ಕೊಪ್ಪಳದ ಹಿಂದುಳಿದ ವರ್ಗಗಳ ಹಾಸ್ಟೆಲ್ ನಲ್ಲಿ ವಾಸವಿದ್ದು ಐದು ಮಕ್ಕಳು ಇಂದು ಬೆಳಿಗ್ಗೆ ದುರಂತದ ಸಾವನಪ್ಪಿದ್ದಾರೆ. ಸ್ವಾತಂತ್ರ್ಯೋತ್ಸವಕ್ಕೆಂದು ಇಟ್ಟಿದ್ದ ಧ್ವಜದ ಕಂಬವೂ ಕೇಬಲ್ ಮತ್ತು ವಿದ್ಯುತ್ ವೈರಿನ ಮೇಲೆ ಬಿದ್ದಿದ್ದು ಅದನ್ನು ತೆರವುಗೊಳಿಸಲು ಹೋದ ಐವರು ವಿದ್ಯಾರ್ಥಿಗಳಿಗೆ ಕರೆಂಟ್ ಶಾಕ್ ತಗುಲಿ ಮೃತಪಟ್ಟಿರುವ ದುರ್ಘಟನೆ ಇಂದು ಮುಂಜಾನೆ ಕೊಪ್ಪಳದಲ್ಲಿ ಜರುಗಿದೆ.
ಕಾರಣವೇನು?
ರಾಜ್ಯದ ಅರ್ಧದಷ್ಟು ಹಾಸ್ಟೆಲ್ ಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಎಲ್ಲಾ ಹಾಸ್ಟೆಲ್ ಗಳಿಗೂ ಸ್ವಂತ ಕಟ್ಟಡ ನಿರ್ಮಿಸುವಲ್ಲಿ ಎಲ್ಲಾ ಸರ್ಕಾರಗಳೂ ವಿಫಲವಾಗಿವೆ. ಈ ಖಾಸಗಿ ಕಟ್ಟಡಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿರುವುದಿಲ್ಲ. ಇದೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿದೆ.
ಕೊಪ್ಪಳದ ದೇವರಾಜ ಅರಸು ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ ಸ್ವಂತ ಕಟ್ಟಡವಿಲ್ಲ. ಇರುವ ಬಾಡಿಗೆ ಕಟ್ಟಡದ ಪಕ್ಕದಲ್ಲಿಯೇ ಹೆವಿ ವಿದ್ಯುತ್ ಟ್ರಾನ್ಸ್ಫಾರ್ಮ್ ಇದ್ದು ಅದರ ಕೇಬಲ್ ಗೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸ್ವಾತಂತ್ರ್ಯೋತ್ಸವಕ್ಕೆಂದು ಬಾಡಿಗೆಗೆ ತಂದು ನೆಟ್ಟಿದ್ದ ಧ್ವಜಕಂಬವನ್ನು ಕೋತಿಗಳು ಬೀಳಿಸಿವೆ. ಕೇಬಲ್ ಮೇಲೆ ಬಿದ್ದಿದ್ದ ಧ್ವಜಕಂಬವನ್ನು ತೆರೆವುಗೊಳಿಸಲು ಹೋದ ವಿದ್ಯಾರ್ಥಿಗಳಿಗೆ ಒಬ್ಬರಿಂದ ಒಬ್ಬರಿಗೆ ವಿದ್ಯುತ್ ಹರಡಿ ಧಾರುಣ ಸಾವು ಸಂಭವಿಸಿದೆ.
ಐದು ವಿದ್ಯಾರ್ಥಿಗಳಲ್ಲಿ ಮಲ್ಲಿಕಾರ್ಜುನ ಮತ್ತು ಬಸವರಾಜ ಎಸ್.ಎಸ್.ಎಲ್.ಸಿ ಓದುತ್ತಿದ್ದರೆ ಇನ್ನು ದೇವರಾಜ ಮತ್ತು ಕುಮಾರ 9ನೇ ತರಗತಿ ಓದುತ್ತಿದ್ದಾರೆ. ಇನ್ನೊರ್ವ ಗಣೇಶ 8ನೇ ತರಗತಿ. ಅವರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ..
