Homeಅಂಕಣಗಳುಪಠ್ಯಪುಸ್ತಕವಾಯಿತು, ಈಗ ಶಾಲಾ ಕೊಠಡಿಗಳ ಕೇಸರೀಕರಣ!

ಪಠ್ಯಪುಸ್ತಕವಾಯಿತು, ಈಗ ಶಾಲಾ ಕೊಠಡಿಗಳ ಕೇಸರೀಕರಣ!

- Advertisement -
- Advertisement -

ಕರ್ನಾಟಕದಲ್ಲಿ ಎರಡು ವಿದ್ಯಮಾನಗಳು ನವೆಂಬರ್ 13ರ ಒಂದೇ ದಿನ ನಡೆದವು. ಮೊದಲನೆಯದು, ಕರ್ನಾಟಕದಾದ್ಯಂತ ವಿವೇಕ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸುಮಾರು 7500 ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಘೋಷಿಸಿದ್ದು; ಎರಡನೆಯದು, ಸಂಘ ಪರಿವಾರದ ದ್ವೇಷ ಚಿಂತನೆಗಳನ್ನು ಪ್ರಚಾರ ಮಾಡಲು ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ರಚಿಸಿರುವ ’ಟಿಪ್ಪು ನಿಜ ಕನಸುಗಳು’ ಎಂಬ ನಾಟಕ ಪುಸ್ತಕ ಬಿಡುಗಡೆಯಲ್ಲಿ, ಮೈಸೂರು ಸಂಸದ ಪ್ರತಾಪ್ ಸಿಂಹ ಮಾತನಾಡುತ್ತಾ ’ಮೈಸೂರಿನ ಜೆಎಸ್‌ಎಸ್ ಕಾಲೇಜು ಬಳಿ ನಿರ್ಮಿಸಿರುವ ಬಸ್ ನಿಲ್ದಾಣದ ಮೇಲಿನ ಗುಮ್ಮಟ(ಗುಂಬಜ್)ದ ಮಾದರಿಯ ವಿನ್ಯಾಸವನ್ನು ಬದಲಿಸದಿದ್ದರೆ ಜೆಸಿಬಿ ತರಿಸಿ ಕೆಡವುತ್ತೇನೆ’ ಎಂಬ ಬೆದರಿಕೆ ಹಾಕಿದ್ದು! ಚುನಾವಣೆ ಸನ್ನಿಹಿತವಾಗುತ್ತಿರುವ ಸಮಯದಲ್ಲಿ ಎಲ್ಲ ಸಂಗತಿಗಳನ್ನು ಮತ್ತು ಸಂಕೇತಗಳನ್ನು ಕೇಸರೀಕರಣಗೊಳಿಸಲು ಸಂಘ ಪರಿವಾರ ತುದಿಗಾಲಲ್ಲಿ ನಿಂತಿರುವುದು ಬಿಜೆಪಿಯ ಹತಾಶೆಯಂತೆ ಕಂಡರೂ, ಒಡಕಿನ ರಾಜಕಾರಣ ತೀವ್ರವಾಗುತ್ತಿರುವ ದುರಂತಕ್ಕೆ ಸಾಕ್ಷಿಯಾಗಿದೆ.

ಇದು ಕೊಠಡಿಯ ವಿನ್ಯಾಸಕಾರರ ಸಲಹೆಯಂತೆ ಮಾಡಲಾಗುತ್ತಿದೆ ಎಂದಿದ್ದಾರೆ ಶಿಕ್ಷಣ ಸಚಿವರು. ’ಶಾಲೆಗಳಲ್ಲಿನ ಹಲವು ಮೂಲಸೌಕರ್ಯಗಳ ಕೊರತೆಗಳೂ ಸೇರಿದಂತೆ ನೂರಾರು ಸಮಸ್ಯೆಗಳಿರುವಾಗ ಕೇಸರಿ ಬಣ್ಣದ ಹಿಂದೆ ಸರ್ಕಾರ ಬಿದ್ದಿರುವುದೇಕೆ’ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಖರ್ಗೆ, ’ಬಿಜೆಪಿ ಸರ್ಕಾರದ ಕಾಳಜಿ ನಿಜವಾಗಿದ್ದರೆ ರಾಷ್ಟ್ರಧ್ವಜದ ಬಣ್ಣಗಳನ್ನು ಶಾಲಾ ಕೊಠಡಿಗಳಿಗೆ ಹೊಡೆಸಬಾರದೇಕೆ’ ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ’ಕೇಸರಿ ರಾಷ್ಟ್ರಧ್ವಜದ ಬಣ್ಣಗಳಲ್ಲಿ ಒಂದು ಹಾಗೂ ಸ್ವಾಮಿ ವಿವೇಕಾದಂದರು ಕೇಸರಿ ಧಿರಿಸನ್ನು ಧರಿಸುತ್ತಿದ್ದರು. ಕಾಂಗ್ರೆಸ್‌ಗೆ ಕೇಸರಿ ಬಣ್ಣದ ಬಗ್ಗೆ ಅಲರ್ಜಿ ಇದೆ ಮತ್ತು ಅವರು ಪ್ರಗತಿಯ ವಿರೋಧಿಗಳು’ ಎಂದು ದೂಷಿಸಿದ್ದಾರೆ. ಸಂಘ ಪರಿವಾರದ ಲಾಂಛನ ’ಭಗವಾಧ್ವಜ’ದ ಬಣ್ಣವನ್ನು ಶಾಲಾ ಕೊಠಡಿಗಳಿಗೆ ಹೊಡೆಸುತ್ತೇವೆ ಎಂದು ನೇರವಾಗಿ ಹೇಳಿಕೊಳ್ಳಲಾಗದೆ, ಈಗ ಅಡ್ಡದಾರಿಯಲ್ಲಿ ಸರ್ಕಾರ ಹೆಜ್ಜೆಯಿಟ್ಟಿದೆ. ಥೇಟ್ ಪಠ್ಯಪುಸ್ತಕದ ಪರಿಷ್ಕರಣೆಯಲ್ಲಿ ಮಾಡಿದಂತೆಯೇ! 2022-23ನೇ ಸಾಲಿನ ಹತ್ತನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ಆರ್‌ಎಸ್‌ಎಸ್‌ನ ಮುಂದಾಳು ಹೆಡಗೇವಾರ್‌ರ ಪಾಠವೊಂದನ್ನು ಪರಿಚಯಿಸಿ, ಅದರಲ್ಲಿ ಭಗವಾಧ್ವಜವನ್ನು, ಧ್ವಜವೆಂದು ತಿರುಚಿ ಸುಳ್ಳು ಹೇಳಿದ್ದು ಇನ್ನೂ ಹಸಿಯಾಗಿರುವಾಗಲೇ!

