ಭಾರತೀಯ ಇತಿಹಾಸದಲ್ಲಿ ಜನರ ಜೀವನೋಪಾಯ ಮತ್ತು ಆದಾಯ ಗಳಿಯ ವಿಚಾರದಲ್ಲಿ 2020ರ ವರ್ಷ ಅತ್ಯಂತ ಕೆಟ್ಟ ವರ್ಷವಾಗಿ ದಾಖಲಾಗಿದೆ. 2020 ರಲ್ಲಿ ನಿರುದ್ಯೋಗ ಪ್ರಮಾಣ ಗರಿಷ್ಟ ಮಟ್ಟಕ್ಕೇರಿದೆ. ಆದಾಯದ ಪ್ರಮಾಣ ಕೂಡಾ ಅಷ್ಟೇ ದಾಖಲೆಯ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಸಾವಿರಾರು ಕುಟುಂಬಗಳು ಹಸಿವಿನಿಂದ ಬಳಲುತ್ತಿವೆ. ಇದಕ್ಕೆಲ್ಲಾ ಕಾರಣ ಕೇವಲ ಕೊರೊನಾ ಸೋಂಕು ಮಾತ್ರವಲ್ಲ. ಬದಲಾಗಿ ಹಠಾತ್ ಹೇರಿಕೆಯಾದ ಲಾಕ್ಡೌನ್.
ಲಾಕ್ಡೌನ್ ಹೇರಿದ ನಂತರ, ಜನರ ಆದಾಯಕ್ಕೆ ಇಲ್ಲದ ಪರ್ಯಾಯ. ಖರ್ಚನ್ನು ನಿರ್ಬಂಧಿಸಲು ಸರ್ಕಾರದ ಒತ್ತಾಯ, ಅಪ್ರಯೋಜಕ ಯೋಚನೆಗಳು, ನಡೆಗಳು ಇದೆಲ್ಲದರಿಂದಾಗಿ ಭಾರತೀಯರು ಭಾರೀ ಸಂಕಷ್ಟವನ್ನು ಎದುರಿಸಬೇಕಾಯಿತು. ದುರಂತವೆಂದರೆ, ಇನ್ನೂ ಆ ಕೆಟ್ಟದಿನಗಳು ಮುಗಿಯದೆ 2021 ರಲ್ಲೂ ಮುಂದುವರೆಯುತ್ತಿವೆ.
ಇದನ್ನೂ ಓದಿ: ಬ್ಯಾಂಕ್ ಉದ್ಯೋಗಿಗಳಿಗೆ ಕನ್ನಡ ಕಲಿಸಿ; ಇಲ್ಲವೆಂದರೆ ರಾಜ್ಯದಿಂದ ಹೊರಗೆ ಕಳಿಸಿ: T.S. ನಾಗಾಭರಣ
ಸರ್ಕಾರದ ಪ್ರಚಾರಕಾಗಿರುವವರು, ವಿನಾಶಕಾರಿಯ ಅಂಚಿನಲ್ಲಿರುವ ಆರ್ಥಿಕತೆಯು “V-ಆಕಾರದಲ್ಲಿ ಚೇತರಿಕೆ” ಕಾಣುತ್ತಿದೆ ಎಂದು ಹೇಳಿದರು. ಅವರು ಹೇಳಿದ್ದು, ಹೊಗಳಿದ್ದು, ಮರಗಿಡಗಳಲ್ಲಿ ಚಿಗುರುತ್ತಿದ್ದ ಹಸಿರು ಮತ್ತು ಬೀಸುತ್ತಿದ್ದ ತಂಗಾಳಿ ಬಗ್ಗೆ ಮಾತ್ರವೇ ಹೊರತು. ಜನರ ಸಂಕಷ್ಟದ ಬಗ್ಗೆಯಾಗಿರಲಿಲ್ಲ.
ದೊಡ್ಡ ಕಾರ್ಪೋರೇಟ್ ಶಕ್ತಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಆರ್ಥಿಕತೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಜಿಎಸ್ಟಿ ಸಂಗ್ರಹಣೆ, ಸರಕು ಸಾಗಣೆ, ಬಂದರು ದಟ್ಟಣೆ ಹೆಚ್ಚಳ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸ್ಟಾಕ್ ಮಾರುಕಟ್ಟೆ ದಾಖಲೆಯ ಪ್ರಮಾಣದಷ್ಟು ಹೆಚ್ಚಾಗಿದೆ ಎಂದು ಹೇಳಿದ್ದರು. ಆದರೆ, ನಿಜ ಸ್ಥಿತಿಯನ್ನು ಗಮನಿಸಿದರೆ, ವಿಷಯ ಭಾರೀ ವ್ಯತಿರಿಕ್ತವಾಗಿವೆ. ಆರ್ಥಿಕತೆ ಮೂಲವು ಉದ್ಯೋಗವನ್ನೂ ಆಧರಿಸಿರುತ್ತದೆ. ಲಾಕ್ಡೌನ್ ನಂತರದಲ್ಲಿ ಎಷ್ಟು ಜನರಿಗೆ ಉದ್ಯೋಗವಿದೆ? ನಿರುದ್ಯೋಗ ದರ ಎಷ್ಟು? ಈ ಎಲ್ಲಾ ವಿಚಾರಗಳು ಭೀಕರವಾಗಿವೆ.
