ವಕ್ಫ್ ತಿದ್ದುಪಡಿ ಮಸೂದೆಯ ಸಂಸದೀಯ ಸಮಿತಿಯ ಸದಸ್ಯರು ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಭಿನ್ನಾಭಿಪ್ರಾಯ ಮೂಡಿಸಿರುವ ಕರಡು ಶಾಸನಕ್ಕೆ 572 ತಿದ್ದುಪಡಿಗಳನ್ನು ಸೂಚಿಸಿದ್ದಾರೆ ಎಂದು TNIE ವರದಿ ಮಾಡಿದೆ. ಸಮಿತಿಯು ಸೋಮವಾರ ನಡೆಯುವ ತನ್ನ ಸಭೆಯಲ್ಲಿ ಷರತ್ತು ವಾರು ತಿದ್ದುಪಡಿಗಳನ್ನು ಚರ್ಚಿಸಲಿದ್ದು, ಬಿಜೆಪಿ ಮತ್ತು ವಿರೋಧ ಪಕ್ಷದ ಸದಸ್ಯರು ಮಸೂದೆಗೆ ತಿದ್ದುಪಡಿಗಳನ್ನು ಸಲ್ಲಿಸಲಿದ್ದಾರೆ. ವಕ್ಫ್ ಮಸೂದೆಗೆ
ಸಮಿತಿಯ ವಿಚಾರಣೆಯು ಕೊನೆಯ ಹಂತಕ್ಕೆ ತಲುಪುತ್ತಿದ್ದಂತೆ ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ಅಧ್ಯಕ್ಷತೆಯ ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಮಿತಿಯು ಭಾನುವಾರ ತಡರಾತ್ರಿ ತಿದ್ದುಪಡಿಗಳ ಸಮಗ್ರ ಪಟ್ಟಿಯನ್ನು ವಿತರಿಸಿತು. ಆದಾಗ್ಯೂ, ತಿದ್ದುಪಡಿಗಳನ್ನು ಸಲ್ಲಿಸಿದ ಸದಸ್ಯರ ಪಟ್ಟಿಯಲ್ಲಿ ಬಿಜೆಪಿಯ ಯಾವುದೇ ಮಿತ್ರಪಕ್ಷಗಳಿಲ್ಲ ಎಂದು ವರದಿ ಸೂಚಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಪರಿಚಯಿಸಿದ ನಂತರ ಆಗಸ್ಟ್ 8 ರಂದು ಸಂಸತ್ತಿನ ಜಂಟಿ ಸಮಿತಿಗೆ ಉಲ್ಲೇಖಿಸಲಾಗಿತ್ತು. ವಕ್ಫ್ ಆಸ್ತಿಗಳನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು 1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಗುರಿಯನ್ನು ಈ ಮಸೂದೆ ಹೊಂದಿದೆ.
ವಕ್ಫ್ ಎಂದರೆ ಏನು?
’ವಕ್ಫ್’ ಎಂದರೆ, ಒಬ್ಬ ಮುಸ್ಲಿಂ ಅಥವಾ ಒಂದು ಮುಸ್ಲಿಂ ಗುಂಪು ತಮ್ಮ ಸ್ವಂತ ಆಸ್ತಿಯನ್ನು ಅಥವಾ ತಮಗೆ ಉಡುಗೊರೆಯಾಗಿ ಸಿಕ್ಕ ಆಸ್ತಿಯನ್ನು ಅಥವಾ ಪಿತ್ರಾರ್ಜಿತ ಆಸ್ತಿಯನ್ನು (ಅದು ಚರಾಸ್ತಿ ಅಥವಾ ಸ್ಥಿರಾಸ್ತಿಯಾದರೂ) ಮನಸಾರೆ ’ದೇವರ ಹೆಸರಿನಲ್ಲಿ ಅರ್ಪಿಸುವ’ ಒಂದು ಆಚರಣೆಯಾಗಿದೆ. ಈ ಆಚರಣೆಯು ಅರ್ಪಿಸುವ ವ್ಯಕ್ತಿ ಮತ್ತು ಆತ ನಂಬುವ ದೇವರ ನಡುವಿನ ಒಂದು ಒಪ್ಪಂದ. ಹಾಗಾಗಿಯೆ ಇದೊಂದು ಸರಳ ಧಾರ್ಮಿಕ ಆಚರಣೆ. ಭಾರತ ಸಂವಿಧಾನ ಹೇಳುವ ’ಆತ್ಮಸಾಕ್ಷಿಯ ಸ್ವಾತಂತ್ರ್ಯ’ದ ಅಡಿಯಲ್ಲಿ ಬರುವ ಆಚರಣೆಯ ಹಕ್ಕು.
