Homeಅಂಕಣಗಳುಪ್ರೀತಿ-ಸಾಮರಸ್ಯ ನುಡಿಯುವ 8 ಅನುವಾದಿತ ಕವನಗಳು

ಪ್ರೀತಿ-ಸಾಮರಸ್ಯ ನುಡಿಯುವ 8 ಅನುವಾದಿತ ಕವನಗಳು

- Advertisement -
- Advertisement -
  1. ಗಡಿ

ಛೇ!
ಇದು ಬರೀ ಒಂದು ಗೆರೆ ಕಣೋ
ಯಾರೋ ಸಿಟ್ಟಲ್ಲಿ ಗೀಚಿದ್ದಾರೆ ಅಷ್ಟೆ.
ಬಾ, ಬಾ ಈ ಗೆರೆಯನ್ನೇ
centre line ಮಾಡಿ ಕಬಡ್ಡಿ ಆಡೋಣ.

ನನ್ನ ಏರಿಯಾಗೆ ಬಾ, ಬಂದು
ಒಂದು ಆವಾಜ್ ಹಾಕು.
ನನ್ನ ಮೇಲೆ ಕೈ ಬೀಸು, ಮುಟ್ಟಿ
ಹಿಂದಿರುಗು ನೋಡೋಣ.

ನಾನೂ ಬಿಡೋದಿಲ್ಲ
ನಿನ್ನ ಮೇಲೆ ಬೀಳುತ್ತೇನೆ
ಕಟ್ಟಿಹಾಕುತ್ತೇನೆ ವಾಪಸ್ಸು ಹೋಗದಂತೆ.

ನನ್ನ ಪಾಳಿ ಈಗ,
ನಿನ್ನ ಏರಿಯಾಕ್ಕೆ ನಾನು
ಹು ತು ತೂ ಅನ್ನುತ್ತ ಆಕ್ರಮಣ ಮಾಡಿದಾಗ
ಸಾಧ್ಯವಾದರೆ ನನ್ನ ಹಿಡಿ
ಬಿಡಬೇಡ ವಾಪಸ್ಸು ಗಡಿ ದಾಟಲು.

ಇದು ಬರೀ ಒಂದು ಗೆರೆ ಕಣೋ
ಹಾಗೇ ಇರಲಿ ಬಿಡು
ಯಾರೋ ಸಿಟ್ಟಿನಿಂದ ಗೀಚಿದ್ದಾರೆ
ಅಷ್ಟೇ.

ಗುಲ್ಜಾರ್
ಖ್ಯಾತ ಉರ್ದು ಕವಿ – ಸಿನಿಮಾ ಸಾಹಿತಿ

*****

2. ಕಣ್ಣುಗಳಿಗೆ ವೀಸಾ ಬೇಕಿಲ್ಲ

ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಗಡಿಗಳ ಭಿಡೆಯಿಲ್ಲ.
ಕಣ್ಮುಚ್ಚಿ
ಹಾರಿಬಿಡುತ್ತೇನೆ ಪ್ರತಿದಿನ
ಗಡಿಗಳ ಮಿತಿಯನ್ನು,
ಭೇಟಿಯಾಗಲು
ಮೆಹದೀ ಹಸನ್‌ನನ್ನು!

ಪೆಟ್ಟಾಗಿದೆಯಂತೆ ಅವನ ದನಿಗೇನೋ
ಕುಳಿತುಬಿಟ್ಟಿದೆಯಂತೆ ಗಜಲ್
ಅವನೆದುರು ಮೂಕವಾಗಿ
ತುಟಿ ಕಂಪಿಸುತ್ತ
ಪುಟಗಳ ನಡುವಿನ ಹೂವು
ಒಣಗಿಹೋಗಿದೆಯೆಂದರೆ
ಗೆಳೆಯ ’ಫರಾಜ್’ ಕೂಡ
ಇನ್ನಿಲ್ಲ ಎಂದೇ ಅರ್ಥ.
ಬಹುಶಃ ಇನ್ನು ಕನಸುಗಳಲ್ಲೇ
ನಮ್ಮ ಭೇಟಿ.

