Homeಕರ್ನಾಟಕದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

ದಟ್ಟಾರಣ್ಯದೊಳಗೆ ಮೂರು ದಿನಗಳನ್ನು ಕಳೆದಿದ್ದು ಹೇಗೆ..ದಾರಿ ತಪ್ಪಿದ ಬಳಿಕ ಏನಾಯ್ತು? ನಾಪತ್ತೆ ವಿಚಾರ ಬಿಚ್ಚಿಟ್ಟ ಶರಣ್ಯ

- Advertisement -
- Advertisement -

ಕಳೆದ ಗುರುವಾರ (ಏಪ್ರಿಲ್ 2, 2026) ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಯುವತಿ ಶರಣ್ಯ, ಮೂರು ದಿನಗಳ ಬಳಿಕ, ಅಂದರೆ ನಾಪತ್ತೆಯಾದ ನಾಲ್ಕನೇ ದಿನ ಭಾನುವಾರ (ಏಪ್ರಿಲ್ 4, 2026) ಸಂಜೆ 6.10ರ ಸುಮಾರಿಗೆ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಅರಣ್ಯ ಇಲಾಖೆ, ಪೊಲೀಸರು, ನಕ್ಸಲ್ ನಿಗ್ರಹ ದಳದ (ಎಎನ್‌ಎಫ್‌) ಸಿಬ್ಬಂದಿ, ಸ್ಥಳೀಯ ಕುಡಿಯ ಜನಾಂಗದ ಜನರು ಹಾಗೂ ಸ್ಥಳೀಯ ಮುಖಂಡರು, ಸ್ವಯಂ ಸೇವಕರ ಜಂಟಿ ಪರಿಶ್ರಮದ ಫಲವಾಗಿ ಶರಣ್ಯ ಅಪಾಯದಿಂದ ಪಾರಾಗಿದ್ದಾರೆ. ಇವರೆಲ್ಲರೂ ಶರಣ್ಯ ನಾಪತ್ತೆಯಾದ ಕ್ಷಣದಿಂದ, ಆಕೆ ಪತ್ತೆಯಾಗುವವರೆಗೆ ಹಗಲಿರುಳು ಸತತವಾಗಿ ಹುಡುಕಾಟ ನಡೆಸಿದ್ದರು. ಡ್ರೋನ್, ಶ್ವಾನದಳ ಕೂಡ ಹುಡುಕಾಟಕ್ಕೆ ಸಾಥ್ ನೀಡಿತ್ತು. ಶಾಸಕರು, ಸಚಿವರು, ಸಂಸದರು ಸೇರಿದಂತೆ ಸರ್ಕಾರದ ಮಟ್ಟದಲ್ಲಿ ಕೂಡ ಶರಣ್ಯ ಪತ್ತೆಗೆ ಪ್ರಯತ್ನ ನಡೆದಿತ್ತು.

ಕೇರಳ ಸರ್ಕಾರ ಕೂಡ ಶರಣ್ಯ ನಾಪತ್ತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿತ್ತು. ಕರ್ನಾಟಕ-ಕೇರಳ ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದಲ್ಲೂ ಮಾಧ್ಯಮಗಳಲ್ಲಿ ಶರಣ್ಯ ನಾಪತ್ತೆ ವಿಚಾರ ಸುದ್ದಿಯಾಗಿತ್ತು. ಸ್ಥಳೀಯ ಆದಿವಾಸಿ ಜನರು ಶರಣ್ಯಳ ಸುರಕ್ಷಿತ ಹಿಂದಿರುಗುವಿಕೆಗಾಗಿ ಹರಣಕೆಯನ್ನೂ ಹೊತ್ತಿದ್ದರು. ಮಲೆ‌ಕುಡಿಯ ಜನಾಂಗ ತಮ್ಮ ದೈವದ ಮೊರೆ ಹೋಗಿತ್ತು. “ಶರಣ್ಯ ಬಳಲಿ ಒಂದೆಡೆ ಆಶ್ರಯ ಪಡೆದಿದ್ದಾಳೆ. ಸುರಕ್ಷಿತವಾಗಿ ಸಿಗಲಿದ್ದಾಳೆ‌” ಎಂದು ದೈವ ಮಲೆ ತಚ್ಚನ್ ನುಡಿದಿತ್ತು.

