Homeಕರ್ನಾಟಕಒಂದು ರಾಜ್ಯ-ಹಲವು ಜಗತ್ತುಗಳು ಜಾಹೀರಾತು; ಹಲವು ಜಗತ್ತುಗಳ ನಿರ್ನಾಮದ ವಾಸ್ತವ!

ಒಂದು ರಾಜ್ಯ-ಹಲವು ಜಗತ್ತುಗಳು ಜಾಹೀರಾತು; ಹಲವು ಜಗತ್ತುಗಳ ನಿರ್ನಾಮದ ವಾಸ್ತವ!

- Advertisement -
- Advertisement -

ಬಹಳ ಕಾಲದಿಂದ ಕರ್ನಾಟಕದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾ ಬಂದಿರುವ ನಿವೃತ್ತ ಹಿರಿಯ ಅಧಿಕಾರಿಯೊಬ್ಬರು ಇತ್ತೀಚಿಗೆ ಹೀಗೆ ಹೇಳಿದರು: ’ಇಷ್ಟು ಕಾಲ ಕರ್ನಾಟಕದಲ್ಲಿದ್ದ ನಮಗೆಲ್ಲಾ ಈ ರಾಜ್ಯ ಎಲ್ಲಿ ಉತ್ತರ ಪ್ರದೇಶ ಆಗಿಬಿಡುವುದೋ ಎನ್ನುವ ಆತಂಕವಿತ್ತು. ಈಗ ಆ ಆತಂಕಕ್ಕೆ ಅವಕಾಶ ಇಲ್ಲ. ಈಗ ಉತ್ತರ ಪ್ರದೇಶದ ಜನರಿಗೆ ಅವರ ರಾಜ್ಯ ಎಲ್ಲಿ ಕರ್ನಾಟಕದಂತೆ ಆಗಿಬಿಡುತ್ತದೋ ಎನ್ನುವ ಆತಂಕ ಕಾಡಬೇಕು’!

ಕರ್ನಾಟಕದ ಪ್ರಸ್ತುತ ಸ್ಥಿತಿಯ ಬಗ್ಗೆ ಎಲ್ಲವನ್ನೂ ಹಿಡಿದಿಡುವ ಹೇಳಿಕೆ ಇದು. ಕರ್ನಾಟಕದಲ್ಲಿ ಆಗಬಾರದೆಲ್ಲಾ ಆಗುತ್ತಿದೆ. ಕರ್ನಾಟಕದಲ್ಲಿ ಎಂದೂ ಹೀಗಾಗಿರಲಿಲ್ಲ.

ಸ್ವಾತಂತ್ರ್ಯಾನಂತರದಲ್ಲಿ ಕರ್ನಾಟಕ ಎಲ್ಲವನ್ನೂ ಕಂಡಿದೆ. ಒಳ್ಳೆಯದನ್ನು ಕಂಡಿದೆ, ಕೆಟ್ಟದನ್ನೂ ಕಂಡಿದೆ. ಕೆಲವು ವಿಚಾರಗಳಲ್ಲಿ ಕರ್ನಾಟಕ ಧನಾತ್ಮಕ ಕಾರಣಗಳಿಗೆ ರಾಷ್ಟ್ರದ ಗಮನ ಸೆಳೆದಿದ್ದರೆ ಇನ್ನು ಕೆಲವು ವಿಚಾರಗಳಲ್ಲಿ ಕೆಟ್ಟ ಕಾರಣಗಳಿಂದ ದೇಶದ ಗಮನ ಸೆಳೆದದ್ದೂ ಇದೆ. ಆರ್ಥಿಕವಾಗಿ ಒಂದು ಕಾಲದಲ್ಲಿ ಸಾರ್ವಜನಿಕ ರಂಗದ ಉದ್ದಿಮೆಗಳ ಆಡುಂಬೊಲವಾಗಿ ಗಮನ ಸೆಳೆದಿದ್ದ ಕರ್ನಾಟಕ ಈಗ ಆಧುನಿಕ ಉದ್ಯಮಗಳಾದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃತಕ ಬುದ್ದಿಮತ್ತೆ ಇತ್ಯಾದಿಗಳ ಕೇಂದ್ರವಾಗಿ ಗಮನ ಸೆಳೆದಿದೆ. ರಾಜಕೀಯದ ವಿಚಾರಕ್ಕೆ ಬರುವುದಾದರೆ ದೇವರಾಜ ಅರಸು ಅವರು ರಾಜಕೀಯ ಅಧಿಕಾರವನ್ನು, ಚಾರಿತ್ರಿಕವಾಗಿ ರಾಜಕೀಯ ಅಧಿಕಾರದ ಅಂಚಿನಲ್ಲೇ ಉಳಿದಿದ್ದ ಹಿಂದುಳಿದ ವರ್ಗಗಳತ್ತ ಹರಿಯುವ ಹಾಗೆ ಮಾಡಿದ ಕ್ರಾಂತಿ, ನಜೀರ್ ಸಾಬ್-ರಾಮ ಕೃಷ್ಣ ಹೆಗಡೆ ರಾಜಕೀಯ ಅಧಿಕಾರವನ್ನು ಗ್ರಾಮ ಮಟ್ಟಕ್ಕೆ ಒಯ್ದು ಮಾಡಿದ ಕ್ರಾಂತಿ ಇತ್ಯಾದಿಗಳೆಲ್ಲವೂ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದ್ದವು.

