Homeಕರ್ನಾಟಕಬೆಂಗಳೂರು: ಖಾಸಗಿ ವಿವಿಗೆ ನೀಡಿರುವ ಭೂಮಿ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು: ಖಾಸಗಿ ವಿವಿಗೆ ನೀಡಿರುವ ಭೂಮಿ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

- Advertisement -
- Advertisement -

ಖಾಸಗಿ ವಿದ್ಯಾಸಂಸ್ಥೆಯಾದ ಚಾಣಕ್ಯ ವಿವಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನಲ್ಲಿ 116 ಎಕರೆ ಭೂಮಿ ನೀಡಿರುವುದನ್ನು ಸರ್ಕಾರ ಈ ಕೂಡಲೇ ರದ್ದು ಮಾಡಬೇಕು ಎಂದು ಸಿಪಿಐಎಂನ ರಾಜ್ಯ ಸಮಿತಿ ಸದಸ್ಯ ಜಿ.ಸಿ.ಬೈಯ್ಯಾರೆಡ್ಡಿ ಒತ್ತಾಯಿಸಿದರು.

ಚಾಣಕ್ಯ ಖಾಸಗಿ ವಿವಿಗೆ ಅಕ್ರಮವಾಗಿ ನೀಡಿರುವ ಭೂಮಿ ರದ್ದತಿಗಾಗಿ ಕಾನೂನು ಉಲ್ಲಂಘನೆ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಾರ್ಕ್ಸ್‌ ವಾದಿ ಕಮ್ಯುನಿಸ್ಟ್ ಪಕ್ಷದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ಬಳಿ 2019ರಲ್ಲಿ ಕೆಐಎಡಿಬಿ ರೈತರ ಫಲವತ್ತಾದ 1300 ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದೆ. ಅದರಲ್ಲಿ 116 ಎಕರೆ ಭೂಮಿಯನ್ನು ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಅಂದಿನ ಸರ್ಕಾರ ಚಾಣಕ್ಯ ವಿಶ್ವವಿದ್ಯಾಲಯ ಎಂಬ ಖಾಸಗಿ ಸಂಸ್ಥೆಗೆ ಅತೀ ಕಡಿಮೆ ದರದಲ್ಲಿ ನೀಡಿದೆ. ಇದರಿಂದ ಸರ್ಕಾರಕ್ಕೆ ₹250 ಕೋಟಿ ನಷ್ಟ ಉಂಟಾಗಿದೆ ಎಂದು ಆರೋಪಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದೊಂದು ದೊಡ್ಡ ಹಗರಣವಾಗಿದ್ದು, ಇದನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯಾದಾದ್ಯಂತ ಈ ರೀತಿಯ ಪ್ರಕರಣಗಳು ಹಲವಾರು ಬೆಳಕಿಗೆ ಬಂದಿದ್ದು ಈ ಹೋರಾಟವನ್ನು ರಾಜ್ಯವ್ಯಾಪಿ ವಿಸ್ತರಣೆ ಮಾಡುತ್ತೇವೆ ಎಂದು ಗುಡುಗಿದರು.