ಕೆಳಗಿನ ಚಾರ್ಟ್ನಲ್ಲಿರುವ ಡೇಟಾದ ಆಧಾರದ ಮೇಲೆ ಡಿಸೆಂಬರ್ 2018 ರಿಂದ ಇಲ್ಲಿನವರೆಗಿನ ಕಳೆದ ಎರಡು ವರ್ಷಗಳ ಮಾಸಿಕ ನಿರುದ್ಯೋಗ ದರವನ್ನು ತೋರಿಸುತ್ತದೆ. 2020 ರ ಮಾರ್ಚ್ನಲ್ಲಿ ಲಾಕ್ಡೌನ್ ಆಗುವವರೆಗೂ ದೇಶದ ನಿರುದ್ಯೋಗ ಪ್ರಮಾಣವು 7-8% ರಷ್ಟಿತ್ತು. ಆದರೆ ಲಾಕ್ಡೌನ್ ನಂತರದ ವಿನಾಶಕಾರಿ ಬಿಕ್ಕಟ್ಟು ದೇಶದ ಆರ್ಥಿಕತೆಯನ್ನು ಪರಿಣಾಮಕಾರಿಯಾಗಿ ಸ್ಥಗಿತಗೊಳಿಸಿತು. ನಿರುದ್ಯೋಗ ದರವೂ ಗಗನಕ್ಕೇರಿತು. ಇದು ಏಪ್ರಿಲ್ನಲ್ಲಿ ಸುಮಾರು 24% ಮತ್ತು ವರ್ಷ ಮೇ ತಿಂಗಳಲ್ಲಿ ಸುಮಾರು 22% ರಷ್ಟಿತ್ತು. ಆರ್ಥಿಕ ಚಟುವಟಿಕೆಯನ್ನು ನಿಧಾನವಾಗಿ ಅರಂಭಗೊಂಡಂತೆ ಜನರು ಅನೌಪಚಾರಿಕ ಕೆಲಸಗಳಿಗೆ ಮರಳಿದರು. ಇದು ನಿರುದ್ಯೋಗ ದರದಲ್ಲಿ ಸುಧಾರಣೆಗೆ ಕಾರಣವಾಯಿತು. ಆದರೂ ಆರ್ಥಿಕತೆಯಲ್ಲಿ ಅಂತಹ ಯಾವುದೇ ಸುಧಾರಣೆ ಕಾಣಲಿಲ್ಲ. ಏಕೆಂದರೆ, ಜನರ ಗಳಿಕೆ ಮೊದಲಿಗಿಂತಲೂ ಕಡಿಮೆಯಾಗಿದೆ.
ಇದನ್ನೂ ಓದಿ: ಕೊರೊನಾ ಬಿಕ್ಕಟ್ಟಿನ ನಡುವೆಯೂ 2 ತಿಂಗಳಲ್ಲಿ 61,290 ಜನರಿಗೆ ಉದ್ಯೋಗ ನೀಡಿದ ಕೇರಳ!
ಖಾರಿಫ್ ಕೊಯ್ಲು ಮುಗಿಯುತ್ತಿದ್ದಂತೆ ಅಕ್ಟೋಬರ್ನಲ್ಲಿ ರಬಿ ಬಿತ್ತನೆ ಸಿದ್ಧತೆಗಳು ಪ್ರಾರಂಭವಾಗುವ ಹಂತದಲ್ಲಿ ನಿರುದ್ಯೋಗ ದರವು ನವೆಂಬರ್ನಲ್ಲಿ 6.5%ಕ್ಕೆ ಕಡಿಮೆಯಾಯಿತು. ಇದು ಸರ್ಕಾರದ ಪರ ಅರ್ಥಶಾಸ್ತ್ರಜ್ಞರು ಮತ್ತು ಟಿವಿ ಶೋ ‘ನಿರೂಪಕರಲ್ಲಿ’ ಹೆಚ್ಚು ಸಂಭ್ರಮಕ್ಕೆ ಕಾರಣವಾಯಿತು. ಆದರೆ, ಇತ್ತೀಚೆಗೆ CMIE ಯ ಸಾಪ್ತಾಹಿಕ ದತ್ತಾಂಶದ ಪ್ರಕಾರ, ಡಿಸೆಂಬರ್ 27 ರ ಹೊತ್ತಿಗೆ ನಿರುದ್ಯೋಗ ದರವು ಮತ್ತೆ 9% ಕ್ಕಿಂತ ಹೆಚ್ಚಾಗಿದೆ. ವಾಸ್ತವವಾಗಿ, ಲಾಕ್ಡೌನ್ ನಂತರದ ಅವಧಿಯಲ್ಲಿ ನಿರುದ್ಯೋಗವು 8-9% ರಷ್ಟು ಪ್ರಮಾಣದಲ್ಲಿದೆ.
