ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಸರ್ಕಾರ ರಚಿಸಲು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಹಕ್ಕು ಮಂಡಿಸಿದ್ದಾರೆ. ಈ ವೇಳೆ ಏಕನಾಥ್ ಶಿಂಧೆ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಎಂದು ಫಡ್ನವಿಸ್ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಏಕನಾಥ್ ಶಿಂಧೆ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಮತ್ತು ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಬ್ಬರೂ ನಾಯಕರು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ರಾಜಭವನದಲ್ಲಿ ಭೇಟಿಯಾಗಿ, ಫಡ್ನವಿಸ್ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಜೊತೆಗೆ ಏಕನಾಥ್ ಶಿಂಧೆ ಬಣವು ಬಿಜೆಪಿಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಬಂಡಾಯ ಶಿವಸೇನಾ ಬಣದ ವಕ್ತಾರ ದೀಪಕ್ ಕೇಸರ್ಕರ್, “ನಾವು 2019 ರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸ್ಪರ್ಧಿಸಿದ್ದೇವೆ, ಅದಕ್ಕಾಗಿಯೇ ಮಹಾರಾಷ್ಟ್ರದ ಜನರು ಮತ ಚಲಾಯಿಸಿದ್ದಾರೆ. ಆಗ ನೀಡಿದ ಭರವಸೆಗಳನ್ನು ಈಗ ಈಡೇರಿಸಲಿದ್ದೇವೆ’ ಎಂದಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ:’ತಮ್ಮವರೇ ಬೆನ್ನಿಗೆ ಚೂರಿ ಹಾಕಿದರು’; ಚಿತ್ರವನ್ನು ಟ್ವೀಟ್ ಮಾಡಿದ ಸಂಜಯ್ ರಾವತ್
ಏಕನಾಥ್ ಶಿಂಧೆ ಗುರುವಾರ ಗೋವಾದಿಂದ ಮುಂಬೈಗೆ ಆಗಮಿಸಿದ್ದರು. ಅವರಿಗೆ ಕೇಂದ್ರವು Z ಕೆಟಗರಿ ಭದ್ರತೆಯನ್ನು ಒದಗಿಸಿದೆ. ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗ ಮಧ್ಯೆ ಮಹಾರಾಷ್ಟ್ರ ರಾಜ್ಯಪಾಲರನ್ನು ಭೇಟಿ ಮಾಡುವುದಾಗಿ ಶಿಂಧೆ ಸುದ್ದಿಗಾರರಿಗೆ ತಿಳಿಸಿದ್ದರು. ಉಳಿದ ಇತರ ಬಂಡಾಯ ಶಾಸಕರು ಉದ್ಧವ್ ಠಾಕ್ರೆ ಅವರ ರಾಜೀನಾಮೆಯ ನಂತರ ಗುವಾಹಟಿಯಿಂದ ಆಗಮಿಸಿ ಗೋವಾದಲ್ಲಿಯೇ ಉಳಿದುಕೊಂಡಿದ್ದಾರೆ.
ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ, ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವುದು ಖಚಿತವಾಗಿದೆ. ಆದರೆ, ಸರ್ಕಾರ ರಚನೆಗೂ ಮೊದಲೇ ಬಂಡಾಯಗಾರರಲ್ಲಿ ಸಚಿವ ಸ್ಥಾನ, ಖಾತೆ ಹಂಚಿಕೆಗಳ ಬಗ್ಗೆ ಹಗ್ಗಜಗ್ಗಾಟ ಕೇಳಿ ಬರುತ್ತಿರುವುದಕ್ಕೆ ಸ್ವತಃ ಬಂಡಾಯ ನಾಯಕ ಏಕನಾಥ್ ಶಿಂಧೆ ’ವದಂತಿಗಳನ್ನು ನಂಬಬೇಡಿ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸ್ಥಾನ ಹಂಚಿಕೆಗಳ ಬಗ್ಗೆ ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ, “ಯಾವ ಯಾವ ಖಾತೆ ಮತ್ತು ಎಷ್ಟು ಸಚಿವ ಸ್ಥಾನಗಳು ಎಂಬ ಬಗ್ಗೆ ಬಿಜೆಪಿಯೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ, ಅದು ಶೀಘ್ರದಲ್ಲೇ ನಡೆಯಲಿದೆ. ಅಲ್ಲಿಯವರೆಗೂ ಸಚಿವರ ಪಟ್ಟಿ ಮತ್ತು ಆ ಕುರಿತ ವದಂತಿಗಳನ್ನು ನಂಬಬೇಡಿ” ಎಂದು ಅವರು ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ಹೊಸ ಸರ್ಕಾರ ರಚನೆಗೂ ಮುನ್ನವೇ ಸಚಿವ ಸ್ಥಾನಕ್ಕೆ ಒಳಜಗಳ, ಏಕನಾಥ್ ಶಿಂಧೆ ಸ್ಪಷ್ಟನೆ