ಕಣ್ಮುಚ್ಚಿಕೊಂಡು ದಾಟಿಬಿಡುತ್ತೇನೆ
ಗಡಿಗಳ ಮಿತಿಯನ್ನು ಮೇಲಿಂದ ಮೇಲೆ.

ಕಣ್ಣುಗಳಿಗೆ ವೀಸಾ ಬೇಕಿಲ್ಲ
ಕನಸುಗಳಿಗೆ ಗಡಿಗಳ ಭಿಡೆಯಿಲ್ಲ.

ಗುಲ್ಜಾರ್
ಖ್ಯಾತ ಉರ್ದು ಕವಿ- ಸಿನಿಮಾ ಸಾಹಿತಿ

*****

3. ಕಲಾವಿದನ ಸಂಕಟ

ಹಿಂದುಸ್ತಾನ್ ಜಿಂದಾಬಾದ್
ಪಾಕಿಸ್ತಾನ್ ಜಿಂದಾಬಾದ್
ಎಂದು ಕೂಗುತ್ತ, ಚೀರುತ್ತ ಸಾಗಿರುವ
ಘೋಷಣೆಗಳ ನಡುವೆ
ಬೇಕಾದಷ್ಟು ಪ್ರಶ್ನೆಗಳಿದ್ದವು.

ಯಾವುದನ್ನ ನನ್ನ ದೇಶ ಅಂತ ಹೇಳಲಿ?
ಜನ ಯಾಕೆ ಹೀಗೆ ಒಬ್ಬರಾದ ಮೇಲೊಬ್ಬರು ಸಾಯುತ್ತಿದ್ದಾರೆ?

ಈ ಪ್ರಶ್ನೆಗಳಿಗೆ ಕೆಲವು ನಿರ್ದಿಷ್ಟ ಉತ್ತರಗಳಿವೆ
ಕೆಲವು ಹಿಂದುಸ್ತಾನಿ ಉತ್ತರಗಳು
ಕೆಲವು ಪಾಕಿಸ್ತಾನಿ ಉತ್ತರಗಳು
ಕೆಲವು ಹಿಂದೂ ಉತ್ತರಗಳು
ಕೆಲವು ಮುಸ್ಲಿಂ ಉತ್ತರಗಳು
ಕೆಲವರು ಉತ್ತರಗಳನ್ನ 1857ರ ಪಾಳುಬಿದ್ದ ಇತಿಹಾಸದಲ್ಲಿ ಹುಡುಕಿದರೆ
ಇನ್ನೂ ಕೆಲವರು ಮೊಘಲ್ ಆಡಳಿತದ ಅವಶೇಷಗಳಲ್ಲಿ.

ಎಲ್ಲ ಹಿಂದೆ ಹೋಗಿ ಹುಡುಕುತ್ತಿದ್ದಾರೆ
ಆದರೆ ಇವತ್ತಿನ ಕೊಲೆಗಾರ
ರಕ್ತ ಮತ್ತು ಚೂರಿಗಳಿಂದ ಭವಿಷ್ಯ ಬರೆಯುತ್ತಿದ್ದಾನೆ

ಈ ಸುದ್ದಿ ಹೇಳುತ್ತ ಹೇಳುತ್ತ
ನಾನು ನಿಮ್ಮ ಕಲ್ಲೇಟುಗಳನ್ನ ಬೇಕಾದರೆ ಸಹಿಸಬಲ್ಲೆ
ಆದರೆ ಹಿಂದೂ-ಮುಸ್ಲಿಂ ದಂಗೆಯಲ್ಲಿ
ಯಾರಾದರೂ ನನ್ನ ತಲೆ ಒಡೆದರೆ
ನನ್ನ ರಕ್ತದ ಪ್ರತಿ ಹನಿಯೂ ಕಣ್ಣೀರಿನಲ್ಲಿ ಕೈ ತೊಳೆಯುತ್ತದೆ.

