ಭಾನುವಾರ ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ತಮ್ಮ ಹೊಸ ರಾಜಕೀಯ ಪಕ್ಷವನ್ನು ಪ್ರಕಟಿಸಲಿದ್ದಾರೆ. ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ದಿವಂಗತ ಕಾನ್ಶಿ ರಾಮ್ ಅವರ ಜನ್ಮ ದಿನಾಚರಣೆಯಂದು ಈ ಘೋಷಣೆ ನಡೆಯಲಿದೆ.
ಭೀಮ್ ಆರ್ಮಿಯ ವಕ್ತಾರರ ಪ್ರಕಾರ ತಮ್ಮ ಪಕ್ಷಕ್ಕೆ ಆಜಾದ್ ಬಹುಜನ ಪಕ್ಷ, ಬಹುಜನ ಅವಮ್ ಪಕ್ಷ ಅಥವಾ ಆಜಾದ್ ಸಮಾಜ ಪಕ್ಷ ಎಂದು ಹೆಸರಿಡಲು ಆಲೋಚಿಸಲಾಗಿದೆ. ಬಹುಪಾಲು ನಾಯಕರು ಮತ್ತು ಪದಾಧಿಕಾರಿಗಳು ಆಜಾದ್ ಬಹುಜನ ಪಕ್ಷವನ್ನು ಬೆಂಬಲಿಸಿದ್ದಾರೆ. ಆದರೆ ಚುನಾವಣಾ ಆಯೋಗವು ಅನುಮೋದನೆ ನೀಡಿದ ನಂತರ ಹೆಸರನ್ನು ಅಂತಿಮಗೊಳಿಸಲಾಗುತ್ತದೆ.
ಭಾನುವಾರದಂದು ಪಕ್ಷವು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತದೆ. ಪಕ್ಷದ ಸದಸ್ಯತ್ವಕ್ಕೆ ಚಾಲನೆ ನೀಡುತ್ತದೆ ಮತ್ತು ತನ್ನ ಕಾರ್ಯಸೂಚಿಯನ್ನು ನಿಗದಿಪಡಿಸುತ್ತದೆ. ಯುವಕರನ್ನು ಸಜ್ಜುಗೊಳಿಸಲು ಭೀಮ್ ಆರ್ಮಿ ಈಗಾಗಲೇ ತನ್ನ ವಿದ್ಯಾರ್ಥಿ ವಿಭಾಗವಾದ ಭೀಮ್ ಆರ್ಮಿ ಸ್ಟೂಡೆಂಟ್ಸ್ ಫೆಡರೇಶನ್ (ಬಿಎಎಸ್ಎಫ್) ಅನ್ನು ಪ್ರಾರಂಭಿಸಿದೆ. ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಿದ ನಂತರ ಭೀಮ್ ಆರ್ಮಿ ಪಕ್ಷದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.
ಭೀಮ್ ಆರ್ಮಿಯು ಹೊಸ ರಾಜಕೀಯ ಪಕ್ಷದ ಅಗತ್ಯವನ್ನು ಎತ್ತಿ ತೋರಿಸುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನವನ್ನು ಪ್ರಾರಂಭಿಸಿದೆ. ಚಂದ್ರಶೇಖರ್ ಆಜಾದ್ ದಲಿತರು, ಹಿಂದುಳಿದವರು, ಮುಸ್ಲಿಮರಿಗೆ ಪಕ್ಷವನ್ನು ಸೇರಲು ಮತ್ತು ಅದನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ. ಭೀಮ್ ಆರ್ಮಿಯು ಸಿಎಎ, ಎನ್ಪಿಆರ್ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆಗಳನ್ನು ಬೆಂಬಲಿಸುತ್ತಿದೆ.
ಮಾರ್ಚ್ 2 ರಂದು ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ 2022 ರ ಯುಪಿ ವಿಧಾನಸಭಾ ಚುನಾವಣೆಗೆ ಉತ್ತರ ಪ್ರದೇಶದ ಐದು ಸಣ್ಣ ರಾಜಕೀಯ ಪಕ್ಷಗಳು ಪ್ರಾರಂಭಿಸಿದ “ಭಾಗಿದಾರಿ ಸಂಕಲ್ಪ ಮೋರ್ಚಾ”ಗೆ ಸೇರ್ಪಡೆಗೊಳ್ಳುವುದಾಗಿ ಸೂಚಿಸಿದ್ದರು.
ಡಿಸೆಂಬರ್ ತಿಂಗಳಿನಲ್ಲಿಯೇ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನವೇ ಚಂದ್ರಶೇಖರ್ ಆಜಾದ್ ರಾಜಕೀಯ ಪಕ್ಷ ಘೋಷಣೆ ಮಾಡಬೇಕಿತ್ತು. ಆದರೆ ಸಿಎಎ ವಿರೋಧಿ ಹೋರಾಟದಲ್ಲಿ ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದರಿಂದ ಅದು ಸಾಧ್ಯವಾಗಿರಲಿಲ್ಲ.