾತಿ ಸುಂದರೇಶ್ರವರು.
ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಭೀಕರ ಬಡತನವಿದೆ. ಅಲ್ಲಿನ ಶಾಸಕ ಬಿ.ಶ್ರೀರಾಮುಲುರವರು ಸಚಿವರಾಗಿದ್ದಾರೆ. ನಾನು ವಾಲ್ಮೀಕಿ ಸಮುದಾಯದ ದೊಡ್ಡ ನಾಯಕ ಎಂದು ಹೇಳುವ ಶ್ರೀರಾಮುಲುರವರು ತಮ್ಮ ಮಗಳ ಮದುವೆಗೆ ಕನಿಷ್ಠ 500ಕೋಟಿ ರೂ ಖರ್ಚು ಮಾಡುತ್ತಿದ್ದಾರೆ. ಅದೇ ದುಡ್ಡನ್ನು ಉಳಿಸಿ ತಲಾ 5 ಲಕ್ಷ ರೂಗಳಿಗೆ ಒಂದರಂತೆ ಮನೆ ಕಟ್ಟಿಕೊಟ್ಟಿದ್ದರೆ ಆ ಕ್ಷೇತ್ರದಲ್ಲಿ ಕನಿಷ್ಟ 10000 ಕುಟುಂಬಗಳಿಗೆ ನೆಲೆ ಸಿಗುತ್ತಿತ್ತು. ಈ ದೇಶದ ನೆಲ ಜಲವನ್ನು ಲೂಟಿ ಮಾಡುತ್ತಿರುವವರು ಐಷರಾಮಿ ಜೀವನ ನಡೆಸುತ್ತಿದ್ದರೆ ಜನತೆ ಸಂಕಷ್ಟದಲ್ಲಿದ್ದಾರೆ. ಹಾಗಾಗಿ ಇದು ರಾಜಕೀಯ ಹೋರಾಟವಾಗಲಿದೆ ಎಂದು ಸಾತಿ ಸುಂದರೇಶ್ ತಿಳಿಸಿದ್ದಾರೆ.
ಹಕ್ಕೊತ್ತಾಯಗಳೇನು
ನಿವೇಶನಕ್ಕಾಗಿ ಕಾದಿರಿಸಿದ ಒತ್ತುವರಿಯಾದ ಕಂದಾಯ ಭೂಮಿಯನ್ನು ಕೂಡಲೇ ಸರ್ಕಾರ ವಶಪಡಿಸಿಕೊಂಡು ಬಡಜನರಿಗೆ ನಿವೇಶನಗಳನ್ನು ಹಂಚಬೇಕು.
ಸರ್ಕಾರ ಕಂದಾಯ ಭೂಮಿಯನ್ನು ನಿವೇಶನಕ್ಕಾಗಿ ಮಂಜೂರು ಮಾಡಬೇಕು.
ಒಂದು ವೇಳೆ ಸರ್ಕಾರಿ ಜಮೀನು ಲಭ್ಯವಿಲ್ಲದೇ ಇದ್ದಲ್ಲಿ, ಸರ್ಕಾರವು ಭೂಮಿಯ ಮಾರುಕಟ್ಟೆ ದರಕ್ಕನುಗುಣವಾಗಿ ಅನುದಾನ ಬಿಡುಗಡೆ ಮಾಡಿ, ನಿವೇಶನಕ್ಕಾಗಿ ಖಾಸಗಿ ಭೂಮಿ ಖರೀದಿಗೆ ಮುಂದಾಗಬೇಕು.
ಈ ರೀತಿ ಖಾಸಗಿ ಜಮೀನಿನ ಖರೀದಿ ಸಾಧ್ಯವಾಗಿದಿದ್ದ ಪಕ್ಷದಲ್ಲಿ, ಮನೆ ನಿವೇಶನಗಳ ಹಂಚಿಕೆಗಾಗಿ 1972ರ ವಸತಿ ನಿವೇಶನಗಳ ಮಂಜೂರಾತಿಗಾಗಿ ಕರ್ನಾಟಕ ಭೂ ಸ್ವಾಧೀನ ಕಾಯ್ದೆ (1973ರ ಕರ್ನಾಟಕ ಕಾಯ್ದೆ 18)ರ ಪ್ರಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು.
5 ಎಕರೆಗಿಂತ ಹೆಚ್ಚು ಸರ್ಕಾರಿ ಭೂಮಿ ಒತ್ತುವರಿ ಮಾಡಿರುವುದನ್ನು ಖುಲ್ಲಾ ಮಾಡಿಸಿ, ಅದನ್ನು ನಿವೇಶನರಹಿತರಿಗೆ ಮತ್ತು ಭೂರಹಿತರಿಗೆ ಹಂಚಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ವಸತಿ ಯೋಜಣಿಗಳ ಸಹಾಯಧನವನ್ನು 5 ಲಕ್ಷ ರೂಗಳಿಗೆ ಹಚ್ಚಿಸಬೇಕು.
ಏಪ್ರಿಲ್ ಮೊದಲ ವಾರದಲ್ಲಿ ಕಾಲ್ನಡಿಗೆ ಜಾಥವು ಬೆಂಗಳೂರು ತಲುಪಲಿದ್ದು ಸರ್ಕಾರಗಳ ಗಮನ ಸೆಳೆಯಲು ಬೃಹತ್ ಬಹಿರಂಗ ಸಮಾವೇಶ ನಡೆಯುವ ಸಾಧ್ಯತೆಯಿದೆ. ಈ ಮೂಲಕ ಭೂಮಿ ಮತ್ತು ವಸತಿ ಹೋರಾಟಕ್ಕೆ ಮತ್ತಷ್ಟು ಜೀವ ತಂದು ಕೊಡುವ ಕೆಲಸವನ್ನು ಸಿಪಿಐ ಮಾಡುತ್ತಿದೆ. ಸರ್ಕಾರಗಳು ಈ ಹೋರಾಟಕ್ಕೆ ಹೇಗೆ ಸ್ಪಂದಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.