ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ತನಿಖೆ ಪೂರ್ಣಗೊಳ್ಳುವ ಮುನ್ನವೇ ಪರೀಕ್ಷೆ ರದ್ದು ಮಾಡಿ, ಮರುಪರೀಕ್ಷೆಗೆ ಆದೇಶಿಸಿರುವುದು ಖಂಡನೀಯ. ಇದು ಈ ಅಕ್ರಮದಲ್ಲಿ ಭಾಗಿಯಾಗಿರುವ ಆಡಳಿತ ಪಕ್ಷದ ನಾಯಕರ ರಕ್ಷಣೆಯ ಪ್ರಯತ್ನವಾಗಿದ್ದು, ಇದರಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾಗಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ನೇಮಕಾತಿ ಸಮಿತಿ ರದ್ದು ಮಾಡಿ, ಪರೀಕ್ಷೆಯೇ ಮಾನದಂಡ ಎಂದು ಪ್ರವೇಶ ಪರೀಕ್ಷೆಗಳನ್ನು ಆರಂಭಿಸಲಾಯಿತು. ಇದು ಆರಂಭವಾದ ನಂತರ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಗೊಂದಲ ಉದ್ಭವಿಸಿದ್ದನ್ನು ನೋಡಿದ್ದೇವೆ. ಇದರ ವಿಚಾರಣೆ ನಡೆದಿದ್ದು, ಕೋರ್ಟ್ ಹಾಗೂ ಸರ್ಕಾರ ಭಿನ್ನ ತೀರ್ಮಾನ ಕೈಗೊಂಡಿರುವುದನ್ನು ನೋಡಿದ್ದೇವೆ. ಸರ್ಕಾರದ ಎಲ್ಲ ನೇಮಕಾತಿ ಪ್ರಕ್ರಿಯೆಯಲ್ಲೂ ಭ್ರಷ್ಟಾಚಾರ, ಅಕ್ರಮ, ಹಗರಣಗಳ ಸರಮಾಲೆ ಇದೆ. ಪಿಡಬ್ಲ್ಯೂಡಿ, ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಕಡೆಗಳಲ್ಲಿ ಅಕ್ರಮವಾಗಿದೆ. ರಾಜ್ಯದಲ್ಲಿ ಯುವಕರ, ಉದ್ಯೋಗಕಾಂಕ್ಷಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪಿಎಸ್ಐ ನೇಮಕಾತಿ ಅಕ್ರಮ ವಿಚಾರವಾಗಿ ತನಿಖೆ ನಡೆಯುತ್ತಿದೆ. ಇಪ್ಪತ್ತು ದಿನಗಳ ನಂತರ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿಯವರು ಈ ಅಕ್ರಮದ ಆರೋಪವನ್ನು ಬೇರೆಯವರ ಮೇಲೆ ಹಾಕಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ನವರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸಿದರು. ಬಿಜೆಪಿಯವರು ತಾವು ಹಣ್ಣು ತಿಂದು ಬೇರೆಯವರ ಮೂತಿ ಮೇಲೆ ಸಿಪ್ಪೆ ಇಡುವ ಪ್ರಯತ್ನ ಮಾಡುತ್ತಾರೆ. ಅದು ಯಶಸ್ಸಾಗುವುದಿಲ್ಲ ಎಂದು ಹೇಳಿದರು.
ಗೃಹಮಂತ್ರಿಗಳು ಈ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಅಧಿವೇಶನದಲ್ಲೇ ಹೇಳಿದ್ದರು. ನಮ್ಮ ಶಾಸಕರು, ನಾಯಕರು ಈ ಅಕ್ರಮದ ವಿಚಾರ ಬಹಿರಂಗ ಪಡಿಸಿದರೆ, ಅವರನ್ನು ಬೆದರಿಸಲು ನೊಟೀಸ್ ನೀಡುತ್ತೀರಿ. ಕಾಂಗ್ರೆಸ್ ಪಕ್ಷ ಇದಕ್ಕೆಲ್ಲ ಹೆದರುವುದಿಲ್ಲ. ಈ ಪ್ರಕರಣದ ಪ್ರಮುಖ ಆರೋಪಿಯನ್ನು ನಿಮ್ಮ ಮುಂಖಂಡರೇ ಗೌಪ್ಯ ಸ್ಥಳದಲ್ಲಿ ಇಟ್ಟಿದ್ದರು ಎಂದು ನಿಮಗೆ ಗೊತ್ತಿದೆ. ಅವರ ವಿಚಾರಣೆ ಮಾಡುವ ಮುನ್ನವೇ, ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಬಹಿರಂಗವಾಗುವ ಮುನ್ನವೇ ಈ ಹಿಂದೆ ನಡೆದಿರುವ ಪರೀಕ್ಷೆ ರದ್ದು ಮಾಡಿ ಮರುಪರೀಕ್ಷೆಗೆ ಆದೇಶ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.
