Homeಅಂಕಣಗಳು2019ರ ಚುನಾವಣೆಯೀಗ ಅಸಮ ಮೈದಾನದಲ್ಲಿ ನಡೆಯುವುದಿಲ್ಲ

2019ರ ಚುನಾವಣೆಯೀಗ ಅಸಮ ಮೈದಾನದಲ್ಲಿ ನಡೆಯುವುದಿಲ್ಲ

- Advertisement -
- Advertisement -

ಯೋಗೇಂದ್ರ ಯಾದವ್ |

ಇದನ್ನು ರಾಜಕೀಯ ವಿಜ್ಞಾನಿಗಳು ಚುನಾವಣಾ ಪ್ರಜಾತಂತ್ರದ ‘ಸ್ವಯಂ ಸುಧಾರಣೆಯ ಮೆಕ್ಯಾನಿಸಂ’ ಎಂದು ಕರೆಯುತ್ತಾರೆ. ಮಾರುಕಟ್ಟೆ ಆರ್ಥಿಕತೆಯ ವಿಕೃತಿಗಳನ್ನು ಸರಿಪಡಿಸುವ ಆದಂ ಸ್ಮಿತ್‍ರ ಪ್ರಖ್ಯಾತ ನಿಗೂಢ ಹಸ್ತದ ರೀತಿಯಲ್ಲೇ, ಸ್ಪರ್ಧಾತ್ಮಕ ಚುನಾವಣೆಗಳು ರಾಜಕೀಯ ವ್ಯವಸ್ಥೆಗಳ ಅತಿರೇಕಗಳನ್ನು ಸರಿ ಮಾಡಬೇಕು. 2018ರ ವಿಧಾನಸಭಾ ಚುನಾವಣೆಗಳು ಮಾಡಿರುವುದು ಇದನ್ನೇ. ಸರ್ವೋಚ್ಚ ನಾಯಕನೊಬ್ಬನ ಕದಲಿಸಲಾಗದ ಶಕ್ತಿಗೆ ಎಲ್ಲಾ ಸಂಸ್ಥೆಗಳು, ನಿಯಮಗಳು ಮತ್ತು ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಅಡವಿಡುವ ಸಂಸದೀಯ ಸರ್ವಾಧಿಕಾರದತ್ತ ದೇಶ ಸಾಗುತ್ತಿರುವಾಗ, ಸ್ವಯಂಚಾಲಿತ ಬ್ರೇಕ್‍ಗಳು ಚುರುಕುಗೊಂಡಿವೆ. ಇದ್ದಕ್ಕಿದ್ದ ಹಾಗೆ, 2019ರ ಚುನಾವಣೆಯು ಯಾರೂ ಗೆಲ್ಲಬಹುದಾದ ಸ್ಪರ್ಧೆಯಾಗಿಬಿಟ್ಟಿದೆ.
ಮೊಟ್ಟಮೊದಲನೆಯದಾಗಿ, ಈ ಫಲಿತಾಂಶವು ಜನರು ಮತಚಲಾಯಿಸುವ ಅಸಲೀ ಅಜೆಂಡಾ ಯಾವುದೆಂಬುದನ್ನು ಒತ್ತಿ ಹೇಳಿದೆ. ಕೃಷಿ ಬಿಕ್ಕಟ್ಟು ಮತ್ತು ಗ್ರಾಮೀಣ ಸಂಕಷ್ಟವು ನಿಜವೆಂಬುದನ್ನು ಇದು ಸಾಬೀತುಪಡಿಸಿದೆ. ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸುವ ಅಂತಿಮ ಸಮೀಕರಣ ಯಾವುದೆಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಛತ್ತೀಸ್‍ಗಢ, ರಾಜಸ್ತಾನ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿಯ ವಿರುದ್ಧದ ಸ್ಪಷ್ಟ ಅಲೆ ಕಂಡಿದೆ. ಮಧ್ಯಪ್ರದೇಶದ ಮಾಲ್ವಾ, ಪೂರ್ವ ರಾಜಸ್ತಾನ ಮತ್ತು ಕೇಂದ್ರ ಛತ್ತೀಸ್‍ಗಡದಲ್ಲಿ ಬಿಜೆಪಿಯ ಸೋಲುಗಳು ಗುಜರಾತ್‍ನಂತೆಯೇ ರೈತರ ಸಿಟ್ಟು ಬಿಜೆಪಿಯ ವಿರುದ್ಧ ಕೆಲಸ ಮಾಡಿರುವುದನ್ನು ತೋರುತ್ತಿವೆ. ಟ್ರೆಂಡ್ ಏನಿದೆ ಎಂಬುದನ್ನು ಗ್ರಹಿಸುವ ಫಲಿತಾಂಶದ ಸಾಮಾಜಿಕ ಸಂಗತಿಗಳು, ಬಿಜೆಪಿಯ ನಷ್ಟವು ಗ್ರಾಮೀಣ ಭಾಗದಲ್ಲೇ ಸಾಪೇಕ್ಷವಾಗಿ ಹೆಚ್ಚಿದೆ ಎಂಬುದನ್ನು ಕಾಣಿಸಿವೆ. ನಿರುದ್ಯೋಗಿ ಯುವಜನರೂ ಆಡಳಿತ ಪಕ್ಷದ ವಿರುದ್ಧ ಮತ ಚಲಾಯಿಸಿರುವುದನ್ನು ತೋರಿವೆ. ಎಲ್ಲಾ ಚುನಾವಣಾಪೂರ್ವ ಸಮೀಕ್ಷೆಗಳು ಉದ್ಯೋಗದ ಇಶ್ಯೂ ಚುನಾವಣೆಯ ಪ್ರಮುಖ ಅಂಶವನ್ನಾಗಿರುವುದನ್ನು ಗುರುತಿಸಿದ್ದವು. ಯೋಗಿ ಆದಿತ್ಯನಾಥರ ಆಕ್ರಮಣಕಾರಿ ಪ್ರಚಾರದ ಹೊರತಾಗಿಯೂ ಮಂದಿರವು ಒಂದು ಇಶ್ಯೂವಾಗಿ ಮುನ್ನೆಲೆಗೆ ಬಂದಿಲ್ಲವೆಂಬುದನ್ನೂ ಫಲಿತಾಂಶವು ಖಚಿತಪಡಿಸಿದೆ. ದೇಶದ ಉಳಿದ ಭಾಗಗಳ ಬಗ್ಗೆ ಇದೇ ಮಾತನ್ನು ಈಗಲೇ ಹೇಳುವುದು ಸಾಧ್ಯವಿಲ್ಲವಾದರೂ ಹಿಂದಿ ಪ್ರದೇಶದ 2019ರ ಚುನಾವಣಾ ವಿಷಯವು ಇದಾಗಿರುತ್ತದೆ: ಹಿಂದೂ ಮುಸಲ್ಮಾನ್ ಅಲ್ಲ ಕಿಸಾನ್ (ರೈತ) ಮತ್ತು ಜವಾನ್ (ಯುವಜನತೆ).