ಅದೇ ವೇಳೆ ಆರ್ಥಿಕವಾಗಿ ರಾಜ್ಯದ ಅರ್ಧಭಾಗಕ್ಕೂ ಹೆಚ್ಚು ಭೂಪ್ರದೇಶ ಅಭಿವೃದ್ಧಿಯ ದೃಷ್ಟಿಯಿಂದ ಆರಕ್ಕೆ ಏಳದೆ, ಮೂರಕ್ಕೆ ಇಳಿಯದೆ ಕರ್ನಾಟಕ ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಒಣಭೂಮಿಯನ್ನು ಹೊಂದಿದ ರಾಜ್ಯವಾಗಿ ಉಳಿದದ್ದೂ ಸತ್ಯ. ಹಾಗೆಯೇ, ರಾಜಕೀಯವಾಗಿ ಒಂದು ಕಾಲದಲ್ಲಿ ಆಯಾ ರಾಮ್-ಗಯಾ ರಾಮ್ ಸಂಸ್ಕೃತಿ, ಶಾಸಕರನ್ನು ರೆಸಾರ್ಟ್‌ನಲ್ಲಿ ಕೂಡಿ ಹಾಕುವ ಸಂಸ್ಕೃತಿ ಇತ್ಯಾದಿಗಳ ಆವಿಷ್ಕಾರ ಇಲ್ಲಿ ನಡೆದರೆ, ಇತ್ತೀಚೆಗಿನ ವರ್ಷಗಳಲ್ಲಿ ’ಆಪರೇಷನ್ ಕಮಲ’ ಎಂಬ ಶಾಸಕರ ಖರೀದಿಯ ಉದ್ಯಮಕ್ಕೆ ಕೂಡಾ ಕರ್ನಾಟಕವೇ ಮೇಲ್ಪಂಕ್ತಿ ಹಾಕಿದ್ದು ಎನ್ನುವ ಸತ್ಯವೂ ನಮ್ಮ ಮುಂದಿದೆ.