ನಾನೊಬ್ಬ ಕಲಾವಿದ
ನನಗೆ ದುಷ್ಟ ಗಾಯಗಳು ಮತ್ತು
ಕೊಳಕು ಕಲೆಗಳು ಇಷ್ಟವಿಲ್ಲ.

ಸಾದತ್ ಹಸನ್ ಮಂಟೋ
ಉರ್ದುವಿನಲ್ಲಿ ಬರೆಯುತ್ತಿದ್ದ ಖ್ಯಾತ ಕಥೆಗಾರ

*****

4. ಪ್ರೇಮದ ಪಾತ್ರ

ನಮ್ಮ ಈ ದೇಶದಲ್ಲಿ
ಎಷ್ಟೋ ಶತಮಾನಗಳ ನಂತರ
ನಮಗೆ ಸಾಧ್ಯವಾಗಿದೆ ಉಸಿರಾಡಲು,
ಎಷ್ಟೋ ದಶಕಗಳಾದ ಮೇಲೆ
ಅವಕಾಶ ದೊರೆತಿದೆ ಪ್ರೇಮಿಸಲು,
ಎಷ್ಟೋ ಸಮಯವಾದ ಮೇಲೆ
ಶುರು ಮಾಡಿದ್ದೇವೆ ಓದಲು, ಬರೆಯಲು.

ಈಗ ನಾವು ರೂಪಿಸಬೇಕಾಗಿದೆ
ನಮ್ಮ ಪ್ರೇಮ ಪದ್ಯಗಳಲ್ಲಿ
ಬಂಡಾಯದ ರೂಪಕಗಳನ್ನು

ಪ್ರೇಮ ತಾನೇ ಸ್ವತಃ
ಎದ್ದು ನಿಂತು ವಹಿಸಬೇಕಾಗಿದೆ
ಬಂಡಾಯದ ಪಾತ್ರ.

ಯೋಗೇಶ ಮೈತ್ರೇಯ
ಮರಾಠಿ ಯುವ ಕವಿ ಮತ್ತು ವಿಮರ್ಶಕ

*****

5. ಶಿಕ್ಷೆಯ ಅಗತ್ಯವಿಲ್ಲ

ಇನ್ನೊಬ್ಬರಿಂದ
ನಿಮಗೆ ನೋವಾಗುತ್ತಿದೆಯೆಂದರೆ
ಆ ಇನ್ನೊಬ್ಬರು ತಮ್ಮೊಳಗೆ
ಅನುಭವಿಸುತ್ತಿದ್ದಾರೆ ಆಳವಾದ ಸಂಕಟ,
ಮತ್ತು ಉಕ್ಕಿ ಹರಿಯುತ್ತಿದೆ.
ಅವರ ಈ ನೋವು

ನಿಮ್ಮ ಶಿಕ್ಷೆಯ ಅಗತ್ಯವಿಲ್ಲ ಅವರಿಗೆ
ಬೇಕಾಗಿದೆ ನಿಮ್ಮ ಸಹಾಯ
ಈ ಸಂದೇಶವನ್ನೇ ಅಲ್ಲವೆ
ಅವರು ತಲುಪಿಸಲು ಪ್ರಯತ್ನಿಸುತ್ತಿರುವುದು
ನಿಮಗೆ.

