Homeಕರ್ನಾಟಕಒಂದು ರಾಜ್ಯ-ಹಲವು ಜಗತ್ತುಗಳು ಜಾಹೀರಾತು; ಹಲವು ಜಗತ್ತುಗಳ ನಿರ್ನಾಮದ ವಾಸ್ತವ!

ಒಂದು ರಾಜ್ಯ-ಹಲವು ಜಗತ್ತುಗಳು ಜಾಹೀರಾತು; ಹಲವು ಜಗತ್ತುಗಳ ನಿರ್ನಾಮದ ವಾಸ್ತವ!

- Advertisement -
- Advertisement -

ಬಹಳ ಕಾಲದಿಂದ ಕರ್ನಾಟಕದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಾ ಬಂದಿರುವ ನಿವೃತ್ತ ಹಿರಿಯ ಅಧಿಕಾರಿಯೊಬ್ಬರು ಇತ್ತೀಚಿಗೆ ಹೀಗೆ ಹೇಳಿದರು: ’ಇಷ್ಟು ಕಾಲ ಕರ್ನಾಟಕದಲ್ಲಿದ್ದ ನಮಗೆಲ್ಲಾ ಈ ರಾಜ್ಯ ಎಲ್ಲಿ ಉತ್ತರ ಪ್ರದೇಶ ಆಗಿಬಿಡುವುದೋ ಎನ್ನುವ ಆತಂಕವಿತ್ತು. ಈಗ ಆ ಆತಂಕಕ್ಕೆ ಅವಕಾಶ ಇಲ್ಲ. ಈಗ ಉತ್ತರ ಪ್ರದೇಶದ ಜನರಿಗೆ ಅವರ ರಾಜ್ಯ ಎಲ್ಲಿ ಕರ್ನಾಟಕದಂತೆ ಆಗಿಬಿಡುತ್ತದೋ ಎನ್ನುವ ಆತಂಕ ಕಾಡಬೇಕು’!

ಕರ್ನಾಟಕದ ಪ್ರಸ್ತುತ ಸ್ಥಿತಿಯ ಬಗ್ಗೆ ಎಲ್ಲವನ್ನೂ ಹಿಡಿದಿಡುವ ಹೇಳಿಕೆ ಇದು. ಕರ್ನಾಟಕದಲ್ಲಿ ಆಗಬಾರದೆಲ್ಲಾ ಆಗುತ್ತಿದೆ. ಕರ್ನಾಟಕದಲ್ಲಿ ಎಂದೂ ಹೀಗಾಗಿರಲಿಲ್ಲ.

ಸ್ವಾತಂತ್ರ್ಯಾನಂತರದಲ್ಲಿ ಕರ್ನಾಟಕ ಎಲ್ಲವನ್ನೂ ಕಂಡಿದೆ. ಒಳ್ಳೆಯದನ್ನು ಕಂಡಿದೆ, ಕೆಟ್ಟದನ್ನೂ ಕಂಡಿದೆ. ಕೆಲವು ವಿಚಾರಗಳಲ್ಲಿ ಕರ್ನಾಟಕ ಧನಾತ್ಮಕ ಕಾರಣಗಳಿಗೆ ರಾಷ್ಟ್ರದ ಗಮನ ಸೆಳೆದಿದ್ದರೆ ಇನ್ನು ಕೆಲವು ವಿಚಾರಗಳಲ್ಲಿ ಕೆಟ್ಟ ಕಾರಣಗಳಿಂದ ದೇಶದ ಗಮನ ಸೆಳೆದದ್ದೂ ಇದೆ. ಆರ್ಥಿಕವಾಗಿ ಒಂದು ಕಾಲದಲ್ಲಿ ಸಾರ್ವಜನಿಕ ರಂಗದ ಉದ್ದಿಮೆಗಳ ಆಡುಂಬೊಲವಾಗಿ ಗಮನ ಸೆಳೆದಿದ್ದ ಕರ್ನಾಟಕ ಈಗ ಆಧುನಿಕ ಉದ್ಯಮಗಳಾದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃತಕ ಬುದ್ದಿಮತ್ತೆ ಇತ್ಯಾದಿಗಳ ಕೇಂದ್ರವಾಗಿ ಗಮನ ಸೆಳೆದಿದೆ. ರಾಜಕೀಯದ ವಿಚಾರಕ್ಕೆ ಬರುವುದಾದರೆ ದೇವರಾಜ ಅರಸು ಅವರು ರಾಜಕೀಯ ಅಧಿಕಾರವನ್ನು, ಚಾರಿತ್ರಿಕವಾಗಿ ರಾಜಕೀಯ ಅಧಿಕಾರದ ಅಂಚಿನಲ್ಲೇ ಉಳಿದಿದ್ದ ಹಿಂದುಳಿದ ವರ್ಗಗಳತ್ತ ಹರಿಯುವ ಹಾಗೆ ಮಾಡಿದ ಕ್ರಾಂತಿ, ನಜೀರ್ ಸಾಬ್-ರಾಮ ಕೃಷ್ಣ ಹೆಗಡೆ ರಾಜಕೀಯ ಅಧಿಕಾರವನ್ನು ಗ್ರಾಮ ಮಟ್ಟಕ್ಕೆ ಒಯ್ದು ಮಾಡಿದ ಕ್ರಾಂತಿ ಇತ್ಯಾದಿಗಳೆಲ್ಲವೂ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದ್ದವು.