ನಿಶ್ಚಲ ಉದ್ಯೋಗ
ಈಗ, ಉದ್ಯೋಗಕ್ಕಾಗಿ ದೂರದ ಊರುಗಳಿಗೆ ಹೋಗಲು ಸಾಧ್ಯವಾಗದ ಬಿಕ್ಕಟ್ಟು ದೇಶದಲ್ಲಿದೆ. ಈ ಸಂದರ್ಭದಲ್ಲಿ CMIE ಸಮೀಕ್ಷೆಯ ಡೇಟಾವನ್ನು ಆಧರಿಸಿ ಕಳೆದ ಎರಡು ವರ್ಷಗಳ ಬೆಳವಣಿಗೆಗಳನ್ನು ಕೆಳಗಿನ ಪಟ್ಟಿಯಲ್ಲಿ ತೋರಿಸಲಾಗಿದೆ. ಅದರನ್ವಯ, ಉದ್ಯೋಗಿಗಳ ಸಂಖ್ಯೆ 2018 ರ ಡಿಸೆಂಬರ್ನಲ್ಲಿ ಸುಮಾರು 39.7 ಕೋಟಿಗಳಷ್ಟಿತ್ತು. ಇದು 2020 ರ ನವೆಂಬರ್ನಲ್ಲಿ 39.4 ಕೋಟಿ ಆಗಿದೆ. ಏಪ್ರಿಲ್ನಲ್ಲಿ ಉದ್ಯೋಗದ ಪ್ರಮಾಣವು ಕೇವಲ 28.2 ಕೋಟಿಗೆ ಕುಸಿದಿತ್ತು. ಇದು ಲಾಕ್ಡೌನ್ ದುಷ್ಪರಿಣಾಮವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಭರವಸೆ; ಹಣಪಡೆದು ವಂಚಿಸಿದ ಬಿಜೆಪಿ ಕಾರ್ಯಕರ್ತ!
ಭಾರತದಲ್ಲಿ ಉದ್ಯೋಗಿ
ಇದರ ಅರ್ಥ ಏನು? ಪ್ರತಿದಿನ ಜನಸಂಖ್ಯೆ ಹೆಚ್ಚುತ್ತಿದೆ ಮತ್ತು ಪ್ರತಿ ವರ್ಷ ಸುಮಾರು 12 ಕೋಟಿ ಜನರು ಹೊಸದಾಗಿ ಉದ್ಯೋಗಾಕಾಂಕ್ಷಿಗಳಾಗಿ (ವಿದ್ಯಾಭ್ಯಾಸ ಮುಗಿಸಿದರು) ಈ ಸಮೂಹವನ್ನು ಸೇರುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಎಲ್ಲರೂ ಉದ್ಯೋಗಗಳನ್ನು ಹುಡುಕುತ್ತಿಲ್ಲ. ಕೆಲವರು ಇನ್ನೂ ಅಧ್ಯಯನ ಮಾಡುತ್ತಿದ್ದಾರೆ, ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಮದುವೆಯಾಗಲು ಹೇಳಲಾಗುತ್ತದೆ. ಹೀಗಾಗಿ ಕೆಲಸ ಮಾಡಲು ಸಿದ್ಧರಿರುವ ಜನಸಂಖ್ಯೆಯ ಪಾಲು – ಲಾಕ್ಡೌನ್ಗೆ ಮೊದಲು ಸುಮಾರು 42% ನಷ್ಟಿತ್ತು. ಅಂದರೆ, ಪ್ರತಿವರ್ಷ ಸುಮಾರು ಐದು ಕೋಟಿ ಜನರು ಉದ್ಯೋಗಾಕಾಂಕ್ಷಿಗಳ ಗುಂಪಿಗೆ ಸೇರುತ್ತಾರೆ. ಆದರೂ, ಎರಡು ವರ್ಷಗಳಲ್ಲಿ ಉದ್ಯೋಗಿಗಳ ಸಂಖ್ಯೆ ಒಂದೇ ಆಗಿದೆ. ಅದರಲ್ಲಿ ಏರಿಕೆಯಾಗಿಲ್ಲ. ನಿರುದ್ಯೋಗಿಗಳ ಸಮೂಹ ವಿಸ್ತಾರಗೊಳ್ಳುತ್ತಿದೆ. ಅವರೆಲ್ಲರೂ ಉದ್ಯೋಗ ಸಿಗದೆ ನಿರುತ್ಸಾಹಗೊಂಡಿದ್ದಾರೆ. ಇವರಲ್ಲಿ ಬಹುಸಂಖ್ಯಾತರು ಮನೆಯಲ್ಲಿಯೇ ಇದ್ದಾರೆ. ಕಡಿಮೆ ಸಮಯಕ್ಕೆ ಸಿಗುವ ತುಂಡು ಕೆಲಸಗಳನ್ನು, ಕೃಷಿ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ವಾಸ್ತವವಾಗಿ, ಕೆಲಸದ ಭಾಗವಹಿಸುವಿಕೆಯ ದರವು 2018 ರ ಡಿಸೆಂಬರ್ನಲ್ಲಿ 42.5% ರಷ್ಟಿತ್ತು. ಆದರೆ, 2020ರ ನವೆಂಬರ್ನಲ್ಲಿ ಸುಮಾರು 40%ಕ್ಕೆ ಕುಸಿದಿದೆ.
