Homeಮುಖಪುಟ"ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ" ದೆಹಲಿ...

“ನೀನು ನಿಜವಾಗಿಯೂ ಅಂಬೇಡ್ಕರ್ ಮಗಳಾ ಎಂದು ತಿಳಿಯಲು ನಾವು ನಿನ್ನ ಡಿಎನ್‌ಎ ಟೆಸ್ಟ್ ಮಾಡುತ್ತೇವೆ” ದೆಹಲಿ ಸಭೆಯಲ್ಲಿ ದಲಿತ ಟ್ರಾನ್ಸ್ ಹೋರಾಟಗಾರ್ತಿ ಗ್ರೇಸ್ ಬಾನುಗೆ ಜಾತಿ ನಿಂದನೆ ಆರೋಪ

- Advertisement -
- Advertisement -

ಕೇಂದ್ರ ಸರ್ಕಾರದ ವಿವಾದಾತ್ಮಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ವಿರುದ್ಧ ಕಳೆದ ಕೆಲ ವಾರಗಳಿಂದ ಇಡೀ ಟ್ರಾನ್ಸ್‌ಜೆಂಡರ್ ಮತ್ತು ಪ್ರಗತಿಪರ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ನಡುವೆ ಶುಕ್ರವಾರ (ಏ.3) ದೆಹಲಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಸಮಾಲೋಚನಾ ಸಭೆಯೊಂದು ವಿಕೋಪಕ್ಕೆ ತಿರುಗಿದ್ದು, ಟ್ರಾನ್ಸ್‌ಜೆಂಡರ್ ಸಮುದಾಯದ ಒಳಗಡೆಯೇ ಜಾತಿ ತಾರತಮ್ಯ ಎಷ್ಟು ಆಳವಾಗಿ ಬೇರೂರಿದೆ ಎಂಬುವುದು ಬಯಲಾಗಿದೆ.

ದಲಿತ ಮತ್ತು ಟ್ರಾನ್ಸ್‌ಜೆಂಡರ್ ಹಕ್ಕುಗಳ ಹಿರಿಯ ಹೋರಾಟಗಾರ್ತಿ ಗ್ರೇಸ್ ಬಾನು ಅವರು ಏಪ್ರಿಲ್ 3ರಂದು ದೆಹಲಿಯ ‘ದಿ ಲಲಿತ್’ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತೀವ್ರವಾದ ಮೌಖಿಕ ದಾಳಿ ಮತ್ತು ದೈಹಿಕ ದೌರ್ಜನ್ಯದ ಬೆದರಿಕೆಯನ್ನು ಎದುರಿಸಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ಈ ಭೀಕರ ಅನುಭವದ ಬಗ್ಗೆ ವಿವರವಾದ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

ಆರಂಭದಲ್ಲಿ, ಈ ಸಮಾಲೋಚನಾ ಸಭೆಯ ಕಾರ್ಯಸೂಚಿಯ ಪ್ರಕಾರ ಪ್ರಖ್ಯಾತ ಟ್ರಾನ್ಸ್‌ಜೆಂಡರ್ ಹಕ್ಕುಗಳ ಹೋರಾಟಗಾರ್ತಿ, ಬಾಲಿವುಡ್ ನಟಿ, ಭರತನಾಟ್ಯ ನೃತ್ಯಗಾರ್ತಿ ಹಾಗೂ ಕಿನ್ನರ್ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಆಗಿರುವ ಲಕ್ಷ್ಮಿ ನಾರಾಯಣ ತ್ರಿಪಾಠಿ (ಎನ್‌ಎನ್‌ಟಿ) ಅವರನ್ನು ಮುಖ್ಯ ಭಾಷಣಕಾರರನ್ನಾಗಿ ನಿಗದಿಪಡಿಸಲಾಗಿತ್ತು.

