ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಡಗಿಗೆ ಆಗಮಿಸಿದ್ದ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆದು ಸಿಕ್ಕಿಬಿದ್ದಿರುವ ಆರೋಪಿ ಸಂಪತ್, ಯಾವ ಪಕ್ಷದವನು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಆತ ಬಿಜೆಪಿ ಕಾರ್ಯಕರ್ತ ಎಂಬ ಆರೋಪಗಳಿವೆ. ಆದರೆ ಆರೋಪಿ ನೀಡುತ್ತಿರುವ ಹೇಳಿಕೆಗಳು ಗೊಂದಲಕಾರಿಯಾಗಿವೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಆತನ ಫೋಟೋಗಳು ಸಂಶಯಗಳಿಗೆ ಎಡೆಮಾಡಿಕೊಟ್ಟಿವೆ.
ಆರೋಪಿ ಸಂಪತ್ ಆರ್ಎಸ್ಎಸ್/ಬಿಜೆಪಿಯವನೋ, ಕಾಂಗ್ರೆಸ್ ಪಕ್ಷದವನೋ ಅಥವಾ ಜೆಡಿಎಸ್ಗೆ ಸೇರಿದವನೋ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
“ನಾನು ಕೂಡ ಕಾಂಗ್ರೆಸ್ ಕಾರ್ಯಕರ್ತ” ಎಂದು ಸಂಪತ್ ಹೇಳಿದ ಬಳಿಕ ಆತನ ಹಳೆಯ ಫೋಟೋಗಳು ಹರಿದಾಡಿದವು. ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಅವರ ಜೊತೆ ಕೇಸರಿ ಶಾಲು ಧರಿಸಿ ಆತ ನಿಂತಿರುವ ಫೋಟೋವನ್ನು ಸ್ವತಃ ಸಿದ್ದರಾಮಯ್ಯನವರೇ ಹಂಚಿಕೊಂಡರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ BJP Karnataka ಶಾಸಕ ಅಪ್ಪಚ್ಚು ರಂಜನ್ ರಾತೋರಾತ್ರಿ ಪೊಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಬಂದಿದ್ದು ಯಾಕೆ? ಕಾಂಗ್ರೆಸ್ನವನೆಂದು ಹೇಳಿಕೊಂಡರೆ ಮಾತ್ರ ಪೊಲೀಸರಿಂದ ಬಿಡಿಸ್ತೇನೆ ಎಂದು ಷರತ್ತು ಹಾಕಿ ಬಿಡುಗಡೆ ಮಾಡಿದಿರಾ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
“’ಆಪರೇಷನ್ ಕಮಲ’ ಎಂದರೆ ಶಾಸಕರಿಗೆ ಮಾತ್ರ ಎಂದು ತಿಳಿದುಕೊಂಡಿದ್ದೆವು. ಈಗ ಬೀದಿ ಪುಂಡರ ‘ಆಪರೇಷನ್ ಕಮಲ’ ಕೂಡಾ ಬಿಜೆಪಿ ನಡೆಸುತ್ತದೆ ಎಂದು ಮಡಿಕೇರಿಯಲ್ಲಿ ಸಾಬೀತಾಗಿದೆ. ಬಿಜೆಪಿಯ ಇಂತಹ ನಾಟಕಗಳೆಲ್ಲ ಹಳತಾಗಿದೆ. ಮೊಟ್ಟೆ ಎಸೆದವ ಕಾಂಗ್ರೆಸ್ ಪಕ್ಷದವನಾಗಿದ್ದರೆ ಅವನನ್ನು ಮೊದಲು ಜೈಲಿಗೆ ಕಳಿಸಿ. ನಿಮಗ್ಯಾಕೆ ಅವನ ಹಿತರಕ್ಷಣೆಯ ಉಸಾಬರಿ?” ಎಂದು ಕೇಳಿದರು.
ಮೊಟ್ಟೆ ಹೊಡೆದಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೊಟ್ಟೆ ಹೊಡೆದ ಕಿಡಿಗೇಡಿ ಕಾಂಗ್ರೆಸ್ ಕಾರ್ಯಕರ್ತ ಎಂದು ಬಿಜೆಪಿಯ ಹಲವರು ಪ್ರತಿಪಾದಿಸಿದರು. ಆರೋಪಿ ಸಂಪತ್ ಕಾಂಗ್ರೆಸ್ ಬಾವುಟ ಹಿಡಿದಿರುವ ಫೋಟೋ ಬಿಡುಗಡೆ ಮಾಡಿದರು. ಆದರೆ ಶನಿವಾರ ಬೆಳಿಗ್ಗೆ ಮಡಿಕೇರಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ, “ಮೊಟ್ಟೆ ಹೊಡೆದ ಕಿಡಿಗೇಡಿ ಬಿಜೆಪಿ ಪಕ್ಷದ ಕಾರ್ಯಕರ್ತ” ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರೊಂದಿಗೆ ಸಂಪತ್ ಇರುವ ಫೋಟೋಗಳನ್ನು ಬಿಡುಗಡೆ ಮಾಡಿದರು.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಅಪ್ಪಚ್ಚು ರಂಜನ್, “ಈತ ಯಾರು ಎನ್ನುವುದೇ ಗೊತ್ತಿಲ್ಲ, ಆತನ ಪರಿಚಯವೂ ಇಲ್ಲ. ಆದರೆ ಕಾರ್ಯಕರ್ತರನ್ನು ವಿಚಾರಿಸಿದಾಗ ಅವನು ರಾಮನವಮಿಯಲ್ಲಿ ನಿಮ್ಮೊಂದಿಗೆ ಕೇಸರಿ ಶಲ್ಯ ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದ ಎಂದು ತಿಳಿದುಬಂದಿತು” ಎಂದಿದ್ದಾರೆ.
