Homeಅಂಕಣಗಳುಪ್ರೀತಿ-ಸಾಮರಸ್ಯ ನುಡಿಯುವ 8 ಅನುವಾದಿತ ಕವನಗಳು

ಪ್ರೀತಿ-ಸಾಮರಸ್ಯ ನುಡಿಯುವ 8 ಅನುವಾದಿತ ಕವನಗಳು

- Advertisement -
- Advertisement -
  1. ಗಡಿ

ಛೇ!
ಇದು ಬರೀ ಒಂದು ಗೆರೆ ಕಣೋ
ಯಾರೋ ಸಿಟ್ಟಲ್ಲಿ ಗೀಚಿದ್ದಾರೆ ಅಷ್ಟೆ.
ಬಾ, ಬಾ ಈ ಗೆರೆಯನ್ನೇ
centre line ಮಾಡಿ ಕಬಡ್ಡಿ ಆಡೋಣ.

ನನ್ನ ಏರಿಯಾಗೆ ಬಾ, ಬಂದು
ಒಂದು ಆವಾಜ್ ಹಾಕು.
ನನ್ನ ಮೇಲೆ ಕೈ ಬೀಸು, ಮುಟ್ಟಿ
ಹಿಂದಿರುಗು ನೋಡೋಣ.

ನಾನೂ ಬಿಡೋದಿಲ್ಲ
ನಿನ್ನ ಮೇಲೆ ಬೀಳುತ್ತೇನೆ
ಕಟ್ಟಿಹಾಕುತ್ತೇನೆ ವಾಪಸ್ಸು ಹೋಗದಂತೆ.

ನನ್ನ ಪಾಳಿ ಈಗ,
ನಿನ್ನ ಏರಿಯಾಕ್ಕೆ ನಾನು
ಹು ತು ತೂ ಅನ್ನುತ್ತ ಆಕ್ರಮಣ ಮಾಡಿದಾಗ
ಸಾಧ್ಯವಾದರೆ ನನ್ನ ಹಿಡಿ
ಬಿಡಬೇಡ ವಾಪಸ್ಸು ಗಡಿ ದಾಟಲು.

ಇದು ಬರೀ ಒಂದು ಗೆರೆ ಕಣೋ
ಹಾಗೇ ಇರಲಿ ಬಿಡು
ಯಾರೋ ಸಿಟ್ಟಿನಿಂದ ಗೀಚಿದ್ದಾರೆ
ಅಷ್ಟೇ.

ಗುಲ್ಜಾರ್
ಖ್ಯಾತ ಉರ್ದು ಕವಿ – ಸಿನಿಮಾ ಸಾಹಿತಿ

*****

2. ಕಣ್ಣುಗಳಿಗೆ ವೀಸಾ ಬೇಕಿಲ್ಲ

ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಗಡಿಗಳ ಭಿಡೆಯಿಲ್ಲ.
ಕಣ್ಮುಚ್ಚಿ
ಹಾರಿಬಿಡುತ್ತೇನೆ ಪ್ರತಿದಿನ
ಗಡಿಗಳ ಮಿತಿಯನ್ನು,
ಭೇಟಿಯಾಗಲು
ಮೆಹದೀ ಹಸನ್‌ನನ್ನು!

ಪೆಟ್ಟಾಗಿದೆಯಂತೆ ಅವನ ದನಿಗೇನೋ
ಕುಳಿತುಬಿಟ್ಟಿದೆಯಂತೆ ಗಜಲ್
ಅವನೆದುರು ಮೂಕವಾಗಿ
ತುಟಿ ಕಂಪಿಸುತ್ತ
ಪುಟಗಳ ನಡುವಿನ ಹೂವು
ಒಣಗಿಹೋಗಿದೆಯೆಂದರೆ
ಗೆಳೆಯ ’ಫರಾಜ್’ ಕೂಡ
ಇನ್ನಿಲ್ಲ ಎಂದೇ ಅರ್ಥ.
ಬಹುಶಃ ಇನ್ನು ಕನಸುಗಳಲ್ಲೇ
ನಮ್ಮ ಭೇಟಿ.

ಕಣ್ಮುಚ್ಚಿಕೊಂಡು ದಾಟಿಬಿಡುತ್ತೇನೆ
ಗಡಿಗಳ ಮಿತಿಯನ್ನು ಮೇಲಿಂದ ಮೇಲೆ.

ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಗಡಿಗಳ ಭಿಡೆಯಿಲ್ಲ.

