Homeಅಂಕಣಗಳುಬಾಬಾಸಾಹೇಬರ ಚಿಂತನೆಗಳ ತಳಹದಿಯಲ್ಲಿ ರಾಷ್ಟ್ರವನ್ನು ಕಟ್ಟಿಕೊಳ್ಳದಿದ್ದರ ಪರಿಣಾಮ..

ಬಾಬಾಸಾಹೇಬರ ಚಿಂತನೆಗಳ ತಳಹದಿಯಲ್ಲಿ ರಾಷ್ಟ್ರವನ್ನು ಕಟ್ಟಿಕೊಳ್ಳದಿದ್ದರ ಪರಿಣಾಮ..

- Advertisement -
- Advertisement -

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ರಾಮನವಮಿ ದಿವಸ ಮಾಂಸಾಹಾರವನ್ನು ವಿರೋಧಿಸಿ ಸಂಘ ಪರಿವಾರ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಹಿಂಸಾಚಾರಕ್ಕೆ ಇಳಿದ ಘಟನೆ ವರದಿಯಾಗಿದೆ. ಜೆಎನ್‌ಯು ಪ್ರತಿನಿಧಿಸುತ್ತಿದ್ದ ಚಿಂತನೆಗಳನ್ನು ಹೇಗಾದರೂ ಮಾಡಿ ಮುಗಿಸುವ ಸಲುವಾಗಿ ಪ್ರಭುತ್ವ ಒಂದಲ್ಲಾ ಒಂದು ರೀತಿ ಅಲ್ಲಿ ಅಶಾಂತಿ ನೆಲೆಸುವಂತೆ ನೋಡಿಕೊಳ್ಳಲು ಕಳೆದ ಏಳೆಂಟು ವರ್ಷಗಳಿಂದ ನಿರಂತರವಾಗಿ ಹವಣಿಸುತ್ತಿದೆ. ಇತ್ತೀಚಿನ ಹಿಂಸಾಚಾರ 2016ರಲ್ಲಿ ಅಲ್ಲಿ ನಡೆದ ಘಟನೆಗಳನ್ನು ನೆನಪಿಗೆ ತಂದವು. ಆನಂತರದ ದಿನಗಳಲ್ಲಿ ಬಲಪಂಥೀಯ ಕೋಮುವಾದ ಯಾವುದನ್ನು ತನ್ನ ಗುರಾಣಿಯಾಗಿ ಬಳಸುತ್ತಿತ್ತೋ, ಆ ನ್ಯಾಶನಲಿಸಂ ಕುರಿತ ಹಲವು ಸಾರ್ವಜನಿಕ ಉಪನ್ಯಾಸಗಳನ್ನು ಅಲ್ಲಿ ಹಮ್ಮಿಕೊಳ್ಳಲಾಯಿತು. ಆಗ ಒಂದಷ್ಟು ಮಾಧ್ಯಮಗಳು ನ್ಯಾಶನಲಿಸಂ ಕುರಿತ ಚಿಂತನೆಗಳನ್ನು ಜನಸಾಮಾನ್ಯರಿಗೂ ಮುಟ್ಟಿಸಲು ಪ್ರಯತ್ನಿಸಿದವು. ಈ ಚರ್ಚೆಗಳು ಸಾಮಾನ್ಯ ಜನರನ್ನು ಎಷ್ಟು ತಲುಪಿದವೋ ಇಲ್ಲವೋ ಆದರೆ ಶ್ರೀರಾಮನ ಹೆಸರಿನಲ್ಲಿ, ಹಿಂದೂ ಧಾರ್ಮಿಕತೆಯ ಹೆಸರಿನಲ್ಲಿ, ಶತ್ರುಗಳನ್ನು ಸೃಷ್ಟಿಸಿ ಅಭದ್ರತೆಯನ್ನು ಹುಟ್ಟುಹಾಕುವ ಮಾರ್ಗದಲ್ಲಿ ಮುನ್ನುಗ್ಗುತ್ತಿರುವ ನ್ಯಾಶನಲಿಸಂ ಸವಾರಿ ಕಿಂಚಿತ್ತೂ ಕನಲಲ್ಲಿ. ಇದಕ್ಕೆ ಮುಖ್ಯ ಕಾರಣ ಸ್ವಾತಂತ್ರ್ಯ ಚಳವಳಿಯ ಕಾಲದಿಂದಲೂ ಜನಪ್ರಿಯಗೊಳಿಸಿದ ಮತ್ತು ಅದನ್ನು ನಂತರದ ದಿನಗಳಲ್ಲಿ ಶಿಕ್ಷಣ, ಸಾಹಿತ್ಯ, ಸಿನಿಮಾ ಮತ್ತಿತರ ಕಲೆಯ ಮಾಧ್ಯಮಗಳ ಮೂಲಕ ರಿಇನ್ಫೋರ್ಸ್ ಮಾಡಿ ಜನರಿಗೆ ಸುಪ್ತವಾಗಿ ಆದರೆ ಆಳವಾಗಿ ತುಂಬಲಾಗಿರುವ ತಪ್ಪು ಪರಿಕಲ್ಪನೆಯ ನ್ಯಾಶನಲಿಸಂ. ಇದಕ್ಕೆ ಬದಲಿಯಾಗಬಹುದಿದ್ದ ಬಾಬಾಸಾಹೇಬರ ಚಿಂತನೆಗಳುಳ್ಳ ರಾಷ್ಟ್ರ ಭ್ರಾತೃತ್ವದ ಪರಿಕಲ್ಪನೆಯನ್ನು ಜನಸಮಾನ್ಯರಿಗೆ ತಿಳಿಸಿ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಕೆಲಸಗಳು ಜರುಗಿದ್ದರೆ ಇವತ್ತಿನ ಎಷ್ಟೋ ಮತೀಯ ಮತ್ತು ಕೋಮುವಾದಿ ಘಟನೆಗಳನ್ನು ತಡೆಯಬಹುದಾಗಿದ್ದ ರೀತಿಯಲ್ಲಿ ಆರೋಗ್ಯಕರ ದೇಶವನ್ನು ಕಟ್ಟಿಕೊಳ್ಳಲು ಸಾಧ್ಯವಿತ್ತು. ಆ ನಿಟ್ಟಿನಲ್ಲಿ ಇಂದು ನಾವು ಬಾಬಾಸಾಹೇಬರ ಪರಿಕಲ್ಪನೆಯ ’ನೇಶನ್’ಅನ್ನು ಕಟ್ಟಿಕೊಳ್ಳುವಲ್ಲಿ ದಯನೀಯವಾಗಿ ಸೋತಿದ್ದೇವೆ.

ನೇಶನ್‌ಗೆ ಸಂವಾದಿಯಾಗಿ ಕನ್ನಡದಲ್ಲಿ ರಾಷ್ಟ್ರ ಮತ್ತು ದೇಶ ಎರಡನ್ನು ಬಳಸುವ ಪರಿಪಾಠವಿದೆ. ನ್ಯಾಶನಲಿಸಂಗೆ ರಾಷ್ಟ್ರವಾದ, ರಾಷ್ಟ್ರೀಯತೆ ಹೀಗೆ ಹಲವು ಬಳಕೆಗಳಿವೆ. ಕೆಲವೊಮ್ಮೆ ರಾಷ್ಟ್ರಭಕ್ತಿಯನ್ನೂ ಅದೇ ಅರ್ಥದಲ್ಲಿ ಬಳಸುವುದುಂಟು. ಆದರೆ ರಾಷ್ಟ್ರಪ್ರೇಮ ಅಥವಾ ದೇಶಪ್ರೇಮ ಪೇಟ್ರಿಯಾಟಿಸಂ ಪರಿಭಾಷೆಗೆ ಸರಿ ಹೊಂದುತ್ತದೆ ಎಂದು ವಾದಿಸಿದವರು ಇದ್ದಾರೆ. ಪೇಟ್ರಿಯಾಟಿಸಂ ಮತ್ತು ನ್ಯಾಶನಲಿಸಂ ನಡುವೆ ಅಜಗಜಾಂತರ ವ್ಯತ್ಯಾಸಗಳನ್ನೂ ಹಲವು ಅಧ್ಯಯನಕಾರರು ಗುರುತಿಸಿ ನಿರ್ದೇಶಿಸಲು ಪ್ರಯತ್ನಿಸಿದ್ದಾರೆ. ಆದರೆ ’ಜಾತಿ ಮತಗಳ ಚಹರೆಯನ್ನು ತೊರೆದ ಭಾರತೀಯರು’ ನಾವು, ವಿವಿಧತೆಯಲ್ಲಿ ಏಕತೆ- ಆ ಏಕತೆಯೇ ಭಾರತೀಯತೆ ಎಂಬಂತಹ ಪಾಠಗಳನ್ನು ಪದೇಪದೇ ಓದಿಸಿ, ಸಿನಿಮಾ ಸಾಹಿತ್ಯಗಳ ಮೂಲಕ ಜನರ ಮನಸ್ಸಿನಲ್ಲಿ ಅದನ್ನು ನೆಲೆಯೂರಿಸುವ ಪ್ರಕ್ರಿಯೆಯಲ್ಲಿ ನಾಜೂಕಾಗಿ ಮೇಲುಗೈ ಪಡೆದ ಬ್ರಾಹ್ಮಿನಿಕಲ್-ಹಿಂದೂಯಿಸಂ-ಹಿಂದುತ್ವದ ಪರಿಕಲ್ಪನೆಯ ರಾಷ್ಟ್ರೀಯತೆ-ಭಾರತೀಯತೆ ಇನ್ನೂ ವಿನಾಶಕಾರಿ ಹಾದಿ ಹಿಡಿದಿದೆ. ಇವೆಲ್ಲವೂ ರಾಷ್ಟ್ರೀಯತೆಯ ಪರಿಕಲ್ಪನೆಗಳನ್ನು ಕಲಸೋಗರ ಮಾಡಿ, ಯಾವುದನ್ನೂ ವಿಶಾಲ ದೃಷ್ಟಿಕೋನದಲ್ಲಿ ಯೋಚಿಸಲು ಅನುವಾಗದಂತೆ ಕಣ್ಣಿನ ಪೊರೆ ಮೂಡಿಸಿ, ದೇಶ-ಪ್ರಭುತ್ವವೊಂದನ್ನು ಕಟ್ಟಿಕೊಳ್ಳಬೇಕಾದ ಪ್ರಕ್ರಿಯೆಯಲ್ಲಿ ಎಲ್ಲ ಜನರಿಗೂ ಅನ್ವಯವಾಗುವ ಸಮಾನತೆಯನ್ನು ತರುವ ಕರ್ತವ್ಯಕ್ಕೆ ಬೆನ್ನುತಿರುಗಿಸುವಂತೆ ಮಾಡಿರುವುದಲ್ಲದೆ, ಸಮಾಜದ ಒಂದು ವರ್ಗವನ್ನು ಅನ್ಯಗೊಳಿಸುವುದರಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದೆ. ಭಾರತದಲ್ಲಿ ದೇಶವನ್ನು ಕಟ್ಟಿಕೊಳ್ಳುವಾಗ ಪ್ರಚುರಪಡಿಸಿದ ಸಾಂಸ್ಕೃತಿಕ ನ್ಯಾಶನಲಿಸಂ ಆಗಲೀ ಅಥವಾ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಚಾಲ್ತಿಯಲ್ಲಿದ್ದ ರಾಜಕೀಯ ನ್ಯಾಶನಲಿಸಂ ಆಗಲೀ ಅಂಬೇಡ್ಕರ ತತ್ವಗಳನ್ನು, ಅವರ ಚಿಂತನೆಯ ತಳಹದಿಗಳನ್ನು ಅಳವಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡದೆ ಇದ್ದದ್ದರಿಂದ ಬಿದ್ದ ಹೊಡೆತ ಇದು.

ದೇಶವೊಂದರಲ್ಲಿ ಸಾಂಸ್ಕೃತಿಕ ರಾಷ್ಟ್ರವಾದವನ್ನು ಜನಸಾಮಾನ್ಯರಲ್ಲಿ ಬಿತ್ತಬೇಕಾದರೆ, ಆ ರಾಷ್ಟ್ರದ ಜನಸಾಮಾನ್ಯರೆಲ್ಲಾ ಹಂಚಿಕೊಂಡಿದ್ದಿರಬಹುದಾದ ಸಾಂಸ್ಕೃತಿಕ ಸಂಗತಿಗಳನ್ನು ಉತ್ಪಾದಿಸಿ ಅಥವಾ
ಆರೋಪಿಸಿ ನಂಬಿಸಬೇಕಾಗಿರುವ ಅಗತ್ಯವಿದೆ. ಇಂತಹದ್ದೊಂದು ಸುದೀರ್ಘ ವಿದ್ಯಮಾನ ಸ್ವತಂತ್ರ ಭಾರತದಲ್ಲಿ ನಡೆಯಿತು. ವೇದಗಳು ಮತ್ತು ಅವುಗಳ ಹುಸಿ ಶ್ರೇಷ್ಠತೆಯನ್ನು ಜನಸಾಮಾನ್ಯರೆಲ್ಲರ ಸಮಾನ ಸಂಸ್ಕೃತಿ ಎಂಬಂತೆ ಬಿತ್ತಲಾಯಿತು. ನೆಹರೂ ಅಂತಹವರೂ ಕೂಡ ವೇದಗಳನ್ನು ಉದಾಹರಿಸಿ ಬರೆದ ಹಲವು ಬರೆಹಗಳಿವೆ. ಇದು ಮುಂದುವರಿದು, ರಾಮಾಯಣವನ್ನು ಹಲವು ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ, ಅದನ್ನು ಇತಿಹಾಸ ಎಂಬಂತೆ ಬಿಂಬಿಸಿ, ಅದು ಭಾರತದ ನಾಗರಿಕರೆಲ್ಲರೂ ಹಂಚಿಕೊಂಡಿರುವ ಪರಂಪರೆ ಎಂದು ಬಿಂಬಿಸುವ ಪ್ರಯತ್ನವಾಯಿತು. ಹಿಂದುತ್ವದ ಪ್ರಯೋಗಗಳಲ್ಲಂತು ಬಿಲ್ಲುಹಿಡಿದ ರಾಮನನ್ನು ಎಲ್ಲರೂ ಆರಾಧಿಸಲೇಬೇಕು ಎಂಬ ಆಗ್ರಹವಿತ್ತು. ಭಗವದ್ಗೀತೆಯನ್ನು ಎಲ್ಲರ ಜೀವನದ ಅಂಗವಾಗಿಸಲು ಇಂದಿಗೂ ಹುನ್ನಾರಗಳನ್ನು ಮಾಡಲಾಗುತ್ತಿದೆ. ಭಾರತದಲ್ಲಿ ನೆಲೆಸಿರುವ ಕೋಟ್ಯಂತರ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳನ್ನು ಬಿಡಿ; ಹಿಂದೂ ಧರ್ಮದ ತೆಕ್ಕೆಗೆ ಸೇರಿಸಿಕೊಂಡಿರುವ ಎಷ್ಟೋ ಸಮುದಾಯಗಳಿಗೂ ಮೇಲೆ ಪ್ರತಿಪಾದಿಸಲಾದ ’ಸಾಮಾನ್ಯ ಪರಂಪರೆ’ ಅನ್ಯವಾಗಿತ್ತು. ಎಷ್ಟೋ ಬುಡಕಟ್ಟು ಸಮುದಾಯಗಳು ಆ ಪರಂಪರೆಯ ಗಂಧಗಾಳಿಯಿಲ್ಲದೆ ಬದುಕಿ ಉಳಿದುಬಂದಿದ್ದವು. ಇನ್ನು ಆ ಪರಂಪರೆಯನ್ನು ವಿರೋಧಿಸಿ ಹುಟ್ಟಿದ್ದ ಹಲವು ಜನಸಮುದಾಯಗಳಿದ್ದವು. ಮೇಲಿನ ಸಾಂಸ್ಕೃತಿಕ ರಾಜಕೀಯ ಮಾಡಿದವರು ಇಲ್ಲಿ ನೆಲೆಸಿದ್ದ ಲಕ್ಷಾಂತರ ಪರಂಪರೆಗಳನ್ನು ಕಡೆಗಣಿಸಿದ್ದರು. ಇವೆಲ್ಲದರ ಪರಿಣಾಮ, ವೈದಿಕ-ಹಿಂದೂಯಿಸಂ-ಹಿಂದುತ್ವದ ನ್ಯಾಶನಲಿಸಂ ಜನಪ್ರಿಯವಾಗಿ ಮೇಲುಗೈ ಪಡೆಯಿತು. ಇಂತಹ ಪ್ರಕ್ರಿಯೆಯನ್ನು ಅಂಬೇಡ್ಕರ್ ಅವರ ಬರಹ-ಭಾಷಣಗಳ ಹಿನ್ನೆಲೆಯಲ್ಲಿ ಕೌಂಟರ್ ಮಾಡಿ ಸರಿದಾರಿಗೆ ತರಬಹುದಾದ ಪ್ರಯತ್ನ ಇಲ್ಲಿ ಆದದ್ದು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇಂತಹ ಸಾಂಸ್ಕೃತಿಕ ನ್ಯಾಶನಲಿಸಂಗೆ ತಳಹದಿಯನ್ನಾಗಿಸಿದ್ದ ಈ ವೈದಿಕ ಪುರಾಣಗಳನ್ನು ಬಾಬಾಸಾಹೇಬರು ವಿಮರ್ಶಿಸಿ ಕುಟ್ಟಿ ಪುಡಿಮಾಡಿದ್ದ ಪಠ್ಯಗಳು ನಮಗೆ ದಶಕಗಳಿಂದ ಲಭ್ಯವಿದ್ದರೂ ಅವನ್ನು ಜನಪ್ರಿಯಗೊಳಿಸದ ಕಾರಣ, ಆ ನಿಟ್ಟಿನಲ್ಲಿ ಜನಸಾಮಾನ್ಯರ ತಿಳಿವಳಿಕೆಯನ್ನು ಕಟ್ಟದ ಕಾರಣ ಇಂದು ಅಪಾಯಕಾರಿ ಧಾರ್ಮಿಕ ರಾಷ್ಟ್ರೀಯತೆಯಿಂದ ಈ ನಾಡು ಬಳಲುವಂತಾಗಿದೆ. ಅಂಬೇಡ್ಕರ್ ಅವರು ಬರೆದ ’ರಿಡಲ್ಸ್ ಇನ್ ಹಿಂದೂಯಿಸಂ’ನ (ಹಿಂದೂಯಿಸಂನ ಒಗಟುಗಳು) ಪ್ರಬಂಧಗಳನ್ನು ಗಂಭೀರವಾಗಿ ಓದಿದರೆ ಎಂಥವರಿಗಾದರೂ, ವೇದ-ರಾಮಾಯಣ-ಮಹಾಭಾರತಗಳು ಸಾಮಾನ್ಯ ತಳಹದಿಯೆಂದು ಹೇರಿ ಕಟ್ಟುವ ನ್ಯಾಶನಲಿಸಂ ಅಸತ್ಯದ್ದು ಮತ್ತು ಅಪಾಯಕಾರಿಯಾದದ್ದು ಎಂದು ಸುಲಭಕ್ಕೆ ಮನವರಿಕೆಯಾಗುತ್ತದೆ. ವೇದಗಳ ಬಗ್ಗೆ ಬರೆಯುವ ಆರನೇ ಒಗಟಿನಲ್ಲಿ ’ವೇದಗಳ ವಸ್ತುವಿಷಯ: ಅವುಗಳಲ್ಲಿ ಯಾವುದಾದರೂ ನೈತಿಕ ಅಥವಾ ಆಧ್ಯಾತ್ಮಿಕ ಮೌಲ್ಯಗಳು ಇವೆಯೇ?’ ಎಂಬ ಅಧ್ಯಾಯದಲ್ಲಿ ಅವರು ಹೀಗೆ ಹೇಳುತ್ತಾರೆ: “ವೇದಗಳಿಂದ ಬಹಳಷ್ಟನ್ನು ಬಸಿದು ತೋರಿಸಬಹುದಾದರೆ, ಆಧ್ಯಾತ್ಮಿಕವಾಗಿ ಅಥವಾ ನೈತಿಕವಾಗಿ ಉನ್ನತಿಗೆ ಕರೆದೊಯ್ಯುವಂತಹದ್ದು ಅವುಗಳಲ್ಲಿ ಏನೂ ಇಲ್ಲ”. [BAWS Vol-4].

ಹಾಗೆಯೇ ರಾಮಾಯಣ, ಮಹಾಭಾರತ ಮತ್ತಿತರ ವೈದಿಕ ಪುರಾಣಗಳಲ್ಲಿರುವ ಸಮಸ್ಯೆಗಳನ್ನು ಎತ್ತಿತೋರಿಸಿ ಇವುಗಳ ತಳಹದಿಯಲ್ಲಿ ಕಟ್ಟಿಕೊಳ್ಳುವ ವ್ಯವಸ್ಥೆ ಪೊಳ್ಳಾಗಿರುತ್ತದೆ ಎಂಬುದನ್ನು ಸಾಬೀತುಪಡಿಸಿದವರು ಬಾಬಾಸಾಹೇಬರು. ವರ್ಣಾಶ್ರಮವನ್ನು ಪ್ರತಿಪಾದಿಸುವ ಈ ಪುರಾಣ-ಕಾವ್ಯಗಳ ತಳಹದಿಯ ಮೇಲೆ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸಾಧಿಸುವುದು ಸಾಧ್ಯವೇ ಇಲ್ಲ ಎಂಬುದು ಬಾಬಾಸಾಹೇಬರ ಅಚಲ ನಂಬಿಕೆಯಾಗಿತ್ತು. ಅಲ್ಲಿಗೆ ದೇಶವಾಗಿ ಕಟ್ಟಿಕೊಳ್ಳುವ ರಾಜಕೀಯ ಪ್ರಜಾಪ್ರಭುತ್ವವೂ ಸಮಸ್ಯೆಗಳ ಆಗರವಾಗಲಿದೆ ಎಂದು ಅವರು ಶೋಧಿಸಿ ಕನ್ನಡಿ ಹಿಡಿದಿದ್ದರು. ಇಷ್ಟೆಲ್ಲಾ ಕಾಣ್ಕೆಗಳು ನಮ್ಮ ಮುಂದಿದ್ದರೂ, ಇಲ್ಲಿನ ವೈದಿಕ ಪಾರಮ್ಯ ಮತ್ತು ಬ್ರಾಹ್ಮಣವಾದ ಹಿಂದೂ ಧರ್ಮಗ್ರಂಥಗಳ ಆಧಾರದ ಮೇಲೆ ಈ ದೇಶವಾಸಿಗಳು ಸಾಮಾನ್ಯವಾದ ಪರಂಪರೆ ಹೊಂದಿದ್ದರು ಎಂಬುದನ್ನು ಬಿಂಬಿಸಿಕೊಂಡು ಬಂದಿದ್ದು, ಅದಕ್ಕೆ ರಾಜಕೀಯವಾಗಿ, ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪರಿಣಾಮಕಾರಿಯಾಗಿ ಕೌಂಟರ್ ನೀಡದೆ ಹೋದದ್ದರ ದುರಂತ ಇಂದು ದೈತ್ಯರೂಪವನ್ನು ಮೈದಾಳಿದೆ.

