Homeಮುಖಪುಟತೀಸ್ತಾ, ಶ್ರೀಕುಮಾರ್ ಮತ್ತು ಜುಬೇರ್ ಬಂಧನ; ಭಾರತ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮದತ್ತ ಸಾಗುತ್ತಿದೆಯೇ?

ತೀಸ್ತಾ, ಶ್ರೀಕುಮಾರ್ ಮತ್ತು ಜುಬೇರ್ ಬಂಧನ; ಭಾರತ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮದತ್ತ ಸಾಗುತ್ತಿದೆಯೇ?

- Advertisement -
- Advertisement -

ಹೇಗೆ ಗೌರಿ ಲಂಕೇಶರ ಕೊಲೆಯು ಈ ದೇಶದಲ್ಲಿ ಬಲಪಂಥೀಯ ಘಾತುಕ ರಾಜಕಾರಣಕ್ಕೆ ಪ್ರತಿರೋಧವನ್ನು ಕಡಿಮೆ ಮಾಡಲಿಲ್ಲವೋ, ಹಾಗೆಯೇ ತೀಸ್ತಾ ಸೆತಲ್ವಾಡ್, ಶ್ರೀಕುಮಾರ್ ಮತ್ತು ಜುಬೇರ್‌ರ ಬಂಧನವೂ ಈ ಪ್ರತಿರೋಧವನ್ನು ಇಲ್ಲವಾಗಿಸುವುದಿಲ್ಲ. ಹಾಗೆ ನೋಡಿದರೆ ತೀಸ್ತಾ ಮತ್ತು ಜುಬೇರ್‌ರಿಗೆ ಇಂತಹದೊಂದು ದಿನ ಬರುತ್ತದೆ ಎಂದು ಖಚಿತವಾಗಿ ಗೊತ್ತಿತ್ತು. ಏಕೆಂದರೆ ಅವರ ಕಣ್ಣೆದುರಿಗೆ ನಡೆದ ಇನ್ನೂ ಭೀಕರವಾದ ಸಂಗತಿಗಳನ್ನು ಅವರು ಧೈರ್ಯದಿಂದ ಎದುರಿಸಲು ದೃಢ ನಿಶ್ಚಯ ಮಾಡಿದಾಗಲೇ, ಇದರ ಪರಿಣಾಮವೇನೆಂದು ಊಹಿಸದಷ್ಟು ಭ್ರಮೆಯಲ್ಲಿ ಅವರಿರಲಿಲ್ಲ. ತೀಸ್ತಾ ಅವರ ತಾತ ಈ ದೇಶದ ಮೊಟ್ಟ ಮೊದಲ ಮತ್ತು ದೀರ್ಘ ಕಾಲದ ಅಟಾರ್ನಿ ಜನರಲ್ ಆಗಿದ್ದರೆಂಬುದೋ, ಅವರ ಮುತ್ತಾತ ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ವಿಚಾರಣೆ ನಡೆಸಿದ ಆಯೋಗದ ಸದಸ್ಯರಾಗಿದ್ದರೆಂಬುದೋ ಅವರ ನೆರವಿಗೆ ಬರುತ್ತದೆ ಎಂದವರು ಅಂದುಕೊಂಡಿರಲಿಲ್ಲ. ತೀಸ್ತಾ ಎಂದೂ ತಾನಿಂತಹ ಕುಟುಂಬಕ್ಕೆ ಸೇರಿದವಳು ಎಂಬುದನ್ನು ಹೇಳಿಕೊಂಡೂ ಇರಲಿಲ್ಲ. ಸ್ವತಃ ತೀಸ್ತಾ ಸೆತಲ್ವಾಡ್ ಸತತವಾಗಿ ಆರಿಸಿಕೊಂಡಿದ್ದು ನ್ಯಾಯಕ್ಕಾಗಿ ದೇಶದ ವಿವಿಧ ನ್ಯಾಯಾಲಯಗಳು ಹಾಗೂ ಸಂಬಂಧಿಸಿದ ಪ್ರಾಧಿಕಾರಗಳ ಬಾಗಿಲನ್ನು ನಿರಂತರವಾಗಿ ಎಡತಾಕುವುದನ್ನೇ. ಅದೂ ಸಹಾ ನ್ಯಾಯಾಲಯಗಳಿಂದ ತನಗೆ ರಕ್ಷಣೆ ತಂದುಕೊಟ್ಟುಬಿಡುತ್ತದೆ ಎಂದು ಭ್ರಮಿಸುವಷ್ಟು ಅಮಾಯಕರು ಅವರಲ್ಲವೇ ಅಲ್ಲ.