“ಆಕೆ (ಲಕ್ಷ್ಮಿ ನಾರಾಯಣ ತ್ರಿಪಾಠಿ) ಅನುಸರಿಸುವ ಬ್ರಾಹ್ಮಣ್ಯದ ಹಿಂದುತ್ವ ಸಿದ್ಧಾಂತದ ಕಾರಣದಿಂದಾಗಿ, ಮತ್ತೊಬ್ಬ ಅಂಬೇಡ್ಕರ್ ವಾದಿ ಹೋರಾಟಗಾರ್ತಿ ಮತ್ತು ನಾನು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ್ದೆವು. ನಮ್ಮ ಆಕ್ಷೇಪಣೆಗಳನ್ನು ಪರಿಗಣಿಸಿ, ಆಯೋಜಕರಾದ ಹಮ್‌ಸಫರ್ ಟ್ರಸ್ಟ್, ಕೆಎಸ್‌ಎಫ್ ಮತ್ತು ನಾಜ್ ಸಂಸ್ಥೆಗಳು ಪರಿಷ್ಕೃತ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿದವು, ಆ ನಂತರವಷ್ಟೇ ನಾನು ಕಾರ್ಯಕ್ರಮಕ್ಕೆ ಹಾಜರಾದೆ. ಸಮಾಲೋಚನೆಯ ವೇಳೆ, ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರು ‘ಜೈ ಶ್ರೀ ಮಹಾಕಾಲ್’ ಮತ್ತು ‘ನಾನು ಬ್ರಾಹ್ಮಣಳು ಎಂದು ಹೆಮ್ಮೆಪಡುತ್ತೇನೆ’ ಎಂದು ಹೇಳುವ ಮೂಲಕ ಭಾಷಣ ಪ್ರಾರಂಭಿಸಿದರು; ಇದಕ್ಕೆ ನಾನು ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಅಷ್ಟೇ ಅಲ್ಲದೆ, ಅವರು ಮಾತನಾಡುವಾಗ ಅಥವಾ ಆನಂತರವೂ ನಾನು ಯಾವುದೇ ಅಡ್ಡಿಪಡಿಸಲಿಲ್ಲ ಅಥವಾ ಪ್ರತಿಕ್ರಿಯಿಸಲಿಲ್ಲ. ವಾಸ್ತವವಾಗಿ, ಅವರು ಅಲ್ಲಿ ನೆರೆದಿದ್ದ ಕೆಲವು ಯುವ ಟ್ರಾನ್ಸ್‌ಜೆಂಡರ್‌ಗಳನ್ನು ಅವರು ತಮ್ಮ ಮಕ್ಕಳೆಂದೇ ಕರೆದರು” ಎಂದು ಬಾನು ತಿಳಿಸಿದ್ದಾರೆ.

ಬಾನು ಅವರ ಹೇಳಿಕೆಯ ಪ್ರಕಾರ, ಅವರು ಸಭೆಯನ್ನು “ಜೈ ಭೀಮ್!” ಎಂದು ಸ್ವಾಗತಿಸಿ, “ನಾವೆಲ್ಲರೂ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ರಮಾಬಾಯಿ ಅವರ ಮೊಮ್ಮಕ್ಕಳು” ಎಂದು ಹೇಳಿದ ನಂತರ ಸಂಘರ್ಷ ಭುಗಿಲೆದ್ದಿದೆ. ಬಾನು ಕೇಂದ್ರದ ತಿದ್ದುಪಡಿ ಕಾಯ್ದೆಯನ್ನು “ಹಿಂದುತ್ವ ಬ್ರಾಹ್ಮಣಶಾಹಿ ಪಿತೃಪ್ರಧಾನ ಕಾಯ್ದೆ” ಎಂದು ಟೀಕಿಸಿದ್ದರು ಎನ್ನಲಾಗಿದೆ.