ಇನ್ನು ರಾಜಕೀಯವಾಗಿಯೂ ಭಾರತದಲ್ಲಿ ಹಲವು ರೀತಿಯ ರಾಷ್ಟ್ರೀಯತೆಗಳನ್ನು ಬೆಳೆಸಲಾಯಿತು. ಅದು ಮೊದಲಿಗೆ ಬೆಳೆದದ್ದು ಬ್ರಿಟಿಷರ ವಿರುದ್ಧದ ಹೋರಾಟವಾಗಿ. ಅಂದು ಜನರು ವಿವಿಧ ಪ್ರಾಂತ್ಯಗಳ ಮೂಲಕವೇ ಹೆಚ್ಚು ಗುರುತಿಸಿಕೊಳ್ಳುತ್ತಿದ್ದ ಕಾಲದಲ್ಲಿ ಬ್ರಿಟಿಷರ ಆಕ್ರಮಣಕ್ಕೆ ವಿರೋಧಕ್ಕೆ ಅಗತ್ಯವಾಗಿದ್ದ ಸಾಮೂಹಿಕ ಭಾರತೀಯ ಗುರುತನ್ನು ಬೆಳೆಸಬೇಕಾದ ಅವಶ್ಯಕತೆಯಿತ್ತು. ಅದು ಕೂಡ, ಬ್ರಾಹ್ಮಣವಾದದ ಬಿಗಿಹಿಡಿತ ಸಡಿಲವಾಗುತ್ತಿದ್ದುದರಿಂದ, ಎಚ್ಚೆತ್ತ ವರ್ಣಾಶ್ರಮದ ಮೇಲ್ವರ್ಗದ ಜನ ಕಟ್ಟಿದ ನರೆಟಿವ್ ಆಗಿತ್ತು ಎಂಬ ವಾದವೂ ಒಂದು ಕಡೆಯಿದೆ. 30-40ರ ದಶಕದಲ್ಲಿ ಬ್ರಿಟಿಷರ ಸರ್ಕಾರದೊಂದಿಗೆ ದಮನಿತ ವರ್ಗಗಳ ಹಿತಾಸಕ್ತಿಗಾಗಿ ದುಡಿಯುತ್ತಿದ್ದ, ದಲಿತ ಸಮುದಾಯಕ್ಕೆ ಪ್ರತ್ಯೇಕ ಚುನಾವಣೆಯಂತಹ ಬೇಡಿಕೆಯಿಟ್ಟಿದ್ದ ಅಂಬೇಡ್ಕರ್ ಅವರನ್ನು ’ಆಂಟಿ-ನ್ಯಾಷನಲ್’ ಎಂದು ಮೂದಲಿಸಿದ್ದ ವರ್ಗವೂ ಇತ್ತು. ಅಂದಿಗೂ, ದೇಶವನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ತಳವರ್ಗದ ಜನರ ಘನತೆ-ಸಮಾನತೆಯ ಪ್ರಶ್ನೆ ಬಗೆಹರಿಯದೆ ಹೊಸ ರಾಷ್ಟ್ರವನ್ನು ಕಟ್ಟಿಕೊಳ್ಳುವ ಬಗ್ಗೆ ಅಂಬೇಡ್ಕರ್ ತಮ್ಮ ಅನುಮಾನಗಳನ್ನು ಗಟ್ಟಿಯಾಗಿ ಹೇಳಿದ್ದರು.

