ತನ್ನ ಮನೆಗೆ ವಾಹನದಲ್ಲಿ ಕರುವನ್ನು ತೆಗೆದುಕೊಂಡು ಹೋಗುತ್ತಿದ್ದ ದಲಿತ ಯುವ ಮುಖಂಡನ ಮೇಲೆ ಬಜರಂಗದಳ ಕಾರ್ಯಕರ್ತರು ಸಕಲೇಶಪುರ ಪಟ್ಟಣದ ಹೊಸ ಬಸ್ ನಿಲ್ದಾಣ ಬಳಿ ಹಲ್ಲೆ ನಡೆಸಿದ್ದಾರೆ ಎಂದು ‘ವಾರ್ತಾಭಾರತಿ’ ವರದಿ ಮಾಡಿದೆ.
ಹಲಸುಲಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯರಾಗಿರುವ ಮಂಜುನಾಥ್ ಮೇಲೆ ಬಜರಂಗದಳದ ಕಾರ್ಯಕರ್ತ ದೀಪು ಹಾಗೂ ಇತರರು ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿರುವುದಾಗಿ ವರದಿ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹಲ್ಲೆಗೆ ಒಳಗಾದ ಮಂಜುನಾಥ್ ಸಕಲೇಶಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬಜರಂಗದಳದ ದುಷ್ಕರ್ಮಿಗಳು ಈತನ ಅಣ್ಣನ ಮಗ ಕಾವೇಶ್ ಮೇಲೆಯೂ ಹಲ್ಲೆಗೆ ಮುಂದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಮಂಜುನಾಥ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, “ಹೊಸ ಬಸ್ ನಿಲ್ದಾಣದ ಬಳಿ ಒಬ್ಬ ಹುಡುಗ ಬಂದನು. ನಾನು ಬಜರಂಗದಳದವನು. ಲೆಟರ್ ಕೊಡು ಎಂದು ಕೇಳಿದನು. ಅದಕ್ಕೆ ನಾನು,- ಲೆಟರ್ ಕೇಳಲು ನೀನ್ಯಾರಪ್ಪ? ಪೊಲೀಸರು ಬಂದರೆ ಕೊಡುತ್ತೇನೆ. ನಿನಗೇನಾದರೂ ಸರ್ಕಾರ ಪರವಾನಗಿ ನೀಡಿದೆಯಾ? ಬೇರೆ ಏನಾದರೂ ಕೊಟ್ಟಿದೆಯಾ? ನೀನು ಎ.ಸಿ.ಯ, ಡಿ.ಸಿ.ಯ, ತಹಸೀಲ್ದಾರಾ? ಲೆಟರ್ ಕೇಳಲು ನೀನ್ಯಾರು? ಪೊಲೀಸರನ್ನು ಕರೆದುಕೊಂಡು ಬಾ- ಎಂದೆ. ನಾನು ನಿಮ್ಮ ಅಪ್ಪ ಎಂದು ಬೈದನು. ಬಾಯಿ ಬಂದಂತೆ ಹೀಯಾಳಿಸಿ, ನನಗೆ ಹೊಡೆದ” ಎಂದು ವಿವರಿಸಿದ್ದಾರೆ.
“ಆಟೋ ಹುಡುಗರೆಲ್ಲ ಬಂದರು. ಆ ಮೇಲೆ ನನ್ನನ್ನು ಬಿಟ್ಟು ಹೋಗಲಾಯಿತು. ನನ್ನ ಮನಸ್ಸಿಗೆ ತುಂಬಾ ಬೇಜಾರಾಗಿದೆ. ನಾನು ಮಾಜಿ ಗ್ರಾಪಂ ಅಧ್ಯಕ್ಷ. ನಾಲ್ಕೂರು ಜನರಿಗೆ ಅನುಕೂಲವಾಗುವಂತೆ ಕಾನೂನುಬದ್ಧವಾಗಿ ಕೆಲಸ ಮಾಡುತ್ತೇನೆ. ಯಾರಿಗೂ ತೊಂದರೆ ಮಾಡಿಲ್ಲ. ನನಗೆ ತೊಂದರೆ ನೀಡಿದ ಈತನಿಗೆ ತಕ್ಕ ಶಿಕ್ಷೆಯಾಗಬೇಕು. ಈ ರೀತಿಯ ಕಿಡಿಗೇಡಿಗಳನ್ನು ಬಜರಂಗದಳದಲ್ಲಿ ಇಟ್ಟುಕೊಳ್ಳಬೇಡಿ” ಎಂದಿದ್ದಾರೆ.