ದೇಶ ಸ್ವಾತಂತ್ರ್ಯ ಪಡೆದ ನಂತರ 70% ಜನರಿಗೆ ರಾಜಕೀಯ ಸ್ವಾತಂತ್ರ್ಯ ಮಾತ್ರ ಲಭಿಸಿದ್ದು, ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇನ್ನೂ ಸಿಗಲಿಲ್ಲ. ತೊಂಬತ್ತರ ದಶಕದ ನಂತರ ಜಾಗತೀಕರಣದ ಪ್ರಭಾವದಿಂದ ದೇಶದಲ್ಲಿ ಏಳು ಲಕ್ಷ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ, ವ್ಯವಸಾಯ ಮಾಡಿ ಬದುಕಲು ಸರ್ಕಾರ ಭೂಮಿ ನೀಡುವುದಿಲ್ಲ. ರಾಜ್ಯದ ನಲವತ್ತು ಲಕ್ಷ ಎಕರೆ ಭೂಮಿಗೆ ದಲಿತರು, ಬಡ ರೈತರು ತುಂಡು ಭೂಮಿ ಪಡೆಯಲು ಅರ್ಜಿ ಹಾಕಿಕೊಂಡು ನಲವತ್ತು ವರ್ಷದಿಂದ ಕಾಯುತ್ತಿದ್ದಾರೆ. ಆದರೆ ಸರ್ಕಾರ ಅವರಿಗೆ ಭೂಮಿ‌ ನೀಡಲು ನಿರಾಕರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತರಿಗೆ ಇನ್ಮುಂದೆ ಸಾಗುವಳಿ ಚೀಟಿ ಕೊಡಲ್ಲ, ಸರ್ಕಾರಿ ಭೂಮಿಯನ್ನು ಲೀಸ್ಗೆ ಕೊಡ್ತೇವೆ ಎಂದು ಕಂದಾಯ ಸಚಿವ ಅಶೋಕ್ ಹೇಳಿದ್ದಾರೆ. ಸರ್ಕಾರ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ‌ ಕೊಟ್ಟು ರೈತರನ್ನು ಒಕ್ಕಲೆಬ್ಬಿಸಿ ಕಂಪನಿ ಕೃಷಿಗೆ ಪ್ರೊತ್ಸಾಹ ನೀಡುತ್ತಿದೆ ಎಂದು ಎಚ್ಚರಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರ ಬಳಿ ಜಮೀನುಗಳು ಇಲ್ಲ. ಅದರಲ್ಲೂ ದೇವನಹಳ್ಳಿ ತಾಲ್ಲೂಕಿನ 70% ಭೂಮಿ ರೈತರ ಬಳಿ ಇಲ್ಲ. ಮುವ್ವತ್ತು, ಐವತ್ತು ಮತ್ತು ನೂರು ಎಕರೆ ಭೂಮಿಯನ್ನು ನಗರದ ಬಂಡವಾಳಶಾಹಿಗಳು ಖರೀದಿಸಿ ಕಾಂಪೌಂಡ್ ಹಾಕಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಸರ್ಕಾರ ದೇಶಭಕ್ತಿಯ ಪಾಠ ಮಾಡುತ್ತಿದೆ. ಹಸಿವನ್ನು‌ ನೀಗಿಸುವ ರೈತರು ಮತ್ತು ಸಂಪತ್ತನ್ನು ಸೃಷ್ಟಿ ಮಾಡುವ ಕಾರ್ಮಿಕರು ನಿಜವಾದ ದೇಶಪ್ರೇಮಿಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕೆಐಎಡಿಬಿ 2019ರಲ್ಲಿ ರೈತರಿಂದ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಯಾವುದೇ ಅಭಿವೃದ್ಧಿ ಮಾಡದೆ ಖಾಸಗಿ ಸಂಸ್ಥೆಯಾದ ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಎಕರೆಗೆ 50 ಲಕ್ಷ ರೂ.ನಂತೆ ಕೊಡಲಾಗಿದೆ ಎಂದು ಆರೋಪಿಸಿದ ಅವರು, ಸರ್ಕಾರಿ ವಿವಿ ಆದರೆ ಎಕರೆ ಭೂಮಿಯನ್ನ 25 ಲಕ್ಷಕ್ಕೆ ಕೊಡಲಿ, ನಮ್ಮ ಅಭ್ಯಾಂತರವಿಲ್ಲ. ನಿಯಮಗಳ ಪ್ರಕಾರ ಕೆಐಎಡಿಬಿ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಕಾರ್ಖಾನೆಗಳ ಅಭಿವೃದ್ಧಿಗೆ ಬಳಸಬೇಕು. ಆದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಖಾಸಗಿ ವಿವಿಗೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಬೊಕ್ಕಸಕ್ಕೆ ನಷ್ಟಮಾಡಿ ವಿವಿಗೆ ಭೂಮಿ ನೀಡಿರುವವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಚಂದ್ರತೇಜಸ್ವಿ‌‌ ಮಾತನಾಡಿ, “ಕೆಐಎಡಿಬಿ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಸರ್ಕಾರ 116 ಖಾಸಗಿ ವಿವಿಗೆ ಮಂಜೂರಿ ಮಾಡಿದೆ. ಇದರಿಂದ ರಾಜ್ಯಕ್ಕೆ 250 ಕೋಟಿ ನಷ್ಟ ಉಂಟಾಗಿದೆ. ಬಿಜೆಪಿ ಸರ್ಕಾರದಲ್ಲಿ ತಮ್ಮ ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಗಳಿಗೆ ಸಾವಿರಾರು ಎಕರೆ ಭೂಮಿ‌ ಮಂಜೂರು ಮಾಡಿದ್ದಾರೆ” ಎಂದು ದೂರಿದರು.