ಏಕೆಂದರೆ ಅವರ ಕಣ್ಣೆದುರಿಗೇ ಅದೇ ಮಹಾರಾಷ್ಟ್ರದಲ್ಲಿ ಡಾ.ಆನಂದ್ ತೇಲ್ತುಂಬ್ಡೆಯವರೂ ಒಳಗೊಂಡಂತೆ ಹಲವಾರು ಮೇಧಾವಿಗಳನ್ನು ಒಂದು ಹಸೀ ಸುಳ್ಳು ಕೇಸಾದ ಭೀಮಾ ಕೊರೆಗಾಂವ್ ಕೇಸಿನಲ್ಲಿ ಸಿಲುಕಿಸಿ ವರ್ಷಗಳು ಕಳೆದುಹೋದವು. ಆ ಕೇಸಿನ ವಿವರವು ತೀರಾ ಸಾಮಾನ್ಯ ಜ್ಞಾನವಿದ್ದವರಲ್ಲೂ ಆಶ್ಚರ್ಯ ಮೂಡಿಸುತ್ತದೆ. ಸುಳ್ಳಿಗೆ ಮತ್ತೊಂದು ಹೆಸರೇ ಭೀಮಾ ಕೊರೆಗಾಂವ್ ಕೇಸು. ತೀರಾತೀರಾ ಕಡಿಮೆ ಸೃಜನಶೀಲ ಆಲೋಚನೆಯಿದ್ದವರಷ್ಟೇ ಅಂತಹ ಅಪದ್ಧ ಹೆಣೆಯಲು ಸಾಧ್ಯ. ಆದರೂ ಸುಧಾ ಭಾರದ್ವಾಜ್ ಮತ್ತು ವರವರರಾವ್ (ಅವರಿಗೆ ಸಿಕ್ಕಿರುವುದು ಪೂರ್ಣ ಜಾಮೀನೂ ಅಲ್ಲ) ಅವರನ್ನು ಹೊರತುಪಡಿಸಿ ಮಿಕ್ಕವರೆಲ್ಲರೂ ಇನ್ನೂ ಜೈಲಿನಲ್ಲಿಯೇ ಇದ್ದಾರೆ.