ಪ್ರತಾಪ್ ಸಿಂಹ

ಸಂವಿಧಾನ ನಡಾವಳಿ ಸಭೆಯಲ್ಲಿ ನಮ್ಮ ರಾಷ್ಟ್ರಧ್ವಜದ ಬಗ್ಗೆ ಚರ್ಚೆಯಾದಾಗ, ಸಭೆಯ ಸದಸ್ಯರಾಗಿದ್ದ ಮುಸ್ಲಿಂ ಲೀಗ್‌ನ ಸಯ್ಯದ್ ಮುಹಮದ್ ಸಾದುಲ್ಲಾ ಹೀಗೆ ಹೇಳಿದ್ದರು: “ಭಾರತ ತನ್ನ ಆಧ್ಯಾತ್ಮಿಕ ಉನ್ನತಿಗೆ ಚಿರಪರಿಚಿತವೇ. ಜಗತ್ತಿನ ವಿವಿಧ ದೇಶಗಳಿಗೆ ಅತ್ಯುನ್ನತ ಆಧ್ಯಾತ್ಮಿಕ ಸಂದೇಶವನ್ನು ಕಳುಹಿಸುವ ಛಾತಿಯನ್ನು ಭಾರತ ಹೊಂದಿದೆ ಎಂದು ಎಲ್ಲೆಲ್ಲೂ ನಂಬಲಾಗಿದೆ. ಎಲ್ಲರಿಗೂ ತಿಳಿದಿರುವಂತೆಯೇ, ಕೇಸರಿ ಅಂತಹ ಆಧ್ಯಾತ್ಮಿಕ ಜೀವನವನ್ನು ಬದುಕಿದವರ ಸಂಕೇತ; ಅದು ಹಿಂದೂಗಳಿಗೆ ಮಾತ್ರವಲ್ಲದೆ ಮುಸಲ್ಮಾನರಿಗೂ. ಆದುದರಿಂದ ನಮ್ಮ ಸಾಧುಸಂತರು, ಪೀರ್‌ಗಳ ಮತ್ತು ಪಂಡಿತರ ಕಾರ್ಯಕ್ಷೇತ್ರವಾದ ಆತ್ಮಸಮರ್ಪಣೆಯ ತ್ಯಾಗದ ಅತ್ಯುನ್ನತ ತಳಹದಿಯನ್ನು ಕೇಸರಿ ನಮಗೆ ಸದಾ ನೆನಪಿಸಬೇಕು. ಆದುದರಿಂದ ಧ್ವಜದಲ್ಲಿ ಈ ಬಣ್ಣದ ಸೇರ್ಪಡೆಯನ್ನು ನಾನು ಸ್ವಾಗತಿಸುತ್ತೇನೆ”. ಇಲ್ಲಿ ವಿಪರ್ಯಾಸ ನೋಡಿ, ಇದೇ ಮಹಮದ್ ಸಾದುಲ್ಲಾ ಅವರ ಬಗ್ಗೆ ಇದ್ದ ಉಲ್ಲೇಖವನ್ನು ಪಠ್ಯ ಪರಿಷ್ಕರಣೆಯ ಸಂದರ್ಭದಲ್ಲಿ ತೆಗೆದುಹಾಕಲಾಗಿತ್ತು! ಹಲವು ಪ್ರತಿಭಟನೆಗಳ ನಂತರವೂ ಆ ಉಲ್ಲೇಖವನ್ನು ಮತ್ತೆ ಸೇರ್ಪಡಿಸುವ ಗೋಜಿಗೆ ಸರ್ಕಾರ ಹೋಗಲಿಲ್ಲ! ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರದ ಸಚಿವರು ಸಾದುಲ್ಲ ಅವರು ಹೇಳಿದಂತೆ ಕೇಸರಿ ಹಿಂದೂಗಳಿಗೆ ಹೇಗೋ ಹಾಗೆಯೇ ಮುಸಲ್ಮಾನರಿಗೂ ಆಧ್ಯಾತ್ಮಿಕ ಸಂಕೇತ; ಕೇಸರಿ ಸಾಧುಸಂತರಂತೆ ಪೀರ್‌ಗಳಿಗೂ ಆತ್ಮಸಮರ್ಪಣೆಯ ಸಂಕೇತವಾಗಿತ್ತು ಎಂಬುದನ್ನು ಎದೆಮುಟ್ಟಿ ಹೇಳಬಲ್ಲರಾ? ಹಾಗಿದ್ದರೆ ಅವರ ಸಂಸದ ಬಸ್ ಶೆಲ್ಟರ್ ಒಂದಕ್ಕೆ ಗುಮ್ಮಟ ವಿನ್ಯಾಸವಿದೆ ಎಂಬ ಕಾರಣಕ್ಕೆ ಜೆಸಿಬಿ ಕರೆಸಿ ಪುಡಿಗುಟ್ಟುತ್ತೇನೆ ಎಂಬುದನ್ನು ಇವರು ಒಪ್ಪಿಕೊಳ್ಳದೇ ಇರುತ್ತಾರೆಯೇ?

ಇದನ್ನೂ ಓದಿ: ಶಾಲೆಗಳಿಗೆ ಕೇಸರಿ ಬಣ್ಣ ಆತುರದ ನಿರ್ಧಾರ: ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್