ಇದನ್ನೂ ಓದಿರಿ: ಮಧ್ಯಪ್ರದೇಶ: ಬ್ರಾಹ್ಮಣರ ವಿರುದ್ಧ ವಿವಾದಾತ್ಮಕ ಹೇಳಿಕೆ; ಪ್ರೀತಂ ಸಿಂಗ್‌ ಲೋಧಿ ಬಿಜೆಪಿಯಿಂದ ಉಚ್ಚಾಟನೆ

ನಗರ ಜಿಲ್ಲೆಯ ಕುರುಬರಹಳ್ಳಿ ಬಳಿ ನಿವೇಶನಕ್ಕಾಗಿ ಮೀಸಲಿಟ್ಟ 35 ಎಕರೆ ಭೂಮಿಯನ್ನು ಜನಸೇವಾ ಟ್ರಸ್ಟ್ ಶಿಕ್ಷಣ ಸಂಸ್ಥೆಗೆ ಅಕ್ರಮವಾಗಿ ಮಂಜೂರು ಮಾಡಿರುವುದು ತಾಜಾ ಉದಾಹರಣೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಕೆಐಎಡಿಬಿ ನಿಯಮ ಮೀರಿ ಚಾಣಕ್ಯ ಖಾಸಗಿ ವಿವಿಗೆ ಭೂಮಿ ನೀಡಿರುವುದನ್ನು ಈ ಕೂಡಲೇ ರದ್ದು ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಆರ್.ಲತಾ ಅವರ ಮೂಲಕ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಕಮ್ಯುನಿಸ್ಟ್ ಪಕ್ಷದ ನಾಯಕರಾದ ಹರೀಂದ್ರ, ರುದ್ರಾರಾಧ್ಯ, ರೇಣುಕಾರಾಧ್ಯ, ಡಿಎಸ್‌ಎಸ್‌ನ ವೆಂಕಟರಾಜು, ಪಿ.ಎ.ವೆಂಕಟೇಶ್, ದಲಿತ ಮುಖಂಡ ಕಾರಳ್ಳಿ ಶ್ರೀನಿವಾಸ್, ರೈತ ಮುಖಂಡರಾದ ಮುಕುಂದ, ಪ್ರಮೋದ್ ಪ್ರತಿಭಟನೆಯಲ್ಲಿ ಹಾಜರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದ್ವೇಷ’ ಬಿತ್ತುವ ಮೂರನೇ ಅನಿಮೇಟೆಡ್ ವೀಡಿಯೊವನ್ನು ಹಂಚಿಕೊಂಡ ಬಿಜೆಪಿ: ಮೌನವಹಿಸಿರುವ ಚು. ಆಯೋಗ

0
ಲೋಕಸಭೆಯ ಹೊಸ್ತಿಲಲ್ಲಿ ಬಿಜೆಪಿ ಮೀಸಲಾತಿ ಬಗ್ಗೆ ಮುಸ್ಲಿಮರು ಮತ್ತು ಕಾಂಗ್ರೆಸ್‌ನ್ನು ಗುರಿಯಾಗಿಸಿಕೊಂಡು ದ್ವೇಷ ಬಿತ್ತುವ ಮೂರನೇ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಈ ಬಗ್ಗೆ ಚು.ಅಯೋಗ ಮಾತ್ರ  ಮೌನವಾಗಿರುವುದು ಕಂಡು ಬಂದಿದೆ. ಕರ್ನಾಟಕ ಬಿಜೆಪಿ, ಮೀಸಲಾತಿ...