ಶರಣ್ಯ ಪತ್ತೆಯಾಗಿದ್ದು ಹೇಗೆ ಮತ್ತು ಎಲ್ಲಿ?

ಭಾನುವಾರ ಸಂಜೆಯ ವೇಳೆಗೆ, ಹುಡುಕಾಟದಲ್ಲಿ ನಿರತರಾದ ಸ್ಥಳೀಯ ನಿವಾಸಿಗಳು ಕಾಡಿನ ಒಂದು ಭಾಗದಲ್ಲಿ ಕೂಗಾಟ ಕೇಳಿ ಅಲ್ಲಿಗೆ ಹೋಗಿ ನೋಡಿದಾಗ ಶರಣ್ಯ ಪತ್ತೆಯಾಗಿದ್ದಾರೆ ಎನ್ನಲಾಗಿದೆ. “ನಾವು ಶಬ್ದ ಕೇಳಿದ ಜಾಗಕ್ಕೆ ಹೋದಾಗ ಶರಣ್ಯ ಅಲ್ಲಿ ಕುಳಿತಿದ್ದರು” ಎಂದು ಅವರನ್ನು ಪತ್ತೆ ಮಾಡಿದ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೂಡ ಶರಣ್ಯ ಪತ್ತೆಯಾದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹುಡುಕಾಟಕ್ಕೆ ಶ್ರಮಿಸಿದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

ತಡಿಯಂಡಮೋಳ್ ಬೆಟ್ಟದ ತಪ್ಪಲಿನಿಂದ ಸುಮಾರು 3.5 ರಿಂದ 6 ಕಿ.ಮೀ ದೂರದಲ್ಲಿರುವ ಮಲೆತಿರಿಕೆ ಎಂಬ ದಟ್ಟ ಅರಣ್ಯ ಪ್ರದೇಶದಲ್ಲಿ ಶರಣ್ಯ ಸ್ಥಳೀಯರಿಗೆ ಸಿಕ್ಕಿದ್ದಾರೆ ಎಂದು ವರದಿಯಾಗಿದೆ. ಕೆಲವು ವರದಿಗಳ ಪ್ರಕಾರ ಅವರು ಅಲ್ಲಿನ ಪಾಳು ಬಿದ್ದ ಬಂಗಲೆ ಅಥವಾ ದೇವಸ್ಥಾನವೊಂದರಲ್ಲಿ ಆಶ್ರಯ ಪಡೆದಿದ್ದರು ಎಂದು ಹೇಳಲಾಗ್ತಿದೆ. ಸ್ಥಳೀಯ ಕಕ್ಕಬ್ಬೆ ಯವಕಪಾಡಿ ಗ್ರಾಮದ ಕುಡಿಯ ಸಮುದಾಯದ ಯುವಕರ ರಕ್ಷಣಾ ತಂಡಕ್ಕೆ ಶರಣ್ಯ ಮೊದಲು ಕಾಣ ಸಿಕ್ಕಿದ್ದಾರೆ ಎಂದು ವರದಿಯಾಗಿದೆ.

ಶರಣ್ಯ ನಾಪತ್ತೆಯಾಗಿದ್ದು ಹೇಗೆ?