ಒಂದು ರಾಜ್ಯದ ಸುದೀರ್ಘ ಚರಿತ್ರೆಯಲ್ಲಿ ಇಂತಹದ್ದೆಲ್ಲಾ ಸಂಭವಿಸುತ್ತವೆ. ತಪ್ಪುಗಳಾಗುತ್ತವೆ, ಅವುಗಳನ್ನು ಸರಿಪಡಿಸುವ ಪ್ರಯತ್ನವೂ ನಡೆಯುತ್ತವೆ. ತಪ್ಪುಗಳು, ಕೆಟ್ಟ ನಡವಳಿಕೆಗಳು ಇತ್ಯಾದಿಗಳನ್ನು ಕೆಟ್ಟ ನಡವಳಿಕೆ ಅಂತಲೇ ಗುರುತಿಸಿ, ಏನೋ ವಿಷಘಳಿಗೆಯಲ್ಲಿ ಆಗಿಹೋಯಿತು ಅಂತ ಭಾವಿಸಿ ಮುನ್ನಡೆಯುವುದು, ನಡೆದುಹೋದದ್ದರ ಬಗ್ಗೆ ಪಶ್ಚಾತ್ತಾಪ, ನಾಚಿಕೆ ಇತ್ಯಾದಿ ಅನುಭವಿಸುವುದು, ಮುಂದೆ ಹೀಗಾಗದಿರಲಿ ಎನ್ನುವ ಭಾರ ಹೊತ್ತುಕೊಂಡಿರುವಾಗಲೇ ಮತ್ತೆ ಅಂತಹದ್ದೇ ಕೆಲವು ಕೆಟ್ಟ ಬೆಳವಣಿಗೆಗಳು ಸಂಭವಿಸುವುದು – ಹೀಗೆ ನಡೆಯುತ್ತಲೇ ಇರುತ್ತವೆ.

ಆದರೆ, ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳು ಈ ರೀತಿಯವಲ್ಲ. ಅವುಗಳ ಚಹರೆಯೇ ಬೇರೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ ಈಗ ಕೆಟ್ಟದ್ದನ್ನು ಕೆಟ್ಟದ್ದು ಅಂತ ಕಾಣುವ ಮನೋಭಾವನೆಯನ್ನೇ ನಾಶಮಾಡಲಾಗುತ್ತಿದೆ. ಕೆಟ್ಟದ್ದನ್ನು ಹೆಚ್ಚು ಮಾಡುವುದೇ ಸರಿಯಾದ ಮಾರ್ಗ ಅಂತ ಎಲ್ಲ ಬಗೆಯ ಜೀವ ವಿರೋಧಿ, ಮನುಷ್ಯ ವಿರೋಧಿ ಕೃತ್ಯಗಳನ್ನು ಜನರು ಒಂದು ರೀತಿಯ ಗೌರವ ಭಾವನೆಯಿಂದ ಸ್ವೀಕರಿಸುವಂತಹ ಸಾಮಾಜಿಕ ಪರಿಸರವೊಂದು ನಿರ್ಮಾಣವಾಗುತ್ತಿರುವ ಹಾಗಿದೆ. ಯಾರ್‍ಯರು ಇದನ್ನು ವಿರೋಧಿಸಬೇಕಿತ್ತೋ ಅವರೆಲ್ಲಾ ಒಂದೋ ಇದನ್ನು ಬೆಂಬಲಿಸುತ್ತಿದ್ದಾರೆ, ಇಲ್ಲವೇ ಸುಮ್ಮನಿದ್ದಾರೆ. ಬಹುತೇಕ ಸ್ವಾಮೀಜಿಗಳು, ಬಹುತೇಕ ಸಾಹಿತಿಗಳು, ಬಹುತೇಕ ಬರಹಗಾರರು, ಬಹುತೇಕ ಕಲಾವಿದರು, ಹೀಗೆ ಒಂದು ಸಮಾಜದ ಸಾಕ್ಷಿ ಪ್ರಜ್ಞೆಯಂತೆ ಕೆಲಸ ಮಾಡಬೇಕಾದವೆರೆಲ್ಲಾ ಮೌನಕ್ಕೆ ಶರಣಾಗಿರುವುದು ಅಥವಾ ಕಾಲದ ಅನಿಷ್ಟಗಳ ಜತೆ ಹೆಜ್ಜೆ ಹಾಕುತ್ತಿರುವುದು ಘೋರ ವಿಪರ್ಯಾಸದಂತೆ ಕಾಣಿಸುತ್ತಿದೆ. ಎಲ್ಲಾ ಸಂವಿಧಾನ ವಿರೋಧಿ ಹೇಳಿಕೆಗಳಿಗೆ, ಎಲ್ಲಾ ರೀತಿಯ ಪ್ರಜಾತಂತ್ರ ವಿರೋಧಿ ನಡವಳಿಕೆಗಳಿಗೆ ಒಂದು ರೀತಿಯ ಮಾನ್ಯತೆ, ಒಂದು ರೀತಿಯ ಸ್ವೀಕಾರಾರ್ಹತೆ ತಂದುಕೊಡುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ. ಕೆಟ್ಟದ್ದು ಎಲ್ಲಾ ಸಮಾಜಗಳಲ್ಲೂ ನಡೆಯುತ್ತವೆ.

