Homeಕರ್ನಾಟಕನಾಲ್ಕೂ ಹತ್ಯೆಗಳನ್ನು ಬೆಸೆಯುತ್ತಿರುವ ಕೊಂಡಿ ಒಂದಿದೆ!

ನಾಲ್ಕೂ ಹತ್ಯೆಗಳನ್ನು ಬೆಸೆಯುತ್ತಿರುವ ಕೊಂಡಿ ಒಂದಿದೆ!

- Advertisement -
- Advertisement -

ಗೌರಿ ಲಂಕೇಶರನ್ನು ಕೊಂದ ತಂಡವೇ ಅದಕ್ಕೂ ಮೊದಲು ಮೂರು ಜನ ಬರಹಗಾರರು-ವೈಚಾರಿಕರನ್ನು – ನರೇಂದ್ರ ದಭೋಲ್ಕರ್, ಗೋವಿಂದ ಪನ್ಸಾರೆ ಮತ್ತು ಎಂ.ಎಂ. ಕಲ್ಬುರ್ಗಿ – ಕೊಂದಿತ್ತು ಎಂಬುದು ಈಗ ಹಲವು ತನಿಖೆಗಳಿಂದ ಸಾಬೀತಾಗಿದೆ. ಗೌರಿ ಪ್ರಕರಣದಲ್ಲಿ ಕರ್ನಾಟಕದ ತನಿಖಾದಳ ನಡೆಸಿದ ತನಿಖೆಯೇ ಮಹಾರಾಷ್ಟ್ರದ ಎರಡು ಕೊಲೆಗಳ ತನಿಖೆಯಲ್ಲೂ ಲೀಡ್ ನೀಡಿದ್ದು, ಹಲವು ಬಂಧನಗಳಿಗೆ ಎಡೆ ಮಾಡಿಕೊಟ್ಟಿದ್ದು ಮತ್ತು ತಪ್ಪುದಾರಿ ಹಿಡಿದಿದ್ದ ಅಲ್ಲಿನ ತನಿಖೆಗಳನ್ನು ಸರಿದಾರಿಗೆ ತಂದದ್ದು ಸುಮಾರು ಒಂದು ವರ್ಷ ಹಳೆಯ ಸುದ್ದಿ.

ಎಲ್ಲಕ್ಕಿಂತಲೂ ಅತ್ಯಂತ ಗೋಜಲು ತನಿಖೆ ಆಗಿರುವುದು ದಭೋಲ್ಕರ್ ಅವರ ಪ್ರಕರಣದಲ್ಲಿ. ಸಿಬಿಐ ದಭೊಲ್ಕರ್ ಅವರನ್ನು ಸಾರಂಗ ಅಕೋಳ್ಕರ್ ಮತ್ತು ವಿನಯ ಪವಾರ್ ಎಂಬಿಬ್ಬರು ಸನಾತನ ಸಂಸ್ಥೆಯ ಸಾಧಕರು ಗುಂಡಿಟ್ಟರು, ಅವರಿಗೆ ಪುಣೆಯ ವೈದ್ಯ ಸನಾತನ ಸಾಧಕ ಡಾ. ವೀರೇಂದ್ರ ತಾವ್ಡೆ ನೇತೃತ್ವ ವಹಿಸಿದ್ದ ಎಂದು ಆರೋಪಪಟ್ಟಿ ಸಲ್ಲಿಸಿತ್ತು. ಇದರಲ್ಲಿ ಡಾ. ತಾವ್ಡೆ ಮಾತ್ರ ಬಂಧಿಸಲಾಗಿತ್ತು. ಆದರೆ ಗೌರಿ ಕೊಲೆ ತನಿಖೆ ಇದನ್ನು ತಲೆಕೆಳಗು ಮಾಡಿತು. ಗೌರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶರದ ಕಲಸ್ಕರ್‍ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಆತ ನರೇಂದ್ರ ದಭೋಲ್ಕರ್ ಅವರಿಗೆ ಔರಂಗಾಬಾದ್‍ನ ಸಚಿನ್ ಅಂದುರೆಯ ಒಡಗೂಡಿ ಗುಂಡಿಟ್ಟಿದ್ದಾಗಿ ಹೇಳಿದ. ಅಲ್ಲಿಗೆ ದಭೋಲ್ಕರ್ ಪ್ರಕರಣದ ಆರೋಪಪಟ್ಟಿಯೇ ತಲೆಕೆಳಗಾಯಿತು. ಶರದ್ ಕಲಸ್ಕರ್ ಮತ್ತು ಸೂರ್ಯವಂಶಿ ಎಂಬ ಮೆಕಾನಿಕ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಗಳು ಈ ಗುಂಪಿನ ರೂಪುರೇಖೆಗಳನ್ನು ಬೆಳಕಿಗೆ ಹಿಡಿಯುತ್ತವೆ. ಶರದ್ ಕಲಸ್ಕರ್ ಪಿಸ್ತೂಲುಗಳ ಜವಾಬ್ದಾರಿ ವಹಿಸಿದ್ದರೆ, ಸೂರ್ಯವಂಶಿ ಕೃತ್ಯಕ್ಕೆ ಅಗತ್ಯ ಬೇಕಾದ ಬೈಕುಗಳನ್ನು ಕಳ್ಳತನ ಮಾಡಿಕೊಡುವ ಜವಾಬ್ದಾರಿ ಹೊತ್ತಿದ್ದ. ನಾಲ್ಕೂ ಕೊಲೆಗಳಲ್ಲಿ ಇವರೀರ್ವರೂ ಈ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಮೊದಲಿಗೆ 2013ರಲ್ಲಿ ನಡೆದ ದಭೋಲ್ಕರ್ ಅವರ ಕೊಲೆಯಲ್ಲಿ ಕಲಸ್ಕರ್ ಒಂದು ಹೆಜ್ಜೆ ಮುಂದೆ ಹೋಗಿ ಶೂಟರ್ ಸಹ ಆಗಿದ್ದ. ಆತ ಅತ್ಯಂತ ಚಿತ್ರವತ್ತಾಗಿ ವರ್ಣಿಸುತ್ತಾನೆ. ತಾನು ಬೈಕ್ ಚಾಲಕನಾಗಿದ್ದು, ಹಿಂದೆ ಕೂತಿದ್ದ ಸಚಿನ್ ಅಂದುರೆ ಇಳಿದು ದಭೋಲ್ಕರ್ ಅವರತ್ತ ಗುಂಡು ಹೊಡೆಯುತ್ತಾನೆ, ಅವರು ಕುಸಿದು ಬೀಳುತ್ತಾರೆ. ಆದರೆ ಛಾನ್ಸ್ ತೆಗೆದುಕೊಳ್ಳುವುದು ಬೇಡ ಎಂದು ಕಲಸ್ಕರ್ ಸಹ ಕುಸಿದು ಬಿದ್ದ ಅವರತ್ತ ಗುಂಡು ತೂರುತ್ತಾನೆ – ಅವರ ಕಣ್ಣಿನ ಮೇಲ್ಭಾಗದ ಹಣೆಗೆ ಮತ್ತು ಎದೆಗೆ. ನಂತರ ಇಬ್ಬರೂ ಪರಾರಿಯಾಗುತ್ತಾರೆ. ಇದೇ ಆಧಾರದಲ್ಲಿ ಈ ವರ್ಷದ ಜನವರಿ-ಫೆಬ್ರವರಿಯಲ್ಲಿ ಕಲ್ಬುರ್ಗಿ ಅವರ ಕುಟುಂಬವು ಸುಪ್ರೀಂಕೋರ್ಟ್‍ನಲ್ಲಿ ತನಿಖೆಯ ಪ್ರಗತಿಯ ಬಗ್ಗೆ ಅಸಮಾಧಾನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನಾಲ್ಕೂ ಕೊಲೆಗಳನ್ನೂ ಒಂದೇ ತಂಡ ಮಾಡಿದ್ದರೆ, ಎಲ್ಲ ಪ್ರಕರಣಗಳ ತನಿಖೆ ಒಟ್ಟು ಮಾಡಿ ಕೇಂದ್ರದ ಏಜೆನ್ಸಿಯೊಂದು ನಡೆಸಬೇಕಲ್ಲವೇ, ಏಕೆ ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬಾರದೆಂದು ಕೋರ್ಟ್ ಪ್ರಶ್ನಿಸಿತ್ತು.

ಗೌರಿ ಹತ್ಯೆಯ ಆರೋಪಪಟ್ಟಿ ಈ ಕೊಲೆಗಡುಕರ ತಂಡ ರಚನೆಯಾದುದರ ಬಗ್ಗೆ ಕೂಲಂಕಷವಾಗಿ ದಾಖಲಿಸುತ್ತದೆ. ಈ ಹಿಂದೆ ಸನಾತನ ಸಂಸ್ಥೆ ಮತ್ತು ಅದರ ಅಂಗಸಂಸ್ಥೆಯಾದ ಹಿಂದೂ ಜನಜಾಗೃತಿ ಸಮಿತಿಯ ಕೆಲವು ಕಾರ್ಯಕರ್ತರು ಈ ಸಂಘಟನೆಗಳನ್ನು ತೊರೆದು, ಅವರಂತೆಯೇ ಉಗ್ರ ಹಿಂದುತ್ವ ಮತ್ತು ಅದಕ್ಕಾಗಿ ಹಿಂಸೆಗೆ ತಯಾರಿರುವ ಕೆಲವರನ್ನು ಒಟ್ಟುಗೂಡಿಸಿ ಒಂದು ಸಭೆ ನಡೆಸುತ್ತಾರೆ, 2011ರಲ್ಲಿ. ಈ ಸಭೆ ಮತ್ತು ಇಡೀ ತಂಡದ ನೇತೃತ್ವ ವಹಿಸಿದ್ದವನು ಪುಣೆಯ ಡಾ. ವೀರೇಂದ್ರ ತಾವ್ಡೆ. ಈ ಸಭೆಯಲ್ಲಿ ಭಾಗಿಯಾಗಿದ್ದ ಇತರೆ ಪ್ರಮುಖರು ಅಮೋಲ ಕಾಳೆ, ಅಮಿತ್ ದೇಗ್ವೇಕರ್, ಶರದ್ ಕಲಸ್ಕರ್, ಸಚಿನ್ ಅಂದುರೆ ಮತ್ತಿತರರು. ಇವರೆಲ್ಲರೂ ಈಗ ಬಂಧಿತರು. ಈ ಗೂಂಪಿಗೆ ಸೈದ್ಧಾಂತಿಕ ತಳಹದಿ ಹಾಕಲು, ಇವರನ್ನು ಮೋಟಿವೇಟ್ ಮಾಡಲು ಈ ಸಭೆಯಲ್ಲಿ ಛೋಟೆ ಮಹಾತ್ಮಾ, ಬಡೆ ಮಹಾತ್ಮಾ ಮತ್ತು ಬಾಬಾಜಿ ಎಂಬ ಮೂವರು ಹಿರಿಯರು ಸಹ ಪಾಲ್ಗೊಳ್ಳುತ್ತಾರೆ. ಇವರನ್ನು ಈಗ 2007ರ ಅಜ್ಮೇರ್ ದರ್ಗ ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಸುರೇಶ ನಾಯರ್, ರಾಮಜಿ ಕಲಸಂಗ್ರಾ ಮತ್ತು ಸಂದೀಪ್ ಡಾಂಗೆ ಎಂದು ಗುರುತಿಸಲಾಗಿದೆ.

ಈ ಸಭೆಯಲ್ಲಿ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಸನಾತನ ಸಂಸ್ಥೆಯ ಸ್ಥಾಪಕರಾದ ಡಾ. ಜಯಂತ ಬಾಲಾಜಿ ಅಥಾವಳೆ ಅವರು ರಚಿಸಿದ ಕ್ಷತ್ರಧರ್ಮ ಸಾಧನಾ ಎಂಬ ಕೃತಿಯ ಆಶಯದಂತೆ, ಹಿಂದೂ ರಾಷ್ಟ್ರ ನಿರ್ಮಿಸಲು ಅಡ್ಡಿಯಾಗಿರುವ “ದುರ್ಜನರನ್ನು” ಕೊಲ್ಲುತ್ತಾ ಸಾಗಬೇಕು