ಕೊಚ್ಚಿಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕೋಝಿಕ್ಕೋಡ್‌ನ ನಾದಾಪುರಂ ಮೂಲದ ಶರಣ್ಯ, ಏಪ್ರಿಲ್ 2ರಂದು ಕೊಡಗಿಗೆ ಚಾರಣಕ್ಕೆ ಬಂದಿದ್ದರು. ಆನ್‌ಲೈನ್ ಮೂಲಕ ಚಾರಣ ಬುಕ್ ಮಾಡಿದ್ದ ಅವರು, ಅರಣ್ಯ ಇಲಾಖೆಯ ಅನುಮತಿಯೊಂದಿಗೆ 10 ಜನರ ತಂಡದ ಜೊತೆ ತಡಿಯಂಡಮೋಳ್ ಬೆಟ್ಟ ಹತ್ತಲು ಆರಂಭಿಸಿದ್ದರು. ಆದರೆ, ಬೆಟ್ಟದ ಮೇಲೆ ತಂಡದೊಂದಿಗೆ ಸಾಗುತ್ತಿದ್ದಾಗ ದಾರಿ ಮಧ್ಯೆ ನಾಯಿಯೊಂದರ ಜೊತೆ ಆಟವಾಡುತ್ತಾ ಶರಣ್ಯ ಹಿಂದೆ ಉಳಿದಿದ್ದರು. ಇದೇ ವೇಳೆ ಅವರು ತಂಡದಿಂದ ಬೇರ್ಪಟ್ಟು ದಾರಿ ತಪ್ಪಿದ್ದರು ಎನ್ನಲಾಗಿದೆ.

ಅರಣ್ಯದಿಂದ ಹೊರ ಬಂದ ಶರಣ್ಯ ಹೇಳಿದ್ದೇನು?

ಅರಣ್ಯದಿಂದ ಹೊರ ಬಂದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ ಶರಣ್ಯ, “ದಾರಿ ತಪ್ಪಿ ನಾನು ಕಾಡಿನಲ್ಲಿ ಬಾಕಿಯಾಗಿದ್ದೆ. ನಾನು ಬೆಟ್ಟದ ಇಳಿಜಾರು ಪ್ರದೇಶಕ್ಕೆ ಇಳಿದ ವೇಳೆ ನನ್ನ ಚಾರಣ ತಂಡದವರು ಬೆಟ್ಟದ ತುದಿಯಲ್ಲಿದ್ದರು. ನಾನು ಅವರತ್ತ ತೆರಳಲು ಎಡ ಬದಿಗೆ ಅರಣ್ಯದೊಳಗೆ ಮೇಲಕ್ಕೆ ನಡೆದೆ. ನಾನು ಮೇಲ್ಬಾಗಕ್ಕೆ ಬಂದು ತಲುಪಿದಾಗ, ಅವರು ಮೇಲೆಯೂ ಇರಲಿಲ್ಲ, ಕೆಳಗಡೆಯೂ ಇರಲಿಲ್ಲ. ಹಾಗಾಗಿ, ನಾನು ಮತ್ತೆ ಬೆಟ್ಟದ ಕೆಳ ಭಾಗಕ್ಕೆ ಹೋದೆ, ಸ್ವಲ್ಪ ಕೆಳಗೆ ಹೋದಾಗ ಮೊಬೈಲ್ ನೆಟ್‌ವರ್ಕ್ ಹೋಯಿತು” ಎಂದಿದ್ದಾರೆ.