ಫಲಿತಾಂಶವು ಇನ್ನೂ ಒಂದು ಪ್ರಜಾತಾಂತ್ರಿಕ ಸಂದೇಶವನ್ನು ಕಳಿಸಿದೆ. ಹಣ ಮತ್ತು ಮಾಧ್ಯಮಗಳು ಚುನಾವಣಾ ಗೆಲುವಿಗೆ ಅಗತ್ಯ, ಆದರೆ ಅವಷ್ಟೇ ಸಾಲದು. ಬಿಜೆಪಿಯು ಅದರ ಎದುರಾಳಿಗಿಂತ 10:1ರ ಅನುಪಾತದಲ್ಲಿ ಹಣ ವ್ಯಯಿಸಿರುವುದು ರಹಸ್ಯವೇನಲ್ಲ. ನಿಗೂಢವಾದ ಆದರೆ ಕಾನೂನುಬದ್ಧ ಮಾರ್ಗವಾದ ಚುನಾವಣಾ ಬಾಂಡ್‍ಗಳ ಮೂಲಕ ಒಟ್ಟು ಚುನಾವಣಾ ವಂತಿಗೆಯ ಶೇ.95ರಷ್ಟನ್ನು ಬಿಜೆಪಿಯೊಂದೇ ಪಡೆದುಕೊಂಡಿತ್ತು. ಮಾಧ್ಯಮಗಳ ಬಗ್ಗೆ ಎಷ್ಟು ಕಡಿಮೆ ಮಾತಾಡಿದರೆ ಅಷ್ಟು ಒಳ್ಳೆಯದು. ಆದರೆ ಇಷ್ಟನ್ನಂತೂ ಹೇಳಬೇಕು: ‘ಸ್ವತಂತ್ರ’ ಮಾಧ್ಯಮದ ಅತೀ ದೊಡ್ಡ ವಿಭಾಗವು ಆಡಳಿತ ಪಕ್ಷದ ಮುಖವಾಣಿಯಾಗಿ ಬದಲಾಗಿದೆಯೆಂಬುದು ಭಾರತದ ಪ್ರಜಾತಂತ್ರದ ಚರಿತ್ರೆಯ ಅತ್ಯಂತ ನಾಚಿಕೆಗೇಡು ಅಧ್ಯಾಯವಾಗಿ ಉಳಿಯಲಿದೆ. ಇದರ ಜೊತೆಗೆ ಎದುರಾಳಿ ಪಕ್ಷಗಳನ್ನು ದುರ್ಬಲಗೊಳಿಸುವ ಬಂಡಾಯ ಅಭ್ಯರ್ಥಿಗಳು ಮತ್ತು ಪಕ್ಷಗಳಿಗೆ ಬಿಜೆಪಿಯು ಹಣದ ಹೊಳೆಯನ್ನೇ ಹರಿಸಿದ್ದೂ ಎಲ್ಲರಿಗೆ ಗೊತ್ತಿರುವ ಸತ್ಯ. ಇವೆಲ್ಲವೂ ತೆಲಂಗಾಣದಲ್ಲಿ ಟಿಆರ್‍ಎಸ್‍ಗೆ ಸಹಾಯ ಮಾಡಿದಂತೆಯೇ ಬಿಜೆಪಿಗೂ ಸಹಾಯ ಮಾಡಿವೆ. ಆದರೆ, ಬಿಜೆಪಿಯ ಸೋಲು ನಮಗೆ ಮತ್ತೊಮ್ಮೆ ನೆನಪಿಸುವುದೇನೆಂದರೆ, ನೀವು ಅಸಲೀ ಮತದಾರರ ಅಸಲೀ ಇಶ್ಯೂಗಳೊಂದಿಗೆ ಜೀವಂತ ಸಂಬಂಧವಿಟ್ಟುಕೊಂಡಿರಬೇಕು.