ಅದೇ ವೇಳೆ ಆರ್ಥಿಕವಾಗಿ ರಾಜ್ಯದ ಅರ್ಧಭಾಗಕ್ಕೂ ಹೆಚ್ಚು ಭೂಪ್ರದೇಶ ಅಭಿವೃದ್ಧಿಯ ದೃಷ್ಟಿಯಿಂದ ಆರಕ್ಕೆ ಏಳದೆ, ಮೂರಕ್ಕೆ ಇಳಿಯದೆ ಕರ್ನಾಟಕ ಇಡೀ ದೇಶದಲ್ಲೇ ಅತ್ಯಂತ ಹೆಚ್ಚು ಒಣಭೂಮಿಯನ್ನು ಹೊಂದಿದ ರಾಜ್ಯವಾಗಿ ಉಳಿದದ್ದೂ ಸತ್ಯ. ಹಾಗೆಯೇ, ರಾಜಕೀಯವಾಗಿ ಒಂದು ಕಾಲದಲ್ಲಿ ಆಯಾ ರಾಮ್-ಗಯಾ ರಾಮ್ ಸಂಸ್ಕೃತಿ, ಶಾಸಕರನ್ನು ರೆಸಾರ್ಟ್‌ನಲ್ಲಿ ಕೂಡಿ ಹಾಕುವ ಸಂಸ್ಕೃತಿ ಇತ್ಯಾದಿಗಳ ಆವಿಷ್ಕಾರ ಇಲ್ಲಿ ನಡೆದರೆ, ಇತ್ತೀಚೆಗಿನ ವರ್ಷಗಳಲ್ಲಿ ’ಆಪರೇಷನ್ ಕಮಲ’ ಎಂಬ ಶಾಸಕರ ಖರೀದಿಯ ಉದ್ಯಮಕ್ಕೆ ಕೂಡಾ ಕರ್ನಾಟಕವೇ ಮೇಲ್ಪಂಕ್ತಿ ಹಾಕಿದ್ದು ಎನ್ನುವ ಸತ್ಯವೂ ನಮ್ಮ ಮುಂದಿದೆ.