ಆದರೆ ಕೆಟ್ಟದ್ದು ನಡೆದಾಗ ಹೀಗಾಗಿದ್ದು ಸರಿ ಎಂಬುದಾಗಿಯೂ, ಮುಂದೆಯೂ ಹೀಗೆಯೇ ನಡೆಯಬೇಕೆಂಬುದಾಗಿಯೂ ಜನ ಯೋಚಿಸಲಾರಂಭಿಸಿದರೆ ಅದು ಅಂತಿಂತಹ ಪತನವಲ್ಲ. ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು ಇಂತಹ ಅಧಃಪತನ. ಇಲ್ಲಿ ದಾಳಿಗಳು, ವಿದ್ವೇಷಕಾರೀ ಹೇಳಿಕೆಗಳು, ಹಿಂಸೆಗೆ ಪ್ರಚೋದನೆ ನೀಡುವ ಕರೆಗಳು, ಸಾಮಾಜಿಕ ಬಹಿಷ್ಕಾರ ಇತ್ಯಾದಿಗಳೆಲ್ಲವನ್ನು ಒಂದು ವರ್ಗ ಪವಿತ್ರ ಕೆಲಸ ಎನ್ನುವಂತೆ ಮಾಡುತ್ತಿದೆ ಮತ್ತು ಹಾಗೆಯೇ ಜನರನ್ನು ನಂಬಿಸುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ಸರಕಾರ ಕೂಡಾ ಇದನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಮರ್ಥಿಸುತ್ತಿದೆ. ಮುಖ್ಯಮಂತ್ರಿ ಹಿಂಸಾತ್ಮಕ ದಾಳಿಗಳನ್ನು ’ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಅಂತ ಸಮರ್ಥಿಸುತ್ತಾರೆ, ಪ್ರಭಾವಿ ಹಿರಿಯ ಸಚಿವರು ಒಂದು ದಿನ ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಲಿದೆ ಎಂದು ಸಂವಿಧಾನವನ್ನೇ ಅಲ್ಲಗಳೆಯುತ್ತಾರೆ. ಇನ್ನೊಂದೆಡೆ ಪಕ್ಷಾತೀತವಾಗಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಿರುವ ವಿಧಾನಸಭೆಯ ಸಭಾಪತಿಗಳು ಮಾತೆತ್ತಿದರೆ ’ನಮ್ಮ ಆರ್.ಎಸ್.ಎಸ್’, ’ನಮ್ಮ ಆರ್.ಎಸ್.ಎಸ್’ ಎನ್ನುತ್ತಿದ್ದಾರೆ.

ಒಂದು ರಾಜ್ಯ-ಹಲವು ಜಗತ್ತುಗಳು!