“ದೇಶ ಮತ್ತು ಅಸ್ಪೃಶ್ಯರ ನಡುವೆ ಹಿತಾಸಕ್ತಿಗಳ ಘರ್ಷಣೆ ಉಂಟಾದಾಗ, ನನಗೆ ಸಂಬಂಧಿಸಿದಂತೆ ಅಸ್ಪೃಶ್ಯರ ಹಿತಾಸಕ್ತಿಗಳು ದೇಶದ ಹಿತಾಸಕ್ತಿಗಿಂತಲೂ ಆದ್ಯತೆ ಪಡೆಯುತ್ತವೆ” ಎಂದು ಸ್ಪಷ್ಟವಾಗಿ ಹೇಳಿದ್ದರು. ಈ ನಿಟ್ಟಿನಲ್ಲಿ ದೇಶವೆಂದರೆ ಕೇವಲ ಗಡಿಗಳು ಮಾತ್ರವಲ್ಲ ಅಥವಾ ಆಳುವ ಒಂದು ವರ್ಗದ ಹಿತಾಸಕ್ತಿಗಾಗಿ ದಮನಿತ ಸಮುದಾಯಗಳ ಮೇಲೆ ಹೇರುವ ನಿರ್ಬಂಧಗಳಾಗಿರಬಾರದು ಎಂಬ ತತ್ವಗಳನ್ನು ಬಾಬಾಸಾಹೇಬರ ಚಿಂತನೆಗಳು ಮತ್ತು ಕೆಲಸಗಳು ಪ್ರತಿಪಾದಿಸಿದ್ದವು.

ರಾಜಕೀಯ ತತ್ವಶಾಸ್ತ್ರಜ್ಞ ಭಿಕು ಪಾರೇಕ್ ಹೀಗೆನ್ನುತ್ತಾರೆ: “ಭ್ರಾತೃತ್ವದ ಕಲ್ಪನೆಗೆ ಸಂಬಂಧಿಸಿದ ರಾಷ್ಟ್ರದ ಕಲ್ಪನೆಯ ಬಗ್ಗೆ ಅಂಬೇಡ್ಕರ್ ಅವರ ವ್ಯಾಖ್ಯಾನ ಕೂಡ ಬಹಳ ಸಂಪದ್ಭರಿತ ಹಾಗೂ ಸೂಚ್ಯವಾಗಿತ್ತು. ಅವರಿಗೆ ರಾಷ್ಟ್ರ ಎಂಬುದು ಅದರ ಸದಸ್ಯರ ತಲೆ ಮೇಲೆ ಹಾರುತ್ತಿದ್ದ ಅತೀಂದ್ರಿಯವಾದ ಅಮೂರ್ತ ಕಲ್ಪನೆಯಾಗಿರಲಿಲ್ಲ. ಬದಲಿಗೆ, ಅದು ತನ್ನ ಸದಸ್ಯರ ಸಂಕೀರ್ಣ ಸಂಬಂಧಗಳು ಮತ್ತು ಅವಲಂಬನೆಗಳನ್ನು ಹೊರತುಪಡಿಸಿ ಮತ್ತಿನ್ನೇನೂ ಆಗಿರಲಿಲ್ಲ. ರಾಷ್ಟ್ರ ಸೇವೆ ಎಂದರೆ ಅದರ ಸದಸ್ಯರ ಸೇವೆಗಾಗಿ ಮತ್ತು ಅವರ ಕಲ್ಯಾಣಾಭಿವೃದ್ಧಿಗಾಗಿ ಶ್ರಮಿಸುವುದರ ಹೊರತು ಬೇರಿನ್ನೇನು ಅಲ್ಲ. ಆದುದರಿಂದಲೇ ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು, ತನ್ನೊಳಗಿನ ಶೋಷಣೆಯ ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಹೋರಾಟದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದು. ರಾಷ್ಟ್ರ ಎಂಬುದು ಯಾವುದೋ ಪುರಾತನ ಯುಗದ ಸಂಗತಿಯಲ್ಲ. ಅದರ ಎಲ್ಲ ಸದಸ್ಯರ ಸಾಮೂಹಿಕ ಸೃಷ್ಟಿ ಮತ್ತು ತನ್ನ ಸ್ವ-ಅರ್ಥೈಸಿಕೆಯಲ್ಲಿ ಅವರನ್ನೆಲ್ಲಾ ಒಳಗೊಳ್ಳುವುದರಲ್ಲಷ್ಟೇ ಅದು ಹಕ್ಕು ಸಾಧಿಸಬೇಕು ಎಂದು ಗಮನಿಸಿದ್ದರು” ಎಂದು ಗುರುತಿಸುತ್ತಾರೆ. [Conversations with Ambedkar, (E): Valerian Rodrigues]