ಇಷ್ಟರ ನಡುವೆ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮತ್ತೊಂದು ಟ್ವೀಟ್ ಮಾಡಲಾಗಿದ್ದು, ಆರ್ಎಸ್ಎಸ್ ಜೊತೆಗೆ ಸಂಪತ್ನ ಸಂಪರ್ಕ ಇತ್ತೆಂದು ಪ್ರತಿಪಾದಿಸಲಾಗಿದೆ. “ಆರ್ಎಸ್ಎಸ್ ಶಿಬಿರದಲ್ಲಿ ಸಂತೋಷ್ ಪಾಲ್ಗೊಂಡಿದ್ದಾನೆ” ಎಂದು ಕಾಂಗ್ರೆಸ್ ಹೇಳಿದೆ.
“ಬಿಜೆಪಿ ಮತ್ತು ಆರ್ಎಸ್ಎಸ್ ತನ್ನ ಅಜೆಂಡಾ ಸ್ಥಾಪಿಸಲು ತಮ್ಮಲ್ಲಿನ ಮುಗ್ದ ಕಾರ್ಯಕರ್ತರಿಗೆ ಯಾವ ವೇಷವನ್ನು ಬೇಕಿದ್ದರೂ ಹಾಕಿ ಕಳಿಸುತ್ತವೆ. ಯಾವ ಕೃತ್ಯಗಳನ್ನು ಬೇಕಿದ್ದರೂ ಮಾಡಿಸುತ್ತವೆ, ಅವರನ್ನೇ ಕೊಂದು ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತವೆ. ಆರ್ಎಸ್ಎಸ್ ‘ಪ್ಯಾಂಟು’ ತೊಟ್ಟವನಿಗೆ ಕಾಂಗ್ರೆಸ್ ವೇಷ ತೋಡಿಸಿದ ಮಾತ್ರಕ್ಕೆ ಕಾಗೆ ನವಿಲಾಗುತ್ತದೆಯೇ?” ಎಂದು ಕಾಂಗ್ರೆಸ್ ಕುಟುಕಿದೆ.
ಬಿಜೆಪಿ & RSS ತನ್ನ ಅಜೆಂಡಾ ಸ್ಥಾಪಿಸಲು ತಮ್ಮಲ್ಲಿನ ಮುಗ್ದ ಕಾರ್ಯಕರ್ತರಿಗೆ ಯಾವ ವೇಷವನ್ನು ಬೇಕಿದ್ದರೂ ಹಾಕಿ ಕಳಿಸುತ್ತವೆ, ಯಾವ ಕೃತ್ಯಗಳನ್ನು ಬೇಕಿದ್ದರೂ ಮಾಡಿಸುತ್ತವೆ, ಅವರನ್ನೇ ಕೊಂದು ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತವೆ.
RSS 'ಪ್ಯಾಂಟು' ತೊಟ್ಟವನಿಗೆ ಕಾಂಗ್ರೆಸ್ ವೇಷ ತೋಡಿಸಿದ ಮಾತ್ರಕ್ಕೆ ಕಾಗೆ ನವಿಲಾಗುತ್ತದೆಯೇ?! pic.twitter.com/88tLhMNeGN
— Karnataka Congress (@INCKarnataka) August 20, 2022
ಇಷ್ಟೆಲ್ಲದರ ನಡುವೆ ಸಂತೋಷ್ ಮೂಲತಃ ಜೆಡಿಎಸ್ನವನು ಎಂದು ಹೇಳಲಾಗುತ್ತಿದೆ.
