ಉತ್ತರ ಪ್ರದೇಶದ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ನಡೆದಿವೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮಂಗಳವಾರ (ಸೆ.16) ಆರೋಪಿಸಿದ್ದು, ಮಹೋಬಾ ಜಿಲ್ಲೆಯ ಒಂದೇ ಮನೆಯಲ್ಲಿ 4,271 ಮತದಾರರು ದಾಖಲಾಗಿರುವುದು ಕಂಡುಬಂದಿದೆ ಎಂದಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಸಿಂಗ್, “ನಿನ್ನೆ ನಾನು ಮಹೋಬಾ ಜಿಲ್ಲೆಯ ಎರಡು ಮನೆಗಳ ಬಗ್ಗೆ ತಿಳಿಸಿದ್ದೆ, ಅಲ್ಲಿ ಕ್ರಮವಾಗಿ 243 ಮತ್ತು 185 ಮತದಾರರಿದ್ದರು. ಇದು ಆಶ್ಚರ್ಯಕರವಾಗಿತ್ತು. ಆದರೆ, ಇಂದು ಒಂದೇ ಮನೆಯಲ್ಲಿ 4,271 ಮತದಾರರನ್ನು ದಾಖಲಿಸಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಒಂದು ಮನೆಯಲ್ಲಿ 4,271 ಮತದಾರರಿದ್ದರೆ, ಆ ಕುಟುಂಬದಲ್ಲಿ ಸುಮಾರು 12,000 ಸದಸ್ಯರಿರಬೇಕು. ಇಂತಹ ದೊಡ್ಡ ಕುಟುಂಬವನ್ನು ಯಾರಾದರೂ ಹುಡುಕಬೇಕಿದೆ” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗದ ಶಾಮೀಲಿನಿಂದ ‘ಮತಗಳ್ಳತನ’ ಪ್ರಾರಂಭವಾಯಿತು ಎಂದು ಸಿಂಗ್ ಆರೋಪಿಸಿದ್ದಾರೆ.
“4,271 ಮತದಾರರಿರುವ ಮಹೋಬಾದ ಆ ಮನೆಯ ಮಾಲೀಕರಿಗೆ ನಾನು ಹೇಳಲು ಬಯಸುವುದೇನೆಂದರೆ ನೀವು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲುತ್ತೀರಿ. ನಿಮ್ಮ ಮನೆಯವರೇ ಮತ ಚಲಾಯಿಸಿದರೆ ಸಾಕು” ಎಂದು ಸಂಜಯ್ ಸಿಂಗ್ ವ್ಯಂಗ್ಯವಾಗಿ ಹೇಳಿದ್ದಾರೆ.
4,271 ಮತದಾರರನ್ನು ಹೊಂದಿರುವ ಆ ಮನೆ ಇರುವ ಗ್ರಾಮದಲ್ಲಿ ಒಟ್ಟು ಸುಮಾರು 16,000 ಮತದಾರರಿದ್ದಾರೆ ಎಂದು ಸಿಂಗ್ ಹೇಳಿಕೊಂಡಿದ್ದು, ಇದು ಮತ್ತಷ್ಟು ಚುನಾವಣಾ ಅಕ್ರಮದ ಅನುಮಾನ ಹುಟ್ಟು ಹಾಕಿದೆ.
ಬಿಹಾರದ ಭಾಗಲ್ಪುರದ ಭೂ ಹಂಚಿಕೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ-ಜೆಡಿ(ಯು) ಮೈತ್ರಿಕೂಟದ ವಿರುದ್ದ ವಾಗ್ದಾಳಿ ನಡೆಸಿದ ಸಂಜಯ್ ಸಿಂಗ್, ರಾಜ್ಯ ಸರ್ಕಾರ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಕಂಪನಿ ಸಮೂಹದ ಮೂರು ವಿದ್ಯುತ್ ಸ್ಥಾವರಗಳಿಗೆ 1,050 ಎಕರೆ ಭೂಮಿಯನ್ನು ಎಕರೆಗೆ 1 ರೂಪಾಯಿಯಂತೆ 25 ವರ್ಷಕ್ಕೆ ನೀಡಿದೆ ಎಂದು ಆರೋಪಿಸಿದ್ದಾರೆ.