ಇವೆಲ್ಲಾ ಗೊತ್ತಿದ್ದೂ ತೀಸ್ತಾ ಅವರು ಏಕೆ ಗುದ್ದಾಡುತ್ತಲೇ ಇದ್ದರು? ತನ್ನ ಕುಟುಂಬಕ್ಕೆ ಅತ್ಯಂತ ಹತ್ತಿರದಿಂದ ಗೊತ್ತಿರುವ ನ್ಯಾಯಾಂಗದ ಒಂದೊಂದೇ ಕಂಬವು ಯಾರದ್ದೋ ಪದತಲದಲ್ಲಿ ಉರುಳಲಾರಂಭಿಸಿಯಾಗಿದೆ ಎಂದು ಗೊತ್ತಿದ್ದೂ ಅಲ್ಲಿ ನ್ಯಾಯ ಕೇಳುವುದನ್ನು ಅವರು ಬಿಟ್ಟಿರಲಿಲ್ಲ. ಸದರಿ ನ್ಯಾಯಾಂಗದ ಒಂದೊಂದು ಸಣ್ಣ ಸೂಕ್ಷ್ಮವೂ ಅವರಿಗೆ ಕರತಲಾಮಲಕ. ಒಂದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಗೌರಿ ಲಂಕೇಶರ ಹತ್ಯೆಯ ಮೊಕದ್ದಮೆಯ ವಿಚಾರಣೆಯು ಆರಂಭವಾಗುವುದಿತ್ತು. ಆ ವಿಚಾರಣೆಯ ಪ್ರಥಮ ಸಾಕ್ಷಿಯಾಗಿ ಗೌರಿಯವರ ಸೋದರಿ ಕವಿತಾ ಹೋಗಬೇಕಿತ್ತು. ಅದು ಕವಿತಾ ಎದುರಿಸಬೇಕಿದ್ದ ಮೊಟ್ಟಮೊದಲ ಕೋರ್ಟ್ ವಿಚಾರಣೆ. ಅಲ್ಲಿ ಅವರೆದುರಿಗೆ ನಿಲ್ಲುವುದು, ಅವರ ಪ್ರಿಯ ಸಹೋದರಿಯನ್ನು ಕೊಂದ ಮತ್ತು ಕೊಲೆಯ ಸಂಚಿನಲ್ಲಿ ಭಾಗಿಯಾದ ಆರೋಪ ಹೊತ್ತ ವ್ಯಕ್ತಿಗಳು. ಕಾಕತಾಳೀಯವಾಗಿ ಸಾಮಾನ್ಯವಾಗಿ ಆ ಕೇಸಿಗೆ ನಿರಂತರವಾಗಿ ಹಾಜರಾಗುತ್ತಿದ್ದ ಕೆಲವು ಗೆಳೆಯರು ಅಂದು ಇದ್ದಿರಲಿಲ್ಲ. ಇದನ್ನು ಒಂದು ದಿನ ಮುಂಚೆ ತಿಳಿದುಕೊಂಡ ತೀಸ್ತಾ ಕೂಡಲೇ ಕರ್ನಾಟಕದ ಹಲವು ಸ್ನೇಹಿತರಿಗೆ ಫೋನ್ ಮಾಡಿ, ’ನೀವು ನಾಳೆ ಕವಿತಾ ಜೊತೆಗೆ ಕೋರ್ಟಿನಲ್ಲಿ ಇರಲೇಬೇಕು. ಕೋರ್ಟಿನ ಆ ಕಟಕಟೆಯಲ್ಲಿ ನಿಂತಾಗ ತೀರಾ ಹತ್ತಿರದಿಂದ ಪರಿಚಿತವಿರುವ ಹಲವು ಮುಖಗಳು ಕಾಣದಿದ್ದರೆ ಕಷ್ಟವಾಗುತ್ತದೆ’ ಎಂದು ಒತ್ತಾಯಿಸಿದ್ದರು.

ಸುಳ್ಳು ಕೇಸುಗಳಲ್ಲಿ ಬಲಿಯಾಗುವ ಎಷ್ಟೋ ಆರೋಪಿಗಳ ಪರವಾಗಿ, ಅಪಾಯಕಾರಿ ಕೊಲೆಗಡುಕರ ವಿರುದ್ಧ ಕೇಸುಗಳನ್ನು ಕೊಟ್ಟು ವಿಚಾರಣೆಗೆ ಹಾಜರಾಗುವ ದೂರುದಾರರ ಪರವಾಗಿ ತೀಸ್ತಾ (ಮತ್ತು ಅವರ ಸಿಜೆಪಿ) ನಿರಂತರವಾಗಿ ಕೆಲಸ ಮಾಡಿದ್ದರು. ಹಾಗಾಗಿ ಅದರ ಸೂಕ್ಷ್ಮವನ್ನು ಅರಿತು ಕವಿತಾರ ಮನಸ್ಸಿನಲ್ಲಿ ಅಂದು ಸುಳಿಯಬಹುದಾದ ಸಣ್ಣ ಚಡಪಡಿಕೆಯ ಹೊತ್ತಿನಲ್ಲೂ, ಆತುಕೊಳ್ಳುವ ಪರಿಚಿತ ಮುಖಗಳು ಇರಬೇಕೆಂದು ಒಬ್ಬರಾದ ಮೇಲೆ ಒಬ್ಬರಿಗೆ ಫೋನ್ ಮಾಡಿ ಒತ್ತಾಯಿಸಿದ್ದರು. ಅದು ತೀಸ್ತಾ.