ಒಂದು ರಾಜ್ಯದ ಸುದೀರ್ಘ ಚರಿತ್ರೆಯಲ್ಲಿ ಇಂತಹದ್ದೆಲ್ಲಾ ಸಂಭವಿಸುತ್ತವೆ. ತಪ್ಪುಗಳಾಗುತ್ತವೆ, ಅವುಗಳನ್ನು ಸರಿಪಡಿಸುವ ಪ್ರಯತ್ನವೂ ನಡೆಯುತ್ತವೆ. ತಪ್ಪುಗಳು, ಕೆಟ್ಟ ನಡವಳಿಕೆಗಳು ಇತ್ಯಾದಿಗಳನ್ನು ಕೆಟ್ಟ ನಡವಳಿಕೆ ಅಂತಲೇ ಗುರುತಿಸಿ, ಏನೋ ವಿಷಘಳಿಗೆಯಲ್ಲಿ ಆಗಿಹೋಯಿತು ಅಂತ ಭಾವಿಸಿ ಮುನ್ನಡೆಯುವುದು, ನಡೆದುಹೋದದ್ದರ ಬಗ್ಗೆ ಪಶ್ಚಾತ್ತಾಪ, ನಾಚಿಕೆ ಇತ್ಯಾದಿ ಅನುಭವಿಸುವುದು, ಮುಂದೆ ಹೀಗಾಗದಿರಲಿ ಎನ್ನುವ ಭಾರ ಹೊತ್ತುಕೊಂಡಿರುವಾಗಲೇ ಮತ್ತೆ ಅಂತಹದ್ದೇ ಕೆಲವು ಕೆಟ್ಟ ಬೆಳವಣಿಗೆಗಳು ಸಂಭವಿಸುವುದು – ಹೀಗೆ ನಡೆಯುತ್ತಲೇ ಇರುತ್ತವೆ.

ಆದರೆ, ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳು ಈ ರೀತಿಯವಲ್ಲ. ಅವುಗಳ ಚಹರೆಯೇ ಬೇರೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ ಈಗ ಕೆಟ್ಟದ್ದನ್ನು ಕೆಟ್ಟದ್ದು ಅಂತ ಕಾಣುವ ಮನೋಭಾವನೆಯನ್ನೇ ನಾಶಮಾಡಲಾಗುತ್ತಿದೆ. ಕೆಟ್ಟದ್ದನ್ನು ಹೆಚ್ಚು ಮಾಡುವುದೇ ಸರಿಯಾದ ಮಾರ್ಗ ಅಂತ ಎಲ್ಲ ಬಗೆಯ ಜೀವ ವಿರೋಧಿ, ಮನುಷ್ಯ ವಿರೋಧಿ ಕೃತ್ಯಗಳನ್ನು ಜನರು ಒಂದು ರೀತಿಯ ಗೌರವ ಭಾವನೆಯಿಂದ ಸ್ವೀಕರಿಸುವಂತಹ ಸಾಮಾಜಿಕ ಪರಿಸರವೊಂದು ನಿರ್ಮಾಣವಾಗುತ್ತಿರುವ ಹಾಗಿದೆ. ಯಾರ್‍ಯರು ಇದನ್ನು ವಿರೋಧಿಸಬೇಕಿತ್ತೋ ಅವರೆಲ್ಲಾ ಒಂದೋ ಇದನ್ನು ಬೆಂಬಲಿಸುತ್ತಿದ್ದಾರೆ, ಇಲ್ಲವೇ ಸುಮ್ಮನಿದ್ದಾರೆ. ಬಹುತೇಕ ಸ್ವಾಮೀಜಿಗಳು, ಬಹುತೇಕ ಸಾಹಿತಿಗಳು, ಬಹುತೇಕ ಬರಹಗಾರರು, ಬಹುತೇಕ ಕಲಾವಿದರು, ಹೀಗೆ ಒಂದು ಸಮಾಜದ ಸಾಕ್ಷಿ ಪ್ರಜ್ಞೆಯಂತೆ ಕೆಲಸ ಮಾಡಬೇಕಾದವೆರೆಲ್ಲಾ ಮೌನಕ್ಕೆ ಶರಣಾಗಿರುವುದು ಅಥವಾ ಕಾಲದ ಅನಿಷ್ಟಗಳ ಜತೆ ಹೆಜ್ಜೆ ಹಾಕುತ್ತಿರುವುದು ಘೋರ ವಿಪರ್ಯಾಸದಂತೆ ಕಾಣಿಸುತ್ತಿದೆ. ಎಲ್ಲಾ ಸಂವಿಧಾನ ವಿರೋಧಿ ಹೇಳಿಕೆಗಳಿಗೆ, ಎಲ್ಲಾ ರೀತಿಯ ಪ್ರಜಾತಂತ್ರ ವಿರೋಧಿ ನಡವಳಿಕೆಗಳಿಗೆ ಒಂದು ರೀತಿಯ ಮಾನ್ಯತೆ, ಒಂದು ರೀತಿಯ ಸ್ವೀಕಾರಾರ್ಹತೆ ತಂದುಕೊಡುವ ಪ್ರಯತ್ನ ಯಶಸ್ವಿಯಾಗಿ ನಡೆಯುತ್ತಿದೆ. ಕೆಟ್ಟದ್ದು ಎಲ್ಲಾ ಸಮಾಜಗಳಲ್ಲೂ ನಡೆಯುತ್ತವೆ.