“ಒಂದು ರೂಪಾಯಿಗೆ ಭೂಮಿ ನೀಡಿದ್ದು ಮಾತ್ರವಲ್ಲದೆ, ನೀವು ಉತ್ಪಾದಿಸುವ ಯಾವುದೇ ವಿದ್ಯುತ್ ಅನ್ನು ಮುಂದಿನ 25 ವರ್ಷಗಳವರೆಗೆ ಪ್ರತಿ ಯೂನಿಟ್ಗೆ 7 ರೂಪಾಯಿ ನೀಡಿ ಖರೀದಿಸಲಾಗುವುದು ಎಂಬ ಖಾತರಿಯನ್ನೂ ಅದಾನಿ ಸಮೂಹಕ್ಕೆ ಸರ್ಕಾರ ನೀಡಿದೆ. ಪ್ರತಿ ಯೂನಿಟ್ಗೆ 10,11 ಅಥವಾ 12 ರೂಪಾಯಿ ನೀಡಿ ವಿದ್ಯುತ್ ಖರೀದಿಸಲು ಜನರಿಗೆ ಸಾಧ್ಯವೇ? ಎಂಬುವುದು ಸರ್ಕಾರಕ್ಕೆ ಮುಖ್ಯವಲ್ಲ. ಪ್ರಧಾನ ಮಂತ್ರಿಯ ಸ್ನೇಹಿತನಿಗೆ ಯಾವುದೇ ತೊಂದರೆಯಾಗಬಾರದು” ಎಂದು ಸಿಂಗ್ ಟೀಕಿಸಿದ್ದಾರೆ.
“2012 ಮತ್ತು 2013ರ ನಡುವೆ, ಅಂದಿನ ಬಿಜೆಪಿ-ಜೆಡಿ (ಯು) ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು ಮತ್ತು ಸಾರ್ವಜನಿಕ ಖಜಾನೆಯಿಂದ ರೈತರಿಗೆ ಪರಿಹಾರವನ್ನೂ ಪಾವತಿಸಿತ್ತು. ಅಂತಹ ಭೂಮಿಯನ್ನು ಸರ್ಕಾರ ಆದಾಯ ಗಳಿಸಲು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದಿತ್ತು. ಆದರೆ, ಅದಾನಿಗೆ ಎಕರೆಗೆ 1 ರೂ.ಗೆ 25 ವರ್ಷಕ್ಕೆ ನೀಡಲಾಗಿದೆ” ಎಂದು ಸಿಂಗ್ ಹೇಳಿದ್ದಾರೆ.
ಮತಗಳ್ಳತನದ ಬಗ್ಗೆ ಜುಲೈ 24ರಂದು ಸಂಸತ್ ಮುಂದೆ ಮೊದಲ ಹೇಳಿಕೆ ಕೊಟ್ಟಿದ್ದ ರಾಹುಲ್ ಗಾಂಧಿ, ಆಗಸ್ಟ್ 7ರಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತನ್ನ ಆರೋಪದ ಕುರಿತು ದಾಖಲೆ ಬಿಡುಗಡೆ ಮಾಡಿದ್ದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 2024ರ ಲೋಕಸಭೆ ಚುನಾವಣೆಯ ವೇಳೆ ಬರೋಬ್ಬರಿ 1 ಲಕ್ಷಕ್ಕೂ (1,00, 250) ಹೆಚ್ಚು ಮತಗಳ್ಳತನ ನಡೆದಿದೆ ಎಂದಿದ್ದರು. ಮಹದೇವಪುರದ ಮುನಿರೆಡ್ಡಿ ಗಾರ್ಡನ್ನಲ್ಲಿರುವ ಮನೆ ಸಂಖ್ಯೆ 35ರಲ್ಲಿ 80 ಮತದಾರರನ್ನು ನೋಂದಾಯಿಸಲಾಗಿದೆ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದರು.