“ನಾನು ಇಳಿದ ಬೆಟ್ಟದ ಕೆಳಗಿನ ಭಾಗ ದಟ್ಟಾರಣ್ಯವಾಗಿತ್ತು. ಅಲ್ಲಿ, ನಾನು ಏಕಾಂಕಿಯಾಗಿ ಸಂಜೆ 6.45ರವರೆಗೆ ಕಾಡಿನಲ್ಲಿ ನಡೆದೆ. ಕೊನೆಗೆ ನಾನು ನನ್ನ ಆಫೀಸ್ ಗೆಳೆಯ ಯಧುಗೆ ಕಾಲ್ ಮಾಡಲು ಮುಂದಾದೆ, ಅದು ಸಾಧ್ಯವಾಗಲಿಲ್ಲ. ನಂತರ ಅರಣ್ಯ ಇಲಾಖೆಯ ಸಹಾಯವಾಣಿಯನ್ನು ಸಂಪರ್ಕಿಸಲು ಮೆಸೇಜ್ ಟೈಪ್ ಮಾಡಿದ್ದೆ. ಮೆಸೇಜ್ ಟೈಪ್ ಮಾಡಿ ಮುಗಿಯುವಾಗ ಮೊಬೈಲ್ ಚಾರ್ಜ್ ಒಂದು ಪರ್ಸೆಂಟ್‌ಗೆ ಬಂದು ಮೊಬೈಲ್ ಸ್ವಿಚ್ ಆಫ್ ಆಯಿತು” ಎಂದು ತಿಳಿಸಿದ್ದಾರೆ.

“ಮೊಬೈಲ್ ಸ್ವಿಚ್ ಆಫ್ ಆದ ಬಳಿಕ, ನಾನು ಒಂದು ತೊರೆ ಮತ್ತು ಬಂಡೆ ಇರುವ ಜಾಗಕ್ಕೆ ತಲುಪಿದೆ. ಮೊದಲ ದಿನ (ಗುರುವಾರ) ರಾತ್ರಿ ಅಲ್ಲೇ ಉಳಿದುಕೊಂಡೆ. ಮರುದಿನ (ಶುಕ್ರವಾರ) ಬೆಳಗೆದ್ದಾಗ ಹಿಂದಿನ ದಿನ ನಡೆದ ಪರಿಣಾಮ, ಸ್ವಲ್ಪ ಕಾಲು ನೋವು ಇತ್ತು. ಹಾಗಾಗಿ, ಅಲ್ಲೆ ಉಳಿದುಕೊಂಡೆ. ರಕ್ಷಣಾ ತಂಡ ಡ್ರೋನ್ ಏನಾದರು ಹಾರಿಸಿದರೆ ನನ್ನನ್ನು ಕಾಣಲಿ ಎಂದು ಆಕಾಶ ಕಾಣುವ ಜಾಗದಲ್ಲೇ ಇದ್ದೆ” ಎಂದು ವಿವರಿಸಿದ್ದಾರೆ.

“ಮೂರನೇ ದಿನ (ಶನಿವಾರ) ಬೆಟ್ಟದ ತುದಿಯನ್ನು ಗುರಿಯಾಗಿಸಿ ನಡೆಯಲು ಪ್ರಯತ್ನಿಸಿದೆ. ಆದರೆ, ಅಂದು ಭಾರೀ ಮಳೆಯಾಯಿತು. ಪರಿಣಾಮ ನನ್ನ ಬಟ್ಟೆಯೆಲ್ಲ ಒದ್ದೆಯಾಯಿತು. ಸುಮಾರು ಒಂದು ಗಂಟೆ ಮಳೆ ಸುರಿಯಿತು. ಹಾಗಾಗಿ, ರಾತ್ರಿ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಸಂಪೂರ್ಣ ಚಳಿಯ ವಾತಾವರಣ ಇತ್ತು”