ಎಂದು ತೀರ್ಮಾನಿಸಲಾಯಿತು. ಯಾರು ದುರ್ಜನರು? ಕ್ಷತ್ರಧರ್ಮ ಸಾಧನಾ ಪುಸ್ತಕವು ಹೀಗೆ ದುರ್ಜನರನ್ನು ಪಟ್ಟಿಮಾಡುತ್ತದೆ: ಮೊದಲಿಗೆ ನಾಸ್ತಿಕರು, ಎರಡನೆಯದು ಇತರೆ ಧರ್ಮೀಯರು, ಮೂರು ಹಿಂದೂಗಳಾಗಿದ್ದೂ ಹಿಂದೂ ಧರ್ಮ ವಿರೋಧಿಗಳು. ಇವರಲ್ಲಿ ಮೂರನೆಯ ಬಗೆ ಹಿಂದೂರಾಷ್ಟ್ರ ಸ್ಥಾಪನೆಗೆ ಅತಿ ಅಪಾಯಕಾರಿ ಎಂದು ಇವರನ್ನು ಕೊಲ್ಲುತ್ತಾ ಸಾಗುವ ನಿರ್ಣಯ ಆಗುತ್ತದೆ. ಈ ಸರಣಿಯ ಮೊದಲ ಕೊಲೆಯೆ ನರೇಂದ್ರ ದಭೋಲ್ಕರ್ ಅವರದು. ಈ ಕೊಲೆ ಮಾಡಿದ್ದು ತಾನು ಮತ್ತು ಸಚಿನ್ ಅಂದುರೆ ಎಂದು ಕಲಸ್ಕರ್ ಒಪ್ಪಿಕೊಂಡಿರುವುದು. ಇದಾದನಂತರ ಗೋವಿಂದ ಪನ್ಸಾರೆ ಮತ್ತು ಕಲ್ಬುರ್ಗಿ ಅವರ ಕೊಲೆಗಳು ನಡೆದವು. ಕಲ್ಬುರ್ಗಿ ಅವರ ಕೊಲೆಯವರೆಗೂ ಈ ತಂಡದ ನಾಯಕತ್ವ ವಹಿಸಿದ್ದವನು ಡಾ. ತಾವ್ಡೆ. ಆದರೆ ಜೂನ್ 2016ರಲ್ಲಿ ದಭೋಲ್ಕರ್ ಹತ್ಯೆಯ ತನಿಖೆ ನಡೆಸುತ್ತಿದ್ದ ಸಿಬಿಐ ಡಾ. ತಾವ್ಡೆಯನ್ನು ಬಂಧಿಸುತ್ತದೆ. ಆದರೆ ಆತನನ್ನು ಎಷ್ಟೇ ತನಿಖೆಗೊಳಪಡಿಸಿದರೂ ಆತನ ಸಹಚರರ ಬಗ್ಗೆ ಒಂದಿನಿತೂ ಮಾಹಿತಿ ದೊರೆಯುವುದಿಲ್ಲ. ಈ ಮಧ್ಯೆ ಈ ತಂಡದ ನೇತೃತ್ವ ವಹಿಸಿದ್ದ ಅಮೋಲ್ ಕಾಳೆಗೆ ಜೊತೆಯಾದವನು ಅಮಿತ್ ದೇಗ್ವೇಕರ್. ಪಿಸ್ತೂಲಿನ ನಿರ್ವಹಣೆ ಎಂದಿನಂತೆ ಶರದ್ ಕಲಸ್ಕರ್. 2015ರ ಕಲ್ಬುರ್ಗಿ ಕೊಲೆಯ ನಂತರ ಕಲಸ್ಕರ್ ಬೆಳಗಾವಿಗೇ ಶಿಫ್ಟ್ ಆಗಿದ್ದ, ಅಲ್ಲಿ ತಾನೇ ಸ್ವತಃ ನಾಡಪಿಸ್ತೂಲನ್ನು ತಯಾರಿಸುವ ಪ್ರಯತ್ನ ಸಹ ನಡೆಸಿದ್ದ. ಅಮೋಲ ಕಾಲೆಯ ನೇತೃತ್ವದ ಗುಂಪು ಗೌರಿಯ ಕೊಲೆ ಮಾಡಿತಲ್ಲದೆ ಪ್ರೊ. ಭಗವಾನ್ ಅವರ ಕೊಲೆಗೆ ಸಂಚು ರೂಪಿಸಿತ್ತು.