“ಅವನು ನೋಡಲು ಟೆರರಿಸ್ಟ್ ಥರ ಇದ್ದಾನೆ. ಅವನ ಮೂಲ ಯಾವುದೆಂದು ಕಂಡುಹಿಡಿಯಬೇಕು. ಅವನನ್ನು ಗಡಿಪಾರು ಮಾಡಬೇಕು. ನಾವು ನಮ್ಮ ತಾತ, ಮುತ್ತಾತನನ ಕಾಲದಿಂದಲೂ ಇಲ್ಲಿ ವಾಸವಿದ್ದೇವೆ. ನಮಗೆ ಬೆಲೆ ಇಲ್ಲ ಎಂದ ಮೇಲೆ ಈ ರೀತಿಯ ಟೆರರಿಸ್ಟ್ಗಳಿಗೆ ಬೆಲೆ ಕೊಡುವುದೇ? ಆತನನ್ನು ಗಡಿಪಾರು ಮಾಡಿ ನನಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಹೋರಾಟ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.
ವಾಹನದಲ್ಲಿ ಕಾನೂನಾತ್ಮಕವಾಗಿ ಕರು ಸಾಗಿಸುತ್ತಿದ್ದ ಸಂದರ್ಭದಲ್ಲಿ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಕಲೇಶಪುರ ತಾಲೂಕಿನ ವಿವಿಧ ದಲಿತ ಸಂಘಟನೆ ಮುಖಂಡರು ಠಾಣೆ ಎದುರು ಜಮಾಯಿಸಿ, ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಕಾಂಗ್ರೆಸ್ ಹಾಗೂ ದಲಿತ ಮುಖಂಡ ಬೈಕೆರೆ ದೇವರಾಜ್, “ಬಜರಂಗದಳದ ಕಾರ್ಯಕರ್ತರ ಅಟ್ಟಹಾಸ ತಾಲ್ಲೂಕಿನಲ್ಲಿ ದಿನೇದಿನೇ ಹೆಚ್ಚಾಗುತ್ತಿದೆ. ನಾವ್ಯಾರೂ ಹಿಂದೂಗಳಲ್ಲವಾ? ಅವರು ಮಾತ್ರ ಹಿಂದೂಗಳಾ” ಎಂದು ಪ್ರಶ್ನಿಸಿದ್ದಾರೆ.
“ದಲಿತರು ಮೌನವಾಗಿದ್ದಾರೆ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಎಂದು ತಿಳಿದಿದ್ದರೆ ಅದು ತಪ್ಪು. ದಲಿತರು ಬೀದಿಗಿಳಿದರೆ ಇದರ ಪರಿಣಾಮ ಏನಾಗುತ್ತದೆ ಎಂಬುದನ್ನು ಈ ಬಜರಂಗದಳದ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು. ನಿಮ್ಮ ಪುಂಡಾಟಿಕೆಯನ್ನು ದಲಿತರು ಇನ್ನು ಸಹಿಸಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿರಿ: ಮಧ್ಯಪ್ರದೇಶ: ಬ್ರಾಹ್ಮಣರ ವಿರುದ್ಧ ವಿವಾದಾತ್ಮಕ ಹೇಳಿಕೆ; ಪ್ರೀತಂ ಸಿಂಗ್ ಲೋಧಿ ಬಿಜೆಪಿಯಿಂದ ಉಚ್ಚಾಟನೆ
ವಕೀಲರಾದ ವೇಣುಕುಮಾರ್ ಮಾತನಾಡಿ, “ತಾಲೂಕಿನ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದು ಬಜರಂಗದಳದ ಕೃತ್ಯಗಳನ್ನು ನಾವು ಖಂಡಿಸುತ್ತೇವೆ. ಮತೀಯ ಗೂಂಡಾಗಿರಿ ನಡೆಸಲು ಸರಕಾರ ಇವರಿಗೆ ಯಾವ ಹಕ್ಕು ನೀಡಿದೆ?” ಎಂದು ಪ್ರಶ್ನಿಸಿರುವ ಅವರು, “ಪೊಲೀಸರು ದುಷ್ಕರ್ಮಿಗಳನ್ನು ಈ ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
“ನಾವು ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಗಳು. ಶಾಂತಿಗೆ ಭಂಗ ತರುವುದಕ್ಕೆ ನಾವು ಇಷ್ಟಪಡುವುದಿಲ್ಲ. ಆದರೆ ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಾವು ಸುಮ್ಮನಿರುವುದಿಲ್ಲ” ಎಂಬ ಸ್ಪಷ್ಟ ಸಂದೇಶವನ್ನು ಅವರು ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಹಲವು ದಲಿತ ಮುಖಂಡರು ಪಾಲ್ಗೊಂಡಿದ್ದರು.
ಬಜರಂಗ ದಳದ ಈ ಗೂಂಡಾಗಿರಿ ಕಂಡನಾರ್ಹ.
Jagrutaragi
Ondagiri
ಹಲ್ಲೆ ನಡೆಸಿದ ಬಜರಂಗಿ ದಳದ ಬೇವರ್ಸಿಗಳಿಗೆ ಅವರದೇ ಭಾಷೆಯಲ್ಲಿ ದಲಿತರು ಸಹ ತಿರುಗೇಟು ಮುಟ್ಟಿನೋಡಿಕೊಳ್ಳುವ ಹಾಗೆ ನೀಡಬೇಕು ,ಆಗ ಉಷಾರಾಗುತ್ತಾರೆ.