ಮುಸ್ಲಿಮರಿಂದ ಬರಲಾಯಿತು ಎನ್ನಲಾದ ಗುಮ್ಮಟ ವಿನ್ಯಾಸ ಈಗ ಹಲವು ಕೂಡುಸಂಸ್ಕೃತಿಯ ಭಾಗವಾಗಿ ಬೆಳೆದುಹೋಗಿದೆ. ಎಷ್ಟೋ ದೇವಾಲಯಗಳು, ಅರಮನೆಗಳು ಮತ್ತು ಇತರ ಸಾಮಾನ್ಯ ಕಟ್ಟಡಗಳು ಗುಂಬಜ್ ವಿನ್ಯಾಸವನ್ನು ತಮ್ಮದಾಗಿಸಿಕೊಂಡಿವೆ. ಯಾವ ಯಾವುದನ್ನೆಲ್ಲಾ ಜೆಸಿಬಿ ತರಿಸಿ ಪುಡಿಗುಟ್ಟುತ್ತೀರಿ ಎಂದು ಸಾಮಾನ್ಯ ಜನರೇ ಕೇಳುತ್ತಿದ್ದಾರೆ. ಮೈಸೂರು ಅರಮನೆ, ಕಾರಂಜಿ ಮಹಲ್, ಜಗನ್ಮೋಹನ ಪ್ಯಾಲೇಸ್, ಲಲಿತ ಮಹಲ್, ಮೈಸೂರು ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಕಚೇರಿ ಹೀಗೆ ಮೈಸೂರಿನಲ್ಲಿಯೇ ಹಲವು ಕಟ್ಟಡಗಳಲ್ಲಿ ಗುಂಬಜ್‌ಗಳಿವೆ. ಇವೆಲ್ಲವನ್ನೂ ಒಡೆಯಲು ಸಂಸದ ಪ್ರತಾಪ್ ಸಿಂಹ ಮುಂದಾಗುವರೇ? ಅಥವಾ ’ಕೇಸರಿಯ ಮೇಲೆಯೇ ರಾಜಕಾರಣ ಮಾಡುತ್ತೇವೆ; ತಡೆಯುವುದಾದರೆ ತಡೆಯಿರಿ’ ಎಂದು ಸದಾ ಫ್ಯೂಡಲ್ ಮಾತುಗಳನ್ನಾಡುತ್ತಲೇ ಬದುಕುವ ಸಿ.ಟಿ ರವಿ ಇದಕ್ಕೂ ಯೆಸ್ ಅಂದಾರೆಯೇ? ಮಸೀದಿಗಳಲ್ಲಿ ಸನಾತನ ಧರ್ಮದ ಕುರುಹುಗಳನ್ನು ಹುಡುಕುತ್ತಿದ್ದವರು ಇನ್ನು ಮುಂದೆ ಇತರ ಕಟ್ಟಡಗಳಲ್ಲಿ ಮುಸ್ಲಿಂ ವಿನ್ಯಾಸಗಳನ್ನು ಹುಡುಕಲು ಪ್ರಾರಂಭಿಸುವರೇ? ಒಟ್ಟಿನಲ್ಲಿ ಕೇಡುಗಾಲಕ್ಕೆ ಕುದುರೆ ಮೊಟ್ಟೆ ಇಟ್ಟಂತೆ ಕರ್ನಾಟಕದಲ್ಲಿ ಸಂಘ ಪರಿವಾರಿಗಳ ಆಟಾಟೋಪ ಮಿತಿಮೀರುತ್ತಿದೆ.

