Homeಚಳವಳಿಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.

ಮೇಲ್ಜಾತಿ ದೌರ್ಜನ್ಯವನ್ನು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ತಂದ ಕಾರಂಚೇಡು ದಲಿತರ ಹತ್ಯಾಕಾಂಡಕ್ಕೆ 35 ವರ್ಷ.

ಕೆರೆಯನ್ನು ಗಲೀಜು ಮಾಡಿದ್ದ ಮೇಲ್ಜಾತಿಯವನನ್ನು ದಲಿತನೊಬ್ಬ ಪ್ರಶ್ನನಿಸಿದ್ದೆ ದಲಿತರ ಭೀಕರ ಹತ್ಯಾಕಾಂಡಕ್ಕೆ ಕಾರಣವಾಯಿತು.

- Advertisement -
- Advertisement -

ದಲಿತ ದಮನಿತರ ಮೇಲಿನ ದೌರ್ಜನ್ಯದ ಕೇಸುಗಳನ್ನು ದುಡ್ಡಿರುವ ಮೇಲ್ಜಾತಿಯ ಜನ ಎಲ್ಲಿಬೇಕಾದರೂ ಗೆದ್ದು ಬರುತ್ತಾರೆ. ಈಗಲೂ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಬಂದಿವೆ. ಬಾಬಾ ಸಾಹೇಬ್ ಅಂಬೇಡ್ಕರರ ಕರೆಯಾದ ಶಿಕ್ಷಣ, ಸಂಘಟನೆ, ಸಂಘರ್ಷದ ಮೂಲಕ ತರುವ ಬದಲಾವಣೆಯೇ ದಲಿತರನ್ನು ಶೋಷಣೆಯ ಸಮುದ್ರದಿಂದ ಆಚೆ ತೆಗೆದು ದಡ ಸೇರಿಸಬಲ್ಲದು.

ಬರಹ: ಅನಿಲ್‌ ಕುಮಾರ್ ಚಿಕ್ಕದಾಳವಟ್ಟ

ದಲಿತರ ಮೇಲೆ ನಡೆದ ಅಮಾನುಷ ದೌರ್ಜನ್ಯಗಳಲ್ಲಿ ಒಂದಾದ ಕಾರಂಚೇಡು ಘಟನೆಗೆ ಇಂದಿಗೆ 35 ವರ್ಷ. ಮನುವಾದದ ವಿಷ ಬೀಜಗಳನ್ನು ನಿಧಾನಗತಿಯಲ್ಲಿ ಮೈ ಮನಸಲ್ಲಿ ಹರಡುವಂತೆ ಮಾಡುವಲ್ಲಿ ಬ್ರಾಹ್ಮಣ್ಯ ಕೆಲಸ ಮಾಡಿದೆ ಎನ್ನಲು ಈ ಭೀಕರ ಘಟನೆಗಳೇ ಸಾಕ್ಷ್ಯಗಳಾಗಿವೆ. ಅಶ್ಪಶ್ಯರನ್ನು ತಮ್ಮ ಭೂಮಿಗಳಲ್ಲಿ ದುಡಿಸಿಕೊಂಡು ಮೆರೆದ ಭೂಮಾಲಿಕರು ಎಂದೆದಿಂದಿಗೂ ದಲಿತರು ತಮ್ಮ ಕಾಲ ಕೆಳಗೆ ಇರಬೇಕೆಂದು ಶತ ಶತಮಾನಗಳಿಂದ ಬಯಸಿದ್ದರು.

