ಕೊರೊನಾ ಪಾಸಿಟಿವ್ ಆದ ಕಾರಣಕ್ಕೆ ಮೇ 06 ರಂದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಶತಾಯುಷಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿಯವರು ಸಂಪೂರ್ಣ ಗುಣಮುಖರಾಗಿದ್ದು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಜಯದೇವ ಆಸ್ಪತ್ರೆಯ ನಿರ್ದೇಶಕ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ವೈದ್ಯರು, ಮತ್ತು ಸಿಬ್ಬಂದಿ ಬಹಳ ಕಾಳಜಿಯಿಂದ ಅವರನ್ನು ನೋಡಿಕೊಂಡರು ಎಂದು ದೊರೆಸ್ವಾಮಿಯವರ ಒಡನಾಡಿಗಳು ತಿಳಿಸಿದ್ದಾರೆ.

ಪ್ರತಿದಿನವೂ ದೊರೆಸ್ವಾಮಿಯವರ ರಕ್ತದಲ್ಲಿನ ಆಮ್ಲಜನಕದ ಮಟ್ಟ, ಬಿಪಿ, ಶುಗರ್ ಪರೀಕ್ಷೆ ಮಾಡಲಾಗುತ್ತಿತ್ತು. ಅವರ ರಕ್ತದಲ್ಲಿನ ಆಮ್ಲಜನಕದ ಮಟ್ಟ ಎಂದೂ 96ಕ್ಕಿಂತ ಕೆಳಗಿಳಿದಿರಲಿಲ್ಲ. ಎಂದಿನಂತೆ ದಿನಪತ್ರಿಕೆ, ಪುಸ್ತಕಗಳನ್ನು ಓದುತ್ತಾ ಧೈರ್ಯದಿಂದ ಇದ್ದರು ಎಂದು ತಿಳಿಸಿದ್ದಾರೆ.
ಇಂದು ಅವರು ಸಂಪೂರ್ಣ ಗುಣಮುಖರಾಗಿದ್ದರು. ಕೊರೊನಾ ಪರೀಕ್ಷೆಯಲ್ಲಿಯೂ ನೆಗೆಟಿವ್ ಬಂದ ಕಾರಣಕ್ಕೆ ಅವರನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಜಯನಗರದ ಅವರ ಮನೆಗೆ ಕರೆದೊಯ್ಯಲಾಗಿದೆ. 104 ವರ್ಷದ ದೊರೆಸ್ವಾಮಿಯವರು ಕೊರೊನಾದಿಂದ ಚೇತರಿಸಿಕೊಂಡಿದ್ದು ಇತರರಿಗೂ ಮಾದರಿಯಾಗಲಿದೆ.
ಇದನ್ನೂ ಓದಿ: ಈಗ ಸರ್ಕಾರವೇನು ಮಾಡಬೇಕು?: ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡಫ್ಲೊ ಸಲಹೆಗಳು