ತೀಸ್ತಾ ಎಂಬುದು ಭಾರತದ ಪೂರ್ವಭಾಗದಲ್ಲಿ ಹರಿವ ನದಿ. ಭಾರತದ ಪಶ್ಚಿಮದ ಗುಜರಾತ್‌ನಲ್ಲಿ ನಡೆದ ನರಮೇಧದ ಸಂದರ್ಭದಲ್ಲಿ ತೀಸ್ತಾ ಸೆತಲ್ವಾಡ್ ನಿಭಾಯಿಸಿದ ಪಾತ್ರದ ಕಾರಣಕ್ಕೆ ದೇಶಾದ್ಯಂತ ಪ್ರಜ್ಞಾವಂತರೆಲ್ಲರಿಗೂ ಅವರು ಪರಿಚಿತ. ಅವರ ಸಿಜೆಪಿ (ಸಿಟಿಜನ್ಸ್ ಫಾರ್ ಜಸ್ಟೀಸ್ & ಪೀಸ್), ಸಬ್‌ರಂಗ್ ಎನ್‌ಜಿಓ, ಕಮ್ಯುನಲಿಸಂ ಕಂಬ್ಯಾಟ್ ಪತ್ರಿಕೆಗಳೂ ಸಹಾ ಹಾಗೆಯೇ ಪರಿಚಿತ. ಆದರೆ ತಳಮಟ್ಟದಲ್ಲಿ ಅವರು ಕೈಗೊಂಡ ಕೆಲಸಗಳು ಅಸಂಖ್ಯ. ಅಸ್ಸಾಂನಲ್ಲಿ ಸಿಜೆಪಿಯ ವಾಲಂಟಿಯರ್‌ಗಳು ತುಂಬಿದ ಎನ್‌ಆರ್‌ಸಿ ಅರ್ಜಿಗಳ ಸಂಖ್ಯೆ ಹತ್ತು ಲಕ್ಷಕ್ಕೂ ಹೆಚ್ಚು. ಇಂತಹ ಹತ್ತಾರು ಬಗೆಯ ಕೆಲಸಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸುವುದರಲ್ಲಿ ತೀಸ್ತಾ ಎತ್ತಿದ ಕೈ. ’ನ್ಯಾಯ’ ಎನ್ನುವುದು ಅವರ ಪಾಲಿಗೆ ಅತ್ಯಂತ ಪವಿತ್ರವಾದುದಾಗಿತ್ತು. ಅದು ಮುಸ್ಲಿಮರು, ದಲಿತರು, ಆದಿವಾಸಿಗಳು, ಮಹಿಳೆಯರು, ಬಡವರೆಲ್ಲರ ವಿಚಾರದಲ್ಲೂ.