ಉದಾಹರಣೆಗೆ ಒಂದು ಮುಸ್ಲಿಂ ಗುಂಪು ದುಡ್ಡು ಸಂಗ್ರಹಿಸಿ ಅದರಲ್ಲಿ ಒಂದಿಷ್ಟು ಜಾಗ ಖರೀದಿಸಿ ಮಸೀದಿ ಕಟ್ಟಿ ಅದನ್ನು ದೇವರಿಗೆ ಅರ್ಪಿಸುತ್ತಾರೆ. ಅಂದಿನಿಂದ ಆ ಮಸೀದಿ ಯಾವುದೇ ವ್ಯಕ್ತಿಯ ಆಸ್ತಿಯಾಗಿ ಇರುವುದಿಲ್ಲ, ಬದಲಾಗಿ ಅದು ಮುಸ್ಲಿಮರ ಸಾಮುದಾಯಿಕ ಸೊತ್ತಾಗಿರುತ್ತದೆ. ಇನ್ನೂ ಮುಂದುವರಿದು ಹೇಳುವುದಾದರೆ ತಮ್ಮ ಆಸ್ತಿಯನ್ನು ದೇವರಿಗಾಗಿ ಅರ್ಪಿಸಿದ್ದೇನೆ ಎಂದು ಸಂಕಲ್ಪಿಸುವುದಾಗಿದೆ ’ವಕ್ಫ್’. ನಂತರ ಅದನ್ನು ಸಮುದಾಯದ ಸೇವೆಗೆ, ಸಬಲೀಕರಣದ ಬಳಕೆಗೆ ಮೀಸಲು ಇಡಬೇಕಾಗುತ್ತದೆ.
ಇಸ್ಲಾಮಿಕ್ ನಿಯಮಗಳ ಪ್ರಕಾರ, ಒಮ್ಮೆ ಯಾರಾದರೂ ತಮ್ಮ ಆಸ್ತಿಯನ್ನು ’ವಕ್ಫ್’ ಅಂದರೆ ’ದೇವರಿಗಾಗಿ ಅರ್ಪಿಸಿದರೆ’ ಅದರ ಮಾಲೀಕ ಅವರಾಗಿರುವುದಿಲ್ಲ, ಬದಲಾಗಿ ’ದೇವರು’ ಅದರ ಮಾಲೀಕನಾಗುತ್ತಾನೆ. ಹಾಗಾಗಿ ಒಮ್ಮೆ ತಮ್ಮ ಆಸ್ತಿಯನ್ನು ’ವಕ್ಫ್’ ಎಂದು ಸಂಕಲ್ಪಿಸಿದರೆ, ಅದರ ಮೇಲೆ ಅವರಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಸ್ವತಃ ಆಸ್ತಿಯನ್ನು ’ವಕ್ಫ್’ ಮಾಡಿದ ವ್ಯಕ್ತಿಯೇ ಈ ಸಂಕಲ್ಪವನ್ನು ವಾಪಸ್ಸು ಪಡೆಯುವಂತೆ ಇಲ್ಲ. ಅಷ್ಟೇ ಅಲ್ಲದೆ, ಈ ಆಸ್ತಿಗಳನ್ನು ಆತ ಯಾರಿಗೂ ಮಾರಾಟ ಮಾಡುವಂತೆ, ಉಡುಗೊರೆ ನೀಡುವಂತೆ ಹಾಗೂ ಯಾವುದಕ್ಕೋ ಬದಲಿಯಾಗಿ ನೀಡುವಂತೆಯು ಇಲ್ಲ ಎಂದು ಇಸ್ಲಾಮಿಕ್ ನಿಯಮಗಳು ಹೇಳುತ್ತದೆ.
ವಿವಾದ ಏನು?
ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ಉದ್ದೇಶಿಸಿರುವ ಹೊಸ ತಿದ್ದುಪಡಿ ಮಸೂದೆಯಲ್ಲಿ ಬರುವ 3ಸಿ, 3ಆರ್, 14 ಮತ್ತು 40 ಸೆಕ್ಷನ್ಗಳು ಮುಸ್ಲಿಂ ವಿರೋಧಿ ಮತ್ತು ವಕ್ಫ್ ವಿರೋಧಿಯಾಗಿದೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ.