ಆದರೆ ಕೆಟ್ಟದ್ದು ನಡೆದಾಗ ಹೀಗಾಗಿದ್ದು ಸರಿ ಎಂಬುದಾಗಿಯೂ, ಮುಂದೆಯೂ ಹೀಗೆಯೇ ನಡೆಯಬೇಕೆಂಬುದಾಗಿಯೂ ಜನ ಯೋಚಿಸಲಾರಂಭಿಸಿದರೆ ಅದು ಅಂತಿಂತಹ ಪತನವಲ್ಲ. ಕರ್ನಾಟಕದಲ್ಲಿ ಈಗ ನಡೆಯುತ್ತಿರುವುದು ಇಂತಹ ಅಧಃಪತನ. ಇಲ್ಲಿ ದಾಳಿಗಳು, ವಿದ್ವೇಷಕಾರೀ ಹೇಳಿಕೆಗಳು, ಹಿಂಸೆಗೆ ಪ್ರಚೋದನೆ ನೀಡುವ ಕರೆಗಳು, ಸಾಮಾಜಿಕ ಬಹಿಷ್ಕಾರ ಇತ್ಯಾದಿಗಳೆಲ್ಲವನ್ನು ಒಂದು ವರ್ಗ ಪವಿತ್ರ ಕೆಲಸ ಎನ್ನುವಂತೆ ಮಾಡುತ್ತಿದೆ ಮತ್ತು ಹಾಗೆಯೇ ಜನರನ್ನು ನಂಬಿಸುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ಸರಕಾರ ಕೂಡಾ ಇದನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಮರ್ಥಿಸುತ್ತಿದೆ. ಮುಖ್ಯಮಂತ್ರಿ ಹಿಂಸಾತ್ಮಕ ದಾಳಿಗಳನ್ನು ’ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಅಂತ ಸಮರ್ಥಿಸುತ್ತಾರೆ, ಪ್ರಭಾವಿ ಹಿರಿಯ ಸಚಿವರು ಒಂದು ದಿನ ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಲಿದೆ ಎಂದು ಸಂವಿಧಾನವನ್ನೇ ಅಲ್ಲಗಳೆಯುತ್ತಾರೆ. ಇನ್ನೊಂದೆಡೆ ಪಕ್ಷಾತೀತವಾಗಿ, ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಿರುವ ವಿಧಾನಸಭೆಯ ಸಭಾಪತಿಗಳು ಮಾತೆತ್ತಿದರೆ ’ನಮ್ಮ ಆರ್.ಎಸ್.ಎಸ್’, ’ನಮ್ಮ ಆರ್.ಎಸ್.ಎಸ್’ ಎನ್ನುತ್ತಿದ್ದಾರೆ.

ಒಂದು ರಾಜ್ಯ-ಹಲವು ಜಗತ್ತುಗಳು!