“ನಾನು ಮಾತನಾಡಿದ ಸಮಿತಿ ಚರ್ಚೆಯು ಊಟದ ಸಮಯಕ್ಕೆ ಹತ್ತಿರವಾಗುತ್ತಿದ್ದಂತೆ ಮುಕ್ತಾಯವಾಯಿತು. ತದನಂತರ, ಲಕ್ಷ್ಮಿ ನಾರಾಯಣ ತ್ರಿಪಾಠಿ ಪ್ರತಿಕ್ರಿಯಿಸಲು ಮುಂದಾದರು. ಸಂಘಟಕರು ಸ್ವಲ್ಪ ಕಾಯುವಂತೆ ಸೂಚಿಸಿದರೂ ಸಹ, ಮೈಕ್ ಕೈಗೆತ್ತಿಕೊಂಡ ತ್ರಿಪಾಠಿ ಅವರು, ಆಕ್ರಮಣಕಾರಿ ಮತ್ತು ಜಾತಿ ನಿಂದನೆಯ ಧಾಟಿಯಲ್ಲಿ ನನ್ನ ಹೆಸರನ್ನು ನೇರವಾಗಿ ಪ್ರಸ್ತಾಪಿಸಿ ಕೂಗಾಡಿದರು. ತಾನು ಬ್ರಾಹ್ಮಣಳು ಎಂಬುದನ್ನು ಪ್ರತಿಪಾದಿಸಿದ ಅವರು, ತಾನೂ ಕೂಡ ಯಾವುದೇ ದಲಿತರಷ್ಟೇ ತುಳಿತಕ್ಕೆ ಒಳಗಾದ ಸಂತ್ರಸ್ತೆ ಎಂದು ವಾದಿಸಿದರು,” ಎಂದು ಬಾನು ವಿವರಿಸಿದ್ದಾರೆ. ಬಾನು ಅವರ ಪ್ರಕಾರ, ಲಕ್ಷ್ಮಿ ಅವರು ಮೈಕ್ ಕಸಿದುಕೊಂಡು, ಜಾತಿವಾದಿ ಧಾಟಿಯಲ್ಲಿ ಬಾನು ಮೇಲೆ ಕಿರುಚಾಡಿದ್ದಾರೆ ಮತ್ತು ತಮ್ಮ ಬ್ರಾಹ್ಮಣ ಅಸ್ಮಿತೆಯನ್ನು ಎತ್ತಿಹಿಡಿದಿದ್ದಾರೆ.

en.themooknayak.com ವರದಿ ಪ್ರಕಾರ, ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಪುರುಷ ಬಾಡಿಬಿಲ್ಡರ್, ವಕೀಲ ಮತ್ತು ಹೋರಾಟಗಾರ ಆರ್ಯನ್ ಪಾಶಾ ಅವರು ಹಿಂದಿಯಲ್ಲಿ ಬಾನು ಅವರ ಮೇಲೆ ಕಿರುಚಾಡಿದಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು: “ನೀನು ನಿಜವಾಗಿಯೂ ಅಂಬೇಡ್ಕರ್ ಮಗಳೇ ಎಂದು ತಿಳಿಯಲು ನಾವು ನಿನ್ನ ಡಿಎನ್ಎ ಪರೀಕ್ಷೆ ಮಾಡುತ್ತೇವೆ!” ಎಂದು ಅವರು ಕೂಗಿದರು. ಬಾನು ಅವರಿಗೆ ಹಿಂದಿ ಅರ್ಥವಾಗುವುದಿಲ್ಲ ಎಂಬುದು ತಿಳಿದಿದ್ದರೂ, ಪಾಶಾ ಅವರು ಮೈಕ್ ಹಿಡಿದು ಅವರ ಬಳಿ ನಡೆದು ಬಂದು, ದೈಹಿಕವಾಗಿ ಹೆದರಿಸುವ ಉದ್ದೇಶದಿಂದ ಅತ್ಯಂತ ಹತ್ತಿರದಲ್ಲಿ ಬೆದರಿಸುವಂತೆ ನಿಂತರು ಎಂದು ಆರೋಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೋಯಲ್ ಘೋಷ್ ಎಂಬವರು ಪಾಶಾ ಅವರ ವರ್ತನೆಯನ್ನು ಪ್ರಶ್ನಿಸಿದಾಗ, ಅವರು ಘೋಷ್ ಅವರ ಕಾಲರ್ ಹಿಡಿದು ಎಳೆದಾಡಿದರು ಎಂದು ಆರೋಪಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸಹ-ಪ್ಯಾನಲಿಸ್ಟ್‌ಗಳು ಮಧ್ಯಪ್ರವೇಶಿಸಿ ಅವರನ್ನು ತಡೆಯಬೇಕಾಯಿತು ಎಂದು ವರದಿ ಉಲ್ಲೇಖಿಸಿದೆ.

ಈ ಇಡೀ ಘಟನೆಯುದ್ದಕ್ಕೂ ಬಾನು ಅವರು ಶಾಂತತೆಯನ್ನು ಕಾಪಾಡಿಕೊಂಡರು. ಆಯೋಜಕರಾದ ಹಮ್‌ಸಫರ್ ಟ್ರಸ್ಟ್, ಕೆಎಸ್‌ಎಫ್ ಮತ್ತು ನಾಜ್ ಫೌಂಡೇಶನ್ ನಂತರ ವೈಯಕ್ತಿಕವಾಗಿ ಬಾನು ಅವರ ಕ್ಷಮೆಯಾಚಿಸಿದರಾದರೂ, ಸಾರ್ವಜನಿಕವಾಗಿ ತಟಸ್ಥ ನಿಲುವನ್ನು ತಳೆದರು ಎಂದಿದೆ.