ತೀಸ್ತಾ ಅವರು ಕಾಂಗ್ರೆಸ್ಸಿನಿಂದ ಉಪಕೃತರೆಂದೂ, ಅವರಿಗಾಗಿ ಕೆಲಸ ಮಾಡುತ್ತಿದ್ದರೆಂದೂ ಐಟಿ ಸೆಲ್ ಆರೋಪಗಳು ಅಲ್ಲಲ್ಲಿ ಕಂಡಿವೆ. ತೀಸ್ತಾರಂತಹ ಒಬ್ಬ ದಿಟ್ಟ ಮತ್ತು ಸಮರ್ಥ ಮಹಿಳೆಯ ಸಾಮರ್ಥ್ಯ ಹಾಗೂ ಬದ್ಧತೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಆಲೋಚನೆ ಈ ಕಾಂಗ್ರೆಸ್ಸಿಗೆ ಇದ್ದಿದ್ದರೆ ದೇಶ ಇನ್ನೂ ಉತ್ತಮ ಸ್ಥಿತಿಯಲ್ಲಿರುತ್ತಿತ್ತು ಎಂದಷ್ಟೇ ಹೇಳಬಹುದು. ದೇಶದ ಯಾವುದೇ ನಾಗರಿಕರಿಗೆ ಲಭ್ಯವಿರುವ ಸಾಂವಿಧಾನಿಕ, ನ್ಯಾಯಿಕ ಸೌಲಭ್ಯಗಳನ್ನಷ್ಟೇ ಬಳಸಿ ತೀಸ್ತಾ ಮಾಡಿದ ಕೆಲಸವೇ ನೂರಾರು ದಾಳಿಕೋರರಿಗೆ, ಕೊಲೆಗಡುಕರಿಗೆ ಶಿಕ್ಷೆ ಆಗುವಂತೆ ಮಾಡಿತು ಎಂಬುದನ್ನಿಲ್ಲಿ ದಾಖಲಿಸಬೇಕು.

ಕರ್ನಾಟಕದ ಜೊತೆಗೂ ತೀಸ್ತಾ ನಂಟು ಬಹಳ ಹತ್ತಿರದ್ದು. ಇಲ್ಲಿ ಅವರಿಗೆ ಹಲವಾರು ಸ್ನೇಹಿತರಿದ್ದಾರೆ. ಅಂತಹ ಒಬ್ಬ ಪ್ರಿಯ ಸ್ನೇಹಿತೆ ಗೌರಿ ಲಂಕೇಶ್ ಹತ್ಯೆಯ ನಂತರ ತೀಸ್ತಾ ಕರ್ನಾಟಕಕ್ಕೆ ಇನ್ನೂ ಹತ್ತಿರವಾದರು. ಇನ್ನೂ ಹೆಚ್ಚು ಧೈರ್ಯವಾಗಿ, ವ್ಯವಸ್ಥಿತವಾಗಿ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದರು. ಆ ನಂತರ ತೀಸ್ತಾ ಅವರಿಗೆ ಒಬ್ಬ ಗನ್‌ಮ್ಯಾನ್‌ಅನ್ನು ಸರ್ಕಾರ ನೀಡಿತ್ತಾದರೂ, ಆ ಗನ್‌ಮ್ಯಾನ್ ಯಾರಿಂದ ರಕ್ಷಣೆ ಒದಗಿಸಬಹುದು ಎಂಬ ಅರಿವು ಅವರಿಗಿದ್ದೇ ಇತ್ತು. ಆ ಗನ್‌ಮ್ಯಾನ್‌ಅನ್ನು ನಿಯೋಜಿಸಿದವರೇ ದಂಡು ಕಟ್ಟಿಕೊಂಡು ಬಂದು ತನ್ನನ್ನೊಂದು ದಿನ ಹೊತ್ತೊಯ್ಯುತ್ತಾರೆ ಎಂದು ಗೊತ್ತಿದ್ದೂ, ನಿರಂತರವಾಗಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಅವರು ಬಡಿದಾಡುತ್ತಾ ಬಂದರು. ಈಗ ತೀಸ್ತಾಗೆ ನ್ಯಾಯ ಸಿಗಬೇಕೆಂದು ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ.

