ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಪಾಕಿಸ್ತಾನದ ಸಚಿವ ಹನೀಫ್ ಅಬ್ಬಾಸಿ ಭಾರತಕ್ಕೆ ಪರಮಾಣು ಪ್ರತೀಕಾರದ ಬೆದರಿಕೆ ಹಾಕಿದ್ದಾರೆ. ಘೋರಿ, ಶಾಹೀನ್ ಮತ್ತು ಘಜ್ನವಿ ಕ್ಷಿಪಣಿಗಳು ಸೇರಿದಂತೆ ಪಾಕಿಸ್ತಾನದ ಕ್ಷಿಪಣಿ ಶಸ್ತ್ರಾಸ್ತ್ರಗಳು ಮತ್ತು 130 ಪರಮಾಣು ಸಿಡಿತಲೆಗಳನ್ನು “ಭಾರತಕ್ಕಾಗಿ ಮಾತ್ರ” ಮೀಸಲಿಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ಇತ್ತೀಚಿನ ನಿರ್ಧಾರಕ್ಕೆ ಪ್ರತಿಕ್ರಿಯೆಯಾಗಿ ಅಬ್ಬಾಸಿ ಈ ಬೆದರಿಕೆ ಹಾಕಿದ್ದಾರೆ.
ಭಾರತವು ಪಾಕಿಸ್ತಾನದ ನೀರು ಸರಬರಾಜನ್ನು ನಿಲ್ಲಿಸಲು ನಿರ್ಧರಿಸಿದರೆ, ಅದು “ಪೂರ್ಣ ಪ್ರಮಾಣದ ಯುದ್ಧಕ್ಕೆ ಸಿದ್ಧವಾಗಬೇಕು” ಎಂದು ಅಬ್ಬಾಸಿ ಬಹಿರಂಗವಾಗಿ ಘೋಷಿಸಿದ್ದಾರೆ. ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಕೇವಲ ಸಾಂಕೇತಿಕವಾಗಿ ಇರುವುದಲ್ಲ, ಬದಲಾಗಿ ದೇಶಾದ್ಯಂತ ಅವುಗಳನ್ನು ಇರಿಸಲಾಗಿದ್ದು, ಬಳಸಲು ಸಿದ್ಧವಾಗಿವೆ ಎಂದು ಹೇಳಿದ್ದಾರೆ.
“ಅವರು ನಮಗೆ ನೀರು ಸರಬರಾಜನ್ನು ನಿಲ್ಲಿಸಿದರೆ, ಅವರು ಯುದ್ಧಕ್ಕೆ ಸಿದ್ಧರಾಗಿರಬೇಕು. ನಮ್ಮಲ್ಲಿರುವ ಮಿಲಿಟರಿ ಉಪಕರಣಗಳು, ನಮ್ಮಲ್ಲಿರುವ ಕ್ಷಿಪಣಿಗಳು, ಅವು ಪ್ರದರ್ಶನಕ್ಕಾಗಿ ಇಟ್ಟಿರುವುದಲ್ಲ. ನಾವು ದೇಶಾದ್ಯಂತ ನಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ಎಲ್ಲಿ ಇರಿಸಿದ್ದೇವೆ ಎಂದು ಯಾರಿಗೂ ತಿಳಿದಿಲ್ಲ. ನಾನು ಮತ್ತೊಮ್ಮೆ ಹೇಳುತ್ತೇನೆ, ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಅವೆಲ್ಲದರ ಗುರಿಯು ನಿಮ್ಮ ಮೇಲೆಯಾಗಿದೆ” ಎಂದು ಅವರು ಎಚ್ಚರಿಸಿದ್ದಾರೆ.