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಹೊರಗಿನಿಂದ ಬಂದ ಅತಿಥಿಗಳನ್ನು ಸ್ವಾಗತಿಸುವಾಗ ರಾಜ್ಯದ ಬಗ್ಗೆ ನೀಡುವ ಒಕ್ಕಣೆ ಇದು. ಈಗ ಹಲವು ಜಗತ್ತುಗಳೆಲ್ಲಾ ನಾಶವಾಗುತ್ತಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಯಶಸ್ವಿಯಾಗಿ ಪ್ರಯೋಗವಾಗಿರುವ ದ್ವೇಷ-ಕೇಂದ್ರಿತ ಚುನಾವಣಾ ರಾಜಕೀಯದ ಮಾದರಿಗೆ ದಕ್ಷಿಣದಲ್ಲೊಂದು ವಸಾಹತು ಎಂಬಂತೆ ಕರ್ನಾಟಕದ ಮಣ್ಣು ಹದಗೊಳ್ಳುತ್ತಿದೆ. ಈ ರಾಜ್ಯದಲ್ಲಿ ಹಿಂದೆಯೂ ಚುನಾವಣೆಗಳು ಆಗಿವೆ, ಹೋಗಿವೆ. ಪಕ್ಷಗಳು, ಗೆದ್ದಿವೆ, ಸೋತಿವೆ. ಆದರೆ ಹಿಂದೆ ಯಾವತ್ತೂ ಸಾಮಾಜಿಕ ಸಾಮರಸ್ಯವನ್ನು ಈ ಪರಿ ಕೆಡಿಸಿ ರಾಜಕೀಯ ಲಾಭದ ಬೀಜ ಬಿತ್ತುವ ಕೆಲಸ ನಡೆದಿರಲಿಲ್ಲ. ನೇರವಾಗಿ ಹೇಳಬೇಕು ಎಂದಾದರೆ ಬಹುಸಂಖ್ಯಾತ ಹಿಂದುಗಳಲ್ಲಿ ಮುಸ್ಲಿಂ ದ್ವೇಷವನ್ನು ಈ ಮಟ್ಟಿಗೆ ಬೆಳೆಸಿ ಚುನಾವಣೆಗೆ ನೆಲ ಹಸನುಗೊಳಿಸುವ ಅಪಾಯಕಾರಿ ತಂತ್ರ ಈ ಪ್ರಮಾಣದಲ್ಲಿ ಬಳಕೆಯಾದದ್ದಿಲ್ಲ. ಈಗ ಇದು ಭಯಾನಕವಾದ ರೀತಿಗಳಲ್ಲಿ ಆಗುತ್ತಿದೆ.

ದ್ವೇಷವನ್ನು ವ್ಯವಸ್ಥಿತವಾಗಿ ಸೃಷ್ಟಿಸಲಾಗುತ್ತಿದೆ. ಹೀಗೆಲ್ಲಾ ಆಗುವುದು ಅನಿವಾರ್ಯ ಎನ್ನುವ ಮತ್ತು ಎಲ್ಲವೂ ’ಪ್ರತಿಕ್ರಿಯೆಯಾಗಿ’ ನಡೆಯುತ್ತಿವೆ ಎನ್ನುವ ಮಿಥ್ಯೆಯನ್ನು ಸೃಷ್ಟಿಸಿ ಜನರನ್ನು ವ್ಯವಸ್ಥಿತವಾಗಿ ನಂಬಿಸುವ ಕೆಲಸ ನಡೆಯುತ್ತಿದೆ. ಈ ಸಂಚುಗಳನ್ನೆಲ್ಲಾ ಯಾವುದೋ ಕಲ್ಪಿತ ಸಮಸ್ಯೆಗೊಂದು ’ಅಂತಿಮ ಪರಿಹಾರ’ ನಿರೂಪಿಸುವ ಸಲುವಾಗಿಯೇ ಮಾಡಲಾಗುತ್ತಿದೆ ಎನ್ನುವ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಅಂದರೆ, ಎಲ್ಲವೂ ಹೀಗೆಯೇ ಮುಂದುವರಿದರೆ ಜನಾಂಗ ಹತ್ಯೆಯಂತಹ ಬಹುದೊಡ್ಡ ದುರಂತವೊಂದು ಘಟಿಸಬಹುದು ಎನ್ನುವ ಆತಂಕ ಅದು. ಇದನ್ನು ಕೇಳಿದ ಯಾರಿಗೇ ಆದರೂ ಆಘಾತ ಆಗಬೇಕು. ಇಲ್ಲ, ಯಾರಿಗೂ ಯಾವುದೂ ಯಾವುದೇ ಆಘಾತವನ್ನು ತರುವಂತೆ ಕಾಣಿಸುತ್ತಿಲ್ಲ. ಒಂದು ಪ್ರಶ್ನೆ ಕಾಡುತ್ತದೆ. ಹಿಂದೆಲ್ಲಾ ಹೀಗೆ ಮನುಷ್ಯರ ತಲೆಕೆಡಿಸಿ ದ್ವೇಷದ ಬೀಜ ಬಿತ್ತಲು ರಾಜಕೀಯ ಪ್ರಯತ್ನಗಳು ನಡೆದ ಸಂದರ್ಭಗಳಲ್ಲಿ ಸಾಮಾನ್ಯ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದ ಒಂದು ಸೂಕ್ಷ್ಮ ವಿವೇಚನೆ ಅದನ್ನು ತಡೆಯುತಿತ್ತು. ಈ ಹೊತ್ತಿಗೆ ಆ ಜಾನಪದೀಯ ಕನ್ನಡ ಪ್ರಜ್ಞೆ ಎಷ್ಟರಮಟ್ಟಿಗೆ ಉಳಿದುಕೊಂಡಿದೆ ಎಂದು ಪರಿಶೀಲಿಸಬೇಕಾದ ಕಾಲ ಬಂದಿದೆ.