ಬಹಳ ಮುಖ್ಯವಾಗಿ, ತಿದ್ದುಪಡಿ ಮಸೂದೆಯ 3ಆರ್ ಸೆಕ್ಷನ್, ಯಾವುದಾದರೂ ವಕ್ಫ್ ಆಸ್ತಿಯ ಬಗ್ಗೆ ವಕ್ಫ್ ಬೋರ್ಡ್ ಮತ್ತು ರಾಜ್ಯ ಸರ್ಕಾರದ ನಡುವೆ ತಕರಾರು ಇದ್ದರೆ ಆ ವ್ಯಾಜ್ಯವನ್ನು ಜಿಲ್ಲಾಧಿಕಾರಿಯ ಬಳಿಗೆ ತೆಗೆದುಕೊಂಡುಹೋಗಬೇಕು ಎಂದು ಹೇಳುತ್ತದೆ. ಇದರ ಬಗ್ಗೆ ಜಿಲ್ಲಾಧಿಕಾರಿ ವಿಚಾರಣೆ ನಡೆಸಬೇಕು ಎಂದು ಹೇಳುವ ಸೆಕ್ಷನ್, ಅದರ ತೀರ್ಮಾನ ಬರುವವರೆಗೆ ಅದು ಸರ್ಕಾರದ ಜಾಗವಾಗಿರಲಿದೆ ಎಂದು ಹೇಳುತ್ತದೆ.
ಒಂದುವೇಳೆ ಇದೇ ರೀತಿ ಮಸೀದಿಯೊಂದರ ತಕರಾರು ಜಿಲ್ಲಾಧಿಕಾರಿ ಬಳಿಗೆ ತೆಗೆದುಕೊಂಡು ಹೋದರೆ, ಅದರ ತೀರ್ಮಾನ ಬರುವವರೆಗೆ ಅದು ಸರ್ಕಾರಿ ಜಾಗವಾಗಿ ಇರುತ್ತದೆ. ಇಂತಹ ಸರ್ಕಾರದ ಜಾಗದಲ್ಲಿ ಯಾರು ಬೇಕಾದರೂ ಕಾರ್ಯಕ್ರಮ ಮಾಡಲು ಅನುಮತಿ ನೀಡುವ ಅಪಾಯವಿರುತ್ತದೆ ಎಂದು ಟೀಕಾಕಾರರು ಹೇಳಿದ್ದಾರೆ.
ಅಲ್ಲದೆ, ಪ್ರಸ್ತುತ ಜಾರಿಯಲ್ಲಿರುವ ವಕ್ಫ್ ಕಾಯ್ದೆಯ ಪ್ರಕಾರ, ತಕರಾರುಗಳು ಟ್ರಿಬ್ಯುನಲ್ಗೆ ಹೋಗಬೇಕು, ಅಲ್ಲಿಯೂ ಬಗೆಹರಿಯದಿದ್ದರೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗೆ ಹೋಗಬಹುದು. ಆದರೆ ತಿದ್ದುಪಡಿ ಮಸೂದೆಯ ಪ್ರಕಾರ ಜಿಲ್ಲಾಧಿಕಾರಿಯೇ ಕೊನೆಯ ಆಯ್ಕೆಯಾಗಿರುತ್ತದೆ. ಅದರ ನಂತರ ಮೇಲ್ಮನವಿಯ ಬಗ್ಗೆ ಈ ತಿದ್ದುಪಡಿ ಮಸೂದೆ ಮಾತನಾಡುವುದೇ ಇಲ್ಲ. ಜಿಲ್ಲಾಧಿಕಾರಿಯ ತೀರ್ಪಿನ ವಿರುದ್ಧ ಮೇಲ್ಮನವಿಯ ಬಗ್ಗೆ ತಿದ್ದುಪಡಿ ಮಸೂದೆಯು ಮೌನವಾಗಿದೆ. ಈ ಮಸೂದೆಯು ನ್ಯಾಯಾಲಯದ ಬಗ್ಗೆ ಹೇಳುವುದೇ ಇಲ್ಲ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಜಿಲ್ಲಾಧಿಕಾರಿಗಳ ಮತ್ತು ಆಡಳಿತರೂಢ ಪಕ್ಷಗಳ ಸರ್ವಾಧಿಕಾರ ಇಲ್ಲಿ ಕೆಲಸ ಮಾಡಲಿದೆ ಎಂಬ ಆರೋಪ ವ್ಯಕ್ತವಾಗಿದೆ.
ಇದನ್ನೂಓದಿ: ಶ್ರೀಲಂಕಾ ನೌಕಾಪಡೆಯಿಂದ 34 ಭಾರತೀಯ ಮೀನುಗಾರರ ಬಂಧನ; ತಕ್ಷಣ ಬಿಡುಗಡೆಗೆ ಸಿಎಂ ಸ್ಟಾಲಿನ್ ಆಗ್ರಹ
ಶ್ರೀಲಂಕಾ ನೌಕಾಪಡೆಯಿಂದ 34 ಭಾರತೀಯ ಮೀನುಗಾರರ ಬಂಧನ; ತಕ್ಷಣ ಬಿಡುಗಡೆಗೆ ಸಿಎಂ ಸ್ಟಾಲಿನ್ ಆಗ್ರಹ