ಟಿ.ವಿ.9 ಕನ್ನಡ ಸುದ್ದಿವಾಹಿನಿಯ ಜೊತೆ ಮಾತನಾಡಿರುವ ಆರೋಪಿ ಸಂತೋಷ್, “ನನಗೆ ಹೆದರಿಕೆಯೇನೂ ಆಗುತ್ತಿಲ್ಲ. ಆದರೆ ಈಗ ಬೆದರಿಕೆ ಕರೆಗಳು ಬರುತ್ತಿವೆ. ನನ್ನ ಮನೆಗೆ ಬೆಂಕಿ ಇಡುವುದಾಗಿ, ಬಸ್ಸ್ಟ್ಯಾಂಡ್ನಲ್ಲಿ ನಿಲ್ಲಿಸಿ ಮೊಟ್ಟೆ ಸ್ನಾನ ಮಾಡಿಸುವುದಾಗಿ ಹೇಳುತ್ತಿದ್ದಾರೆ” ಎಂದು ಆರೋಪಿಸಿದ್ದಾನೆ.
“ನೀವು ನಿಜವಾಗಿಯೂ ಯಾವ ಪಕ್ಷದವರು? ಜೆಡಿಎಸ್ನಲ್ಲಿದ್ದ ಜೀವಿಜಯ ಅವರ ಅನುಯಾಯಿ ಎಂದೂ ನೀವು ಹೇಳಿಕೊಂಡಿದ್ದೀರಿ? ನೀವು ನಿಜಕ್ಕೂ ಯಾವ ಪಕ್ಷದವರು?” ಎಂದು ಟಿ.ವಿ.9 ಪ್ರತಿನಿಧಿ ಕೇಳಿದಾಗ, “ನಾನು ಜೆಡಿಎಸ್. ಮೂಲತಃ ನಾನು ಮೊದಲು ಜೆಡಿಎಸ್ನಲ್ಲಿದ್ದೆ. ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಜೊತೆಯಾಗಿ ಸ್ಪರ್ಧೆ ಮಾಡಿದವು. ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಲು ಹೇಳಿದರು. ಆಗ ನಾನು ಕಾಂಗ್ರೆಸ್ಗೆ ಕೆಲಸ ಮಾಡಿದ್ದೇನೆ. ನಂತರ ಪಟ್ಟಣ ಪಂಚಾಯಿತಿ ಚುನಾವಣೆ ಬಂತು. ಹನ್ನೊಂದು ವಾರ್ಡ್ಗಳಲ್ಲಿ ಐದು ವಾರ್ಡ್ ಜೆಡಿಎಸ್ಗೆ ಮೀಸಲಾದವು. ನನ್ನ ವಾರ್ಡ್ ಕಾಂಗ್ರೆಸ್ಗೆ ಸೀಮಿತವಾಯ್ತು. ಕಾಂಗ್ರೆಸ್ಗಾಗಿ ಕೆಲಸ ಮಾಡಿದ್ದೇನೆ. ಯಾರೂ ಇರಲಿಲ್ಲ. ಕಾಂಗ್ರೆಸ್ನವರು ಒಬ್ಬರೇ ಒಬ್ಬರು ಬಂದಿಲ್ಲ” ಎಂದಿದ್ದಾನೆ.
ಇದನ್ನೂ ಓದಿರಿ: ಸಕಲೇಶಪುರ: ದನ ಸಾಗಿಸುತ್ತಿದ್ದಾನೆಂದು ದಲಿತ ಮುಖಂಡನ ಮೇಲೆ ಬಜರಂಗದಳದ ದುಷ್ಕರ್ಮಿಗಳಿಂದ ಹಲ್ಲೆ
ಕೇಸರಿ ವಸ್ತ್ರ ಧರಿಸಿ ಹಲವು ಕಾರ್ಯಕ್ರಮಗಳಲ್ಲಿ ಆತ ಭಾಗಿಯಾಗಿದ್ದಾನೆಂದು ಪ್ರತಿಪಾದಿಸಿದ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ಅವರು ಫೇಸ್ಬುಕ್ನಲ್ಲಿ, “ಈ ಮೊಟ್ಟೆಯ ಸಂಪತ್, ರಂಜನ್ ಅವರನ್ನು ಅಪ್ಪಚ್ಚಿ ಮಾಡಿಬಿಟ್ಟಿದ್ದಾನೆ” ಎಂಬ ಶೀರ್ಷಿಕೆಯೊಂದಿಗೆ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹೀಗೆ ಆರೋಪಿ ಸಂಪತ್ ಸುತ್ತ ಹಲವು ಸುದ್ದಿಗಳು ಹುಟ್ಟಿಕೊಂಡಿವೆ. ಆತ ಮೂಲತಃ ಆರ್ಎಸ್ಎಸ್ಸೋ/ಬಿಜೆಪಿಯೋ, ಕಾಂಗ್ರೆಸ್ಸೋ, ಜೆಡಿಎಸ್ಸೋ ಎಂಬ ಗೊಂದಲಗಳು ಹುಟ್ಟಿಕೊಂಡಿವೆ. ಆದರೆ ದುಷ್ಕೃತ್ಯ ನಡೆಸಿ ಆತ ಪೇಚಿಗೆ ಸಿಲುಕಿರುವುದಂತೂ ಮೇಲು ನೋಟಕ್ಕೆ ಸ್ಪಷ್ಟವಾಗುತ್ತಿದೆ.