ಇದಲ್ಲದೆ ನಾಲ್ಕೂ ಕೊಲೆಗಳನ್ನು ಹಣೆಯುವುದು ಹತ್ಯೆಗೆ ಬಳಸಿದ ಬಂದೂಕು. ಒಂದು ಪಿಸ್ತೂಲು ನಾಲ್ಕೂ ಕೊಲೆಗಳಲ್ಲಿ ಬಳಕೆಯಾಗಿದೆ. ದಭೊಲ್ಕರ್ ಮತ್ತು ಪನ್ಸಾರೆ ಕೊಲೆಗಳಲ್ಲಿ ಎರಡು ಪಿಸ್ತೂಲುಗಳನ್ನು ಬಳಸಲಾಗಿದ್ದು, ಎರಡನೆಯ ಪಿಸ್ತೂಲು ಎರಡೂ ಕೊಲೆಗಳಲ್ಲಿ ಬಳಕೆಯಾಗಿದೆ. ಅಲ್ಲಿಗೆ ಈ ನಾಲ್ಕೂ ಕೊಲೆಗಳನ್ನು ಈ ಎರಡು ಪಿಸ್ತೂಲುಗಳನ್ನು ಹೊಂದಿದ್ದವರೇ ಮಾಡಿದ್ದಾರೆ ಎಂಬುದು ಸ್ಪಷ್ಟ. ಈಗ ಸಿಬಿಐ, ಕರ್ನಾಟಕ ಮತ್ತು ಮಹಾರಾಷ್ಟ್ರ ಪೋಲೀಸರು ಬೆನ್ನು ಬಿದ್ದಿರುವುದು ಈ ಎರಡು ಪಿಸ್ತೂಲುಗಳನ್ನು ಪತ್ತೆ ಮಾಡಲು. ಒಂದೊಮ್ಮೆ ಈ ಪಿಸ್ತೂಲುಗಳನ್ನು ಪತ್ತೆ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯವು ಈ ಪಿಸ್ತೂಲುಗಳಿಂದಲೇ ಈ ನಾಲ್ವರನ್ನೂ ಕೊಂದ ಗುಂಡುಗಳು ಹಾರಿದವು ಎಂದು ವರದಿ ನೀಡಿದರೆ ಕೇಸು ಬಿಗಿಯಾಗುತ್ತವೆ. ಈ ಪಿಸ್ತೂಲುಗಳು ಈಗ ಎಲ್ಲಿವೆ?

ಅದನ್ನೂ ಶರದ್ ಕಲಸ್ಕರನೇ ಹೇಳಿದ್ದಾನೆ. ಮೇ-ಜೂನ್ 2018ರಲ್ಲಿ ಅಮೋಲ್ ಕಾಳೆ ಮತ್ತು ಅಮಿತ್ ದೇಗ್ವೇಕರ್ ಬಂಧನವಾಗುತ್ತಿದ್ದಂತೆ, ಉಳಿದವರು ಆತಂಕಕ್ಕೀಡಾಗುತ್ತಾರೆ, ವಿಶೇಷವಾಗಿ ಪಿಸ್ತೂಲುಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಕಲಸ್ಕರ್. ಹೀಗಿರಲು ಹಿಂದೂ ಜನಜಾಗೃತಿ ಸಮಿತಿಯ ಅಂಗ ಸಂಸ್ಥೆಯೇ ಆದ ಹಿಂದೂ ವಿಧಿಧಿನ್ಯ ಪರಿಷದ್‍ನ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಈ ನಾಲ್ಕೂ ಕೊಲೆ ಪ್ರಕರಣಗಳಲ್ಲಿ ಎಲ್ಲ ಆರೋಪಿಗಳ ಅಡ್ವೋಕೇಟ್ ಆಗಿದ್ದ ಸಂಜೀವ ಪುಣಲೇಕರ್ ತನ್ನನ್ನು ಆತನ ಕಛೇರಿಗೆ ಕರೆದು ಹತ್ಯೆಗಳಿಗೆ ಬಳಸಿದ ಪಿಸ್ತೂಲುಗಳನ್ನು ನಾಶಪಡಿಸಲು ಆದೇಶಿಸಿದ್ದಾಗಿ ಕಲಸ್ಕರ್ ಹೇಳಿಕೆ ನೀಡಿದ್ದಾನೆ. ಇದರಂತೆ ಪ್ರಕರಣದ ಮತ್ತೊಬ್ಬ ಆರೋಪಿ ವೈಭವ ರಾವತ್‍ನ ಒಡಗೂಡಿ ಜುಲೈ 23, 2018ರಂದು ರಾತ್ರಿ ಸುಮಾರು 9:30 ಗಂಟೆಗೆ ಮುಂಬೈ ಬಳಿಯ ಉಲ್ಹಾಸ್ ನದಿಯ ವಾಸೈಕ್ರೀಕ್‍ಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಮೇಲಿಂದ ಐದು ಪಿಸ್ತೂಲುಗಳನ್ನು ಬಿಡಿಭಾಗಗಳಾಗಿ ಬೇರ್ಪಡಿಸಿ ಎಸೆದುದಾಗಿ ಹೇಳಿಕೆ ನೀಡಿದ್ದಾನೆ. ಈ ಐದು ಪಿಸ್ತೂಲುಗಳಲ್ಲಿ ಹತ್ಯೆಗಳಿಗೆ ಬಳಸಲಾದ ಎರಡು ಪಿಸ್ತೂಲುಗಳೂ ಸೇರಿವೆ.