ಮೂರನೆಯದಾಗಿ ಚುನಾವಣೆಗಳು ತೋರಿಸುತ್ತಿರುವುದೇನೆಂದರೆ ವ್ಯಕ್ತಿ ಆರಾಧನೆಗೂ ಒಂದು ಮಿತಿಯಿರುತ್ತದೆ. ಆದರೆ, ಮೋದಿಯುಗ ಮುಗಿದಿದೆ ಎಂದು ಹೇಳುವುದು ತಪ್ಪಾದೀತು. ಎಲ್ಲಾ ಸಮೀಕ್ಷೆಗಳು ತೋರುತ್ತಿರುವುದೇನೆಂದರೆ ಮೋದಿ ಈಗಲೂ ಅತ್ಯಂತ ಜನಪ್ರಿಯ ನಾಯಕ ಮತ್ತು ರಾಹುಲ್‍ಗಾಂಧಿಗಿಂತಲೂ ಮತ್ತು ತನ್ನದೇ ಪಕ್ಷಕ್ಕಿಂತಲೂ ಹೆಚ್ಚು ಜನಪ್ರಿಯ ವ್ಯಕ್ತಿ. ಆದರೆ, ಇಷ್ಟು ಹೇಳುವುದು ಸಾಧ್ಯ. ಮೋದಿ ತನ್ನ ಆಡಳಿತದ ಮೊದಲೆರಡು ವರ್ಷಗಳಲ್ಲಿ ಮಾಡಿದಂತೆ ಯಾವುದೇ ಚುನಾವಣೆಯನ್ನು ಹೇಗೆ ಬೇಕಾದರೂ ತಿರುಗಿಸುವುದು ಇನ್ನು ಮುಂದೆ ಸಾಧ್ಯವಿಲ್ಲ. ಅವರ ಮಾಂತ್ರಿಕ ಇನ್ನಿಂಗ್ಸ್ ಮುಗಿದಿದೆ; ಈಗವರು ಆರ್ಥಿಕತೆಯ ಕುರಿತು, ದ್ವೇಷದ ವಾತಾವರಣದ ಕುರಿತು, ಸಂಸ್ಥೆಗಳ ನಾಶದ ಕುರಿತು ಮತ್ತು ರಾಫೇಲ್‍ನ ಕುರಿತಂತೆ ಕಠಿಣ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಕಾಂಗ್ರೆಸ್‍ನ ಅತ್ಯಂತ ದೊಡ್ಡ ಗೆಲುವು ಎಲ್ಲಿಂದ ಬಂತೆಂದು ನೋಡಿ, ವ್ಯಕ್ತಿ ಆರಾಧನೆಯಿರಲಿ ಸರಿಯಾಗಿ ಒಬ್ಬ ದೊಡ್ಡ ನಾಯಕನೂ ಇಲ್ಲದಿದ್ದ ಛತ್ತೀಸ್‍ಗಢದಿಂದ ಅದು ಬಂದಿದೆ.
ಈ ಫಲಿತಾಂಶವು ಆಡಳಿತ ಕೂಟದಲ್ಲಿದ್ದ ದುರಹಂಕಾರಕ್ಕೆ ಪೆಟ್ಟು ಕೊಟ್ಟಿರುವಂತೆಯೇ, ವಿರೋಧಿ ಕೂಟದಲ್ಲಿರುವ ಅಲ್ಪತೃಪ್ತಿಗೂ ಮದ್ದು ನೀಡಿದೆ. ರಾಜಸ್ತಾನದಲ್ಲಿ ನಿರೀಕ್ಷಿಸಲಾಗಿದ್ದ ದೊಡ್ಡ ಗೆಲುವನ್ನು ಪಡೆಯಲಾಗದ್ದು ಮತ್ತು ಮಧ್ಯಪ್ರದೇಶದಲ್ಲಿ ಬಹುಮತ ಸಿಗದಿರುವುದು ಕಾಂಗ್ರೆಸ್ ಸುಮ್ಮನೇ ಕುಳಿತು ಮೋದಿಯ ಆಡಳಿತವು ತನ್ನಂತೆ ತಾನೇ ಕರಗಲಿ ಎಂದು ಬಯಸಲಾಗುವುದಿಲ್ಲವೆಂಬುದು ಸ್ಪಷ್ಟ. ವಸುಂಧರಾ ರಾಜೇ ಸರ್ಕಾರದ ವಿರುದ್ಧ ವ್ಯಕ್ತವಾಗುತ್ತಿದ್ದ ಆಕ್ರೋಶ ಮತ್ತು ಶಿವರಾಜ್ ಚೌಹಾಣ್‍ರ ಆಡಳಿತದಲ್ಲಿದ್ದ ಜನರ ವ್ಯಾಪಕ ಸಂಕಷ್ಟವನ್ನು ಕಾಂಗ್ರೆಸ್ ತನ್ನ ಗೆಲುವಾಗಿ ಪರಿವರ್ತಿಸಲಾಗಲಿಲ್ಲವೆಂಬುದು, ಆ ಪಕ್ಷದೊಳಗೆ ಇರುವ ಗಂಭೀರ ಸಮಸ್ಯೆಯನ್ನು ಎತ್ತಿ ತೋರುತ್ತದೆ. ಕಳೆದ ಐದು ವರ್ಷಗಳಿಂದ ವಿಪಕ್ಷದಲ್ಲಿರುವ ಕಾಂಗ್ರೆಸ್ಸು, ಆ ಪಾತ್ರಕ್ಕೆ ತಕ್ಕಂತೆ ಬೀದಿಯಲ್ಲಿ ಪ್ರತಿಭಟಿಸಿದ್ದು ಎಲ್ಲೂ ಕಾಣಲಿಲ್ಲ. ಛತ್ತೀಸ್‍ಗಢದಲ್ಲಿ ಇದು ಭಿನ್ನವಾಗಿತ್ತು; ಅಲ್ಲಿನ ನಾಯಕತ್ವವು ತಳಮಟ್ಟದ ಚಳವಳಿ ಮತ್ತು ಪ್ರತಿಭಟನೆಗಳನ್ನು ಕಳೆದೈದು ವರ್ಷಗಳಲ್ಲಿ ನಡೆಸುತ್ತಾ ಕ್ರಿಯಾಶೀಲವಾಗಿತ್ತು.