ಕಾಂಗ್ರೆಸ್‌ನ ನಿಧಾನಗತಿಯ ಮತ್ತು ನಿರ್ಲಕ್ಷೆಯ ಪ್ರತಿಕ್ರಿಯೆಗಳು

ಇಷ್ಟೆಲ್ಲಾ ಅದ್ವಾನಗಳು ಘಟಿಸುತ್ತಿದ್ದರೂ ಕೋಮು ರಾಜಕೀಯವನ್ನು ವಿರೋಧಿಸುತ್ತೇವೆ ಎಂದು ಹೇಳಿಕೊಳ್ಳುವ ವಿರೋಧ ಪಕ್ಷವಾದ ಕಾಂಗ್ರೆಸ್ ಯಾವ ಫೋರ್ಸ್‌ನಲ್ಲಿ ಪ್ರತಿಕ್ರಿಯೆ ನೀಡಬೇಕಿತ್ತೋ ಅದು ಕಾಣದಾಗಿದೆ. ಕೋಮು ರಾಜಕೀಯದಲ್ಲಿ ತನ್ನ ಪೊಸಿಷನ್‌ಅನ್ನು ಸ್ಪಷ್ಟಪಡಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಹೆಣಗುತ್ತಿರುವುದು ನಿರ್ವಿವಾದ. ಇತ್ತೀಚಿಗೆ ಸತೀಶ್ ಜಾರಕಿಹೊಳಿ ಅವರು ’ಹಿಂದೂ’ ಪದದ ಬಗೆಗಿರುವ ಹಲವು ವ್ಯಾಖ್ಯಾನಗಳಲ್ಲಿ ಒಂದನ್ನು ಸಭೆಯೊಂದರಲ್ಲಿ ನಿರ್ವಚಿಸಿದಾಗ ಸಂಘ ಪರಿವಾರ ಸಲ್ಲದ ಕಾರಣಕ್ಕೆ ಸತೀಶ್ ಅವರನ್ನು ಹಳಿದು ವಿರೋಧಿಸಿ ಪ್ರತಿಕ್ರಿಯೆ ತೋರಿತ್ತು. ಆದರೆ ಸತೀಶ್ ಜಾರಕಿಹೊಳಿಯವರ ಜೊತೆಗೆ ಕಾಂಗ್ರೆಸ್‌ನ ಪ್ರಮುಖ ಮುಖಂಡರು ನಿಲ್ಲದ ಕಾರಣ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದುಕೊಳ್ಳಬೇಕಾಯಿತು. ಇನ್ನು ಇಡಬ್ಲ್ಯುಎಸ್ ಮೀಸಲಾತಿಯ ಪ್ರಕರಣದ ವಿಷಯದಲ್ಲಿಯೂ, ಹಿಂದುಳಿದ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಮರೆತು ಇಡಬ್ಲ್ಯುಎಸ್‌ಅನ್ನು ಸ್ವಾಗತಿಸುವುದಾಗಿ ಕಾಂಗ್ರೆಸ್ ಪಕ್ಷ ಹೇಳಿತ್ತು. ಈಗ ಒತ್ತಡ ಬಂದನಂತರ ತನ್ನ ನಿಲುವನ್ನು ವಿಮರ್ಶಿಸಿಕೊಳ್ಳುವ ಮಾತನ್ನಾಡಿದೆ. ಪಠ್ಯ ಮತ್ತು ಶಾಲಾ ಕೊಠಡಿಗಳ ಕೇಸರೀಕರಣದ ವಿಷಯವಾಗಲೀ, ಪ್ರತಾಪ್ ಸಿಂಹ, ಸಿ.ಟಿ ರವಿ ಮುಂತಾದ ಬಿಜೆಪಿ ಮುಖಂಡರ ದ್ವೇಷ ಭಾಷಣಗಳ ಅಥವಾ ಟಿಪ್ಪು ಸುಲ್ತಾನನ ಬಗ್ಗೆ ಹಬ್ಬಿಸುತ್ತಿರುವ ಸುಳ್ಳುಗಳ ವಿಚಾರದಲ್ಲಾಗಲೀ ಇಡೀ ಕಾಂಗ್ರೆಸ್ ಪಕ್ಷ ಒಗ್ಗಟ್ಟು ಮತ್ತು ಒಮ್ಮತದಿಂದ ಅವುಗಳನ್ನು ಹತ್ತಿಕ್ಕುವ ದೃಢ ನಿಲುವನ್ನು ತಳೆಯದೆ ಹೋಗುತ್ತಿರುವುದು ಬಹುಶಃ ಪಕ್ಷಕ್ಕೆ ದೀರ್ಘಕಾಲೀನವಾಗಿ ಸಹಾಯ ಮಾಡಲಾರದು. ಅಲ್ಲೋ ಇಲ್ಲೋ ಚದುರಿದಂತೆ ಕಾಣುವ ಪ್ರಿಯಾಂಕಾ ಖರ್ಗೆಯಂತಹವರ ವಿರೋಧಗಳು ಸಾಮಾನ್ಯ ಜನರಲ್ಲಿ ಅಭಿಪ್ರಾಯ ರೂಪಿಸುವುದಕ್ಕೆ ಸೋಲುತ್ತಿವೆ. ಕನ್ವಿಕ್ಷನ್ ಇಲ್ಲದ ಕಾಂಗ್ರೆಸ್ ಮುಖಂಡರ ಪ್ರಹಸನಗಳು ಸಪ್ಪೆಯಾಗಿ ಕಾಣುತ್ತಿವೆ.