themooknayak.com ಈ ಗಂಭೀರ ಆರೋಪಗಳ ಕುರಿತು ಪ್ರತಿಕ್ರಿಯೆ ಮತ್ತು ವಿವರಣೆ ಕೋರಿ ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರನ್ನು ಸಂಪರ್ಕಿಸಿತು, ಆದರೆ ಯಾವುದೇ ಪ್ರತಿಕ್ರಿಯೆಗೆ ಅವರು ಲಭ್ಯವಾಗಿಲ್ಲ. ಆಯೋಜಕ ತಂಡದ ಸದಸ್ಯರೊಬ್ಬರು ಸಹ ಈ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದ ಭಾರತದ ಮೊದಲ ಟ್ರಾನ್ಸ್‌ಜೆಂಡರ್ ಆಗಿರುವ ಗ್ರೇಸ್ ಬಾನು ಅವರು, ಪ್ರಮುಖ ದಲಿತ-ಟ್ರಾನ್ಸ್‌ಜೆಂಡರ್ ಹಕ್ಕುಗಳ ಹೋರಾಟಗಾರ್ತಿ ಹಾಗೂ ‘ಟ್ರಾನ್ಸ್ ರೈಟ್ಸ್ ನೌ ಕಲೆಕ್ಟಿವ್’ (Trans Rights Now Collective) ಸಂಸ್ಥೆಯ ಸಂಸ್ಥಾಪಕಿಯಾಗಿದ್ದಾರೆ. ದಲಿತ ಮತ್ತು ಬಹುಜನ ಟ್ರಾನ್ಸ್‌ಜೆಂಡರ್‌ಗಳಿಗೆ ಮೀಸಲಾತಿ ಸೇರಿದಂತೆ ಅಂತರ್-ವಿಭಾಗೀಯ ಹಕ್ಕುಗಳಿಗಾಗಿ ಅವರು ದೀರ್ಘಕಾಲದಿಂದ ಪ್ರತಿಪಾದಿಸುತ್ತಿದ್ದಾರೆ ಮತ್ತು 2026ರ ತಿದ್ದುಪಡಿ ಮಸೂದೆಯನ್ನು ವಿರೋಧಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ.

ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಂಚಿನಲ್ಲಿರುವ ಸಮುದಾಯಗಳ ಒಳಗೂ ಇರುವ ಜಾತಿ ತಾರತಮ್ಯದ ಕಹಿ ಸತ್ಯವನ್ನು ಈ ಆಘಾತಕಾರಿ ಘಟನೆ ಮತ್ತೊಮ್ಮೆ ಬಯಲು ಮಾಡಿದೆ. ಈ ಘಟನೆಯಿಂದ ತೀವ್ರವಾಗಿ ನೊಂದಿರುವ ಗ್ರೇಸ್ ಬಾನು ನಂತರ ಹೀಗೆ ಬರೆದಿದ್ದಾರೆ, “ನಾನು ಅತ್ಯಂತ ದುಃಖಿತ ಹೃದಯದಿಂದ ಇದನ್ನು ಬರೆಯುತ್ತಿದ್ದೇನೆ… ನನ್ನ ಕೊನೆಯ ಉಸಿರಿರುವವರೆಗೂ ನಾನು ಬಾಬಾಸಾಹೇಬ್ ಮತ್ತು ರಮಾಬಾಯಿಯವರ ಮೊಮ್ಮಗಳು ಎಂದು ಹೇಳುತ್ತಲೇ ಇರುತ್ತೇನೆ. ಜೈ ಭೀಮ್! ಜೈ ರಮಾಬಾಯಿ!”

ಇತ್ತೀಚಿನ ಮಾಹಿತಿಯ ಪ್ರಕಾರ, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಕಾಯ್ದೆ, 2026ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅಂಗೀಕಾರಗೊಂಡ ಈ ತಿದ್ದುಪಡಿಯು, ಒಬ್ಬ ವ್ಯಕ್ತಿಯು ತನ್ನ ಲಿಂಗವನ್ನು ತಾನೇ ನಿರ್ಧರಿಸಿಕೊಳ್ಳುವ (Self-determination) ಹಕ್ಕನ್ನು ಕಸಿದುಕೊಂಡಿದೆ.

Courtesy : en.themooknayak.com


 



ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...