ಗುಲ್ಜಾರ್
ಖ್ಯಾತ ಉರ್ದು ಕವಿ- ಸಿನಿಮಾ ಸಾಹಿತಿ

*****

3. ಕಲಾವಿದನ ಸಂಕಟ

ಹಿಂದುಸ್ತಾನ್ ಜಿಂದಾಬಾದ್
ಪಾಕಿಸ್ತಾನ್ ಜಿಂದಾಬಾದ್
ಎಂದು ಕೂಗುತ್ತ, ಚೀರುತ್ತ ಸಾಗಿರುವ
ಘೋಷಣೆಗಳ ನಡುವೆ
ಬೇಕಾದಷ್ಟು ಪ್ರಶ್ನೆಗಳಿದ್ದವು.

ಯಾವುದನ್ನ ನನ್ನ ದೇಶ ಅಂತ ಹೇಳಲಿ?
ಜನ ಯಾಕೆ ಹೀಗೆ ಒಬ್ಬರಾದ ಮೇಲೊಬ್ಬರು ಸಾಯುತ್ತಿದ್ದಾರೆ?

ಈ ಪ್ರಶ್ನೆಗಳಿಗೆ ಕೆಲವು ನಿರ್ದಿಷ್ಟ ಉತ್ತರಗಳಿವೆ
ಕೆಲವು ಹಿಂದುಸ್ತಾನಿ ಉತ್ತರಗಳು
ಕೆಲವು ಪಾಕಿಸ್ತಾನಿ ಉತ್ತರಗಳು
ಕೆಲವು ಹಿಂದೂ ಉತ್ತರಗಳು
ಕೆಲವು ಮುಸ್ಲಿಂ ಉತ್ತರಗಳು
ಕೆಲವರು ಉತ್ತರಗಳನ್ನ 1857ರ ಪಾಳುಬಿದ್ದ ಇತಿಹಾಸದಲ್ಲಿ ಹುಡುಕಿದರೆ
ಇನ್ನೂ ಕೆಲವರು ಮೊಘಲ್ ಆಡಳಿತದ ಅವಶೇಷಗಳಲ್ಲಿ.

ಎಲ್ಲ ಹಿಂದೆ ಹೋಗಿ ಹುಡುಕುತ್ತಿದ್ದಾರೆ
ಆದರೆ ಇವತ್ತಿನ ಕೊಲೆಗಾರ
ರಕ್ತ ಮತ್ತು ಚೂರಿಗಳಿಂದ ಭವಿಷ್ಯ ಬರೆಯುತ್ತಿದ್ದಾನೆ

ಈ ಸುದ್ದಿ ಹೇಳುತ್ತ ಹೇಳುತ್ತ
ನಾನು ನಿಮ್ಮ ಕಲ್ಲೇಟುಗಳನ್ನ ಬೇಕಾದರೆ ಸಹಿಸಬಲ್ಲೆ
ಆದರೆ ಹಿಂದೂ-ಮುಸ್ಲಿಂ ದಂಗೆಯಲ್ಲಿ
ಯಾರಾದರೂ ನನ್ನ ತಲೆ ಒಡೆದರೆ
ನನ್ನ ರಕ್ತದ ಪ್ರತಿ ಹನಿಯೂ ಕಣ್ಣೀರಿನಲ್ಲಿ ಕೈ ತೊಳೆಯುತ್ತದೆ.

ನಾನೊಬ್ಬ ಕಲಾವಿದ
ನನಗೆ ದುಷ್ಟ ಗಾಯಗಳು ಮತ್ತು
ಕೊಳಕು ಕಲೆಗಳು ಇಷ್ಟವಿಲ್ಲ.

ಸಾದತ್ ಹಸನ್ ಮಂಟೋ
ಉರ್ದುವಿನಲ್ಲಿ ಬರೆಯುತ್ತಿದ್ದ ಖ್ಯಾತ ಕಥೆಗಾರ

*****

4. ಪ್ರೇಮದ ಪಾತ್ರ

ನಮ್ಮ ಈ ದೇಶದಲ್ಲಿ
ಎಷ್ಟೋ ಶತಮಾನಗಳ ನಂತರ
ನಮಗೆ ಸಾಧ್ಯವಾಗಿದೆ ಉಸಿರಾಡಲು,
ಎಷ್ಟೋ ದಶಕಗಳಾದ ಮೇಲೆ
ಅವಕಾಶ ದೊರೆತಿದೆ ಪ್ರೇಮಿಸಲು,
ಎಷ್ಟೋ ಸಮಯವಾದ ಮೇಲೆ
ಶುರು ಮಾಡಿದ್ದೇವೆ ಓದಲು, ಬರೆಯಲು.