ತಿಚ್ ನ್ಹಾತ್ ಹಾನ್
ಬೌದ್ಧ ಚಿಂತಕ-ಬರಹಗಾರ

*****

6. ಹೃದಯದ ಬಾಗಿಲು

ಯಾರನ್ನ ವೈರಿ ಎಂದು ಗುರುತಿಸಲಿ?
ವೈರಿ ಎಂದಮೇಲೆ ಕೈ ಕೈ ಮಿಲಾಯಿಸಲು ತಕ್ಕವನಾಗಿರಬೇಕು.
ಸೂರ್ಯನ ದಿಕ್ಕಿಗೆ ಹೊರಳಿ ಒಂದೇ ಸವನೇ ನಡೆಯುತ್ತಿದ್ದೇನೆ.
ಈಗ ಪ್ರಶ್ನೆ ಕೇಳುತ್ತಿರುವುದು ಹೃದಯ,
ಉದ್ರಿಕ್ತ ಮನಸ್ಸಲ್ಲ.
ಹೃದಯ ಮತ್ತು ಸೂರ್ಯನ ಅಮ್ಮಂದಿರು
ಖಾಸಾ ಅಕ್ಕ ತಂಗಿಯರು.
ಹೃದಯಕ್ಕೆ ನೋಡುವುದೂ ಗೊತ್ತು
ನೋಡಿದ್ದಕ್ಕೆ ಅರ್ಥ ಹಚ್ಚುವುದೂ ಗೊತ್ತು.
ಹೃದಯ,
ಕಟಕಟ ಎನ್ನುತ್ತಿರುವ ಹಲ್ಲುಗಳ ಸಿಟ್ಟಿನ ಕಥೆಯನ್ನು
ಎಷ್ಟು ಸೂಕ್ಷ್ಮವಾಗಿ
ಅರ್ಥಮಾಡಿಕೊಳ್ಳುತ್ತದೆಯೋ
ಅಷ್ಟೇ ಸೂಕ್ಷ್ಮವಾಗಿ
ಮನದಲ್ಲಿಯೇ ಅಂದುಕೊಂಡ ಹಾರೈಕೆಯನ್ನೂ ಕೇಳಿಸಿಕೊಳ್ಳಬಲ್ಲದು.

ಮನಸ್ಸಿನ ಬಾಗಿಲು
ಹೃದಯದ ಮೂಲಕವೇ ತೆರೆದುಕೊಳ್ಳಬೇಕು,
ಯಾವ ವೈರಿ ಒಳಗೆ ನುಗ್ಗಿದರೂ
ಗೆಳೆಯನಾಗುವ ಅಪಾಯವನ್ನು ದಾಟಿಯೇ
ಮುಂದೆ ಹೋಗಬೇಕು.

ಜಾಯ್ ಹಾಜೊ
ಅಮೆರಿಕನ್ ಕವಿ-ಸಂಗೀತಕಾರ್ತಿ

*****

7. ಭಗವಂತನ ಪವಿತ್ರ ಯೋಜನೆ

ಈ ಜಗತ್ತಿನಲ್ಲಿ
ಒಬ್ಬರು, ಇನ್ನೊಬ್ಬರ ಹಾಗಿಲ್ಲ.
ಒಂದು ಹೃದಯದ ಹಾಗೆ
ಇನ್ನೊಂದು ಹೃದಯ ಮಿಡಿಯುವುದಿಲ್ಲ.
ಎಲ್ಲ ಭಗವಂತನ ಕಲ್ಪನೆ
ಸಮಸ್ತವೂ ವಿಭಿನ್ನ,
ಪ್ರತಿಯೊಂದೂ ಅನನ್ಯ.

ಎಲ್ಲವನ್ನೂ ಒಂದೇ ಎರಕಕ್ಕೆ ಹಾಕಿ
ಸೃಷ್ಟಿಮಾಡುವ ಹುಕಿ
ಭಗವಂತನದ್ದಾಗಿದ್ದರೆ
ಆತ ಹಾಗೆ ಮಾಡಬಹುದಾಗಿತ್ತು
ಮಾಡುತ್ತಿದ್ದ ಕೂಡ.
ಆದರೆ ಪರಿಸ್ಥಿತಿ ಹಾಗಿಲ್ಲವಲ್ಲ.