ಇದೇ ಕರ್ನಾಟಕ ಮೂಲದ ಜುಬೇರ್ ಸಹಾ ಬಂಧಿತರಾಗಿದ್ದಾರೆ. ಜರ್ನಲಿಸಂ ಕಾಲಕಾಲಕ್ಕೆ ಅಪ್‌ಡೇಟ್ ಆಗಬೇಕಾದ ರೀತಿ ಏನು ಎಂದು ತೋರಿಸಬಹುದಾದ ಅತ್ಯುತ್ತಮ ಉದಾಹರಣೆಗಳಲ್ಲಿ ಆಲ್ಟ್ ನ್ಯೂಸ್ ಸಹಾ ಒಂದು. ಜುಬೇರ್ ಅದರ ಸ್ಥಾಪಕರಲ್ಲಿ ಒಂದು. ನೋಕಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಇಂಜಿನಿಯರ್, ಇನ್ನೊಬ್ಬ ಇಂಜಿನಿಯರ್ ಪ್ರತೀಕ್ ಸಿನ್ಹಾ ಜೊತೆ ಸೇರಿ ಆಲ್ಟ್ ನ್ಯೂಸ್‌ಅನ್ನು ಸ್ಥಾಪಿಸಿದರು. ಪ್ರತೀಕ್ ಅವರಿಗೆ ಮುಕುಲ್ ಸಿನ್ಹಾ ಎಂಬ ಕಾರ್ಮಿಕ ಮುಖಂಡನಾಗಿ ಬದಲಾದ ವಿಜ್ಞಾನಿ ತಂದೆಯ ಪರಂಪರೆಯಿತ್ತು. ಜುಬೇರ್‌ರಲ್ಲಿ ಇದ್ದದ್ದು ಹೊಸಕಾಲಕ್ಕೆ ಅಗತ್ಯವಿದ್ದ- ದ್ವೇಷ ಹಾಗೂ ಸುಳ್ಳುಗಳನ್ನು ನಿರಂತರ ಬಯಲುಗೊಳಿಸುವ- ಜರ್ನಲಿಸಂನ ಕುರಿತ ಪ್ಯಾಷನ್. ಅವರು ಹೊರತಂದ ಸಂಗತಿಗಳು ಅಷ್ಟಿಷ್ಟಲ್ಲ.

ಅಂತಹ ಜುಬೇರ್‌ಗೂ ದೇಶವೆತ್ತ ಸಾಗುತ್ತಿದೆ, ತಮಗೇನು ಕಾದಿದೆ ಎಂದು ಗೊತ್ತಿದ್ದೇ ಕೆಲವು ವಿಚಾರಗಳ ಸುತ್ತ ಎಡಬಿಡದೇ ಕೆಲಸ ಮಾಡಿದರು. ಪ್ರತೀಕ್‌ಗಿಂತ ಹೆಚ್ಚು ಇಂಟೆನ್ಸ್ ಆಗಿ ದುಡಿಯುತ್ತಾ ಹೋದರು. ’ಮುಸ್ಲಿಮನಾಗಿಯೂ’ ಇದನ್ನು ಮಾಡುವಾಗ ಇರುವ ರಿಸ್ಕ್ ಹೆಚ್ಚು ಎಂಬುದು ಗೊತ್ತಿದ್ದೂ ಬಹಳ ದೊಡ್ಡ ಸಂಗತಿಗಳನ್ನು ಬಯಲುಗೊಳಿಸಿದರು.

ಗೊತ್ತಿರಲಿ, ಇಂತಹ ನೂರಾರು ಜನರು ಈ ದೇಶದಲ್ಲಿ ಇದ್ದಾರೆ. ಸಾಕೇತ್ ಗೋಖಲೆ ಅಂತಹ ಇನ್ನೊಂದು ಉದಾಹರಣೆ. ತೀಸ್ತಾರ ಗಂಡ ಜಾವೆದ್ ಆನಂದ್ ಮತ್ತೊಂದು ಉದಾಹರಣೆ. ದೇಶದ ವಿವಿಧ ಭಾಗಗಳ ಸಂಘರ್ಷನಿರತ ಜನರನ್ನು ಒಗ್ಗೂಡಿಸುವ ಯೋಗೇಂದ್ರ ಯಾದವ್ ಮಗದೊಂದು ಉದಾಹರಣೆ. ಇವರ್‍ಯಾರೂ ಈ ಬಂಧನಗಳಿಂದ ಧೃತಿಗೆಟ್ಟಿಲ್ಲ; ಧೃತಿಗೆಡುವುದೂ ಇಲ್ಲ. ಈ ಸರ್ಕಾರವಿರುವಾಗ ಬಂಧನಕ್ಕೊಳಗಾಗುತ್ತಿರುವುದು ಎಂದರೆ, ಅದೊಂದು ದೊಡ್ಡ ಪ್ರಶಸ್ತಿ ಎಂದು ಜುಬೇರ್ ಬಂಧನದ ನಂತರ ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದೇ ಅದಕ್ಕೆ ಸಾಕ್ಷಿ.