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಹೊರಗಿನಿಂದ ಬಂದ ಅತಿಥಿಗಳನ್ನು ಸ್ವಾಗತಿಸುವಾಗ ರಾಜ್ಯದ ಬಗ್ಗೆ ನೀಡುವ ಒಕ್ಕಣೆ ಇದು. ಈಗ ಹಲವು ಜಗತ್ತುಗಳೆಲ್ಲಾ ನಾಶವಾಗುತ್ತಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿ ಪ್ರಯೋಗವಾಗಿರುವ ದ್ವೇಷ-ಕೇಂದ್ರಿತ ಚುನಾವಣಾ ರಾಜಕೀಯದ ಮಾದರಿಗೆ ದಕ್ಷಿಣದಲ್ಲೊಂದು ವಸಾಹತು ಎಂಬಂತೆ ಕರ್ನಾಟಕದ ಮಣ್ಣು ಹದಗೊಳ್ಳುತ್ತಿದೆ. ಈ ರಾಜ್ಯದಲ್ಲಿ ಹಿಂದೆಯೂ ಚುನಾವಣೆಗಳು ಆಗಿವೆ, ಹೋಗಿವೆ. ಪಕ್ಷಗಳು, ಗೆದ್ದಿವೆ, ಸೋತಿವೆ. ಆದರೆ ಹಿಂದೆ ಯಾವತ್ತೂ ಸಾಮಾಜಿಕ ಸಾಮರಸ್ಯವನ್ನು ಈ ಪರಿ ಕೆಡಿಸಿ ರಾಜಕೀಯ ಲಾಭದ ಬೀಜ ಬಿತ್ತುವ ಕೆಲಸ ನಡೆದಿರಲಿಲ್ಲ. ನೇರವಾಗಿ ಹೇಳಬೇಕು ಎಂದಾದರೆ ಬಹುಸಂಖ್ಯಾತ ಹಿಂದುಗಳಲ್ಲಿ ಮುಸ್ಲಿಂ ದ್ವೇಷವನ್ನು ಈ ಮಟ್ಟಿಗೆ ಬೆಳೆಸಿ ಚುನಾವಣೆಗೆ ನೆಲ ಹಸನುಗೊಳಿಸುವ ಅಪಾಯಕಾರಿ ತಂತ್ರ ಈ ಪ್ರಮಾಣದಲ್ಲಿ ಬಳಕೆಯಾದದ್ದಿಲ್ಲ. ಈಗ ಇದು ಭಯಾನಕವಾದ ರೀತಿಗಳಲ್ಲಿ ಆಗುತ್ತಿದೆ.

ದ್ವೇಷವನ್ನು ವ್ಯವಸ್ಥಿತವಾಗಿ ಸೃಷ್ಟಿಸಲಾಗುತ್ತಿದೆ. ಹೀಗೆಲ್ಲಾ ಆಗುವುದು ಅನಿವಾರ್ಯ ಎನ್ನುವ ಮತ್ತು ಎಲ್ಲವೂ ’ಪ್ರತಿಕ್ರಿಯೆಯಾಗಿ’ ನಡೆಯುತ್ತಿವೆ ಎನ್ನುವ ಮಿಥ್ಯೆಯನ್ನು ಸೃಷ್ಟಿಸಿ ಜನರನ್ನು ವ್ಯವಸ್ಥಿತವಾಗಿ ನಂಬಿಸುವ ಕೆಲಸ ನಡೆಯುತ್ತಿದೆ. ಈ ಸಂಚುಗಳನ್ನೆಲ್ಲಾ ಯಾವುದೋ ಕಲ್ಪಿತ ಸಮಸ್ಯೆಗೊಂದು ’ಅಂತಿಮ ಪರಿಹಾರ’ ನಿರೂಪಿಸುವ ಸಲುವಾಗಿಯೇ ಮಾಡಲಾಗುತ್ತಿದೆ ಎನ್ನುವ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಅಂದರೆ, ಎಲ್ಲವೂ ಹೀಗೆಯೇ ಮುಂದುವರಿದರೆ ಜನಾಂಗ ಹತ್ಯೆಯಂತಹ ಬಹುದೊಡ್ಡ ದುರಂತವೊಂದು ಘಟಿಸಬಹುದು ಎನ್ನುವ ಆತಂಕ ಅದು. ಇದನ್ನು ಕೇಳಿದ ಯಾರಿಗೇ ಆದರೂ ಆಘಾತ ಆಗಬೇಕು. ಇಲ್ಲ, ಯಾರಿಗೂ ಯಾವುದೂ ಯಾವುದೇ ಆಘಾತವನ್ನು ತರುವಂತೆ ಕಾಣಿಸುತ್ತಿಲ್ಲ. ಒಂದು ಪ್ರಶ್ನೆ ಕಾಡುತ್ತದೆ. ಹಿಂದೆಲ್ಲಾ ಹೀಗೆ ಮನುಷ್ಯರ ತಲೆಕೆಡಿಸಿ ದ್ವೇಷದ ಬೀಜ ಬಿತ್ತಲು ರಾಜಕೀಯ ಪ್ರಯತ್ನಗಳು ನಡೆದ ಸಂದರ್ಭಗಳಲ್ಲಿ ಸಾಮಾನ್ಯ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದ ಒಂದು ಸೂಕ್ಷ್ಮ ವಿವೇಚನೆ ಅದನ್ನು ತಡೆಯುತಿತ್ತು. ಈ ಹೊತ್ತಿಗೆ ಆ ಜಾನಪದೀಯ ಕನ್ನಡ ಪ್ರಜ್ಞೆ ಎಷ್ಟರಮಟ್ಟಿಗೆ ಉಳಿದುಕೊಂಡಿದೆ ಎಂದು ಪರಿಶೀಲಿಸಬೇಕಾದ ಕಾಲ ಬಂದಿದೆ.