ಮೋದಿ ಸರ್ಕಾರ ಸೃಷ್ಟಿಸಿದ ಬಿಕ್ಕಟ್ಟು
ಕೊರೊನಾ ಸೋಂಕು ದೇಶವನ್ನು ಬಾಧಿಸುವ ಮೊದಲೇ ಭಾರತದ ಆರ್ಥಿಕತೆ ದುರ್ಬತೆಯಿಂದ ಕೂಡಿದ್ದು, ಬಿಕ್ಕಟ್ಟಿನ ಹಾದಿ ಹಿಡಿದಿತ್ತು. ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿತ್ತು, ನಿರುದ್ಯೋಗ ಹೆಚ್ಚುತ್ತಿತ್ತು, ಜನರ ದಿನನಿತ್ಯದ ಕೊಳ್ಳುವ ಶಕ್ತಿಯೂ ಕುಸಿದಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಜನರ ಜೀವನ ಮಟ್ಟ ಕುಸಿಯುತ್ತಿದ್ದಂತೆ ಸಾಮಾನ್ಯ ಜನರು ಅಪಾರ ತೊಂದರೆ ಅನುಭವಿಸುತ್ತಿದ್ದರು. 2018-19ರ ಇತ್ತೀಚಿನ ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ ಪ್ರಕಾರ, ಅಪೌಷ್ಟಿಕತೆಗೆ ಸಿಲುಕುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೋದಿ ಸರ್ಕಾರವು ಈ ಬಿಕ್ಕಟ್ಟನ್ನು ನಿಭಾಯಿಸಲು ಸಂಪೂರ್ಣವಾಗಿ ಅಸಮರ್ಥವಾಗಿದೆ ಎಂಬುದನ್ನು ಅದು ಸ್ಪಷ್ಟವಾಗಿ ಸೂಚಿಸಿತ್ತು.
ಆದರೆ ಈ ವರ್ಷದ ಸಾಂಕ್ರಾಮಿಕ, ಅದಕ್ಕೆ ಸರ್ಕಾರದ ತಪ್ಪು ಪ್ರತಿಕ್ರಿಯೆ ಮತ್ತು ಜನ ವಿರೋಧಿ ನೀತಿಗಳಿಂದಾಗಿ ಜನರು ಮತ್ತಷ್ಟು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಮೂರು ಕೃಷಿ ಕಾನೂನುಗಳು ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಮೂಲಕ ಜನರನ್ನು ಮತ್ತಷ್ಟು ಅಪಾಯಕ್ಕೆ ತಳ್ಳಲು ಸರ್ಕಾರವು ಪ್ರಯತ್ನಿಸಿದೆ. ಇದು ಒಟ್ಟಾಗಿ ಹೆಚ್ಚು ನಿರುದ್ಯೋಗವನ್ನು ಸೃಷ್ಟಿಸುತ್ತದೆ, ಆದಾಯವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಮತ್ತು ಜನರಿಗೆ ಹೆಚ್ಚಿನ ಅಭದ್ರತೆಯನ್ನು ನೀಡುತ್ತದೆ.
ಕೃಪೆ: ನ್ಯೂಸ್ ಕ್ಲಿಕ್
ಇದನ್ನೂ ಓದಿ: ಜುಲೈ ತಿಂಗಳೊಂದರಲ್ಲೇ 50 ಲಕ್ಷ ಉದ್ಯೋಗಗಳು ನಷ್ಟ: CMIE