1960 ರ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸುವುದು ಮತ್ತು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾಗಳನ್ನು ರದ್ದುಗೊಳಿಸುವುದು ಸೇರಿದಂತೆ ಪಹಲ್ಗಾಮ್ ದುರಂತ ದಾಳಿಗೆ ಭಾರತವು ಪ್ರತಿಕ್ರಮಗಳನ್ನು ತೆಗೆದುಕೊಂಡ ನಂತರ ಅಬ್ಬಾಸಿ ಈ ತೀಕ್ಷ್ಣ ಹೇಳಿಕೆ ನೀಡಿದ್ದಾರೆ. ಭಾರತದ ನಿರ್ಧಾರವನ್ನು ಅಪಹಾಸ್ಯ ಮಾಡಿದ ಸಚಿವ ಅಬ್ಬಾಸಿ, ಭಾರತವು ತನ್ನ ಕ್ರಮಗಳ ಪರಿಣಾಮಗಳನ್ನು ಅರಿತುಕೊಳ್ಳಲು ಪ್ರಾರಂಭಿಸುತ್ತಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಉಂಟಾದ ಅಡಚಣೆಯನ್ನು ಉಲ್ಲೇಖಿಸಿದ ಅಬ್ಬಾಸಿ, ಕೇವಲ ಎರಡು ದಿನಗಳಲ್ಲಿ ಭಾರತೀಯ ವಾಯುಯಾನದಲ್ಲಿ ಅದು ಉಂಟುಮಾಡಿದ ಅವ್ಯವಸ್ಥೆಯನ್ನು ಎತ್ತಿತೋರಿಸಿದ್ದಾರೆ. “ಇನ್ನೂ 10 ದಿನಗಳ ಕಾಲ ವಿಷಯಗಳು ಹೀಗೆ ಮುಂದುವರಿದರೆ, ಭಾರತದಲ್ಲಿನ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತವೆ” ಎಂದು ಹೇಳಿಕೊಂಡಿಕೊಂಡಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹೊಣೆಯನ್ನು, ತನ್ನ ಭದ್ರತಾ ಲೋಪಗಳನ್ನು ಪರಿಹರಿಸುವ ಬದಲು ಪಾಕಿಸ್ತಾನದ ಮೇಲೆ ಅವುಗಳನ್ನು ಹೊರಿಸುತ್ತಿದೆ ಎಂದು ಅಬ್ಬಾಸಿ ಟೀಕಿಸಿದ್ದಾರೆ. ಭಾರತವು ವ್ಯಾಪಾರ ಮತ್ತು ನೀರು ಸರಬರಾಜನ್ನು ಸ್ಥಗಿತಗೊಳಿಸಿದ ನಂತರದ ಸಂಭವನೀಯ ಆರ್ಥಿಕ ಪರಿಣಾಮಗಳಿಗೆ ಪಾಕಿಸ್ತಾನ ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರ.
ಪಾಕಿಸ್ತಾನದ ವಿರುದ್ಧ ಭಾರತ ತೆಗೆದುಕೊಂಡ ಯಾವುದೇ ಆರ್ಥಿಕ ಕ್ರಮಗಳನ್ನು ಎದುರಿಸಲು ದೇಶ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಈ ನಡುವೆ ಪಾಕಿಸ್ತಾನಿ ಸೇನೆಯು ಸತತ ಮೂರನೇ ರಾತ್ರಿಯೂ ನಿಯಂತ್ರಣ ರೇಖೆಯಾದ್ಯಂತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಮತ್ತು ಭಾರತೀಯ ಪಡೆಗಳು ಅವರಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿದವು ಎಂದು ವರದಿಯಾಗಿದೆ. 130
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಜನಿವಾರ ವಿವಾದ | ರಾಜ್ಯ ಸರ್ಕಾರ, ಕೆಇಎಗೆ ನೋಟಿಸ್ ಜಾರಿ ಮಾಡಿದ ಕರ್ನಾಟಕ ಹೈಕೋರ್ಟ್
ಜನಿವಾರ ವಿವಾದ | ರಾಜ್ಯ ಸರ್ಕಾರ, ಕೆಇಎಗೆ ನೋಟಿಸ್ ಜಾರಿ ಮಾಡಿದ ಕರ್ನಾಟಕ ಹೈಕೋರ್ಟ್