ಈ ನಿರ್ಣಯ ಕೈಗೊಳ್ಳಬೇಕಾದರೆ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಖಚಿತವಾಗಿರಬೇಕು. ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರೇ ಈ ಪಿಎಸ್ಐ ನೇಮಕಾತಿಯಲ್ಲಿ ಯಾರು ಅಕ್ರಮ ಮಾಡಿದ್ದಾರೋ, ಅವರನ್ನು ಹೊರತುಪಡಿಸಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ ಸರ್ಕಾರ ಅವರ ಹೇಳಿಕೆ ನಿರ್ಲಕ್ಷಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಇದೊಂದು ಬಿಜೆಪಿ ಅಕ್ರಮವಾಗಿದ್ದು, ಬಿಜೆಪಿ ನಾಯಕರ ರಕ್ಷಣೆಗೆ ಪರೀಕ್ಷೆ ರದ್ದು ಪಡಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಪ್ರಕರಣದಿಂದ ರಾಜ್ಯದ ಘನತೆ ಏನಾಗಿದೆ ಎಂದು ಸರ್ಕಾರ ಅರಿತಿದೆಯೇ? ಪೊಲೀಸ್ ಅಧಿಕಾರಿಯಾಗುವ ಅಭ್ಯರ್ಥಿಗಳಲ್ಲಿ ಈ ಭ್ರಷ್ಟಾಚಾರದ ಭಾವನೆ ಮೂಡಿದರೆ ಮುಂದೆ ಏನಾಗಬಹುದು ಎಂಬ ಪರಿಜ್ಞಾನ ಸರ್ಕಾರಕ್ಕೆ ಇದೆಯಾ? ಇತರೆ ಇಲಾಖೆಗಳಲ್ಲಿ ನೇಮಕಾತಿ ಅಕ್ರಮದ ಬಗ್ಗೆ ಸಚಿವರು ಯಾಕೆ ಮಾತನಾಡುತ್ತಿಲ್ಲ. ನಮ್ಮ ವಿರೋಧ ಪಕ್ಷದ ನಾಯಕರು ಕೆಲವು ಸಚಿವರ ರಾಜೀನಾಮೆ ಕೇಳಿದ್ದಾರೆ. ಆದರೆ ಕೊಡದಷ್ಟು ಅವರು ಭಂಡರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿರಿ: ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ತಪ್ಪುಗಳ ಸರಮಾಲೆ: 5 ಎಡವಟ್ಟುಗಳಿಗೆ ಮಾತ್ರ ಕೆಇಎ ಸಮಜಾಯಿಷಿ!
ಈ ಅಕ್ರಮಕ್ಕೆ ಮುಖ್ಯಮಂತ್ರಿಗಳೂ ಜವಾಬ್ದಾರರಾಗಿದ್ದಾರೆ. ನಿಮ್ಮ ಸರ್ಕಾರ ಅಕ್ರಮಗಳ ಸರಮಾಲೆ ಧರಿಸಿದೆ. ಈ ಅಕ್ರಮದಲ್ಲಿ ಭಾಗಿಯಾಗಿರುವ ನಿಮ್ಮ ನಾಯಕರು, ಅಧಿಕಾರಿಗಳ ಹೆಸರನ್ನು ನಾವು ಬಹಿರಂಗ ಪಡಿಸುವ ಮುನ್ನ ನೀವೇ ಬಹಿರಂಗ ಮಾಡಬೇಕು. ಇಡೀ ನಿಮ್ಮ ಪಕ್ಷ ಈ ನೇಮಕಾತಿ ಅಕ್ರಮದ ಕೊಳಕಿನಲ್ಲಿ ಮುಳುಗಿ ಒದ್ದಾಡುತ್ತಿದೆ. ಈ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರಲು ನೀವೇ ದಾರಿ ಮಾಡಿಕೊಡುತ್ತಿದ್ದೀರಿ. ನ್ಯಾಯಾಲಯದ ವಿಚಾರಣೆ ಹೆಸರಲ್ಲಿ ಇದು ಮುಂದಕ್ಕೆ ಹೋಗಬೇಕು ಎಂಬುದು ನಿಮ್ಮ ಕುತಂತ್ರ ಎಂದು ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಸರ್ಕಾರ ಸಿಇಟಿ ಆರಂಭಿಸಿ, ಒಂದು ಪ್ರಾಧಿಕಾರ ರಚಿಸಿ ಕಾಲೇಜು ಸೀಟು ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ತಂದಿತು. ಈಗಿರುವ ತಂತ್ರಜ್ಞಾನ ಬಳಸಿಕೊಂಡು ಪಾರದರ್ಶಕತೆ ಹೆಚ್ಚಿಸಬೇಕು. ಆದರೆ ನೀವು ನಿಮ್ಮ ಕಾರ್ಯಕರ್ತರಿಗೆ ಕುಮ್ಮಕ್ಕು ನೀಡಿ, ಒಂದೊಂದು ಹುದ್ದೆಗೂ 80 ಲಕ್ಷ ವಸೂಲಿ ಮಾಡಿಕೊಂಡಿದ್ದೀರಿ. ವರದಿಯಲ್ಲಿ ನಿಮ್ಮವರ ಹೆಸರು ಬರಲಿದೆ ಎಂಬ ಕಾರಣಕ್ಕೆ ಮರುಪರೀಕ್ಷೆಗೆ ಆದೇಶಿಸಿದ್ದೀರಿ. ನಿಮ್ಮ ಈ ತಪ್ಪಿಗೆ ಯಾರು ಶಿಕ್ಷೆ ನೀಡಬೇಕು? ನಿಮಗೆ ರಾಜ್ಯದ ಜನತೆ, ಯುವಕರು, ರಾಜ್ಯದ ತಂದೆ ತಾಯಂದಿರು, ಮತದಾರ ಪ್ರಭುಗಳು ಶಿಕ್ಷೆ ನೀಡಲಿದ್ದಾರೆ. ನಿಮ್ಮನ್ನು ಜನರೇ ಕಿತ್ತೊಗೆಯುತ್ತಾರೆ. ಆ ಕಾಲ ಸನಿಹವಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.