ಈಗ ನಾವು ರೂಪಿಸಬೇಕಾಗಿದೆ
ನಮ್ಮ ಪ್ರೇಮ ಪದ್ಯಗಳಲ್ಲಿ
ಬಂಡಾಯದ ರೂಪಕಗಳನ್ನು

ಪ್ರೇಮ ತಾನೇ ಸ್ವತಃ
ಎದ್ದು ನಿಂತು ವಹಿಸಬೇಕಾಗಿದೆ
ಬಂಡಾಯದ ಪಾತ್ರ.

ಯೋಗೇಶ ಮೈತ್ರೇಯ
ಮರಾಠಿ ಯುವ ಕವಿ ಮತ್ತು ವಿಮರ್ಶಕ

*****

5. ಶಿಕ್ಷೆಯ ಅಗತ್ಯವಿಲ್ಲ

ಇನ್ನೊಬ್ಬರಿಂದ
ನಿಮಗೆ ನೋವಾಗುತ್ತಿದೆಯೆಂದರೆ
ಆ ಇನ್ನೊಬ್ಬರು ತಮ್ಮೊಳಗೆ
ಅನುಭವಿಸುತ್ತಿದ್ದಾರೆ ಆಳವಾದ ಸಂಕಟ,
ಮತ್ತು ಉಕ್ಕಿ ಹರಿಯುತ್ತಿದೆ.
ಅವರ ಈ ನೋವು

ನಿಮ್ಮ ಶಿಕ್ಷೆಯ ಅಗತ್ಯವಿಲ್ಲ ಅವರಿಗೆ
ಬೇಕಾಗಿದೆ ನಿಮ್ಮ ಸಹಾಯ
ಈ ಸಂದೇಶವನ್ನೇ ಅಲ್ಲವೆ
ಅವರು ತಲುಪಿಸಲು ಪ್ರಯತ್ನಿಸುತ್ತಿರುವುದು
ನಿಮಗೆ.

ತಿಚ್ ನ್ಹಾತ್ ಹಾನ್
ಬೌದ್ಧ ಚಿಂತಕ-ಬರಹಗಾರ

*****

6. ಹೃದಯದ ಬಾಗಿಲು

ಯಾರನ್ನ ವೈರಿ ಎಂದು ಗುರುತಿಸಲಿ?
ವೈರಿ ಎಂದಮೇಲೆ ಕೈ ಕೈ ಮಿಲಾಯಿಸಲು ತಕ್ಕವನಾಗಿರಬೇಕು.
ಸೂರ್ಯನ ದಿಕ್ಕಿಗೆ ಹೊರಳಿ ಒಂದೇ ಸವನೇ ನಡೆಯುತ್ತಿದ್ದೇನೆ.
ಈಗ ಪ್ರಶ್ನೆ ಕೇಳುತ್ತಿರುವುದು ಹೃದಯ,
ಉದ್ರಿಕ್ತ ಮನಸ್ಸಲ್ಲ.
ಹೃದಯ ಮತ್ತು ಸೂರ್ಯನ ಅಮ್ಮಂದಿರು
ಖಾಸಾ ಅಕ್ಕ ತಂಗಿಯರು.
ಹೃದಯಕ್ಕೆ ನೋಡುವುದೂ ಗೊತ್ತು
ನೋಡಿದ್ದಕ್ಕೆ ಅರ್ಥ ಹಚ್ಚುವುದೂ ಗೊತ್ತು.
ಹೃದಯ,
ಕಟಕಟ ಎನ್ನುತ್ತಿರುವ ಹಲ್ಲುಗಳ ಸಿಟ್ಟಿನ ಕಥೆಯನ್ನು
ಎಷ್ಟು ಸೂಕ್ಷ್ಮವಾಗಿ
ಅರ್ಥಮಾಡಿಕೊಳ್ಳುತ್ತದೆಯೋ
ಅಷ್ಟೇ ಸೂಕ್ಷ್ಮವಾಗಿ
ಮನದಲ್ಲಿಯೇ ಅಂದುಕೊಂಡ ಹಾರೈಕೆಯನ್ನೂ ಕೇಳಿಸಿಕೊಳ್ಳಬಲ್ಲದು.

ಮನಸ್ಸಿನ ಬಾಗಿಲು
ಹೃದಯದ ಮೂಲಕವೇ ತೆರೆದುಕೊಳ್ಳಬೇಕು,
ಯಾವ ವೈರಿ ಒಳಗೆ ನುಗ್ಗಿದರೂ
ಗೆಳೆಯನಾಗುವ ಅಪಾಯವನ್ನು ದಾಟಿಯೇ
ಮುಂದೆ ಹೋಗಬೇಕು.