ಕಡೆಯದಾಗಿ, ಚುನಾವಣಾ ಫಲಿತಾಂಶವು ಚುನಾವಣಾ ಅಂಕಗಣಿತಕ್ಕಿರುವ ಮಿತಿಯನ್ನೂ ತೋರಿಸಿದೆ. ಕಾಗದದ ಮೇಲೆ ಬಲಿಷ್ಠವಾಗಿದ್ದ ಮೈತ್ರಿಯನ್ನು ಕಾಂಗ್ರೆಸ್ಸು ತೆಲಂಗಾಣದಲ್ಲಿ ಮಾಡಿಕೊಂಡಿತ್ತು. ಲೆಕ್ಕ ಹಾಕಿ ನೋಡಿದರೆ, ಕಾಂಗ್ರೆಸ್-ಟಿಡಿಪಿ-ಸಿಪಿಐ-ಟಿಜೆಎಸ್‍ನ ಸಂಯುಕ್ತ ಶಕ್ತಿಯು ಟಿಆರ್‍ಎಸ್‍ಗಿಂತ ಎಷ್ಟೋ ಹೆಚ್ಚಿನದ್ದಾಗಿತ್ತು. ಆದರೆ, ತೆಲಂಗಾಣದ ಹುಟ್ಟಿಗೇ ವಿರುದ್ಧವಾಗಿದ್ದ ಪಕ್ಷದೊಂದಿಗಿನ ಅಪಕ್ವ ಮೈತ್ರಿಯು ಜನರಿಂದ ತಿರಸ್ಕರಿಸಲ್ಪಟ್ಟಿತು. ಛತ್ತೀಸ್‍ಗಢದಲ್ಲೂ ಅಜಿತ್ ಜೋಗಿ-ಬಿಎಸ್‍ಪಿ ಕೂಟವು ಕಾಂಗ್ರೆಸ್‍ಅನ್ನು ಬೀಳಿಸಬೇಕಿತ್ತು. ಆದರೆ, ಛತ್ತೀಸ್‍ಗಡದ ಜನರು ರಾಜ್ಯ ರಾಜಕಾರಣದ ಅತ್ಯಂತ ಸಂಶಯಾಸ್ಪದ ದಲ್ಲಾಳಿಯನ್ನು ತಿರಸ್ಕರಿಸಿದರು. 2019ಕ್ಕೆ ಮಹಾಘಟಬಂಧನ ಮಾಡುವ ಪ್ರಯತ್ನದಲ್ಲಿರುವ ತೀವ್ರ ಸಮಸ್ಯೆಯ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಮೈತ್ರಿಗಳು ಅಗತ್ಯ, ಆದರೆ ಅವು ವಿಶ್ವಾಸಾರ್ಹತೆಗೆ ಬದಲಿಯಾಗಿ ಕೆಲಸಕ್ಕೆ ಬರುವುದಿಲ್ಲ. ಚುನಾವಣೆಗಳೆಂದರೆ ನೀವು ಕನಸನ್ನು ಬಿತ್ತಬೇಕು, ಭರವಸೆ ಹುಟ್ಟಿಸಬೇಕು, ಕಥನವನ್ನು ಕಟ್ಟಬೇಕು. ಈಗ ಹುಟ್ಟಿಕೊಳ್ಳುತ್ತಿರುವ ಮೋದಿ-ವಿರೋಧಿ ಕೂಟದಲ್ಲಿ ಅದಿನ್ನೂ ರೂಪುಗೊಂಡಿಲ್ಲ.