ಆಂಧ್ರ-ತೆಲಂಗಾಣಗಳಲ್ಲಿ ಸಾವಿರಗಟ್ಟಲೆ ಎಕರೆಗಳ ಮಾಲೀಕರಾದ ಮೇಲ್ಜಾತಿಯ ಜನ ಕೆಳವರ್ಗದವರನ್ನು ಜೀತದಾಳುಗಳಾಗಿರಿಸಿಕೊಂಡು, ಅವರಿಗೆ ಒಂದಿಂಚೂ ಭೂಮಿಯ ಒಡೆತನ ನೀಡದೆ ಶೋಷಣೆ ಮಾಡಿದ್ದರು (ಈಗ ಭೂಮಿಯಿದೆ ಆದರೆ, ಶೋಷಣೆ ನಿಂತಿಲ್ಲ). ಅಂತಹ ಭಯಾನಕವಾದ ಸಮಯದಲ್ಲೂ ಶೋಷಣೆಯ ವಿರುದ್ಧ ಸಿಡಿದೆದ್ದ ಸಾಕಷ್ಟು ಜನ ಹೋರಾಟಗರರು ಹುತಾತ್ಮರಾಗಿದ್ದಾರೆ. ದಲಿತರ ಮೇಲಿನ ಶೋಷಣೆಯನ್ನು ಪ್ರಶ್ನಿಸಿದ್ದಕ್ಕಾಗಿ ನಡೆದ ಕಾರಂಚೇಡು ದಲಿತರ ಮೇಲಿನ ಹತ್ಯಾಕಾಂಡಕ್ಕೆ ಇಂದಿಗೆ 35 ವರ್ಷ.

1985, ಆಗಿನ ವಿಶಾಲ ಆಂಧ್ರಪ್ರದೇಶದಲ್ಲಿನ ಪ್ರಕಾಶಂ ಜಿಲ್ಲೆಯ ಕಾರಂಚೇಡು ಎಂಬ ಗ್ರಾಮದಲ್ಲಿ ದಲಿತರು ಮತ್ತು ಮೇಲ್ಜಾತಿಯ ಜನಕ್ಕೆ ಪ್ರತ್ಯೇಕವಾಗಿ ಎರಡು ಕೆರೆಗಳನ್ನು ಮಾಡಿಕೊಂಡಿದ್ದರು. ದಲಿತ ಸಮುದಾಯದ ಮಾದಿಗ ಜನಾಂಗದ ಜನರು ತಮ್ಮ ಕೆರೆಯ ನೀರನ್ನು ಕುಡಿಯಲೂ ಸಹ ಬಳಸುತ್ತಿದ್ದರಿಂದ  ಅದನ್ನು ಶುಚಿಯಾಗಿ ಇಟ್ಟುಕೊಂಡಿದ್ದರು.


ಓದಿ: ಭಾರತದಲ್ಲಿ ನಿತ್ಯ ಐದು ಕಸ್ಟಡಿ ಸಾವು; ಬಹುತೇಕರು ಮುಸ್ಲಿಮರು, ದಲಿತರು ಮತ್ತು ಅಂಚಿಗೆ ತಳ್ಳಲ್ಪಟ್ಟವರು!


1985 ಜುಲೈ 16 ರಂದು ಕಮ್ಮ ಜಾತಿಗೆ ಸೇರಿದ ಕೊಳಕು ಮನಸ್ಸಿನ ಸವರ್ಣೀಯನೊಬ್ಬ ದಲಿತರ ಕುಡಿಯುವ ನೀರಿನ ಕೆರೆಗೆ ದನಗಳನ್ನು ಇಳಿಸಿ, ಅವುಗಳ ಮೈ ತೊಳೆದು, ಅವು ಕುಡಿದು ಉಳಿದ ಮುಸುರೆ ನೀರನ್ನು ಸುರಿದ. ಇದನ್ನು ಕಂಡ ಮಾದಿಗ ಜನಾಂಗದ ಯುವಕರು ಈ ರೀತಿ ಮಾಡಿದರೆ ನಾವು ನೀರು ಕುಡಿಯುವುದು ಹೇಗೆ ಎಂದು ಪ್ರಶ್ನಿಸಿದ್ದರು. ಕೆಳಜಾತಿಯವನಾಗಿ ನನಗೆ ಪ್ರಶ್ನೆ ಮಾಡುತ್ತಿರ ಎಂದು ಜಗಳ ತೆಗೆದ ಆತ, ತನ್ನ ಜಾತಿಯವರನ್ನು ಸೇರಿಸಿ ನಡೆದ ಘಟನೆಯ ಬಗ್ಗೆ ಚರ್ಚೆ ಮಾಡಿದ. ಅಲ್ಲಿ ಕಮ್ಮ ಮೇಲ್ಜಾತಿಯ ಭೂಮಾಲಿಕರು ದಲಿತರನ್ನು ಹೀಗೆ ಬಿಟ್ಟರೆ ಬೆಳೆದು ಬಿಡುತ್ತಾರೆ. ಅವರನ್ನು ಸುಮ್ಮನೆ  ಬಿಡಬಾರದು ಎಂದು ರಾತ್ರಿಯೇ ಸಂಚು ರೂಪಿಸಿದ್ದರು.

