ದಕ್ಷಿಣ ಕುವೈತ್ನ ಮಂಗಾಫ್ನಲ್ಲಿ ವಸತಿ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತ 49 ಮಂದಿಯಲ್ಲಿ 21 ಮಲಯಾಳಿಗಳು ಸೇರಿದ್ದಾರೆ. ಈ ಬಗ್ಗೆ ಕೇರಳದ ಸಿಎಂ ಪಿಣರಾಯ್ ವಿಜಯನ್ ದೃಢಪಡಿಸಿದ್ದಾರೆ.
ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಘಟನೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕುರಿತು ಸಹಕರಿಸಲು ಮತ್ತು ಶವಗಳನ್ನು ಮನೆಗೆ ತರಲು ಸಹಾಯ ಮಾಡಲು ಕುವೈತ್ಗೆ ತೆರಳುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕೇರಳ ಸರ್ಕಾರದ ಅಧೀನದ ಅನಿವಾಸಿ ಕೇರಳೀಯರ(ಎನ್ಆರ್ಕೆ) ವೆಲ್ಫೇರ್ ಏಜೆನ್ಸಿಯ ಮೂಲಗಳು ಹಲವು ಮೃತದೇಹಗಳನ್ನು ಇನ್ನೂ ಗುರುತಿಸಬೇಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದೆ. ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹಲವು ಮಲಯಾಳಿಗಳು ಕೂಡ ಸೇರಿದ್ದಾರೆ.
ಈ ಕುರಿತು ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶೇಷ ಸಂಪುಟ ಸಭೆಯನ್ನು ಕರೆದಿದ್ದಾರೆ. ಇದಲ್ಲದೆ ಜಗತ್ತಿನಾದ್ಯಂತ ಇದ್ದ ಅನಿವಾಸಿ ಕೇರಳಿಯರ ವೆಲ್ಫೇರ್ ಏಜೆನ್ಸಿಯ ಪ್ರತಿನಿಧಿಗಳ ಸಮಾವೇಶ ‘ಲೋಕ ಕೇರಳ ಸಭೆ’ ಯನ್ನು ಗುರುವಾರದಿಂದ ಶನಿವಾರದವರೆಗೆ ತಿರುವನಂತಪುರದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಅವಘಡದ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಸ್ಥಳೀಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಕೊಟ್ಟಾಯಂನ ಚಂಗನಾಶ್ಸೆರಿಯ ಶ್ರೀಹರಿ ಪಿ(27), ಮಲಪ್ಪುರಂನ ಪೆರಿಂತಲ್ಮನ್ನ ಬಾಹುಲೇಯನ್(36), ಕೊಲ್ಲಂನ ಶಮೀರ್ ಉಮರುದ್ದೀನ್(30) ಚೆಂಗಳದ ಕೆ ರೆಂಜಿತ್(34), ಕಾಸರಗೋಡಿನ ಪಿಲಿಕೋಡುವಿನ ಕೇಲು (58) ಕೊಟ್ಟಾಯಂನ ಸ್ಟೆಫಿನ್ ಅಬ್ರಹಾಂ ಸಾಬು(29), ಪತ್ತನಂತಿಟ್ಟದ ಪಂದಳಂನ ಆಕಾಶ್ ಶಶಿಧರನ್(31), ಕೊಲ್ಲಂನ ಪುನಲೂರಿನ ಸಾಜನ್ ಜಾರ್ಜ್(29), ಪತ್ತನಂತಿಟ್ಟಾದಲ್ಲಿ ಸಾಜು ವರ್ಗೀಸ್ (56), ಪತ್ತನಂತಿಟ್ಟದ ಪಿ ವಿ ಮುರಳೀಧರನ್(68), ಕೊಲ್ಲಂನ ಲುಕೋಸ್(48), ತಿರುವಲ್ಲಾದ ಥಾಮಸ್ ಉಮ್ಮನ್(37) ಮತ್ತು ಮಲಪ್ಪುರಂನ ನೂಹು ಮೃತರು ಎಂದು ಹೇಳಲಾಗಿದೆ.