ಸತೀಶ್ ಜಾರಕಿಹೊಳಿ

ಹಿಂದುತ್ವ ಬೇರೇ ಹಿಂದೂಯಿಸಂ ಬೇರೆ ಎಂಬಂತಹ ನಿಲುವನ್ನು ನಿರ್ವಹಿಸುವುದರಲ್ಲಿಯೇ ಕಾಲ ಕಳೆದರೆ ಸಾಲದು ಎಂಬುದನ್ನು ಕಾಂಗ್ರೆಸ್ ಪಕ್ಷ ಅರ್ಥಮಾಡಿಕೊಳ್ಳಬೇಕಿದೆ. ಕೆಲವು ಕಡೆ ಮೃದು ಹಿಂದುತ್ವ ಧೋರಣೆ, ಇನ್ನೂ ಹಲವೆಡೆ ಹಿಂದುತ್ವದ ಬದಲಿಗೆ ’ನಿಜ’ ಹಿಂದೂ ಧರ್ಮದ ಪರಿಪಾಲನೆ ಎಂಬಂತೆ ನಡೆದುಕೊಂಡು, ಬಿಜೆಪಿಯ ವಿಭಜಕ ನೀತಿಗಳನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ಹೆಣಗಾಡುತ್ತಿದೆ. ’ನೋಟುಗಳ ಮೇಲೆ ಲಕ್ಷ್ಮಿ, ಸರಸ್ವತಿಯ ಚಿತ್ರಗಳನ್ನು ಹಾಕಿ’ ಎಂದ ಎಎಪಿ ಪಕ್ಷದ ಮೃದು ಹಿಂದುತ್ವ ಧೋರಣೆಯೂ ಕಾಂಗ್ರೆಸ್‌ಅನ್ನು ಕಂಗೆಡಿಸಿದಂತಿದೆ. ಸುಳ್ಳನ್ನು ಪೂರ್ಣ ವಿರೋಧಿಸಲಾಗದೆ, ಸತ್ಯವನ್ನು ಪೂರ್ತಿ ಅಪ್ಪಿಕೊಳ್ಳಲಾಗದೆ, ತಮ್ಮ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಲಾಗದೆ ತಾಕಲಾಟದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಮುಖಂಡ ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆ ಅಷ್ಟೇನೂ ಸ್ಪಷ್ಟತೆಯನ್ನು ತಂದುಕೊಟ್ಟಂತೆ ಕಾಣುತ್ತಿಲ್ಲ. ಆರ್‌ಎಸ್‌ಎಸ್ ನೀತಿಯನ್ನು ಪೂರ್ಣ ಮಟ್ಟದಲ್ಲಿ ಹಿಮ್ಮೆಟ್ಟಿಸುವ ಯೋಜನೆಯೂ ಅದರ ಬಳಿ ಇದ್ದಂತಿಲ್ಲ. ಆದರೆ ಕಾಂಗ್ರೆಸ್ ಸದ್ಯದ ರಾಜಕೀಯದಲ್ಲಿ ಒಮ್ಮೆ ಗೆದ್ದುಬಿಡುವ ಒಂದೇ ಗುರಿಯನ್ನು ಹಾಕಿಕೊಳ್ಳದೆ, ಹಿಂದುತ್ವಕ್ಕೆ ಎದುರಾಗಿ ಜಾತ್ಯತೀತ ಪರಂಪರೆಯನ್ನು ಗಟ್ಟಿಯಾಗಿ ಅನುಸರಿಸಿ ಪ್ರತಿಪಾದಿಸುವ, ಹಿಂದೂಯಿಸಂನಲ್ಲಿರುವ ಬ್ರಾಹ್ಮಣ್ಯವನ್ನು ತೊಲಗಿಸಿ, ಶೋಷಿತರ ಮತ್ತು ಹಿಂದುಳಿದವರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುವ ರಾಜಕೀಯವನ್ನು ಮೈಗೂಡಿಸಿಕೊಳ್ಳಬೇಕಿದೆ. ಆ ಮೂಲಕ ಕಾರ್ಯಕರ್ತರನ್ನು ಸಂಘಟಿಸುವ, ರಾಜಕೀಯ ಆಂದೋಲನಗಳನ್ನು ರೂಪಿಸಿ ಜನರ ಬೆಂಬಲವನ್ನು ಗಳಿಸಿಕೊಳ್ಳುವತ್ತ ಮುನ್ನಡೆಯಬೇಕಿದೆ. ನಿಜ ಜಾತ್ಯತೀತ ಭಾರತದ ಕನಸಿಗೆ ಪಣ ತೊಡಬೇಕಿದೆ. ಅದಷ್ಟೇ ದೇಶವನ್ನು ಉಳಿಸುವ ದಾರಿಯಾದೀತು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...