ಹೀಗೆಲ್ಲಾ ಆಗುವ ಮುನ್ಸೂಚನೆಗಳು ಎಂದೋ ಸಿಗುತ್ತಿದ್ದವು. ಆದರೂ ಎಲ್ಲರೂ ಅವುಗಳನ್ನು ಕಡೆಗಣಿಸಿದರು. ಯಾವುದೋ ಕೆಲವು ಅಂಚಿನ ಸಂಘಟನೆಗಳು ಇವನ್ನೆಲ್ಲಾ ಮಾಡುತ್ತಿವೆ. ಕರ್ನಾಟಕಕ್ಕೊಂದು ಉದಾತ್ತ ಪರಂಪರೆ ಇದೆ. ಇಲ್ಲಿ ಶರಣ ಚಳವಳಿ ನಡೆದು ಹೋಗಿದೆ. ಇಲ್ಲಿ ಸಾಮಾಜಿಕ ಸಾಮರಸ್ಯದ ಬೇರುಗಳು ಗಟ್ಟಿಯಾಗಿವೆ. ಹೀಗೆ ಏನೇನೋ ಭರವಸೆಗಳನ್ನಿಟ್ಟುಕೊಂಡು ಆ ಎಲ್ಲಾ ಆರಂಭಿಕ ಸೂಚನೆಗಳನ್ನು ಕಡೆಗಣಿಸಿದ ಕಾರಣ ಈ ಹೊತ್ತು ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿದೆ. ಈಗಲೂ ಅಷ್ಟೇ. ಇಷ್ಟೆಲ್ಲಾ ಆದ ನಂತರವೂ ನಾಗರಿಕ ಸಮಾಜದಿಂದ ಎಷ್ಟು ದೊಡ್ಡ ಪ್ರತಿರೋಧ ಬರಬೇಕೋ ಅಷ್ಟು ಪ್ರತಿರೋಧ ಬಂದಂತೆ ಕಾಣಿಸುತ್ತಿಲ್ಲ. ನಿಜ, ಕೆಲವು ಕಡೆ ಮುಸ್ಲಿಮರಿಗೆ ಹೇರಿದ ಆರ್ಥಿಕ ಬಹಿಷ್ಕಾರಕ್ಕೆ ಸ್ಥಳೀಯವಾಗಿ ವಿರೋಧ ಕಂಡುಬಂದಿದೆ. ಇಷ್ಟು ಸಾಲದು. ಈಗ ನಡೆಯುತ್ತಿರುವ ವಿದ್ಯಮಾನಗಳಿಗೆ ಜನ ಬೆಂಬಲ ಇಲ್ಲ ಎನ್ನುವ ಸಂದೇಶ ಸ್ಪಷ್ಟಾಗಿಯೂ ಮತ್ತದು ಅಹಿಂಸಾತ್ಮಕವಾಗಿಯೂ ಎಲ್ಲ ಕಡೆಯೂ ರವಾನೆಯಾಗಬೇಕಿದೆ. ಅದು ಆಗುತ್ತಿಲ್ಲ ಎನ್ನುವುದು ಈಗ ನಡೆಯುತ್ತಿರುವ ಅನಿಷ್ಟ ವಿದ್ಯಮಾನಗಳಿಗಿಂತ ಹೆಚ್ಚು ಅನಾಹುತಕಾರಿ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಕತ್ತಲೆ ದಾರಿಗೆ ಬೆಳಕು ಹಿಡಿಯುವವರ್‍ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...