ನಮ್ಮ ನಡುವಿನ ವ್ಯತ್ಯಾಸವನ್ನು
ಅವಮಾನಿಸುವುದು
ನಮ್ಮ ಅಭಿಪ್ರಾಯಗಳನ್ನು, ಆಶಯಗಳನ್ನು
ಇನ್ನೊಬ್ಬರ ಮೇಲೆ ಹೇರುವುದು,

ಭಗವಂತನ ಪವಿತ್ರ ಯೋಜನೆಯನ್ನು
ಅವಮಾನಿಸಿದಂತೆ

ಶಮ್ಸ್ ತಬ್ರೀಝೀ
12 ನೇ ಶತಮಾನದ ಪರ್ಶಿಯನ್ ಕವಿ

*****

8. ಭಗವಂತನಿಂದ

ನಾನು ಎಷ್ಟೆಲ್ಲಾ ಕಲಿತಿದ್ದೇನೆಂದರೆ
ನಾನೊಬ್ಬ
ಕ್ರಿಶ್ಚಿಯನ್, ಮುಸ್ಲಿಂ, ಹಿಂದೂ, ಬೌದ್ಧ
ಎಂದೆಲ್ಲ ಹೇಳಿಕೊಳ್ಳಲೂ
ನನಗೆ ನಾಚಿಕೆಯಾಗುತ್ತದೆ.

ಸತ್ಯ ನನ್ನೊಂದಿಗೆ
ಎಷ್ಟು ಒಂದಾಗಿದೆಯೆಂದರೆ
ನನ್ನನ್ನು
ಗಂಡು, ಹೆಣ್ಣು, ಪ್ರವಾದಿ
ಅಥವಾ ಪವಿತ್ರ ಆತ್ಮ ಎಂದುಕೊಳ್ಳಲೂ
ಭಯವಾಗುತ್ತದೆ.

ಪ್ರೇಮ ನನ್ನನ್ನು
ಎಷ್ಟು ಅಲುಗಾಡಿಸಿದೆಯೆಂದರೆ
ತಾನೇ ಬೆಂಕಿಯಲ್ಲಿ ಹಾರಿ
ನನಗೆ ಗೊತ್ತಿರುವ ಎಲ್ಲ
ಸಿದ್ಧಾಂತಗಳಿಂದ, ವೇಷಗಳಿಂದ
ನನ್ನನು ಮುಕ್ತಗೊಳಿಸಿದೆ.

ಹಾಫಿಜ್
14ನೇ ಶತಮಾನದ ಪರ್ಶಿಯನ್ ಕವಿ

ಚಿದಂಬರ ನರೇಂದ್ರ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಕವಿ-ಅನುವಾದಕ. ’ಚಿಕ್ಕಿ ತೋರಿಸ್ತಾವ ಚಾಚಿ ಬೆರಳ’ ಚಿದಂಬರ ಅನುವಾದಿಸಿರುವ ಕವನ ಸಂಕಲನ. ’ಗಾಳಿಕೆನೆ’ ಅವರ ಸ್ವತಂತ್ರ ಕವಿತೆಗಳ ಸಂಕಲನ


ಇದನ್ನೂ ಓದಿ: ಕವನ; ಕೋಗಿಲೆಗೆ ಸುಖವಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...

ಕಾವೇರಿ ಪ್ರತಿಭಟನೆ ವೇಳೆ ಆಕ್ಷೇಪಾರ್ಹ ಹೇಳಿಕೆ : ತಮಿಳುನಾಡಿನ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಬಂಧನ

ಸೋಮವಾರ (ಆ.3) ತಂಜಾವೂರಿನಲ್ಲಿ ನಡೆದ ಕಾವೇರಿ ಪ್ರತಿಭಟನೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಉದಯನಿಧಿ ಬಂಧನಕ್ಕೂ...