1985 ಜುಲೈ 17 ರ ಬೆಳಗಿನ ಜಾವ ಕೈಗೆ ಸಿಕ್ಕ ಕತ್ತಿ, ಕೊಡಲಿ, ಮಾರಕಾಯುಧಗಳೊಂದಿಗೆ ಟ್ರಾಕ್ಟರ್‌ಗಳಲ್ಲಿ ಬಂದ ಸವರ್ಣೀಯರು, ಮಾದಿಗ ಸಮುದಾಯದ ದಲಿತರನ್ನು ಅಟ್ಟಾಡಿಸಿ ಭಯಾನಕವಾಗಿ ದಾಳಿ ಮಾಡಿದ್ದರು. ಸಿಕ್ಕಸಿಕ್ಕವರನ್ನು ಕತ್ತರಿಸಿ ಹಾಕಿದರು. ಸಾಕಷ್ಟು ಜನ ಹೆಣ್ಣು ಮಕ್ಕಳನ್ನು ಅಮಾನುಷವಾಗಿ ಅತ್ಯಾಚಾರವೆಸಗಿದರು.

ಈ ದುರ್ಘಟನೆಯಲ್ಲಿ ತೆಳ್ಳ ಯೋಹೌಷುವ, ದುಡ್ಡು ವಂದನಂ, ತೆಳ್ಳ ಮುತ್ತಯ್ಯ, ದುಡ್ಡು ರಮೇಶ್, ತೆಳ್ಳ ಮಾಷೆ, ದುಡ್ಡು ಅಬ್ರಹಾಂ ಎಂಬ ಆರು ಜನರು ಅಲ್ಲಿಯೇ ಕೊಲೆಯಾಗಿ ಹೋದರು. 20 ಕ್ಕೂ ಹೆಚ್ಚು ಜನರು ಗಂಬೀರ ಗಾಯಗಳಿಗೆ ತುತ್ತಾದರು. ಕಣ್ಣೆದುರೇ ಮಗನನ್ನು ಕಳೆದುಕೊಂಡ ಪ್ರತ್ಯಕ್ಷ ಸಾಕ್ಷಿ ದುಡ್ಡು ಆಲಿಸಮ್ಮನನ್ನು ಎರಡು ವರ್ಷಗಳ ನಂತರ ಕೊಲೆ ಮಾಡಿದರು.

ಈ ಘಟನೆ ದೇಶದ ಪ್ರಜ್ಞಾವಂತರ, ಮಾನವತವಾದಿಗಳ, ದಲಿತ ಸಂಘಟನೆಗಳ ಆಕ್ರೋಷಕ್ಕೆ ಕಾರಣವಾಗಿ ಬೃಹತ್ ಪ್ರತಿಭಟನೆಗಳು ನಡೆದವು. ಸತತವಾಗಿ ಆರು ತಿಂಗಳ ಕಾಲ ನಡೆದ ಕಾರಂಚೇಡು ಹೋರಾಟ ಬಹಳಷ್ಟು ಕಾನೂನುಗಳನ್ನು ರೂಪಿಸಲು ಕೂಡ ಕಾರಣವಾಯಿತು ಎಂದು ಕೂಡ ಹೇಳಲಾಗುತ್ತದೆ. 1989 ಎಸ್ಸಿ, ಎಸ್ಟಿ ದೌರ್ಜನ್ಯ ವಿರೋಧಿ ಕಾಯ್ದೆ ಬರಲು ಕೂಡ ಈ ಹೋರಾಟದ ಹಿನ್ನೆಲೆ ಇದೆ ಎನ್ನಲಾಗಿದೆ.