ಈಗ ರಾಜಕೀಯ ನ್ಯಾಶನಲಿಸಂ ಹಲವು ಹಂತಗಳನ್ನು ದಾಟಿ ಮುನ್ನುಗ್ಗಿದೆ. ನೆರೆ ರಾಷ್ಟ್ರಗಳನ್ನು ಶತ್ರುಗಳನ್ನಾಗಿಸಿ ಒಂದು ಕಡೆ ರಾಷ್ಟ್ರೀಯತೆಯನ್ನು ಉದ್ದೀಪಿಸಲಾಗುತ್ತಿದ್ದರೆ, ಅದನ್ನೇ ರ್‍ಯಾಡಿಕಲೈಸ್ ಮಾಡಿ ಇಲ್ಲಿನ ಅಲ್ಪಸಂಖ್ಯಾತರ ವಿರುದ್ಧ ಅದನ್ನು ತಿರುಗಿಸಲಾಗಿದೆ. ವಿವಿಧ ಸಮುದಾಯಗಳಿಗೆ ಸೇರಿದ ಜನರು ಭಾರತದ ಸಂವಿಧಾನದ ಅಡಿಯಲ್ಲಿ ಸಮಾನರು ಎಂಬ ತತ್ವಕ್ಕೆ ಬದ್ಧರಾಗಿರುವ ಚಿಂತಕರನ್ನು ಈ ರಾಷ್ಟ್ರೀಯತೆ ದೇಶದ್ರೋಹಿಗಳ್ನಾಗಿಸಿದೆ. ಭಾವನಾತ್ಮಕ ನೆಲೆಯಲ್ಲಿ ಇಂತಹ ದ್ವೇಷವನ್ನು ತುಂಬುವ ರಾಷ್ಟ್ರೀಯತೆಯನ್ನು ಈ ದೇಶದ ನಾಗರಿಕರು ಒಂದು ದೊಡ್ಡ ಸಂಖ್ಯೆಯಲ್ಲಿ ಒಪ್ಪಿಕೊಳ್ಳುವಂತೆ ಮಾಡಲು ಸಾಧ್ಯವಾಗಿದ್ದು ಅಂಬೇಡ್ಕರ್ ಅವರ ಚಿಂತನೆಗಳನ್ನು ದೇಶ ಕಟ್ಟುವಿಕೆಯಲ್ಲಿ ಅನುಷ್ಠಾನಗೊಳಿಸಲು ಸೋತಿರುವ ಪರಿಣಾಮವೇ ಆಗಿದೆ. ಸಂವಿಧಾನದ ಪ್ರಕಾರ ಭಾರತವೆಂಬ ರಾಷ್ಟ್ರ-ಪ್ರಭುತ್ವಕ್ಕೆ ತನ್ನ ಪ್ರತಿಯೊಬ್ಬ ನಾಗರಿಕನೂ ಸಮಾನ. ಪ್ರತಿ
ನಾಗರಿಕನ ಸಮಾನತೆಯನ್ನು ಸಾಧಿಸುವುದರತ್ತ, ಘನತೆಯನ್ನು ಗಳಿಸಿಕೊಡುವುದರತ್ತ ದೇಶವನ್ನು ಕಟ್ಟಿಕೊಳ್ಳಬೇಕಾದ ತುರ್ತಿನಲ್ಲಿ ನಾವಿದ್ದು, ಆ ನಿಟ್ಟಿನಲ್ಲಿ ಇಂದು ಹೆಮ್ಮರವಾಗಿ ಬೆಳೆದಿರುವ ಧಾರ್ಮಿಕ ರಾಷ್ಟ್ರೀಯತೆಯನ್ನು ಪ್ರಶ್ನಿಸಿ ಮರುಚಿಂತನೆಗೆ ಒಳಪಡಿಸಬೇಕಾಗಿರುವ ಅಗತ್ಯ ದೇಶದ ನಾಗರಿಕರ ಮುಂದಿದೆ. ’ದೇಶವೆಂದರೆ ದಿನವೂ ಪ್ರಶ್ನಿಸಿ ಕಟ್ಟಿಕೊಳ್ಳಬೇಕಾದ ಜನಾಭಿಮತ’ ಎಂಬ ಫ್ರೆಂಚ್ ಇತಿಹಾಸಕಾರ ಅರ್ನೆಸ್ಟ್ ರೆನನ್ ಅವರ ಮಾತುಗಳಿಗೆ ಬಾಬಾಸಹೇಬರ ಚಿಂತನೆಗಳು ಮತ್ತು ಈ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅವರು ಎತ್ತಿದ ಪ್ರಶ್ನೆಗಳು ಪೂರಕವಾಗಿವೆ ಮತ್ತು ಇಂದಿಗೂ ಪ್ರಸ್ತುತವಾಗಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕೇಡು ನಮ್ಮ ಹೊಸ್ತಿಲನ್ನೇ ತುಳಿದಾಗ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...