ಹೀಗೆಲ್ಲಾ ಆಗುವ ಮುನ್ಸೂಚನೆಗಳು ಎಂದೋ ಸಿಗುತ್ತಿದ್ದವು. ಆದರೂ ಎಲ್ಲರೂ ಅವುಗಳನ್ನು ಕಡೆಗಣಿಸಿದರು. ಯಾವುದೋ ಕೆಲವು ಅಂಚಿನ ಸಂಘಟನೆಗಳು ಇವನ್ನೆಲ್ಲಾ ಮಾಡುತ್ತಿವೆ. ಕರ್ನಾಟಕಕ್ಕೊಂದು ಉದಾತ್ತ ಪರಂಪರೆ ಇದೆ. ಇಲ್ಲಿ ಶರಣ ಚಳವಳಿ ನಡೆದು ಹೋಗಿದೆ. ಇಲ್ಲಿ ಸಾಮಾಜಿಕ ಸಾಮರಸ್ಯದ ಬೇರುಗಳು ಗಟ್ಟಿಯಾಗಿವೆ. ಹೀಗೆ ಏನೇನೋ ಭರವಸೆಗಳನ್ನಿಟ್ಟುಕೊಂಡು ಆ ಎಲ್ಲಾ ಆರಂಭಿಕ ಸೂಚನೆಗಳನ್ನು ಕಡೆಗಣಿಸಿದ ಕಾರಣ ಈ ಹೊತ್ತು ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿದೆ. ಈಗಲೂ ಅಷ್ಟೇ. ಇಷ್ಟೆಲ್ಲಾ ಆದ ನಂತರವೂ ನಾಗರಿಕ ಸಮಾಜದಿಂದ ಎಷ್ಟು ದೊಡ್ಡ ಪ್ರತಿರೋಧ ಬರಬೇಕೋ ಅಷ್ಟು ಪ್ರತಿರೋಧ ಬಂದಂತೆ ಕಾಣಿಸುತ್ತಿಲ್ಲ. ನಿಜ, ಕೆಲವು ಕಡೆ ಮುಸ್ಲಿಮರಿಗೆ ಹೇರಿದ ಆರ್ಥಿಕ ಬಹಿಷ್ಕಾರಕ್ಕೆ ಸ್ಥಳೀಯವಾಗಿ ವಿರೋಧ ಕಂಡುಬಂದಿದೆ. ಇಷ್ಟು ಸಾಲದು. ಈಗ ನಡೆಯುತ್ತಿರುವ ವಿದ್ಯಮಾನಗಳಿಗೆ ಜನ ಬೆಂಬಲ ಇಲ್ಲ ಎನ್ನುವ ಸಂದೇಶ ಸ್ಪಷ್ಟಾಗಿಯೂ ಮತ್ತದು ಅಹಿಂಸಾತ್ಮಕವಾಗಿಯೂ ಎಲ್ಲ ಕಡೆಯೂ ರವಾನೆಯಾಗಬೇಕಿದೆ. ಅದು ಆಗುತ್ತಿಲ್ಲ ಎನ್ನುವುದು ಈಗ ನಡೆಯುತ್ತಿರುವ ಅನಿಷ್ಟ ವಿದ್ಯಮಾನಗಳಿಗಿಂತ ಹೆಚ್ಚು ಅನಾಹುತಕಾರಿ.

ಎ ನಾರಾಯಣ

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

 


ಇದನ್ನೂ ಓದಿ: ಕತ್ತಲೆ ದಾರಿಗೆ ಬೆಳಕು ಹಿಡಿಯುವವರ್‍ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....