ಈ ಹಲ್ಲೆಯಲ್ಲಿ ಭಾಗಿದಾರರಾದ ಆರೋಪಿಗಳ ಮೇಲೆ ಪೋಲೀಸರು ಕೇಸು ದಾಖಲಿಸಿರಲಿಲ್ಲ. ಆದರೆ ಹೋರಾಟಗಾರು ಕೋರ್ಟಿಗೆ ಹೋದ ನಂತರ 9 ಸೆಕ್ಷನ್ಗಳ ಅಡಿಯಲ್ಲಿ 90 ಜನರನ್ನು ಆರೋಪಿಗಳನ್ನಾಗಿ ಮಾಡಿ ಚಾರ್ಜ್ ಶೀಟ್ ಹಾಕಿದರು.


ಓದಿ: ತಮ್ಮ ಭೂಮಿ ಆಕ್ರಮಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಕ್ಕೆ ದಲಿತ ಯುವಕನ ಹತ್ಯೆ


1994 ರ ಅಕ್ಟೋಬರ್ 30 ರಂದು ಐದು ಜನರಿಗೆ ಜೀವಾವಧಿ ಶಿಕ್ಷೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ನಾಲ್ಕು ಜನ ವೃದ್ದರಿಗೆ 1000 ರೂ. ದಂಡ ಹಾಗೂ 46 ಜನರಿಗೆ ತಲಾ 3 ವರ್ಷ ಜೈಲು ಶಿಕ್ಷೆ ವಿಧಿಸಿತು. ಶಿಕ್ಷಗೆ ಒಳಗಾದಂತಹ ಎಲ್ಲರೂ ಹೈಕೋರ್ಟಿಗೆ ಮೇಲ್ಮನವಿ ಹಾಕಿದರು. 1998 ಜುಲೈ 24 ರ ತೀರ್ಪಿನಲ್ಲಿ ಬೆನಿಫಿಟ್ ಆಫ್ ಡೌಟ್ ಅಡಿಯಲ್ಲಿ ಶಿಕ್ಷೆ ರದ್ದುಗೊಳಿಸಲಾಯಿತು.

ಹೋರಾಟಗಾರರ ಸತತ ಪ್ರಯತ್ನದಿಂದ ಅಂತಿಮವಾಗಿ 1998 ರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸ್ಪಷಲ್ ಲೀವ್ ಪಿಟಿಷನ್ ದಾಖಲು ಮಾಡಲಾಯಿತು. ಅದಾಗಿ ಹತ್ತು ವರ್ಷಗಳ ನಂತರ 2008 ಡಿಸೆಂಬರ್ 19 ರಂದು ಸುಪ್ರೀಂಕೋರ್ಟ್ ಅಂಜಯ್ಯ ಎಂಬುವವರಿಗೆ ಜೀವಾವದಿ ಶಿಕ್ಷೆ ಮತ್ತು 29 ಮಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ದಲಿತ ದಮನಿತರ ಮೇಲಿನ ದೌರ್ಜನ್ಯದ ಕೇಸುಗಳನ್ನು ದುಡ್ಡಿರುವ ಮೇಲ್ಜಾತಿಯ ಜನ ಎಲ್ಲಿಬೇಕಾದರೂ ಗೆದ್ದು ಬರುತ್ತಾರೆ. ಈಗಲೂ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಬಂದಿವೆ. ಬಾಬಾ ಸಾಹೇಬ್ ಅಂಬೇಡ್ಕರರ ಕರೆಯಾದ ಶಿಕ್ಷಣ, ಸಂಘಟನೆ, ಸಂಘರ್ಷದ ಮೂಲಕ ತರುವ ಬದಲಾವಣೆಯೇ ದಲಿತರನ್ನು ಶೋಷಣೆಯ ಸಮುದ್ರದಿಂದ ಆಚೆ ತೆಗೆದು ದಡ ಸೇರಿಸಬಲ್ಲದು.


ಓದಿ: ನವ ಉದಾರವಾದಿ ಭಾರತದಲ್ಲಿ ದಲಿತರು: ಮೇಲ್ಚಲನೆಯೋ ಅಥವಾ ಮೂಲೆಗುಂಪೋ?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...