ಈ ಘಟನೆ ನಡೆದು ಸುಮಾರು ಒಂದು ವರ್ಷ ಸಂದಿದೆ. ಆದರೆ ಏಜೆನ್ಸಿಗಳಿಗೆ ಈಗಲೂ ಪಿಸ್ತೂಲುಗಳ ಈ ಬಿಡಿ ಭಾಗಗಳು ಈ ಕ್ರೀಕ್‍ನ ತಳದಲ್ಲಿ ಹುದುಗಿರಬಹುದೆಂಬ ಆಶಾವಾದ. ಮಧ್ಯಪ್ರಾಚ್ಯ ಮೂಲದ ಕಂಪೆನಿಯೊಂದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಈ ನದಿಯ ತಳವನ್ನು ಕೆದಕಿ, ಪಿಸ್ತೂಲಿನ ಬಿಡಿ ಭಾಗಗಳಿದ್ದರೆ ಹೆಕ್ಕಿ ಕೊಡುವುದಾಗಿ ಹೇಳಿದ್ದು ಈ ಕಂಪೆನಿಗೆ ಈ ರೀತಿ ಪಿಸ್ತೂಲನ್ನು ಸಮುದ್ರದಿಂದಲೂ ಹೆಕ್ಕಿ ತಂದ ಇತಿಹಾಸವಿದೆ. ಪಿಸ್ತೂಲುಗಳು ಕಬ್ಬಿಣದಿಂದ ಮಾಡಿರುವುದರಿಂದ ಅವು ಭಾರವಾಗಿದ್ದು, ನೀರಿನಲ್ಲಿ ಕೊಚ್ಚಿಹೋಗದೆ ನದಿಯ ತಳದಲ್ಲಿ ಹೋಗಿ ನಿಧಾನಕ್ಕೆ ಹುದುಗಿಹೋಗಿರಬಹುದೆಂಬುದು ಅಂದಾಜು. ಈ ಕಂಪೆನಿಯು ಸೇತುವೆಯ ಬಳಿಯಿಂದ ಒಂದು ಸುತ್ತಳತೆಯನ್ನು ಸರ್ಚ್ ಏರಿಯಾ ಎಂದು ಗುರುತಿಸಿಕೊಂಡು ತಂತ್ರಜ್ಞಾನದ ಸಹಾಯದಿಂದ ಈ ಭಾಗದ ನದಿತಳದ 100 ಅಡಿ ಆಳದವರೆಗೂ ಒಂದು ಪ್ರೊಫೈಲ್ ಅನ್ನು ಸೃಷ್ಟಿಸಿ, ಅನುಮಾನ ಬಂದ ಜಾಗೆಯಲ್ಲಿ ಹೂಳೆತ್ತುವಂತೆ ನದಿತಳವನ್ನು ಬಗೆದು ದಡದ ಮೇಲೆ ಹಾಕಿ ಈ ಭಾಗಗಳಿಗಾಗಿ ತಡಕಾಡುತ್ತದೆ. ಈ ಇಡೀ ಪ್ರಕ್ರಿಯೆಗೆ ಒಂದು ಕೋಟಿಗೂ ಹೆಚ್ಚು ವ್ಯಯವಾಗುವ ನಿರೀಕ್ಷೆ ಇದೆ. ಈ ಖರ್ಚನ್ನು ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ಭರಿಸಲು ಒಪ್ಪಿಕೊಂಡಿವೆ. ಈ ಕೆಲಸ ಬಹುಶಃ ಈ ತಿಂಗಳಾಂತ್ಯದ ವೇಳೆಗೆ ಶುರುವಾಗಲಿದೆ. ಪಿಸ್ತೂಲಿನ ಈ ಬಿಡಿ ಭಾಗಗಳು ದೊರೆತರೆ ಈ ನಾಲ್ಕು ಕೊಲೆ ಪ್ರಕರಣಗಳ ಬಂಧ ಇನ್ನೂ ಬಿಗಿಯಾಗಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...