ಕುವೈತ್ ನಗರದ ದಕ್ಷಿಣ ಭಾಗದಲ್ಲಿರುವ ಮಂಗಾಫ್ ಪ್ರದೇಶದ ಅಪಾರ್ಟ್ಮೆಂಟ್ ಕಟ್ಟಡವೊಂದರಲ್ಲಿ ಅಗ್ನಿ ದುರಂತ ನಡೆದ ಸ್ಥಳಕ್ಕೆ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ತೆರಳಿದ್ದಾರೆ.
ಸಂತ್ರಸ್ತರನ್ನು ಗುರುತಿಸಲು ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಅನೇಕ ದೇಹಗಳು ತೀವ್ರವಾಗಿ ಸುಟ್ಟುಹೋಗಿವೆ ಮತ್ತು ಗುರುತಿಸಲಾಗದಷ್ಟು ಸುಟ್ಟುಹೋಗಿವೆ, ಮೃತದೇಹಗಳ ಗುರುತಿಸುವಿಕೆಗಾಗಿ ಡಿಎನ್ಎ ಪರೀಕ್ಷೆಗಳ ಅಗತ್ಯವಿದೆ. ವಾಯುಪಡೆಯ ವಿಮಾನವು ಸಿದ್ಧವಾಗಿದೆ. ಮೃತದೇಹ ಗುರುತು ಪತ್ತೆಯಾದ ತಕ್ಷಣ ಭಾರತಕ್ಕೆ ಮೃತದೇಹವನ್ನು ತಂದು ಕುಟುಂಬಕ್ಕೆ ಹಸ್ತಾಂತರ ಮಾಡುವ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ.
ದುರಂತಕ್ಕೆ ಕಾರಣವಾದ ಸಂದರ್ಭಗಳನ್ನು ಬಹಿರಂಗಪಡಿಸಲು ತನಿಖೆಯನ್ನು ನಡೆಸಲಾಗುತ್ತಿದೆ. ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದ ಕುವೈತ್ನ ರಕ್ಷಣಾ ಮತ್ತು ಆಂತರಿಕ ಸಚಿವ ಶೇಖ್ ಫಹಾದ್ ಅಲ್-ಯೂಸೆಫ್ ಅಲ್-ಸಾಬಾ ಕಟ್ಟಡದ ಮಾಲಕರನ್ನು ಮತ್ತು ಕಟ್ಟಡದ ಸಿಬ್ಬಂದಿಯನ್ನು ಬಂಧಿಸುವಂತೆ ಆದೇಶಿಸಿರುವುದಾಗಿ ಹೇಳಿದ್ದಾರೆ.
ಇಲ್ಲಿಯವರೆಗೆ ಅಗ್ನಿ ದುರಂತಕ್ಕೆ ಕಾರಣವೇನು ಎಂಬುದರ ಕುರಿತು ಯಾವುದೇ ಅಧಿಕೃತ ದೃಢೀಕರಣವಿಲ್ಲ. ಅಗ್ನಿ ದುರಂತ ಹೆಚ್ಚಿನ ಹೊಗೆ ಹೊರ ಸೂಸಲು ಕಾರಣವಾಗಿದೆ. ಹೊಗೆ ತುಂಬಿದ್ದರಿಂದ ಮೆಟ್ಟಿಲುಗಳ ಕೆಳಗೆ ಓಡಲು ಪ್ರಯತ್ನಿಸುತ್ತಿರುವಾಗ ಅನೇಕ ಜನರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆ ವೇಳೆ ಪತ್ತೆ ಹಚ್ಚಲಾಗಿದೆ.
ಇದನ್ನು ಓದಿ: ಅಜಿತ್ ಬಣವನ್ನು ಟೀಕಿಸಿದ ಆರೆಸ್ಸೆಸ್ ಮುಖವಾಣಿ: ಮತ್ತಷ್ಟು ಹಳಸಿದ ಅಜಿತ್-ಎನ್ಡಿಎ ಸಂಬಂಧ