ಇಂದು (ಭಾನುವಾರ) ಮಧ್ಯಾಹ್ನ 12 ಗಂಟೆಯವರೆಗೆ ಅದೇ ಜಾಗದಲ್ಲಿ ನಾನು ಕಾದೆ. ನಂತರ ಇನ್ನೂ ಕಾದರೆ ಆಗುವುದಿಲ್ಲ ಎಂದು ಬೆಟ್ಟದ ತುದಿಯತ್ತ ನಡೆಯಲು ಪ್ರಾರಂಭಿಸಿದೆ. ಈ ವೇಳೆ ನನಗೆ ಸ್ಥಳೀಯರು ಸಿಕ್ಕಿದರು. ದಾರಿ ತಪ್ಪಿದ ದಿನದಿಂದ ಸ್ಥಳೀಯರು ಸಿಗುವವರೆಗೆ ನಾನು ಆಗಾಗ ಕೂಗುತ್ತಿದೆ. ಯಾರಾದರು ಕೇಳಿಸಿಕೊಂಡಾರು ಎಂಬ ಭರವಸೆ ನನಗಿತ್ತು. ಇಂದು ಬೆಟ್ಟದ ತುದಿಯ ಭಾಗಕ್ಕೆ ಸ್ವಲ್ಪ ಮೇಲಕ್ಕೇರಿ ಮರವೊಂದರ ಬುಡದಲ್ಲಿ ಕುಳಿತಾಗ ಯಾರದ್ದೋ ಶಬ್ದ ಕೇಳಿತು. ನಾನು ಕೂಗುವಾಗ ಆ ಕಡೆಯಿಂದ ಪ್ರತಿಕ್ರಿಯೆ ಬರುತ್ತಿತ್ತು. ನನ್ನ ಕೂಗು ಕೇಳುವಾಗ ಇವರು (ಸ್ಥಳೀಯರು) ಸುಮಾರು 3-4 ಕಿ.ಮೀ ದೂರದಲ್ಲಿದ್ದರು. ನಂತರ ತಕ್ಷಣ ಅವರು ನನ್ನ ಬಳಿ ತಲುಪಿದರು” ಎಂದು ತಿಳಿಸಿದ್ದಾರೆ.

“ನನ್ನ ಬಳಿ ಆಹಾರ ಏನು ಇರಲಿಲ್ಲ. ಚಾರಣಕ್ಕೆ ಹೋಗುವಾಗ ಕೊಂಡೊಯ್ದ ಅರ್ಧ ಲೀಟರ್ ನೀರಿನ ಬಾಟಲಿ ಮಾತ್ರ ಇತ್ತು. ದಿನಕ್ಕೆ ಮೂರು ಲೀಟರ್ ನೀರು ಕುಡಿಯುತ್ತಿದ್ದೆ. ನಾನಿದ್ದ ಜಾಗ ಆನೆ ಇರುವ ಪ್ರದೇಶ ಎಂದು ಅನಿಸುತ್ತದೆ. ನನಗೆ ಭಯ ಆಗಿರಲಿಲ್ಲ, ಏಕೆ ಭಯ ಆಗಿಲ್ಲವೋ ನನಗೇ ಗೊತ್ತಿಲ್ಲ” ಎಂದು ಶರಣ್ಯ ಹೇಳಿದ್ದಾರೆ.

“ನಿಮ್ಮ ಬಳಿ ಗೈಡ್ ಅಥವಾ ಮ್ಯಾಪ್ ಏನಾದರು ಇತ್ತ?” ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶರಣ್ಯ,”ನಾವು ಸಣ್ಣದೊಂದು ಚಾರಣಕ್ಕೆ ಪ್ಲ್ಯಾನ್ ಮಾಡಿದ್ದೆವು. ಹಾಗಾಗಿ, ಮೊಬೈಲ್, ಕ್ಯಾಮರಾ ಮತ್ತು ನೀರಿನ ಬಾಟಲಿ ಮಾತ್ರ ಇತ್ತು” ಎಂದಿದ್ದಾರೆ.

ಶರಣ್ಯ ಅವರನ್ನು ಮೊದಲು ಕಂಡ ಸ್ಥಳೀಯರು ಮಾತನಾಡಿ, “ನಮಗೆ ಯಾರೋ ಕೂಗುವುದು ಕೇಳಿಸಿತು. ನಾವು ಅದಕ್ಕೆ ಲಕ್ಷ್ಯವಾಗಿಸಿ ಹೋದೆವು ಎಂದಿದ್ದಾರೆ. ಶರಣ್ಯ ಇದ್ದ ಜಾಗದ ಬಗ್ಗೆ ಮಾತನಾಡಿದ ಸ್ಥಳೀಯರು, “ಅದು ಯಾರೂ ಉಳಿದುಕೊಳ್ಳುವ ಸ್ಥಳವಲ್ಲ. ಅಲ್ಲಿಗೆ ಯಾರೂ ಹೋಗುವುದಿಲ್ಲ” ಎಂದು ತಿಳಿಸಿದ್ದಾರೆ.