2019ರ ದಾರಿಯಲ್ಲಿ ಬಿಜೆಪಿಯು ಐದು ಘೋಷಣೆಗಳೊಂದಿಗೆ ಹೊರಟಿದೆ: ಅದರ ಭಾರೀ ಯಂತ್ರಾಂಗ, ಮೋದಿ, ಮಂದಿರ, ಮಾಧ್ಯಮ ಮತ್ತು ಹಣ (Machinery, Modi, Mandir, Media, Money). ಈ ವಿಧಾನಸಭಾ ಚುನಾವಣೆಗಳು ಮೊದಲ ಮೂರನ್ನು ಸರಿ ಮಾಡಿಕೊಳ್ಳಲು ಸೂಚಿಸುತ್ತವೆ. ಬಿಜೆಪಿಯ ಸಂಘಟನಾತ್ಮಕ ಶಕ್ತಿಯು ಅಜೇಯವಲ್ಲದಿದ್ದರೂ, ಮಣಿಸುವುದು ಸುಲಭವಲ್ಲ. ಮೋದಿಯನ್ನು ತಳ್ಳಿ ಹಾಕುವುದು ಸಾಧ್ಯವಿಲ್ಲ, ಆದರೆ ಜನಪ್ರಿಯತೆ ನಿಸ್ಸಂದೇಹವಾಗಿ ಕಡಿಮೆಯಾಗಿದೆ. ಮಂದಿರವು ನಿಷ್ಠಾವಂತರಲ್ಲಿ ಉತ್ಸಾಹ ಮೂಡಿಸುತ್ತದಾದರೂ, ಮತದಾರರನ್ನು ಸೆಳೆಯಲಾಗದು. ಬದಲಿಗೆ ಉಳಿದೆರಡನ್ನೂ ಅದು ಬದಲಿಸಬಲ್ಲದು. ಮಾಧ್ಯಮ ದೊರೆಗಳು ಅವರ ಇದುವರೆಗಿನ ರೀತಿಯ ಕುರಿತು ಪುನರಾಲೋಚಿಸುತ್ತಾರೆ. ಕನಿಷ್ಠ ಇವತ್ತಿರುವ ರೀತಿಯ ಆಡಳಿತದ ಪರ ತುತ್ತೂರಿಯು ಸ್ವಲ್ಪವಾದರೂ ಕಡಿಮೆಯಾಗುತ್ತದೆಂದು ಆಶಿಸಬಹುದು. ಹಾಗೆಯೇ ದೊಡ್ಡ ಉದ್ದಿಮೆದಾರರು ತಮ್ಮೆಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಲು ಬಯಸುವುದಿಲ್ಲ. ಚುನಾವಣಾ ರಂಗದಲ್ಲಿ ಉಳಿಯಲು ಬೇಕಾದ ಸಂಪನ್ಮೂಲವನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳೂ ಪಡೆದುಕೊಳ್ಳಲು ಆರಂಭವಾಗುತ್ತದೆ. ಅಷ್ಟು ಅಸಮಾನವಲ್ಲದ ಮೈದಾನದಲ್ಲಿ 2019ರ ಲೋಕಸಭಾ ಚುನಾವಣೆಯ ಸಂಗ್ರಾಮ ನಡೆಯಲಿದೆ. ಪ್ರಜಾತಂತ್ರಕ್ಕೆ ಅಗತ್ಯವಿದ್ದ ತಿದ್ದುಪಡಿಯು ಬಹಳ ತಡವಾಗಲಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...