ಹೋರಾಟ, ಪ್ರತಿರೋಧ, ಸಂಘರ್ಷ, ನ್ಯಾಯ ಇತ್ಯಾದಿಗಳು ಪ್ರಗತಿಪರ ಕಾಲಕ್ಷೇಪದ ಸಂಗತಿಯಾಗುಳಿದಿಲ್ಲ. ಅದು ಗಂಭೀರ ಪರಿಣಾಮಗಳನ್ನು ತಂದೊಡ್ಡುತ್ತಿದೆ ಮತ್ತು ಅಂತಹ ಪರಿಣಾಮಗಳ ಅರಿವಿದ್ದೇ ನ್ಯಾಯಕ್ಕಾಗಿ ದನಿಯೆತ್ತುವವರ ಸಂಖ್ಯೆಯೂ ಹೆಚ್ಚುತ್ತಿದೆ. ತೀಸ್ತಾ, ಶ್ರೀಕುಮಾರ್ ಮತ್ತು ಜುಬೇರ್ ಬಂಧನದ ನಂತರ ಈ ದೇಶ ಅಂತಹ ಸಾವಿರಾರು ಜನರನ್ನು ನೋಡಲಿದೆ.


ಇದನ್ನೂ ಓದಿ: ತೀಸ್ತಾ, ಜುಬೇರ್‌‌ ಬಂಧನ ಆತಂಕಕಾರಿ: ನೊಬೆಲ್‌ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ಮಾರಿಯಾ ಪ್ರತಿಕ್ರಿಯೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಇವರನ್ನೆಲ್ಲಾ ಬಂದಿಸಿದ್ದು ತಪ್ಪು, ಒಂದೇ ಬಾರಿ ಗಲ್ಲಿಗೆ ಹಾಕಿದರೆ ಸರಕಾರದ ಬೊಕ್ಕಸದ ಹಣ ಉಳಿಯೋದು

  2. ತೀಸ್ತಾ, ಜುಬೇರ್ ಮತ್ತು ಶ್ರೀಕುಮಾರ್, ಇವರುಗಳ ದೈರ್ಯ ಮತ್ತು ಬದ್ಧತೆಯನ್ನು ನಾವು ಮುಚ್ಚಬೇಕು ಹಾಗೂ ಅನುಸರಿಸಬೇಕು. ಇದು ಮಾತ್ರ ನಾವು ಈ ದೇಶಕ್ಕೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ನೀಡುವ ನಿಜವಾದ ಕೊಡುಗೆ.

LEAVE A REPLY

Please enter your comment!
Please enter your name here

- Advertisment -

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...

ಉಪವಾಸ ಕೊನೆಗೊಳಿಸಲು ನಿರಾಕರಿಸಿದ ಸೋನಮ್ ವಾಂಗ್‌ಚುಕ್ : 19ನೇ ದಿನವೂ ಮುಂದುವರಿದ ಸತ್ಯಾಗ್ರಹ; ಇನ್ನಷ್ಟು ಹದಗೆಟ್ಟ ಆರೋಗ್ಯ

ರಾಜಕೀಯ ನಾಯಕರು, ಬೆಂಬಲಿಗರು ಮತ್ತು ಕಾನೂನು ಮಧ್ಯಸ್ಥಿಕೆಗಳ ಮೂಲಕ ಪದೇ ಪದೇ ಮನವಿ ಮಾಡಿಕೊಂಡಿದ್ದರೂ ಸಹ, ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೊನೆಗೊಳಿಸಲು ನಿರಾಕರಿಸಿದ್ದಾರೆ. ಸರ್ಕಾರದ ಕಡೆಯಿಂದ...

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...