ಜಾಯ್ ಹಾಜೊ
ಅಮೆರಿಕನ್ ಕವಿ-ಸಂಗೀತಕಾರ್ತಿ

*****

7. ಭಗವಂತನ ಪವಿತ್ರ ಯೋಜನೆ

ಈ ಜಗತ್ತಿನಲ್ಲಿ
ಒಬ್ಬರು, ಇನ್ನೊಬ್ಬರ ಹಾಗಿಲ್ಲ.
ಒಂದು ಹೃದಯದ ಹಾಗೆ
ಇನ್ನೊಂದು ಹೃದಯ ಮಿಡಿಯುವುದಿಲ್ಲ.
ಎಲ್ಲ ಭಗವಂತನ ಕಲ್ಪನೆ
ಸಮಸ್ತವೂ ವಿಭಿನ್ನ,
ಪ್ರತಿಯೊಂದೂ ಅನನ್ಯ.

ಎಲ್ಲವನ್ನೂ ಒಂದೇ ಎರಕಕ್ಕೆ ಹಾಕಿ
ಸೃಷ್ಟಿಮಾಡುವ ಹುಕಿ
ಭಗವಂತನದ್ದಾಗಿದ್ದರೆ
ಆತ ಹಾಗೆ ಮಾಡಬಹುದಾಗಿತ್ತು
ಮಾಡುತ್ತಿದ್ದ ಕೂಡ.
ಆದರೆ ಪರಿಸ್ಥಿತಿ ಹಾಗಿಲ್ಲವಲ್ಲ.

ನಮ್ಮ ನಡುವಿನ ವ್ಯತ್ಯಾಸವನ್ನು
ಅವಮಾನಿಸುವುದು
ನಮ್ಮ ಅಭಿಪ್ರಾಯಗಳನ್ನು, ಆಶಯಗಳನ್ನು
ಇನ್ನೊಬ್ಬರ ಮೇಲೆ ಹೇರುವುದು,

ಭಗವಂತನ ಪವಿತ್ರ ಯೋಜನೆಯನ್ನು
ಅವಮಾನಿಸಿದಂತೆ

ಶಮ್ಸ್ ತಬ್ರೀಝೀ
12 ನೇ ಶತಮಾನದ ಪರ್ಶಿಯನ್ ಕವಿ

*****

8. ಭಗವಂತನಿಂದ

ನಾನು ಎಷ್ಟೆಲ್ಲಾ ಕಲಿತಿದ್ದೇನೆಂದರೆ
ನಾನೊಬ್ಬ
ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ, ಬೌದ್ಧ
ಎಂದೆಲ್ಲ ಹೇಳಿಕೊಳ್ಳಲೂ
ನನಗೆ ನಾಚಿಕೆಯಾಗುತ್ತದೆ.

ಸತ್ಯ ನನ್ನೊಂದಿಗೆ
ಎಷ್ಟು ಒಂದಾಗಿದೆಯೆಂದರೆ
ನನ್ನನ್ನು
ಗಂಡು, ಹೆಣ್ಣು, ಪ್ರವಾದಿ
ಅಥವಾ ಪವಿತ್ರ ಆತ್ಮ ಎಂದುಕೊಳ್ಳಲೂ
ಭಯವಾಗುತ್ತದೆ.

ಪ್ರೇಮ ನನ್ನನ್ನು
ಎಷ್ಟು ಅಲುಗಾಡಿಸಿದೆಯೆಂದರೆ
ತಾನೇ ಬೆಂಕಿಯಲ್ಲಿ ಹಾರಿ
ನನಗೆ ಗೊತ್ತಿರುವ ಎಲ್ಲ
ಸಿದ್ಧಾಂತಗಳಿಂದ, ವೇಷಗಳಿಂದ
ನನ್ನನು ಮುಕ್ತಗೊಳಿಸಿದೆ.

ಹಾಫಿಜ್
14ನೇ ಶತಮಾನದ ಪರ್ಶಿಯನ್ ಕವಿ

ಚಿದಂಬರ ನರೇಂದ್ರ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಕವಿ-ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’ ಚಿದಂಬರ ಅನುವಾದಿಸಿರುವ ಕವನ ಸಂಕಲನ. ’ಗಾಳಿಕೆನೆ’ ಅವರ ಸ್ವತಂತ್ರ ಕವಿತೆಗಳ ಸಂಕಲನ


ಇದನ್ನೂ ಓದಿ: ಕವನ; ಕೋಗಿಲೆಗೆ ಸುಖವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...