ಶರಣ್ಯ ಮನೋಸ್ಥರ್ಯಕ್ಕೆ ಮೆಚ್ಚುಗೆ

ದಟ್ಟ ಅರಣ್ಯದೊಳಗೆ ಮೂರು ದಿನಗಳನ್ನು ಕಳೆದ ಶರಣ್ಯ ಆರೋಗ್ಯವಾಗಿ ಪತ್ತೆಯಾಗಿದ್ದಾರೆ. ಕಾಡಿನಿಂದ ಹೊರ ಬಂದ ಬಳಿಕ ಅವರು ಮಾಧ್ಯಮಗಳ ಮುಂದೆ ಲವಲವಿಕೆಯಿಂದ ಮಾತನಾಡಿದ್ದಾರೆ. ಕಾಡಿನಲ್ಲಿ ಬಾಕಿಯಾದ ಬಗ್ಗೆ ಅವರು ಯಾವುದೇ ಭಯವನ್ನು ವ್ಯಕ್ತಪಡಿಸಿಲ್ಲ. ಇದನ್ನು ಗಮನಿಸಿದ ಸಾರ್ವಜನಿಕರು ಅಥವಾ ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ವೀಕ್ಷಕರು ಮತ್ತು ಬಳಕೆದಾರರು ಶರಣ್ಯಳ ಮನೋಸ್ಥೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಶರಣ್ಯ ಸುರಕ್ಷಿತವಾಗಿ ಮನೆಗ ಮರಳಿದ್ದಾರೆ.

ತಡಿಯಂಡಮೋಳ್ ಚಾರಣ

ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರವಾದ ತಡಿಯಂಡಮೋಳ್ ಮಡಿಕೇರಿ ತಾಲ್ಲೂಕಿನ ಕಕ್ಕಬ್ಬೆ ಗ್ರಾಮದ ಸಮೀಪದಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1,748 ಮೀಟರ್ ಎತ್ತರವಿದೆ. ಪಶ್ಚಿಮ ಘಟ್ಟಗಳ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುರುವ ಈ ಬೆಟ್ಟ, ಚಾರಣಿಗರ ನೆಚ್ಚಿನ ತಾಣವಾಗಿದೆ.

ತಡಿಯಂಡಮೋಳ್ ಚಾರಣವು ಕಕ್ಕಬ್ಬೆಯ ಅರಮನೆ ಸ್ಟಾಪ್‌ನಿಂದ ಪ್ರಾರಂಭವಾಗುತ್ತದೆ. ಇಲ್ಲಿಂದ ಶಿಖರ ತಲುಪಲು ಸುಮಾರು 6-8 ಕಿ.ಮೀ ನಡೆಯಬೇಕಾಗುತ್ತದೆ. ಬೆಟ್ಟದ ಬುಡದಲ್ಲಿರುವ ಐತಿಹಾಸಿಕ ನಾಲ್ಕುನಾಡು ಅರಮನೆ ಮತ್ತು ಶಿಖರದ ಮೇಲಿನಿಂದ ಕಾಣುವ ಮೋಡಗಳ ಸುಂದರ ನೋಟ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಅಕ್ಟೋಬರ್‌ನಿಂದ ಮಾರ್ಚ್ ತಿಂಗಳವರೆಗೆ ಇಲ್ಲಿನ ಹವಾಮಾನವು ಚಾರಣಕ್ಕೆ ಅತ್ಯಂತ ಪೂರಕವಾಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...