ಪರಿಹಾರವೇನು?
ರಾಜ್ಯದ ಎಲ್ಲಾ ಹಾಸ್ಟೆಲ್ ಗಳಿಗೂ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲು ಸರ್ಕಾರ ಕೂಡಲೇ ಕ್ರಮ ವಹಿಸಬೇಕು.
ಪ್ರತಿ ಹಾಸ್ಟೆಲ್ ಗೂ ನಿಲಯ ಪಾಲಕರ ನೇಮಕವಾಗಬೇಕು. ಅವರು ಪ್ರತಿದಿನ ಹಾಸ್ಟೆಲ್ ಗೆ ಭೇಟಿ ನೀಡಬೇಕು. ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಬೇಕು.
ಹಾಸ್ಟೆಲ್ ಗಳಲ್ಲಿ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿ ಸ್ನೇಹಿಯಾಗಿಸಬೇಕು.
ಈ ಹಕ್ಕೊತ್ತಾಯಗಳನ್ನಿಟ್ಟುಕೊಂಡು KVS, SFI ವಿದ್ಯಾರ್ಥಿಗಳು ಸಂಘಟನೆಗಳು ಸ್ಥಳದಲ್ಲಿಯೇ ಧರಣಿ ನಡೆಸಲು ಮುಂದಾಗಿವೆ.
ಖಾಸಗಿ ಹಾಸ್ಟೆಲ್ ಲಾಬಿಗೆ ವಿದ್ಯಾರ್ಥಿಗಳು ಬಲಿಯಾದರೆ?
ಇಂದು ಕೊಪ್ಪಳ ಜಿಲ್ಲೆಯ ಹಿಂದುಳಿದ ವರ್ಗಗಳ ಹಾಸ್ಟೆಲ್ ನಲ್ಲಿ ಧ್ವಜ ಕಂಭದ ಹಗ್ಗ ಬಿಚ್ಚಲು ಹೋಗಿ 5ಜನ ವಿದ್ಯಾರ್ಥಿಗಳು ವಿದ್ಯುತ್ ಶಾಕ್ನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಕಟ್ಟಡ ಬಾಡಿಗೆ ಕಟ್ಟಡವಾಗಿದ್ದು ರಾಜ್ಯದ ಹಲವಾರು ಹಾಸ್ಟೆಲ್ಗಳು ಬಾಡಿಗೆ ಹಣದ ಲಾಬಿಗಾಗಿ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿದೆ. ಹಾಸ್ಟೆಲ್ ಗೆ ಬೇಕಾದ ರಚನೆ ಇಲ್ಲದೆ ಮೂಲಭೂತ ಸೌಕರ್ಯವೂ ಇಲ್ಲದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಇಂದು ದೇಶದ ಭವಿಷ್ಯವಾಗಬೇಕಿದ್ದ ಐದು ಜನ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳ ಬಲಿ ತಗೆದುಕೊಂಡಿದೆ. ಈ ಖಾಸಗಿ ಲಾಬಿಯನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆ ವಿರೋಧಿಸುತ್ತದೆ ಎಂದು ಸಂಚಾಲಕ ಸರೋವರ್ ಬೆಂಕಿಕೆರೆ ತಿಳಿಸಿದ್ದಾರೆ.
ಸಾವಿಗೀಡಾದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು. ಸ್ಥಳೀಯ ವಾರ್ಡನ್, ಜಿಲ್ಲಾಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಈ ಘಟನೆ ಸಂಭವಿಸಿದೆ. ಇದರ ಸಂಪೂರ್ಣ ಜವಾಬ್ದಾರಿ ಇವರುಗಳೇ ಹೊತ್ತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸರ್ಕಾರ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯೂ ಎಚ್ಚೆತ್ತುಕೊಂಡು ಈ ರೀತಿಯ ದುರ್ಘಟನೆಗಳ ನಡೆಯದ ಹಾಗೆ ಜವಾಬ್ದಾರಿ ಕಾಯ್ದುಕೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.


